Monday, September 29, 2014

ವಿಸ್ಮಯದ ಮಾಯಾಲೋಕ!

(http://www.panjumagazine.com/?p=8609)

ಕಾರ್ಪೊರೇಟ್ ಜಗತ್ತಿನಲ್ಲಿ, ವರ್ಷಕ್ಕೊಮ್ಮೆಯೋ, ಎರಡು ಸರ್ತಿಯೋ ಟೀಮ್ ಔಟಿಂಗ್ (team outing) ಅಂತ ಮಾಡುತ್ತಾರೆ. ಒಂದು ದಿನದ ಮಟ್ಟಿಗೆ ಕಚೇರಿಯ ಸಹೋದ್ಯೋಗಿಗಳೆಲ್ಲರೂ ಬೆಂಗಳೂರಿನಿಂದ ಸ್ವಲ್ಪ ಹೊರ ವಲಯದಲ್ಲಿರುವ ರಿಸಾರ್ಟ ಒಂದರಲ್ಲಿ ಕಾಲ ಕಳೆದು ಬರುತ್ತಾರೆ. ಅಲ್ಲಿ ಆಟವಾಡಿಸುತ್ತಾರೆ, ಅಬ್ಬರದ ಸಂಗೀತವಿರುತ್ತೆ, ನೃತ್ಯವಿರುತ್ತೆ. ತಮ್ಮ ಒತ್ತಡದ ಕೆಲಸದ ಮಧ್ಯೆ ದಣಿದ ಜೀವಗಳಿಗೆ ಒಂದಿಷ್ಟು ವಿರಾಮ ಕೊಡಿಸುವ ಪ್ರಯತ್ನ ಅದು. ಅದರ ಘೋಷಣೆಯಾಗುತ್ತಲೇ ಎಲ್ಲರಿಗೂ ಖುಷಿ, ಇನ್ನೂ ಕೆಲವು ಆತ್ಮಗಳಂತೂ ಸಂತಸದಿಂದ ಅರಳುತ್ತವೆ. ಆ ಆತ್ಮಗಳ ನೆಲೆಯಾಗಿರುವ ದೇಹಗಳಿಗೊಂದು, ವಿಶಿಷ್ಠವಾದ ಅವಕಾಶ ಆ ಔಟಿಂಗಿನ ನೆಪದಲ್ಲಿ ಲಭ್ಯವಾಗುತ್ತದೆ. ಅದು ಕಂಠ ಪೂರ್ತಿ ಮದ್ಯಪಾನ ಮಾಡುವ ಒಂದು ಸುವರ್ಣ(?) ಅವಕಾಶ. ಒಟ್ಟಿನಲ್ಲಿ ಎಲ್ಲಾ ಆತ್ಮಗಳ ಸಂತೃಪ್ತಿಗಾಗಿಯೇ ಕಂಪನಿಗಳು ಈ ತರಹದ ಔಟಿಂಗುಗಳನ್ನು ಆಗಾಗ ನಡೆಸುತ್ತಾರೆ. ಅದರ  ಬಗ್ಗೆ ವಿವರವಾಗಿ ಮುಂದೆ ಯಾವಾಗಲಾದರೂ ಬರೆಯುವ ಮನಸ್ಸಿದೆ.

ಮೊನ್ನೆ ೧೯ ನೇ ದಿನಾಂಕಕ್ಕೆ ಇಂಥದೊಂದು ಔಟಿಂಗಿಗೆ ನಾನು ಹೋಗುವದಿತ್ತು. ನನಗೊಳ್ಳೆಯ ಧರ್ಮ ಸಂಕಟ! ಅದಕ್ಕೆ ಕಾರಣವೆಂದರೆ, ಅದೇ ದಿನ ಸಂಜೆ ನಮ್ಮ ನಾಟಕ ತಂಡವಾದ 'ರಂಗ ವಿಸ್ಮಯ' ದ ನಾಟಕವೊಂದರ ಮೊಟ್ಟ ಮೊದಲ ಪ್ರದರ್ಶನವಿತ್ತು. ನನಗೆ ಔಟಿಂಗು ತಪ್ಪಿಸಲಾಗದು, ನಾಟಕವನ್ನಂತೂ ಬಿಡುವ ಚಾನ್ಸೇ ಇರಲಿಲ್ಲಾ. ಇದು ಬೆಂಗಳೂರಿನ ಉತ್ತರ ದಿಕ್ಕಿಗಿದ್ದರೆ, ನಾಟಕದ ಪ್ರದರ್ಶನವಿದ್ದದ್ದು ದಕ್ಷಿಣಕ್ಕೆ! ಆದರೆ ಇದು ಬೆಳಿಗ್ಗೆ, ಅದು ಸಂಜೆ ಇದ್ದದ್ದು ಒಂದು ರೀತಿಯಲ್ಲಿ ಅನುಕೂಲ ವಾಗಿತ್ತು. ಔಟಿಂಗಿನಲ್ಲಿ ದೈಹಿಕವಾಗಿ ಹಾಜರಾಗಿದ್ದೆನಾದರೂ ನನ್ನ ಗಮನವೆಲ್ಲಾ ಸಂಜೆ ನಡೆಯುವ ನಾಟಕದ ಕಡೆಗೇ  ಇತ್ತು. ಇಲ್ಲಿ ಮದ್ಯಾಹ್ನದ ಊಟ ಮುಗಿಸಿ, ಅಂತೂ ಇಂತೂ ಎಲ್ಲರ ಕಣ್ಣು ತಪ್ಪಿಸಿಕೊಂಡು ಕೆಂಗಲ್ ಹನುಮಂತಯ್ಯ ಕಲಾಸೌಧಕ್ಕೆ ಆಗಮಿಸಿದಾಗ ಸಂಜೆ ೫:೩೦.

ಅದು ಶ್ರೀ. ಪೂರ್ಣಚಂದ್ರ ತೇಜಸ್ವಿ ಬರೆದ ಮಾಯಾಲೋಕ ಕೃತಿಯ ನಾಟಕ ರೂಪ. ಅದಕ್ಕೆ ಆ ರೂಪ ಕೊಟ್ಟು ನಿರ್ದೇಶಿಸಿದವರು 'ರಂಗ ವಿಸ್ಮಯ' ದ ರುವಾರಿ ಹಾಗೂ ಸತತ ಮೂರು ದಶಕಗಳಿಂದ ವಿವಿಧ ರೀತಿಯಲ್ಲಿ ರಂಗ ಸೇವೆ ಮಾಡಿಕೊಂಡಿರುವ ಅ. ನಾ. ರಾವ್ ಜಾಧವ್. ಅವರು ನನ್ನ ಗುರುಗಳು. ನಾನು  ಕಳೆದ ಕೆಲವು ತಿಂಗಳಿನಿಂದ ರಂಗ ವಿಸ್ಮಯದಲ್ಲಿ ರಂಗ ತರಬೇತಿ ಪಡೆಯುತ್ತಿದ್ದೇನೆ. ಪ್ರತಿ ಭಾನುವಾರ ಅಲ್ಲಿ ನಾನು ಭಾಗವಹಿಸುವ ನಾಲ್ಕು ಗಂಟೆಗಳು ಕಳೆದು ಹೋದದ್ದೇ ಗೊತ್ತಾಗುವುದಿಲ್ಲ.               

ಅವರು ಕೊಡುವ ತರಬೇತಿ ವಿಶಿಷ್ಠವಾದದ್ದು. ಅಲ್ಲಿ ಅವರು ಮೊಟ್ಟ ಮೊದಲು ಕಲಿಸೋದು ಕನ್ನಡ ಓದುವುದನ್ನ! ಅದೂ ಗಟ್ಟಿಯಾಗಿ, ಸ್ಫುಟವಾಗಿ ಓದಬೇಕು. ಅಲ್ಲಿಯವರೆಗೆ ಅವರು ಬಿಡುವುದಿಲ್ಲ! ಜಾಧವ್ ಅವರು ಹೇಳುವಂತೆ, ನಾವು ಮನದೊಳಗೆ ಓದಿಕೊಳ್ಳುವುದನ್ನು ಎಷ್ಟು ಬಳಕೆ ಮಾಡಿಕೊಂಡಿದ್ದೇವೆಂದರೆ, ನಮ್ಮ ನಾಲಿಗೆಗೆ ಕೆಲವು ಅಕ್ಷರಗಳ ಉಚ್ಚಾರದ ರೂಢಿಯೇ ತಪ್ಪಿ ಹೋಗಿರುತ್ತದೆ. ಅದಕ್ಕೆ, ಸರಿಯಾದ ಸಮಯದಲ್ಲದು ಕೈ ಕೊಡುತ್ತದೆ! ಅವರು ಹೇಳೋದು ಸರಿಯೆ. ಇದರ ಜೊತೆಗೆ ಪೇಪರ್ ಓದಿಸುತ್ತಾರೆ, ಅಲ್ಲಿ ಬಂದವರೆಲ್ಲರೂ ಒಂದೊಂದು ಹಾಡು ಹೇಳಲೇಬೇಕು. ಈ ಎಲ್ಲ ವಿಧಾನಗಳಿಂದ ನಮ್ಮಲ್ಲಿನ ನಾಚಿಕೆ ಹೆದರಿ ಓಡಿ ಹೋಗುತ್ತೆ! ಇದೆಲ್ಲ ಆದ ಮೇಲೆ ಸಂಭಾಷಣೆಯನ್ನು ವಿವಿಧ ಹಾವಭಾವಗಳೊಂದಿಗೆ ಹೇಳುವದನ್ನು ಕಲಿಸಿಕೊಡುತ್ತಾರೆ. ತುಂಬಾ ಜನರು ಅವರಿಂದ ತರಬೇತಿ ಪಡೆದು ಬರೀ ನಾಟಕದಲ್ಲಷ್ಟೇ ಅಲ್ಲ, ಶಾಲೆಗಳಲ್ಲಿ ಹಾಗೂ ವೃತ್ತಿಯಲ್ಲಿ ಒಳ್ಳೆ ಪ್ರಗತಿ ಹೊಂದಿದ್ದಾರೆ. ಅಲ್ಲಿ ಬರುವವರು ವಿವಿಧ ಸ್ತರಗಳಿಂದ ಬಂದವರೂ, ಬೇರೆ ಬೇರೆ ವಯೋಮಾನದವರೂ ಇರುತಾರೆ. ಅಲ್ಲಿ ಯಾವುದೇ ಭೇದವಿಲ್ಲ. ಎಲ್ಲರೂ ಕಲಾವಿದರೇ!

ಶ್ರೀಯುತ. ಜಾಧವ್ ಅವರ ಬಗ್ಗೆ ಇನ್ನಷ್ಟು ಹೇಳಬೇಕೆಂದರೆ, ಅವರು ತುಂಬಾ ಓದಿಕೊಂಡಿದ್ದಾರೆ. ತೇಜಸ್ವಿಯವರ ನಿಕಟವರ್ತಿಗಳು, ಹಾಗೂ ಅವರ ಹಲವು ಕೃತಿಗಳಿಗೆ ನಾಟಕದ ರೂಪ ಕೊಟ್ಟು ಯಶಸ್ವಿಯಾಗಿ ಪ್ರದರ್ಶನ ಮಾಡಿಸಿದ್ದಾರೆ. ಅವರ ಇನ್ನೊಂದು ವಿಶೇಷತೆಯೆಂದರೆ, ಅವರ ನಾಟಕಗಳಲ್ಲೆಲ್ಲ ಅವರ ವಿದ್ಯಾರ್ಥಿಗಳೇ ಇರುತ್ತಾರೆ. ಕೆಲವು ಹಳೆಯ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದವರೆಲ್ಲಾ ಹೊಸಬರೇ! ಅವರಿಗೆಲ್ಲ ಅದೊಂದು ವಿಬಿನ್ನ ಅನುಭವ ಹಾಗೂ ಕಲಿಕೆ.

ಅವತ್ತಿನ ನಾಟಕ  'ಮಾಯಾ ಲೋಕ' ದಲ್ಲಿ ಗುರುಗಳು ನನಗೂ ಒಂದು ಪಾತ್ರ ವಹಿಸಿದ್ದರು. ಆದರೆ ಪ್ರತಿ ದಿನ ಸಂಜೆ ೭ ಗಂಟೆಗೆ ರಿಹರ್ಸಲ್ ಇರುತ್ತಿತ್ತು. ನನಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಯಾಕೆಂದರೆ ನಮ್ಮ ಕಂಪನಿಯಲ್ಲಿ ನಮ್ಮ ಅಸಲಿ ನಾಟಕ ಶುರುವಾಗುವುದೇ ಸಂಜೆಗೆ! ಅದೇನೆ ಇರಲಿ, ನಾನು ಅದರಲ್ಲಿಲ್ಲದಿದ್ದರೂ ನಮ್ಮ ತಂಡದ ನಾಟಕ ನೋಡುವ ಸೌಭಾಗ್ಯವನ್ನಾದರೂ ತಪ್ಪಿಸಿಕೊಳ್ಳದೆ ಅಲ್ಲಿಗೆ ಹೋಗಿದ್ದೆ.  

ಆ ನಾಟಕದ ವಿಶೇಷವೆಂದರೆ, ಅದರಲ್ಲಿದ್ದ ಒಟ್ಟು ಪಾತ್ರಗಳು ೪೦! ಹದಿನಾರು ದೃಶ್ಯಗಳು. ಇಷ್ಟೆಲ್ಲ ಪಾತ್ರಗಳ ಜೊತೆಗೆ, ಹೆಚ್ಚು ಕಡಿಮೆ  ಮುಕ್ಕಾಲು ಪ್ರತಿಶತ ಜನ ಹೊಸಬರನ್ನು ಹಾಕಿಕೊಂಡು ನಾಟಕ ಮಾಡಿಸುವುದೆಂದರೆ ಅದೊಂದು ಸಾಹಸವೇ ಸರಿ! ಅದೂ ಅಲ್ಲದೆ ಅವತ್ತು ಡಾ. ಚಂದ್ರಶೇಖರ್ ಕಂಬಾರ್ ಹಾಗೂ ಡಾ. ಬಿ.ವಿ. ರಾಜಾರಾಮ್ ವಿಶೇಷ ಅಹ್ವಾನಿತರು. ಸಭಾಂಗಣವಂತೂ  ಕಿಕ್ಕಿರಿದು ತುಂಬಿತ್ತು. ನಾಟಕವಂತೂ ಅದ್ಭುತವಾಗಿ ಮೂಡಿ ಬಂತು. 'ವೇಷಧಾರಿಗಳ ಅಸಲಿ ನಾಟಕ' ಅನ್ನುವ ಟ್ಯಾಗ್ ನೊಂದಿಗೆ ಸುಂದರ ನಿರೂಪಣೆ, ತೆಳುವಾದ ಹಾಸ್ಯ, ವ್ಯಂಗ್ಯಗಳಿಂದ ಒಳ್ಳೆ ಮನರಂಜನೆ ಕೊಡುವಂತಹ ನಾಟಕವದು. ಹಿನ್ನೆಲೆ ಗಾಯನವಂತೂ ಮನೆಗೆ ಹೋಗುವ ತನಕವೂ ಕಿವಿಯಲ್ಲಿ ಗುಂಯ್ ಗುಡುತ್ತಿತ್ತು. ಅವರ ಹಾಗೂ ತಂಡದ ಪ್ರಯತ್ನ ಅದ್ಭುತ ಯಶಸ್ಸು ಕಂಡಿತು! ಪ್ರೇಕ್ಷಕರ ನಗು ಹಾಗೂ ಚಪ್ಪಾಳೆಗಳಲ್ಲೇ ಅದು ಸ್ಪಷ್ಟವಾಗಿತ್ತು.

ಆ ಯಶಸ್ವಿ ಪ್ರದರ್ಶನದ ಬಳಿಕ ಆ ತಂಡದಲ್ಲಿ ಪ್ರತ್ಯಕ್ಷವಾಗಿ  ಹಾಗೂ ಪರೋಕ್ಷವಾಗಿ ಭಾಗವಹಿಸಿದ ತಂಡದ ಸದಸ್ಯರ ಮುಖದಲ್ಲಿ ಮೂಡಿದ್ದ ಧನ್ಯತಾ ಭಾವ, ಏನೋ ಸಾಧಿಸಿದ ತೃಪ್ತಿ ಇದೆಯಲ್ಲ, ಅದನ್ನು ನೋಡಿ ಖುಷಿಯಾಯ್ತು. ಆ ಖುಷಿ ನಮ್ಮ ಕಾರ್ಪೋರೇಟ್ ಔಟಿಂಗಿನಲ್ಲಿ ದೊರೆಯುವ ಖುಷಿಗಿಂತ ಮೇಲು ಅನಿಸಿತು. ಇದು ಮತ್ತೆ ಮತ್ತೆ ನೆನಪು ಮಾಡಿಕೊಂಡು ಮನಸ್ಸಿಗೆ ಮುದ ನೀಡುತ್ತ ಶಾಶ್ವತವಾಗಿರುತ್ತದೆ. ಅದೇ, ಔಟಿಂಗು ಆ ಮಟ್ಟಿಗಿನ ತಾತ್ಕಾಲಿಕ, ಕ್ಷಣಿಕ ಸುಖವೆನಿಸಿ, ಮತ್ತೆ ಸೋಮವಾರ ಕೆಲಸಕ್ಕೆ ಹೋಗುವ ಚಿಂತೆಯೊಂದಿಗೆ ಮುಗಿಯುತ್ತೆ. ಅದರ ಬದಲು ಔಟಿಂಗುಗಳು ಕೂಡ ಇದೇ ತರಹ ಸೃಜನ ಶೀಲವಾಗಿದ್ದರೆ ಅದಕ್ಕೊಂದು ಸಾರ್ಥಕತೆ ಇರುತ್ತದಲ್ಲವೆ? ಇದು ಅವತ್ತು ನನ್ನ ಮನದಲ್ಲಿ ಮೂಡಿದ ಪ್ರಶ್ನೆ.    

           

2 comments: