Saturday, April 25, 2015

ನಾನು ಮತ್ತು ನನ್ನ ನಾಯಿ ಇಬ್ಬರೂ ನಿರ್ಗತಿಕರು!

(http://www.panjumagazine.com/?p=10591)
 
ಅಮೆರಿಕಾಕ್ಕೆ ಬಂದು ಇವತ್ತಿಗೆ ಆಗ್ಲೇ ಒಂದು ವಾರವಾಯ್ತೆ ಅಂತ ವೆಂಕಣ್ಣ ತಲೆ ಕೆರೆಯುತ್ತಾ ಯೋಚಿಸುತ್ತಿದ್ದಾಗಲೇ ಮಗಳು ಖುಷಿ ಇವನ ಭುಜ ಹಿಡಿದು ಅಲುಗಾಡಿಸುತ್ತಿದ್ದಳು.
“ಅಪ್ಪ ಅಮೇರಿಕಾ ಬೋರಿಂಗ್ ಅದ” ಅಂದಳು. 
ಶಾಲೆಗೆ ಹೋಗುವ ರಗಳೆ ಇಲ್ಲ ಅಂತ ಬಂದ ಹೊಸತು ಅವಳಿಗೆ ಖುಷಿಯಾಗಿತ್ತಾದರೂ, ಈಗ ಅವಳಿಗೆ ಬೇಜಾರು ಶುರು ಆಗಿತ್ತು. ಹೊಸ ಜಾಗ, ಅದೂ ಅಲ್ಲದೆ  ಅವಳ ಜೊತೆಗೆ ಆಡಲು ಅಲ್ಲಿ ಯಾರೂ ಇರಲಿಲ್ಲ. ಆದರೆ  ಇವತ್ತು ಶನಿವಾರ, ವೆಂಕಣ್ಣನ ಆಫೀಸಿಗೆ ರಜೆ. ಅದಕ್ಕೆ ಹೆಂಡತಿ ಮಗಳನ್ನು ತಿರುಗಾಟಕ್ಕೆ ಕರೆದುಕೊಂಡು ಹೋಗುವ ನಿರ್ಧಾರ ಇವನು ಆಗಲೇ ಮಾಡಿಯಾಗಿತ್ತು.
“ಪುಟ್ಟಿ ನೀ ಇನ್ನೂ ಅಮೇರಿಕಾ ನೋಡೇ ಇಲ್ಲ! ಇವತ್ತ ನಿಮಗ ಸಾಲ್ಟ್ ಲೇಕ್ ಸಿಟಿ ಗೆ ಕರ್ಕೊಂಡ್ ಹೋಗ್ತೀನಿ!” ಏನೋ ಹೊಸ ತರಹದ ಊರಿನ ಹೆಸರು ಕೇಳಿ ಅವಳ ಕಣ್ಣುಗಳು ಅರಳಿದ್ದವು.
“ಹೇ ವಾವ್, ಆದ್ರ ಹೆಸರು ಮಜಾ ಅದ ಅಲ್ಲಾ? ಹಂಗ್ಯಾಕ ಅಂತಾರ ಅದಕ್ಕ?”   
“….. ಅಲ್ಲೇ ಹೋದ ಮ್ಯಾಲೆ ಹೇಳ್ತೀನಿ. ಅದು ಸರ್ಪ್ರೈಸ್!” ಅಂದ. ಯಾಕೆಂದರೆ ಆ ಊರಿಗೆ ಆ ಹೆಸರು ಯಾಕೆ ಬಂತು ಅಂತ ಅವನಿಗೂ ಗೊತ್ತಿರಲಿಲ್ಲ!
“ಅಲ್ಲಿಗೆ ಹೆಂಗ್ ಹೋಗೋದು?” ಅವಳ ಪ್ರಶ್ನೆ ಸಹಜವಾಗಿತ್ತು. ಯಾಕೆಂದರೆ ಬೆಂಗಳೂರಿನಲ್ಲಿದ್ದಂತೆ ಇಲ್ಲಿ ಇವರ ಸ್ವಂತ ಕಾರ್ ಇರಲಿಲ್ಲವಲ್ಲ. ಇಲ್ಲಿ ಕಾರ್ ಇಲ್ಲದಿದ್ದರೆ ತುಂಬಾ ಕಷ್ಟ. ಬಸ್ಸು ಟ್ರೇನ್ ಗಳಿವೆಯಾದರೂ ಅವುಗಳು ಅಡ್ಡಾಡುತ್ತಿದ್ದುದು ಆಗೀಗ ಅನ್ನುವಂತಿದೆ. ಇಲ್ಲಿ ಎಲ್ಲಿ ಹೋದರು ಕಾರ್ ಬೇಕೇ ಬೇಕು. ಇವನು ಬಂದಾಗಿನಿಂದ,  ಅಮೆರಿಕಾದಲ್ಲೇ ವಾಸವಾಗಿದ್ದ ಇವನ ಸಹೋದ್ಯೋಗಿ ಇವನನ್ನು  ಪ್ರತಿ ನಿತ್ಯ ಆಫೀಸಿಗೆ ತನ್ನ ಕಾರಿನಲ್ಲೇ ಬಿಡುತ್ತಿದ್ದ. ಹೀಗಾಗಿ ಇವತ್ತಿಗೆ ಸಾಲ್ಟ್ ಲೇಕ್ ಸಿಟಿ ಗೆ ಹೋಗಲು ಒಂದು ಟ್ಯಾಕ್ಸಿ ಬುಕ್ ಮಾಡಿದ್ದ. 
ಬೆಳಿಗ್ಗೆ ೯ಕ್ಕೆ ಬುಕ್ ಮಾಡಿದ್ದ ಕಾರು ೮:೫೦ ಕ್ಕೆ ಸರಿಯಾಗಿ ಬಂದು, ಡ್ರೈವರ್ ಫೋನ್ ಮಾಡಿದಾಗ, ಇವನಿನ್ನೂ ಸ್ನಾನ ಮಾಡುತ್ತಿದ್ದ! ಹಾಗೂ ಹೀಗೂ ತಯ್ಯಾರಾಗಿ ವೆಂಕಣ್ಣನ ಪರಿವಾರ ಕೆಳಗೆ ಹೋದಾಗ ಡ್ರೈವರ್ ಅರ್ಧ ಗಂಟೆ ತಡವಾಯ್ತೆಂದು ಭುಸುಗುಡುತ್ತಿದ್ದ. ಎಷ್ಟಂದ್ರೂ ಅಮೆರಿಕಾದ ಡ್ರೈವರ್ ಅಲ್ವೇ? ಬೆಂಗಳೂರಿನಲ್ಲಾದರೆ ವೆಂಕಣ್ಣ ಎಷ್ಟೊತ್ತಿಗೆ ಬಂದರೂ ಡ್ರೈವರ್ ಸಿಟ್ಟು ಮಾಡಿಕೊಳ್ಳುತ್ತಿರಲಿಲ್ಲ.
ಹೋಗಲಿ ತನ್ನದೇ ತಪ್ಪು ಅಂತ ಅರಿವಾಗಿ ವೆಂಕಣ್ಣ ಸೌಜನ್ಯಯುತವಾಗಿ “ಕ್ಷಮಿಸಿ ನನ್ನಿಂದ ತಡಾ ಆಯಿತು” ಅಂದ. ಪರವಾಗಿಲ್ಲ ಬಿಡಿ ಅನ್ನುವ ಉತ್ತರ ನಿರೀಕ್ಷಿಸಿ ಕೇಳಿದ್ದ ಕ್ಷಮಾಪಣೆಗೆ ಡ್ರೈವರ್
“ಹೌದು ನೀವು ಕ್ಷಮೆ ಕೇಳಲೇಬೇಕಾದ ತಪ್ಪು ಮಾಡಿದ್ದೀರಿ” ಅನ್ನಬೇಕೆ! ಇವನಿಗೆಂಥ ಕೋಪ ಬರಬೇಡಾ! ಆದರೂ ಅವನು ತರಲೆ ಅನ್ನುವದು ಗೊತ್ತಾದಮೇಲೂ ಅವನ ಜೊತೆ ಜಗಳ ಮಾಡೋದು ಸರಿಯಲ್ಲವೆಂದು ಇವನಿಗೆ ಅರಿವಾಗಿ “ಇಲ್ಲಿ ಡ್ರೈವರ್ಗೋಳಿಗೆ ಭಾರಿ ಸೊಕ್ಕು. ಮಂಗ್ಯಾನ ಮಗಾ. ಹೆಂಗ್ ಮಾತಾಡ್ತಾನ್ ನೋಡು“ ಅಂತ ಹೆಂಡತಿ ಎದುರು ಬೈದು ಸಿಟ್ಟು ತೀರಿಸಿ ಕೊಂಡ.
       
ಸಾಲ್ಟ್ ಲೇಕ್ ಸಿಟಿ ಯ ಸೆಂಟ್ರಲ್ ಸ್ಟೇಶನ್ ಬಳಿಗೆ ಬಂದು ಮುಟ್ಟಿ, ಕಾರಿನಿಂದ ಇಳಿದು ಬಿಲ್ ದುಡ್ಡು ಕೊಟ್ಟ. ಅಲ್ಲಿ ಬರಿ ಬಿಲ್ ಕೊಟ್ಟರೆ ಸಾಲದು, ಜೊತೆಗೆ ಟಿಪ್ಸ್ ಕೊಡಬೇಕು ಅದು ಶಿಷ್ಟಾಚಾರ! ಡ್ರೈವರ್ ಇವನ ಜೊತೆಗೆ ಅಸಂಬದ್ಧ ಮಾತಾಡಿದ್ದರಿಂದ ಅವನ ಮೇಲೆ ವೆಂಕಣ್ಣ ನಿಗೆ ಮೊದಲೇ ಸಿಟ್ಟು ಬಂದಿತ್ತಲ್ಲವೇ. ಅದಕ್ಕೆ ಬರೀ ಐದೇ ಡಾಲರ್ ಟಿಪ್ಸ್ ಕೊಟ್ಟ. ಆದರೆ ಅದೇ ತರಲೆ ಡ್ರೈವರ್ ಈಗ, ಹಳದಿ ಬಣ್ಣಕ್ಕೆ ತಿರುಗಿದ್ದ ತನ್ನ ಅಷ್ಟೂ ಹಲ್ಲುಗಳ ಝಳಪಿಸುತ್ತ ಕೇಳಿದ! 
“ಸರ್, ನಿಮ್ಮ ಬಿಲ್ ೯೦ ಡಾಲರ್ ಆಗಿದೆ. ಆ ಮೊತ್ತದ ೧೫% ಟಿಪ್ಸ್, ಅಂದ್ರೆ ಬೊರೊಬ್ಬರಿ ೧೩.5 ಡಾಲರ್ ಆಗುತ್ತೆ.”
ಬೆಂಗಳೂರಿನಲ್ಲಾದರೆ ನಾವು ಕೊಟ್ಟಷ್ಟು ತೆಗೆದುಕೊಳ್ಳುತ್ತಾರೆ, ಇಲ್ಲಾದರೆ ಹೀಗೋ ! 
ಆದರೂ ಮೊದಲೇ ತಡವಾಗಿ ಬಂದಿದ್ದಕ್ಕೆ ತನ್ನ ಮರ್ಯಾದೆ ತೆಗೆದ ಅವನು, ಇನ್ನು ಅವನು ಕೇಳಿದಷ್ಟು ಟಿಪ್ಸ್    ಕೊಟ್ಟಿಲ್ಲ ಅಂದ್ರೆ, ಇಂಡಿಯನ್ ಗಳೇ ಹಿಂಗೆ ಅಂತ ಎಲ್ಲರೆದುರು ಹೇಳಿಬಿಟ್ಟರೆ? ಅಂತ ಇವನ ದೇಶ ಭಕ್ತಿ ಜಾಗೃತವಾಗಿ, ತಿಂದು ಸಾಯಿ ಅಂತ ಅವನು ಕೇಳಿದಷ್ಟು  ಟಿಪ್ಸ್ ಕೊಟ್ಟು ಅವನ ಬೀಳ್ಕೊಟ್ಟ.
ಇವನ ತಲೆಯಲ್ಲೊಂದು ಪ್ರಶ್ನೆಯಂತೂ ಉದ್ಭವವಾಯ್ತು. ಈ ಟಿಪ್ಸ್ ಗೂ ನಮ್ಮ ದೇಶದಲ್ಲಿ ಕೊಡುವ ಲಂಚಕ್ಕೂ ಏನು ವ್ಯತ್ಯಾಸ? ಅಂತ! ಅಲ್ಲೂ ಕೆಳಿದಷ್ಟೇ ಕೊಡಬೇಕು, ಇಲ್ಲೂ ಹಂಗೆ. ಸುಮ್ನೆ ನಮ್ಮ ದೇಶದಲ್ಲೂ ಲಂಚಾನ ಹೀಗೆ ನೂರಕ್ಕೆ ಇಷ್ಟು ಅಂತ ನಿಗದಿಸಿದರೆ ಅದನ್ನೂ ಟಿಪ್ಸ್ ಅಂತ ಹೇಳಿಕೊಂಡು ಖುಷಿಯಾಗಿ ಕೊಡಬಹುದಲ್ವೆ? ಹೀಗೊಂದು ಅದ್ಭುತವಾದ ಒಂದು ಕಲ್ಪನೆ ಬಂದು ಪುಳಕಗೊಂಡಿದ್ದಾಗಲೇ, ಮಗಳು
“ಇದ ಏನಪ್ಪಾ ಸಾಲ್ಟ್ ಲೇಕ್ ಸಿಟಿ?” ಅಂದಳು.
“ಹೌದು ಖುಷಿ. ಇಲ್ಲೇ ಹತ್ತರದಾಗ ಒಂದು ಡೆಡ್ ಸೀ ಅದ. ಅದರಿಂದನ ಈ ಊರಿಗೆ ಹೆಸರು ಬಂದಿದ್ದು” ಈಗಾಗಲೇ ಗೂಗಲ್ ನಲ್ಲಿ ಹುಡುಕಿ ಉತ್ತರ ಕಂಡುಕೊಂಡಿದ್ದರಿಂದ, ಈ ಊರಿಗೆ ಆ ಹೆಸರು ಬಂದದ್ದು ಯಾಕೆ ಅಂತ ಮತ್ತೆ ಅವಳು ಕೇಳೋದಕ್ಕಿಂತ ಮೊದಲೇ ಪಟಪಟನೆ ಉತ್ತರಿಸಿದ್ದ. 
“ಡೆಡ್ ಸೀ ಅಂದ್ರ?” ಮಗಳ ಮುಂದಿನ ಪ್ರಶ್ನೆ…
“ಅಂದ್ರ ನೀರೊಳಗ ಉಪ್ಪಿನ ಅಂಶ ಸಮುದ್ರಕ್ಕಿಂತ ಎಷ್ಟೋ ಪಟ್ಟು ಜಾಸ್ತಿ ಇರ್ತದ, ಯಾವುದ ಪ್ರಾಣಿಗಳು ಬದಕಲಿಕ್ಕೆ ಸಾಧ್ಯ ಇಲ್ಲದಷ್ಟು. ಇನ್ನೊಂದ ಮಜಾ ಅಂದ್ರ, ಆ ನೀರೊಳಗ ಮುಳುಗೋದ ಸಾಧ್ಯ ಇಲ್ಲ!”
“ಏ ಹೌದಾ? ಅಲ್ಲೇ ನನ್ನ ಕರಕೊಂಡು ಹೋಗಪ್ಪ!” ಎರಡು ಸಲ ಈಜು ಕಲಿಯಲು ಹೋಗಿ ಮುಳುಗುವ ಭಯದಿಂದ ವಾಪಸ್ಸು ಓಡಿ ಬಂದಿದ್ದ ಮಗಳಿಗೆ ಮುಳುಗಲು ಸಾಧ್ಯವೇ ಇಲ್ಲದ ಸಮುದ್ರದ ಅಸ್ತಿತ್ವವೇ ಸಹಜವಾಗಿ ಬೆರಗು ಮೂಡಿಸಿತ್ತು. 
“ಆಗ್ಲಿ ಇನ್ನೊಂದ್ ಸಲ ಹೋಗೋಣಂತ” ಮಗಳು ಆನಂದದಿಂದ ತಲೆ ಅಲ್ಲಾಡಿಸಿದಳು.   
ಆ ಊರಿನಲ್ಲಿದ್ದ ಸುಪ್ರಸಿದ್ಧ ಮಾಲ್ ಒಂದಕ್ಕೆ ಹೋದರಿವರು. ಅದರ ದ್ವಾರದಲ್ಲಿ ಸ್ವಾಗತಿಸಿದ್ದು ಮೂವರು ಬಿಕ್ಷುಕರು! ನಮ್ಮಲ್ಲಿ ದೇವಸ್ಥಾನದ ಮುಂದೆ ಕೂತಂಗೆ, ಆದರೆ ಇಲ್ಲಿನವರು ಅಕ್ಷರಸ್ಥರು ಅದೇ ವ್ಯತ್ಯಾಸ. ಅವರ ಕೈಯಲ್ಲಿ, ‘ನಾನು ನಿರ್ಗತಿಕ, ನನಗೆ ಸಹಾಯ ಮಾಡಿ!’ ಎಂದು ಇಂಗ್ಲೀಶ್ ನಲ್ಲಿ ಬರೆದಿದ್ದ ಒಂದು ಫಲಕ.  ಒಬ್ಬ ಭಿಕ್ಷುಕನಂತೂ  ತನ್ನ   ಜೊತೆಗೆ ಒಂದು ನಾಯಿಯನ್ನೂ ಕೂಡಿಸಿಕೊಂಡಿದ್ದ . ಅವನ ಕೈಯಲ್ಲಿದ್ದ ಫಲಕದಲ್ಲಿ ಹೀಗೆ ಬರೆದಿದ್ದ “ನನಗೆ ಹಾಗೂ ನನ್ನ ನಾಯಿ ಇಬ್ಬರಿಗೂ ಮನೆಯಿಲ್ಲ, ನಮಗೆ ಸಹಾಯ ಮಾಡಿರಿ!”
ಜಾನುಗೆ ಇದನ್ನು ನೋಡಿ ನಗು ಬಂತು “ಅಲ್ರೀ, ತನಗ ಗತಿ ಇಲ್ಲ, ಮತ್ತ ನಾಯಿ ಬ್ಯಾರೆ ಸಾಕ್ಯಾನಲ್ಲಾ. ಇಲ್ಲ್ಯೂ ಭಾಳ ಇದ್ದಾರ ಬಿಕ್ಷಾದವ್ರು. ನಾ ಒಂದ್ coin ಹಾಕ್ತೀನಿ, ಒಂದು ಫೋಟೋ ತಗೀರಿ” ಅಂದ್ಲು.
“ಲೇ ಫೋಟೋ ತಗೀಲಿಕ್ಕೆ ಇನ್ನೂ ಭಾಳ ಚೊಲೋ ಚೊಲೋ ಜಗಾ ಆವ, ಸುಮ್ನ ಬಾ” ಅಂತ ಹುಸಿ ಕೋಪದಲ್ಲಿ ಎಳೆದುಕೊಂಡು ಹೋದ. ಖುಷಿ, ಮಾಲ್ ನ ಮುಂದಿದ್ದ ಕಾರಂಜಿ ನೋಡಿ ಮೈಮರೆತಿದ್ದಳು.
  
ಮಾಲ್ ನಲ್ಲಿ ಅಡ್ಡಾಡಿ, ಹೊಟ್ಟೆ ತುಂಬದ ಬರ್ಗರ್, ಫ್ರೆಂಚ್ ಫ್ರೈಸ್ ಅಂತೇನೇನೋ ತಿಂದು ಮಾಲ್ ನ ಹೊರಗೆ ಬಿದ್ದರು. ಹಾಗೆ ಅಡ್ಡಾಡುತ್ತ ಆ ಊರಿನ ಸೊಬಗು ಸವಿಯುತ್ತಿದ್ದರು. ದಾರಿಯಲ್ಲಿ ಒಬ್ಬ ಪೂರ್ತಿ ಕುಡಿದು ಮೈ ಮರೆತು ರೋಡಿನ ಪಕ್ಕ ಮಲಗಿ ಬಿಟ್ಟಿದ್ದ. ಇನ್ನೂ ಒಂದಿಷ್ಟು ಕುಡುಕರು ಟೈಟ್ ಆಗಿ ಏನೇನೋ ಕೂಗಾಡಿಕೊಂಡಿದ್ದರು. ಎಲ್ಲಾ ಥೇಟ್ ನಮ್ಮ ಕುಡುಕರ ಥರಾನೇ! 
“ಲೇ ಇಲ್ಲಿ ಕುಡುಕರೂ ಕುಡದಾಗ ಇಂಗ್ಲಿಶ್ ನ್ಯಾಗ ಮಾತಾಡತಾರ ನೋಡು! ನಮ್ಮ ಕುಡಕರ ಥರಾನ. ಅಂದರ ಇಂಗ್ಲಿಷ ಕುಡುಕರ ಭಾಷೆ, ಹೃದಯದಿಂದ ಬರೋ ಭಾಷೆ ಅಂದಗಾತು” ಅಂದ ವೆಂಕಣ್ಣ ನ ಜೋಕಿಗೆ ಜಾನು ಬಿದ್ದು ಬಿದ್ದು ನಗದಿದ್ದರೂ ಒಂದು ಮುಗುಳ್ನಗು ಅವಳ ಮುಖದಲ್ಲಿತ್ತು. ಅಲ್ಲಿ ಇಲ್ಲಿ ಅಡ್ಡಾಡಿ ಇನ್ನೂ ಕೆಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಸಂಜೆಯಾಗುತ್ತಲೇ ತಮ್ಮ ನಿವಾಸಕ್ಕೆ ವಾಪಸ್ಸು ಹೊರಟರು.  

ಜೇ.ಸಿ.ಬಿ

(http://www.panjumagazine.com/?p=10667)

ಬೆಳ್ಳಂ ಬೆಳಿಗ್ಗೆ ಅಮೇರಿಕದಿಂದ ವೆಂಕಟ್ ಕಳಿಸಿದ್ದ ಒಂದು ಇಮೇಲ್ ಭಾರತದಲ್ಲಿದ್ದ ಅವನ ಬಾಸ್ ಸುಧೀರನನ್ನು ಅಧೀರನನ್ನಾಗಿಸಿತ್ತು! ಅದು ಅಲ್ಲಿನ ಒಂದು ಬಹು ಮುಖ್ಯ ಸುದ್ದಿಯನ್ನು ಭಿತ್ತರಿಸಿದ ಸಂದೇಶವಾಗಿತ್ತು. ಇವರ ಕಂಪನಿಯ ಅಮೆರಿಕಾದ ಮೂಲ ಶಾಖೆಯ ಉಪಾಧ್ಯಕ್ಷ ನಾಗಿದ್ದ ರೋಜರ್ ನನ್ನು ಅಲ್ಲಿನ ಆಡಳಿತ ಮಂಡಳಿ ಕಿತ್ತೊಗೆದಿತ್ತು. ಖಾಲಿಯಾದ ಅವನ ಸ್ಥಾನದಲ್ಲಿ ಮೂವತ್ತು ವರ್ಷದಿಂದ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಜಾನ್ ಸಿ. ಬೇಕರ್ ನನ್ನು ಕುಳ್ಳಿರಿಸಿದ್ದರು. 
…ಅಮೆರಿಕಾದಲ್ಲಿ ಇದೆಲ್ಲ ಈಗ ಮಾಮೂಲಿ. ಅದು ಕಂಪನಿಯ ವೆಚ್ಚಗಳ ಕಡಿತಗೊಳಿಸುವ ಒಂದು ವಿಧಾನ. ಕೆಲವು ದೊಡ್ಡ ತಲೆಗಳನ್ನು ಕಿತ್ತುಹಾಕಿ, ಆ ಹಿರಿ ತಲೆಗಳಿಗಿಂತ ಕಡಿಮೆ ದರ್ಜೆಯ, ಕಂಪನಿಯ ಇತರ ಸಹೋದ್ಯೋಗಿಗಳನ್ನು ಮುಂದಿನ ದರ್ಜೆಗೆ ಏರಿಸುವುದು ಇದರ ಉದ್ದೇಶ. ಹಾಗೆ ಕಂಪನಿಯಲ್ಲೇ ಇದ್ದು ಮೇಲೆ ಏರಿದವರ ವೇತನ ವನ್ನು ಸ್ವಲ್ಪ ಏರಿಸಿದರೂ ಹೊರ ಹೋದ ವ್ಯಕ್ತಿಯ ಸಂಬಳಕ್ಕಿಂತ ಎಷ್ಟೋ ಪಟ್ಟು ಕಡಿಮೆ. ಅದೂ ಅಲ್ಲದೆ ಹಾಗೆ ಬರುವ ಹೊಸಬರಿಗೆ ಹೆಚ್ಚಿಗೆ ಜವಾಬ್ದಾರಿ ವಹಿಸಿದರೂ ಮೇಲಿನ ಸ್ಥಾನಕ್ಕೇರಿದ ಉತ್ಸಾಹದಲ್ಲಿ, ಖುಷಿಯಿಂದಲೇ ಕೆಲಸ ಮಾಡುತ್ತಾರೆ. ಇದು ಹೀಗೆ ಮಾಡುವುದರಿಂದಾಗುವ ಮತ್ತೊಂದು ಲಾಭ..     
ಆದರೆ ಸುಧೀರನ ಚಿಂತೆಗೆ ಬೇರೆಯದೇ ಕಾರಣವಿತ್ತು. ಪದಚ್ಯುತ ಉಪಾಧ್ಯಕ್ಷ ರೋಜರ್ ಜೊತೆಗಿದ್ದ ಭಾರತದ ಇವನ ಶಾಖೆಯ ಸಂಬಂಧ ತುಂಬಾ ಉತ್ತಮವಾಗಿತ್ತು. ಅವನು ತುಂಬಾ ಒಳ್ಳೆಯವನೂ ಹಾಗೂ ಎಲ್ಲ ವಿಷಯಗಳಲ್ಲೂ ಸಹಕಾರ ನೀಡುವವನೂ ಆಗಿದ್ದ. ಆದರೆ, ಈಗ ನಿಯುಕ್ತನಾಗಿದ್ದ ಹೊಸಬ ತುಂಬಾ ಘಮಿಂಡಿ ಹಾಗೂ ಹಿಟ್ಲರ್ ತರಹದ ವ್ಯಕ್ತಿ ಅನ್ನುವುದು, ಮೊದಲಿನಿಂದಲೂ ಆ ಕಂಪನಿಯ ಬಗ್ಗೆ ಬಲ್ಲ ಸುಧೀರ್ ಗೆ ಗೊತ್ತಿತ್ತು. ಅದೂ ಅಲ್ಲದೆ, ಅವನು ಮುಂದಿನ ವಾರವೇ ತಮ್ಮ ಶಾಖೆಗೆ ೫ ದಿನಗಳ ಭೇಟಿ ನೀಡಲಿದ್ದಾನೆ ಎನ್ನುವ ವಿಷಯ ಇವನಲ್ಲಿ ಇನ್ನೂ ಕೊಲಾಹಲವನ್ನುಂಟು ಮಾಡಿತ್ತು. ಆ ವಿವರಗಳನ್ನೊಳಗೊಂಡ ಇನ್ನೊಂದು ಇಮೇಲ್ ಅನ್ನು ತನ್ನ ಇಮೇಲ್ ಜೊತೆಗೇ ಲಗತ್ತಿಸಿದ್ದ ವೆಂಕಟ್.
…ಜಾನ್ ಸಿ. ಬೇಕರ್ ಗೆ ಎಲ್ರೂ ಜೇ.ಸಿ.ಬಿ ಅಂತಾನೆ ಕರೀತಿದ್ರು. ಅವನ ಹೆಸರಿನ ಮೊದಲ ಅಕ್ಷರಗಳನ್ನೆಲ್ಲ ಕೂಡಿಸಿ ಓದಿದರೆ ಹಾಗೆ ಕೇಳುತ್ತಿತ್ತು ಅನ್ನುವುದು ಒಂದು ಕಾರಣವಾದರೆ, ಇನ್ನೊಂದು ತರ್ಕದ ಪ್ರಕಾರ, ಜೇ.ಸಿ.ಬಿ ಯಂತ್ರ ಭೂಮಿಯನ್ನು ನಿಷ್ಕರುಣೆಯಿಂದ ಬಗೆದಂತೆ, ಆತ ಹೋದಲ್ಲೆಲ್ಲ ಜನರನ್ನು ಕೆಲಸದಿಂದ ಕಿತ್ತೊಗೆದು ಸ್ವಚ್ಚ ಮಾಡುತ್ತಿದ್ದ. ಹೇಳದೆ ಕೇಳದೆ ಕಂಪನಿಯಿಂದ ಜನರನ್ನು ಓಡಿಸುವುದರಲ್ಲಿ ಅವನು ನಿಸ್ಸೀಮ. ಇವರದು ಅಮೇರಿಕಾದ ಕಂಪನಿಯಾಗಿದ್ದರಿಂದ ಅಲ್ಲಿನವರು ಹೇಳಿದಂತೆ ಕೇಳುವ ಅನಿವಾರ್ಯತೆ ಇವರಿಗಿತ್ತು. ಹೀಗಾಗಿ ಜಾನ್ ಭಾರತಕ್ಕೆ ಬರುತ್ತಿದ್ದಾನೆ ಎಂದರೆ ಎಷ್ಟು ಬಲಿ ಬೀಳುವವೋ ಎಂದು ಇವನು ಚಿಂತಾಕ್ರಾಂತನಾಗಿದ್ದ. ಇವನು ಭಾರತ ಶಾಖೆಯ ಮುಖ್ಯಸ್ಥನಾಗಿದ್ದರಿಂದ ಎಲ್ಲರ ಜವಾಬ್ದಾರಿ ಇವನ ಮೇಲೆಯೇ ಇತ್ತು. ಜಾನ್, ತನ್ನ ತಲೆಗೂ ಸಂಚಕಾರ ತಂದರೂ ತರಬಹುದೆಂಬ ಚಿಂತೆಯೂ ಇವನಿಗಿತ್ತು. ಸುಧೀರ್ ಕೂಡಲೇ ಪೃಥ್ವಿ ಗೆ ಫೋನಾಯಿಸಿ. ಜಾನ್ ಬರುತ್ತಿರುವ ವಿಷಯ ತಿಳಿಸಿ, ಎಲ್ಲ ಮುಖ್ಯಸ್ಥರನ್ನು ಸೇರಿಸಿ ಮದ್ಯಾಹ್ನದ ಊಟದ ನಂತರ ಒಂದು ಮೀಟಿಂಗ್ ಕರೆಯಲು ತಿಳಿಸಿದ… 
ತಂಪು ಹವೆಯನ್ನು ಸೂಸುತ್ತಿದ್ದ ಆ ಮೀಟಿಂಗ್ ಕೋಣೆಯಲ್ಲಿ ಒಟ್ಟು ಇಪ್ಪತ್ತು ಆಸನಗಳು ಹಾಗೂ ಒಂದು ದೊಡ್ಡದಾದ ಮೇಜು ಇತ್ತು. ಮೇಜಿನ ಮೇಲೆ ಫೋನ್ ಗಳು, ಲ್ಯಾಪ್ಟಾಪ್ ಗಳನ್ನು ವಿದ್ಯುತ್ ಪೂರಣಗೊಳಿಸಲು ಅನುಕೂಲವಾಗುವಂತೆ ವಿದ್ಯುತ್ ನ ಕುಹರಗಳು ಇದ್ದವು. ಎದುರಿಗೆ ಎಲ್ಲರಿಗೂ ಕಾಣುವಂತೆ ಇರಿಸಿದ್ದ ದೊಡ್ಡ ಎಲ್ ಇ ಡಿ ಪರದೆ ಇತ್ತು. ಗೋಡೆಗಳ ಮೇಲೆ ಇವರ ಕಂಪನಿಯ ದೃಷ್ಟಿಕೋನವನ್ನು ಸಾರಿ ಸಾರಿ ಹೇಳುವ ಸಂದೇಶಗಳನ್ನು ಹೊತ್ತ ಫಲಕಗಳು ರಾರಾಜಿಸುತ್ತಿದ್ದವು. 
ಮೂರು ಗಂಟೆಗೆ ಅಂತ ಮೀಟಿಂಗ್ ಗೊತ್ತು ಮಾಡಿದ್ದರೂ, ಆಗಲೇ ಆ ಕೋಣೆ ಭರ್ತಿಯಾಗಿತ್ತು. ಯಾವುದೇ ಬೇರೆ ಮೀಟಿಂಗ್ ಗೆ ತಡವಾಗಿ ಬರುವ ಪ್ರಜೆಗಳು ಇವತ್ತು ಇಷ್ಟು ಬೇಗನೆ ಬಂದ ಕಾರಣ ಸುಧೀರ್ ಗೆ ಸ್ಪಷ್ಟವಾಗಿತ್ತು. ಎಲ್ಲರಿಗೂ ಜೇ.ಸಿ.ಬಿ ಬರುತ್ತಿರುವ ಸುದ್ದಿಯನ್ನು ಆಗಲೇ ಡಂಗುರ ಸಾರಿದ್ದ ಪ್ರಥ್ವಿ. ಅದರ ಬಗ್ಗೆ ಮೀಟಿಂಗ್ ಅಂದ ಮೇಲೆ ಎಲ್ಲರಿಗೂ ಕುತೂಹಲವಿತ್ತು. ಅದಕ್ಕೆ, ಇದ್ದ ಬದ್ದ ಕೆಲಸವ ಬಿಟ್ಟು ಬಂದು ಕೂತಿದ್ದರು. ಎಲ್ಲರೂ ಹಿರಿಯ ಮ್ಯಾನೇಜರ್ ಗಳೆ; ತುಂಬಾ ವರ್ಷಗಳಿಂದ ಅದೇ ಕಂಪನಿಯಲ್ಲಿ ಬೇರು ಬಿಟ್ಟು ಹಂತ ಹಂತವಾಗಿ ಮೇಲೇರಿದವರು. ಅವರೆಲ್ಲರಿಗೂ ಸಹಜವಾಗಿ ಜಾನ್  ಬರುತ್ತಿರುವ ಬಗ್ಗೆ ಕುತೂಹಲದ ಜೊತೆಗೆ  ಕಳವಳವೂ ಇತ್ತು. ಅದರಲ್ಲೂ ಮೈಗಳ್ಳತನದಲ್ಲಿ ಔನ್ನತ್ಯಕ್ಕೆ ಏರಿದ್ದ ಷಣ್ಮುಗಂ, ವೆಂಕಟರಾಜು ಹಾಗೂ ಚಂದ್ರಕಾಂತ್ ತುಂಬಾನೇ ಭಯದಲ್ಲಿದ್ದರು. ಅವನು ತಮಗೆಲ್ಲಾ ಎತ್ತಂಗಡಿ ಮಾಡಿಬಿಟ್ಟರೆ  ಏನು ಗತಿ ಅಂತ ಅವರು ಚಿಂತೆಗೊಳಗಾಗಿದ್ದರು.   
ಸುಧೀರ್ ಎಲ್ಲರೂ ಬಂದದ್ದನ್ನು ಖಚಿತಪಡಿಸಿಕೊಂಡು ಇವತ್ತಿನ ಮೀಟಿಂಗ್ ನ ಉದ್ದೇಶವನ್ನು ಹೇಳಿದ. ಎಲ್ಲರಿಗೂ ಅದಾಗಲೇ ಗೊತ್ತಿರುವುದೆಂದು ಅವನು ಊಹಿಸಿದ್ದನಾದರೂ ಅದೊಂದು ಔಪಚಾರಿಕತೆಯಾಗಿತ್ತು. 
"ಜಾನ್ ಮುಂದಿನ ಸೋಮವಾರ ಬರುತ್ತಿದ್ದಾನೆ. ಅವನ ಜೊತೆಗೆ ಅವನ ಸಲಹಾಗಾರ ಜೇಕಬ್ ನೂ ಬರುತ್ತಿದ್ದಾನೆ." ಅಂದ ಸುಧೀರ್. ಜೇಕಬ್ ಒಂತರಹ ಚಾಣಕ್ಯ ಇದ್ದಂತೆ. ಇವರಿಬ್ಬರ ಜೋಡಿ ತಮ್ಮ ಶಾಖೆಯಲ್ಲಿ ಒಳ್ಳೆಯ ಬಿರುಗಾಳಿ ಎಬ್ಬಿಸಲಿದೆಯೆಂದು  ಎಲ್ಲರಿಗೂ ಖಾತ್ರಿಯಾಯ್ತು.
"ಜಾನ್ ಎಷ್ಟು ದಿನ ಇರ್ತಾರೆ?" ಸ್ಮಿತಾ ಕೇಳಿದಳು. ಅವಳು ಹಾಗೇನೆ, ಇನ್ನೂ ಹೇಳುವುದು ಬಾಕಿ ಇದ್ದಾಗಲೇ ಪ್ರಶ್ನೆ ಕೇಳದಿದ್ದರೆ ಅವಳಿಗೆ ಸಮಾಧಾನವೇ ಇಲ್ಲ. ಸುಧೀರ್ ಗೆ ಅವಳ ಪ್ರಶ್ನೆಯಿಂದ ಸಿಟ್ಟು ಬಂತಾದರೂ ಸಮಾಧಾನ ದ ಮುಖವಾಡದಲ್ಲೇ ಹೇಳಿದ 
"ಅವರು ಐದು ದಿನಗಳ ಭೇಟಿಗೆ ಇಲ್ಲಿಗೆ ಬರುತ್ತಿದ್ದಾರೆ. ಅಂದಹಾಗೆ ನಾನು ಹೇಳಬೇಕಿರುವುದನ್ನು ಮೊದಲು ಹೇಳಿ ಮುಗಿಸುತ್ತೇನೆ. ನಿಮ್ಮ ಪ್ರಶ್ನೆಗಳನ್ನು ಆಮೇಲೆ ಕೇಳಬಹುದು." ಅಂತ ಸ್ಮಿತಾಗೆ ಮೆಲ್ಲನೆ ಎಚ್ಚರಿಸಿ ಮುಂದುವರಿಸಿದ…
"ಜಾನ್ ನಿಮ್ಮೆಲ್ಲರ ಜೊತೆಗೂ ಪ್ರತ್ಯೇಕವಾಗಿ ಹಾಗೂ ನೇರವಾಗಿ ಮಾತಾಡಬೇಕಂತೆ. ಅದಕ್ಕೆ ಅವರ ಅನುಕೂಲದ ಸಮಯದಲ್ಲಿ ಮೀಟಿಂಗ್ ಅನ್ನು ಈಗಲೇ ಗೊತ್ತುಪಡಿಸಿಕೊಳ್ಳಿ." ಈ ಮಾತಿನಿಂದ ಕೆಲವರು ತಮ್ಮ ಹೊಟ್ಟೆಯಲ್ಲಿ ಸಣ್ಣ ಪ್ರಮಾಣದ ಕಂಪನಗಳನ್ನು ಅನುಭವಿಸತೊಡಗಿದರು. ಆದರೆ ತನ್ನ ಬಗ್ಗೆ ಹೇಳಿಕೊಳ್ಳಲು ಹಾಗೂ ಮುಂದಿನ ಸ್ಥಾನಕ್ಕೆ ಹೋಗುವ ಉತ್ಸುಕತೆಯನ್ನು ಹೊಂದಿರುವ ಸ್ಮಿತಾ ಹಾಗೂ ಸುಜಯ್ ಅಂಥವರು ತಮ್ಮ ಅಹವಾಲನ್ನು ಜಾನ್ ಗೆ ಹೇಳಲು ಕಾಯುತ್ತಿದ್ದರು. ಇವರನ್ನು ಬಿಟ್ಟರೆ, ಸುಧೀರ್ ತನ್ನ ಬಾಸ್ ಅನ್ನುವುದನ್ನು ಸಹಿಸದ ರೋಶನ್ ಮತ್ತು  ಅವನ ಚೇಲಾಗಳು, ಇವನ ವಿರುದ್ಧ ಸಂಚು ಹೂಡಲು ಇದೊಳ್ಳೆ ಅವಕಾಶವೆಂದು ಜಾನ್ ನನ್ನು ಪ್ರತ್ಯೇಕವಾಗಿ ಭೇಟಿಯಾಗಲು ಕಾತರಿಸಿದ್ದರು.
ಜಾನ್ ಹಾಗೂ ಜೇಕಬ್ ಇಲ್ಲಿಗೆ ಬಂದಾಗ ಏನೇನು ಚಟುವಟಿಕೆಗಳು ನಡೆಯಲಿವೆ ಎಂಬ ಸ್ಥೂಲ ಚಿತ್ರಣವನ್ನು ಎಲ್ಲರಿಗೂ ನೀಡಿದನವನು. ಆ ಐದು ದಿನಗಳಲ್ಲಿ ಒಂದು ದಿನ ಕಂಪನಿಯ ಎಲ್ಲ ಉದ್ಯೋಗಿಗಳನ್ನು ಉದ್ದೇಶಿಸಿ ಒಂದು ಗಂಟೆಯ ಸಭೆಯನ್ನು  ಮಾಡುವ ಇಂಗಿತ ಜಾನ್ ವ್ಯಕ್ತಪಡಿಸಿದ್ದಾನೆ ಅಂತಲೂ ತಿಳಿಸಿದ. ಅಲ್ಲಿ ಹೆಚ್ಚು ಕಡಿಮೆ ೫೦೦ ಉದ್ಯೋಗಿಗಳು ಕೆಲಸ ಮಾಡುತ್ತಿದ್ದರು. ಏನಾದರೂ ಪ್ರಶ್ನೆಗಳಿವೆಯೆ ಎಂದು ಕೇಳಿದ್ದಕ್ಕೆ ಸ್ಮೀತಾ ತನಗೆ ಗೊತ್ತಿರುವ ವಿಷಯಗಳ ಬಗ್ಗೆಯೇ ಮತ್ತೊಂದಿಷ್ಟು ಪ್ರಶ್ನೆಗಳ ಸುರಿಮಳೆ ಸುರಿಸಿ ತನ್ನ ಜ್ಞಾನ ಪ್ರದರ್ಶಿಸಿದಳು! ಸುಧೀರ್ ಅವಳ ಪ್ರಶ್ನೆಗಳಿಗೆ ಸಮಾಧಾನದಿಂದಲೇ ಉತ್ತರಿಸಿ ತನ್ನ ಅಸಮಾಧಾನವನ್ನು ಮುಚ್ಚಿಟ್ಟನು. ಇಷ್ಟು ದೊಡ್ಡ ಸಂಸ್ಥೆಯ ಮುಖ್ಯಸ್ಥನಾದ ಕಾರಣಕ್ಕೆ ಸಾಕಷ್ಟು ತಾಳ್ಮೆಯನ್ನು ಸಹಜವಾಗಿಯೇ ಅವನು ಮೈಗೂಡಿಸಿಕೊಂಡಿದ್ದನು. ಮಿಕ್ಕವರು ಯಾರಿಗೂ ಆ ಮಟ್ಟಿಗೆ ಯಾವ ಪ್ರಶ್ನೆಗಳೂ ಇರಲಿಲ್ಲ. ಕೊನೆಯಲ್ಲಿ ವಿದೇಶದ ಅತಿಥಿಗಳ ವಾಸ್ತವ್ಯ, ವಾಹನ ಹಾಗೂ ಇನ್ನಿತರ ವ್ಯವಸ್ಥೆಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಎಂದಿನಂತೆ  ಪೃಥ್ವಿಗೆ ವಹಿಸಿ, ಅಲ್ಲಿಗೆ ಆ ಮೀಟಿಂಗ್ ನ್ನು ಮುಗಿಸಿದನು. 
ಮೀಟಿಂಗ್ ಮುಗಿಸಿ ತನ್ನ ಜಾಗಕ್ಕೆ ಮರಳಿದ ಸುಜಯ್ ಯಾವುದೋ ಯೋಚನೆಯಲ್ಲಿ ಮುಳುಗಿದ್ದನ್ನು ನಿಶಾ ಗಮನಿಸಿದಳು. ಏನೆಂದು ಕೇಳಲಾಗಿ ಜಾನ್ ಬರುತ್ತಿರುವ ವಿಷಯ ತಿಳಿದು ಅವಳೂ ಪುಳಕಗೊಂಡಳು. ತನ್ನ ಬೇಳೆ ಬೇಯಿಸಿಕೊಳ್ಳಲು ಇದೊಂದು ಸದವಕಾಶವೆಂದು ಅವಳಿಗೂ ಗೊತ್ತಿತ್ತು. ಆದರೆ ಅದನ್ನು ತೋರ್ಪಡಿಸದೆ, ಸುಜಯ್ ಗೆ, ನೀನ್ಯಾಕೆ ಅಮೆರಿಕಾಕ್ಕೆ ಹೋಗಿ ಅಲ್ಲಿಂದ ಕೆಲಸ ಮಾಡುವ ಅವಕಾಶದ ಬಗ್ಗೆ ಜಾನ್ ಜೊತೆಗೆ ಮಾತಾಡಬಾರದು ಎಂಬ ಉಚಿತ ಸಲಹೆಯನ್ನೂ ನೀಡಿದಳು. ನೀನು ವೆಂಕಟ್ ಗಿಂತ ಮೊದಲೇ ಈ ಕಂಪನಿಯಲ್ಲಿ ಇದ್ದವನು, ಜಾನ್ ಖಂಡಿತ ನಿನ್ನ ಮಾತು ಕೇಳಿಯೇ ತೀರುತ್ತಾನೆ ಎಂದು ಒಂದು ಹುಳುವನ್ನು ಅವನ ತಲೆಗೆ ಬಿಟ್ಟಳು. ಸುಜಯ್ ಅವಳ ಮಾತಿಗೆ ಎಂದಿನಂತೆ ಪುಂಗಿಯ ನಾದಕ್ಕೆ ತಲೆ ಆಡಿಸುವ ಹಾವಿನಂತೆ ಹೂಗುಡುತ್ತಾ ಮನದಲ್ಲೇ ಏನೋ ಲೆಕ್ಕ ಹಾಕುತ್ತಿದ್ದ…  


2 comments:

  1. ಜಾ~ನ್‍ನ ಬರುವಿಕೆಗಾಗಿ ಕಾಯುತ್ತಿದ್ದೇನೆ!

    ReplyDelete
    Replies
    1. ಪ್ರಿಯ ಸುನಾಥ್, ನಿಮ್ಮ ಪ್ರೋತ್ಸಾಹಕ್ಕೆ ಋಣಿ!

      Delete