Friday, December 19, 2014

ವಿಮಾನಾಲಯ ಅಂದ್ರ ಏನ್ ಮೀನಿಂಗು?:


(ಪಂಜು ಪತ್ರಿಕೆಯಲ್ಲಿ ಪ್ರಕಟವಾಗಿತ್ತು >> http://www.panjumagazine.com/?p=9503)

ವೆಂಕಣ್ಣನನ್ನು ಅವನ ಕಂಪನಿಯವರು ಅಮೆರಿಕಾಕ್ಕೆ ಕಳಿಸುವ ನಿರ್ಧಾರ ಮಾಡುತ್ತಾರೆ. ಹೆಂಡತಿ, ಮಗಳನ್ನೂ ಜೊತೆಗೆ ಕರೆದೊಯ್ಯುವ ನಿರ್ಧಾರ ಮಾಡಿ ಅವರಿಗೆ ವೀಸಾ ಮಾಡಿಸಲು ಚೆನ್ನೈಗೆ ಹೋಗುತ್ತಾನೆ. ವಿಸಾ ಕೊಡುವದಕ್ಕೆ ಅಮೇರಿಕದವರು ಕಾಡಿಸುವ ರೀತಿಗೆ ಬೇಸತ್ತು,  ಆ ದೇಶಕ್ಕೆ ಹೋಗುವುದೇ ಬೇಡ ಅನ್ನುವ ನಿರ್ಧಾರ ಮಾಡುತ್ತಾನಾದರೂ ಹೆಂಡತಿ ಮಗಳಿಗೋಸ್ಕರ ನಿರ್ಧಾರ ಬದಲಿಸುತ್ತಾನೆ.  ಮುಂದೆ ಓದಿ… )
 
ಮೊದಲೆಲ್ಲಾ ವಿದೇಶ ಪ್ರಯಾಣ ಮಾಡುವವರ ದೊಡ್ಡದೊಂದು ಫೋಟೊ ಪೇಪರಿನಲ್ಲಿ ಹಾಕಿಸಿ, ಅವರಿಗೆ ಬಂಧು ಮಿತ್ರರು ಶುಭ ಕೋರುತ್ತಿದ್ದರು. ಅದು ಯಾಕೆ ಹಾಗೆ ಮಾಡುತ್ತಿದ್ದರೋ? ಆಗೆಲ್ಲ ಕೆಲವೇ ಕೆಲವು ಜನರು ವಿದೇಶಕ್ಕೆ ಹೋಗುತ್ತಿದ್ದುದರಿಂದ ಅದೂ ಒಂದು ಪ್ರತಿಷ್ಠೆಯ ವಿಷಯವಾಗಿತ್ತೇನೊ? ಹಾಗೆ ಶುಭ ಕೋರುವವರು ಆ ವಿದೇಶ ಪ್ರಯಾಣಿಕರ ಜೊತೆಗೆ ತಮ್ಮನ್ನು ಗುರುತಿಸಿಕೊಂಡು ತಮ್ಮ ಪ್ರತಿಷ್ಠೆ ಮೆರೆಯುತ್ತಿದ್ದರೇನೊ! ಅಥವಾ ಅದಕ್ಕಿದ್ದ ಇನ್ನೊಂದು ಕಾರಣವೆಂದರೆ ಆಗ ಫೆಸ್ ಬುಕ್ ಇರಲಿಲ್ಲವೆಂದೆ?! ಆದರೆ ಈಗ ಇದೆಯಲ್ಲ! 
ಅದಕ್ಕೆ ಜಾನು ತನ್ನ ಫೆಸ್ ಬುಕ್ಕ್ ನ ಮುಖಪುಟದಲ್ಲಿ ದೊಡ್ಡದಾಗಿ "going to miss you India … ನಾವು ಹೊರಟೆವು ಅಮೆರಿಕಾಕ್ಕೆ…   " ಅಂತೇನೊ ಬರೆದದ್ದೇ  ತಡ ಅವಳ ಪೋಸ್ಟಿಗೆ ಬಂಧುಮಿತ್ರರು ಲಗ್ಗೆ ಹಾಕಿ ಲೈಕ್ ಒತ್ತಿದ್ದರು! ಕಮೆಂಟು ಗೀಚಿದರು. ಇದನ್ನು ನೋಡಿ ವೆಂಕಣ್ಣನಿಗೆ ಕೆಂಡದಂಥ ಕೋಪ ಬಂದಿತ್ತು.
"ಹಿಂಗೆಲ್ಲಾ ಸ್ಟೇಟಸ್ ಹಾಕಿ, ಊರಾಗಿನ ಕಳ್ಳರಿಗೆಲ್ಲಾ ನಾವು ಒಂದ ತಿಂಗಳ ನಮ್ಮ ಮನಿ ಬಿಟ್ಟು ಹೊಂಟೇವಿ ಅಂತ ಗೊತ್ತಾಗತದ. ನಾವ್ ವಾಪಸ ಬರೋದರಾಗ ಎಲ್ಲ ಕಳುವು ಮಾಡಿ ಮನಿ ಖಾಲಿ ಮಾಡತಾರ!" ಅಂತ  ಬೈದಿದ್ದಕ್ಕೆ, ಜಾನು ತನ್ನ ಹುಬ್ಬೇರಿಸಿ
"ನಮ್ಮ ಮನ್ಯಾಗ ಅಂಥ ಸಾಮಾನು ಏನೂ ಇಲ್ಲಾ ಬಿಡ್ರಿ. ಕಳ್ಳರು ಬಂದ್ರ ಅವ್ರಿಗೆ ಏನೂ ಸಿಗೂದಿಲ್ಲ." ಅಂದಾಗ ಟ್ರ್ಯಾಕು ಬದಲಿಸುವ ಅವಶ್ಯಕತೆ ಉಂಟಾಗಿ.
"ಅಂಧಂಗ ನಾವು ಹೊಂಟಿದ್ದು ನಿನ್ನ ಅಪ್ಪ ಅಮ್ಮಗ ಹೇಳಿದಿಲ್ಲೊ?" ಅನ್ನುವ ದಡ್ಡತನದ ಪ್ರಶ್ನೆಯೊಂದನ್ನು ಕೇಳಿದನು. ಆಯಾ ದಿನದ ಅಡಿಗೆಯಲ್ಲಿ ಏನು ಮಾಡಿದ್ದೇನೆಂಬುದರಿಂದ ಹಿಡಿದು ಕೆಲಸದವಳು ಇವತ್ತು ಬಂದಿಲ್ಲ ಅನ್ನುವ ಪ್ರತಿಯೊಂದು ವಿಷಯಗಳನ್ನು ಅಮ್ಮನಿಗೆ ಚಾಚುತಪ್ಪದೆ ವರದಿ ಒಪ್ಪಿಸುವ ಜಾನು ವಿದೇಶ ಪ್ರಯಾಣದಂತಹ ದೊಡ್ಡ ವಿಷಯವನ್ನು ಅವರಮ್ಮನಿಗೆ ಹೇಳಿರುವುದಿಲ್ಲವೆ? ಆ ತರಹದ ಪ್ರಶ್ನೆ ಕೇಳುವುದು ದಡ್ಡತನವಲ್ಲದೆ ಮತ್ತೇನು?!    
"ನಿನ್ನೆನ ಹೇಳೇನಿ. ನಾಳೆ ಎಲ್ಲಾರೂ ಬರ್ಲಿಕತ್ತಾರ. ಒಂದ ವಾರ ಇಲ್ಲೇ ಇದ್ದು ನಮ್ಮನ್ನ ವಿಮಾನದಾಗ ಕುಡಿಸಿದ ಮ್ಯಾಲೇ ಊರಿಗೆ ವಾಪಸ್ಸು ಹೋಗ್ತಾರಂತ" ಅಂದಳು.
"ಎಲ್ಲಾರು ಅಂದ್ರ?!" ವೆಂಕಣ್ಣ ಉಗುಳು ನುಂಗುತ್ತ ಕೇಳಿದ.
"ಅಪ್ಪಾ, ಅಮ್ಮಾ, ಇಬ್ಬರೂ  ಅಣ್ಣಂದರು, ಅತ್ತಿಗೆಂದರು ಮತ್ತ ಅವರ ಮಕ್ಕಳು."
"ಒಹ್ ಹೌದಾ?! ಭಾರಿ ಆತಲ್ಲ!" ಅಂತ ಹೇಳಿ, ತನಗಾಗದ ಖುಷಿಯನ್ನು ತೋರಿಸುವ ವ್ಯರ್ಥ ಪ್ರಯತ್ನ ಮಾಡಿ, ಮುಖವನ್ನು ಅರಳಿಸಲು ಸಾಧ್ಯವಾಗದೆ ಬೇರೆ ಕಡೆ ಹೊರಳಿಸಿದ! 
’ಒಂದು ವಾರ ಇಕಿ ತೌರುಮನಿಯವ್ರು ಇಲ್ಲೆ ಟೆಂಟ್ ಹೊಡದರ ಸುದ್ದ ಆತು’ ಅಂತ ಸ್ವಗತದಲ್ಲೆ ಹೇಳಿಕೊಂಡ. ಹೆಂಡತಿಯೆದುರು ಹೇಳಿಕೊಳ್ಳುವ ಧೈರ್ಯಶಾಲಿ ಗಂಡ ಇವನಲ್ಲವಲ್ಲ.
ಅಂತೂ ಇಂತೂ ಇವನು ಅಮೆರಿಕಾಕ್ಕೆ ಹೋಗುವ ಸುದ್ದಿ ಎಲ್ಲಾ ದಿಕ್ಕಿನಲ್ಲೂ ವಿಚಿತ್ರ ರೀತಿಯಲ್ಲಿ ಪಸರಿಸತೊಡಗಿತು. ಹೀಗಿರುವಾಗ ಒಂದು ದಿನ ಇವನ ಫೋನು ರಿಂಗಣಿಸಿ ಹೆಲೋ ವೆಂಕಟ್ ಹಿಯರ್ ಅಂದವನಿಗೆ. 
"ಮತ್ತೇನಪಾ ದೋಸ್ತ, ಭಾರಿ ಧೊಡ್ಡ ಮನಶ್ಯಾ ಆಗಿ ಬಿಡು. ನಾವ ಫೋನ್ ಮಾಡಬೇಕ್ ನೋಡು ನಿನಗ. ನೀನಂತೂ ಮರ್ತಬಿಟ್ಟಿ ನಮ್ಮನ್ನ. ನಾನು ನಿನ್ನ ಗೆಳೆಯಾ ರವಿ ಅನ್ನೋದರೆ ನೆನಪದನೊ ಇಲ್ಲೊ…" ಅಂತ ಬಹಳ ದಿನಗಳ ಮೇಲೆ ಫೋನ್ ಮಾಡಿದ್ದರಿಂದ ಮತ್ತೆ ತನ್ನ ಪರಿಚಯವನ್ನು ಮಾಡಿಕೊಂಡ ಇವನ ಗೆಳೆಯ. ಅದು ಇದು ಮಾತನಾಡಿ ’ಅಮೇರಿಕಾಕ್ಕ ಹೊಂಟಿಯಂತ ಸುದ್ದಿ ಬಂತು…’ ಅಂತ ಅವನಂದಾಗ, ವೆಂಕಣ್ಣ ಹುಷಾರಾದ!
"ಹೌದಪಾ ಒಂದ ತಿಂಗಳಿಗೆ ಹೊಂಟಿನಿ" ಅಂದ.
"ಏ ಅಂಧಂಗ ಅಲ್ಲೆ ಲ್ಯಾಪ್ ಟಾಪ್ ಭಾರಿ ಸಸ್ತಾದಾಗ ಸಿಗತಾವಂತ ಕೇಳ್ದೆ. ನನಗೊಂದು ತೊಗೊಂಬಾ. ಹಂಗ ಒಂದು ಬಾಟಲ್ ವಿಸ್ಕಿನೂ ತೊಗೊಂಡು ಬಾರಪಾ. ಒಮ್ಮೆರೆ ಫಾರಿನದ್ದು ಕುಡ್ಯೋಣಂತ." ಅಂದ. ಗೆಳೆಯ ಬಹಳ ದಿನಗಳ ಮೇಲೆ ಇವನನ್ನು ನೆನಪಿಸಿಕೊಂಡ ಉದ್ದೇಶ ಈಗ ಸ್ಪಷ್ಟವಾಗಿತ್ತು.
"ಆತು ತೊಗೊ ನೋಡೊಣಂತ. ಈಗ ನಂದ ಮೀಟಿಂಗ್ ಅದ, ಅಮ್ಯಾಲೆ ಫೋನ್ ಮಾಡ್ತೀನಿ." ಅಂತ ಹೇಳಿ ಕರೆಯನ್ನು ಮೊಟಕುಗೊಳಿಸಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡ.
ಹೀಗೆ ಒಬ್ಬೊಬ್ಬರಾಗಿ, ಯಾರ್ಯಾರೊ ಫೋನ್ ಮಾಡಿ, ನನಗೆ ಅದು ಬೇಕು ಇದು ಬೇಕು ಅಂತ ಕೇಳತೊಡಗಿ ಇವನ ಇಂಪೊರ್ಟೆಡ್ ವಸ್ತುಗಳ ಪಟ್ಟಿ ಉದ್ದವಾಗತೊಡಗಿತು! ಅಮೇರಿಕಾದಲ್ಲಿ ಸಿಗೋದೆ ’ಮೇಡ್ ಇನ್ ಚೈನಾ’ ಸಾಮಾನುಗಳು. ಅದನ್ನ ಅಮೇರಿಕಾದಿಂದಲೇ ತರಿಸಿಕೊಳ್ಳಬೇಕೆಂಬ ಜನರ ಬಯಕೆ ಕಂಡು ಬೆರಗಾದನವನು. 
ಇವನ ಇನ್ನೊಬ್ಬ ಗೆಳೆಯ ಇವನ ಜೊತೆಗೆ ತನ್ನ ಸಂಕಟವನ್ನೂ ತೋಡಿಕೊಂಡ. ಏನಾಗಿತ್ತೆಂದರೆ, ಇವನು ತನ್ನ ಪರಿವಾರ ಸಮೇತ ಅಮೇರಿಕಾಕ್ಕೆ ಹೊರಟ ಸುದ್ದಿ ಕೇಳಿ ಆ ಗೆಳೆಯನ ಹೆಂಡತಿ,
"ವೆಂಕಣ್ಣನ್ನ ನೋಡಿ ಸ್ವಲ್ಪ ಕಲೀರಿ. ನಾವಂತೂ ಇಲ್ಲೆ ಭಾಂಡಿ ತೊಳಕೋತ ಕೂಡೊದ ಆತು. ನಾನು ಯಾವಾಗ ಅಮೇರಿಕಾ ಕಾಣತೇನೊ ಏನೊ. ಎಲ್ಲಾ ನಮ್ಮ ಕರ್ಮ" ಅಂತ ಅವನೊಂದಿಗೆ ಜಗಳ ಮಾಡಿದ್ದಳಂತೆ.
"ನೀ ಬರೆ ಇಂಥಾ ಬ್ಯಾಟಾ ಹಚ್ಚತಿ ನೋಡಪಾ. ನೀ ಮಾಡೊ ಕೆಲಸಕ್ಕ ಮನ್ಯಾಗ ನಾವ್ ಬೈಸಿಕೋಬೇಕು." ಅಂತ ಕೋಪಗೊಂಡಿದ್ದ ಇವನ ಮಿತ್ರ.
’ಇದೊಳ್ಳೆ ಕಥೆ ಆಯ್ತಲ್ಲ! ನನ್ನ ಹೆಂಡತೀನ ನಾ ಕರ್ಕೊಂಡು ಹೊಂಟ್ರ ಇವರಿಗೇನ್ ಸಮಸ್ಸೆ’ ಅಂತ ವೆಂಕಣ್ಣ ತಲೆ ಚಚ್ಚಿಕೊಂಡ.
ಇದೆಲ್ಲದರ ಜೊತೆಗೆ ಅಮೇರಿಕಾಕ್ಕೆ ಏನೇನು ಒಯ್ಯುವುದು ಅನ್ನುವ ಬಗ್ಗೆ ಜಾನು ತುಂಬಾ ತಲೆ ಕೆಡಿಸಿಕೊಂಡಳು. ತನ್ನ ಬಳಿ ಇದ್ದ ಬಟ್ಟೆಗಳೆಲ್ಲಾ ಅವಳಿಗೆ ತುಂಬಾ ಹಳೆಯದಾಗಿ ಕಾಣತೊಡಗಿ ಒಂದಿಷ್ಟು ಹೊಸ ಹೊಸ ಮಾಡರ್ನ್ ಬಟ್ಟೆಬರೆಗಳನ್ನು ತನಗೂ ತನ್ನ ಮಗಳಿಗೂ ಅಂತ ಖರಿದಿಸಿ ಇವನ ಕ್ರೆಡಿಟ್ ಕಾರ್ಡಿಗೆ ಕತ್ತರಿ ಹಾಕಿದಳು! ಕಾಯಿ ಪಲ್ಲೆಗಳನ್ನೊಂದು ಬಿಟ್ಟು ಉಳಿದೆಲ್ಲ ದಿನಸಿಗಳನ್ನೂ ಖರಿದಿಸಿ ಅಮೇರಿಕಾಕ್ಕೆ ಒಯ್ಯಲು ಪ್ಯಾಕ್ ಮಾಡಿಟ್ಟುಕೊಂಡಳು.
"ಅಲ್ಲೆ ಹೋಗಿ ಅಂಗಡಿ ಹಾಕು ವಿಚಾರದ ಏನ್ಲೆ? ಅಲ್ಲೆ ಎಲ್ಲಾ ಸಿಗತಾವು. ನಾವು ಮರಭೂಮಿಗೆ ಹೊಂಟಿಲ್ಲ" ಅಂತ ವೆಂಕಣ್ಣ ದಬಾಯಿಸಿದಾಗ,
"ನಿಮಗ ಗೊತ್ತಾಗಂಗಿಲ್ಲ ಸುಮ್ಮನಿರ್ರಿ, ಆಲ್ಲೆ ತೊಗೊಂಡ್ರ ದುಬಾರಿ ಆಗ್ತದ. ಅದೂ ಅಲ್ಲದ ಡಾಲರ್ ಕೊಟ್ಟು ಕೊಂಡಕೊಬೇಕು. ಇದಕ್ಕ ಎಲ್ಲಾ ರೊಕ್ಕಾ ಖರ್ಚು ಮಾಡಿದರ ಅಮ್ಯಾಲೆ ಅಲ್ಲೆ ಶಾಪಿಂಗ್ ಏನ್ ಮಾಡೋದು?" ಅಂತ ಹೇಳಿ, ಇವನ ಎದೆಯ ಕಂಪನಕ್ಕೆ ಕಾರಣಳಾದಳು.

ತೌರು ಮನೆಯವರೆಲ್ಲಾ ಬಂದದ್ದರಿಂದ ಮನೆಯಲ್ಲಿ ಹಬ್ಬದ ವಾತಾವರಣವಿತ್ತು. ಯಾರಿಗೆ? ಜಾನುಗೆ! ವೆಂಕಣ್ಣನಿಗಲ್ಲ!! ಅಂತೂ ಹೊರಡುವ ದಿನ ಬಂದಾಗ ನಿಟ್ಟುಸಿರಿಟ್ಟ. ಟ್ಯಾಕ್ಸಿ ಯಲ್ಲಿ ಬೆಂಗಳೂರಿನ ವಿಮಾನ ನಿಲ್ದಾಣದ ಒಳಗೆ ಪ್ರವೇಶಿಸುತ್ತಿದ್ದಂತೆ "ವಿಮಾನಾಲಯ" ಅನ್ನುವ ಕನ್ನಡದಲ್ಲಿ ಬರೆಸಿಕೊಂಡ ಬೋರ್ಡು ಗೋಚರಿಸಿತು. ಅದನ್ನು ಕಂಡು, "ಅಪ್ಪಾ ವಿಮಾನಾಲಯ ಅಂದ್ರ ಏನ್ ಮೀನಿಂಗು?" ಅಂತ ಸೆಕೆಂಡ್ ಲ್ಯಾಂಗ್ವೇಜ್ ಕನ್ನಡಾ ಓದುತ್ತಿದ್ದ ಮಗಳು ಕೇಳಲಾಗಿ "ಹಂಗಂದ್ರ ಟರ್ಮಿನಲ್ ಅಂತ ಅರ್ಥ ಮಗಳ ಅಂತ ಹೇಳಿ, ಮೇಲೆರುತ್ತಿದ್ದ ವಿಮಾನವೊಂದನ್ನು ಟ್ಯಾಕ್ಸಿಯ ಕಿಟಕಿಯಿಂದಲೆ ನೆಟ್ಟ ದೃಷ್ಟಿಯಿಂದ ನೋಡತೊಡಗಿದನವನು.

Thursday, December 4, 2014

ರೆಡಿ ಸ್ಟೆಡಿ ಪೋ!

(ಪಂಜು  ಪತ್ರಿಕೆಯಲ್ಲಿ ಪ್ರಕಟವಾಗಿತ್ತು http://www.panjumagazine.com/?p=9375)

ಅವತ್ತಿನ ದಿನದಲ್ಲೇನು ಹೇಳಿಕೊಳ್ಳುವಂತಹ ವಿಶೇಷತೆಯಿರಲಿಲ್ಲ. ಪ್ರತಿದಿನದಂತೆ ಅವತ್ತೂ ಬೆಳಗಾಗಿತ್ತು, ವೆಂಕಣ್ಣ  ಎಂದಿನಂತೆ ಬಲ ಮಗ್ಗಲಲ್ಲೇ ಎದ್ದಿದ್ದ! ಅವನ ಹೆಂಡತಿ ಎಂದಿನಂತೆ ಅವತ್ತು ಕೂಡ ಇನ್ನೂ ಎದ್ದಿರಲಿಲ್ಲವಾದ್ದರಿಂದ, ಹಲವು ಬಗೆಯ ರಾಸಾಯನಿಕಗಳ ಆಗರವೆಂದು ಗೊತ್ತಿದ್ದೂ ಕೂಡ ಚಹಾ ಎನ್ನುವ ಕಷಾಯದ ವಿಷವನ್ನು ತನ್ನ ಕೈಯಾರೆ ಕುದಿಸಿಕೊಂಡ. ಎಷ್ಟಂದ್ರೂ ನಮಗೆ ಬೇಕಾದ ವಿಷವನ್ನು ನಾವೇ ಆರಿಸಿಕೊಳ್ಳಬೇಕೆಂದು ಹಿರಿಯರು ಹೇಳಿಬಿಟ್ಟಿದ್ದಾರಲ್ಲ! ಯಾಂತ್ರಿಕವಾಗಿ ಇತರ ಪ್ರಾತಃ ಕರ್ಮಗಳಿಗೂ ಮುಕ್ತಿಯನ್ನು ಕರುಣಿಸಿದ್ದ. ಹಿಂದಿನ ದಿನ ನೋಡಿದ್ದ ನಾಟಕದ ಪಾತ್ರವೊಂದು ಅವನ ತಲೆಯಲ್ಲಿ ಇನ್ನೂ ಗುಂಯ್ ಗುಡುವ ಕಾರ್ಯದಲ್ಲಿ ತೊಡಗಿತ್ತು....  ಏನೇ ಆದರೂ ಅವನು ಅವತ್ತು ಕೆಲಸಕ್ಕೆ ಹೋಗಲೇ ಬೇಕಿತ್ತು. ಪ್ರಳಯವಾದರೂ ಸರಿಯೇ, ಅವನ ಪ್ರಳಯಾಂತಕ ಬಾಸ್ ಗೆ ಇವನನ್ನು ಕಣ್ಣೆದುರಿಗೆ ಕಾಣದಿದ್ದರೆ ಸಮಾಧಾನವೇ ಇಲ್ಲವಲ್ಲ! ಅಷ್ಟು ಲವ್ವು!!

ಅಂತು ಆಫೀಸು ಮುಟ್ಟಿದಾ ಅನ್ನಿ. ಅಲ್ಲೂ ಏನಂಥ ವಿಶೇಷ ಬದಲಾವಣೆಗಳಿರಲಿಲ್ಲ. ಅವೇ ಅತೃಪ್ತ ಆತ್ಮಗಳು,  ತಾವೆ ತಮ್ಮ ಕೈಯ್ಯಾರೆ ಮಾಡಿಕೊಂಡಿದ್ದ ತಮ್ಮ ಸ್ವಂತ ತಪ್ಪು ನಿರ್ಧಾರಗಳಿಂದ ಹೀಗಾಯಿತು ಅಂತ ಪರಿತಪಿಸುತ್ತ, ಇತ್ತ ಕೆಲಸ ಬಿಟ್ಟು ಓಡಿ ಹೋಗಲೂ ಆಗದೇ, ಖುಷಿಯಿಂದ ಕೆಲಸ ಮಾಡಲೂ ಮನಸ್ಸಿಲ್ಲದೆ, ಅಂತರ್ ಪಿಶಾಚಿಗಳಂತೆ ಅಲೆದಾಡುವ ದೃಶ್ಯ ಎಂದಿನಂತೆ ಮಾಮೂಲಿಯಾಗಿತ್ತು. ಆದರೆ ಇವನ ಬಾಸ್ ನ ಮುಖ ಮಾತ್ರ ಮಾಮೂಲಿಯಂತೆ ಸಪ್ಪೆಯಾಗಿರದೆ ಲವಲವಿಕೆಯಿಂದ ತುಂಬಿ ತುಳುಕುತ್ತಿದ್ದುದು ಇವನಿಗೆ ಸ್ವಲ್ಪ ಕುತೂಹಲಕಾರಿಯಾಗಿತ್ತು! ಬಾ ಅಂತ ಸನ್ನೆ ಮಾಡಿ ಕರೆದಾಗಲಂತೂ ಬಹುಷಃ ಅವರು ಕೆಲಸಕ್ಕೆ ರಾಜಿನಾಮೆ ಕೊಟ್ಟಿರಬಹುದೆ? ಅಂತ ಯೋಚನೆ ಬಂದು ಪುಳಕಗೊಂಡು ಅವರ ಬಳಿ ಹೋಗಲಾಗಿ...
Good news! ಅಂದ್ರು! ತಾವು ರಾಜಿನಾಮೆ ಕೊಟ್ರೆ ತನಗೆ ಖುಷಿ ಅಂತ ಇವರಿಗೆ ಹೇಗೆ ಗೊತ್ತಾಯ್ತು ಅಂತ ಇವನು ಬೆರಗು ಗಣ್ಣಿನಿಂದ ನೋಡುತ್ತಿರುವಂತೆ ...
ಅಮೇರಿಕಾಕ್ಕೆ ಕರೀತಿದ್ದಾರೆ ರೆಡಿ ಆಗಿ! ಅನ್ನಬೇಕೆ? ಅದನ್ನು ಕೇಳುತ್ತಲೆ ಇವನು ಖಿನ್ನನಾದ! ಅದಕ್ಕೆ ಕಾರಣಗಳು ಎರಡು. ಬಾಸ್ ರಾಜಿನಾಮೆ ಕೊಡುತ್ತಿರಬಹುದೆಂಬ ತನ್ನ ಊಹೆ ಸುಳ್ಳಾಗಿದ್ದು ಒಂದು! ಇನ್ನೊಂದೆಂದರೆ,  ಬುರ್ಗರ್ ವಾಸ್ನೆ ನೆನಪಾಗಿ!  ಯಾಕಂದ್ರೆ ಕೊನೇ ಬಾರಿ ಅಲ್ಲಿಗೆ ಹೋಗಿದ್ದಾಗ ಸಸ್ಯಾಹಾರಿಯಾಗಿದ ಇವನು ಬೇರೆ ಗತಿಯಿಲ್ಲದೆ, ಹೋದಲ್ಲಿ ಬಂದಲ್ಲಿ ಸುಲಭವಾಗಿ ಸಿಗುತ್ತಿದ್ದ ಬರ್ಗರ್ ತಿಂದು ತಿಂದು, ವಾಪಸ್ಸು ಭಾರತಕ್ಕೆ ಬಂದ ಮೇಲೆ, ಅದನ್ನು ತಿನ್ನುವುದೇ ಬಿಟ್ಟಿ ಬಿಟ್ಟಿದ್ದ. ಅಷ್ಟು ವಾಕರಿಕೆ ಬಂದಿತ್ತು. ಅವನ ಮೂಗಿನಲ್ಲಿ ಅದರ ವಾಸನೆ ಇನ್ನೂ ತಾಜಾ ಇತ್ತು! 
ಯಾಕೆ? ಸಡನ್ನಾಗಿ ಡಿಪ್ರೆಸ್ಸ್ ಆದ್ರೀ? ಅಂತ ಕಂಗ್ಲಿಷ್ ಪಂಡಿತರಾದ ಅವನ ಬಾಸು ಕೇಳಲಾಗಿ.
ನನಗೆ ಹೋಗಲು ಇಷ್ಟವಿಲ್ಲ ಅಂತರುಹಿ ಸೂರನ್ನು ದಿಟ್ಟಿಸುತ್ತ ನಿಂತ. ಅವರು ಇವನಿಂದ ಇಂತಹ ಅಧಿಕ ಪ್ರಸಂಗಿ  ಉತ್ತರವನ್ನು ನಿರೀಕ್ಷಿಸಿರಲಿಲ್ಲವೇನೋ...
ಕಮಾನ್ ಮ್ಯಾನ್! ಎಲ್ರೂ ಅಲ್ಲಿ ಹೋಗೋಕೆ ಸಾಯ್ತಾರೆ. ನೀವೇನ ಹಿಂಗ್ ಅಂತೀರ? ಹೋಗ್ತೀರೊ ಇಲ್ವೋ ಅಂತ ನಾ ಕೇಳಿಲ್ಲ. ನೀವು ಹೋಗ್ಲೆ ಬೇಕು, ಇದು ತುಂಬಾ ಇಂಪಾರ್ಟಂಟ್ ಪ್ರಾಜೆಕ್ಟು ನಮಗೆ. ಅದೂ ಅಲ್ದೆ ಕಸ್ಟಮರ್ರೆ ಕರೆತಿದ್ದಾರ್ರಿ, ನೀವೆ ಬರ್ಬೇಕಂತೆ ಅವ್ರಿಗೆ!
ಓಹೊ! ಇದು ವ್ಯವಸ್ಥಿತ ಸಂಚು! ತಮಗೆ ಬೇಕಾದ ಕುರಿಯನ್ನು ಅವರೆ ಆರಿಸಿಕೊಂಡಿದ್ದರು ಇವನ ಕಷ್ಟಮಾರಾಯ್ರು (customer).

ಬಾಸ್ ನ ನಿರ್ಧಾರ ಅಚಲವಾಗಿತ್ತು. ಕೋಳಿ ಕೇಳಿ ಯಾರಾದರೂ ಸಾಂಬಾರ ಅರಿಯುತ್ತಾರೆಯೇ? ಆದರೂ ತನ್ನ ನಖರಾ ತೋರಿಸಲು ಒಂದು ದಿನದ ಸಮಯ ತೆಗೆದುಕೊಂಡ. 


ಈ ಸಲ ಪರಿವಾರ ಸಮೇತನಾಗಿ ಹೋದರೆ ಹೇಗೆ ಅನ್ನುವ ಒಂದು ಯೋಚನೆ ಬಂತು. ಮನೆಗೆ ಹೋಗಿ ಜಾನುಗೆ ಆ ವಿಚಾರ ಹೇಳಲಾಗಿ ಅವಳು ಮನಸ್ಸಿದ್ದರೂ, ಒಲ್ಲೆ ಒಲ್ಲೆ ಅನ್ನುತ್ತಲೇ ಹೂಂ ಗುಟ್ಟಿದಳು!
  
ಮರುದಿನ ಬಾಸಿಗೆ ತಾನು ತನ್ನ ಹೆಂಡತಿ ಮಗಳನ್ನೂ ಕರೆದುಕೊಂಡು ಹೋಗಲು ಒಪ್ಪುವುದಾದರೆ ನಾ ಹೋಗಲು ಸಿದ್ಧ, ಅಂದಿದ್ದಕ್ಕೆ 'ನಿಮ್ಮ ಹೆಂಡ್ತಿನ್ನ ನಿಮ್ಮ ಜೊತೆ ಕರ್ಕೊಂಡು ಹೋಗಲು ಬೇಡಾ ಅನ್ನಲು ನಾನ್ಯಾರ್ರೀ!?' ಅಂತಂದು ತಮ್ಮ ಅದ್ಭುತ ಜೋಕಿಗೆ ಪಕ ಪಕ ಅಂತ ನಕ್ಕರು. ಆದರೆ ಮುಂದಿನ ಕ್ಷಣವೇ ಗಂಭೀರವಾಗಿ ನಿಮ್ಮ ಮನೆಯವರ ಟಿಕೇಟ್ ಖರ್ಚು ನೀವೇ ನೋಡ್ಕೋಬೇಕು ಅಂದ್ರು. ಅದಕ್ಕೆ ನಗಬೇಕೋ ಅಳಬೇಕೋ ಗೊತ್ತಾಗದ ವೆಂಕಣ್ಣ ಸುಮ್ಮನೆ ಕೈಕಟ್ಟಿಕೊಂಡು ನಿಂತಿದ್ದನ್ನು ಅವನ ಟೀಮಿನ ಹುಡುಗಿ ನೋಡಿದ್ದಂತು ನಿಜ!

ಬರುತ್ತೇನೆ ಅಂದಾಗ ಬಾ ಅಂತ ಬರಸೆಳೆದುಕೊಳ್ಳುವ ದೇಶವಂತೂ ಅಲ್ಲಾ ಅದು. ಎಲ್ಲರೂ ತನ್ನ ದೇಶಕ್ಕೆ ಬರಲು ಹಪಹಪಿಸುತ್ತಾರೆ, ಹಾಗೆ ಬಂದವರು ತಮ್ಮ ದೇಶದಲ್ಲೇ ಬೇರು ಬಿಡುತ್ತಾರೆ ಎಂದು ಅನವಶ್ಯಕವಾದ ತಪ್ಪು ನಂಬಿಕೆಯಲ್ಲಿರುವ,  ದೇಶವದು! ಅಲ್ಲಿಗೆ ಹೋಗಲೇ ಮನಸ್ಸಿಲ್ಲದ ವೆಂಕಣ್ಣನಂತವರೂ ಇರುವರೆನ್ನುವ ವಿವೇಕವಿಲ್ಲವೇ ಆ ದೇಶಕ್ಕೆ? ಅದರೂ ಬೇಲಿ ಹಾರಿ ಬಂದವರಿಗೆಲ್ಲಾ ಜೀವನಕ್ಕೆ 'ಅಧಾರ' ಮಾಡಿಕೊಡುವ ಭಾರತೀಯರಷ್ಟು ಉದಾರಿಗಳೆ ಅವರು?

ಇವನ ತಯ್ಯಾರಿ ಶುರುವಾಗಿತ್ತು. ಇವನ ವೀಸಾ ಮೊದಲೇ ಇತ್ತಾದರೂ ಹೆಂಡತಿ ಮಗಳದು ಮಾಡಿಸಬೇಕಿತ್ತು. ಏಜಂಟೊಬ್ಬಳ ಬಳಿ ಹೋಗಲಾಗಿ, ಅಮೇರಿಕಾದವ್ರು  ವೀಸಾ ದಯಪಾಲಿಸಬೇಕೆಂದರೆ ಏನೇನು ತಯಾರಿ ಬೇಕೆಂದು ಅವಳು ಖಡಾ ಖಂಡಿತವಾಗಿ ಇಂಗ್ಲೀಷಿನಲ್ಲೇ ಹೇಳತೊಡಗಿದಳು. ಆ ಪ್ರೂಫು ಈ ಪ್ರೂಫು ಅಂತೆಲ್ಲಾ ಹೇಳಿ ಬ್ಯಾಂಕಿನಲ್ಲಿರುವ ಎಲ್ಲಾ ಡೆಪಾಸಿಟ್ಟು ತೋರಿಸ್ಬೇಕು ಅಂದು ಇವನ ಕಣ್ಣುಗಳು ಉಪೇಂದ್ರನ ಶೈಲಿಯಲ್ಲಿ ತಿರುಗುವ ಹಾಗೆ ಮಾಡಿದಳು. ಇವನಿಗೆ ಕೆಂಡದಂಥ ಕೋಪ ಬಂತು. ಇದೆಲ್ಲಾ ಯಾಕೆ ತೋರಿಸಬೇಕು ಅನ್ನೊ ಸಿಟ್ಟು ಒಂದಾದರೆ, ಇದ್ದ ಬದ್ದ ದುಡ್ಡನ್ನೆಲ್ಲಾ ಹಾಕಿ  ಹೆಂಡತಿ ಮಗಳನ್ನು  ಅಮೇರಿಕಾ ಪ್ರವಾಸಕ್ಕೆ ಕರೆದೊಯ್ಯುತ್ತಿರುವ ಸಂದರ್ಭದಲ್ಲಿ ಇಲ್ಲದ ಡೆಪಾಸಿಟ್ಟು ಎಲ್ಲಿಂದ ತೋರಿಸುವುದು ಅಂತ! ಆದ್ರೂ ಏಜಂಟ್ ಬಳಿ ಅದೆಲ್ಲ ಹೇಳೋಕಾಗುತ್ತದೆಯೆ? ಏನೇನಿದೆಯೋ ಅದನ್ನು ತೋರಿಸಿದರಾಯ್ತು ಅಂತ ಸುಮ್ಮನಾದ. ಎಲ್ಲಾ ತಯ್ಯಾರಿ ಮಾಡಿಟ್ಟುಕೊಂಡು, ವೀಸಾ ಸಂದರ್ಶನ ಚೆನ್ನೈ ನಲ್ಲಿ ನಿಗದಿಯಾದ ಹಿಂದಿನ ದಿನ ಕಾರಿನಲ್ಲಿ ಪರಿವಾರ ಸಮೇತ ಹೊರಟ. ಕಾರಿನಲ್ಲಿ ಹೋದರೆ ಕೆಲಸ ಮುಗಿದ ತಕ್ಷಣ ಬೆಂಗಳೂರಿಗೆ ಬಂದು ಬಿಡಬಹುದಲ್ಲ ಅನ್ನುವ ದೂರ ದೃಷ್ಟಿ ವೆಂಕಣ್ಣನದು!


ದಾರಿಯಲ್ಲಿ ಕಾಂಚಿಪುರಮ್ ಅನ್ನುವ ಸೀರೆ ಮಾರಾಟಕ್ಕೆ ಪ್ರಸಿದ್ಧಿ ಪಡೆದ ಊರನ್ನು ಕಂಡ. ಜಾನುಗೆ, ಬೇಕಾದರೆ ನಿನಗೊಂದು ಸೀರೆ ತೊಗೋಳೋದಿದ್ರೆ ತೊಗೊ ಅಂತ ಹೇಳುವಾಗ, ಅದು ತನ್ನ ಜೀವನದ ಅಸಂಖ್ಯಾತ ತಪ್ಪು ನಿರ್ಧಾರಗಳಲ್ಲಿ ಇನ್ನೊಂದಾದೀತು ಅನ್ನುವ ಕಲ್ಪನೆ ಅವನಿಗಿರಲಿಲ್ಲ! ಆ ಊರೊಳಗೆ ತಲಪುತ್ತಲೇ ಒಳ್ಳೆಯ ಸೀರೆ ಅಂಗಡಿ ಎಲ್ಲಿದೆ ಅಂತ ಒಬ್ಬ ಹುಡುಗನಿಗೆ ಕೇಳಿದ. ಅವನು ತಮಿಳಿನಲ್ಲೇನೋ ಹೇಳಿದ. "ತಮಿಳು ತೆರಿಯಾದು" ಅಂದನಿವನು. ಇವಗೆ ಗೊತ್ತಿದ್ದ ತಮಿಳು ಅಷ್ಟೆ! "ತಮಿಳ ತೆರಿಯಾದಾ?" ಅಂದ ಹುಡುಗ ಮತ್ತೆ ತಮಿಳಿನಲ್ಲೇ ಮಾತಾಡಿದ. ಅವನ ಭಾಶಾಭಿಮಾನಕ್ಕೊಂದು ಮೆಚ್ಚಿಗೆಯ ನಗೆ ನಕ್ಕು ಮುಂದೆ ಸಾಗಿದ. ಮತ್ತೆ ತಮ್ಮ ಅದೃಷ್ಟ ಪರೀಕ್ಷಿಸಲು ಇನ್ನೊಬ್ಬನ ಕೇಳಲಾಗಿ ಮತ್ತೆ ತಮಿಳು ಕಿವಿಗಪ್ಪಳಿಸಿ, ಇವನು ನಿರಾಸೆಯಿಂದ ಮತ್ತೆ "ತೆರಿಯಾದು" ಅನ್ನಲಾಗಿ ಆ ಮನುಷ್ಯ "ಬೆಂಗಳೂರಾ? ಕನ್ನಡ ಮಾತಾಡ್ತೀರಾ?" ಅಂಥೆಳಿ ಇವನ ಕಿವಿಯಲ್ಲಿ  ಜೀವ ತರಿಸಿದ!

ಅವನೇ ಖುದ್ದಾಗಿ ಅಲ್ಲೊಂದು ಸೀರೆ ಅಂಗಡಿಗೆ ಕರೆದೊಯ್ದ. ಅಲ್ಲೂ ಸುಮಾರು ಜನ ಕನ್ನಡ ಮಾತಾಡುತ್ತಿದ್ದರು. ಅಲ್ಲಿ ತುಂಬಾ ಕನ್ನಡಿಗರು ಸೀರೆ ಕೊಳ್ಳಲು ಬರುತ್ತಿದ್ದುದಕ್ಕೆ ಕನ್ನಡ ಮಾತಾಡುವವರು ಜಾಸ್ತಿ ಇರಬೇಕೆ? ಅಥವ ಗಡಿಯಲ್ಲಿದ್ದುದಕ್ಕೆ ಹೀಗಿರಬಹುದೆ? ಅದೇನೆ ಇರಲಿ, ಇವನ ಹೆಂಡತಿ ಮಾತ್ರ ತನಗೊಂದಲ್ಲದೆ ಅಮ್ಮನಿಗೆ, ಚಿಕ್ಕಮ್ಮಗಳಿಗೆ, ಆಪ್ತ ಗೆಳತಿಯರಿಗೆ ಅಂಥೇಳಿ ಹತ್ತು ಸೀರೆ ತೊಗೊಂಡು, ತಮಿಳುನಾಡಿನಲ್ಲಿ ಕನ್ನಡ ಕೇಳಿ ಕುಣಿದಾಡುತ್ತಿದ್ದ ಇವನೆದೆಯ ಝಲ್ ಎನಿಸಿದಳು! ಸೀರೆಗಳ ಗಂಟು ಕಾರಿನಲ್ಲಿ ಒಟ್ಟಿಕೊಂಡು ಮತ್ತೆ ಇವರ ಪಯಣ ಮುಂದುವರಿದು ರಾತ್ರಿಗೆ ಚೆನ್ನೈ ತಲುಪಿದರು. ಕೊತ ಕೊತ ಕುದಿಯುವ ಸೆಕೆಯಲ್ಲಿ ಬೆವೆತು ಮಿಂದವರಿಗೆ ರಾತ್ರಿ ಹವಾನಿಯಂತ್ರಿತ ಹೋಟೇಲಿನಲ್ಲಿ ಮಲಗಿದ್ದೊಂದೇ ನೆನಪು!

ಬೆಳಿಗ್ಗೆ ಎದ್ದು ಅಮೇರಿಕಾದ ವೀಸಾ ಕಚೇರಿಗೆ ಹೋದವರಿಗೆ ಸ್ವಾಗತಿಸಿದ್ದು ಉದ್ದನೆಯ ಪಾಳಿ.  ಹೆಚ್ಚು ಕಡಿಮೆ  ಸಂಜೆಯವರೆಗೆ ಸುಡು ಬಿಸಿಲಿನಲ್ಲಿ ಬೆಂದದ್ದಾಯ್ತು. ಎಲ್ಲ ಕೈ ಬೆರಳುಗಳ  ಮುದ್ರಣವನ್ನು ದಾಖಲಿಸಿಕೊಂಡರು. ಮರುದಿನ ಮತ್ತೊಂದು ಕಡೆಗೆ ಇನ್ನೂ ಉದ್ದದ ಪಾಳಿ. ಅಲ್ಲೆಲ್ಲಾ ದಾಖಲೆಗಳ ಪರಿಶೀಲಿಸಿದ ಅಮೇರಿಕದವರು ನೀವು ಹೋಗಲು ಅಡ್ಡಿ ಇಲ್ಲ ಅಂತ ಸೀಲು ಹೊಡೆದು ಅಸ್ತು ಅಂದಾಗ ಸುಸ್ತಾಗಿ ಹೋಗಿದ್ದರಿವರು. 
 
ಅಲ್ಲಿಂದ ತಿರುಗಿ ಬೆಂಗಳೂರಿಗೆ ಪ್ರಯಾಣಿಸುವಾಗ ದಾರಿಯಲ್ಲಿ ವೆಂಕಣ್ಣ ಯೋಚನೆಗೆ ಬಿದ್ದಿದ್ದ. ನಾವು ವಾಪಸ್ಸು ಬಂದೇ ಬರುತ್ತೇವೆ, ನಮ್ಮನ್ನು ನಂಬಿ ಅಂತ ಇಷ್ಟೊಂದು ಗೋಗರೆದು ವೀಸಾ ಪಡೆಯಬೇಕೆ? ಈ ಪರಿಯ ಕಷ್ಟ ಪಟ್ಟು ಅವರ ಒಂದು ಸೀಲಿಗೆ ಕಾಯಬೇಕೆ? ಇಲ್ಲಿ ವೀಸಾ ಸಿಕ್ಕಿತೆಂದ ಮಾತ್ರಕ್ಕೆ ಆ ದೇಶಕ್ಕೆ ಹೋದಾಗ ಒಳಗೆ ಬಿಡುವರೆಂಬ ಭರವಸೆಯೂ ಇಲ್ಲಾ. ಯಾವುದೋ ಕಾರಣಕ್ಕೆ ಅವರಿಗೆ ಬೇಡವೆನಿಸಿದರೆ,  ಅಮೇರಿಕಾ ಪ್ರವೇಶಿಸುತ್ತಿದ್ದಂತೆಯೇ ಭಾರತಕ್ಕೆ ವಾಪಸ್ಸು ಕಳಿಸುವ ಸಾಧ್ಯತೆಗಳೂ ಇರುತ್ತವೆ. ಮೂವತ್ತಕ್ಕೂ ಹೆಚ್ಚು ಗಂಟೆಗಳ ಕಾಲ ಪಯಣಿಸಿ ಮತ್ತೆ ಅಷ್ಟೇ ಗಂಟೆಗಳ ಪ್ರಯಾಣ ಮಾಡಿ ವಾಪಸ್ಸು ಬರುವುದೆಂದರೆ? ಅದೇನು ತಮಾಷೆಯೇ? ಇಷ್ಟೆಲ್ಲಾ ಕಾರಣಗಳಿಂದ ತಾನು ಆ ದೇಶಕ್ಕೆ ಯಾಕೆ ಹೋಗಬೇಕು ಅನ್ನುವ ಪ್ರಶ್ನೆ ಅವನಲ್ಲಿ ಬಲವಾಗಿ ಕಾಡತೊಡಗಿ ಅಲ್ಲಿಗೆ ಹೋಗುವದೇ ಬೇಡವೆನಿಸಿತವನಿಗೆ. ಬಾಸ್ ಗೆ ಏನೋ ಒಂದು ನೆಪ ಹೇಳಿ ತಪ್ಪಿಸಿಕೊಳ್ಳುವುದೆಂದು ನಿರ್ಧರಿಸಿದ.    

ಹೀಗೆ ತೀರಾ ಯೋಚನೆಯಲ್ಲಿ ಮಗ್ನನಾದವನನ್ನು ಮಗಳು ತಿವಿದು ಎಚ್ಚರಿಸಿ ಕೇಳಿದಳು 
'ಅಪ್ಪಾ ಅಲ್ಲಿ ಸ್ನೋ ಇರ್ತದ ಅಂತ ಹೇಳಿದ್ದ್ಯಲ್ಲಾ? ಎಷ್ಟ ಮಜಾ ಬರ್ತದ. ನಂಗ ಸ್ನೋ ದಾಗ ಆಡಲಿಕ್ಕೆ ಕರಕೊಂಡು ಹೋಗ್ತಿಯಲ್ಲಾ?'
ಇವನು ಅದಕ್ಕೆ ಏನು ಹೇಳುವುದೆಂದು ತಿಳಿಯದೇ ಪೇಚಾಡುತ್ತಿರುವಾಗಲೇ  ಜಾನು  
'ಅಂತೂ ವೀಸಾ ಸಿಕ್ತು. ಎಲ್ಲಾರಿಗೂ ಫೋನ್ ಮಾಡಿ ಹೇಳಬೇಕು.  ಇನ್ನೂ ಏನೂ ಪ್ಯಾಕಿಂಗ್ ಮಾಡಿಲ್ಲಾ. ಭಾಳ ಕೆಲಸಾ ಬಾಕಿ ಅವ ....' ಅಂತ ತನ್ನ ಉಳಿದಿರುವ ಕೆಲಸಗಳ ಪಟ್ಟಿ ಮಾಡತೊಡಗಿದಳು.  
ಅದರರ್ಥ, ಜಾನು ಮತ್ತು ಮರಿ ಜಾನು ಇಬ್ಬರೂ ಅಲ್ಲಿಗೆ ಹೋಗುವುದಕ್ಕೆ ಆಗಲೇ ಸಿದ್ಧರಾಗಿದ್ದರು. ಅವರ ಉಮೇದಿ ಕಂಡು ವೆಂಕಣ್ಣನಿಗೆ ಆಶ್ಚರ್ಯವಾಗಿತ್ತು.  ಅವರಿಗೋಸ್ಕರವಾದರೂ ತನ್ನ 'ಅಲ್ಲಿಗೆ ಹೋಗುವುದು ಬೇಡಾ' ಅನ್ನುವ ನಿರ್ಧಾರ ಬದಲಿಸಲೇ ಬೇಕಾಗಿತ್ತು. ಅವರಿಗೂ ಬೇರೊಂದು ದೇಶವನ್ನು ನೋಡಿದಂತಾಗುತ್ತೆ. ಅಲ್ಲದೇ ತಾನೊಬ್ಬ ಕೋಪದಿಂದ ಅಲ್ಲಿಗೆ ಹೋಗದಿದ್ದರೆ ಆ ದೇಶಕ್ಕೇನು ವ್ಯತ್ಯಾಸವಾದೀತು? ಅಲ್ಲಿಗೆ ಹೋಗಲು ಇನ್ನೂ ಒಂದೆ ವಾರ ಬಾಕಿ ಇತ್ತು. ಯಾವುದೇ ತಯ್ಯಾರಿಗಿಂತಲೂ ಮಾನಸಿಕವಾಗಿ ಸಿಧ್ಧವಾಗುವುದು ಅತೀ ಮುಖ್ಯವಾಗಿತ್ತು. ಕಾರಿನ ಡೆಕ್ಕಿನಲ್ಲಿ ಚೆನ್ನೈ ಎಕ್ಸ್ಪ್ರೆಸ್ಸ್ ಸಿನೆಮಾದ "ರೆಡಿ ಸ್ಟೆಡಿ ಪೊ ಪ್ಪೊ ಪ್ಪೊ ಪ್ಪೊ" ಹಾಡು ಸಾಂದರ್ಭಿಕವೆನಿಸುತ್ತಿತ್ತು!