Friday, January 23, 2015

ಪಾತಾಳದೆಡೆಗೆ

(ಪಂಜು ಪತ್ರಿಕೆಯಲ್ಲಿ ಪ್ರಕಟವಾಗಿತ್ತು  http://www.panjumagazine.com/?p=9851)
-------------------------------------------

ವೆಂಕಣ್ಣ ಪರಿವಾರ ಸಮೇತ ಬೆಂಗಳೂರಿನ ವಿಮಾನಾಲಯದ ಪ್ರವೇಶದ್ವಾರಕ್ಕೆ ಪಾದಸ್ಪರ್ಶ ಮಾಡಿದಾಗ ಗಂಟೆ ರಾತ್ರಿ ಹನ್ನೊಂದಾಗಿತ್ತು. ಮುಂಜಾನೆ ಎರಡು ಗಂಟೆಗೆ ಪ್ಲೇನು ಹೊರಡುವದಿತ್ತಾದರೂ ಆದಕ್ಕಿಂತ ನಾಲ್ಕು ತಾಸು ಮೊದಲೇ ಅಲ್ಲಿರಬೇಕಿತ್ತು. ಎಲ್ಲ ಔಪಚಾರಿಕತೆಗಳನ್ನು ಮುಗಿಸಬೇಕಲ್ಲ. ಅಮೆರಿಕಾಕ್ಕೆ ಹೋಗುವುದೆಂದರೆ ಅಷ್ಟು ಸುಲಭವೇ? ಬೆಂಗಳೂರಿನಿಂದ ಜರ್ಮನ್ ದೇಶಕ್ಕೆ ಮೊದಲ ಫ್ಲೈಟು. ಅಲ್ಲಿಂದ ಅಮೇರಿಕಾದ ಚಿಕ್ಯಾಗೊ ನಗರಕ್ಕೆ ಇನ್ನೊಂದು ಫ಼್ಲೈಟು. ಕೊನೆಗೆ ಇವನು ಹೋಗಬೇಕಾಗಿದ್ದ ಊರಾದ ಸ್ಯಾಂಡಿ ಗೆ ಮತ್ತೊಂದು! ಒಂದೇ ಫ್ಲೈಟಿನಲ್ಲಿ ಅಷ್ಟು ದೂರ ಕ್ರಮಿಸುವುದು ಕಷ್ಟ. ಆ ದೇಶಕ್ಕೆ ಹೋಗೋದು ಅಂದ್ರೆ ಹೆಚ್ಚು ಕಡಿಮೆ ಭೂಗೋಳದ ಅರ್ಧ ಪ್ರದಕ್ಷಿಣೆ ಹಾಕಿದಂತೆ! ವೆಂಕಣ್ಣ ಯೋಚಿಸುತ್ತಿದ್ದ, ಒಂದುವೇಳೆ ಬೆಂಗಳೂರಿನಲ್ಲಿ, ಅದೃಷ್ಟವಶಾತ್ ಒಂದು ಖಾಲಿ ಸೈಟು ಸಿಕ್ಕು, ಅಲ್ಲೊಂದು ಸುರಂಗ ಕೊರೆಯುತ್ತಾ ಹೋದರೆ ಅದು ಅಮೆರಿಕಾಕ್ಕೆ ತೆರೆದುಕೊಳ್ಳುತ್ತದೇನೋ, ಅಷ್ಟು ಸರಿಯಾಗಿ ನಮ್ಮ ಭೂ ಪ್ರದೇಶದ ಕೆಳಗೆ ಇದೆ ಆ ದೇಶ. ಬಹುಶಃ ಪುರಾಣಗಳಲ್ಲಿ ಪ್ರಸ್ತಾಪಿಸಿದ ಪಾತಾಳ ಇದೆ ಆಗಿದ್ದಿರಬೇಕು. ಅದಕ್ಕೆ ಇರಬೇಕು ಅಮೆರಿಕನ್ನರು ರಾಕ್ಷಸರಂತೆ ಹಗಲು ರಾತ್ರಿ ತನ್ನನ್ನು ಕಾಡುತ್ತಾರೆ! ವೆಂಕಣ್ಣ ತನ್ನ ವಿಚಿತ್ರವಾದ ಕಲ್ಪನೆಗೆ ತನ್ನಲ್ಲೇ ನಗುತ್ತಿದ್ದ. ಜಾನುಗೆ ಇದೆಲ್ಲ ಮಾಮೂಲು. ಅವನನ್ನು ಮದುವೆಯಾದ ಹೊಸತಾಗಿ ಸ್ವಲ್ಪ ವಿಚಿತ್ರವಾಗಿ ಕಾಣುತ್ತಿತ್ತು. ಹೊತ್ತಿಲ್ಲದ ಹೊತ್ತಿನಲ್ಲಿ ಅವನು ಆಫೀಸಿನ ಕೆಲಸ ಮಾಡುವುದು, ಮಧ್ಯರಾತ್ರಿ ಅಮೆರಿಕಾದ ಕಸ್ಟಮರುಗಳು ಅವನಿಗೆ ಫೋನ್ ಮಾಡಿ ಎಬ್ಬಿಸುವುದು, ಇವನು ಲ್ಯಾಪ್ ಟಾಪ್ ಅನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಕಾನ್ಫರನ್ಸ್ ಕರೆಗಳಲ್ಲಿ ಗಂಟೆಗಟ್ಟಲೆ ಮಾತಾಡೋದು, ಮಲಗಿದಾಗಲೂ ನಿದ್ದೆಗಣ್ಣಲ್ಲಿ ಬಡಬಡಿಸುವುದು... ಇವೆಲ್ಲ ಅವಳಿಗೆ ಕ್ರಮೇಣ ಅಭ್ಯಾಸವಾಯ್ತು. ಹಾಗೆಯೇ ಏನೋ ನೆನಸಿಕೊಂಡು ನಗುತ್ತಿರಬೇಕೆಂದು ಸುಮ್ಮನಾದಳು. ತಮ್ಮ ಬ್ಯಾಗುಗಳ ತೂಕ ನೋಡಿ ಅದಕ್ಕೊಂದು ಚೀಟಿ ಅಂಟಿಸುವ ಕೌಂಟರಿನ ಮುಂದೆ ಸರದಿಯಲ್ಲಿ ನಿಂತಿದ್ದರವರು. ಹೆಚ್ಚುಕಡಿಮೆ ಮನೆಯಲ್ಲಿದ್ದ ಸಾಮಾನುಗಳನ್ನೆಲ್ಲ ಬ್ಯಾಗುಗಳಲ್ಲಿ ತುಂಬಿಸಿದ್ದಳು ಜಾನು. ತಲೆಗೆ ಎರಡು ಬ್ಯಾಗು, ಒಂದೊಂದರಲ್ಲಿ ೨೩ ಕಿಲೋ ಭಾರವನ್ನು ವಿಮಾನದಲ್ಲಿ ಕೊಂಡೊಯ್ಯುವ ಅವಕಾಶವಿತ್ತು. ಹಾಗೆ ಪ್ರಯಾಣಿಕರು ತಂದ ಬ್ಯಾಗುಗಳನ್ನೆಲ್ಲಾ ತೂಕ ಮಾಡಿ, ವಿಶೇಷವಾದ ಸ್ಕ್ಯಾನರಿನ ಒಳಗಣ್ಣಿನಿಂದ ಕಂಪ್ಯೂಟರಿನ ಪರದೆಯ ಮೇಲೆ ಮೂಡುತ್ತಿದ್ದ ಚಿತ್ರಗಳನ್ನು ನೋಡುತ್ತಾ ಕೂತಿದ್ದವನೊಬ್ಬ ಬ್ಯಾಗುಗಳ ಒಳಗೆನಿರಬಹುದು ಅಂತ ತಪಾಸಣೆ ಮಾಡುತ್ತಿದ್ದ. ಅಂತೂ ಇವರ ತಪಾಸಣೆಗಳಲ್ಲ ಮುಗಿದು ವಿಮಾನದೊಳಗೆ ಪ್ರವೇಶ ಪಡೆದು ತಂತಮ್ಮ ಆಸನದಲ್ಲಿ ಉಸ್ಸಪ್ಪಾ ಅಂತ ಕೂತಾಗ ಒಂದು ಗಂಟೆ. ಎರಡು ಗಂಟೆಗೆ ಸರಿಯಾಗಿ ವಿಮಾನ ತನ್ನ ರೆಕ್ಕೆ ಬಿಚ್ಚಿ ಹಾರತೊಡಗಿತ್ತು. ಇನ್ನೂ ಎಂಟು ಗಂಟೆಗಳು ಇವರು ಅಂತರ್ ಪಿಶಾಚಿಗಳಂತೆ ಆಕಾಶದಲ್ಲೇ ಇರುವ ಅನಿವಾರ್ಯತೆಯಿತ್ತು!   
ಬೆಂಗಳೂರಿನಿಂದ ಫ್ರ್ಯಾಂಕ್ ಫ಼ರ್ಟ್ ಗೆ ಪಯಣಿಸುತ್ತಿದ್ದ ಆ ವಿಮಾನದಲ್ಲಿ ಜರ್ಮನ್ ದೇಶದವಳಾದ ಗಗನ ಸಖಿ ಸಖತ್ತಾಗಿದ್ದುದರಿಂದಲೋ ಏನೋ ವೆಂಕಣ್ಣನಿಗೆ ಬಾಯಾರಿಕೆ ಸ್ವಲ್ಪ ಜಾಸ್ತಿನೆ ಆಗತೊಡಗಿತ್ತು. ಆಗಾಗ  ಅವಳನ್ನು ಕರೆದು "can I have water please?" ಅನ್ನೋದು, ಅವಳು ತಂದು ಕೊಟ್ಟಾಗ 'Thank you!" ಅನ್ನೋದು ನಡೆದೇ ಇತ್ತು. ತನಗೆ ಮಾತ್ರ ಒಂದು ಸಲವೂ ಯಾವುದಕ್ಕೂ "Thank you" ಹೇಳದ ಗಂಡ ನೀರು ಕುಡಿಸುತ್ತಿದ್ದ ಈ ಬೆಕ್ಕಿನ ಕಣ್ಣಿನ ಚೆಲುವೆಗೆ ಇಷ್ಟೊಂದು ಆದರ ತೋರಿಸುತ್ತಿದ್ದುದು ಜಾನುಗ್ಯಾಕೋ ಸರಿ ಕಾಣಲಿಲ್ಲ. 
"ನೀರು ಭಾಳ ಕುಡಿಬ್ಯಾಡ್ರಿ, ಅಜೀರ್ಣ ಆದೀತು!" ಅಂತ ಎಚ್ಚರಿಸಿದಳು.
"ಎಲ್ಲಾದಕ್ಕೂ ಕಿರಿಕಿರಿ ನೋಡಲೇ ನಿಂದು. ಏನೂ ತಿನ್ಲಿಕ್ಕಂತೂ ಬಿಡಂಗಿಲ್ಲ, ಕುಡಿಲಿಕ್ಕರೆ ಬಿಡ್ತೀಯಾ ಅದೂ ಇಲ್ಲಾ." ಅಂತ ಸ್ವಲ್ಪ ಜೋರಾಗೆ ಹೇಳಿದ್ದು ಕನ್ನಡದಲ್ಲೇ ಆಗಿದ್ದರು ಜರ್ಮನ್ ಸಖಿಗದು ಹೇಗೋ ಅರ್ಥವಾಗಿ ಅವಳು ಕಣ್ಣು ಮಿಟುಕಿಸಿ ನಕ್ಕಂತೆನಿಸಿತು! ಅಂತೂ ನೀರು ಕುಡಿಯುವುದಕ್ಕೂ ರೇಷನ್ನು ಲಾಗು ಆದ ಮೇಲೆ, ವೆಂಕಣ್ಣ ನಿಗೆ ಇನ್ನೂ ೮ ಗಂಟೆ ಕಾಲಹರಣ ಮಾಡುವ ಬಗೆ ತಿಳಿಯದೆ ಅತ್ತಿತ್ತ ಪಿಳಿ ಪಿಳಿ ನೋಡತೊಡಗಿದ. ಮಗಳು ಖುಷಿ ತನ್ನ ಆಸನದ ಎದುರಿಗಿನ ಸಣ್ಣ  ಟೀವಿ ಪರದೆಯಲ್ಲಿ ಕಾಣುತ್ತಿದ್ದ ಕಾರ್ಟೂನುಗಳನ್ನು ನೋಡುತ್ತಾ ಅನಂದದಿಂದಿದ್ದಳು. ಜಾನು ಕಿವಿಗೆ ಈಯರ್ ಫೋನ್ ಹಾಕಿಕೊಂಡು ಯಾವುದೋ ಸಂಗೀತ ಕೇಳುತ್ತಿದ್ದಳು. ಆದರೂ ಗಂಡನ ಮೇಲೆ ಒಂದು ಕಣ್ಣಿಟ್ಟಿದ್ದಳು! ಪಕ್ಕದ ಕಿಟಕಿಯ ಹೊರಗೆ ಕಣ್ಣು ಹಾಯಿಸಿದವನಿಗೆ ಕೆಳಗೆ ಬರೀ ಮೋಡಗಳು ಕಾಣುತ್ತಿದ್ದವು. ವಿಮಾನಯಾನದ ಏಕತಾನತೆಯಿಂದ ಬೇಸರ ಮೂಡಿತವನಿಗೆ. ಟ್ರೇನು, ಬಸ್ಸಿನಲ್ಲಾದರೆ ನಾವು ಚಲಿಸುತ್ತಿರುವ ಅನುಭವವಾದರೂ ಆಗುತ್ತೆ. ಇಲ್ಲಿ ಅದೂ ಗೊತ್ತಾಗದು. ವಿಮಾನದ ಎದುರಿಗೊಂದಿಷ್ಟು ಗಾಳಿಕುಳಿಗಳು (air packets) ಬಂದಾಗಲಷ್ಟೆ, ಬೆಂಗಳೂರಿನ ಕೆಟ್ಟ ರಸ್ತೆಯ ಮೇಲೆ ಹೋದಂತೆ ವಿಮಾನ ತಡಪಡಿಸಿದಂತಾಗಿ ಧಡಿಕೆಯಾಗಿ ಚಲನೆಯ ಅನುಭವವಾಗುತ್ತಿತ್ತು. ಇಲ್ಲವೆಂದರೆ ಒಂದು ಹವಾನಿಯಂತ್ರಿತ ಕೋಣೆಯೊಳಗೆ ಕುಳಿತುಕೊಂಡ ಅನುಭವ ಅಷ್ಟೇ. ಟ್ರೇನಿನಲ್ಲಿ ಬೇಸರವಾದರೆ ಬಾಗಿಲ ಬಳಿ ಹೋಗಿ ನಿಂತು ಹೊರಗಿನ ಪ್ರಕೃತಿ ಸೌಂದರ್ಯ ನೋಡುತ್ತಾ ತಾಜಾ ಗಾಳಿಯನ್ನು ಸವಿಯಬಹುದು. ವಿಮಾನದಲ್ಲಿ ಅದೂ ಸಾಧ್ಯವಿಲ್ಲವಲ್ಲವಲ್ಲ ಅಂತ ಪೇಚಾಡಿದನವನು. ಇತ್ತೀಚಿಗೆ ಚೈನಾದವರು ತಮ್ಮ ದೇಶದಿಂದ ಅಮೆರಿಕಾದವರೆಗೂ ಟ್ರೇನ್ ಸಂಚಾರ ಶುರು ಮಾಡಿದ್ದಾರೆಂಬ ಸುದ್ದಿ ಕೇಳಿದ್ದ. ಮುಂದಿನ ಸಲ ಅಮೆರಿಕಾಕ್ಕೆ ಹೋದರೆ ಚೈನಾಕ್ಕೆ ಹೋಗಿ ಅಲ್ಲಿಂದ ಟ್ರೇನಿನಲ್ಲೇ ಹೋಗುವುದು ಒಳ್ಳೆಯದು ಅಂತ ನಿರ್ಧರಿಸಿ, ಈಗ ಸಧ್ಯಕ್ಕೆ ನಿದ್ದೆ ಮಾಡುವುದೊಂದೇ ಒಳ್ಳೆಯ ಉಪಾಯ ಅಂತ ಮನಗಂಡು ಕಣ್ಣು ಮುಚ್ಚಿ ನಿದ್ದೆಗೆ ಶರಣಾದ.
---
ಬೆಂಗಳೂರಿನ ತನ್ನ ಸುಸಜ್ಜಿತವಾದ ಫ್ಲ್ಯಾಟಿನಲ್ಲಿ ಮಲಗಿದ್ದ ಸುಜಯ್ ಗೆ, ಗಂಟೆ ಮೂರಾದರೂ ನಿದ್ದೆ ಹತ್ತಿರ ಸುಳಿಯುಲಾರದಾಗಿತ್ತು. ನಿನ್ನೆ ಮೊನ್ನೆ ಕಂಪನಿ ಸೇರಿದ್ದ ವೆಂಕಟ್ ಅಮೆರಿಕಾಕ್ಕೆ ಹೊರಟಿದ್ದಾನೆ ಅನ್ನುವ ಸಂಗತಿಯೇ ಅವನ ನಿದ್ರಾ ಹೀನತೆಗೆ ಕಾರಣವಾಗಿತ್ತು. ಸುಜಯ್ ಹಾಗೂ ವೆಂಕಟ್ ಇಬ್ಬರಿಗೂ ಸುಧೀರ್ ನೆ ಬಾಸ್. ತನ್ನನ್ನು ಅಮೆರಿಕಕ್ಕೆ ಕಳಿಸುತ್ತೇನೆ ಎಂದು ಹೇಳಿದ್ದ ಬಾಸು ಕೊನೆಯ ಕ್ಷಣದಲ್ಲಿ ತನಗೆ ಕೈ ಕೊಟ್ಟಿದ್ದು ಇವನಿಗೆ ಸಿಟ್ಟು ಬರಿಸಿತ್ತು. ಕಸ್ಟಮರ್ರು ವೆಂಕಟ್ ನೇ ಅಲ್ಲಿಗೆ ಬರಬೇಕೆಂದು ಬೇಡಿಕೆ ಸಲ್ಲಿಸಿದ್ದಾರೆಂದೂ, ಮುಂದಿನ ಸಲ ನಿನ್ನನ್ನು ಕಳಿಸುವೆನೆಂದೂ ಹೇಳಿದ ಸುಧೀರನ ಮಾತು ಆ ಮಟ್ಟಿಗಿನ ಬೀಸುವ ದೊಣ್ಣೆ ತಪ್ಪಿಸಿಕೊಳ್ಳುವ ಉತ್ತರವಾಗಿತ್ತೆಂದು ಅವನಿಗೆ ಸ್ಪಷ್ಟವಾಗಿತ್ತು. ಅದೂ ಅಲ್ಲದೆ ಹೊಸದಾಗಿ ಇವನ ಟೀಮಿಗೆ ಸೇರಿದ್ದ  ನಿಶಾ, ನೀನು ಅಮೆರಿಕಾಕ್ಕೆ ಹೋಗುತ್ತಿಲ್ಲವೇ ಅಂತ ಆಶ್ಚರ್ಯ ಚಕಿತಳಾಗಿ ಕೇಳಿದ್ದು ಇವನಿಗೆ ಗಾಯದ ಮೇಲೆ ಬರೆ ಎಳೆದಂತಾಗಿತ್ತು. ಆ ದೇಶದ ಮಣ್ಣನ್ನು ಮುಟ್ಟುವ ಸುಜಯ್ ನ ಬಹುದಿನದ ಕನಸು ಸಧ್ಯಕ್ಕೆ ಕನಸಾಗಿಯೇ ಉಳಿದಿತ್ತು. 

(ಮುಂದುವರಿಯುವುದು...)            


         

Sunday, January 4, 2015

ಆಪ್ತ ರಕ್ಷಕ!

(ಪಂಜು ಪತ್ರಿಕೆಯಲ್ಲಿ ಪ್ರಕಟವಾಗಿತ್ತು http://www.panjumagazine.com/?p=9571)

ಅವತ್ತು  ಕೆಲಸ ಮುಗಿಸಿ ನಾನು ಮನೆಗೆ ಬಂದಾಗ ರಾತ್ರಿ ಹನ್ನೊಂದು ಗಂಟೆ. ಕೆಲಸದ ಸುಸ್ತು, ತಲೆ ಬೇರೆ ಸಣ್ಣಗೆ ನೋಯುತ್ತಿತ್ತು. ನಮ್ಮ ಅಪಾರ್ಟಮೆಂಟಿನ ಹೊರಗೆ ಕಾರು ನಿಲ್ಲಿಸಿಕೊಂಡು "ಅವನು" ಗೇಟು ತೆಗೆಯಲೆಂದು ಕಾಯುತ್ತಿದ್ದೆ...

ಅವನ ಹೆಸರು ನಂದೀಶ. ಅವನನ್ನು ಏನಂತ ಪರಿಚಯಿಸಬೇಕೆಂದು ಗೊತ್ತಾಗುತ್ತಿಲ್ಲ. ಸೆಕ್ಯುರಿಟಿ ಅನ್ನಲೇ? ಊಹುಂ, ಅವನು ಅದಕ್ಕಿಂತ ಜಾಸ್ತಿ. ವಾಚ್ ಮನ್ ಅನ್ನಲೂ  ಮನಸ್ಸಿಲ್ಲ, ಏಕೆಂದರೆ ವಾಚ್ ಮ್ಯಾನ್ ಗಳು ಬರೀ ವಾಚ್ ಮಾಡುತ್ತಾರೆ ಅಷ್ಟೆ!  ಅವನನ್ನು  ನಮ್ಮ "ಆಪ್ತ ರಕ್ಷಕ" ಅಂತ ಕರೆಯುವುದೇ ಸರಿ ಅನಿಸುತ್ತದೆ. 

... ಗೇಟು ತೆಗೆದವನೆ ಓಡುತ್ತ ನನ್ನ ಕಡೆಗೆ ಬಂದು "ಸಾರ್ ಅಲ್ಲೇ ಇರಿ, ಒಳ್ಗೆ ಬರ್ಬೇಡಿ" ಅಂತ ಸ್ವಲ್ಪ ಎಚ್ಚರಿಸುವ ರೀತಿಯಲ್ಲಿ ಹೇಳಿದ. ಮೊದಲೆ ತಡವಾಗಿ ಬಂದಿದ್ದ ನಾನು ತಾಳ್ಮೆ ಕಳೆದುಕೊಂಡಿದ್ದೆ. 
"ಯಾಕ್ರಿಪಾ?" ಸ್ವಲ್ಪ ಗಂಟು ಮುಖದಿಂದಲೇ ಕೇಳಿದೆ
"ಹಾವ್ ಬಂದೈತೆ ಸಾರ್! ಮಿಡಿ ನಾಗ್ರಾ... ಅಲ್ಲೆ ಇರಿ..." ಹಾವು ಅನ್ನುವ ಶಬ್ಧವೇ ನನ್ನ ಬಾಯಿ ಮತ್ತು ಕಣ್ಣುಗಳನ್ನು ಅಗಲಿಸಿತ್ತು. ನನ್ನ ತಲೆ ನೋವು ಸದ್ದಿಲ್ಲದೇ ಓಡಿ ಹೋಗಿತ್ತು. ಹಾವು ಹಿಡಿಯುವಷ್ಟು ಧೈರ್ಯವಾನನಲ್ಲ ನಾನು. 
"ಹಾವು ಹಿಡಿಯವ್ರಿಗೆ ಫೋನ್ ಮಾಡೋಣ್ ತಡ್ರಿ" ಅಂತ ಅಂದೆ. 
"ಅದ್ಯಾಕೆ ಬುಡಿ ಸಾರ್. ನಾನಿಲ್ವೆ? ಒಂದ್ನಿಮಿಷ ಹಂಗೆ ಇರಿ" ಅಂದವನೆ ಎಲ್ಲಿಂದಲೋ ಒಂದು ಕೋಲು, ಗೋಣಿ ಚೀಲವೊಂದನ್ನು ತಂದು. ಆ ಮಿಡಿನಾಗರವನ್ನು ಆ ಚೀಲದಲ್ಲಿ ಯಶಸ್ವಿಯಾಗಿ ಕಳಿಸಿ, ಚೀಲದ ಬಾಯಿ ಮುಚ್ಚಿ, ಹಾಗೆ ಹಿಡಿದುಕೊಂಡು ಹೋಗಿ ದೂರದಲ್ಲೆಲ್ಲೋ ಬಿಟ್ಟು ಬಂದ. ಇದೆಲ್ಲವನ್ನು ಅವನು ನನ್ನ ಕಣ್ಣ ಮುಂದೆಯೇ ಮಾಡಿದ್ದು, ಅದೂ ಒಂದೆ ಕೈಯಲ್ಲಿ ಅಂದರೆ ನೀವು ನಂಬಲಿಕ್ಕಿಲ್ಲ. ಒಂದೇ ಕೈಯಲ್ಲಿ ಯಾಕೆ ಅಂದರೆ ಅವನ ಎಡಗೈಯನ್ನು ಒಂದು ದುರ್ಘಟನೆಯಲ್ಲಿ ಕಳೆದುಕೊಂಡಿದ್ದಾನೆ! ನಾನು ನನ್ನ ಎರಡೂ ಕೈ ಇಟ್ಟುಕೊಂಡೂ ಮಾಡಲಾಗದ ಕೆಲಸವನ್ನು ಒಂದೇ ಕೈಯಲ್ಲಿ ಮಾಡಿ ನಮ್ಮ ರಕ್ಷಣೆ ಮಾಡುವವನನ್ನು ಆಪ್ತ ರಕ್ಷಕ ಅನ್ನದೆ ಬೇರೇನೂ ಅನ್ನಲು ಸಾಧ್ಯ?        

ಅವತ್ತೊಂದು ದಿನ, ತನಗಾದ ದುರ್ಘಟನೆಯನ್ನು ನೆನಪಿಸಿಕೊಂಡು ಹೇಳುತ್ತಿದ್ದ.  

"... ಇಲ್ಲಿ ಬರೋಕಿಂತ ಮೊದ್ಲು ನಮ್ಮ ಹಳ್ಳಿನಾಗೆ ನಾನು ಗೂಡ್ಸ್ ಗಾಡಿ ಓಡಸ್ತಿದ್ದೆ ಅನ್ನಿ. ಅವೊತ್ತು ಸಾಮಾನು ತುಂಬ್ಕೊಂಡು ಹೊಯ್ತಿದ್ದೆ. ದಾರೀಲಿ ಎಲ್ಲೋ ಎಡವಟ್ಟು ಆಗಿ ಗಾಡಿ ಪಲ್ಟಿ ಹೊಡೀತು ಸಾರ್. ಎರಡು ಮೂರು ಸರ್ತಿ ಉಳ್ಳಿರಬೇಕು. ಎಡಕಿನ ಕೈ ಮ್ಯಾಕೆ ಗಾಡಿ ಬಿದ್ದಿತ್ತು. ನನಗೆ  ಎಚ್ಕಾರಾನೆ ಇರಲಿಲ್ಲ ಅನ್ನಿ. ಆಮ್ಯಾಕೆ ಆಸ್ಪತ್ರೇಲಿ ಎಚ್ಚರಾ ಆದಾಗ್ಲೆ ನಂದೊಂದು ಕೈ ಕಳ್ಕೊಂಡಿದ್ದು ಗೊತ್ತಾಗಿದ್ದು." ತನ್ನ ಕೈಯನ್ನೇ ಕಸಿದುಕೊಂಡ ಆ ವಿಧಿಯಾಟವನ್ನು ವಿವರಿಸಿದ ಅವನ ಮುಖದಲ್ಲಿ ಎಳ್ಳಷ್ಟೂ ಬೇಸರವಿರಲಿಲ್ಲ. ಆದರೆ ಅದನ್ನು ಕೇಳಿ ನನ್ನ ಮನಸ್ಸು ಭಾರವಾಗಿತ್ತು.

ಮೊಳಕೈಯಿಂದ  ಕೆಳಗೆ ಕತ್ತರಿಸಿ ತುಂಡಾಗಿದ್ದ ಕೈಯನ್ನು ಮರು ಜೋಡಿಸುವ ಸಾಧ್ಯತೆಗಳನ್ನು ವೈದ್ಯರು ಅಲ್ಲಗಳೆದರಂತೆ. ಸ್ವಲ್ಪ ದಿನಗಳ ಬಳಿಕ ಈ ಘಟನೆಯಿಂದ ಚೇತರಿಸಿಕೊಂಡ ಮೇಲೆ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದನಂತೆ. 
 
ನಮ್ಮ ಅಪಾರ್ಟ್ಮೆಂಟಿನ  ರಕ್ಷಣೆಯ ಜವಾಬ್ದಾರಿ ಹೊತ್ತು ಈಗಾಗಲೇ ಐದು ವರ್ಷಗಳು ಸಂದಿದೆ. ದಿನದ ೨೪ ಗಂಟೆಯೂ ನಮ್ಮ ಕಟ್ಟಡದ ಯಾವುದೇ ಒಂದು ಸದ್ದಿಗೂ ಅವನದೊಂದು ಕಿವಿ ಇಟ್ಟಿರುತ್ತಾನೆ! ಅವನು ಯಾವಾಗ ಮಲಗುತ್ತಾನೋ ಆ ದೇವರಿಗೆ ಗೊತ್ತು. ನಮಗಂತೂ ನೆಮ್ಮದಿಯ ನಿದ್ದೆಯನ್ನು ದಯಪಾಲಿಸಿದ್ದಾನೆ.
ಕೆಲವರಿಗೆ ಕಾರ್ ಚಾಲನೆಯನ್ನೂ ಕಲಿಸಿದ್ದಾನೆ. ಯಾವಾಗಲೂ ನಗುಮುಖದಲ್ಲೇ ಮಾತಾಡುತ್ತಾನೆ. ಯಾವುದೇ ಕೆಲಸಕ್ಕೆ ಸಂಬಂದಿಸಿದವರ ಫೋನ್ ನಂಬರು ಅವನ ಬಳಿ ಇರುತ್ತದೆ. ಒಂದು ವೇಳೆ ಕೆಲಸಕ್ಕೆ ಯಾರೂ ಸಿಕ್ಕಿಲ್ಲವೆಂದರೆ ಆ ಕೆಲಸವನ್ನು ಯಾವುದೇ ಅಪೇಕ್ಷೆಯಿಟ್ಟುಕೊಳ್ಳದೆ ಮಾಡುತ್ತಾನೆ. ಅದು ಪ್ಲಂಬಿಂಗ್ ಆಗಿರಬಹುದು, ಇಲೆಕ್ಟ್ರಿಕ್ ಕೂಡಾ ಆಗಿರಬಹುದು!
 
ಯಾರೇ ಅಪರಿಚಿತರು ಯಾವುದೇ ಫ಼್ಲ್ಯಾಟಿಗೆ ಬಂದರೂ ಅವರ ಜೊತೆಗೆ ಆ ಮನೆಯವರೆಗೂ ಬಂದು ಅವರು ನಮಗೆ ಪರಿಚಿತರು ಅಂತ ಗೊತ್ತಾದಾಗಲೇ ಅಲ್ಲಿಂದ ಹೋಗುತ್ತಾನೆ. ಅವನು ಸುಮ್ಮನೆ ಕೂಡೋದೇ ಕಡಿಮೆ. ಕಸ ಗೂಡಿಸುತ್ತಲೋ, ಕಾರು ತೊಳೆಯುತ್ತಲೋ ಏನೋ ಒಂದು ಕೆಲಸ ಮಾಡುತ್ತಾ 'ಕಾಯಕವೇ ಕೈಲಾಸವೆನ್ನುವ' ಬಸವಣ್ಣನ ತತ್ವವನ್ನು ಅಕ್ಷರಶಃ ಮೈಗೂಡಿಸಿಕೊಂಡಿದ್ದಾನೆ.    

 
ಅವನ ಸಹಧರ್ಮಿಣಿ ಕೂಡ ಅವನಿಗೆ ಹೀಗಾಯ್ತಲ್ಲಾ ಅಂತ ಬೇಸರಿಸದೆ, ಅವನ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದಾಳೆ. ಅವರಿಗೊಬ್ಬಳು ಮುದ್ದಾದ ಮಗಳಿದ್ದಾಳೆ. ಅವಳಿಗೆ ಒಳ್ಳೆಯ ಶಿಕ್ಷಣ ಕೊಡಿಸುತ್ತಿದ್ದಾನೆ. ತನ್ನ ಕೈ ಹೋಯಿತಲ್ಲಾ  ಅಂತ ಅಳುತ್ತ ಕೂಡದೆ, ತನ್ನ ಹಣೆಬರಹವನ್ನು ಹಳಿಯದೆ, ಯಾವಾಗಲೂ ನಗುತ್ತಾ, ಸ್ವಾಭಿಮಾನದ ಬದುಕನ್ನು ನಡೆಸುವ ನಂದೀಶ ಖಂಡಿತವಾಗಿಯೂ ಒಂದು ಆದರ್ಶವೇ ಅಂದರೆ ಉತ್ಪ್ರೇಕ್ಷೆಯಾಗಲಾರದು. ಅವನಿಗೆ ಒಳ್ಳೆಯದಾಗಲೆಂದು ಹಾರೈಸುತ್ತಾ...