Wednesday, August 20, 2014

ಭ್ರಮೆ? (ಅತೀಂದ್ರಿಯ ಅನುಭವದ ಕಥೆಗಳು - ಭಾಗ ೪)

http://www.panjumagazine.com/?p=8293

(ಈ ಕಥೆ ನನ್ನ ಗೆಳೆಯ ವಿಟ್ಠಲ ಕುಲಕರ್ಣಿ ಗಾದ ಅನುಭವದ ಮೇಲೆ ಹೆಣೆದಿದ್ದು. ನಂಬುವಿರೋ ಇಲ್ವೊ ಗೊತ್ತಿಲ್ಲ... ಇದನ್ನು ಅವನ ಬಾಯಿಂದ ಕೇಳುತ್ತಿದ್ದಾಗ ಹಾಗೂ ಈ ಕಥೆಯನ್ನ ರಾತ್ರಿ ಬರೆಯುತ್ತಿರುವಾಗ ನನ್ನ ಮೈಯಲ್ಲಿ ಭಯದ ಕಂಪನಗಳೆದ್ದಿದ್ದಂತೂ ನಿಜ! ಅಂದ ಹಾಗೆ, ಕಥೆಯಲ್ಲಿ ಬಳಸಿರುವ  ಹೆಸರು ನಿಜವಾದ ವ್ಯಕ್ತಿಯದಲ್ಲ.)

---

ಸುಮಾರು ಹದಿನೈದು ವರ್ಷಗಳ ಹಿಂದೆ, ನಾನಿನ್ನೂ ಹುಬ್ಬಳ್ಳಿಯಲ್ಲೇ ಕೆಲಸ ಮಾಡುತ್ತಿದ್ದೆ. ಸ್ಟುಡಿಯೋ ಒಂದರಲ್ಲಿ ಗ್ರಾಫಿಕ್ ಡಿಸೈನರ್ ಕೆಲಸ. ಬೆಳಿಗ್ಗೆ ಒಂಭತ್ತರಿಂದ ಸಂಜೆ ಆರು . ಆದರೂ ಒಂದೊಂದು ಸಲ ಏಳು, ಕೆಲವು ಸಲ ಎಂಟು! ಹೀಗೆ ವೇಳೆ ಕೆಲಸದ ಮೇಲೆ ಅವಲಂಬಿತವಾಗಿತ್ತು. ಅದೂ ಅಲ್ಲದೆ ನಾನು ಆಗ ಬ್ರಹ್ಮಚಾರಿ ಮತ್ತು ಸ್ವತಃ ಕಲಾವಿದನಾದ್ದರಿಂದ ನಾ ಮಾಡುತ್ತಿದ್ದ  ಕೆಲಸ ನನಗೆ ಖುಷಿ ಕೊಡುತ್ತಿತ್ತು ಎಂಬ ಕಾರಣಕ್ಕೆ ಕೆಲವು ಸಲ ಹಾಗೆ ಕೆಲಸದಲ್ಲಿ  ತಲ್ಲೀನನಾಗಿ ಗಡಿಯಾರ ನೋಡುವುದೇ ಮರೆತುಬಿಡುತ್ತಿದ್ದೆ!

ಹುಬ್ಬಳ್ಳಿ, ನಾನು ಹುಟ್ಟಿ ಬೆಳೆದ ಊರು. ಉತ್ತರ ಕರ್ನಾಟಕದವರಿಗೆ ದೊಡ್ಡ ವಾಣಿಜ್ಯ ಕೇಂದ್ರವದು. ಆದರೂ ಅದಿನ್ನೂ ಬೆಂಗಳೂರಾಗಿಲ್ಲ! ಅಂದರೆ ಅಷ್ಟೊಂದು ಹಾಳಾಗಿಲ್ಲ! ಬೆಂಗಳೂರಿನಷ್ಟು ಸೌಕರ್ಯಗಳು ಅಲ್ಲಿಲ್ಲ, ಅಥವಾ ಬೆಂಗಳೂರಿಗೆ ಸಿಕ್ಕ ಗಮನ ನಮಗೆ ಸಿಕ್ಕಿಲ್ಲ ಅನ್ನುವ ಬೇಜಾರು ನಮ್ಮ ಕಡೆಯವರಿಗಿದ್ದರೂ, ಅಲ್ಲಿನ ಎಲ್ಲವೂ ನಮಗಿಷ್ಟ! ಅಲ್ಲಿನ ಸಣ್ಣ ಗಲ್ಲಿಗಳಿರಬಹುದು, ಎಲ್ಲಿ ಕಣ್ಣು ಹಾಕಿದರೂ ಕಾಣುವ ಬೀಡಿ ಅಂಗಡಿಗಳಿರಬಹುದು, ಕೆಲವೇ ಕೆಲವು ಪ್ರವಾಸಿ ತಾಣಗಳಲ್ಲೊಂದಾದ  ಉಣಕಲ್ ಕೆರೆ ಇರಬಹುದು, ಒಮ್ಮಿಂದೊಮ್ಮೆಲೆ ಕಣ್ಣೊಳಗೆ ಅಡರಿ ದಳ ದಳ ನೀರು ಸುರಿಸುವ ಧೂಳಿರಬಹುದು, ಧುತ್ತನೆ ದಾರಿಯಲ್ಲಿ ಎದುರಾಗುವ ದನ... ಇವೆಲ್ಲವೂ ನಮ್ಮ ಬದುಕಿನ ಒಂದು ಅವಿಭಾಜ್ಯ ಅಂಗ.     

ನಮ್ಮ ಮನೆ ಇದ್ದದ್ದು ಕೇಶವಾಪುರದಲ್ಲಿ. ನನ್ನ ಆಫಿಸಿನಿಂದ ನಡೆದುಕೊಂಡು ಹೋದರೆ ಅರ್ಧ ಗಂಟೆಯ ಹಾದಿ. ಆಗಿನ್ನೂ ಬೈಕಿನ ಹಾವಳಿ ಅಷ್ಟಿರಲಿಲ್ಲ. ಅದೂ ಅಲ್ಲದೇ  ಇನ್ನೂ ಆಗ ತಾನೇ ಕೆಲಸಕ್ಕೆ ಸೇರಿದ್ದರಿಂದ ಅದನ್ನು ಕೊಳ್ಳುವ ತಾಕತ್ತೂ ನನ್ನಲ್ಲಿರಲಿಲ್ಲ. ಹೀಗಾಗಿ ಆಫಿಸಿಗೆ ನಡೆದುಕೊಂಡೆ ಹೋಗಿ ಬರುತ್ತಿದ್ದೆ. ನಾನಾಗಲೇ ಹೇಳಿದಂತೆ ಹುಬ್ಬಳ್ಳಿ ಇನ್ನೂ ಬೆಂಗಳೂರಿನಂತಾಗಿಲ್ಲದ್ದರಿಂದ ಇನ್ನೂ ಜನರ ನಡುವೆ ಒಂದು ಸಂಪರ್ಕವಿತ್ತು, ಈಗಲೂ ಇದೆ. ನಮ್ಮ ಓಣಿಯಲ್ಲಿರುವ ಬಹುತೇಕ ಮಂದಿ ನನಗೆ ಗೊತ್ತು. ಅವರು ನನ್ನ ತಂದೆಯ ಗೆಳೆಯರೋ, ಇಲ್ಲ ನನ್ನಣ್ಣಂದಿರ ಗೆಳೆಯರೋ, ನನ್ನ ಗೆಳೆಯರೋ ಯಾರೇ ಇದ್ದರೂ ದಾರಿಯಲ್ಲಿ ಭೇಟಿಯಾದಾಗ ಒಂದು ನಮಸ್ಕಾರವೋ ಇಲ್ಲಾ "ಊಟಾತೇನಪಾ? ಅಪ್ಪ ಹೆಂಗಿದ್ದಾರ?" ಅನ್ನುವ ಬರೀ ಔಪಚಾರಿಕವಲ್ಲದ, ಕಾಳಜಿಪೂರ್ವಕ ಮಾತುಕತೆಗಳು ನಡೆಯುವುದು ಅಲ್ಲಿ ಮಾಮೂಲಿ.

ಹೀಗೆ ನಮ್ಮ ಮನೆಯಿಂದ ತುಸು ದೂರದಲ್ಲಿದ್ದವರು ಶಂಕ್ರಣ್ಣ. ಅವರು ಹೆಚ್ಚುಕಡಿಮೆ ನನ್ನ ತಂದೆಯ ವಾರಿಗೆಯವರೇ. ಅವರು  ಒಂದು ಸರಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರಾಗ ನಿವೃತ್ತಿಯ ಹೊಸ್ತಿಲಲ್ಲಿದ್ದರು. ಅವರದು ಒಂದು ಚಿಕ್ಕ ಸಂಸಾರ. ಹೆಂಡತಿ ಹಾಗೂ ಒಬ್ಬ ಮಗನೊಂದಿಗೆ  ವಾಸವಾಗಿದ್ದರು. ಅವರ ಮನೆಗೆ ನಾನು ಹೋಗುವದು ಅಪರೂಪವೇ. ಒಂದು ಸಲ ಏನೋ ಕೆಲಸವಿದೆ ಎಂದು ಕರೆದಿದ್ದರು. ತಾವು ಹೆಂಡತಿಯ ಜೊತೆಗಿದ್ದ ಹಳೆಯ ಫೋಟೋವೊಂದನ್ನು ಸ್ವಲ್ಪ ಪರಿಷ್ಕರಿಸಿ ದೊಡ್ಡದಾಗಿ ಮಾಡಿಸಬೇಕೆಂದು ಅವರ ತಲೆಯಲ್ಲಿ ಬಂದಿತ್ತು.  ನನ್ನಪ್ಪ ಆ ಕೆಲಸಕ್ಕೆ ನನ್ನ ಹೆಸರು ಸೋಚಿಸಿದ್ದರಂತೆ. ಅದನ್ನು ನನ್ನ ತಂದೆಯೇ ನನಗೆ ತಿಳಿಸಿ ಅವರ ಮನೆಗೆ ಹೋಗಲು ಹೇಳಿದ್ದರು.

ಅಲ್ಲೇ ಹತ್ತಿರದಲ್ಲೇ ಶಂಕ್ರಣ್ಣನವರ ಮನೆ ಇದ್ದ ಕಾರಣ, ಹೋದರಾಯ್ತು ಅನ್ನುತ್ತಲೇ ನಾಲ್ಕೈದು ದಿನಗಳು ಕಳೆದಿದ್ದವು. ಅವರೂ ಕೂಡ ಹಿಂದಿನ ದಿನವೇ ಮತ್ತೆ ಅಪ್ಪನ ಬಳಿ ಅದನ್ನು ನೆನಪಿಸಿದ್ದರಂತೆ. ಅದಕ್ಕೆ, ಸಂಜೆ ಹೋದರಾಯ್ತು ಅಂತ ಅವತ್ತು ನಿರ್ಧರಿಸಿದ್ದೆ.  ಆಫಿಸಿಗೆ ಹೋದವನು ಅದು ಇದು ಅಂತ ಕೆಲಸದಲ್ಲಿ ಮುಳುಗಿ ಸಂಜೆ ವಾಪಸ್ಸು ಬರುವಷ್ಟರಲ್ಲಿ ಎಂಟಾಗಿತ್ತು. ನಾನು ಮನೆಗೆ ಮರಳುತ್ತಿದ್ದೆ. ಶಂಕ್ರಣ್ಣನವರ ಮನೆಗೆ ಹೋಗಬೇಕೆಂದು ಮಾಡಿದ್ದ ನಿರ್ಧಾರ ನೆನಪಾಯಿತು. ಆದರೆ ಇಷ್ಟು ರಾತ್ರಿಯಾಗಿದೆ, ಹೋಗಲೋ ಬೇಡವೋ ಅನ್ನುವ ದ್ವಂದ್ವದಲ್ಲಿದ್ದೆ. ನಮ್ಮ ಮನೆಯ ಹತ್ತಿರದಲ್ಲೇ ಒಂದು ತಿರುವು ಇದೆ.  ಅಲ್ಲಿ ಜಾಸ್ತಿ ಜನರ ಓಡಾಟವಿರಲಿಲ್ಲ. ಬೀದಿ ದೀಪದ ಬೆಳಕಿತ್ತು. ಅಲ್ಲೇ ಸ್ವಲ್ಪ ದೂರದಲ್ಲಿ ಶಂಕ್ರಣ್ಣ ನಿಧಾನವಾಗಿ ನಡೆದುಬರುತ್ತಿರುವುದು ನನಗೆ  ಕಂಡಿತು. ಅವರ ಬಗಲಲ್ಲೊಂದು ಚೀಲವಿತ್ತು. ಹೆಚ್ಚು ಕಡಿಮೆ ಐವತ್ತೆಂಟು ವಯಸ್ಸಾಗಿದ್ದು, ಕೆಲವು ವಯೋಸಹಜ ಕಾಯಿಲೆಗಳಿಂದಾಗಿ ಅವರ ಕಾಲುಗಳಲ್ಲಿ ನೋವಿರುತ್ತಿತ್ತು. ಹೀಗಾಗಿ, ಸ್ವಲ್ಪ ನಿಧಾನವಾಗಿಯೇ ನಡೆದುಕೊಂಡು ಬರುತ್ತಿದ್ದರು. ಈ ರಾತ್ರಿ ಒಬ್ಬರೇ ಎಲ್ಲಿ ಹೋಗುತ್ತಿದ್ದಾರೆಂದು ನನಗೆ ಆಶ್ಚರ್ಯವಾಗಿತ್ತಾದರೂ, ಹಾಗೆ ದೊಡ್ಡವರನ್ನು ಕೇಳಲಾದೇತೆ? ನಾನು ನಮಸ್ಕರಿಸಿದೆ. ತಲೆ ಎತ್ತಿ ನೋಡಿದರು. ಗುರುತು ಹಿಡಿದು ಪರಿಚಯದ ನಗೆ ನಕ್ಕರು. ಅದೊಂದು ಶುಷ್ಕ ನಗೆ. ಸ್ವಲ್ಪ ಬಳಲಿದಂತೆ ಕಂಡರು.  

"ನಿಮ್ಮ ಮನಿಗೇ ಹೊಂಟಿದ್ದೆ ನೋಡ್ರಿ. ನೀವೇನೋ ಕೆಲಸಾ ಅದ ಅಂತ ಹೇಳಿದ್ರಂತ ನನ್ನ ಅಪ್ಪನ ಹತ್ರ." ಅವರು ಏನೋ ಗಹನವಾದ ಯೋಚನೆಯಲ್ಲಿದ್ದಂತೆ ಕಂಡರಾದರೂ, ನನ್ನ ಪ್ರಶ್ನೆಯನ್ನು ಆಗಲೇ ನಿರೇಕ್ಷಿಸಿದ್ದರೇನೊ ಎಂಬಂತೆ ಕೂಡಲೇ ಉತ್ತರಿಸಿದರು.
"ಹೌದು ಹೇಳಿದ್ದೆ, ಆದ್ರ ಈಗೇನ ಬ್ಯಾಡ ಬಿಡು. ನನಗ ಇಲ್ಲೇ ಸ್ವಲ್ಪ ಕೆಲಸಾ ಅದ ಹೊಂಟಿನಿ. ಆಮ್ಯಾಲ್ಯಾವಾಗರೆ ನೋಡೋಣಂತ." ಅಂದು, ಆ ಕಡೆ ಹೊರಟಿರುವೆನೆಂಬಂತೆ ಒಂದು ದಿಕ್ಕಿನೆಡೆಗೆ ಕೈ ಮಾಡಿ ತೋರಿಸಿದರು. ನನಗೂ ಕೆಲಸದ ದಣಿವು ಇತ್ತಾದ್ದರಿಂದ, ಅವರಿಗೆ ಬೀಳ್ಕೊಟ್ಟು ಮನೆಗೆ ಬಂದೆ. ಹಸಿವೆಯಾಗಿತ್ತಾದ್ದರಿಂದ ಕೈ ಕಾಲು ತೊಳೆದುಕೊಂಡು ಊಟಕ್ಕೆ ಕೂತೆ. ಅಮ್ಮ ಬಡಸುತ್ತಿದ್ದರು. ಜೊತೆಗೆ ಅಪ್ಪನೂ ಊಟಕ್ಕೆ ಕೂತರು. ಇದು ನನ್ನ ದಿನಚರಿಯಾಗಿತ್ತು. ಆ ದಿನ ನಡೆದ ಎಲ್ಲ ಸಮಾಚಾರಗಳನ್ನೂ ಊಟ ಮಾಡಿಕೊಂಡೆ ಅಪ್ಪ ಅಮ್ಮನೊಂದಿಗೆ ಹರಟುತ್ತಿದ್ದೆ. ಅದು ಇದು ಮಾತನಾಡುತ್ತ ಸ್ವಲ್ಪ ಹೊತ್ತಿನ ಹಿಂದೆ ದಾರಿಯಲ್ಲಿ ಶಂಕ್ರಣ್ಣನವರು ಸಿಕ್ಕ ಸುದ್ದಿ ಹೇಳಿದೆ. ಅಪ್ಪ ಆವಾಕ್ಕಾದಂತೆ ಕಂಡರು.
"ಏನ್ ಹುಚ್ಚ ಗಿಚ್ಚ ಹಿಡದದೇನ್ ನಿನಗ?" ಅಂದ್ರು
"ಯಾಕಪಾ?" ಅಂದೆ
"ಅವ್ರ ಹೆಂಗ ಸಿಗಲಿಕ್ಕೆ ಸಾಧ್ಯ? ಅವ್ರು ಇವತ್ತ ಮದ್ಯಾಹ್ನನ ತೀರಕೊಂಡ್ರು" ಅಂದರು!  ನನ್ನ ಗಂಟಲಲ್ಲಿ ತುತ್ತು ಸಿಕ್ಕಿ ಕೊಂಡಿತ್ತು! ನೀರು ಕುಡಿದು ಸುಧಾರಿಸಿಕೊಂಡೆ. ನನಗೆ ಅಪ್ಪನಿಗೆ ಹುಚ್ಚು ಹಿಡಿದಿರಬಹುದೆ ಅಂತ ಸಂಶಯವಾಯ್ತು. ಈಗ ತಾನೇ ನನ್ನನ್ನು ಮಾತಾಡಿಸಿದ್ದ ಮನುಷ್ಯನೊಬ್ಬ ಮದ್ಯಾಹ್ನವೇ ಸತ್ತುಹೋಗಿದ್ದನೆಂಬ ವಿಷಯ ನಂಬಲಸಾಧ್ಯವಾಗಿತ್ತು. ಆದರೆ ಅವರು ಸತ್ತಿದ್ದು ನಿಜವೆಂದು ನನ್ನಮ್ಮನೂ ಹೇಳಿದರು. ನಾನಂತೂ ಕಳೆದುಹೋಗಿದ್ದೆ!         

--
 
ಈ ಘಟನೆಯನ್ನು ಅರಗಿಸಿಕೊಳ್ಳಲು ವಿಟ್ಠಲನಿಗೆ ಆಮೇಲೆ ಎಷ್ಟೋ ದಿನಗಳು ಹಿಡಿದಿರಬೇಕು. ಈ ಅನುಭವ ಕೆಲವು ಪ್ರಶ್ನೆಗಳನ್ನಂತೂ ಹುಟ್ಟು ಹಾಕುತ್ತದೆ. ವಿಟ್ಠಲ ನೋಡಿದ್ದು ಯಾರನ್ನು? ಶಂಕ್ರಣ್ಣನವರ ಬಗ್ಗೆಯೇ ಯೋಚಿಸುತ್ತಾ ಹೋಗುತ್ತಿದ್ದನಾದ್ದರಿಂದ ಅದು ಅವನ ಭ್ರಮೆಯಾಗಿತ್ತೆ? ಅವರನ್ನು ಬರೀ ಕಂಡಿದ್ದರೆ ಹಾಗೇ  ಅಂದುಕೊಳ್ಳಬಹುದಿತ್ತು, ಕೆಲಸದ ಗುಂಗಿನಲ್ಲೋ ಅಥವಾ ಕತ್ತಲೆಯಿದ್ದುದರಿಂದೊ, ಅವರ ತರಹದ ಯಾವುದೋ ವ್ಯಕ್ತಿಯನ್ನು ನೋಡಿದ್ದನೇನೋ ಅಂದುಕೊಳ್ಲಬಹುದಿತ್ತು. ಆದರೆ ಅವರಿಬ್ಬರ ನಡುವೆ ನಿರ್ದಿಷ್ಟ ವಿಷಯದ ಬಗ್ಗೆ ಮಾತುಕತೆ ನಡೆದಿದೆ. ಅದೂ ಅಲ್ಲದೇ ವಿಟ್ಠಲನಿಗೆ ಶಂಕ್ರಣ್ಣ ಸತ್ತ ವಿಷಯವೇ ಗೊತ್ತಿರಲಿಲ್ಲ. ಹಾಗೆ ಮೊದಲೇ ಗೊತ್ತಿದ್ದಿದ್ದರೆ ಅದೊಂದು ರೀತಿಯ ಭ್ರಮೆ ಸೃಷ್ಠಿಯಾಗುವ ಸಾಧ್ಯತೆಗಳಿದ್ದವು. ಇನ್ನೂ ಒಂದು ವಿಷಯ ಇಲ್ಲಿ ಕುತೂಹಲ ಕೆರಳಿಸುತ್ತದೆ. ಅವರು ತಮಗೆ ಏನೋ ಕೆಲಸವಿದೆ ಅಂತ ಹೇಳಿ ಕೈ ತೋರಿಸಿದ ದಿಕ್ಕಿನಲ್ಲಿ ಸ್ಮಶಾನವಿದ್ದುದು ಅವರು ಸತ್ತ ವಿಷಯ ಕೇಳಿದ ಬಳಿಕ ಯೋಚಿಸುವಾಗ ವಿಟ್ಠಲನ ಗಮನಕ್ಕೆ ಬಂತಂತೆ! ಅದೂ ಅಲ್ಲದೆ ತಮ್ಮ ಫೋಟೊವನ್ನು ದೊಡ್ಡದಾಗಿ ಮಾಡಿಸುವ ವಿಚಾರ ಅವರಿಗೆ  ಬಂದಿದ್ದು, ತಮಗೆ ಮೃತ್ಯುಯೋಗ ಹತ್ತಿರದಲ್ಲೇ ಇದೇ ಅಂತ ಅವರಿಗೆ ಮೊದಲೇ ತಿಳಿದಿತ್ತೆನ್ನುವುದನ್ನು ಸೂಚಿಸುತ್ತದೆಯೇ? ಉತ್ತರ ಹೇಳುವವರ್ಯಾರು?       

Thursday, August 7, 2014

ದೀಪದ ದೆವ್ವ (ದೆವ್ವದ ಕಥೆಗಳು – ಭಾಗ ೩)


(ಇದು ಸಂಗೀತಾ ಕೇಶವ ಅವರಿಗಾದ ಅನುಭವದ ಎಳೆಯ ಮೇಲೆ ಹೆಣೆದ ಕತೆ)

ನಾನಾಗ ಪೀಯುಸಿ ಮೊದಲ ವರ್ಷದಲ್ಲಿ ಓದುತ್ತಿದ್ದೆ. ನಾವಿದ್ದದ್ದು ನನ್ನ ಊರಾದ ಚಿಕ್ಕೋಡಿಯಲ್ಲಿ. ಅದು ಬೆಳಗಾವಿ ಜಿಲ್ಲೆಯಲ್ಲಿದೆ. ಹವಾಮಾನದ ವಿಷಯದಲ್ಲಿ ಅದಕ್ಕೂ ಬೆಳಗಾವಿಗೂ ಏನೂ ವ್ಯತ್ಯಾಸವಿರಲಿಲ್ಲ. ಅದು ಆಗಿನ ಸಂಗತಿ. ಈಗ ಬಿಡಿ ಬೆಳಗಾವಿಯ ಹವಾಮಾನವೂ ಪ್ರಕೃತಿ ವೈಪರಿತ್ಯಕ್ಕೆ ಬಲಿಯಾಗಿ ಹದಗೆಟ್ಟಿದೆ. ಆಗೆಲ್ಲಾ ಬೆಳಗಾವಿಯಲ್ಲಿ ಮಳೆ ಯಾವ ಪರಿ ಸುರಿಯುತ್ತಿತ್ತೆಂದರೆ... ಸುರಿಯುತ್ತಿತ್ತು ಅಷ್ಟೆ! ಒಮ್ಮೆ ಶುರುವಾಯಿತೆಂದರೆ ನಿಲ್ಲುವ ಮಾತೆ ಇರಲಿಲ್ಲ. ಚಿಕ್ಕೋಡಿಯ ಪರಿಸ್ಥಿತಿಯೂ ಹೆಚ್ಚು ಕಡಿಮೆ ಹಾಗೇ ಇತ್ತು.  ಅಗೆಲ್ಲಾ, ಅಲ್ಲಿನ ಹೆಚ್ಚಿನ ಮನೆಗಳು ಹೆಂಚಿನ (ಮಂಗಳೂರು) ಮಾಡಿನವು. ನಮ್ಮ ಮನೆಯೂ ಹಾಗೇ ಇತ್ತು. ದೊಡ್ಡ ದೊಡ್ಡ ಕೋಣೆಗಳು, ವಿಶಾಲವಾದ ವರಾಂಡ. ಅಡಿಗೆಮನೆ ಮತ್ತು ಬಚ್ಚಲುಮನೆಗಳು ಕೂಡ ಅಷ್ಟೆ ದೊಡ್ಡವು. ಅದೂ ಅಲ್ಲದೆ ಮನೆಯ ಮುಂದೊಂದು ತೋಟ. ಆ ತರಹದ ಮನೆ ಈಗಿನ ಬೆಂಗಳೂರಿನಲ್ಲಿ ಕೋಟಿಗಟ್ಟಲೆ ಬೆಲೆಬಾಳುವ ವಿಲ್ಲಾ ಕಿಂತಲೂ ದೊಡ್ಡದಿತ್ತು ಅಂದರೆ ಅತಿಶಯೋಕ್ತಿಯಾಗಲಾರದು! ಆದರೆ ಅಂಥ ಮನೆಗಳ ವಾಸ್ತುಶಿಲ್ಪ ಹೆಚ್ಚು ಕಡಿಮೆ ಒಂದೇ ಥರ ಇರುತ್ತಿತ್ತು. ಅದಕ್ಕೆ ನಮ್ಮ ಮನೆಯೂ ಹೊರತಾಗಿರಲಿಲ್ಲ. ಅದು ಉದ್ದಕ್ಕೆ ರೈಲಿನ ಬೋಗಿ ತರಹ ಇತ್ತು. ಮೊದಲು ವರಾಂಡಾ, ಸಾಲಾಗಿ ಮೂರು ಕೋಣೆಗಳು, ನಂತರ ಅಡುಗೆಮನೆ ಕೊನೆಗೊಂದು ಬಚ್ಚಲು ಮನೆ. ಎಲ್ಲಕ್ಕೂ ಒಂದೊಂದು ಬಾಗಿಲು. ಇವೆಲ್ಲವನ್ನು ಸೇರಿಸುವ ಒಂದೇ ಒಂದು ಪ್ಯಾಸೇಜ್. 

ನಾನಾಗ ಪೀಯುಸಿ ಯ ಮೊದಲ ವರ್ಷದ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೆ. ನನ್ನ ಪ್ರೀತಿಯ ವಿಷಯವಾಗಿದ್ದ ಅರ್ಥಶಾಸ್ತ್ರದಲ್ಲಿ ನೂರಕ್ಕೆ ನೂರು ಅಂಕ ಗಳಿಸುವ ಎಕೈಕ ಉದ್ದೇಶ ನನ್ನದಾಗಿತ್ತು. ಆ ಉದ್ದೇಶಕ್ಕೊಂದು ಕಾರಣವೂ ಇತ್ತು! ಹಾಗೆ ಅಂಕ ಗಳಿಸಿ,  ಒಬ್ಬ ಹುಡುಗನ ಮೆಚ್ಚುಗೆ ಗಳಿಸಬೇಕಿತ್ತು.  ಆ ಹುಡುಗ ನನ್ನ ಅಕ್ಕನ ಸಹಪಾಠಿಯಾಗಿದ್ದ. ಅವನೂ ಅದೇ ವಿಷಯದಲ್ಲಿ ನೂರು ಅಂಕ ಗಳಿಸಿದ್ದ. ಆ ಅಂಕ ಗಳಿಸುವ ಕನಸು ಎಷ್ಟು ತೀವ್ರವಾಗಿತ್ತೆಂದರೆ, ಬೆಳಿಗ್ಗೆ ನಾಲ್ಕಕ್ಕೆಲ್ಲಾ ಎದ್ದು ಅಭ್ಯಾಸ ಮಾಡುತ್ತಿದ್ದೆ. ನನ್ನ ಜೊತೆಗೆ ನನ್ನ ಅಕ್ಕನೂ ಅಭ್ಯಾಸ ಮಾಡಲು ಕೂಡುತ್ತಿದ್ದಳು. ಅವಳು ತನ್ನ ಪೀಯುಸಿ ಎರಡನೇ ವರ್ಷದ ಸಿದ್ಧತೆಯಲ್ಲಿದ್ದಳು. ಹೀಗೆ ಒಂದು ಸಲ ರಾತ್ರಿ ಒಂದು ಥರದ ಶಬ್ದ ನನ್ನನ್ನು ನಿದ್ದೆಯಿಂದ ಬಡಿದೆಬ್ಬಿಸಿತು. ನಿದ್ದೆಯಲ್ಲಿದ್ದುದರಿಂದ ಅದೇನೆಂಬುದು ಸರಿಯಾಗಿ ಗ್ರಹಿಸಲಾಗಲಿಲ್ಲವಾದರೂ, ಅದೊಂಥರ ಪ್ಲ್ಯಾಸ್ಟಿಕ್ ಮಡಚಿದಾಗ ಆಗುವಂತಹ ಶಬ್ದ ಅನಿಸಿತು. ನಾನೆದ್ದು ನೋಡಿದಾಗ ಬಚ್ಚಲು ಮನೆಯ ವಿದ್ಯುತ್ ದೀಪ ಹತ್ತಿದ್ದು ನಾನು ಮಲಗಿದ ಕೋಣೆಯಿಂದ ಕಾಣಿಸಿತು. ಯಾರೋ ದೀಪವನ್ನು ಆರಿಸಿರಲಿಕ್ಕಿಲ್ಲವೆಂದುಕೊಂಡು ಎದ್ದು ಹೋಗಿ ಬಚ್ಚಲುಮನೆಯ ಸ್ವಿಚ್ ಆರಿಸಿ ಬಂದು ನನ್ನ ಕೋಣೆಯಲ್ಲಿ ಮಲಗಿದೆ.
ಮರುದಿನ ಬೆಳಿಗ್ಗೆ ಮಾಮೂಲಿಯಂತೆ ನಾವಿಬ್ಬರೂ ಎದ್ದು ಓದಲು ತೊಡಗಿದ್ದೆವು. ಅಚಾನಕ್ಕಾಗಿ ಮತ್ತೆ ಬಚ್ಚಲು ಮನೆಯ ವಿದ್ಯುತ್ ದೀಪ ತಂತಾನೆ ಹತ್ತಿತು! ನಮಗಿಬ್ಬರಿಗೂ ಅಶ್ಚರ್ಯವಾಯಿತು. ಮನೆಯಲ್ಲಿ ಎಚ್ಚರವಿದ್ದವರು ನಾವಿಬ್ಬರೇ. ಉಳಿದವರು ನಮ್ಮ ಪಕ್ಕದ ಕೋಣೆಯಲ್ಲೇ ಮಲಗಿದ್ದರು. ಬಚ್ಚಲು ಮನೆ ಇದ್ದದ್ದು ನಮ್ಮ ಇನ್ನೊಂದು ಪಕ್ಕಕ್ಕೆ. ಹಾಗಾದರೆ ದೀಪವನ್ನು ಉರಿಸಿದವರು ಯಾರು? ಅದನ್ನು ಎದ್ದು ಹೋಗಿ ಪರೀಕ್ಷಿಸಲು ನಮಗೆ ಧೈರ್ಯ ಬರಲಿಲ್ಲ. ಸ್ವಲ್ಪ ಹೊತ್ತಿಗೆ ದೀಪ ತಂತಾನೆ ಆರಿತು! ಆಗ ನಮ್ಮ ಹೆದರಿಕೆ ಇನ್ನಷ್ಟು ಜಾಸ್ತಿಯಾಗಿ ಕಂಗಾಲಾದೆವು. ಆಮೇಲೆ ಓದುವುದು ಹಾಗಿರಲಿ ಮಲಗಿದರೆ ನಿದ್ದೆಯೂ ಬರದಂತಹ ಸ್ಥಿತಿ ನಮ್ಮದು. ನಮ್ಮ ಚಾದರಗಳನ್ನು ಅಡಿಯಿಂದ ಮುಡಿಯವರೆಗೆ ಹೊದ್ದು ಬೆಳಗಾಗುವುದೇ ಕಾಯುತ್ತ ಮಲಗಿದೆವು.

ನನಗೆ ಆ ದೆವ್ವದ ಚಿಂತೆಗಿಂತ, ಹೀಗೆಯೇ ಮುಂದುವರಿದರೆ ನನ್ನ ಅಭ್ಯಾಸವೂ ಹಾಳಾಗಿ ನನ್ನ ಹುಡುಗನನ್ನು ಇಂಪ್ರೆಸ್ ಮಾಡಲಾಗುವುದಿಲ್ಲವೆಂಬ ಚಿಂತೆ ಜಾಸ್ತಿಯಾಗಿತ್ತು! ಹೀಗಾಗಿ ಮರುದಿನ ನನ್ನ ಎಲ್ಲಾ ಧೈರ್ಯವನ್ನು ಒಟ್ಟು ಮಾಡಿ ಮತ್ತೆ ಬೆಳಿಗ್ಗೆ ನಾಲ್ಕು ಗಂಟೆಗೆ ಓದಲು ಕುಳಿತೆ. ಅಕ್ಕನನ್ನು ಹೇಗೋ ಪುಸಲಾಯಿಸಿ ಜೊತೆಗೆ ಕೂರಿಸಿಕೊಂಡೆ. ಸ್ವಲ್ಪ ಸಮಯದ ಬಳಿಕ ಮತ್ತದೇ ಶಬ್ದ! ದೀಪ ಉರಿಯಿತು, ಮತ್ತೆ ಆರಿತು. ನಮ್ಮ ಬಾಯಿಯ ಪಸೆಯೂ ಅರಿತ್ತು! ಮತ್ತೆ ನಮ್ಮ ಚಾದರಗಳೇ ನಮಗೆ ರಕ್ಷಣೆ ನೀಡಿದ್ದು.

ಈ ಘಟನೆಯನ್ನು ನಾವು ನಮ್ಮ ಅಪ್ಪ ಅಮ್ಮನ ಎದುರು ಹೇಳಿಕೊಳ್ಳುವ ಹಾಗಿರಲಿಲ್ಲ. ಯಾಕೆಂದರೆ ನಾವು ಅಧುನಿಕ ಜಗತ್ತಿನ, ವೈಜ್ನ್ಯಾನಿಕ ವಿಚಾರಧಾರೆಯುಳ್ಳ ಹುಡುಗಿಯರಾಗಿದ್ದರಿಂದ, ನಮ್ಮ ಆ ಖ್ಯಾತಿಯನ್ನು ಉಳಿಸಿಕೊಳ್ಳಲೇಬೇಕಾಗಿತ್ತು. ಅವರೆದುರು ಹೇಳಿ ಇಂಥದ್ದೆಲ್ಲಾ ನಂಬುತ್ತಿರುವ ನೀವ್ಯಾವ ಅಧುನಿಕ ಹುಡುಗಿಯರೇ ಅಂತ ನಗೆಪಾಟಲಿಗೀಡಾಗುವುದು ನಮಗೆ ಬೇಕಿರಲಿಲ್ಲ. ಹೀಗೆ ಒಂದು ದಿನ ಬೆಳಿಗ್ಗೆ ನಮ್ಮ ಪಕ್ಕದ ಮನೆಯ ಹುಡುಗಿಯರೊಂದಿಗೆ ಹಾಳು ಹರಟೆ ಹೊಡೆಯುತ್ತಿದ್ದೆವು. ಹುಡುಗಿಯೊಬ್ಬಳು ಒಂದು ವಿಷಯ ಪ್ರಸ್ಥಾಪಿಸಿದಳು. ಅದೇನೆಂದರೆ ನಾವಿದ್ದ ಚಾಳ್ ಮೊದಲೊಂದು ರುದ್ರಭೂಮಿಯಾಗಿತ್ತಂತೆ. ಮೊದಲೆಲ್ಲ ತುಂಬಾ ಜನ ಇಲ್ಲಿ ದೆವ್ವಗಳನ್ನು ನೋಡಿದ್ದರಂತೆ. ಅವಳಿಗೆ ಬೈದು ಬುದ್ಧಿ ಹೇಳುವ ನೈತಿಕತೆ ಅಥವ ಧೈರ್ಯವನ್ನು ನಾನು ಕಳೆದುಕೊಂಡಿದ್ದೆ. ಆ ರುದ್ರಭೂಮಿಯ ಮೇಲೆಯೇ ನಮ್ಮ ಮನೆ ಇತ್ತು. ಹೀಗಾಗಿ ದೆವ್ವಗಳು ನಮ್ಮ ಮನೆಯಲ್ಲೇ ಠಿಕಾಣಿ ಹೂಡಿರುವುದು ನಮಗೂ ಮನದಟ್ಟಾಗಿತ್ತು.

ಆ ಘಟನೆ ನಮ್ಮನ್ನು ಎಷ್ಟು ಪರಿ ಹಿಂಡತೊಡಗಿತೆಂದರೆ, ಎಲ್ಲರ ಜೊತೆಗೆ ರಾತ್ರಿ ಊಟಕ್ಕೆ ಕೂತಾಗಲೂ, ಯಾರಾದರೂ ಬಚ್ಚಲು ಮನೆಯ ದೀಪ ಬೆಳಗಿಸಿದರೆ ಬೆಚ್ಚಿ ಬೀಳುತ್ತಿದ್ದೆವು. ರಾತ್ರಿ ಬಚ್ಚಲು ಮನೆಗೆ ಹೋಗಲೇ ಭಯವಾಗುತ್ತಿತ್ತು. ಒಂದು ಸಲವಂತೂ ರಾತ್ರಿ ಬಚ್ಚಲು ಮನೆಗೆ ಅಕ್ಕ ಹೋದಾಗ ವಿದ್ಯುತ್ ಮಂಡಳಿಯವರು ವಿದ್ಯುತ್ ಕಡಿತ ಮಾಡಿ ಬಿಟ್ಟರು. ಒಳಗಿದ್ದ ನನ್ನಕ್ಕ ಇದು ಭೂತದ್ದೇ ಆಟ ಅಂದುಕೊಂಡು ಕಿಟಾರನೇ ಕಿರುಚಿದ್ದಳು.

ಮತ್ತೆ ಮತ್ತೆ ದಿನವೂ ಭೂತ ಚೇಷ್ಟೆ ಮುಂದುವರಿಯಿತು. ಒಂದು ದಿನ ನನಗಂತೂ ಸಾಕಾಗಿ ಹೋಗಿತ್ತು. ನನ್ನಲ್ಲಿದ್ದ ತಾಳ್ಮೆಯ  ಮಿತಿಯೂ ಮೀರಿತ್ತು. ನಾನು ಆ ದೆವ್ವವನ್ನು ಇವತ್ತು ಹಿಡಿಯಲೇಬೇಕೆಂದು ನಿರ್ಧರಿಸಿದ್ದೆ. ಅವತ್ತು ನಸುಕಿನಲ್ಲಿ ಮತ್ತೆ ಅದೇ ಶಬ್ಧ, ಅದರ ಜೊತೆಗೇ ದೀಪ ಬೆಳಗೇಬಿಟ್ಟಿತು. ಇದ್ದುದರಲ್ಲೇ ನನ್ನಕ್ಕನಿಗಿಂತ ನಾನು ಧೈರ್ಯವಂತಳು. ಇದ್ದ ಬದ್ದ ಭಂಡ ಧೈರ್ಯವ ಒಟ್ಟುಗೂಡಿಸಿ, ನೆನಪಿಗೆ ಬಂದ ಒಂದೆರಡು ದೇವರ ಹೆಸರು ಹೇಳಿಕೊಂಡು ಬಚ್ಚಲ ಮನೆಯ ಕಡೆಗೆ ಕಿತ್ತೂರ ಚೆನ್ನಮ್ಮನಂತೆ ಮುನ್ನುಗ್ಗಿದೆ. ಅಲ್ಲಿ ಚೇಷ್ಟೆ ಮಾಡುತ್ತಿದ್ದ ಭೂತ ಕಂಡೇ ಹೋಯಿತು! ಆದರೆ ನಾನು ಜೋರಾಗಿ ನಗತೊಡಗಿದ್ದೆ. ಅಕ್ಕನಿಗದು ಇನ್ನೂ ಭಯವಾಯ್ತೇನೋ! ಒಳಗೆ ಕೋಣೆಯಲ್ಲಿದ್ದ ಅವಳನ್ನೂ ಎಳೆದುಕೊಂಡೆ ಹೋಗಿ ಆಲ್ಲಿದ್ದ ಭೂತವನ್ನು ತೋರಿಸಿದೆ.

ಅದೇನಾಗಿತ್ತೆಂದರೆ, ಆಗೆಲ್ಲಾ ಮನೆಗಳಲ್ಲಿ ಬಳಸುತ್ತಿದ್ದ ಸ್ವಿಚ್ ಗಳು ಕಪ್ಪಗೆ ದೊಡ್ಡನೆಯ ಸ್ವಿಚ್ ಗಳು. ಅವುಗಳ ಹಿಡಿಕೆ ಮುಂದುಗಡೆ ಸ್ವಲ್ಪ ಉದ್ದಕ್ಕೆ ಚಾಚಿಕೊಂಡಿರುತ್ತಿತ್ತು. ಹಂಚಿನ ಮನೆಯಾದ್ದರಿಂದ ಮೇಲಿನಿಂದ ಹೆಗ್ಗಣಗಳು ಮನೆಯೊಳಗೆ ತೂರಿಕೊಂಡು ಬರಲಿಕ್ಕೆ ಈ ಸ್ವಿಚ್ ಗಳು ಅವುಗಳಿಗೆ ಆಸರೆ ನೀಡುತ್ತಿದ್ದವು. ಹಾಗೆ ಅವು ಕೆಳಗೆ ಬರುವಾಗ ಶಬ್ಧವಾಗುತ್ತಿತ್ತು, ಅಲ್ಲದೆ ಸ್ವಿಚ್ಚಿನ ಹಿಡಿಕೆ ಅರ್ಧಕ್ಕೆ ಬಂದು ನಿಲ್ಲುತ್ತಿತ್ತು ಅದರಿಂದಾಗಿ ದೀಪ ಹತ್ತುತ್ತಿತ್ತು. ಸ್ವಿಚ್ಸಿನ ಒಳಗಡೆ ಸ್ಪ್ರಿಂಗು ಇರುತ್ತಿದ್ದುದರಿಂದ ಹಿಡಿಕೆ ತಂತಾನೇ ಮೇಲೆ ಮೊದಲಿನ ಸ್ಥಿತಿಗೆ ಹೋಗಿ ದೀಪ ಆರುತ್ತಿತ್ತು. ಅಂತೂ ಈ ರಹಸ್ಯವನ್ನು  ಭೇದಿಸಿ, ಭೂತದ ಸ್ವಿಚ್ಚು ಆಫ್ ಮಾಡಿದ್ದೆವು! ನನ್ನ ಅಭ್ಯಾಸವೂ ನಿರಾತಂಕವಾಗಿ ಸಾಗಿ ಪರೀಕ್ಷೆ ಬರೆದೆ... ಮುಂದೇನಾಯ್ತು ಅನ್ನೋದು ನಿಮಗ್ಯಾಕೆ ಹೇಳಬೇಕು?!

--

ಇದರಿಂದ ಕೆಲವು ಸಂಗತಿಗಳು ಸ್ಪಷ್ಟವಾಗುತ್ತವೆ. ಯಾವಾಗಲೂ ಭೂತದ ಸೃಷ್ಟಿಯಾಗೋದು ಕತ್ತಲಲ್ಲೆ. ಭೂತದ ಭಯಕ್ಕೆ ಇನ್ನೊಂದು ಕಾರಣ ಎಂದರೆ ವಿನಾಕರಣದ(!) ಶಬ್ದ! ಅದಕ್ಕೆ ಇರಬೇಕು, ಹಾರರ್ ಚಿತ್ರಗಳಲ್ಲಿ ನಿಜಕ್ಕೂ ಭಯ ತರಿಸೋದು ಅವರು ಸೃಷ್ಟಿ ಮಾಡುವ ವಿಚಿತ್ರ ಶಬ್ದಗಳೇ ಹೊರತು ಮಾಸ್ಕ್ ಹಾಕಿಕೊಂಡು ಜೋಕರ್ ಗಳಂತೆ ಕಾಣುವ ಭೂತಗಳಲ್ಲ!