Saturday, March 12, 2011

ಖೊಬ್ರಿ ಹೋಳಿಗೆ

ಸುಮಾರು ಏಳು ವರ್ಷಗಳ ಹಿಂದೆ, ಸಿರಸಿಯ ಬದಿಯ ಚಿಕ್ಕ ಹಳ್ಳಿಯೊಂದರ ಹವ್ಯಕರ ಹುಡುಗಿಯ ಜೊತೆ ನನ್ನ ಮದುವೆ ನಡೆಯಿತು. ನಾನಾಗ ಧಾರವಾಡದಲ್ಲಿದ್ದೆ. ನಾನು ಬಯಲು ಸೀಮೆಯ ಗಂಡು, ಎಲ್ಲಿದೆಲ್ಲಿಯ ಸಂಬಂಧ! ಒಂದೊಂದು ಸರ್ತಿ ವಿಚಿತ್ರ ಅನಿಸುತ್ತೆ. ಅದಕ್ಕೆ ಅಲ್ಲವೇ ಮಾಮರವೆಲ್ಲೋ ಕೋಗಿಲೆ ಎಲ್ಲೊ ಅನ್ನೋದು! ನಿಶ್ಚಯಕ್ಕೆ ನನ್ನ ಆಪ್ತ ಮಿತ್ರರನ್ನು ಕರೆದುಕೊಂಡು ಸಿರಸಿ - ಸಿದ್ಧಾಪುರ ನಡುವೆ ಕಾಡಿನ ಮಧ್ಯೆ ನಾವು ಪಯಣಿಸುತ್ತಿದ್ದರೆ, ನನ್ನ ಬಯಲು ಸೀಮೆಯ ಗೆಳೆಯನೊಬ್ಬ ಭಯಂಕರ ಆಶ್ಚರ್ಯದಿಂದ ಕೇಳಿದ "ಹೆಂಗ ಹುಡಿಕಿದಿಲೆ ಈ ಹುಡುಗೀನ!?".

ನನಗೂ ಹಳ್ಳಿ, ಝರಿ, ಗಿಡ - ಮರ ಕಂಡರೆ ತುಂಬಾ ಇಷ್ಟ. ಹಾಗಿದ್ದಾಗ, ನಮ್ಮ ಕುಟುಂಬದ ಆಪ್ತರೊಬ್ಬರು ಚೆಂದನೆಯ ಹುಡುಗಿಯ ಫೋಟೋ ಮುಖಕ್ಕೆ ಹಿಡಿದು, ಮಲೆನಾಡ ಹುಡುಗಿನ ಮದುವೆ ಆಗ್ತಿಯ ಅಂದಾಗ, ನಾನು "ಇಲ್ಲ" ಅನ್ನುವ ಚಾನ್ಸೇ ಇರಲಿಲ್ಲ! ಹುಡುಗಿಯ ಮನೆಯ ಹಿಂದುಗಡೆಯೇ ಒಂದು ಫಾಲ್ಸ್ ಇದೆ ಅಂತ ಅವರು ಹೇಳಿದಾಗಲಂತೂ ಸ್ವರ್ಗಕ್ಕೆ ಮೂರೇ ಗೇಣು! ಆದರೆ ಅವರು ಹೇಳಿದ್ದು ಸ್ವಲ್ಪ ಅತಿಶಯೋಕ್ತಿ ಅಂತ ಆಮೇಲೆ ಗೊತ್ತಾಯ್ತು. ಫಾಲ್ಸ್ ಅಷ್ಟು ಹತ್ತಿರದಲ್ಲಿ ಇರಲಿಲ್ಲ. ಆದರೆ ನನ್ನ ಮಾವನ ಮನೆಯ ಸುತ್ತ ಮುತ್ತ ಫಾಲ್ಸ್ ಗಳಿಗೆ ಕೊರತೆಯೂ ಇಲ್ಲ. ಅದೇನೇ ಇರಲಿ ನಾನಂತೂ ಹುಡುಗಿನ ನೋಡಿ "ಫಾಲ್" ಆಗಿದ್ದಾಗಿತ್ತು!

ಮದುವೆಯಾದ ಮೊದಲ ವರ್ಷ ಆ ಹಬ್ಬ, ಈ ಹಬ್ಬ ಅಂತ ಮಾವನ ಮನೆಗೆ ಹೋಗುವುದು ಇದ್ದೆ ಇರುತ್ತಿತ್ತು. ಅದು ಮಗಳಿಗಿಂತ ನನಗೆ ಸಂಬ್ರಮ! ಯಾಕಂದರೆ ಆ ನೆಪದಲ್ಲಾದರೂ ಹಳ್ಳಿಯ ಸೊಬಗು ಸವಿಯುವ ಸೌಭಾಗ್ಯ ನನ್ನದು. ಆದರೆ ಮಲೆನಾಡ ಕಡೆಯ ಹಳ್ಳಿಗಳು ಕೆಲವು ವಿಷಯದಲ್ಲಿ ನಮ್ಮ ಬಯಲು ಸೀಮೆಯ ಹಳ್ಳಿಗಳಿಗಿಂತ ವಿಭಿನ್ನ ಅನ್ನುವುದು ನಾನು ಕಂಡುಕೊಂಡ ಸತ್ಯ. ಅದೇನೇ ವಿಭಿನ್ನತೆ ಇದ್ದರೂ ಎರಡೂ ಕಡೆಯ ಉಪಚರಿಸುವ ಪರಿ ಒಂದೇ! ಅಲ್ಲದೇ, ಕೈ ದೊಡ್ಡದು. ಹೋದಾಗಲೋಮ್ಮೆ ನನ್ನ ಬಾವ ತಮ್ಮ ಬಳಗದವರ ಮನೆಗೆಲ್ಲ ಕರೆದೊಯ್ಯುತ್ತಿದ್ದ. ಹಾಗೆ ಹೋಗುವುದು ಮೊದ ಮೊದಲು ಮಜವಾಗಿತ್ತಾದರೂ ನಂತರದ ದಿನಗಳಲ್ಲಿ ತುಂಬಾ ಕಿರಿ ಕಿರಿ ಆಗತೊಡಗಿತು. ನಮ್ಮ ಅತ್ತೆ - ಮಾವರ ಬಳಗ ದೊಡ್ಡದು. ಎಲ್ಲರ ಮನೆಗಳು ಅಲ್ಲೇ ಸುತ್ತ ಮುತ್ತ ಹಳ್ಳಿಗಳಲ್ಲಿವೆ. ಅತ್ತೆಯಂದಿರು, ಚಿಕ್ಕಮ್ಮ - ಚಿಕ್ಕಪ್ಪಗಳು, ಸೋದರ ಮಾವಂದಿರು,... ಹೀಗೆ ಎಲ್ಲರ ಮನೆಗೆ ಭೇಟಿ ಕೊಡಲೇಬೇಕು. ಬಾವ ನಾನು ಬರುವುದು ಗೊತ್ತಾದ ಕೂಡಲೇ ಒಂದು ಮಾಸ್ಟರ್ ಪ್ಲಾನ್ ತಯಾರಿಸಿಕೊಂಡು ಬಿಡುತ್ತಿದ್ದ. ದಿನಕ್ಕೆ ಕನಿಷ್ಠ ನಾಲ್ಕು ಮನೆಗಳಿಗೆ ಭೇಟಿ, ಕೊಡುವುದು ಅವನ ಟಾರ್ಗೆಟ್. ಒಂದು ಮನೆಯಲ್ಲಿ ಆಸರಿಗೆ (ಆಸರಿಗೆ ಅಂದರೆ ನಮ್ಮ ಕಡೆ ಚಹಾ-ಚೂಡ ಇದ್ದಂಗೆ), ಇನ್ನೊಂದು ಮನೆಯಲ್ಲಿ ಮದ್ಯಾನ್ಹದ ಊಟ, ಮತ್ತೊಂದು ಮನೆಯಲ್ಲಿ ಮತ್ತೆ ಆಸರಿಗೆ, ಕೊನೆಗೊಂದು ಮನೆಯಲ್ಲಿ ರಾತ್ರಿಯ ಊಟ! ಅದಲ್ಲದೆ ಮಾಸ್ಟರ್ ಪ್ಲಾನ್ ಬಿಟ್ಟು ಬೇರೆ ಭೇಟಿಗಳೂ ಇರುತ್ತಿದ್ದವು. ದಾರಿಯಲ್ಲಿ ಬರುವಾಗ, "ಇದು ನಮ್ಮ ಅಜ್ಜಿಯ ತವರು ಮನೆ" ಅಂತ ಹೇಳಿ ಅವರ ಮನೆಗೆ ಕರೆದೊಯ್ಯುತ್ತಿದ್ದ! ಬಯಲು ಸೀಮೆಯ ಗಂಡು ನಾನಾದ್ದರಿಂದ, ಮಲೆನಾಡಿನ ಮನೆಗಳಲ್ಲಿ ಕೇಜಿಗಟ್ಟಲೆ ಅನ್ನ ತಿಂದು ಹೈರಾಣಾಗತೊಡಗಿದೆ. ಅದೊಂದೇ ಅಲ್ಲ, ಅದರ ಜೊತೆಗೆ ಎಲ್ಲರ ಮನೆಯಲ್ಲೂ ಸಿಹಿ ತಿನಿಸುಗಳು. ನಿಜಕ್ಕೂ ಸಿಹಿ ತಿನ್ನೋದರಲ್ಲಿ ಅವರದು ಎತ್ತಿದ ಕೈ. ಸಿಹಿಯಾದ ಹೋಳಿಗೆಗೆ ಸಕ್ಕರೆ ಪಾಕ ಹಾಕಿಕೊಂಡು ತಿನ್ನುತ್ತಾರೆ! ನನಗೆ ಅದನ್ನು ನೋಡಿಯೇ ಹೊಟ್ಟೆ ತುಂಬುತ್ತಿತ್ತು, ಇನ್ನು ಹಾಗೆ ತಿನ್ನುವುದಂತೂ ದೂರದ ಮಾತು.

ಅದೂ ಅಲ್ಲದೆ ಯಾರದೇ ಮನೆಯಲ್ಲಿ ಏನಾದರೂ ತಿನ್ನುವುದಿದ್ದರೆ ಅಡಿಗೆ ಮನೆಗೇ ಹೋಗಬೇಕು! ೫ ಫೂಟ್ ಉದ್ದದ ಪ್ರಧಾನ ಬಾಗಿಲಿಗೆ ಎಷ್ಟೋ ಸರ್ತಿ ತಲೆ ಬಡಿಸಿಕೊಂಡದ್ದಿದೆ. ಹಾಗೆ ಬಡಿಸಿಕೊಂಡಾಗಲೊಮ್ಮೆ , ಆ ಮನೆಯ ಯಜಮಾನರು "ತಗ್ಗಿ ಬಗ್ಗಿ ನಡೆಯೋವು ಅಂತ ನಮ್ಮ ಹಿರಿಯರು ಹೀಗೆ ಮಾಡ್ಸಿದ್ದು ನೋಡು ತಮ್ಮಾ" ಅಂತ, ಬುದ್ಧಿ ಹೇಳೋರು. ತಲೆಗೆ ಬಡಿಸಿಕೊಂಡ ನೋವು, ನನಗದು ಕಾಣಲೇ ಇಲ್ಲವಲ್ಲ ಎಂಬ ಅಪಮಾನ, ಅದರ ಮೇಲೆ ಯಜಮಾನರ ಪ್ರವಚನ! ಈ ಥರ ಆದ ಮೇಲೆ ಯಾರ ಮನೆಗೆ ಹೋದರೂ ಮನೆ ತುಂಬಾ ತಲೆ ತಗ್ಗಿಸಿಕೊಂಡೇ ನಡೆಯಲಾರಂಭಿಸಿದೆ!

ನಾನು ಸುಸ್ತಾಗಿ ಹೋಗಿದ್ದೆ! ಮಾವನ ಮನೆಗೆ ಹೋಗಲೇ ಹೆದರಿಕೆ ಬರುವಂತಾಯ್ತು. ಹೀಗೆ ಒಂದು ಬಾರಿ ಹೋದಾಗ, ಬಾವನ ಬಳಿ ನಿಷ್ಟುರನಾಗಿ ಹೇಳಿ ಬಿಟ್ಟೆ.

"ನನಗೆ ಈ ಪರಿ ತಿಂದು ಅಭ್ಯಾಸವಿಲ್ಲ, ಸಿಹಿ ತಿನಿಸಂತೂ ನನಗೆ ತಿನ್ನಲು ಆಗದು. ನೀನು ಹೀಗೆ ಎಲ್ಲರ ಮನೆಯಲ್ಲೂ ತಿನ್ನಿಸಿದರೆ ನಾನು ಎಲ್ಲೂ ಬರುವುದಿಲ್ಲ" ಅಂತ. ಬಾವ ಮೀಸೆಯಡಿಯಲ್ಲೇ ಸಣ್ಣಗೆ ನಗುತ್ತಿದ್ದನೋ ಅಥವಾ ಅದೂ ನನ್ನ ಭ್ರಮೆಯೋ ಗೊತ್ತಿಲ್ಲ!

"ಆಯ್ತು ಬಾವ, ನಾನು ಪ್ರತಿಯೊಬ್ಬರ ಮನೆಗೆ ಭೇಟಿ ಕೊಟ್ಟಾಗ ಈ ರೀತಿ ಅವರಿಗೆ ಹೇಳುವೆ" ಅಂತ ಭಾಷೆ ಕೊಟ್ಟ.

ಸರಿ ಅಂತ ಮತ್ತೆ ನಮ್ಮ ದಂಡ ಯಾತ್ರೆ ಶುರುವಾಯ್ತು. ಆದರೆ ಬಾವ ಮಾತ್ರ ತಾನು ಕೊಟ್ಟ ಮಾತಿಗೆ ತಪ್ಪಲಿಲ್ಲ! ಮೊದಲೇ ಅಡುಗೆ ಮನೆಗೆ ಹೋಗಿ ಹೇಳಿ ಬಿಡುತ್ತಿದ್ದ. ಹೀಗಾಗಿ ಸಿಹಿ ತಿನ್ನಲು ನನಗಾರು ವತ್ತಾಯ ಮಾಡುತ್ತಿರಲಿಲ್ಲ. ಅದೂ ಅಲ್ಲದೆ, ಊಟದಲ್ಲೂ ಕೆಲವರು ಮಾರ್ಪಾಡು ಮಾಡತೊಡಗಿದರು. ಅನ್ನದ ಬದಲು ಚಪಾತಿ, ಪಲ್ಯ ಇರುತ್ತಿತ್ತು. ಹೀಗೆ ಬಯಲು ಸೀಮೆ ಗಂಡಿನ ಅಳೆಯತನ ಸಾಂಗವಾಗಿ ನಡೆದಿತ್ತು!

ಅಂಥದರಲ್ಲಿ ಒಂದು ಸರ್ತಿ ಯಾವುದೋ ಹತ್ತಿರದ ಹಳ್ಳಿಯಲ್ಲಿ ಮಾವನ ಸಂಬಂಧಿಯೊಬ್ಬರ ಮನೆಯಲ್ಲಿ ಉಪನಯನವಿತ್ತು. ಬಾವನ ಸಂಗಡ ನಾನು ಹೋಗಿದ್ದೆ. ಊಟಕ್ಕೆ ಪಂಕ್ತಿಯಲ್ಲಿ ಬಾವನೊಂದಿಗೆ ಪವಡಿಸಿದ್ದೆ. ಮತ್ತೆ ಅನ್ನ, ತಂಬಳಿ, ಹಸಿ... ಅದನ್ನು ಬಿಟ್ಟು ಬೇರೆ ಏನು ಇರಲು ಸಾಧ್ಯ?! ನಾನು ನಿರ್ಲಿಪ್ತನಾಗಿದ್ದೆ. ಒಂದೆರಡು ರೌಂಡ್ ಆದ ಮೇಲೆ, ಸಿಹಿ ತಿನಿಸಿನ ಸಮಯ. ನಾನು ಪೂರ್ತಿ ಟೆನ್ಶನ್ ನಲ್ಲಿದ್ದೆ! ಸಿಹಿ ತಿನಿಸು ನನ್ನ ಎಲೆಗೆ ಬೀಳದಂತೆ ತಡೆಯುವದು ನನ್ನ ದೊಡ್ಡ ಚಾಲೆಂಜ್ ಆಗಿತ್ತು! ಅಷ್ಟರಲ್ಲೇ ಯಾರೋ ಬಾವನ ಪರಿಚಯದವರೇ ಸಿಹಿ ಪದಾರ್ಥ ಬಡಸುತ್ತಿದ್ದರು. ಬಡಸುವವರು ನನ್ನ ಎಲೆ ಹತ್ತಿರ ಬಂದ್ರು. "ಕಾಯಿ ಹೋಳಿಗೆ" ಅಂದ್ರು. ಇದು ಯಾವ ಕಾಯಿಯಿಂದ ಮಾಡಿದ್ದೋ ಅಂತ ನಾನು ಅಸಡ್ಡೆಯಿಂದ "ಬೇಡ" ಅಂದೇ. ಆದರೆ ನನಗಿಂತ ಮೊದಲೇ ಬಾವ ನನ್ನ ಎಲೆಗೆ ಕೈ ಅಡ್ಡ ಹಿಡಿದು, "ಅವ್ನು ಸ್ವೀಟ್ ತಿನ್ತ್ನಿಲ್ಲೇ ಅವನಿಗೆ ಹಾಕಡ" ಅಂತ ಹರ ಸಾಹಸ ಮಾಡಿ ಸಿಹಿ ಪದಾರ್ಥ ನನ್ನ ಎಲೆಗೆ ಬೀಳುವುದ ತಪ್ಪಿಸಿದ್ದ! ಏನೋ ಸಾಧಿಸಿದ ಭಾವ ಅವನ ಮುಖದಲ್ಲಿ ಎದ್ದು ಕುಣಿಯುತ್ತಿತ್ತು. ನಾನು ನಿಟ್ಟುಸಿರಿಟ್ಟೆ. ಆದರೆ ಹಾಗೆ ಕುತೂಹಲಕ್ಕೆ "ಕಾಯಿ ಹೋಳಿಗೆ ಅಂದರೆ ಏನು?" ಅಂತ ಕೇಳಿದೆ, "ಖೊಬ್ರೀ ಹಾಕಿ ಮಾಡಿದ ಹೋಳಿಗೆ" ಅಂದ. ನನ್ನ ಎದೆ ಜ್ಹಲ್ ಎಂದಿತ್ತು. ಯಾಕಂದರೆ, ನನಗೆ ಬಹಳಷ್ಟು ಸಿಹಿ ತಿನಿಸುಗಳು ಇಷ್ಟವಿಲ್ಲವಾದರೂ, ಇಷ್ಟವಾಗುವ ಕೆಲವೇ ಕೆಲವುಗಳಲ್ಲಿ ಖೊಬ್ರೀ ಹೋಳಿಗೆಯು ಒಂದು! ನನಗೇನು ಗೊತ್ತು ಖೊಬ್ರೀ ಹೋಳಿಗೆ ಅಂದ್ರೆ ಇಲ್ಲಿ ಕಾಯಿ ಹೋಳಿಗೆ ಅಂತ! ಅಂತು ಇಂತೂ opportunity ಮಿಸ್ ಆಗಿತ್ತು. ವಾಪಸ್ಸು ಕರೆಸಿ ಹಾಕಿಸಿಕೊಳ್ಳೋಕೆ ಸ್ವಾಬಿಮಾನ ಅಡ್ಡ ಬಂತು. ನನಗೆ ಸ್ವೀಟ್ ಸೇರಲ್ಲ ಅಂತ ಬಡಾಯಿ ಕೊಚ್ಚಿಕೊಂಡವನು ನಾನೇ ಅಲ್ವೇ?!

ಮನೆಗೆ ಬಂದು ಹೆಂಡತಿ ಎದುರು ನನಗಾದ ಫಜೀತಿ ಹಂಚಿಕೊಂಡೆ. ಅವಳು ಬಿದ್ದು ಬಿದ್ದು ನಕ್ಕಳು. ಆದರೆ ಬೆಂಗಳೂರಿಗೆ ಬಂದ ಮೇಲೆ "ಕಾಯಿ ಹೋಳಿಗೆ" ಮಾಡಿ ತಿನ್ನಿಸಿದಳು! ನನ್ನ ಹೆಂಡತಿ ತುಂಬಾ ಒಳ್ಳೆಯವಳು. ಅದಕ್ಕೆ ಅಲ್ವೇ ಅವಳನ್ನ ಮದುವೆಯಾಗಿದ್ದು!

Wednesday, March 2, 2011

ಹಿಂಗ ಒಂದು ವೀಕೆಂಡು... ( ಭಾಗ ೧)

ಇವತ್ತ್ಯಾಕೋ ಮುಂಜಾನೆ ಎದ್ದಾಗ ಒಂಥರ ಹುರುಪು. ಅದಕೊಂದು ಕಾರಣ ಇತ್ತು. ಯಾಕಂದ್ರ ಇವತ್ತ ಶುಕ್ರವಾರ! ನಾನು ಮಾಡೋ ಕೆಲಸಾನ ಅಂಥದ್ದು. ಸೋಮವಾರ ಯಾಕರೆ ಬಂತು ಅಂತ ಎಳ್ತೀನಿ, ವೀಕೆಂಡ್ ಎಲ್ಲೆ ಮುಗುದು ಹೋಗತದೋ ಅಂತ ಹಪಹಪಿಯೊಳಗ ಮತ್ತ ಬಾರೋ ಸೋಮವಾರ ಮರಿಲಿಕ್ಕೆ ಪ್ರಯತ್ನ ಮಾಡ್ತೀನಿ. ವಾರದಾಗ ಎರಡು ದಿವ್ಸ ರಜ, ಹಿಂಗ ಬಂದು ಹಿಂಗ ಹೋಗ್ತಾವು ಅದಂತೂ ನಿಜ!

ಶುಕ್ರವಾರ ಕೆಲಸಕ್ಕ ಹೋಗುದ ಲೇಟು, ಹೋಗುದ್ರಾಗ ಮಧ್ಯಾನ ಊಟದ್ದ ಟೈಮು. ಅವತ್ತ ಯಾವ ಕಾಲ್ ಅಥವಾ ಮೀಟಿಂಗ್ಸ್ ಇರುದಿಲ್ಲ. ಹಿಂಗ ಅಲ್ಲೇ ಇಲ್ಲೇ ಅಡ್ಡಾಡುದ್ರಾಗ ಸಂಜಿ ಆಗಿ ಬಿಡ್ತದ! ಅಮ್ಯಾಲಿನ ಪ್ರೊಗ್ರಾಮ್ ಮೊದಲ ಫಿಕ್ಸ್ ಆಗಿರ್ತದ. ಯಾವಂದೋ ಮನ್ಯಾಗ ಬಾಟಲಿ ವ್ಯವಸ್ಥಾ ಇರತದ. ಹೋಗುದು, ರಾತ್ರಿ ತನಕ ಹೊಟ್ಟಿ ತುಂಬ ಕುಡದು ಮನಿಗೆ ವಾಪಸ್. ಇದೊಂಥರ ಅನ್ನ್ ರಿಟ್ಟನ್ ರೂಲ್! ಒಂದು ಸಲ ರಾಜಾನ ಮನ್ಯಾಗ, ಇನ್ನೊಮ್ಮೆ ವೆಂಕಣ್ಣ ಮತ್ತೊಮ್ಮೆ ಸುಬ್ಬ್ಯ. ನಮ್ಮ ಮನ್ಯಾಗ ಸೇರುದು ಸ್ವಲ್ಪ ಕಷ್ಟ, ಯಾಕಂದ್ರ ನಾನು ಇರೋದು ಅಪ್ಪನ ಜೋಡಿ. ಉಳಕಿದವ್ರಿಗೆಲ್ಲ ಆ ಸಮಸ್ಸೆ ಇರಲಿಲ್ಲ. ಅವರ ಅಪ್ಪಂದ್ರೆಲ್ಲ ಊರಾಗ ಇರ್ತಾರ. ಅದಕ್ಕ ಕಳ್ಳ ನನ ಮಕ್ಳು ಟೈಮ್ ಸಿಕ್ಕಗೊಮ್ಮೆ ಕುಡಿಯೋದ ಕೆಲಸ. ಅವರ ನಸೀಬ್ ನೋಡಿ ನನಗ ಒಂದೊಂದು ಸರ್ತಿ ಹೊಟ್ಟಿ ಕಿಚ್ಚಾಗತಿತ್ತು! ಮುಂದ ನನ್ನ ಲಗ್ನ ಆದ ಮ್ಯಾಲೆ ಇನ್ನೇನು ಗತಿನೋ ಅಂತ ನೆನಿಸಿಕೊಂಡರ ಇನ್ನು ಹೆದರಿಕಿ ಅಗತದ.

ಆಫೀಸ್ ಬಿಟ್ಟಾಗ ಆಗ್ಲೇ ಸಂಜೆ ಆರಾಗಿತ್ತು. ಎಲ್ಲರು ಕೂಡಿ ವೆಂಕಣ್ಣನ ಕಾರಿನ್ಯಾಗ ಅವನ ಮನಿಗೆ ಹೊಂಟಿವಿ. ಅವಂದು ಹೊಸಾ ಕಾರು. ಹೋದ ತಿಂಗಳನ ತೊಗೊಂಡಾನ. ಅಂವ ತೊಗೊಂಡ ಅಂದ್ಕುಡ್ಲೆ ನನ್ಯಾಕ ಬಿಡ್ಲಿ? ನಂದೂ ಹೊಸಾ ಕಾರು ಬುಕ್ ಮಾಡಿನಿ. ಮುಂದಿನ ವಾರ ಬರ್ತದ. ಮನಷ್ಯನ ಅಸೇನ ಹಂಗ. ಯಾವುದು ಇಲ್ಲ ಅದ ಬೇಕು ಅನಸ್ತದ. ಅದು ಬಂದ ಮ್ಯಾಲೆ ಇನ್ನೇನೋ ಬೇಕು! ಮನಷ್ಯ ಸಾಯು ತನಕ ಆಸೆಗಳು ಸಾಯಂಗೆ ಇಲ್ಲ. ಅಪ್ಪಗ ಒಂದು ಫೋನ್ ಹೊಡದು ನನಗ ಇವತ್ತ ರಾತ್ರಿ ಆಫೀಸ್ನ್ಯಾಗ ಕೆಲಸ ಭಾಳ ಅದ ಲೇಟಾಗಿ ಬರ್ತೀನಿ ಅಂತ ಒಂದು ಹಸಿ ಸುಳ್ಳು ಒಗದೆ. ಪಾಪ ಅಪ್ಪ... ನಾ ಹಿಂಗ ಏನೋ ಒಂದು ಸುಳ್ಳು ಹೇಳಿದಾಗೊಮ್ಮೆ ನಂಬತಾನ. ತನ್ನ ಮಗ ಕುಡುದು ಮನಿಗೆ ಬರ್ತಾನ ಅಂತ ಅವಗ ಒಂದು ಸರ್ತಿನು ಸಂಶಯ ಬಂದಿರಲಿಕ್ಕಿಲ್ಲ ಅಂದ್ರ ಆಶ್ಚರ್ಯ ಅಗತದ. ತನ್ನ ಮಗ ಅಂಥದೆಲ್ಲ ಮಾಡಲಿಕ್ಕೆ ಸಾಧ್ಯನ ಇಲ್ಲ ಅನ್ನೋ ಅಭಿಮಾನನೋ ಅಥವಾ ಕುರುಡು ನಂಬಿಕೆನೋ, ನಂಗೊತ್ತಿಲ್ಲ.

ನಮ್ಮ ಕಾರ್ಯಕ್ರಮ ಮಸ್ತ ಆಗಿ ನಡದಿತ್ತು. ಹಿಂಗ ಹರಟಿ ಹೊಡಕೋತ ಇದ್ದಾಗ ಕಾರು ಹೊಡಿಯೋದರ ಮ್ಯಾಲೆ ವಾದ ನಡದಿತ್ತು. ವೆಂಕಣ್ಣ ಅಂದ,

"ನಾನು ನಾರ್ಮಲ್ ಇದ್ದಾಗಿನಕಿಂತ ಕುಡದಾಗ ಕಂಟ್ರೋಲ್ನ್ಯಾಗ ಕಾರ್ ಹೊಡಿತೀನಿ"

ಇದ್ರೂ ಇರಬಹುದು ಅನಿಸ್ತು ನಂಗ. ಯಾಕಂದ್ರ, ಕುಡದ ಮ್ಯಾಲೆ ಕಾರ್ ಹತ್ರ ಹೋಗುದ್ರಾಗ ಎರಡು ಸಲ ಅರೆ ಕೆಳಗ ಬಿಳತಾನ, ಅದ್ರ ಕಾರ್ ಸ್ಟಾರ್ಟ್ ಮಾಡಿದ ಅಂದ್ರ ಆರಾಮ ಮನಿ ಮುಟ್ಟತಾನ.

ಅದ್ರ ಸುಬ್ಬ್ಯ ಯಾಕ ಸುಮ್ನ ಇರ್ತಾನ, ಪಟ್ ಅಂತ ಹೇಳಿದ,

"ದೊಡ್ಡ ಪೋಕಾಕಿ ಮಾತಾಡ್ ಬ್ಯಾಡ್ಲೆ ಮಗನ, ಟೈಮ್ ಸರಿ ಇಲ್ಲ ಅಂದ್ರ ಎಂಥ ಕಂಟ್ರೋಲ್ ನ್ಯಾಗ ಇದ್ರೂ ಸಂಬಂಧ ಇಲ್ಲ...",

ಸುಬ್ಯನ ಈ ವಾದಾನೂ ನನಗ ಸರಿ ಅನಿಸ್ತು. ಆದರ ಅವರಿಬ್ಬರ ನಡುವ ಘನ ಘೋರ ವಾದ ಅಂತು ಸುರು ಆತು. ಅಂತು ಇಂತು ಇಬ್ಬರ್ನು ಸಮಾಧಾನ ಮಾಡುದ್ರಾಗ ಹನ್ನೆರಡು ಆಗಿತ್ತು. ನಾನು ಮನಿಗೆ ಹೋಗಲಿಕ್ಕೆ ಬೇಕಾಗಿತ್ತು. ನಾನು ಮತ್ತ ಸುಬ್ಯ ಆಟೋ ಮಾಡಿಕೊಂಡು ಮನಿಗೆ ಹೊಂಟಿವಿ.


ಮನಿ ಮುಟ್ಟಿದಾಗ ೧.೩೦. ಪಾಪ ಅಪ್ಪ ಬಾಗಲ ತಗದ. ಮಗಾ ಎಷ್ಟೊಂದು ಕೆಲಸ ಮಾಡಿ ಬಂದಾನ ಅನ್ನೋ ಕರುಣಾ ಭಾವ ಅಪ್ಪನ ಮುಖದಾಗ ಎದ್ದು ಕಾಣತಿತ್ತು. ಆದರ ಪಾಪ ಪ್ರಜ್ಞೆ ಒಳಗ ನನ್ನ ಕಣ್ಣು ನೆಲ ನೋಡತಿದ್ವು!

ಅಂತು ಇಂತೂ ಮಲಕೊಂಡಾಗ ೨. ಯಾವಾಗ ಬೆಳಗಾತೋ ಗೊತ್ತ ಆಗಿಲ್ಲ. ಕುಡಿದಾಗ ಅದೆಂಥ ಮೈ ಮರುವೋ ನಾ ಕಾಣೆ. ಎದ್ದ ಕುಡ್ಲೆ ಮೊಬೈಲ್ ನೋಡಿಲ್ಲ ಅಂದ್ರ ಸಮಾಧಾನ ಇಲ್ಲ. ಒಂಥರಾ ಎದ್ದ ಕೂಡ್ಲೆ ಹೆಂಡ್ತಿ ಮಾರಿ ನೋಡಿದಂಗ!

'ಅರೆ ಇದೇನಿದು ಇಷ್ಟು ಮಿಸ್ ಕಾಲ್!' ಅದೆಂಥ ದರಿದ್ರ ನಿದ್ದಿ ಬಂದಿತ್ತೋ. ಮೊಬೈಲ್ ರಿಂಗಾಗಿದ್ದು ಗೊತ್ತಾಗಿಲ್ಲ. ಎಲ್ಲ ಕಾಲ್ ಒಂದ ನಂಬರಿಂದ, ಅದು ವೆಂಕಣ್ಣನ ತಮ್ಮ. ಅಂವ ಫೋನ್ ಮಾಡೊದ ಕಡಿಮಿ, ಇವನ್ಯಾಕ ಮಾಡಿದ ಅವರಪ್ಪ ಏನಾದ್ರು ಹೋಗಿಬಿಟ್ರ? ಬರೇ ಕೆಟ್ಟ ವಿಚಾರ ಬರ್ಲಿಖತ್ತಿದ್ವು. ವಾಪಸ್ಸು ಕಾಲ್ ಮಾಡಿದೆ.

"ಅಣ್ಣ,...... ಅನಾಹುತ ಆಗ್ಯದಪ" ಅಂತ ಒಂದ ಸಮಾನ ಆಳಲಿಕ್ಕೆ ಸುರು ಮಾಡಿದ. ನನಗ ಖಾತ್ರಿ ಆತು ಅಪ್ಪನೋ ಅಮ್ಮನೋ ಹೋಗಿರಬೇಕು ಅಂತ.

"ಸಮಾಧಾನ ಮಾಡ್ಕೋಪಾ, ಏನಾತು ಹೇಳು " ಅಂದೇ.

"ಇನ್ನೇನು ಆಗುದು ಉಳದಿಲ್ಲಪ, ವೆಂಕಣ್ಣ ಹೋಗಿ ಬಿಟ್ಟ" ಅಂದ! ನನಗ ಹುಚ್ಚು ಹಿಡಿಯೊದೊಂದ ಬಾಕಿ. ನಿನ್ನೆ ಇನ್ನ ನಂಜೋತಿ ಕುಡಕೋತ ಕುತಂವ ಹೆಂಗ ಸಾಯಲಿಕ್ಕೆ ಸಾಧ್ಯ? ವೆಂಕ್ಯನ ತಮ್ಮಗ ಹುಚ್ಹ ಹಿಡದಿರಬೇಕು, ಸಿಟ್ಟಿಲೆ ಒದರಿದೆ.

" ಲೇ ಹುಚ್ಹ ಗಿಚ್ಹ ಹಿಡದದೇನು ನಿನಗ!??"

(ಕತಿ ಇನ್ನು ಮುಗದಿಲ್ಲ ಮುಂದುವರಸ್ತಿನಿ ... ಆದರ ಮುಂದುವರಸ್ಲ್ಯೋ ಬ್ಯಾಡೋ ಅಂತ ನೀವ ಹೇಳಬೇಕು ...)