Sunday, October 27, 2013

ನಾನು ಬಡವ?

(ಪಂಜು ಪತ್ರಿಕೆಯಲ್ಲಿ ದಿ. ೩೦ ಸೆಪ್ಟೆಂಬರ್, ೨೦೧೩ ರಂದು ಪ್ರಕಟವಾಗಿತ್ತು)
http://www.panjumagazine.com/?p=4620

-------------------------------------------------------------------------------

ಮೂರ್ತಿ ಯಾವುದೋ ಒಂದು ಪುಸ್ತಕದಲ್ಲಿ ಗಹನವಾಗಿ ಮುಳುಗಿದ್ದವರು ನಿಟ್ಟುಸಿರು ಬಿಟ್ಟು ಹೀಗೆ ಅರುಹಿದರು…

ಮೂರ್ತಿ: "ಗುರು, ಹಿಂದಿನ ಕಾಲದಲ್ಲಿ ನಮ್ಮ ದೇಶದಲ್ಲಿ ಎಂಥಾ ಸುಭಿಕ್ಷೆ ಇತ್ತಂತೆರೀ… ನಿಮಗೊತ್ತಾ? ಆಗ ವಿಜಯನಗರ ಸಾಮ್ರಾಜ್ಯದಲ್ಲಿ ಮುತ್ತು, ರತ್ನ, ಬಂಗಾರಗಳನ್ನ ತರಕಾರಿಗಳ ತರ ಸಂತೆಲಿ ಮಾರುತ್ತಿದ್ದರಂತೆ!"

ಗುರು: "ಹೌದು, ಆದ್ರೆ ಆಗಿನ ಕಾಲಕ್ಕೆ ಈಗಿನ ಕಾಲಕ್ಕೆ ಅಷ್ಟೆಲ್ಲಾ ಡಿಫರನ್ಸು ಇಲ್ಲಾ ಬಿಡ್ರೀ."

ಮೂ: "ಅಧೆಂಗ್ರೀಪಾ?"

ಗು: "ಈಗ ತರಕಾರಿಗಳನ್ನ ಮುತ್ತು, ರತ್ನ, ಬಂಗಾರಗಳ ರೇಟಿನಲ್ಲಿ ಮಾರ್ತಾರೆ ಅಷ್ಟೆ!!"

ಮೂ: "ಹ್ಹ ಹ್ಹ ಹ್ಹ! ಹೌದು ಬಿಡ್ರೀ. ಈರುಳ್ಳಿ ರೇಟು 100 ರುಪಾಯಿ ಕೇಜಿ ಅಂತ್ರೀಪಾ."

ಗು: "ಹೌದ್ರೀ, ತುಂಬಾ ದಿನಾ ಆಯ್ತು ಮನೇಲಿ ಈರುಳ್ಳಿ ಭಜಿ ತಿಂದು…"

ನಾನು ಕನಸು ಕಾಣತೊಡಗಿ ಒಂದು ದೊಡ್ಡ ನಿಟ್ಟುಸಿರು ಬಿಟ್ಟೆ.



ಗು: "ಅಲ್ರೀ ಮೂರ್ತಿ ನಮ್ಮ ಪರಿಸ್ಥಿತಿನೇ ಹೀಂಗಾದ್ರೆ, ಪಾಪಾ ಬಡವರ ಗತಿ ಏನು?"

ನಾನು ಮಹಾ ಶ್ರಿಮಂತನೆನ್ನುವ ಮುಖಮುದ್ರೆಯೊಂದಿಗೆ ಈ ಡೈಲಾಗು ಹೊಡೆದು ಮೂರ್ತಿಯವರನ್ನು ನೋಡಿದೆ. ಅವರು ಗಹನ ಯೋಚನೆಯಲ್ಲಿ ಮುಳುಗಿದ್ದರಾ ಇಲ್ಲಾ ಹಾಗೆ ನಟಿಸುತ್ತಿದ್ದರಾ ಗೊತ್ತಿಲ್ಲ! ಕೆಲವು ಕ್ಷಣಗಳ ಬಳಿಕ ನನ್ನ ಮೇಲೊಂದು ಪ್ರಶ್ನೆಯ ಬಾಣವೊಂದನ್ನು ಎಸೆದು ಕಂಗಾಲುಗೊಳಿಸಿದರು!

ಮೂ: "ಬಡವರು ಅಂದ್ರೆ ಯಾರು? ಹೇಳಿ ನೋಡೋಣಾ!"

ಇದೆಂತಹ ಪ್ರಶ್ನೆ?! ನಾನು ಗೊಂದಲಕ್ಕೆ ಬಿದ್ದೆ. ಆದರೂ ಗೊತ್ತಿಲ್ಲವೆಂದು ಹೇಳೋಕಾಗುತ್ತೆಯೆ?

ಗು: "ಬಡವರೆಂದರೆ ಬಡತನದ ರೇಖೆಗಿಂತ ಕೆಳಗಿರುವವರು."

ಅಂತ ಹೇಳಿ, ಇದೇನ್ಮಹಾ ಪ್ರಶ್ನೆ ಅನ್ನುವ ವದನದೊಂದಿಗೆ ಇರುವಾಗಲೇ…

ಮೂ: "ತಪ್ಪು" ಅಂದರು!

ನನಗೆ ಕನ್ನಡದ ಕೋಟ್ಯಾಧಿಪತಿಯಲ್ಲಿ ತಪ್ಪು ಉತ್ತರ ಹೇಳಿ ಪುನೀತನ ಎದುರು ಪೆಚ್ಚು ಮೋರೆ ಹಾಕಿ ಕುಂತಗಾಯ್ತು!



ಗು: "…. ?"

ಮೂ: "ತನ್ನಲ್ಲಿ ಏನೋ ಒಂದು ಕೊರತೆ ಇದೆ ಅಂದುಕೊಂಡು, ಆ ಕೊರತೆಯ ಕೊರಗನ್ನು ಅನುಭವಿಸುವವನೇ ಬಡವ"

ಗು: "ಅಂದ್ರೆ, ಈರುಳ್ಳಿಯ ಕೊರತೆಯನ್ನು ಅನುಭವಿಸುತ್ತಿರುವ ನಾನೂ ಬಡವನೇ??" ಸ್ವಲ್ಪ ಸಿಟ್ಟಿನಿಂದಲೇ ಕೇಳಿದೆ.

ಅವರು ನಸು ನಕ್ಕು ಹೇಳಿದರು.

ಮೂ: "ಹಾಗಂತ ಅಲ್ಲಾ ಗುರು. ಯಾವನು ಎಲ್ಲಿಯವರೆಗೆ ತನಗೆ ಅದು ಬೇಕು ಇದು ಬೇಕು ಅಂತ ಹಪಹಪಿಸಿ ಕೊರತೆ ಅನುಭವಿಸುವನೋ, ಅಲ್ಲಿಯವರೆಗೆ ಅವನು ಬಡವನೇ. ಅದು ನಾನೂ ಆಗಿರಬಹುದು, ನೀವು ಅಥವ ಅಂಬಾನಿಯೂ ಆಗಿರಬಹುದು! ನಿಮ್ಮ ಹತ್ತಿರ ಒಂದು ಕಾರು ಇದೆ, ಆದರೂ ನೀವು ಇದಕ್ಕಿಂತ ದೊಡ್ಡ ಕಾರು ನಿಮ್ಮ ಬಳಿ ಇರಬೇಕಿತ್ತು ಅಂತ ಆಸೆ ಪಟ್ಟು, ಆ ಕೊರತೆ ಅನುಭವಿಸಿದರೆ ನೀವೂ ಬಡವರೆ!"

ಹೌದಲ್ಲವೇ! ಮೂರ್ತಿಗಳು ಒಂದು ಯಾಂಗಲ್‍ನಲ್ಲಿ ಕ್ಲೀನ್ ಆಗಿ ಶೇವ್ ಮಾಡಿದ ಯವುದೋ ಒಬ್ಬ ತತ್ವ ಜ್ಞಾನಿಗಳಂತೆ ಕಾಣತೊಡಗಿದರು! ಅವರು ಹೇಳಿದ್ದು ಸತ್ಯವೆನಿಸಿತು ಕೂಡ. ನಾನೂ ಯೋಚನೆಗೆ ತೊಡಗಿದೆ. ನನ್ನ ಆಸೆಗಳ ಯಾದಿ ದೊಡ್ಡದೇ ಇದೆ. ನಾನೂ ಒಬ್ಬ ಬಡವನೇ!

ಗು: "ಸರಿಯಾಗಿ ಹೇಳಿದ್ರಿ ಮೂರ್ತಿ. ನಿಮ್ಮ ಮಾತು ಒಪ್ಪಬೇಕಾದದ್ದೆ."

ಅಷ್ಟರಲ್ಲೇ ಮನೆಯ ಹೊರಗೆ "ನೂರು ರುಪಾಯಿಗೆ ಎರಡು ಕೇಜಿ ಈರುಳ್ಳೀ…" ಅಂತಾ ಕೂಗಿದಂತಾಯ್ತು. ನನ್ನ ಕಿವಿಗಳು ನಿಮಿರಿದವು. ಕೈಗೆ ಸಿಕ್ಕ ಚೀಲ ಹಿಡಿದು ಹೆಂಡತಿಯ ಅಪ್ಪಣೆಗೂ ಕಾಯದೇ ಹೊರಗೆ ಓಡಿದೆ. ತಳ್ಳುವ ಗಾಡಿಯಲ್ಲಿ ಈರುಳ್ಳಿಗಳು. ಅವುಗಳ ಗಾತ್ರ ಮಾತ್ರ ಬೆಳ್ಳುಳ್ಳಿಗಿಂತ ಸ್ವಲ್ಪ ದೊಡ್ಡ ಅಷ್ಟೆ! ನಮಗೇನಾಗಬೇಕು, ಒಟ್ಟಿನಲ್ಲಿ ಈರುಳ್ಳಿ ಭಜಿ ತಿನ್ನಬೇಕು ಅಷ್ಟೆ! ಇದ್ದುದರಲೇ ಸ್ವಲ್ಪ ದೊಡ್ಡದನ್ನು ಆರಿಸೋಣವೆಂದರೆ, ತಳ್ಳುವ ಗಾಡಿಯವನು ಅದಕ್ಕೂ ಅವಕಾಶ ಕೊಡಲಿಲ್ಲ. ಒಟ್ಟಿನಲ್ಲಿ ಎರಡು ಕೇಜಿ ಈರುಳ್ಳಿಗಳನ್ನು ಪೇರಿಸಿಕೊಂಡು ಮನೆಗೆ ತಂದೆ. ಈರುಳ್ಳಿ ಭಜಿ ಮಾಡಿಸಿಕೊಂಡು ತಿಂದು ಕೊರತೆ ನೀಗಿಸಿಕೊಂಡೆವು. ಆದರೂ ಬಡತನದ ಹೊಸ ವ್ಯಖ್ಯಾನ ತಲೆ ಕೊರೆಯುತ್ತಿತ್ತು…

No comments:

Post a Comment