Monday, June 20, 2011

ಮರೆಗುಳಿಗೆ

                      ಮರೆವು ಒಂದು ಕಾಯಿಲೆಯೇ? ಅನುವಂಶೀಯವೇ? ಅಥವಾ ಬರೀ ನಾಟಕವೇ?! ಪ್ರತಿಯೊಬ್ಬ ಹುಲುಮಾನವನಿಗೂ ಮರೆವು ಅನ್ನೋ ರೋಗ ಬಿಟ್ಟಿಲ್ಲ. ನಮ್ಮ ನಾಗ್ಯಾ ನ್ನೇ ತೊಗೋರಿ. ಮುಂಜಾನೆ ಆಫೀಸ್ ಗೆ ಹೋಗೋವಾಗ ಅವನ ಮನದನ್ನೆ ಹೇಳ್ತಾಳೆ "ರೀ ಸಂಜಿ ಮುಂದ ಬರುವಾಗ, ಎಲ್ಲ ಸಾಮಾನು ತೊಗೊಂಡು ಬರ್ರೀ. ಚೀಟಿ ಕಿಸೆದಾಗ ಹಾಕೀನಿ ಮರೀಬ್ಯಾಡ್ರೀ". ಅವಳು ಚೀಟಿಯಲ್ಲಿ ಸಾಮಾನು ಲಿಸ್ಟ್ ಬರೆದು ಗಂಡನ ಜೇಬಿನಲ್ಲಿ ಇಡುವದು ಯಾಕೆ ಅಂದ್ರೆ, ಗಂಡ ಮರೆಗೂಳಿ ಅನ್ನೋದು ಅವಳಿಗೆ ಚೆನ್ನಾಗಿ ಗೊತ್ತಿರುವುದಕ್ಕೆ. ಆದರೆ ಪತಿ ಮಹಾಶಯ ಸಂಜೆ ಖಾಲಿ ಕೈಯಲ್ಲಿ ವಾಪಸ್ಸಾದಾಗ!!? ಅವನು ಹೇಳುತ್ತಾನೆ "ಅಯ್ಯೋ ಸಾರೀ ಲೇ ಪಾ! ಚೀಟಿ ಕಿಸೆದಾಗ ಇರುದ ಮರ್ತು ಬಿಟ್ಟೆ!". ಮರೆತಾನೆಂದು ಚೀಟಿ ಕೊಟ್ಟರೆ ಚೀಟಿಯನ್ನೇ ನೋಡಲು ಮರೆತರೆ ಏನು ತಾನೇ ಮಾಡಲು ಸಾಧ್ಯ? ನಾಗ್ಯಾಂದು ಚಿಕ್ಕವನಿದ್ದಾಗಿಂದ ಇದೆ ಗೋಳು. ನಾನು ಅವನು ಜಿಗರಿ ದೋಸ್ತ್ ಗಳು. ಚಿಕ್ಕವನಿದ್ದಾಗ ಒಂದು ಸಲ ರೇಶನ್ ಅಂಗಡಿಗೆ ಹೋಗಿ ಸಾಮಾನು ತರುವ ಜವಾಬ್ದಾರಿಯನ್ನು ಹೊತ್ತು ಚೀಲವನ್ನು ಹೆಗಲಿಗೆ ಹೊತ್ತು ಹೊರಟ. ಅಂಗಡಿಯಲ್ಲಿ ಉದ್ದನೆಯ ಕ್ಯೂ ನಲ್ಲಿ ನಿಂತು ಬಳಲಿ ಬೆಂಡಾದ ಪಾಪ. ಕೊನೆಗೂ ಇವನ ಸರದಿ ಬಂತು! ರೇಶನ್ ಅಂಗಡಿ ಕಾಕಾ "ರೇಶನ್ ಕಾರ್ಡ್ ಕೊಡಪ ತಮ್ಮ" ಅಂದಾಗಲೇ ನಾಗ್ಯನಿಗೆ ನೆನಪಾದದ್ದು, ತಾನು ಕಾರ್ಡು ಮನೆಯಲ್ಲಿ ಬಿಟ್ಟು ಬಂದ ವಿಷಯ! ಅಷ್ಟು ಅಗಾಧ ನೆನಪಿನ ಶಕ್ತಿ ಅವನದು. ಒಂದೇ ಉಸುರಿಗೆ ಮನೆಗೆ ಹೋಗಿ ಕಾರ್ಡು ತಂದ. ಬಂದ ಕೆಲಸ ಮುಗುದು ಮನೆಗೆ ವಾಪಸ್ಸು ಬಂದಾಗ ಅಪ್ಪ ಕೇಳಿದ "ಎಲ್ಲಿಲೆ ರೆಷನ್ನು ಮಂಗ್ಯಾನ ಮಗನೆ?", ಪಾಪ ನಾಗ್ಯಾ ಸಾಮಾನು ತುಂಬಿರುವ ಚೀಲವನ್ನು ಅಂಗಡಿಯಲ್ಲೇ ಬಿಟ್ಟು ಬಂದಿದ್ದ. ಮತ್ತೆ ಚೀಲ ತರಲು ಅಂಗಡಿಗೆ ತೆರಳಿದ, ಆದರೆ ದಾರಿಯಲ್ಲಿ ಅಪ್ಪ ತನಗೆ "ಮಂಗ್ಯಾನ ಮಗಾ" ಅಂತ ಬೈದರೆ, "ಮಂಗ್ಯಾ" ಯಾರು ಅನ್ನುವ ಚಿಂತೆ ಅವನಿಗೆ ಕಾಡದೆ ಇರಲಿಲ್ಲ!
 ಹೀಗೆ ನಾಗ್ಯಾ ಬೆಳೆದು ದೊಡ್ಡವನಾದ. ಅವನು ಬೆಳೆದಂತೆ ಮರೆವು ಕೂಡ ಅವನೊಂದಿಗೆ ಬೆಳೆಯಿತು. ಸಣ್ಣವನಿದ್ದಾಗ ಚೀಲ ಮರೆಯುತ್ತಿದ್ದವನು ದೊಡ್ಡವನಾದ ಮೇಲೆ ಮೊಬೈಲ್, ಕಾರ್, ಹೀಗೆ ಏನೇನೋ ಮರೆಯತೊಡಗಿದ. ಆದರೂ ಅದಕ್ಕೊಂದು ಮಿತಿ ಬೇಡವೇ? ಮದುವೆಯಾದ ಹೊಸತು, ಹೆಂಡತಿಯನ್ನು ಬೆಂಗಳೂರಿಗೆ ಕರೆದೊಯ್ದಿದ್ದ. ಎಲ್ಲ ಸುತ್ತಾಡಿ ವಾಪಸ್ಸು ಬರುವಾಗ ಅವಳನ್ನು ಅಲ್ಲೇ ಮರೆತು ಬಿಟ್ಟು ಬಂದಿದ್ದ! ಅವಳನ್ನು ನಿಜವಾಗಿಯೂ ಮರೆತು ಬಿಟ್ಟು ಬಂದಿದ್ದನೇ? ಅದಕ್ಕುತ್ತರ ಅವನೇ ಹೇಳಬೇಕು! ಆಗೆಲ್ಲ ಮೊಬೈಲ್ ಇರ್ಲಿಲ್ಲ, ಪಾಪ ಹೆಂಗೋ ಮನೆಗೆ ವಾಪಸ್ಸು ಬಂದಳು. ಪಾಪ ನಾಗ್ಯಾ!

ಆದರೆ ಈ weekness ನ್ನೇ ಎಷ್ಟೋ ಸಲಾ ಸದುಪಯೋಗ ಪಡಿಸಿಕೊಂಡ. ಹೆಂಡತಿಯ ಹುಟ್ಟಿದ ದಿನವೇ ಮರೆತು ಹೋಯಿತೆಂದು, ಅವನು ಅವಳಿಗೊಂದು gift ತರದಿದ್ದರೂ ಅವಳು ಬೇಜಾರು ಮಾಡಿಕೊಳ್ಳುತ್ತಿರಲಿಲ್ಲ, ಯಾಕಂದರೆ ಅವಳಿಗೆ ಇವನು ಮರೆಗುಳಿತನ ಗೊತ್ತು. ನಾಗ್ಯಾ ಬಚಾವು! ಗೆಳೆಯರಿಗೂ ಇವನ ಕಾಯಿಲೆ ಗೊತ್ತಿದ್ದುದರಿಂದ ಅವನಿಗೆ ಯಾವುದೇ ತೆರನಾದ ಜವಾಬ್ದಾರಿಗಳನ್ನು ಕೊಡುತ್ತಿರಲಿಲ್ಲ. "ಯಪ್ಪಾ ನಾಗ್ಯನ ನಂಬಿದರ ಮುಗದು ಹೋತು" ಅನ್ನೋದು ಎಲ್ಲರ ಅಂಬೋಣ ವಾಗಿತ್ತು. ನಾಗ್ಯಾ ಕಣ್ಣು ಮಿಟುಕಿಸುತ್ತಿದ್ದ!

ಒಂದು ಸಲ ಅವರ ಮನೆಗೆ ಹೋದಾಗ, ನಾಗ್ಯನ ಹೆಂಡತಿ ಗೊಳೋ ಅಂತ ಅತ್ತು ಬಿಟ್ಟಳು. "ಇವ್ರ ಮರಿಯೋ ಜಡ್ಡು ಅತೀಯಾಗ್ಯದ್ರೀ, ನನಗ ಸಾಕಾಗಿ ಹೊಗ್ಯದ" ಅಂದ್ಲು. ಅವಳು ಜಡ್ಡು ಅಂದದ್ದೇ ತಡ ನನಗೆ ಒಂದು ಐಡಿಯಾ ಬಂತು. ಬೇರೆ ಕಾಯಿಲೆ ತರಹ ಮರೆವಿಗೂ ಒಂದು ಔಷಧಿ ಇರಬೇಕು ಅಲ್ವೇ? ಅಲ್ಲಿಂದ ಶುರುವಾಯ್ತು ನನ್ನ ಹುಡುಕಾಟ. ಮರೆವಿಗೆ ಚಿಕಿತ್ಸೆ ಕೊಡುವ ಡಾಕ್ಟರ ನ ಹುಡುಕಾಟ. ಈಗೆಲ್ಲ ಹುಡುಕಾಡೋದು ಅಷ್ಟು ಕಷ್ಟದ ವಿಷಯವಲ್ಲ. ಗೂಗಲ್ ನಲ್ಲಿ ನಮಗೆ ಬೇಕಾದ ಪದಗಳನ್ನು ಹಾಕಿ ಒಂದು button ಒತ್ತಿದರಾಯ್ತು ನೂರಾರು ಪೇಜ್ ಗಳು ತೆರೆದುಕೊಳ್ಳುತ್ತೆ. ಒಂದು ಸೂಜಿಯನ್ನು ಹಿಡಿದು ಮನೆಯ ವರೆಗೂ ಎಲ್ಲ ವಿಷಯದ ಮಾಹಿತಿ ಸಿಗುತ್ತೆ. ಹೀಗೆ ಹುಡುಕುತ್ತಿರುವಾಗ ನನಗೆ ಸಿಕ್ಕಿದ್ದು ಡಾಕ್ಟರ ಮರಿಯಪ್ಪ ಅವರ ವಿಳಾಸ. ಅವರು ಮರೆಗುಳಿ ಗಳಿಗೆ ಔಷಧಿ ಕೊಡುವವರು. ಅದಕ್ಕೆ ಅವರ ಹೆಸರು ಮರಿಯಪ್ಪ ಇರಬಹುದಾ? ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಗೋಜಿಗೆ ನಾನು ಹೋಗಲಿಲ್ಲ ......

ಡಾ.ಮರಿಯಪ್ಪನವರ ದವಾಖಾನೆಗೆ ತಲುಪಿದೆವು. ಅಲ್ಲಿ ಹುಲು ಮಾನವರ ಸರದಿ ನಿಂತಿರುವ ಪರಿ ಹನುಮಂತನ ಬಾಲವನ್ನು ನೆನಪಿಸುತ್ತಿತ್ತು. ಜಗತ್ತಿನಲ್ಲಿ ಇಷ್ಟೊಂದು ಮರೆಗುಳಿಗಳಿದ್ದಾರೆಯೇ? ನನಗೆ ಆಶ್ಚರ್ಯವಾಗುತ್ತಿತ್ತು.

ಅಂತು ಎರಡು ಗಂಟೆ ಕಾಯ್ದ ಮೇಲೆ ಮರಿಯಪ್ಪನವರ ದರ್ಶನ ಭಾಗ್ಯ ದೊರೆಯಿತು. ನಾಗ್ಯಾನ ಸಮಸ್ಸೆಗಳನ್ನು ತುಂಬಾ ಸಂಯಮದಿಂದ ಕೇಳಿದರು. ಅವನ ಮರೆವಿನಿಂದಾದ ಅನಾಹುತಗಳ ಒಂದಿಷ್ಟು ಉದಾಹರಣೆಗಳನ್ನು ಅವರ ಮುಂದಿಟ್ಟೆ. ಅವರು ವಿಚಲಿತರಾದಂತೆ ಕಾಣಲಿಲ್ಲ. ಇಂಥ ಎಷ್ಟೋ ನಮೂನೆ ಗಳನ್ನು ನೋಡಿದ್ದಾರೋ ಅವರು! ಒಂದಿಷ್ಟು ಪರೀಕ್ಷೆಗಳನ್ನು ಮಾಡಿಸಲು ಹೇಳಿ ಸಧ್ಯಕ್ಕೆ ಕೈ ತೊಳೆದುಕೊಂಡರು. ಮುಂದಿನ ವಾರ ಮತ್ತೆ ಭೇಟಿ ನಿಗದಿಯಾಯ್ತು. ಒಂದು ಸಾವಿರ ರೂಪಾಯಿ ಮರೆಯದೆ ವಸೂಲಿ ಮಾಡಿದರು. ನಾನ್ಯಾಕೆ ಡಾಕ್ಟರ ಆಗಲಿಲ್ಲ ಅಂತ ನಾನು ಮರುಗಿದೆ. ದಿನಕ್ಕೆ ಸುಮಾರು ಐವತ್ತು ಜನ ಬಂದರೂ ಐವತ್ತು ಸಾವಿರ ಆಯಿತಲ್ಲವೇ ಅಂತ ಮನಸಿನಲ್ಲೇ ಲೆಕ್ಕ ಹಾಕಿದಾಗ ಇನ್ನು ಸಂಕಟವಾಯ್ತು.

ಮುಂದಿನ ವಾರ ಎಲ್ಲ ಪರೀಕ್ಷೆಗಳನ್ನು ಮಾಡಿಸಿಕೊಂಡು ಮತ್ತೆ ಡಾಕ್ಟರ ಬಳಿ ಹೋದೆವು. ನಾನು ನಾಗ್ಯನ ಸಮಸ್ಸೆ ಬಗೆಹರಿಸುವ ಪಣ ತೊಟ್ಟಾಗಿತ್ತು. ರಿಪೋರ್ಟ್ ಗಳನ್ನು ಡಾಕ್ಟರ ಮುಂದೆ ಇಟ್ಟೆವು. ಅದರಲ್ಲಿ ವಿಧ ವಿಧವಾದ ಕೋನಗಳಲ್ಲಿ ನಗ್ಯಾನ ತಲೆಯ ಸ್ಕ್ಯಾನ್ ಮಾಡಿಸಿದ ಚಿತ್ರ ಗಳಿದ್ದವು. ಅದನ್ನು ನೋಡಿ ನನಗೆ ಸಮಾಧಾನವಾಯ್ತು. ಯಾಕಂದರೆ ಅದರಿಂದ ನಾಗ್ಯಾನಿಗೆ ಮಿದುಳು ಇರುವುದು ಖಚಿತವಾಗಿತ್ತು! ಎಲ್ಲ ರಿಪೋರ್ಟ್ ಗಳನ್ನು ಕೂಲಂಕುಶವಾಗಿ ಪರೀಕ್ಷಿಸಿದ ವೈದ್ಯರು ಒಂದಿಷ್ಟು ಗುಳಿಗೆ ಗಳನ್ನು ಕೊಟ್ಟರು. ಎರಡು ತಿಂಗಳ ಅವಧಿಯ ಕೋರ್ಸ್. ಮತ್ತೆ ಐದು ಸಾವಿರ ಬಾಚಿಕೊಂಡರು. ಔಷಧಿ ಮರೆಯದೆ ತೆಗೆದುಕೊಳ್ಳಿ ಅಂತ ಉಪದೇಶಿಸಿದ್ದು ಸ್ವಲ್ಪ ಹಾಸ್ಯಾಸ್ಪದ ವಾಗಿತ್ತು. ದಿನಕ್ಕೆ ಮೂರು ಸರ್ತಿ ಮರೆಯದೆ ಗುಳಿಗೆ ತಿನ್ನುವುದು ಮರೆಗುಳಿ ನಾಗ್ಯನಿಗೆ ಸಾಧ್ಯವೇ? ನನಗದು ಚಿಂತೆಯ ವಿಷಯವೂ ಆಗಿತ್ತು. ಅದಕ್ಕೂ ಪರಿಹಾರವಿತ್ತು. ಸಧ್ಯ ಅವನ ಹೆಂಡತಿ ಮರೆಗುಳಿ ಇರಲಿಲ್ಲವಲ್ಲ! ಅವಳಿಗೆ ಗುಳಿಗೆ ಯಾವಾಗ ಕೊಡಬೇಕು ಅಂತ ತಿಳಿಸಿ ಹೇಳಿ ಮನೆಗೆ ಹೋದೆ.

ಎರಡು ತಿಂಗಳು ಹೀಗೆ ಕಳೆಯಿತು. ಅಲ್ಲಿಯವರೆಗೆ ನಾಗ್ಯಾ ಮತ್ತು ನಾನು ಭೇಟಿಯಾಗುವುದು ಸಾಧ್ಯವಾಗಿರಲಿಲ್ಲ. ಅವತ್ತೊಂದು ದಿನ ನಾಗ್ಯಾನ ಫೋನ್ ಬಂತು. ಮರೆಯದೆ ಫೋನ್ ಮಾಡಿದ್ದು ಕಂಡು ಖುಷಿಯಾಯ್ತು. ಔಷಧಿ ಕೆಲಸ ಮಾಡಿರುವುದು ನಿಚ್ಚಳವಾಗಿತ್ತು. ಮರಿಯಪ್ಪನವರ ಬಗ್ಗೆ ಅಭಿಮಾನ ಮೂಡಿತು.


"ಹೇಳೋ ನಾಗ್ಯಾ ಅರಾಮಿದ್ದಿಯ?" ಅಂತ ಕೇಳಿದೆ.

"ಹೂನಪ್ಪ ನೀ ಹೆಂಗಿದ್ದಿ?" ಅಂತ ಕೇಳಿದ. ಉಭಯ ಕುಶಲೋಪರಿಗಳ ನಂತರ

"ನೀ ಹೋಗಿದ್ದು ಕೆಲಸ ಏನಾತು" ಅಂದ, ಯಾವ ಕೆಲಸ ಅಂತ ನಾನು ಗೊಂದಲದಲ್ಲಿ ಬಿದ್ದೆ. ಅಥವಾ ನಾನೇ ಏನಾದರೂ ಇವನಿಗೆ ಹೇಳಿ ಮರೆತುಬಿಟ್ಟೆನಾ? ಡಾ. ಮರಿಯಪ್ಪನವರ ಬರಿ ಹೋಗುವ ಸರದಿ ಈಗ ನಂದು ಅಂತ ಅನಿಸ್ತು. ಈ ಗೊಂದಲ ಪರಿಹರಿಸಿಕೊಳ್ಳಲು ನಾಗ್ಯಾನಿಗೆ ಕೆಲವು ಪ್ರಶ್ನೆ ಗಳನ್ನು ಕೇಳಲು ತೊಡಗಿದಾಗ, ನಾಗ್ಯಾ ಅರುಹಿದ್ದು ಹೀಗೆ,

"ಓ ಸಾರೀ ಪಾ, ನಾನು ರವಿಗೆ ಒಂದು ಕೆಲ್ಸಾ ಹೇಳಿದ್ದೆ, ಅದರ ಬಗ್ಗೆ ಅವಂಗ ಕೇಳುದು ಬಿಟ್ಟು ನಿನಗ ಫೋನ್ ಮಾಡೀನಿ ನೋಡು" ಅಂದ.

ನಾನು ಫೋನ್ ಕುಕ್ಕರಿಸಿದೆ. ಈ "ಮಂಗ್ಯಾನ ಮಗನಿಗೆ" ಮರೆವು ಈ ಜನ್ಮದಲ್ಲಿ ಬಿಡುವುದಲ್ಲ ಅಂತ ಸ್ವಲ್ಪ ತಡವಾಗಿ ಅರ್ಥ ಮಾಡಿಕೊಂಡೆ. ಆದರೆ ಯಾಕೋ ಮರಿಯಪ್ಪ ಅವರ ನೆನಪು ತುಂಬಾ ಕಾಡಿತು!

5 comments:

  1. ಆ ನಾಗ್ಯನ್ನ ನೆನಪು ಇಟಕೊಂಡಿರೀ ಅದು ಧೊಡ್ಡಮಾತು... ಏಸ್ಟ ಆದ್ರು ನೀವೊ ನಾಗ್ಯನ್ ಜಿಗರಿದೂಸ್ತ... ಭ್ಹಾಳ ಛೊಲೂ ಬರದಿರಿ! ಛೊಲೊ ಅನಸ್ತು ಓದಿ

    ReplyDelete
  2. ಮರೆಗುಳಿತನದ ಬಗೆಗಿನ ನಿಮ್ಮ ಬರಹ ಇಷ್ಟ ಆಯ್ತು, 'ಮುಂದುವರೆಯುವುದು' ಅಂದೀರೀ ಮರಿಬ್ಯಾಡ್ರೀ ಗುರೂ!

    ReplyDelete
  3. ಮೂರ್ತಿJuly 2, 2011 at 1:56 AM

    ಮರೆತಾನೆಂದು ಚೀಟಿ ಕೊಟ್ಟರೆ ಚೀಟಿಯನ್ನೇ ನೋಡಲು ಮರೆತರೆ ಏನು ತಾನೇ ಮಾಡಲು ಸಾಧ್ಯ? .....ಹ ಹ್ಹ..ಹ್ಹಾ...ಇಷ್ಟಾ ಆಯ್ತು!

    'ಮರಿಯಪ್ಪ' ಎಂಬ ಹೆಸರಿಗೂ ಅವರ ವ್ರತ್ತಿಗೂ ನೀವು ಹಾಕಿದ ತಾಳೆ ವಿಶೆಷ!. ಉಳಿದವರೆಲ್ಲ ಹೇಳಿದಂತೆ, ಮುಂದಿನ್ ಭಾಗ ಬೇಗ ಬರೆಯಲು ಮರೆಯದಿರಿ

    ReplyDelete
  4. sakhathagide, ee koodle share maaduve

    ReplyDelete