Saturday, April 10, 2010

ಕನ್ನಡ ಸಾಲಿ, ಪಾಟಿ ಚೀಲಾ ಮತ್ತು ಪೆನಶೆ!

ಆ ದಿನಗಳು, ಎಷ್ಟು ಚೊಲೋ ಇದ್ವು! ನನಗಿನ್ನೂ ನೆನಪಿದೆ, ಇದು ಸುಮಾರು ಮೂವತ್ತು ವರ್ಷಗಳ ಹಿಂದಿನ ಮಾತು...

ಅಂದು ನನ್ನ ಮೊದಲನೇ ತರಗತಿಯ ಪರೀಕ್ಷೆ. ನಾನೋ ಆಗ ತಾನೆ ಜ್ವರದಿಂದ ಎದ್ದಿದ್ದೆ. ಅವತ್ತು ಪರೀಕ್ಷೆಗೆ ಅಂತ ಹೆದರುತ್ತಲೇ ಶಾಲೆಗೆ ಹೋದೆ. ನಮ್ಮದು ಮೊದಲೇ ಹಳ್ಳಿ. ಪುರಾತನ ದೇವಾಲಯಗಳ ಬೀಡು! ನಮ್ಮ ಶಾಲೆಗಳು ನಡೆಯುತ್ತಿದ್ದದ್ದು ಅಂಥ ಯಾವುದೊ ಒಂದು ಪಾಳು ಬಿದ್ದ ಗುಡಿಯಲ್ಲಿ. ನಾನು ಒಳಗೆ ಕಾಲು ಇಡಬೇಕು... ಅಷ್ಟರಲ್ಲೇ ನಮ್ಮ ಮಾಸ್ತರು,
"ನೀನು ಪಾಸಾಗಿದಿ ಹೋಗಪ್ಪ" ಅಂದ್ರು!

ನನಗೋ ಖುಷಿ. ಹಾಗೆಯೆ ಓಡಿಕೊಂಡುಮನೆಗೆ ಬಂದಿದ್ದೆ. ಹಾಗಿತ್ತು ನನ್ನ ಜೀವನದ ಮೊದಲನೇ ಪರೀಕ್ಷೆ ಹಾಗು ಅನಿರೀಕ್ಷಿತ ಫಲಿತಾಂಶ! ಅದು ಸರಕಾರೀ ಪ್ರಾಥಮಿಕ ಗಂಡು ಮಕ್ಕಳ ಒಂದನೇ ನಂಬರ್ ಶಾಲೆ. ಅಲ್ಲಿ ಕಲಿಯುವವರೆಲ್ಲ ಬರಿ ಗಂಡು ಮಕ್ಕಳು. ಆಮೇಲೆ ನಾವು ಅದೇ ಊರಲ್ಲಿ, ಮನೆ ಬದಲಾಯಿಸಿ ಬೇರೆ ಕಡೆಗೆ ಹೋದೆವು. ಅಲ್ಲಿ ಎರಡನೇ ನಂಬರ್ ಶಾಲೆಯಲ್ಲಿ ನನ್ನ ಪ್ರವೇಶ. ತಮಾಷೆಯೆಂದರೆ ಅದು ಕೂಡ ಒಂದು ಗುಡಿಯೇ ಆಗಿತ್ತು. ಈಗ ಮಧ್ಯಾನ್ಹದ ಊಟ ಕೊಡುವಂತೆ ಆಗ ಸಂಜೆಗೆ "ಘಾಟೆ" ಅನ್ನುವ ತಿನ್ನುವ ಪದಾರ್ಥ ಕೊಡುತ್ತಿದ್ದರು. ಅದರ ರುಚಿ ನಾನು ಇನ್ನು ಮರೆತಿಲ್ಲ. ವ್ಯವಸ್ಥೆಯ ದೃಷ್ಟಿಯಿಂದ ನೋಡಿದರೆ ಏನೂ ಇಲ್ಲದ ಇಂಥ ಶಾಲೆಗಳಲ್ಲಿನ ಶಿಕ್ಷಕರು ಮತ್ತು ಅವರು ನೀಡುತ್ತಿದ್ದ ಪಾಠಗಳು ಮಾತ್ರ ಅಭಿನಂದನೆಗೆ ಯೋಗ್ಯ.

ನಮ್ಮ ಪಾಠಗಳು ನಡೆಯುತ್ತಿದ್ದದ್ದು "ಭರಮಪ್ಪ" ದೇವರ ಗುಡಿಯಲ್ಲಿ. ಭರಮಪ್ಪ ಅಂದ್ರೆ "ಬ್ರಹ್ಮ" ಅಂತ! ಗರ್ಭ ಗುಡಿಯ ಎದುರು ನಾವೆಲ್ಲಾ ಮಕ್ಕಳು ಕುಳಿತಿರುತ್ತಿದ್ದೆವು. ನಮ್ಮ ಮುಂದೆ ಎರಡು ಕರಿಯ ಹಲಗೆಗಳು. ಈ ಶಾಲೆಯಲ್ಲಿ ಹೆಣ್ಣುಮಕ್ಕಳು ಕೂಡ ಇದ್ದರು. ನಮಗೆ ಇಬ್ಬರು ಮಾಸ್ತರರು! ಒಬ್ಬರು ಗಂಡು ಮಕ್ಕಳಿಗೆ ಇನ್ನೊಬ್ಬರು ಹೆಣ್ಣು ಮಕ್ಕಳಿಗೆ ಅಂತ ನೆನಪು . ಒಬ್ಬರ ಹೆಸರು ಶಿವನಗೌಡ ಪಾಟಿಲ್. ಅವರು ಪಾಠದ ಜೊತೆಗೆ ಪುಂಡ ಮಕ್ಕಳಿಗೆ ಶಿಕ್ಷೆ ಕೊಡುವುದರಲ್ಲಿ ಎತ್ತಿದ ಕೈ! ನನಗೆ ಚೆನ್ನಾಗಿ ನೆನಪಿದೆ. ಸರಿಯಾಗಿ ಗರ್ಭ ಗುಡಿಯ ಎದುರಿಗೆ ಒಂದು ಹಗ್ಗ ಇಳಿಬಿಟ್ಟಿದ್ದರು. ಯಾರಾದರು ಗಲಾಟೆ ಮಾಡಿದರೋ, ಸರಿ,

"ಬಾ ಮಗನ ಭಾರಮಪ್ಪನ್ನ ತೋರಸ್ತೀನಿ" ಅಂತ,

ಆ ಹಗ್ಗಕ್ಕೆ ಹುಡುಗನ ಎರಡೂ ಕೈ ಕುಣಿಕೆ ಹಾಕಿ, ಇಳಿಬಿಟ್ಟು ತಮ್ಮ ಕೈಯಿಂದ ಅವನ ಕೈ ವತ್ತುತ್ತಿದ್ದರು. ಹುಡುಗರು ನೋವಿಗೆ ಕಿರಿಚಾಡುತ್ತಿದ್ದರು. ಇನ್ನೊಮ್ಮೆ ತುಂಟತನ ಮಾಡುವ ಮುನ್ನ ಯೋಚಿಸುತ್ತಿದ್ದರು. ಆದರೆ ಇನ್ನೂ ಕೆಲ ಹುಡುಗರಿದ್ದರು. ಅವರು ಭರಮಪ್ಪ ಬಿಟ್ಟು ಅವರಪ್ಪ ಬಂದರೂ ಹೆದರುತ್ತಿರಲಿಲ್ಲ! ಅಂತ ಹುಡುಗರಿಗೆ ದಿನವೂ ಶಿಕ್ಷೆ. ನಮಗೋ ಅದೊಂದು ಮನರಂಜನೆ ಆಗ. ಈ ತರಹದ ಶಿಕ್ಷೆ ಯಿಂದಲೋ ಏನೋ, ಗುರುಗಳ ಬಗ್ಗೆ ಭಯ ಮಿಶ್ರಿತ ಗೌರವ ಭಾವನೆ ಮೂಡುತ್ತಿತ್ತು.

ಕನ್ನಡ ಶಾಲೆಯಲ್ಲಿ ನನಗೆ ತುಂಬಾ ನೆನಪು ಬರೋದು "ಬಾಯಿ ಲೆಕ್ಕ"; ದಿನವು ಸಂಜೆ ಅ, ಆ, ಇ , ಈ .. , ಮಗ್ಗಿ ಆದ ಮೇಲೆ ಬಾಯಿ ಲೆಕ್ಕದ ಸರದಿ. ಗುರುಗಳು ಯಾವುದೋ ಒಂದು ಲೆಕ್ಕ ಹೇಳೋರು. ಅದನ್ನು ಮನಸ್ಸಿನಲ್ಲೇ ಕೂಡಿಸಿ, ಗುಣಿಸಿ , ಕಳೆದು ಬಂದ ಉತ್ತರವನ್ನು ನಾವು ಪಾಟಿಯಲ್ಲಿ ಬರೆದು, ಮುಚ್ಚಿ ಇಡಬೇಕು. ಮುಚ್ಚಿಡುವುದು ಯಾಕೆಂದರೆ ಬೇರೆಯವರು ನೋಡಬಾರದೆಂದು! ಆಮೇಲೆ ಗುರುಗಳು ಪ್ರತಿಯೊಬ್ಬರ ಉತ್ತರವನ್ನು ನೋಡಿ, ಶಭಾಶ್ ಅಂತಾ ಮೆಚ್ಚಿಗೆ, ಇಲ್ಲ ಉತ್ತರ ತಪ್ಪಾಗಿದ್ದರೆ ಬೆನ್ನಿಗೊಂದು "ಧಬ್" ಅಂತ ಗುದ್ದೋ ಕೊಡುತ್ತಿದ್ದರು. ಆ ಹೊಡೆತದ ಅನುಭವವೇ ಅದ್ಭುತ! ಕರುಳು ಬಾಯಿಗೆ ಬರೋದು ಅಂದ್ರೆ ಇದೆ ಅಂತ ನಮಗೆ ಅರ್ಥವಾಗಿತ್ತು ಆಗ. ನಮ್ಮ ಮಸ್ತರೊಬ್ಬರು ಹೇಳುತ್ತಿದ್ದರು,

"ನಾನು ಒಂದು ಗುದ್ದಿದೆ ಅಂದ್ರ, ಛಡಿ ಛಂ ಛಂ, ವಿದ್ಯಾ ಗೊಂ ಗೊಂ" ಅಂತ. ಮೂಲ ಗಾದೆಯಲ್ಲಿ "... ಘಂ ಘಂ" ಅಂತ ಇದೆ. ಆದರೆ, ಇವರು ಬಿಡುವ ಹೊಡೆತಕ್ಕೆ "...ಗೊಂ ಗೊಂ" ಅಂತ ಹಿಂದೆ ವಾಸನೆ ಬರುತ್ತೆ ಅಂತ, ಅದರರ್ಥ.

ಇದೆಲ್ಲ ಯಾಕೆ ನೆನಪು ಬಂತು ಅಂದ್ರೆ, ಮೊನ್ನೆ ನನಗೆ ಕಲಿಸಿದ ಗುರುಗಳೊಬ್ಬರು ತೀರಿಹೋದ ಸುದ್ದಿ ಕೇಳಿದೆ. ಬೇಜಾರಾಯ್ತು, ಮನಸ್ಸು ಒಂದು ಸಲ ಫ್ಲಾಶ್ ಬ್ಯಾಕ್ ಗೆ ಹೋಗಿ ಬಂತು.

4 comments:

  1. Bhala Cholo Aagyadari...
    Namagu namma Hadimoorne number Shali Nenapu aatu...

    ReplyDelete
  2. ಗುರುಪ್ರಸಾದ್...ನಿಮ್ಮ ಬ್ಲಾಗಿಗೆ ಪ್ರಕಾಶನ ಇಟ್ಟಿಗೆ ಮೂಲಕ..ಇಣುಕಿದ್ದು....ಹಹಹ..ಛಲೋ ಐತ್ ಬಿಡ್ರಿ ನಿಮ್ಮ ಬ್ಲಾಗು ಬ್ಲಾಗಿಸಿದ ಶೈಲಿ...ಹಹಹ

    ReplyDelete
  3. ಎಲ್ಲರಿಗು ಥ್ಯಾಂಕ್ಸ್!

    ReplyDelete