Tuesday, June 30, 2015

ಹಿಮಪಾತ

(http://www.panjumagazine.com/?p=11120)

ಇವತ್ಯಾಕೆ ಇಷ್ಟೊಂದು ಬೇಗ ಎಚ್ಚರ ಆಯ್ತು ಅಂತ ಗೊತ್ತಾಗಲಿಲ್ಲ ವೆಂಕಟ್ ಗೆ. ಬೇಗ ಎದ್ದು ಏನು ಮಾಡುವುದೆಂದು ಒಂದು ಕ್ಷಣ ಅವನಿಗೆ ಹೊಳೆಯಲಿಲ್ಲ. ಬೆಂಗಳೂರಿನಲ್ಲಾಗಿದ್ದರೆ ಎದ್ದ ಕೂಡಲೇ ಬಾಗಿಲಿಗೆ ಸಿಗಿಸಿರುತ್ತಿದ್ದ ಪೇಪರ್ ಎತ್ತಿಕೊಂಡು ಓದಬಹುದಿತ್ತು.  ಈ ಪರದೇಶದಲ್ಲಿ ಹಾಗಿಲ್ಲವಲ್ಲ. ಸುದ್ದಿ ತಿಳಿಯಬೇಕೆಂದರೆ  ಒಂದೋ ಟೀವಿ, ಸ್ಮಾರ್ಟ್ ಫೋನ್, ಇಲ್ಲವೇ ಟಚಿಠಿಣoಠಿ ನಲ್ಲೆ ನೋಡಿ ತಿಳಿಯಬೇಕು. ಅವನಿಗೆ ಅಲ್ಲಿಯ ಸ್ಥಳೀಯ ಸುದ್ದಿಯ ತಿಳಿದುಕೊಳ್ಳುವ ಬಗ್ಗೆ ಉತ್ಸಾಹವೇನಿರಲಿಲ್ಲ. ಇಲ್ಲಿನ ಸುದ್ದಿಗಳೂ ಸುದ್ದಿಗಳೇ? ಒಂದು ಸಣ್ಣ ಬಿರುಗಾಳಿ ಬಂದರೇನೇ ಇಡೀ  ದಿನ ಅಲರ್ಟ್ ಅಲರ್ಟ್ ಅಂತ ಬೊಬ್ಬೆ ಹೊಡಿತಿರ್ತಾರೆ. ಇಂತಹ ಸಣ್ಣ ಪುಟ್ಟ ಬಿರುಗಾಳಿಗಳೆಲ್ಲ ನಮ್ಮ ದೇಶದಲ್ಲಿ ಲೆಕ್ಕಕ್ಕೇ ಇಲ್ಲ. ಆದರೂ ಕೆಲವೊಮ್ಮೆ ಬಂತೆಂದರೆ ಎಲ್ಲವನ್ನೂ ನುಂಗಿ ಹಾಕುವ ಗಾಳಿಯೇ ಇಲ್ಲಿ ಬೀಸುತ್ತೆ. ಅದಕ್ಕೆ ಇರಬೇಕು ಇಲ್ಲಿನ ಹವಾಮಾನ  ಮುನ್ಸೂಚನೆಗಳು ಸಣ್ಣ ಸಣ್ಣ ವಿಷಯಗಳನ್ನೂ ದೊಡ್ಡದಾಗೆ ಹೆಳುತ್ತವೆ. 
ಬೇಗ ಎದ್ದಿದ್ದಕ್ಕೋ ಅಥವಾ ಅಮೆರಿಕಕ್ಕೆ ಬಂದು ತುಂಬಾ ದಿನಾ ಆಗಿದ್ದಕ್ಕೋ, ವೆಂಕಣ್ಣನಿಗೆ ಯಾಕೋ ಬೆಂಗಳೂರು ನೆನಪಾಗಿ  ಹೃದಯ ಭಾರವಾಗಿತ್ತು. ಊರಲ್ಲಿದ್ದ ಅಪ್ಪ, ಅಮ್ಮ, ತನ್ನ ಮನೆ,  ಗೆಳೆಯನೊಬ್ಬನ ಜೊತೆಗೆ ಕ್ಷುಲ್ಲಕ ಕಾರಣಕ್ಕೆ ಮಾಡಿಕೊಂಡ ಜಗಳ ಹೀಗೆ ಏನೇನೋ ನೆನಪಾಗತೊಡಗಿದವು. ಏನೋ ಕಳೆದುಕೊಂಡಂತೆ ಅನಿಸತೊಡಗಿತ್ತು. ಎಲ್ಲರಿಂದ ಇಷ್ಟು ದೂರದಲ್ಲಿ ತಾನಿದ್ದೇನೆ ಎಂಬ ಭಾವನೆ ಮೂಡತೊಡಗಿತ್ತು. ಸಧ್ಯಕ್ಕೆ ಜೊತೆಗೆ ತನ್ನ ಪುಟ್ಟ ಸಂಸಾರವಾದರೂ ಇದೆಯಲ್ಲ;  ಇನ್ನು ಕೆಲವೇ ದಿನಗಳು, ಆಮೇಲೆ ವಾಪಸ್ಸು ತನ್ನ ದೇಶಕ್ಕೆ ಹೋಗುವೆನಲ್ಲ ಎಂದು ತನ್ನೊಳಗೆ ಸಮಾಧಾನ ಮಾಡಿಕೊಂಡ. 
ಆದರೂ ಬೆಳಿಗ್ಗೆ ಬೇಗ ಎದ್ದ ತಪ್ಪಿಗೆ ಹೊರಗಿನ ಬೆಳಗನ್ನಾದರೂ ಸವಿಯುವ ನಿರ್ಧಾರ ಮಾಡಿ ವಿಶಾಲವಾದ ಕಿಟಕಿಯ ಪರದೆ ಸರಿಸಿದವನಿಗೆ ಮೈ ಝುಂ ಅಂದಿತ್ತು! ಕೂಡಲೇ ಒಳಗೆ ಓಡಿ ಹೋದವನೇ ನಿದ್ದೆಯಲ್ಲಿದ್ದ ಖುಷಿಯನ್ನೂ, ಜಾನುನನ್ನೂ ಎಬ್ಬಿಸಿದ. ಮೈ ಮುರಿಯುತ್ತಲೇ, ಸಕ್ಕರೆ ನಿದ್ದೆಯನ್ನು  ತುಂಡರಿಸಿದ ಅಪ್ಪನನ್ನು ಕೆಂಗಣ್ಣಿನಲ್ಲೆ ಕೆಕ್ಕರಿಸುತ್ತ ಎದ್ದಳವಳು.
"ಲೇ ಪುಟ್ಟಿ ಒಂದ್ ಭಾರಿ ಮಜಾ ತೋರಸ್ತೀನಿ ಬಾ… ಲೇ ಜಾನು ನೀನು ಬಾ…. ಲೋಗೂನ … " ಅಂದ ಅಪ್ಪನಿಗೆ ಹುಚ್ಚು ಹಿಡಿದಿಲ್ಲವಷ್ಟೇ ಎಂದು ಅವ್ವ ಮಗಳು ಒಬ್ಬರನ್ನೊಬ್ಬರು ನೋಡತೊಡಗಿದರು.
"ಲೇ ಬರ್ರಿಲೆ … ದೊಡ್ಡ ನಖರಾ ನೋಡು ಇಬ್ಬರದೂ…!" ಅಂದವನೇ ತನ್ನ ಎರಡೂ ಕೈಗಳಿಂದ ಖುಷಿಯ ಕಣ್ಣು ಮುಚ್ಚಿಕೊಂಡು ಹೊರಗಡೆ ಹಾಲ್ ಗೆ ಕರೆದೊಯ್ದ. ಅದೇ ಕಿಟಕಿಯ ಮುಂದೆ ನಿಂತು ಮಗಳ ಕಣ್ಣು ಬಿಡಿಸಿ "ಟನ್ ಟನಾ …." ಅಂತ ಒಳ್ಳೆ ಸಿನಿಮಾ ತೋರ್ಸೋರಂತೆ ನಿಂತ.
ನಿನ್ನೆಯೆಲ್ಲಾ ಖಾಲಿಯಿದ್ದ ಮನೆಯ ಅಂಗಳದಲ್ಲೆಲ್ಲ ಶುಬ್ರವಾದ ಹಿಮ ಆವರಿಸಿತ್ತು. ಖುಷಿ ತನ್ನ ಕಣ್ಣುಗಳೆರಡನ್ನೂ ನಿಚ್ಚಳವಾಗಿ ತೆರೆದು ಪ್ರಕೃತಿಯ ಈ ವಿಚಿತ್ರವನ್ನು ಎವೆಯಿಕ್ಕದೆ ನೋಡುತ್ತಿದ್ದಳು. ತನ್ನ ಜೀವಮಾನದಲ್ಲೇ ಹಿಮವನ್ನು ಇಷ್ಟು ಹತ್ತಿರದಿಂದ ನೋಡಿರದಿದ್ದ ಜಾನೂಗೂ ಹಿಮ ಇವರ ಮನೆ ಬಾಗಿಲಿಗೆ ಬಂದು ದರ್ಶನ ಕೊಟ್ಟಿದ್ದು ಸಖೇದಾಶ್ಚರ್ಯವಾಗಿತ್ತು. ಇಲ್ಲಿ ಅಕ್ಟೋಬರ್ ತಿಂಗಳಲ್ಲಿ ಹಿಮ ಬೀಳಬಹುದೆಂಬ ಕಲ್ಪನೆಯೇ ಅವನಿಗಿರಲಿಲ್ಲ. ಬಹುಶಃ ಹಿಂದಿನ ರಾತ್ರಿ ಟೀವಿ ನೋಡಿದ್ದರೆ ಅದು ಮುಂಚೆಯೇ ತಿಳಿದಿರುತ್ತಿತ್ತೇನೊ. ಏನೇ ಆದರೂ ಅದೊಂದು ಅನಿರೀಕ್ಷಿತ ಅಚ್ಚರಿ ಆಗಿತ್ತು. ತಡ ಮಾಡದೆ ಹೊರಗೆ ಹೋಗಿ ಹಿಮದಲ್ಲಿ ಎಲ್ಲರೂ  ಆಟವಾಡಲು ಶುರು ಹಚ್ಚಿಕೊಂಡರು. ಇವರ ಸಂತಸವನ್ನು ನೋಡಿ ಅಮೆರಿಕಾದ ಅಜ್ಜಿಯೊಬ್ಬಳು, ಇವರು ಜೀವನದಲ್ಲಿ ಇದೆ ಮೊದಲ ಸಲ ಇಷ್ಟು ಹಿಮವನ್ನು ಒಟ್ಟಿಗೆ ನೋಡಿರಬಹುದೆಂದು ಅಂದಾಜಿಸಿ ನಸು ನಗುತ್ತ "ಎಂಜಾಯ್…!" ಅಂತ ಉಲಿದು ಅಪಾರ್ಟ್ ಮೆಂಟ್ ನ ಒಳಗೆ ನಡೆದಳು. 
ಅಪಾರ್ಟ್ ಮೆಂಟ್ ನ ಮುಂದಿದ್ದ ಗಿಡಗಳು, ಹುಲ್ಲಿನ ಹಾಸು, ಕಾರುಗಳು ಎಲ್ಲವೂ ಹಿಮಾವರಣಗೊಂಡಿದ್ದವು. ಆ ಹಿಮದಿಂದ ತಮ್ಮ ಕಾರನ್ನು ಮುಕ್ತಗೊಳಿಸುವ ಬಗೆ ಹೇಗೆ ಎಂದು ಖುಷಿ ಆಶ್ಚರ್ಯಪಡುತ್ತಿದ್ದಳು. ಅದಕ್ಕೆ ಬೇಕಾದ ಪರಿಕರಗಳನ್ನು ಇಟ್ಟುಕೊಂಡಿದ್ದ ವೆಂಕಣ್ಣ ಸಲಿಕೆಯಲ್ಲಿ ಮಣ್ಣು ತಗೆದಂತೆ ಕಾರಿನ ಮೇಲಿನಿಂದ ಹಿಮವನ್ನು ಬಗೆದು ತೆಗೆಯುತ್ತಿದ್ದುದನ್ನು ಕಣ್ಣರಳಿಸಿ ನೋಡಿ ಸಂತಸ ಪಟ್ಟಳು. ಕ್ರಮೇಣ ಗಾಳಿಯೂ ಹೆಚ್ಚಿ ಚಳಿ ಜಾಸ್ತಿಯಾಗತೊಡಗಿತ್ತು. ವೆಂಕಣ್ಣನ ಪರಿವಾರ ದಪ್ಪಗಿನ ಉಣ್ಣೆಯ ಉಡುಗೆ ತೊಟ್ಟು ಮನೆಯಲ್ಲೇ ಬೆಚ್ಚಗೆ ಉಳಿದರು. ಅವತ್ತು ಅಪ್ಪ ಆಫೀಸಿಗೆ ಹೋಗದೆ ಮನೆಯಲ್ಲೇ ಉಳಿದದ್ದು ಮಗಳ ಸಂತಸವನ್ನು ಹೆಚ್ಚಿಸಿತ್ತು.
"ಅಪ್ಪಾ ದಿನಾಲೂ ಹಿಂಗ ಸ್ನೋ ಬಿದ್ದರ ನೀನು ಮನ್ಯಾಗ ಇರ್ತೀಯಲ್ಲಾ?" ಅಂತ ತನ್ನ ತರ್ಕವನ್ನು ಮಂಡಿಸಿದಳು.
ವೆಂಕಣ್ಣ ನಕ್ಕು ಸುಮ್ಮನಾದ. ಆಫಿಸಿನಲ್ಲಿ ನಡೆಯುತ್ತಿದ್ದ ವಿದ್ಯಮಾನಗಳು ನೆನಪಾದವು. ಬೆಂಗಳೂರಿನಲ್ಲಿ ಜಾನ್ ಏನೇನು ಕರಾಮತ್ತು ನಡೆಸಿದ್ದಾನೋ ಎಂಬ ಚಿಂತೆ ಅವನನ್ನು ಕಾಡಿತು. ತನ್ನನ್ನೂ ಕೆಲಸದಿಂದ ತೆಗೆದುಬಿಟ್ಟರೆ ಮುಂದೇನು ಅನ್ನುವ ಪ್ರಶ್ನೆ ಉದ್ಭವಿಸಿತು.
 
"… ಅಪ್ಪ ದಿನಾಲೂ ಮನ್ಯಾಗ ನನ್ ಜೊತಿ ಇರಲ್ಲಾ? ಪ್ಲೀಜ್ ನೀ ಆಫಿಸಿಗೆ ಹೋಗಬ್ಯಾಡಾ….." ಅಂದ ಖುಷಿಯ ಗೋಗರೆತಕ್ಕೆ ಇವನು ತನ್ನ ಯೋಚನಾ ಲಹರಿಯಿಂದ ಹೊರಬಂದು ಬೆಚ್ಚಿ ಬಿದ್ದ!
ಜಾನ್ ಇವತ್ತು ಬೆಳಿಗ್ಗೆ ಎಂಟು ಗಂಟೆಗೇ ಆಫಿಸಿಗೆ ಬಂದಿದ್ದನೆಂದೂ, ಕೆಲಸಕ್ಕೆ ಯಾರೂ ಬೇಗ ಬರುವುದಿಲ್ಲವೆಂಬ ಸತ್ಯ ಅವನಿಗೆ ಗೊತ್ತಾಗಿಬಿಟ್ಟಿದೆಯೆಂದೂ ಅಫೀಸಿನಲ್ಲೆಲ್ಲ ಗುಲ್ಲೆದದ್ದು ಅವತ್ತೂ ತಡವಾಗಿ ಬಂದಿದ್ದ ರಘುನ ಕಿವಿಗೂ ಬಿದ್ದಿತ್ತು. ಈ ಕೆಲಸ ಬಿಟ್ಟು  ಹೊಸ ಕಂಪನಿಗೆ ಸಧ್ಯದಲ್ಲೇ ಸೇರಿ ಪ್ಯಾರಿಸ್ ಗೆ ಹೋಗುವ ಕನಸು ಕಾಣುತ್ತಿದ್ದ ರಘುಗೆ ಆ ಜಾನ್  ಏನಾದರೂ ಮಾಡಿಕೊಳ್ಳಲಿ ನನಗೇನು? ಎಂಬ ಉಡಾಫೆ ಇತ್ತು. ಆ ಕನಸಿನ ಕಿಡಿ ಹೊತ್ತಿಸಿದ್ದ ತರಂಗಿಣಿಯ ಫೋನ್ ರಿಂಗಿಸಿ ಅವನ ಉತ್ಸಾಹವನ್ನು ಇನ್ನೂ ಇಮ್ಮಡಿಸಿತು. ತನ್ನ ಜಾಗದಿಂದ ತುಸು ಆಚೆ ಸ್ವಲ್ಪ ಮರೆ ಇದ್ದಲ್ಲಿಗೆ ಹೋಗಿ ಅವಳ ಕರೆಯನ್ನು ಸ್ವೀಕರಿಸಿದನವನು.
"ಹೇಳಿ ತರಂಗಿಣಿ ಏನ್ಸಮಾಚಾರ"
"ಏನ್ ಲಕ್ಕಿ ಕಣ್ರೀ ನೀವು" ಅಂತ ಅವನಲ್ಲಿ ಇನ್ನೂ ಪುಳಕವನ್ನುಂಟು ಮಾಡಿದಳವಳು.
"ಯಾಕ್ರೀ ಏನಾಯ್ತು" ಅಂತ ಒಣಗಿದ ಗಂಟಲಲ್ಲೇ ಕೆಳಿದನವನು.
"ನಿಮ್ಮ ರೆಸುಮೆ ನೋಡಿ ಬ್ಲ್ಯಾಕ್ ಇಯರ್ ಕಂಪನಿಯ ಎಂಡಿ ಸಿಕ್ಕಾಪಟ್ಟೆ ಖುಷ್ ಆಗಿದಾರೆ. ನನಗೆ ಬೇಕಾದಂತಾ ವ್ಯಕ್ತಿನೆ ಆರಿಸಿದ್ದೀರ ಅಂತ ನನಗೆ ತುಂಬಾ ಹೊಗಳ್ತಾ ಇದ್ರು ಕಣ್ರೀ."
"ಒಹ್… ಹೌದಾ! ಹಾಗಾದ್ರೆ ಇಂಟರ್ವ್ಯೂ ಯಾವಾಗಂತೆ?" ಅಂತ ತನ್ನ ಖುಷಿಯನ್ನು ಹತ್ತಿಕ್ಕಲಾರದೆ ಕೇಳಿದ ಅವನ ಕಣ್ಣುಗಳಲ್ಲಿ  ಪ್ಯಾರಿಸ್ ನ ಐ ಫೆಲ್ ಟವರ್ ತಕಾ ತಕಾ ಕುಣಿಯುತ್ತಿತ್ತು!
"ಇಂಟರ್ವ್ಯೂ ಎಲ್ಲಾ ಏನೂ ಇಲ್ಲ ರೀ. ನಾನು ರೆಫರ್ ಮಾಡಿದ ಮೇಲೆ ಮುಗಿತು. ಸುಮ್ನೆ ನಿಮ್ಮ ಜೊತೆ ಒಂದು ಫಾರ್ಮಲ್ ಮೀಟಿಂಗ್ ಇರುತ್ತೆ. ಆ ಕಂಪನಿಯ ಎಹ್ ಆರ್ ಮಾತಾಡ್ತಾರೆ. ಅದೂ ಸಂಬಳದ ಬಗ್ಗೆ ನಿಮ್ಮ ನಿರೀಕ್ಷೆ ತಿಳಿದುಕೊಳ್ಳೋಕೆ ಅಷ್ಟೇ. ಮುಂದಿನ ತಿಂಗಳು ಪ್ಯಾರಿಸ್ ಗೆ ಹೋಗೋಕೆ ತಯಾರಾಗಿ" ಅನ್ನುತ್ತಿದ್ದಂತೆ ಇವನು ನಿಟ್ಟುಸಿರಿಟ್ಟ. ರೆಸುಮೆಯಲ್ಲಿ ಏನೇನೋ ಸುಳ್ಳುಗಳ ಸರಮಾಲೆ ತುರುಕಿ, ಇಂಟರ್ವ್ಯೂನಲ್ಲಿ ಹೆಂಗಪ್ಪಾ ಮಾತಾಡೋದು ಅಂತ ಭಯಪಟ್ಟಿದ್ದವನಿಗೆ, ಆ ಒಂದು ಸಂದರ್ಭವೇ ಇಲ್ಲ ಅಂದಾಗ ಎಷ್ಟು ಖುಷಿಯಾಗಬೇಡ? ಅವಳು ಮುಂದುವರೆಸಿ. 
"…ನೋಡಿ ಈಗಲೇ ನಿಮ್ಮ ಹೊಸ ಬಾಸ್ ನಿಮಗೆ ಒಂದು ಕೆಲಸ ಕೊಟ್ಟಿದ್ದಾರೆ. ಪ್ಯಾರಿಸ್ ನಲ್ಲಿ ನಿಮ್ಮ ಟೀಮ್ ಗೆ ಇನ್ನೂ ನಾಲ್ಕು  ಜನ ಬೇಕಂತೆ. ಯಾರಾದರೂ ಒಳ್ಳೆ ಪ್ರೋಗ್ರಾಮರ್ ಗಳಿದ್ದರೆ ಅವರನ್ನು ನೀವು ಶಿಫಾರಸ್ಸು ಮಾಡಬಹುದು. ನಾಳೆ ಒಳಗೆ ಕೆಲವು ರೆಸುಮೆ ಕಳಿಸಿ. ನನಗೆ ಈಗ ಅವರ ಜೊತೆ ಮೀಟಿಂಗ್ ಇದೆ, ಮತ್ತೆ ಫೋನ್ ಮಾಡುವೆ…. ಬೈ" ಅಂತ ಕರೆಯನ್ನು ಮುಗಿಸಿದಳು.
ರಘುಗೆ ಸ್ವರ್ಗಕ್ಕೆ ಮೂರೆ ಗೇಣು! ಕೂಡಲೇ ಅಲ್ಲೇ ಇದ್ದ ಪ್ರದೀಪ, ಸೀನುನಂತಹ ತನ್ನ ನಾಲ್ಕು ಚೆಲಾಗಳನ್ನು ಕಣ್ಣ ಸನ್ನೆಯಲ್ಲೇ ಕರೆದು ಕೆಳಗಿನ ಮಹಡಿಯಲ್ಲಿರುವ ಕೆಫೆತೆರಿಯ ಕ್ಕೆ ಕರೆದೊಯ್ದ. ಅವರಲ್ಲಿಯೂ ಪ್ಯಾರಿಸ್ ನ ಕೆಲಸದ ಕನಸನ್ನು ಬಿತ್ತಿ, ಅವರ ರೆಸುಮೆ ಗಳನ್ನೂ ಇವತ್ತೇ ಅಪ್ಡೇಟ್ ಮಾಡಿ ತನ್ನ ವೈಯುಕ್ತಿಕ ಇಮೇಲ್ ಅಡ್ರೆಸ್ ಗೆ ಕಳಿಸಲು ಆಜ್ಞೆ ಹೊರಡಿಸಿದ.
ಜಾನ್ ತನಗೆ ಅಂತಲೇ ಮೀಸಲಾಗಿದ್ದ ಚೇಂಬರ್ ನಲ್ಲಿ ತನ್ನ ಲ್ಯಾಪ್ ಟಾಪ್ ದಿಟ್ಟಿಸುತ್ತ ಕೂತಿದ್ದ. ಅದು ಸುಧೀರ್ ಕಳಿಸಿದ್ದ ಫೈಲ್ ಆಗಿತ್ತು. ಭಾರತದ ಆ ಶಾಖೆಯಲ್ಲಿ ಕೆಲಸ ಮಾಡುತ್ತಿರುವ ಅಷ್ಟೂ ಉದ್ಯೋಗಿಗಳ ಹೆಸರು ಹಾಗೂ ಅವರ ಬಗ್ಗೆ ಎಲ್ಲ ವಿವರಗಳೂ ಅಲ್ಲಿದ್ದವು. ಎಲ್ಲರ ಕೌಶಲಗಳ, ಸಾಮರ್ಥ್ಯಗಳ ಕುರಿತ ಮಾಹಿತಿಯೂ ಅಲ್ಲಿತ್ತು. ಅಂಥದೊಂದು ಪಟ್ಟಿಯನ್ನು ತಯಾರಿಸಿ ಕಳಿಸು ಅಂದಾಗಲೇ, ಸುಧೀರನಿಗೆ ಅವನು ಅಲ್ಲಿಂದ ಎಷ್ಟೋ ಜನರ ಎತ್ತಂಗಡಿ ಮಾಡುವ ಇರಾದೆ ಹೊಂದಿದ್ದಾನೆಂದು  ಅಂದಾಜಿಸಿದ್ದ. ಮೊತ್ತ ಮೊದಲು ತನ್ನನ್ನೇ ಗುರಿ ಮಾಡಿರಬಹುದೆಂಬ ಬಲವಾದ ನಂಬಿಕೆ ಅವನಲ್ಲಿತ್ತು. ಆದರೆ ಜಾನ್ ತಲೆಯಲ್ಲಿ ಓಡುತ್ತಿದ್ದ ಲೆಕ್ಕಾಚಾರವೇನಾಗಿತ್ತು ಎನ್ನುವುದು ಜಾನ್ ನನ್ನು ಬಿಟ್ಟರೆ ಅವನ ಚೇಲಾ ಜೇಕಬ್ ಗೆ ಮಾತ್ರ ಗೊತ್ತಿತ್ತು!                            
(ಮುಂದುವರಿಯುವುದು…)

Saturday, June 20, 2015

ಬಹುಪರಾಕ್!

(http://www.panjumagazine.com/?p=11024)
 
ಬೆಳಿಗ್ಗೆ ಕೆಲಸಕ್ಕೆ ಹೊತ್ತಾಗಿದ್ದರೂ ಅಂತಹ ಗಡಿಬಿಡಿಯೇನೂ ತೋರಿಸದೆ, ತಾನು ಬೇಗ ಹೋಗಿಯಾದರೂ ಏನು ಮಾಡುವುದು ಅನ್ನುವ ಮನಸ್ಥಿತಿಯಲ್ಲಿ ಆರಾಮವಾಗಿ ಬಂದ ಪ್ರದೀಪ್ ಗೆ ಸ್ವಾಗತಿಸಿದ್ದು ಎಂದಿಗಿಂತಲೂ ಚೊಕ್ಕದಾದ ಆಫೀಸಿನ ಪ್ರಾಂಗಣ. ಅವನಿಗೆ ಆಶ್ಚರ್ಯವಾಗಿತ್ತು. ಅಲ್ಲೇ ನಿಂತು ಅತ್ತಿತ್ತ ಕಣ್ಣಾಡಿಸಿದ. ರಿಸೆಪ್ಶನ್ ನಲ್ಲಿ ಹೂವಿನ ಅಲಂಕಾರ, ಆ ಕಡೆ ಈ ಕಡೆಗೊಂದು ಹೂ ಕುಂಡಲ. ಇದ್ದುದರಲ್ಲೇ ಸುಂದರಿಯರು ಅನಿಸಿಕೊಂಡ ನಾಲ್ಕು ಲಲನೆಯರು, ತಮಗೆ ಪರಿಚಿತವೇ ಅಲ್ಲದ ಸ್ಯಾರಿ ಎಂಬ ದೇಸಿ ಉಡುಗೆಯಲ್ಲಿ ನಿಂತಿದ್ದರು. ಆಗಾಗ ತಮ್ಮ ಸ್ಯಾರಿ ಸರಿ ಇದೆಯೋ ಇಲ್ಲವೋ ಎಂಬಂತೆ ತಮ್ಮದೇ ಸುತ್ತಲೂ ಕಣ್ಣಾಡಿಸುತ್ತ, ಸರಿಯಿಲ್ಲ ಅನಿಸಿದೆಡೆಗೆ ಸರಿ ಮಾಡಿಕೊಳ್ಳುತ್ತ ನಿಂತಿದ್ದರು. ಬೇರೆಯವರು ತಮ್ಮನ್ನು ಗಮನಿಸುತ್ತಿದ್ದಾರೆ ತಾನೇ ಎಂದೂ ಅತ್ತಿತ್ತ ನೋಡುತ್ತ, ಒಬ್ಬನಾದರೂ ನೋಡುತ್ತಿದ್ದರೆ ಅದು ತನ್ನನ್ನೇ ನೋಡುತ್ತಿರಬೇಕು ಎಂದು ಒಂದು ಗಳಿಗೆ ನಿಶ್ಚಿಂತರಾಗುತ್ತಿದ್ದರು. ಸುಗಂಧ ದ್ರವ್ಯವನ್ನು ಯಥೇಚ್ಚವಾಗಿ ಸ್ಪ್ರೇ ಮಾಡಿದ್ದರಿಂದ ಆ ಪ್ರದೇಶದಲ್ಲಿ ಘಾಟು ವಾಸನೆ ಅಡರಿತ್ತು. ಒಟ್ಟಿನಲ್ಲಿ ಅಲ್ಲಿ ಹಬ್ಬದ ವಾತಾವರಣವಿತ್ತು. ಬೆಂಗಳೂರಿಗೆ ಬಂದ ಮೇಲೆ ಹಬ್ಬ ಹರಿದಿನಗಳನ್ನೇ ಮರೆತ ಪ್ರದೀಪಗೆ ಇವತ್ತು ಯಾವುದೋ ಹಬ್ಬವಿರಬೇಕು ತಾನು ಅದನ್ನು ಎಂದಿನಂತೆ ಮರೆತುಬಿಟ್ಟೆನೇನೋ ಎಂಬ ಸಂಶಯ ಉಂಟಾಗಿರುವಾಗಲೇ ಅಲ್ಲೇ ಪಕ್ಕಕ್ಕೆ ಇದ್ದ ಫಲಕದ ಮೇಲೆ ಯಾರಿಗೋ ಸ್ವಾಗತ ಕೋರಿದ ಅಕ್ಷರಗಳು ಕಂಡವು. ಕೂಲಂಕುಷವಾಗಿ ನೋಡಲಾಗಿ 'Welcome to Voice President John C. Becker' ಅನ್ನುವ ವಾಕ್ಯಗಳು ಕಂಡವು. ತಮ್ಮ ಶಾಖೆಗೆ ಜಾನ್ ಬರುತ್ತಿರುವ ವಿಷಯ ಅವನಿಗೆ ಗೊತ್ತಾಗಿದ್ದು ಆಗಲೆ. ಅವನು ಬರುತ್ತಿರುವ ವಿಷಯ ಮೊದಲೇ ಗೊತ್ತಿತ್ತಾದರೂ ಇವತ್ತೇ ಬರುವನೆಂದು ಅವನಿಗೆ ಅಂದಾಜಿರಲಿಲ್ಲ. ತನಗ್ಯಾರೂ ಹೇಳಲೇ ಇಲ್ಲವೆಂಬ ಕೋಪ ಅವನಿಗೆ ಬಂದಿತು. ತನ್ನ ಬಾಸ್ ಸುಜಯ್ ಎಲ್ಲ ವಿಷಯಗಳನ್ನು ತನ್ನ ಗೆಳತಿ ನಿಶಾಗೆ ಮಾತ್ರ ಹೇಳುತ್ತಾನೆ. ಮಿಕ್ಕ ತಾವೆಲ್ಲರೂ ಏನು ಪಾಪ ಮಾಡಿದ್ದೇವೆ? ಅಂತ ತನ್ನಲ್ಲೇ ಅವನನ್ನು ಬೈದುಕೊಂಡ. ಈ ವಿಷಯದ ಬಗ್ಗೆ ಜಾನ್ ಗೆ ದೂರು ಕೊಡಬೇಕು ಅಂತ ಯೋಚಿಸುತ್ತ ತನ್ನ ಜಾಗಕ್ಕೆ ತೆರಳಿದ.
 
ಅಮೆರಿಕಾದ ದೊರೆಗೆ ಅದ್ಧೂರಿಯ ಸ್ವಾಗತ ಕೋರಲು ಎಲ್ಲ ಸಿದ್ಧತೆಗಳಾಗಿದ್ದವು. ಶಾಖೆಯ ಮುಖಸ್ಥನಾದ ಸುಧೀರ್ ತನ್ನ ಮಾಮೂಲಿ ಟೀ ಶರ್ಟ್ ಹಾಕಿಕೊಳ್ಳದೆ ತುಂಬಾ ಡೀಸೆಂಟ್ ಆಗಿರುವ ಸೂಟು ಬೂಟು ಹಾಕಿಕೊಂಡು ತಯಾರಾಗಿದ್ದುದು ವಿಶೇಷವಾಗಿತ್ತು. ಉಳಿದ ಮ್ಯಾನೇಜರ್ ಗಳೂ ತಂತಮ್ಮ ಸೂಟು ಬೂಟುಗಳೊಂದಿಗೆ ಮದುವೆಗೆ ತಯಾರಾದಂತೆ ಸಿಕ್ಕಾಪಟ್ಟೆ ಸ್ಮಾರ್ಟ್ ಆಗಿ ಬಂದಿದ್ದರು. ಮೊದಲೇ ನಿರ್ಧರಿಸಿದಂತೆ ಜಾನ್ ಹನ್ನೆರಡು ಗಂಟೆಗೆ ಬರುವದಿತ್ತಾದರೂ ಅವನು ಬಂದಿದ್ದು ಒಂದು ಗಂಟೆ ಮೊದಲೇ. ಅಂದುಕೊಂಡಿದ್ದಕ್ಕಿಂತ ವಿಭಿನ್ನವಾಗಿ ಎಲ್ಲರಿಗೂ ಅನಿರೀಕ್ಷಿತ ತಿರುವು ಕೊಡುವುದರಲ್ಲಿ ಜಾನ್ ದು ಎತ್ತಿದ ಕೈ. ಅದೇ ಅವನ ವಿಶೇಷ. ಅದನ್ನು ಮೊದಲೇ ತಿಳಿದಿದ್ದ ಸುಧೀರ್ ಎಲ್ಲ ತಯಾರಿಗಳನ್ನೂ ಮುಂಚಿತವಾಗೆ ಮಾಡಿಕೊಂಡಿದ್ದ. 
ಜಾನ್ ಬರುತ್ತಲೇ ಸೀರೆ ಉಟ್ಟ ನೀರೆಯರು ಅವನಿಗೆ ಹೂ ಗುಚ್ಚದೊಂದಿಗೆ ಸ್ವಾಗತಿಸಿದರು. ಅವನು ಗಂಟು ಮುಖದಲ್ಲೇ ಸ್ವೀಕರಿಸಿದ. ಅವನ ಜೊತೆಗೆ ಜೇಕಬ್ ನೂ ಬಂದಿದ್ದ. ಸುಧೀರ್ ತನ್ನನ್ನು ತಾನು ಪರಿಚಯಿಸಿಕೊಂಡ. ಜಾನ್, ಅವನನ್ನು ಅಡಿಯಿಂದ ಮುಡಿಯವರೆಗೆ ನೋಡಿದ ರೀತಿಗೆ ತುಸು ಮುಜುಗರಕ್ಕೊಳಗಾದ. ಆ ನೋಟ ‘ನೀನೆ ಏನು ಈ ಶಾಖೆಯ ಮುಖ್ಯಸ್ಥ?’ ಅನ್ನುವಂತಿತ್ತು. ಮಿಕ್ಕ ಸಹೋದ್ಯೋಗಿಗಳನ್ನೂ ಅವನಿಗೆ ಸುಧೀರ ಪರಿಚಯಿಸಿದ. ಎಲ್ಲರನ್ನೂ ಹುಬ್ಬು ಗಂಟಿಕ್ಕಿಯೇ ಮಾತಾಡಿಸಿದ ಜಾನ್ ಎಲ್ಲರಲ್ಲಿಯೂ ನಡುಕ ಹುಟ್ಟಿಸಿದ. ಪ್ರಥಮ ಚುಂಬನದಲ್ಲೇ ದಂತಭಗ್ನವಾಗಿತ್ತು!
ಸುಧೀರ್ ನ ಜೊತೆಗೆ ಇಡೀ ಆಫೀಸನ್ನು ಸುತ್ತಾಡಿದ ಜಾನ್, ಎಲ್ಲ ಕಡೆಗೂ ಸಂಶಯದ ದೃಷ್ಟಿಯಿಂದಲೇ ಅಡ್ಡಾಡುತ್ತಿದ್ದನೇನೋ ಅಂತ ಅನಿಸುತ್ತಿತ್ತು. ಕೆಲವು ಸಹೋದ್ಯೋಗಿಗಳ ಜೊತೆಗೆ ಮಾತಾಡಿ ಅವರೇನು ಮಾಡುತ್ತಿರುವರೆಂದು ಕೇಳಿ ತಿಳಿದುಕೊಂಡ. ಕೆಲವರಿಗೆ ಇದನ್ನು ಹೀಗೇಕೆ ಮಾಡುತ್ತಿರುವೆ? ಹಾಗೇಕೆ ಮಾಡುತ್ತಿಲ್ಲ ಅಂತೇನೇನೋ ಪ್ರಶ್ನೆ ಕೇಳಿ ಅವರಲ್ಲಿ ಬೆವರು ಹುಟ್ಟಿಸಿದ. ಪ್ರದೀಪನಂತಹ ಕೆಲೆಸಗಳ್ಳರು ಮಾತ್ರ ಅವನು ಬಂದ ಸಮಯಕ್ಕೆ ತಮ್ಮ ಜಾಗದಲ್ಲಿರದೆ ಬಚಾವಾದರು. ಎಂದಿನಂತೆ ಡೆಸ್ಕಿಗೆ ಅಂಟಿಕೊಂಡು ಕೆಲಸ ಮಾಡುವ ಉದ್ಯೋಗಿಗಳು ಮಾತ್ರ ಇದರಿಂದ ಕಿರಿಕಿರಿ ಅನುಭವಿಸುವಂತಾಯಿತು. ಆದರೆ ನಿಶಾ ಮಾತ್ರ ಇದೆ ಒಂದು ಅವಕಾಶಕ್ಕೆ ಕಾಯುತ್ತಿದ್ದವಳಂತೆ ಅವನ ಜೊತೆ ಅಮೆರಿಕಾದ accent ನಲ್ಲಿ ಮಾತಾಡಿ ಅವನ ಮನ ಗೆದ್ದಳು. ಅವಳ ಹೆಸರು ಏನು , ಅವಳು ಯಾರಿಗೆ ರಿಪೋರ್ಟ್ ಮಾಡುತ್ತಿದ್ದಾಳೆ ಎಂಬೆಲ್ಲ ವಿಷಯಗಳನ್ನು ಅವನು ಕೇಳಿ ತಿಳಿದುಕೊಂಡ. ಅವನ ಜೊತೆಗಿದ್ದ ಜೇಕಬ್ ಇದೆಲ್ಲವನ್ನೂ ನೋಟ್ ಮಾಡಿಕೊಂಡ. ಈ ಮನುಷ್ಯ ಯಾವ ಮಟ್ಟಕ್ಕಾದರೂ ಇಳಿಯಬಹುದೆಂದು ಸುಧೀರನಿಗೆ ಮನದಟ್ಟಾಯಿತು. ಯಾವುದೇ ಉಪಾಧ್ಯಕ್ಷ ಇಲ್ಲಿಯವರೆಗೆ ಈ ತರಹ ವರ್ತಿಸಿರಲಿಲ್ಲ.
 
ಮದ್ಯಾಹ್ನದ ಊಟಕ್ಕೆ ಕಂಪನಿಯ ಪಕ್ಕದಲ್ಲೇ ಇದ್ದ ಪಂಚತಾರಾ ಹೋಟೆಲ್ ನಲ್ಲಿ ಪೃಥ್ವಿ ವ್ಯವಸ್ಥೆ ಮಾಡಿಸಿದ್ದ. ಅದೇ ಹೋಟೆಲ್ ನಲ್ಲಿ ಅವನ ವಾಸ್ತವ್ಯಕ್ಕೂ ವ್ಯವಸ್ಥೆ ಮಾಡಲಾಗಿತ್ತು. ಆಫೀಸಿಗೆ ತುಂಬಾ ಹತ್ತಿರದಲ್ಲೇ ಇರುವ ಹೋಟೆಲ್ ನಲ್ಲಿಯೇ ತಾನು ತಂಗಬೇಕೆಂದು ಜಾನ್ ನ ಅಪೇಕ್ಷೆಯಾಗಿತ್ತು.  ಅವನ ಜೊತೆಗೆ ಊಟಕ್ಕೆ ಸುಧೀರ್ ಹಾಗೂ ಇತರ ಮ್ಯಾನೇಜರ್ ಗಳು ಹಾಜರಾಗಿದ್ದರು. ಎಂದೂ ಹಾಕಿಕೊಂಡು ರೂಢಿಯಿರದ ಸೂಟು ಎಲ್ಲರಿಗೂ ಕಸಿವಿಸಿ ಉಂಟುಮಾಡಿತ್ತು. ಎದುರಿಗೆ ಜಾನ್ ನಂತಹ ವ್ಯಕ್ತಿ ಕೂತಿರುವಾಗ ಎಲ್ಲರ ಹಸಿವೆಯೂ ಸಹಜವಾಗಿಯೇ ಮಾಯವಾಗಿತ್ತು. ಅವನು ಏನು ಕೆಳುತ್ತಾನೋ ಎನ್ನುವ ಹೆದರಿಕೆ ಪ್ರತಿಯೊಬ್ಬರಲ್ಲೂ ಇತ್ತು. ಅವನೂ ಕೂಡ ಈ ಸಂದರ್ಭದ ಸದ್ಬಳಕೆ ಮಾಡಿಕೊಂಡಿದ್ದ. ಪ್ರತಿಯೊಬ್ಬ ಮ್ಯಾನೇಜರ್ ಗೂ ಪ್ರಶ್ನೆಗಳನ್ನು ಹಾಕುತ್ತ ಅವರನ್ನು ಪೇಚಿಗೆ ಸಿಕ್ಕಿಸುತ್ತಿದ್ದ. ಅದೇ ಜೇ.ಸಿ.ಬಿ ಎಂಬ ಅನ್ವರ್ಥಕ ನಾಮ ಗಳಿಸಿದ ಜಾನ್ ನ ವಿಶೇಷತೆಯಾಗಿತ್ತು. ಮರುದಿನ ಪ್ರತಿಯೊಬ್ಬ ಮ್ಯಾನೇಜರ್ ಜೊತೆಗೆ ತನ್ನ ಮೀಟಿಂಗ್ ಗೊತ್ತು ಮಾಡಲು ಆದೇಶ ಹೊರಡಿಸಿದ್ದ. ಎಲ್ಲರೂ ಒಂದೊಂದು ತುತ್ತನ್ನೂ ತುಂಬಾ ಪ್ರಯಾಸ ಪಟ್ಟು ಗಂಟಲೊಳಗೆ ಇಳಿಸಿಕೊಳ್ಳುತ್ತಿದ್ದರು.
ಕಡೆಗೂ ಊಟದ ಆಟ ಮುಗಿದಿತ್ತು. ಹಿಂದಿನ ರಾತ್ರಿಯೇ ಬಂದ ಜಾನ್ ಗೆ ನಿದ್ದೆ ಬಂದಿರಬಹುದು ಹಾಗೂ ಅವನು ತನ್ನ ಕೋಣೆಗೆ ಹೋಗಿ ಮಲಗಿ ಸ್ವಲ್ಪ ವಿಶ್ರಾಂತಿ ಪಡೆದುಕೊಳ್ಳಬಹುದೆಂಬ ಎಲ್ಲರ ನಿರೀಕ್ಷೆ ಸುಳ್ಳು ಮಾಡಿ, ಊಟದ ಬಳಿಕ ಎಲ್ಲರ ಜೊತೆಗೆ ಆಫೀಸಿನ ಕಡೆಗೆ ನಡೆದನವನು. ಸುಧೀರ್ ನ ಜೊತೆಗೆ ಕುಳಿತು ಒಂದಿಷ್ಟು ವಿಷಯಗಳ ಮಾಹಿತಿ ಪಡೆಯುವ ಉದ್ದೇಶ ಅವನದಾಗಿತ್ತು… 

(ಮುಂದುವರಿಯುವುದು…)                

Saturday, June 13, 2015

ಜಾನ್ ಎಂಬ ಬಿರುಗಾಳಿಯ ಮುನ್ಸೂಚನೆ…

(http://www.panjumagazine.com/?p=10909)

ಜಾನ್ ಆಯೋಜಿಸಿದ್ದ ಪಾರ್ಟಿ ಮುಗಿಸಿ ಮನೆಗೆ ಬಂದ ವೆಂಕಣ್ಣನ ಮುಖ ತುಂಬಾ ಚಿಂತೆಯಲ್ಲಿದ್ದಂತೆ ಕಂಡು ಬಂದದ್ದರಿಂದ ಜಾನು ಗೆ ಕಳವಳವಾಯಿತು. 
“ಯಾಕ್ರೀ ಪಾರ್ಟಿಯೊಳಗ ಯಾರರೆ ಏನರೆ ಅಂದರೋ ಏನು?” ಅಂತ ಹತ್ತಿರಕ್ಕೆ ಹೋಗಿ ವಿಚಾರಿಸಿದಳು. ಹಾಗೆ ಹತ್ತಿರ ಹೋಗಿದ್ದಕ್ಕೆ ಇನ್ನೊಂದು ಕಾರಣವೂ ಇತ್ತು. ಗಂಡ ವಿದೇಶಕ್ಕೆ ಬಂದು ಅವರ ತರಹವೇ ಪಾರ್ಟಿಲಿ ಗುಂಡು ಹಾಕೋಕೂ ಶುರು ಹಚ್ಚಿಕೊಂಡನೋ ಹೇಗೆ ಎಂಬ ಪರೀಕ್ಷೆ ಅದಾಗಿತ್ತು.
“ಯಾರೇನ್ ಅಂದ್ರೂ ನಾ ತಲಿ ಕೆಡಿಸ್ಕೊಳೋದಿಲ್ಲ ಬಿಡು. ಆದ್ರ ಆ ಜೇ.ಸಿ.ಬಿ ನನ್ ಮಗಾ ಏನೋ ಸ್ಕೆಚ್ ಹಾಕ್ಲಿಕತ್ತಾನ. ಅದ ಸ್ವಲ್ಪ ತಲಿ ಕೊರಿಲಿಖತ್ತದ”  ಅಂದವನ ಉಸಿರಿನಲ್ಲಿ ಶರಾಬಿನ ವಾಸನೆ ಇಲ್ಲದ್ದು ಅವಳಿಗೆ ಸ್ವಲ್ಪ ಸಮಾಧಾನ ತಂದಿತಾದರೂ. ಹೊಸ ಉಪಾಧ್ಯಕ್ಷ  ಜಾನ್ ಕಿರಿಕ್ಕು ಶುರು ಮಾಡಿರುವ ಸಂಗತಿ ಅವಳ ತಲೆಯಲ್ಲೂ ಕೊರೆಯತೊಡಗಿತ್ತು.
“ಏನ್ ಮಾಡ್ತಾನಂತ ಆವಾ?” ಅಂದಳು.
“ಗೊತ್ತಿಲ್ಲ… ಮುಂದಿನ ವಾರ ಬೆಂಗಳೂರಿಗೆ ಹೊಂಟಾನ. ಅಲ್ಲೇ ಯಾರ್ಯಾರ್ನ ಹಾರಸ್ತಾನೋ ಏನ್ ಕತಿನೋ! ಸುಧೀರ್ ಗ ಒಂದ್ ಕಾಲ್ ಮಾಡ್ತೀನಿ ತಡಿ. ಇವತ್ತ ಏನೇನ್ ಆತು ಎಲ್ಲಾ ಅವಂಗ ಹೇಳ್ಬೇಕು.” ಅಂತ ಫೋನ್ ನಲ್ಲಿ ನಂಬರ್ ಡಯಲ್ ಮಾಡತೊಡಗಿದ. ಮಗಳು ಖುಷಿ ಅಲ್ಲಿನ ಹಗಲು ರಾತ್ರಿಗಳಿಗೆ ಆಗಲೇ ಹೊಂದಿಕೊಂಡಿದ್ದಳು. ಅವಳು ಗಾಢ ನಿದ್ರೆಯಲ್ಲಿದ್ದಳು. ಇವನ ಫೋನ್ ಕಾರ್ಯಕ್ರಮ ಇನ್ನು ಕನಿಷ್ಟ ಒಂದು ಗಂಟೆಯಾದರೂ ಸಾಗುವುದೆಂಬ ಅರಿವಿದ್ದ ಜಾನು ತಾನೂ ಮಲಗಲು ತೆರಳಿದಳು.  
ಭಾರತದಲ್ಲಿ ಬೆಳಗಿನ ಹತ್ತು ಗಂಟೆ. ಸುಧೀರನ ಮೊಬೈಲ್ ಮೊಳಗಿತು. ವೆಂಕಟ್ ರಾತ್ರಿ ಜಾನ್ ನ ಪಾರ್ಟಿಗೆ ಹೋಗಿರುವ ಸಂಗತಿ ಗೊತ್ತಿದ್ದುದರಿಂದ ಅವನದೇ ಫೋನ್ ನ ನಿರೀಕ್ಷೆಯಲ್ಲಿದ್ದನವನು. ಅದು ಅವನದೇ ಕರೆಯೆಂದು ಗೊತ್ತಾಗುತ್ತಲೇ ತನ್ನ ಕ್ಯಾಬಿನ್ ನಲ್ಲಿ ಯಾರದೋ ಜೊತೆಗೆ ಮಾತಾಡುತ್ತಿದ್ದವನು ಅವರನ್ನು ಸಾಗ ಹಾಕಿ ವೆಂಕಟ್ ಹೇಳುವುದನ್ನು ಗಮನವಿಟ್ಟು ಕೇಳತೊಡಗಿದ. ಸುಮಾರು ಹೊತ್ತು ಮಾತಾಡಿ ಅವನಿಗೆ ಶುಭರಾತ್ರಿ ಹೇಳಿ ಕರೆಯನ್ನು ಮುಗಿಸಿದ ಮೇಲೆ ಸುಧೀರ್ ಗೂ ಚಿಂತೆ ಶುರುವಾಗಿತ್ತು…
ಯಾವುದೋ ವಿಷಯಕ್ಕೆ ಚರ್ಚಿಸಲು ಅಂತ ಬಂದ ಸುಜಯ್, ಬಾಸ್ ಸುಧೀರ್  ತನ್ನದೇ ಲೋಕದಲ್ಲಿ ಮುಳುಗಿದ್ದು ಗಮನಿಸಿದ. ಬಾಗಿಲು ತಟ್ಟಿ ಒಳಗೆ ಬಂದವನ ಜೊತೆ ವಿಷಯ ಚರ್ಚಿಸುತ್ತಿದ್ದನಾದರೂ ಒಳಗೊಳಗೇ ತನ್ನ ಹಾಗೂ ತಮ್ಮ ಶಾಖೆಯ ಭವಿಷ್ಯದ ಬಗ್ಗೆ ಚಿಂತಿಸುತ್ತಿದ್ದುದು ಅವನ ಮುಖದಲ್ಲಿ ಸ್ಪಷ್ಟವಾಗಿತ್ತು. ಒಟ್ಟಿನಲ್ಲಿ ಜಾನ್ ಎಂಬ ಬಿರುಗಾಳಿಯ ಮುನ್ಸೂಚನೆಗೆ ಭಾರತದ ಈ ಶಾಖೆ ಅಕ್ಷರಶಃ ನಡುಗುತ್ತಿತ್ತು!
ಇತರ ಎಷ್ಟೋ ಚಿಂತಾಮಣಿಗಳಂತೆ ಮಹಾ ಮೈಗಳ್ಳ ರಘುಗೆ ಇನ್ನೂ ಹೆಚ್ಚಿನ ಚಿಂತೆ ಶುರುವಾಗಿತ್ತು. ಜಾನ್ ನ ಕೆಲಸಗಳ್ಳರ  ಪಟ್ಟಿಯಲ್ಲಿ ತಾನು ಮುಂಚೂಣಿಯಲ್ಲಿರುತ್ತೇನೆಂಬ ಸಂಪೂರ್ಣ ಭರವಸೆ ಇವನಿಗಿತ್ತು. ಯಾಕೆಂದರೆ ಕಳೆದ ಕೆಲವು ವರ್ಷಗಳಿಂದ ತಾನು ಏನೂ ಕೆಲಸವನ್ನೇ ಮಾಡದೇ ಈ ಕಂಪನಿಗೆ ಭಾರವಾದ ಸಂಗತಿಯನ್ನು ಜಾನ್ ಗೆ ಸುಧೀರ್ ಹೇಳದೆ ಇರುವ ಸಾಧ್ಯತೆಗಳೇ ಇರಲಿಲ್ಲ. ಹೀಗೆ ತಲೆಗೆ ಕೈಹಚ್ಚಿಕೊಂಡು ಕೂತಾಗಲೇ ತನ್ನ ಫೋನ್ ಕೂಗಿ ಇವನ ಎಚ್ಚರಿಸಿತು. ಹಲೋ ಅಂದವನಿಗೆ ಅವನ ಹಳೆಯ ಸಹೋದ್ಯೋಗಿ ತರಂಗಿಣಿಯ ದನಿ ಕೇಳಿ ಇವಳ್ಯಾಕೆ ಎಷ್ಟೋ ದಿನಗಳ ಬಳಿಕ ತನ್ನ ನೆನಸಿಕೊಂಡಳು ಅಂತ ಕುತುಹಲಿಯಾದನವನು. ಅವಳು ಕೆಲವು ವರ್ಷಗಳ ಹಿಂದೆ ಇವನ ಜೊತೆಗೆ ಕೆಲಸ ಇದೆ ಕಂಪನಿಯಲ್ಲಿ ಮಾಡಿಕೊಂಡಿದ್ದಳು. ಅವಳ ಮದುವೆಯಾದ ಮೇಲೆ, ತಾನೇ ಸ್ವಂತ ಏನಾದರೂ ಮಾಡುತ್ತೇನೆ… ಇವರು ಕೊಡುವ ಪುಟಗೋಸಿ ಕಾಸಿಗೆ ಯಾವನು ಇಲ್ಲಿ ಗುಲಾಮಗಿರಿ ಮಾಡಿಕೊಂಡಿರುತ್ತಾನೆ ಅಂತ ಭಾಷಣ ಬಿಗಿದು ರಾಜಿನಾಮೆ ಕೊಟ್ಟು ಕಾಣೆಯಾಗಿದ್ದಳು. ಮೋದಮೊದಲಿಗೆ ಇವನ ಜೊತೆ ಸಂಪರ್ಕದಲ್ಲಿದ್ದಳಾದರೂ ಕ್ರಮೇಣವಾಗಿ ಅದು ಕಡಿಮೆಯಾಗಿತ್ತು. ಏನೋ ಒಂದು Consultancy ಶುರು ಮಾಡಿದ್ದಳೆಂಬ ವಿಷಯ ಇವನಿಗೆ ಗೊತ್ತಿತ್ತು ಅಷ್ಟೇ. 
“ಏನ್ ಮ್ಯಾಮ್ ಎಷ್ಟೋ ದಿನಾ ಆದ ಮೇಲೆ ಫೋನ್ ಮಾಡಿದೀರಾ? ಏನ್ ಸಮಾಚಾರಾ?”
“ಏನಿಲ್ಲಾ ರಘು… ಎಲ್ಲಾ ಆರಾಮು…. ಒಂದು ಒಳ್ಳೆ opportunity ಇತ್ತು ಅದಕ್ಕೆ ನಿಮ್ಮ ನೆನಪಾಯ್ತು” ಅಂದ್ಲು. ಯಾವ್ದಾದ್ರೂ ಹೊಸ  ಕೆಲಸ ಇರಬಹುದು. ಒಳ್ಳೆ ಟೈಮ್ ಗೆ ಮಾಡಿದಾಳೆ. ಅಂತ ಅಂದುಕೊಂಡವನೇ….
“ಸ್ವಲ್ಪ ಇರಿ, ಆಚೆ ಬರ್ತೀನಿ….” ಅಂತ ತನ್ನ ಜಾಗದಿಂದ ಎದ್ದ. ಇಂತಹ ವಿಚಾರ ಎಲ್ಲಾದರೂ ಆಫೀಸಿನೊಳಗೆ ಮಾತಾಡೋಕಾಯ್ತದಾ! ಅಲ್ಲೇ ಸ್ವಲ್ಪ ದೂರದಲ್ಲಿ ರಿಸೆಪ್ಶನ್ ಪಕ್ಕದಲ್ಲಿದ್ದ ಕಾನ್ಫರೆನ್ಸ್ ಕೋಣೆ ಖಾಲಿ ಇದ್ದುದರಿಂದ ಅದರೊಳಗೆ  ತೂರಿಕೊಂಡು ಮಾತು ಮುಂದುವರಿಸಿದ.
“…. ಹಾ ಹೇಳಿ ಈಗ”
“ಹೆಂಗ್ ನಡೀತಿದೆ ಕೆಲ್ಸಾ?” ಕೇಳಿದಳವಳು.
“ಅಯ್ಯೋ ಸಿಕ್ಕಾಪಟ್ಟೆ ಕೆಲಸ ರೀ… ನಾಯಿ ಪಾಡಾಗೋಗಿದೆ.” ಆಫೀಸಿನಲ್ಲಿ ಇವನೆಷ್ಟು ಘನ ಕಾರ್ಯ ಮಾಡುತ್ತಿದ್ದನೆಂದು ಗೊತ್ತಿಲ್ಲವೇ ಅವಳಿಗೆ!
“ಪ್ಯಾರಿಸ್ ಗೆ ಹೋಗ್ತೀರಾ?” ಇಂತಹ ವಿಚಿತ್ರ ಪ್ರಶ್ನೆಯನ್ನೇ ನಿರೀಕ್ಷಿಸಿದ್ದ ರಘು ನ ಗಂಟಲು ವಣಗಿತ್ತು! ಕಷ್ಟಪಟ್ಟು ಸಾವರಿಸಿಕೊಂಡು…
“ಏನು? ಪ್ಯಾರಿಸ್ ಗಾ?!”
“ಹೂಂ ಕಣ್ರೀ… ಬ್ಲ್ಯಾಕ್ ಇಯರ್ ಸಾಫ್ಟ್ವೇರ್ ಕಂಪನೀಲಿ ಒಂದು ದೊಡ್ಡ ಹುದ್ದೆಯ ಕೆಲಸ ಖಾಲಿ ಇದೆ. ನನಗೆ ತುಂಬಾ ಬೇಕಾದವರು ಅಲ್ಲಿ ಕಂಪನಿಯ ಅದ್ಯಕ್ಷ ಮಂಡಳಿಯಲ್ಲಿ ಇದ್ದಾರೆ. ಅವರದು ಕೋಟಾ ಇರುತ್ತೆ. ಸುಮ್ಮನೆ ಔಪಚಾರಿಕತೆಗೆ ಅಂತ  ಒಂದು ಸಂದರ್ಶನ ಇರುತ್ತೆ. ಪ್ಯಾರಿಸ್ ನಲ್ಲಿ ವಾಸ್ತವ್ಯ. ಅಲ್ಲಿನ ಶಾಖೆಯನ್ನು ನೀವು ನೋಡಿಕೊಳ್ಳಬೇಕು. ಅವರಿಗೆ ತುಂಬಾ ತುರ್ತಾಗಿ ಬೇಕಾಗಿದೆ. ನೀವು ಮುಂದಿನ ವಾರವೇ ಅಲ್ಲಿಗೆ ಹೋಗೋಕೆ ತಯಾರಿದೀರಾ?”
ಇಂತಹದೊಂದು ಪ್ರಶ್ನೆಯನ್ನು ಕನಸಿನಲ್ಲೂ ನಿರೀಕ್ಷಿಸದಿದ್ದ ರಘುಗೆ ಎಚ್ಚರ ತಪ್ಪೋದೊಂದೇ ಬಾಕಿ. ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾಗ ಹೀಗೊಬ್ಬಳು ಕರೆ ಮಾಡಿ ನಿನಗೆ ಅಂತ ಪ್ಯಾರಿಸ್ ನಲ್ಲಿ ಕೆಲಸ ಇದೆ, ಅದೂ ಪ್ರತಿಷ್ಟಿತ ಬ್ಲ್ಯಾಕ್ ಇಯರ್ ಕಂಪನಿಯಲ್ಲಿ.,. ಅದೂ ಅಲ್ಲದೆ ಆ ಕೆಲಸ ಪಡೆದು ಕೊಳ್ಳೋದು ಅಂದ್ರೆ ಬಾಳೆ  ಹಣ್ಣು ಸುಲಿದಷ್ಟೇ ಸುಲಭ ಅಂತ ಅವಳು  ಹೇಳುತ್ತಿದ್ದರೆ, ಇದು ಕನಸೋ ನನಸೋ ಅಂತ ಅರಿವಾಗದೆ, ಅವಳಿಗೆ ಏನು ಹೇಳಬೇಕೆಂದು ತೋಚದೆ, ಮೊಬೈಲ್ ನ ಪರದೆಯನ್ನೇ ಪಿಳಿ ಪಿಳಿ ನೋಡುತ್ತಾ ಕುಳಿತವನಿಗೆ ತರಂಗಿಣಿಯ ಹಲೋ ಹಲೋ ಅನ್ನುವ ದನಿ ಕೇಳಿ, ವಾಸ್ತವಕ್ಕೆ ಬಂದು ಉಗುಳು ನುಂಗಿ ….
“ಹಾ ಹಾ ಹೇಳಿ” ಅಂತ ಉಲಿದ.
“ನಾ ಹೇಳೋದೆಲ್ಲಾ ಹೇಳಾಯ್ತು. ಈಗ ನೀವು ಹೇಳಿ. ಈ ಕೆಲಸ ಬೇಕು ಅಂದ್ರೆ ನಿಮ್ಮ ರೇಸುಮೆ ಈಗಲೇ ಕಳಿಸಿ. ನಾನು ನಿಮ್ಮ ಬಗ್ಗೆ ಅವರಿಗೆ ಆಗಲೇ ಹೇಳಿ ಆಗಿದೆ.” ಅಂತ ಗಡಿಬಿಡಿಸಿದಳು!
ಇವನು ಕೆಲಸದಲ್ಲಿ ಎಷ್ಟು ಮೈಗಳ್ಳನೋ, ಅಷ್ಟೇ ಮೈಗಳ್ಳ ಉಳಿದ ವಿಷಯದಲ್ಲ್ಲೂ ಆಗಿದ್ದ. ತನ್ನ ರೇಸುಮೆ ಅನ್ನುವ ಜಾತಕವನ್ನು ಅವನು ಎಷ್ಟೋ ವರ್ಷಗಳಿಂದ update ಕೂಡ ಮಾಡಿರಲಿಲ್ಲ. ಅದನ್ನು ತರಂಗಿಣಿಗೆ ಹೇಳಿದರೆ ಅವಳು ಫೋನಿನಲ್ಲೇ ಉಗಿಯುವಳೆಂದು ಗೊತ್ತಿದ್ದುದರಿಂದ…
 “ನಾನು ನನ್ನ ಇತ್ತೀಚಿನ ಪ್ರಾಜೆಕ್ಟ್ ಬಗ್ಗೆ ಇನ್ನೂ ರೇಸುಮೆ ನಲ್ಲಿ ಹಾಕಿಲ್ಲ. ಸಂಜೆ ಒಳಗೆ ಬರೆದು ನಿಮ್ಮ ಇಮೇಲ್ ಗೆ ಕಳಿಸುವೆ” ಎಂದು ಹೇಳಿ ಬೀಸುವ ದೊಣ್ಣೆ ತಪ್ಪಿಸಿಕೊಂಡ.
“ಆಯ್ತು ಬೇಗ ಕಳಿಸಿ. ಯಾಕಂದ್ರೆ ಇದು ತುಂಬಾ ಅರ್ಜೆಂಟು” ಅಂತ ಹೇಳಿ ಅವಳು ಕರೆಯನ್ನು ಮೊಟಕುಗೊಳಿಸಿದಳು.
ರಘು ಭೂಮಿಯ ಮೇಲೇ ಇರಲಿಲ್ಲ. ತಕ್ಷಣವೆ ತನ್ನ ಹೆಂಡತಿಗೆ ಕರೆ ಮಾಡಿ ನಡೆದದ್ದನ್ನೆಲ್ಲ ತಿಳಿಸಿ, ಇನ್ನು ಕೆಲವೇ ದಿನಗಳಲ್ಲಿ ತಾವು ಪ್ಯಾರಿಸ್ ಗೆ ಹೋಗಬೇಕಾಗಬಹುದೆಂಬ ಸುದ್ದಿಯನ್ನು ಭಿತ್ತರಿಸಿದ. ಒಂದು ಕ್ಷಣವೂ ತಡಮಾಡದೇ ಲಗುಬಗೆಯಿಂದ ತನ್ನ ರೇಸುಮೆ ಯನ್ನು ಬರೆಯಲುತೊಡಗಿದ. ಸಂಜೆಯೊಳಗೆ, ತಾನು ಇಷ್ಟು ವರುಷ ಮಾಡಲಾರದ್ದನ್ನೆಲ್ಲ ಮಾಡಿದ್ದೇನೆ ಎಂಬಂತೆ ಆ ರೇಸುಮೆ ನಲ್ಲಿ ತುರುಕಿ ಒಂದು ಸುಳ್ಳಿನ ಕಂತೆಯನ್ನು ತಯಾರಿಸಿ ತರಂಗಿಣಿಯ ಇಮೇಲ್ ಗೆ ಕಳಿಸಿ ಕೈ ತೊಳೆದುಕೊಂಡ!