Tuesday, July 29, 2014

ಇರುಳಲಿ ಕಂಡವಳು! (ದೆವ್ವದ ಕಥೆಗಳು – ಭಾಗ ೨)

 
ಬಿದರಕಾನ ಅನ್ನುವ ಮಲೆನಾಡಿನ ಸುಂದರ ಹಳ್ಳಿಗೆ, ನನ್ನ ಮಾವನ ಊರಾದ ಕಿಬ್ಬಳ್ಳಿಯಿಂದ ಒಂದು ಗಂಟೆಯ ದಾರಿ. ಕಿಲೋಮೀಟರುಗಳ ಲೆಕ್ಕದಲ್ಲಿ ಬರಿ ಹದಿನೈದು. ಆದರೆ ಬಳುಕುತ್ತ ಹರಿಯುವ ಮೋಹಕ ನದಿ ಅಘನಾಷಿನಿಯ ಪಕ್ಕಕ್ಕೆ ಚಾಚಿಕೊಂಡ ಏರಿಳಿತದ, ತಿರುವುಗಳಿಂದಲೇ ಭೂಷಿತವಾದ ಘಾಟ್ ರಸ್ತೆಯನ್ನು ಕ್ರಮಿಸುವುದಕ್ಕೆ ಒಂದು ಗಂಟೆ ಬೇಕು. ಆ ರಸ್ತೆಯಲ್ಲಿ ಕಾರು ಓಡಿಸುವುದೇ ಒಂದು ಖುಷಿ, ಎಷ್ಟೋ ಸಲ ಆ ಖುಷಿ ಓಡಿಸುವವರಿಗೆ ಮಾತ್ರ! ಯಾಕೆಂದರೆ ಹಿಂದೆ ಕುಳಿತವರು ರೋಡಿನ ತಿರುವಿಂಗ್ಸ್ ನಲ್ಲಿ ಹೊಟ್ಟೆ ತೊಳಸಿಕೊಳ್ಳುವವರಾಗಿದ್ದರೆ, 'ಗೊಳ್' ಅಂತ ವಾಂತಿ ಮಾಡಿಕೊಂಡು, ಕಾರಿನ ಬಣ್ಣವನ್ನೇ ಬದಲಾಯಿಸಿಬಿಡುತ್ತಾರೆ. ಅದಕ್ಕೆ ಸಲ್ಪ ನಿಧಾನ ಓಡಿಸಿಕೊಂಡು ಹೋಗಬೇಕು. ಬಿದರಕಾನ್ ದಲ್ಲಿ ನನ್ನ 'ಧಪ' ನ ಚಿಕ್ಕಮ್ಮನ ಮನೆ ಇದೆ. ('ಧಪ' ಅಂದ್ರೆ ಧರ್ಮ ಪತ್ನಿ ಅಂತ ಬಿಡಿಸಿ ಹೇಳಬೇಕೆ?!) ಊರಿಗೆ ಹೋದಾಗಲೊಮ್ಮೆ ಬಿದರಕಾನಿಗೆ ಹೋಗುವುದು ನಮ್ಮ ಅಲಿಖಿತ ನಿಯಮ. ಆ ಸಲ ನನ್ನ ತಮ್ಮ ಹಾಗೂ ಅವನ ಹೆಂಡತಿಯೂ ಬಂದಿದ್ದರು. ಎಲ್ಲರನ್ನೂ ಕರೆದುಕೊಂಡೇ ಅಲ್ಲಿಗೆ ಹೋಗಿದ್ದೆವು. 
ಪ್ರತೀ ಸಲ ಚಿಕ್ಕಮ್ಮನ ಮನೆಗೆ ಹೋದಾಗಲೂ ಬೆಳಿಗ್ಗೆಯೇ ಹೋಗಿರುತ್ತೇವೆ. ನಂತರ ಮದ್ಯಾಹ್ನದ ಊಟ; ಊಟ ಆದಮೇಲೆ ಹರಟೆ; ಸಂಜೆಗೆ ಅವಲಕ್ಕಿ, ಹಲಸಿನ ಚಿಪ್ಸು, ಸೌತೆಕಾಯಿ, ಕಾಳು ಮೆಣಸಿನ ಚಟ್ನಿ, ಜೊತೆಗೆ ಚಾ. ಇದೆಲ್ಲದರ ಜೊತೆಗೆ ಮತ್ತೆ ಹರಟೆ! ಅಲ್ಲಿಗೆ ಹೋದರೆ ಏಳಲು ಮನಸ್ಸೇ ಬಾರದು. ಹಾಗೆಯೇ ಕತ್ತಲಾಗಿಬಿಡುತ್ತದೆ. ಅಷ್ಟೊತ್ತಿಗೆ, ರಾತ್ರಿಯಾಯ್ತು ಊಟ ಮಾಡಿ ಇಲ್ಲೇ ಇದ್ದು ಬೆಳಿಗ್ಗೆ ಹೋಗಿ ಅಂತ ಒತ್ತಾಯ ಮಾಡುತ್ತಾರೆ. ಹಾಗೆ ಮಾಡಿದರೆ ಕಿಬ್ಬಳ್ಳಿಯಲ್ಲಿ ನನ್ನ ಅತ್ತೆ ಸುಮ್ಮನಿರುತ್ತಾರೆಯೆ? ನಾವು, ಇಲ್ಲ ವಾಪಸ್ಸು ಅತ್ತೆ ಮನೆಗೆ ಹೋಗಲೇಬೇಕು ಅನ್ನುತ್ತೇವೆ. ಅವತ್ತೂ ಹಾಗೇ ಆಯ್ತು. ನಾವು ಹೋಗುತ್ತೇವೆ ಅನ್ನುತ್ತಲೆ ಹರಟೆ ಹೊಡೆಯುತ್ತಾ ಕೂತು ಬಿಟ್ಟೆವು. ಸ್ವಲ್ಪ ಸ್ವಲ್ಪ ಅನ್ನುತ್ತಲೇ ಊಟವನ್ನೂ ಮುಗಿಸಿದೆವು! ಕಿಬ್ಬಳ್ಳಿಗೆ ವಾಪಸ್ಸಾಗಲೇಬೇಕಿತ್ತು. ಕತ್ತಲೇನೊ ಆಗಿತ್ತು. ಆದರೆ ಹಿಂದೆ ಎಷ್ಟೋ ಸರ್ತಿ ಕತ್ತಲಲ್ಲಿ ಈ ರಸ್ತೆಯಲ್ಲಿ ಗಾಡಿ ಓಡಿಸಿದ ಅನುಭವದ ಘಮಿಂಡಿ ನನಗಿತ್ತು. ಅದೂ ಅಲ್ಲದೇ ಅವತ್ತು ಮಳೆಯೂ ಇರಲಿಲ್ಲ. ಆಕಾಶ, ಮೋಡಗಳಿಲ್ಲದೇ ಶುಭ್ರವಾಗಿತ್ತಲ್ಲದೇ ನಕ್ಷತ್ರಗಳಿಂದ ಫಳ ಫಳ ಹೊಳೆಯುತ್ತಿತ್ತು. ನಾವೆಲ್ಲಾ ಚಿಕ್ಕಮ್ಮನ ಮನೆ ಬಿಟ್ಟಾಗ ರಾತ್ರಿ ಹತ್ತು ಹೊಡೆದಿತ್ತು.    
ಅದು ಇದು ಮಾತಾಡಿಕೊಂಡು ನಿಧಾನವಾಗಿ ಗಾಡಿ ಒಡಿಸುತ್ತಿದ್ದೆ. ಆಗಲಷ್ಟೇ ಎಲ್ಲರೂ ಹೊಟ್ಟೆ ಬಿರಿಯುವಂತೆ ಊಟ ಮಾಡಿದ್ದರಿಂದ ಜೋರಾಗಿ ಓಡಿಸಿ ನನ್ನ ಕಾರಿನ ಬಣ್ಣ ಬದಲಿಸುವ ಇರಾದೆ ನನಗಂತೂ ಇರಲಿಲ್ಲ! ಅರ್ಧ ದಾರಿ ಮುಟ್ಟಿರಬೇಕು, ಹರಸಿಕಟ್ಟಾ ದಾಟಿ ತುಂಬಾ ಮುಂದೆ ಬಂದಿದ್ದೆವು. ಅಲ್ಲೊಂದು ಹೇರ್ ಪಿನ್ ತಿರುವು. ಅರ್ಧದಷ್ಟಾದರೂ ತಿರುಗುವವರೆಗೆ ಮುಂದಿನದೇನು ಕಾಣದು. ನನ್ನ ಹೆಡ್ ಲೈಟ್ ಹೈ ಬೀಮ್ ನಲ್ಲಿತ್ತು. ನಿಧಾನವಾಗಿ ತಿರುಗಿಸಿ ಎದುರಿಗೆ ನೋಡಿದರೆ ಕಾರಿನ ಎಡಗಡೆಗೊಂದು ಉದ್ದನೆಯ ಅಕೃತಿ ನಿಂತಿದ್ದು ಕಂಡಿತು. ಅದು ಮೊದಲು ನನಗೇ ಕಂಡಿತಾದರೂ ಕ್ರಮೇಣ ಕಾರಿನಲ್ಲಿ ನನ್ನೊಟ್ಟಿಗಿದ್ದ ಎಲ್ಲರೂ ಗಮನಿಸಿದರು. ಅದು ಸುಮಾರು ಐವತ್ತು ವಯಸ್ಸಿನ ಹೆಣ್ಣು ಮಗಳು. ಮುಖ ನಮ್ಮ ಕಡೆಗೇ ವಾಲಿದಂತಿದೆ. ಅರ್ಧ ಭಾಗ ಸುಟ್ಟಂತೆ ವಿಕಾರವಾಗಿತ್ತು. ಆ ದೃಶ್ಯ ನೋಡಿ ಕಾರಿನಲ್ಲಿದ್ದ ಎಲ್ಲರೂ ಅ ವಿಕಾರವಾದ ವ್ಯಕ್ತಿ ದೆವ್ವವೇ ಅಂತ ಹೆದರಿ ಕಂಗಾಲಾಗಿದ್ದರು.  ದೆವ್ವ ಗಿವ್ವ ಏನೂ ಇಲ್ಲ ಅಂತ ಎಲ್ಲರಿಗೂ ಧೈರ್ಯ ಹೇಳುತ್ತಿದ್ದೆನಾದರೂ ನನಗೂ ಒಳಗೊಳಗೆ ಪುಕು ಪುಕು! ಆ ತಂಪಿನಲ್ಲೂ ನಾ ಬೆವರಿದ್ದೆ. ಕಾಲು, ತೊಡೆಗಳಲ್ಲಿ ಶಕ್ತಿ ಕಳೆದುಕೊಂಡ ಅನುಭವ. ನಾನು ನಡಗುತ್ತಲೇ ಕಾರನ್ನು ಅಲ್ಲಿಂದ ಮುಂದೆ ಜೋರಾಗಿ ಓಡಿಸಿದೆ. ಎಲ್ಲರೂ ಆ ಕ್ಷಣದಲ್ಲಿ ಮಾತು ನಿಲ್ಲಿಸಿದ್ದರು. ನನ್ನ ತಮ್ಮನ ಎರಡು ವರ್ಷದ ಮಗಳು ಮಾತ್ರ ಮೇಲೇನೋ ತೋರಿಸುತ್ತ ವಟ ವಟನೇ ಮಾತಾಡುತ್ತಿದ್ದುದು ನಮ್ಮ ಭಯವನ್ನು ಇನ್ನೂ ಹೆಚ್ಚಿಸಿತ್ತು. ಅಲ್ಲಿ ನೋಡಿದ್ದು ಭೂತವೇ ಅಂತ ನಮಗೇ ಖಾತ್ರಿಯಾಗಿತ್ತು. ಯಾಕಂದ್ರೆ ನಡೆದುಕೊಂಡು ಬರುವಷ್ಟು ಹತ್ತಿರದಲ್ಲಿ ಅಲ್ಲಿ ಯಾವುದೇ ಹಳ್ಳಿ ಅಥವ ಮನೆ ಇರಲಿಲ್ಲ.ಅಮೇಲೆ ಅವತ್ತು ಅಮವಾಸ್ಯೆ ಇದ್ದದ್ದು ನಮ್ಮ ಸಂಶಯವನ್ನು ಮತ್ತಷ್ಟು ಧೃಡಪಡಿಸಿತ್ತು. 
ಆ ಜಾಗದಿಂದ ಎಷ್ಟೊ ಮುಂದೆ ಬಂದೆವಾದರೂ ದೆವ್ವ ನಮ್ಮ ಮನದಿಂದ ಹೊರ ಹೋಗಿರಲಿಲ್ಲ. ಯಾರಿಗೂ ಹಿಂತಿರುಗಿ ನೋಡುವ ಧೈರ್ಯವಿರಲಿಲ್ಲ. ಆ ದೆವ್ವ ನಮ್ಮ ಬೆನ್ನು ಹತ್ತಿಕೊಂಡು ಬರುತ್ತಿರಬಹುದೇನೊ ಅನ್ನುವ ಸಂಶಯ! ರಸ್ತೆಯಲ್ಲಿ ಪ್ರತಿ ಸಲ ತಿರುವು ಬಂದಾಗಲೂ ನನಗೆ ಆ ಹೆಣ್ಣು ಮಗಳು ಮತ್ತೆ ಕಂಡುಬಿಟ್ಟರೆ ಅನ್ನುವ ಯೋಚನೆ ಬರುತ್ತಿದ್ದಂತೇ ಹೊಟ್ಟೆಯಲ್ಲಿ ರುಮ್ ಅನ್ನುವ ಅನುಭವ. ನನ್ನ ತಮ್ಮನ ಮಗಳು ಮಾತ್ರ ತನ್ನ ತೊದಲು ನುಡಿಗಳಲ್ಲಿ ನಿರಂತರವಾಗಿ ಇನ್ನೂ ವಟಗುಡುವುದ ಮುಂದುವರಿಸಿದ್ದಳು! 
ಅಂತೂ ಇಂತೂ ಊರು ಹತ್ತಿರ ಬಂದಂತೆ ನನ್ನ ಧೈರ್ಯ ಇಮ್ಮಡಿಸಿತು. ಮಾವನ ಮನೆ ಮುಟ್ಟಿ ದೊಡ್ಡ ನಿಟ್ಟುಸಿರಿಟ್ಟೆವು. ಮಾವನಿಗೆ ನಮ್ಮ ಅನುಭವ ಹೇಳಲಾಗಿ, ಅವರು ಎಳ್ಳಷ್ಟೂ ಚಕಿತರಾಗದೆ, "ಹೌದ ಮಾರಾಯಾ … ಅಲ್ಲೊಂದು ಪಿಶಾಚಿ ಇದ್ದು. ಸುಮಾರು ಜನ ನೋಡಿದ್ವಡಾ" ಅನ್ನಬೇಕೆ!? ಅಂದರೆ ನಾವು ನೋಡಿದ್ದು ನಿಜವಾದ ಭೂತವೇ! ಅವತ್ತು ರಾತ್ರಿ ನಿದ್ದೆಯಲ್ಲಿ ಬೇರೆ ಯಾರೂ ಬರಲೇ ಇಲ್ಲ, ಅದೇ ಮೋಹಿನಿಯದೇ ದರ್ಬಾರು.        
ಆಮೇಲೆ ನಾಲ್ಕು ದಿನ ಮಾವನ ಮನೆಯಲ್ಲಿದ್ದೆವು. ದೆವ್ವದ ವಿಚಾರ ಸ್ವಲ್ಪ ಮಟ್ಟಿಗೆ ಮನದಿಂದ ಮರೆಯಾಗಿತ್ತಾದರೂ ಪೂರ್ತಿಯಾಗಿ ಮರೆತಿರಲಿಲ್ಲ. ವಾಪಸ್ಸು ಬೆಂಗಳೂರಿಗೆ ಹೋಗುವ ಸಮಯ ಬಂದಿತ್ತು. ನಾವು ಅದೇ ರೋಡಿನಲ್ಲಿ ಹೋಗಬೇಕಿತ್ತಾದರೂ ಬೆಳಗಿನ ಪ್ರಯಾಣವಾಗಿದ್ದರಿಂದ ಅಷ್ಟು ಹೆದರಿಕೆ ಇರಲಿಲ್ಲ. ಅದೇ ದಾರಿಯಲ್ಲಿ ಚಿಕ್ಕಮ್ಮನ ಮನೆಯಾದ್ದರಿಂದ ಮತ್ತೊಂದು ಚಿಕ್ಕ ಭೇಟಿ ಕೊಟ್ಟು ಹೊಗುವುದು ನಮ್ಮ ಮತ್ತೊಂದು ಅಲಿಖಿತ ನಿಯಮವಾಗಿತ್ತು. ದಾರಿಯಲ್ಲಿ ಬರುವಾಗ ಮತ್ತೆ ಆ ದೆವ್ವವನ್ನು ಕಂಡ ಸ್ಪಾಟ್ ನೋಡಿ ದೆವ್ವವಿಲ್ಲದ್ದು ಖಚಿತಪಡಿಸಿಕೊಂಡು ಮುಂದೆ ಹೊರಟೆವು. ಚಿಕ್ಕಮ್ಮನ ಮನೆಯಲ್ಲಿ ಸ್ವಲ್ಪ ಹೊತ್ತು ಇದ್ದು, ಅವರ ಮನೆಯಿಂದ ಹೊರಡುವ ಸ್ವಲ್ಪ ಮೊದಲು ನಾವು ಕತ್ತಲಲ್ಲಿ ಕಂಡ ದೆವ್ವದ ವಿಷಯ ಪ್ರಸ್ತಾಪಿಸಿದೆವು. ಚಿಕ್ಕಪ್ಪ ಸಣ್ಣ ನಗು ನಕ್ಕು 'ಓ ಜಾನಕಿನ್ನ ನೋಡಿದ್ರಾ?' ಅಂದರು. ಅಯ್ಯೊ ಕರ್ಮವೇ ಇಲ್ಲಿನವರು ದೆವ್ವಕ್ಕೂ ಒಂದು ಹೆಸರಿಡುತ್ತಾರೆಯೆ? ಅಥವ ಆ ದೆವ್ವ ಜಾನಕಿ ಅನ್ನುವ ಹೆಣ್ಣುಮಗಳ್ದೇ ಇರಬೇಕು ಅಂತ ನಾನು ಅಂದಾಜಿಸಿದೆ.    ಅವರು ಮುಂದುವರಿಸಿ "ಅವಳು ಯಕ್ಷಗಾನದ ಹಾಡುಗಳನ್ನು ತುಂಬಾ ಚೆನ್ನಾಗಿ ಹಾಡ್ತಾಳೆ" ಅಂದ್ರು. ದೆವ್ವವನ್ನು ನೋಡಿಯೇ ನಾವು ಕಂಗಾಲಾಗಿದ್ದರೆ ಆ ದೆವ್ವದ ಕಂಠದಿಂದ ಯಕ್ಷಗಾನದ ಹಾಡು ಕೇಳಿ ಆಸ್ವಾದಿಸಿದ್ದ ಚಿಕ್ಕಪ್ಪನ ಧೈರ್ಯಕ್ಕೆ ನಾನು ತಲೆದೂಗಿದೆ!
"ದೆವ್ವಾನೂ ಹಾಡ್ತಾವೇನ್ರೀ?" ಅಂತ ನಾನು ಮೂಗಿನ ಮೇಲೆ ಬೆರಳಿಟ್ಟು ಕೇಳುತ್ತಿದ್ದರೆ, ಚಿಕ್ಕಪ್ಪ ಗಹಗಹಿಸಿ ನಕ್ಕು "ಅದ್ಯಾವ ದೆವ್ವ ಮಾರಾಯ. ಅವಳೊಬ್ಬ, ಸಲ್ಪ ಬುದ್ಧಿ ಸ್ಥೀಮಿತದಲ್ಲಿಲ್ಲದ ಹೆಣ್ಣುಮಗಳು. ರಾತ್ರಿಯಲ್ಲಾ ಹಿಂಗೇ ಅಡ್ಡಾಡ್ತಿರ್ತಾಳೆ. ಒಂದು ಬೆಂಕಿಯ ಅವಘಡದಲ್ಲಿ ಅವಳ ಮುಖದ ಒಂದು ಭಾಗ ಸುಟ್ಟಿದೆ. ಅದಕ್ಕೆ ನಿಮಗೆ ಕತ್ತಲಲ್ಲಿ ಆ ತರಹ ಕಂಡಿದ್ದು" ಅಂದಾಗ. ನನಗೆ ನಗಬೇಕೋ ಅಳಬೇಕೊ ತಿಳಿಯದಾಗಿ "ನಾನ್ ಹೇಳ್ದೆ ಚಿಕ್ಕಪ್ಪ, ಅದು ದೆವ್ವ ಅಲ್ಲ ಅಂಥೇಳಿ. ಇವರೆಲ್ಲ ಸುಮ್ ಸುಮ್ನ ಹೆದರಿ ಕಂಗಾಲಾಗಿದ್ರು" ಅಂದು …. "ನಡ್ರೀ ಹೊಗೋಣ, ಬೆಂಗಳೂರು ಮುಟ್ಲಿಕ್ಕೆ ತಡಾ ಆಗ್ತದ" ಅಂತ ಅಲ್ಲಿಂದ ಕಾಲು ಕಿತ್ತೆ! 
ದಾರಿಯಲ್ಲಿ ಯೋಚಿಸುತ್ತಿದ್ದೆ, ಅಕಸ್ಮಾತ್ ಆ ಹೆಣ್ಣುಮಗಳು ಅವತ್ತು ರಾತ್ರಿ ಯಕ್ಷಗಾನದ ಪದಗಳನ್ನು ನಮ್ಮೆದುರು ಹಾಡಿದ್ದರೆ ನಮ್ಮ ಗತಿ ಏನಾಗುತ್ತಿತ್ತು??!

6 comments:

  1. ತು೦ಬ ಚೆನ್ನಗಿತ್ತು ನಿಮ್ಮ ದೆವ್ವದ ಕಥೆ ಆದ್ರೆ ಇನಸ್ಟು
    ಭಯ೦ಕರವಾಗಿದಿದರೆ ಚೆನ್ನಗಿ ಇರುತ್ತಿತು.......ನೈಸ್ ಸ್ಟೊರಿ.

    ReplyDelete
  2. Simple story..well narrated..expecting more from you. ..

    ReplyDelete