Wednesday, July 3, 2024

ಪಂಜರದ ಕೋಳಿಯ ಕತೆ

ಅವತ್ತೊಂದು ಕೋಳಿ ಸಾಕಾಣಿಕಾ ಕೇಂದ್ರಕ್ಕೆ ಹೋಗಿದ್ದೆ. ಅಲ್ಲಿ ಒಂದು ಲಕ್ಷ ಕೋಳಿಗಳು ಇದ್ದವು. ಹುಟ್ಟಿದಾಗಿನಿಂದ ಸಾಯುವತನಕ ಪಂಜರದಲ್ಲಿಯೇ ಅವುಗಳ ವಾಸ. ಅದೇ ಜೀವನ ಅಂತ ಅವೂ ಕೂಡ ಅಂದುಕೊಂಡೆ ಜೀವಿಸುತ್ತವೆ(??). 

ಅಂಥದ್ದರಲ್ಲಿ ಒಂದು ಕೋಳಿ ಹೇಗೋ ಪಂಜರದಿಂದ ಹೊರಗೆ ಬಂದುಬಿಟ್ಟಿತು! ನಿಜ ಹೇಳಬೇಕೆಂದರೆ ಅದಕ್ಕೆ ಸ್ವತಂತ್ರ ಸಿಕ್ಕಿತ್ತು. ಅದು ಸ್ವಲ್ಪ ಪ್ರಯತ್ನ ಮಾಡಿದ್ದರೂ ಹೊರಗೆ ನುಸುಳಿ ಪಾರಾಗಬಹುದಿತ್ತು. ಆದರೆ ಹಾಗಾಗಲಿಲ್ಲ...

ಅದಕ್ಕೆ ತುಂಬಾ ಭಯ ಶುರು ಆಯ್ತು. ಎಲ್ಲರೂ ಪಂಜರದೊಳಗೆ ಸುರಕ್ಷಿತವಾಗಿದ್ದಾರೆ ತಾನು ಮಾತ್ರ ಹೊರಗೆ ಬಂದುಬಿಟ್ಟೆ, ಛೇ ತಪ್ಪು ಮಾಡಿಬಿಟ್ಟೆ ಅಂತ ಅನಿಸಿ ಮತ್ತೆ ಪಂಜರದೊಳಗೆ ನುಸುಳುವ ವ್ಯರ್ಥ ಪ್ರಯತ್ನ ಮುಂದುವರಿಸಿತು. ಅದಕ್ಕೆ ಒಳಗೆ ಹೋಗಲು ಸಾಧ್ಯವಾಗದಾದಾಗ ಇನ್ನಷ್ಟು ಹತಾಶೆಗೆ ಒಳಗಾಯಿತು. 

ಅಯ್ಯೋ ಎಲ್ಲರೂ ಎಷ್ಟು ಚೆನ್ನಾಗಿದ್ದಾರೆ ನಾನು ಮಾತ್ರ ಹೀಗೆ ಮಾಡಿಕೊಂಡುಬಿಟ್ಟೆನಲ್ಲ ಅಂತ ಬೇಜಾರಿನಲ್ಲಿ ಅದು ಅತ್ತಿತ್ತ ಅಡ್ಡಾಡುತ್ತಿತ್ತು. 

ಅದರ ಪರಿಸ್ಥಿತಿ ನೋಡಿ ಪಂಜರದೊಳಗೆ ಇದ್ದ ಕೆಲವು ಕೋಳಿಗಳು ಬಿದ್ದು ಬಿದ್ದು ನಗುತ್ತಿದ್ದವು. ಕಾಲಕಾಲಕ್ಕೆ ಊಟ, ನೀರು ಎಲ್ಲಾ ಸಿಗುತ್ತಿತ್ತು. ಸುಮ್ಮನೆ ನಮ್ಮ ಜೊತೆಗೆ ಇದ್ದಿದ್ದರೆ ಆಗಿತ್ತು. ಇದಕ್ಯಾಕೆ ಬೇಕಿತ್ತು ಊರ ಉಸಾಬರಿ. ಅಂತ ಇನ್ನೂ ಹಲವು ಕೋಳಿಗಳು ತಮ್ಮ ತಮ್ಮಲ್ಲೇ ಗಾಸಿಪ್ ಮಾಡಿಕೊಳ್ಳುತ್ತಿದ್ದವು. 

ತನ್ನ ಎಲ್ಲ ಸಹಪಾಠಿ ಕೋಳಿಗಳ ಕುಹಕ, ಕೇಕೆ, ನಗು ಎಲ್ಲಾ ಕಡೆಗಳಿಂದ ಏಕಕಾಲಕ್ಕೆ ಈ ಏಕಾಂಗಿ ಕೋಳಿಯ ಕಿವಿಗೆ ಅಪ್ಪಳಿಸಿ ಅದು ಇನ್ನೂ ಅಧೀರ ಆಯ್ತು.. ಅಷ್ಟೊತ್ತಿಗೆ ಎಲ್ಲಿಂದಲೋ ಆಪತ್ಭಾಂದವನಂತೆ ಬಂದ ಒಬ್ಬ ವ್ಯಕ್ತಿ ಆ ಕೋಳಿಯನ್ನು ವಾಪಸ್ಸು ಪಂಜರದೊಳಗೆ ತುರುಕಿದ. 

ಅಬ್ಬಾ ಬದುಕಿದೆಯಾ ಬಡ ಜೀವವೇ ಅಂತ, ಅಸಾಧ್ಯ ಹೆರಿಗೆ ನೋವಿನೊಂದಿಗೆ, ಅವತ್ತಿನ ದಿನದ ಮೊಟ್ಟೆಯನ್ನು ಹೆತ್ತು ನಿಟ್ಟುಸಿರು ಬಿಟ್ಟು ಮುಂದಿಟ್ಟ ಆಹಾರವನ್ನು ಕುಕ್ಕಿ ಕುಕ್ಕಿ ತಿನ್ನತೊಡಗಿತು...

ಗುರುಪ್ರಸಾದ ಕುರ್ತಕೋಟಿ 



 

Monday, July 15, 2019

ಬೆಂಗಳೂರಿಗರಿಗೆ ದಯವಿಟ್ಟು ನೀರು ಕೊಡಬೇಡಿ...!

ಬೆಂಗಳೂರಿಗರಿಗೆ ದಯವಿಟ್ಟು ನೀರು ಕೊಡಬೇಡಿ...!
ಯಾಕೆಂದರೆ ಅವರಿಗೆ ನೀರಿನ ಮಹತ್ವ ಗೊತ್ತಿಲ್ಲ.
ರಾಜ್ಯದ ಎಷ್ಟೋ ಕಡೆ, ಸ್ನಾನ ಮಾಡುವುದಿರಲಿ ಕುಡಿಯಲೂ ನೀರಿಲ್ಲ ಅಂತ ಅವರಿಗೆ ದೇವರಾಣೆಗೂ ಗೊತ್ತಿಲ್ಲ.
ದುಡ್ಡು ಬೀಸಾಕಿದರೆ ನೀರು ಸಿಗುತ್ತೆ ಅದೇನ್ ಮಹಾ ಅಂತ ಅವರ ತಿಳುವಳಿಕೆ.

ಇರಾನ್ ನಿಂದ ಎಣ್ಣೆ ಬರುತ್ತಿಲ್ಲ. ಇನ್ನೂ ಒಂಬತ್ತು ದಿನ ಅಷ್ಟೇ ಪೆಟ್ರೋಲ್ ಸ್ಟಾಕ್ ಇರೋದು ಅನ್ನುವ ಸುದ್ದಿ ಕೇಳಿ ಭಯಪಟ್ಟು ಸರತಿಯಲ್ಲಿ ನಿಂತು ಪೆಟ್ರೋಲು ಹಾಕಿಸಿಕೊಳ್ಳುವ ಇವರಿಗೆ ಇನ್ನು ಕೆಲವೇ ವರ್ಷಗಳಲ್ಲಿ ಕುಡಿಯಲೂ ನೀರು ಸಿಗದು ಎಂಬ ವಿಚಾರ ಇನ್ನೂ ಅರಿವಾಗಿಲ್ಲ..
ಅಂಗಳ ತೊಳೆಯಲು ಅಷ್ಟೆಲ್ಲ ನೀರು ಬಳಸಬೇಡಿ ಅಂದರೆ "ಅಯ್ಯೋ ವಿಜ್ಞಾನಿಗಳು ಏನೋ ಒಂದು ಕಂಡು ಹಿಡೀತಾರೆ ಬಿಡಿ" ಅನ್ನುವ ಉಡಾಫೆ ಅವರದು.
...ಇಂಥವರ ಕಾರು ತಳ ತಳ ಹೊಳೆಯಲು , ಅವರ ಅಂಗಳದ ಜೊತೆಗೆ ಮುಂದಿರುವ ರೋಡು ತೊಳೆಯಲು ಶರಾವತಿ, ಕಾವೇರಿ ನೀರನ್ನು ಹಾಗೂ ಎಷ್ಟೋ ಸಾವಿರ ಕೋಟಿ ದುಡ್ಡನ್ನು ವ್ಯರ್ಥ ಮಾಡುವುದರಲ್ಲಿ ಏನು ಅರ್ಥವಿದೆ? ಅಥವಾ ನಮಗೆ ತಿಳಿಯದ ಯಾವುದೋ "ಅರ್ಥಶಾಸ್ತ್ರ"...??

Monday, August 6, 2018

ಹೇಳುವುದಕ್ಕೆ ಕೇಳುವುದಕ್ಕೆ ಇವರಿಗೆ ಹಕ್ಕಿದೆಯೇ?:

ಕೆಲವು ದಿನಗಳ ಹಿಂದೆ ಒಂದು ಪತ್ರಿಕೆಯಲ್ಲಿ ನಮ್ಮ ಭಾರತದ ಸಮಸ್ಯೆಗಳ ಕುರಿತು, ಎಷ್ಟೋ ವರ್ಷಗಳಿಂದ ಅಮೆರಿಕೆಯಲ್ಲಿ ನೆಲೆಸಿರುವ ಒಬ್ಬರು ಬರೆದ “ಹೇಳುವವರು ಕೇಳುವವರು ಇಲ್ಲದ ದೇಶ” ಎಂಬ ಲೇಖನ ಓದಿದೆ. ಭಾರತದ ಬಗೆಗಿನ ಅವರ ಹೊರನೋಟ ಅದಾಗಿತ್ತು. ಅವರು ಇಲ್ಲಿಗೆ ಕೆಲ ದಿನಗಳ ಮಟ್ಟಿಗೆ ಬಂದಾಗ ಆದ ಕಟು ಅನುಭವಗಳ ಕುರಿತು ಪ್ರಸ್ತಾಪಿಸಿದ್ದರು. ಟ್ಯಾಕ್ಸಿಯ ಡ್ಯಾಶ್ ಬೋರ್ಡ್ ಅಲ್ಲಿ ಇಲಿ ಬಂತಂತೆ… ಯಾವ್ದೂ ಸಿಸ್ಟಮ್ ಕೆಲಸ ಮಾಡಲ್ವಂತೆ… ಇಲ್ಲಿನ ಜನ ಏನು ಮಾಡಿದರೂ ಸುಮ್ಮನಿರುತ್ತಾರಂತೆ… ಹಾಗೆ ಹೀಗೆ, ನೂರಾರು ಕಂಪ್ಲೇಂಟ್ ಗಳು …
ಓದಿದ ಮೇಲೆ ಬೇಸರದ ಜೊತೆಗೆ ಆಶ್ಚರ್ಯವೂ ಆಯಿತು! ಅದೇ ಕಾರಣಕ್ಕೆ ಪ್ರತಿಕ್ರಿಯಿಸಲೇ ಬೇಕು ಅನಿಸಿತು. ನನ್ನ ಈ ಪ್ರತಿಕ್ರಿಯೆಯನ್ನು ಅಮೆರಿಕೆಯ ಬಗೆಗಿನ ನನ್ನ ಒಳನೋಟ ಅನ್ನಬಹುದೇನೋ! ಯಾಕೆಂದರೆ ಅಮೇರಿಕಾದ ಜನ ಜೀವನವನ್ನು ಅವರಷ್ಟಲ್ಲದಿದ್ದರೂ ಅಷ್ಟಿಷ್ಟು ನಾನೂ ಕಂಡಿದ್ದೇನೆ. ಹಾಗಂತ ನಮ್ಮಲ್ಲಿರುವ ಸಮಸ್ಯೆಗಳನ್ನು ಸಮರ್ಥಿಸಿಕೊಳ್ಳುತ್ತಿಲ್ಲ. ನಾವು ಭಾರತೀಯರು ಇನ್ನೂ ತುಂಬಾ ತುಂಬಾ ಸುಧಾರಿಸಬೇಕಿದೆ ಎಂಬುದನ್ನು ಮನಃಪೂರ್ವಕವಾಗಿ ಒಪ್ಪಿಕೊಳ್ಳುತ್ತಲೇ ಈ ಲೇಖನ ಬರೆಯುವ ಸಾಹಸ ಮಾಡುತ್ತಿದ್ದೇನೆ…
ಅಮೆರಿಕೆಗೆ ಹೋದ ಹೊಸತರಲ್ಲಿ ನಾನು ಟ್ಯಾಕ್ಸಿಗಳ ಮೇಲೆ ಅವಲಂಬಿತನಾಗಿದ್ದೆ. ಯಾಕೆಂದರೆ ನನ್ನ ಬಳಿ ಆಗಿನ್ನೂ ಕಾರ್ ಇರಲಿಲ್ಲ. ಅಲ್ಲಿ ಕಾರಿಲ್ಲವೆಂದರೆ ಕಾಲಿಲ್ಲದಂತೆಯೇ ಸೈ. ಸಾರ್ವಜನಿಕ ಸಾರಿಗೆ ಅಷ್ಟು ಅನುಕೂಲಕರವಾಗಿಲ್ಲ. ದೊಡ್ಡ ದೊಡ್ಡ ಶಹರಗಳಲ್ಲಿ ತಕ್ಕ ಮಟ್ಟಿಗೆ ಇರುತ್ತಾದರೂ ಕಾರಿನ ಮೇಲಿನ ಅವಲಂಬನೆ ಅಲ್ಲಿ ತುಸು ಜಾಸ್ತಿನೆ. ಕೊಳಕು ಪೋಷಾಕು ಧರಿಸಿ, ಗಡ್ಡಧಾರಿಯಾಗಿ, ವಿಚಿತ್ರವಾಗಿ ಕಾಣುತ್ತಿದ್ದ ಡ್ರೈವರ್ ಒಬ್ಬ ಆಗಾಗ ನನ್ನನು ಪಿಕಪ್ ಮಾಡಲು ಬರುತ್ತಿದ್ದ. ಬಹುಶಃ ಗಿರಾಕಿ ಇಲ್ಲದೆ ಗಿರಕಿ ಹೊಡೆಯುವ ಸಮಯದಲ್ಲಿ ಕಾರಿನಲ್ಲಿ ಕುಳಿತೆ ಸಿಗರೇಟು ಸೇದುತ್ತಿದ್ದ ಅನಿಸುತ್ತೆ. ಒಟ್ಟಿನಲ್ಲಿ ಒಂಥರಾ ಗಬ್ಬು ವಾಸನೆ ಕಾರಲ್ಲೆಲ್ಲ ಹರಡಿರುತ್ತಿತ್ತು. ಆ ನಾತವನ್ನು ಸಹಿಸದೆ ಒದ್ದಾಡುತ್ತಿದ್ದೆ. ಟ್ಯಾಕ್ಸಿ ಬುಕ್ ಮಾಡುವಾಗಲೆಲ್ಲ ಆ ಡ್ರೈವರ್ ಮಾತ್ರ ಬಾರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದೆ. ಹಾಗಂತ ಅಲ್ಲಿನ ಎಲ್ಲಾ ಡ್ರೈವರುಗಳೂ ಹಾಗಿರಲಿಲ್ಲ ಬಿಡಿ. ಅದೇ ತರಹ ಇವರಿಗೆ ಅನುಭವವಾದಂತೆ ಭಾರತದ ಎಲ್ಲಾ ಟ್ಯಾಕ್ಸಿಗಳ ಡ್ಯಾಶ್ ಬೋರ್ಡ್ ನಿಂದ ಇಲಿಗಳು ಜಿಗಿಯೋಲ್ಲ! ಪಾಪ ಅವತ್ತು ಅವರ ಅದೃಷ್ಟ ಸರಿ ಇರಲಿಲ್ಲ ಅಥವಾ ಅದರ ಅದೃಷ್ಟ ಚೆನ್ನಾಗಿರಲಿಲ್ಲ ಅಷ್ಟೇ.
ಅಧಾರ ಸಂಖೆಯಿಲ್ಲದೆ ಸಾಫ್ಟ್ವೇರ್ ಕೆಲಸ ಮಾಡೋಲ್ಲ ಅಂತ ಇಲ್ಲಿನ ಬ್ಯಾಂಕ್ ನವರು ಹೇಳಿದರು ಅಂತ ಬರೆದಿದ್ದಾರೆ. ಅಮೆರಿಕೆಯಲ್ಲೂ ಕೂಡ ಕಂಪ್ಯೂಟರೇ ದೈವ. ಅದು ಏನಾದರೂ ಬೇಕು ಅಂದರೆ ಕೊಡಬೇಕು ಅಷ್ಟೇ! ಇಲ್ಲಿಗಿಂತ ಕಂಪ್ಯೂಟರ್ ಮೇಲಿನ ಅವಲಂಬನೆ ಅಲ್ಲಿ ಜಾಸ್ತಿ. ಇಲ್ಲಿ ಅಧಾರ ಇದ್ದಂತೆ ಅಮೆರಿಕೆಯಲ್ಲಿ ಎಲ್ಲದಕ್ಕೂ SSN (Social Security Number) ಕೇಳುತ್ತಾರೆ. ಹೋದ ಹೊಸದರಲ್ಲಿ ನನ್ನ ಬಳಿ ಆ ನಂಬರ್ ಇಲ್ಲ ಅಂದಾಗ ಅಲ್ಲಿನ ಒಬ್ಬ ಸರಕಾರೀ ಅಧಿಕಾರಿ ಅದು ಬೇಕೇ ಬೇಕು ನಮ್ಮ ಸಾಫ್ಟ್ವೇರ್ ಕೇಳುತ್ತೆ ಅಂತಲೇ ಹೇಳಿದ್ದ. ಅದಕ್ಕಾಗಿ ಅಲ್ಲಿಲ್ಲಿ ಎಡತಾಕಿದ್ದು ಇದೆ.
ಅಮೆರಿಕೆಯವರೂ ಕೊಡ ಮೊಟ್ಟ ಮೊದಲ ಬಾರಿಗೆ SSN ಅಳವಡಿಸಿಕೊಂಡಾಗಲೂ ಸಮಸ್ಯೆಗಳು ಆಗಿರಲೇಬೇಕು. ಬಹುಶಃ ಇಲ್ಲಿಗಿಂತ ಕಡಿಮೆ ಆಗಿರಬಹುದು ಯಾಕೆಂದರೆ ಅಲ್ಲಿ ಜನಸಂಖ್ಯೆ ಕಡಿಮೆ ಇದೆ. ಜನಸಂಖ್ಯೆ ಜಾಸ್ತಿ ಇದ್ದಾಗ ದೂರದೃಷ್ಟಿ ಎಷ್ಟಿದ್ದರೂ ಸಾಲದು. ಅಧಾರ ಅವಳವಡಿಕೆ ವಿಷಯದಲ್ಲಿ ನಮ್ಮ ದೇಶದಲ್ಲಿ ಆಗುತ್ತಿರುವುದು ಅದೇ. ಅಂದಹಾಗೆ ಜನಸಂಖೆಯ ಬಗ್ಗೆ ಹೇಳುವಾಗ ನೆನಪಾಯ್ತು. ಒಂದು ಸಲ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಆ ಜನದಟ್ಟಣೆಯ ರಸ್ತೆಯಲ್ಲಿ ಕಾರ್ ಓಡಿಸುವಾಗ ಮಲ್ಲೇಶ್ವರದಲ್ಲಿ ಓಡಿಸಿದ ಅನುಭವ ಆಗಿ ಪುಳಕಿತನಾದೆ! ಇಲ್ಲಾದರೂ ನಮ್ಮ ಜನ ರೂಲ್ಸ್ ಅನುಸರಿಸುತ್ತಾರೆ. ಅಲ್ಲಿ ರೆಡ್ ಸಿಗ್ನಲ್ ಬಿದ್ದಾಗಲೂ ಗಾಡಿ ಓಡಿಸಿಕೊಂಡು ಹೋಗುತ್ತಿದ್ದರು. ಲೇನ್ ಯಾವನೂ ಫಾಲೋ ಮಾಡುತ್ತಿರಲಿಲ್ಲ. ಆದಷ್ಟು ಬೇಗ ಮುಂದೆ ತೂರಿಕೊಳ್ಳುವುದೇ ಅವರ ಧ್ಯೇಯ. ಹಾಗೆ ಮಾಡಿದವರು ಅಲ್ಲಿಯವರೆ, ಭಾರತೀಯರಲ್ಲ! ಆಮೇಲೆ ಪಾರ್ಕಿಂಗಿಗೆ ಜಾಗ ಸಿಗದೇ ಒದ್ದಾಡಿದೆವು.
ಇನ್ನೊಂದು ಸಲ ನಯಾಗರ ನೋಡಲು ಹೋಗುವಾಗ ಮಧ್ಯದಲ್ಲಿ ಒಂದು ಹೋಟೆಲಗೆ ಹೋದೆವು. ಅಲ್ಲಿ ಜನ ಕಿಕ್ಕಿರಿದು ತುಂಬಿರುತ್ತಾರೆ. ಅಲ್ಲಿನ ಟಾಯ್ಲೆಟ್ ಬಳಸಲು ಹೋದಾಗ ಒಳಗೆ ದುರ್ಗಂಧ ಎಷ್ಟಿತ್ತು ಅಂದ್ರೆ ನಮ್ಮ ಬಸ್ ಸ್ಟಾಂಡ್ ನ ಪಬ್ಲಿಕ ಟಾಯ್ಲೆಟ್ ನೆನಪಾಯ್ತು… ನಾ ಹೇಳೋದು ಇಷ್ಟೇ. ಯಾವುದೇ ದೇಶವಿದ್ದರೂ ಜನಸಂಖೆ ಜಾಸ್ತಿ ಇದ್ದಾಗ ಎಷ್ಟು ವ್ಯವಸ್ಥೆ ಮಾಡಿದರೂ ಕಡಿಮೆಯೇ.
ನಾನಲ್ಲಿದ್ದಾಗ ಆದ ಇನ್ನೂ ಕೆಲವು ಅನುಭವಗಳನ್ನು ಹಂಚಿಕೊಳ್ಳಬೇಕೆನಿಸುತ್ತದೆ. ಅಲ್ಲಿ ತುಂಬಾ ವರ್ಷಗಳಿಂದ ನೆಲೆಸಿರುವ ಕೆಲವು ಭಾರತೀಯರು ನಮ್ಮ ದೇಶವನ್ನು ಹೊಸ ತಂತ್ರಜ್ಞಾನದ ಅರಿವಿಲ್ಲದ ದೇಶ ಅಂತ ತಿಳಿದಿದ್ದಾರೆ ಎನಿಸುತ್ತದೆ. ಒಂಬತ್ತು ವರ್ಷದಿಂದ ತನ್ನ ದೇಶವನ್ನು ಭೇಟಿ ಕೂಡ ಮಾಡದ ಒಬ್ಬರು ಭಾರತೀಯ(?) ಗೆಳೆಯ ಇಂಡಿಯಾದಲ್ಲಿ 4G internet ಇದೆಯೇ ಎಂಬ ಮೂರ್ಖತನದ ಪ್ರಶ್ನೆ ಕೇಳಿದ್ದರು! ಅವರು ಹೇಳುವ ಸಿನಿಮಾ ಹೆಸರುಗಳು ಕೂಡ ಮಾಲಾಶ್ರಿ ಕಾಲದವು. ಅಷ್ಟು outadated ಆದ, ಭಾರತದ ಬಗ್ಗೆ ಕನಿಷ್ಠ ಜ್ಞಾನ ಹೊಂದಿರುವ ಅವರಿಗೆ ಏನಂತ ಹೇಳುವುದು?
ಇನ್ನೊಂದು ಸಲ, ಅಮೆರಿಕೆಯ ನಾಗರಿಕರಾಗಿರುವ ಗೆಳೆಯನ ಹೆಂಡತಿಯೊಬ್ಬರು “ಅಯ್ಯೋ ಬೆಂಗಳೂರಿನಲ್ಲಿ ಹೆಣ್ಣು ಮಕ್ಕಳು ಒಬ್ಬೊಬ್ರೆ ಹೇಗಪ್ಪ ಅಡ್ಡಾಡ್ತಾರೆ. ಅಲ್ಲಿ ತುಂಬಾ insecure feel ಆಗುತ್ತೆ” ಅಂತ ಅಂದಿದ್ದರು. ಅಂದರೆ ಇವರ ಭಾವನೆಯಲ್ಲಿ ಭಾರತ ಏನೂ ಸುರಕ್ಷಿತವಲ್ಲ. ಹೆಣ್ಣು ಮಕ್ಕಳಂತೂ ಬೀದಿಯ ಹೊರಗೆ ಬರದಿರುವಂತಹ ಪರಿಸ್ಥಿತಿ! ನಾನು ಹೇಳಿದೆ “ತಾಯಿ ನಮ್ಮ ದೇಶ ನೀವು ಅಂದುಕೊಂಡಷ್ಟು ಕೆಟ್ಟದಾಗೇನಿಲ್ಲ. ನಮ್ಮ ಮನೆಯ ಹೆಣ್ಣು ಮಕ್ಕಳು ಆರಾಮವಾಗಿ ಬೀದಿಯಲ್ಲಿ ಅಡ್ಡಾಡುತ್ತಾರೆ. ನಿಮ್ಮ ಅಮೆರಿಕೆಯ ಬೀದಿಯಲ್ಲಿ ಎಷ್ಟೋ ಸಲ ತಲೆತಿರುಕರು ಎರ್ರಾ ಬಿರ್ರಿ ಗುಂಡು ಹಾರಿಸುವುದ ನೋಡಿದಾಗ ನಮ್ಮ ದೇಶ ಎಷ್ಟೋ ಸುರಕ್ಷಿತ ಅನಿಸುತ್ತದೆ” ಅಂದಾಗ ಅವಳಿಗೆ ಕೋಪ ಬಂದಿತ್ತು. ಅಮೆರಿಕನ್ನರಲ್ಲಿ ಬಹುತೇಕರು ಕೂಪ ಮಂಡೂಕಗಳು. ಅವರಿಗೆ ತಮ್ಮ ದೇಶ ಬಿಟ್ಟರೆ ಬೇರೆ ಜಗತ್ತೇ ಇಲ್ಲ. ಅವರಂತೆಯೇ ನಮ್ಮ ಕೆಲವು ದೇಸಿಗಳು ಕೂಡ ಆಗಿದ್ದಾರೆ.
ಕಠಿಣ ಕಾನೂನು ಇದ್ದಾಗ್ಯೂ ಅಲ್ಲಿ ವರ್ಣಭೇದ ತುಂಬಾ ಇದೆ. ಅವರು ಭಾರತೀಯರನ್ನು ಕಾಣುವ ರೀತಿ ನೋಡಿ ನನಗಲ್ಲಿ ತುಂಬಾ ಕಿರಿಕಿರಿ ಆಗುತ್ತಿತ್ತು. ಶಾಲೆಯಲ್ಲಿ ನನ್ನ ಮಗಳಿಗೆ ಅವಳ ಪ್ರಿನ್ಸಿಪಾಲಳೆ ವರ್ಣಭೇದ ಮಾಡುತ್ತಿದ್ದಳು. ಅಲ್ಲಿನ ಸಮಸ್ಯೆಗಳು ಒಂದೇ ಎರಡೇ? ಡಾಕ್ಟರ ಹಾಗೂ ಇನ್ಸೂರೆನ್ಸ್ ಕಂಪನಿಗಳ ಮಾಫಿಯಾ ಕಂಡು ಬೆಚ್ಚಿ ಬಿದ್ದಿದ್ದೇನೆ. ಅಲ್ಲಿನ ಡಾಕ್ಟರ ಒಬ್ಬರ ನಿರ್ಲಕ್ಷದಿಂದ ಗೆಳೆಯನೊಬ್ಬನ ಹೆಂಡತಿಗೆ ಗರ್ಭಪಾತವಾಯಿತು. ಯಾಕೆಂದರೆ ಅಲ್ಲಿನ ವೈದ್ಯರುಗಳು procedure ಪ್ರಕಾರ ಕೆಲಸ ಮಾಡುವವರು. ಅಲ್ಲಿ ವಯಸ್ಸಾದವರ ಏಕಾಂಗಿತನವನ್ನು ನೋಡಿ ಮರುಗಿದ್ದೇನೆ. ನನ್ನ ಮಗಳಿಗೆ ಸ್ವಿಮ್ಮಿಂಗ್ ಹೇಳಿಕೊಡುತ್ತಿದ್ದ ಹೆಣ್ಣುಮಗಳು ಕೆಲಸ ಕಳೆದುಕೊಂಡು ತನ್ನ ಜೀವನ ನಿರ್ವಹಣೆಗೆ ಎಲ್ಲರಿಂದ ಹಣ ಸಂಗ್ರಹಿಸುವುದ ನೋಡಿ ಆಶ್ಚರ್ಯಪಟ್ಟಿದ್ದೇನೆ. ಅಲ್ಲಿಯೂ ನದಿಗಳು ವರ್ಷಗಳಿಂದ ತಮ್ಮೊಳಗೆ ಬೆರೆತು ಹರಿದ ರಾಸಾಯನಿಕಗಳ ದೆಸೆಯಿಂದ ಬೆಂಕಿ ಹತ್ತಿಸಿಕೊಂಡಿವೆ, ಅಲ್ಲಿನ ಕುಡಿಯುವ ನೀರಿನ ಪೈಪುಗಳಲ್ಲಿ ಪಾದರಸದ ಮಟ್ಟ ಏರಿದೆ. ಎಲ್ಲರೂ ಸೋಲಾರ್ ವಿದ್ಯುತ್ ಅಳವಡಿಸಿಕೊಂಡುಬಿಟ್ಟರೆ ಪೆಟ್ರೋಲ್ ಬೆಲೆ ಕುಸಿಯುತ್ತೆ ಅಂತ powerful ಕಂಪನಿಗಳು ಅಲ್ಲಿಯೂ ಲಾಬಿ ಮಾಡುತ್ತವೆ. ಇದನ್ನೆಲ್ಲಾ ನೋಡಿಕೊಂಡು ಅಲ್ಲಿಯ ಜನರೂ ಸುಮ್ಮನಿದ್ದಾರೆ! ಬರೆಯುತ್ತ ಹೋದರೆ ಮುಗಿಯದ ಕತೆ…
…ಒಟ್ಟಿನಲ್ಲಿ ಸಮಸ್ಯೆಗಳು ಎಲ್ಲ ದೇಶಗಳಲ್ಲೂ ಇರುತ್ತವೆ. ಸ್ವರೂಪಗಳು ಭಿನ್ನವಾಗಿರಬಹುದು ಅಷ್ಟೇ. ಇಲ್ಲಿಗಿಂತ ದೊಡ್ಡದಾದ, ಮಾನಸಿಕ ನೆಮ್ಮದಿಯನ್ನೇ ಹಾಳುಗೆಡಿಸುವ ಸಮಸ್ಯೆಗಳು ಅಲ್ಲಿ ಸಾಕಷ್ಟಿವೆ. ಹಾಗಂತ ಇಲ್ಲಿನ ನಮ್ಮ ಸಮಸ್ಯೆಗಳೊಂದಿಗೆ ಬದುಕಬೇಕು ಅಂತ ನಾನು ಹೇಳುತ್ತಿಲ್ಲ. ಅವುಗಳಿವೆ ಅಂತ ಎಲ್ಲರಿಗೂ ಗೊತ್ತು. ಎಲ್ಲರೂ ಹೇಳೋವ್ರೆ ಆದ್ರೆ ಅದರ ಪರಿಹಾರ ಮಾಡೋವ್ರು ಯಾರು? ಅದಕ್ಕೆ ಮೂರು ದಾರಿಗಳಿವೆ. ಒಂದು: ಅದನ್ನು ನಾವೇ ಖುದ್ದಾಗಿಯೋ ಇಲ್ಲ ಸಂಬಂಧಪಟ್ಟವರ ಗಮನಕ್ಕೆ ತಂದು ಬಗೆಹರಿಸುವುದು. ಎರಡು: ಅದರಲ್ಲೊಂದಾಗಿ ಸುಮ್ಮನಿರೋದು. ಮೂರು: ಆ ಸಮಸ್ಯೆಗಳಿಂದ ಓಡಿ ಹೋಗೋದು. ವಿದೇಶಕ್ಕೆ ಹೋಗಿ ನೆಲೆಸಿರುವ ಎಷ್ಟೋ ಭಾರತೀಯರನ್ನು ಗಮನಿಸಿದಾಗ ಸಮಸ್ಯೆಗೆ ಹೆದರಿ ಓಡಿ ಹೋದವರೇ ಅಧಿಕ ಅಂತ ನನ್ನ ಭಾವನೆ. ಅಲ್ಲಿದ್ದ ಎಷ್ಟೋ NRI ಗಳನ್ನು ಕೇಳಿದಾಗ ಭಾರತದಲ್ಲಿ quality of life ಇಲ್ಲ ಎಂಬ ಅವರ ಮಾತು ಕೇಳಿ ತುಂಬಾ ಸಂಕಟ ಅನುಭವಿಸಿರುವೆ. ಹೀಗೆ ಹೇಳಿಕೊಂಡು ದೇಶ ಬಿಟ್ಟು ಹೋಗುವುದು ಕೂಡ ಒಂದು ರೀತಿಯಲ್ಲಿ ಸಮಸ್ಯೆಗಳನ್ನು ನೋಡಿ ಕಣ್ಣು ಮುಚ್ಚಿಕೊಂಡಂತೆಯೇ ಅಲ್ಲವೇ? ನಾವು ಆ ವ್ಯವಸ್ಥೆಯಲ್ಲಿ ಇಲ್ಲ ಅಂದ ಮೇಲೆ ಅದರ ಬಗ್ಗೆ ಮಾತನಾಡುವ ಹಕ್ಕೂ ನಮಗಿರುವುದಿಲ್ಲ. ಇದು ದೇಶ ಬಿಟ್ಟು ಅಲ್ಲಿದ್ದ ನನಗೂ ಅನ್ವಯಿಸಿತ್ತು, ಹಾಗೆ ಬಿಟ್ಟು ಹೋದ ಎಲ್ಲರಿಗೂ ಅನ್ವಯಿಸುತ್ತದೆ! ಹೇಳುವವರು ಕೇಳುವವರು ಎಲ್ಲಾ ಅಲ್ಲಿ ಹೋಗಿ ಕೂತರೆ ನಮ್ಮ ದೇಶ ಉದ್ಧಾರ ಮಾಡೋರು ಯಾರು? ಹಾಗೆ ಹೋದವರಿಗೆ ನಾನು ಹೇಳೋದಿಷ್ಟೇ… ಇಲ್ಲಿ ತುಂಬಾ ಸಮಸ್ಯೆಗಳು ಇವೆ, ಅವು ನಮ್ಮವೇ! ಬನ್ನಿ ನಮ್ಮ ದೇಶವನ್ನು ಕಟ್ಟೋಣ. ಅಲ್ಲಿ ನೀವು ಕಂಡು ಅನುಭವಿಸಿದ ಒಳ್ಳೆಯದನ್ನು ಇಲ್ಲೂ ಅಳವಡಿಸುವ ಪ್ರಯತ್ನ ಮಾಡೋಣ. ನಿಮ್ಮ ನಿರೀಕ್ಷೆಗೆ ತಕ್ಕಂತೆ ನಮ್ಮ ದೇಶವನ್ನು ಬೆಳೆಸೋಣ. ಹಾಗಿದ್ದರೆ ಬನ್ನಿ …. ಇಲ್ಲವೆ ಸುಮ್ಮನಿರಿ!

Tuesday, June 30, 2015

ಹಿಮಪಾತ

(http://www.panjumagazine.com/?p=11120)

ಇವತ್ಯಾಕೆ ಇಷ್ಟೊಂದು ಬೇಗ ಎಚ್ಚರ ಆಯ್ತು ಅಂತ ಗೊತ್ತಾಗಲಿಲ್ಲ ವೆಂಕಟ್ ಗೆ. ಬೇಗ ಎದ್ದು ಏನು ಮಾಡುವುದೆಂದು ಒಂದು ಕ್ಷಣ ಅವನಿಗೆ ಹೊಳೆಯಲಿಲ್ಲ. ಬೆಂಗಳೂರಿನಲ್ಲಾಗಿದ್ದರೆ ಎದ್ದ ಕೂಡಲೇ ಬಾಗಿಲಿಗೆ ಸಿಗಿಸಿರುತ್ತಿದ್ದ ಪೇಪರ್ ಎತ್ತಿಕೊಂಡು ಓದಬಹುದಿತ್ತು.  ಈ ಪರದೇಶದಲ್ಲಿ ಹಾಗಿಲ್ಲವಲ್ಲ. ಸುದ್ದಿ ತಿಳಿಯಬೇಕೆಂದರೆ  ಒಂದೋ ಟೀವಿ, ಸ್ಮಾರ್ಟ್ ಫೋನ್, ಇಲ್ಲವೇ ಟಚಿಠಿಣoಠಿ ನಲ್ಲೆ ನೋಡಿ ತಿಳಿಯಬೇಕು. ಅವನಿಗೆ ಅಲ್ಲಿಯ ಸ್ಥಳೀಯ ಸುದ್ದಿಯ ತಿಳಿದುಕೊಳ್ಳುವ ಬಗ್ಗೆ ಉತ್ಸಾಹವೇನಿರಲಿಲ್ಲ. ಇಲ್ಲಿನ ಸುದ್ದಿಗಳೂ ಸುದ್ದಿಗಳೇ? ಒಂದು ಸಣ್ಣ ಬಿರುಗಾಳಿ ಬಂದರೇನೇ ಇಡೀ  ದಿನ ಅಲರ್ಟ್ ಅಲರ್ಟ್ ಅಂತ ಬೊಬ್ಬೆ ಹೊಡಿತಿರ್ತಾರೆ. ಇಂತಹ ಸಣ್ಣ ಪುಟ್ಟ ಬಿರುಗಾಳಿಗಳೆಲ್ಲ ನಮ್ಮ ದೇಶದಲ್ಲಿ ಲೆಕ್ಕಕ್ಕೇ ಇಲ್ಲ. ಆದರೂ ಕೆಲವೊಮ್ಮೆ ಬಂತೆಂದರೆ ಎಲ್ಲವನ್ನೂ ನುಂಗಿ ಹಾಕುವ ಗಾಳಿಯೇ ಇಲ್ಲಿ ಬೀಸುತ್ತೆ. ಅದಕ್ಕೆ ಇರಬೇಕು ಇಲ್ಲಿನ ಹವಾಮಾನ  ಮುನ್ಸೂಚನೆಗಳು ಸಣ್ಣ ಸಣ್ಣ ವಿಷಯಗಳನ್ನೂ ದೊಡ್ಡದಾಗೆ ಹೆಳುತ್ತವೆ. 
ಬೇಗ ಎದ್ದಿದ್ದಕ್ಕೋ ಅಥವಾ ಅಮೆರಿಕಕ್ಕೆ ಬಂದು ತುಂಬಾ ದಿನಾ ಆಗಿದ್ದಕ್ಕೋ, ವೆಂಕಣ್ಣನಿಗೆ ಯಾಕೋ ಬೆಂಗಳೂರು ನೆನಪಾಗಿ  ಹೃದಯ ಭಾರವಾಗಿತ್ತು. ಊರಲ್ಲಿದ್ದ ಅಪ್ಪ, ಅಮ್ಮ, ತನ್ನ ಮನೆ,  ಗೆಳೆಯನೊಬ್ಬನ ಜೊತೆಗೆ ಕ್ಷುಲ್ಲಕ ಕಾರಣಕ್ಕೆ ಮಾಡಿಕೊಂಡ ಜಗಳ ಹೀಗೆ ಏನೇನೋ ನೆನಪಾಗತೊಡಗಿದವು. ಏನೋ ಕಳೆದುಕೊಂಡಂತೆ ಅನಿಸತೊಡಗಿತ್ತು. ಎಲ್ಲರಿಂದ ಇಷ್ಟು ದೂರದಲ್ಲಿ ತಾನಿದ್ದೇನೆ ಎಂಬ ಭಾವನೆ ಮೂಡತೊಡಗಿತ್ತು. ಸಧ್ಯಕ್ಕೆ ಜೊತೆಗೆ ತನ್ನ ಪುಟ್ಟ ಸಂಸಾರವಾದರೂ ಇದೆಯಲ್ಲ;  ಇನ್ನು ಕೆಲವೇ ದಿನಗಳು, ಆಮೇಲೆ ವಾಪಸ್ಸು ತನ್ನ ದೇಶಕ್ಕೆ ಹೋಗುವೆನಲ್ಲ ಎಂದು ತನ್ನೊಳಗೆ ಸಮಾಧಾನ ಮಾಡಿಕೊಂಡ. 
ಆದರೂ ಬೆಳಿಗ್ಗೆ ಬೇಗ ಎದ್ದ ತಪ್ಪಿಗೆ ಹೊರಗಿನ ಬೆಳಗನ್ನಾದರೂ ಸವಿಯುವ ನಿರ್ಧಾರ ಮಾಡಿ ವಿಶಾಲವಾದ ಕಿಟಕಿಯ ಪರದೆ ಸರಿಸಿದವನಿಗೆ ಮೈ ಝುಂ ಅಂದಿತ್ತು! ಕೂಡಲೇ ಒಳಗೆ ಓಡಿ ಹೋದವನೇ ನಿದ್ದೆಯಲ್ಲಿದ್ದ ಖುಷಿಯನ್ನೂ, ಜಾನುನನ್ನೂ ಎಬ್ಬಿಸಿದ. ಮೈ ಮುರಿಯುತ್ತಲೇ, ಸಕ್ಕರೆ ನಿದ್ದೆಯನ್ನು  ತುಂಡರಿಸಿದ ಅಪ್ಪನನ್ನು ಕೆಂಗಣ್ಣಿನಲ್ಲೆ ಕೆಕ್ಕರಿಸುತ್ತ ಎದ್ದಳವಳು.
"ಲೇ ಪುಟ್ಟಿ ಒಂದ್ ಭಾರಿ ಮಜಾ ತೋರಸ್ತೀನಿ ಬಾ… ಲೇ ಜಾನು ನೀನು ಬಾ…. ಲೋಗೂನ … " ಅಂದ ಅಪ್ಪನಿಗೆ ಹುಚ್ಚು ಹಿಡಿದಿಲ್ಲವಷ್ಟೇ ಎಂದು ಅವ್ವ ಮಗಳು ಒಬ್ಬರನ್ನೊಬ್ಬರು ನೋಡತೊಡಗಿದರು.
"ಲೇ ಬರ್ರಿಲೆ … ದೊಡ್ಡ ನಖರಾ ನೋಡು ಇಬ್ಬರದೂ…!" ಅಂದವನೇ ತನ್ನ ಎರಡೂ ಕೈಗಳಿಂದ ಖುಷಿಯ ಕಣ್ಣು ಮುಚ್ಚಿಕೊಂಡು ಹೊರಗಡೆ ಹಾಲ್ ಗೆ ಕರೆದೊಯ್ದ. ಅದೇ ಕಿಟಕಿಯ ಮುಂದೆ ನಿಂತು ಮಗಳ ಕಣ್ಣು ಬಿಡಿಸಿ "ಟನ್ ಟನಾ …." ಅಂತ ಒಳ್ಳೆ ಸಿನಿಮಾ ತೋರ್ಸೋರಂತೆ ನಿಂತ.
ನಿನ್ನೆಯೆಲ್ಲಾ ಖಾಲಿಯಿದ್ದ ಮನೆಯ ಅಂಗಳದಲ್ಲೆಲ್ಲ ಶುಬ್ರವಾದ ಹಿಮ ಆವರಿಸಿತ್ತು. ಖುಷಿ ತನ್ನ ಕಣ್ಣುಗಳೆರಡನ್ನೂ ನಿಚ್ಚಳವಾಗಿ ತೆರೆದು ಪ್ರಕೃತಿಯ ಈ ವಿಚಿತ್ರವನ್ನು ಎವೆಯಿಕ್ಕದೆ ನೋಡುತ್ತಿದ್ದಳು. ತನ್ನ ಜೀವಮಾನದಲ್ಲೇ ಹಿಮವನ್ನು ಇಷ್ಟು ಹತ್ತಿರದಿಂದ ನೋಡಿರದಿದ್ದ ಜಾನೂಗೂ ಹಿಮ ಇವರ ಮನೆ ಬಾಗಿಲಿಗೆ ಬಂದು ದರ್ಶನ ಕೊಟ್ಟಿದ್ದು ಸಖೇದಾಶ್ಚರ್ಯವಾಗಿತ್ತು. ಇಲ್ಲಿ ಅಕ್ಟೋಬರ್ ತಿಂಗಳಲ್ಲಿ ಹಿಮ ಬೀಳಬಹುದೆಂಬ ಕಲ್ಪನೆಯೇ ಅವನಿಗಿರಲಿಲ್ಲ. ಬಹುಶಃ ಹಿಂದಿನ ರಾತ್ರಿ ಟೀವಿ ನೋಡಿದ್ದರೆ ಅದು ಮುಂಚೆಯೇ ತಿಳಿದಿರುತ್ತಿತ್ತೇನೊ. ಏನೇ ಆದರೂ ಅದೊಂದು ಅನಿರೀಕ್ಷಿತ ಅಚ್ಚರಿ ಆಗಿತ್ತು. ತಡ ಮಾಡದೆ ಹೊರಗೆ ಹೋಗಿ ಹಿಮದಲ್ಲಿ ಎಲ್ಲರೂ  ಆಟವಾಡಲು ಶುರು ಹಚ್ಚಿಕೊಂಡರು. ಇವರ ಸಂತಸವನ್ನು ನೋಡಿ ಅಮೆರಿಕಾದ ಅಜ್ಜಿಯೊಬ್ಬಳು, ಇವರು ಜೀವನದಲ್ಲಿ ಇದೆ ಮೊದಲ ಸಲ ಇಷ್ಟು ಹಿಮವನ್ನು ಒಟ್ಟಿಗೆ ನೋಡಿರಬಹುದೆಂದು ಅಂದಾಜಿಸಿ ನಸು ನಗುತ್ತ "ಎಂಜಾಯ್…!" ಅಂತ ಉಲಿದು ಅಪಾರ್ಟ್ ಮೆಂಟ್ ನ ಒಳಗೆ ನಡೆದಳು. 
ಅಪಾರ್ಟ್ ಮೆಂಟ್ ನ ಮುಂದಿದ್ದ ಗಿಡಗಳು, ಹುಲ್ಲಿನ ಹಾಸು, ಕಾರುಗಳು ಎಲ್ಲವೂ ಹಿಮಾವರಣಗೊಂಡಿದ್ದವು. ಆ ಹಿಮದಿಂದ ತಮ್ಮ ಕಾರನ್ನು ಮುಕ್ತಗೊಳಿಸುವ ಬಗೆ ಹೇಗೆ ಎಂದು ಖುಷಿ ಆಶ್ಚರ್ಯಪಡುತ್ತಿದ್ದಳು. ಅದಕ್ಕೆ ಬೇಕಾದ ಪರಿಕರಗಳನ್ನು ಇಟ್ಟುಕೊಂಡಿದ್ದ ವೆಂಕಣ್ಣ ಸಲಿಕೆಯಲ್ಲಿ ಮಣ್ಣು ತಗೆದಂತೆ ಕಾರಿನ ಮೇಲಿನಿಂದ ಹಿಮವನ್ನು ಬಗೆದು ತೆಗೆಯುತ್ತಿದ್ದುದನ್ನು ಕಣ್ಣರಳಿಸಿ ನೋಡಿ ಸಂತಸ ಪಟ್ಟಳು. ಕ್ರಮೇಣ ಗಾಳಿಯೂ ಹೆಚ್ಚಿ ಚಳಿ ಜಾಸ್ತಿಯಾಗತೊಡಗಿತ್ತು. ವೆಂಕಣ್ಣನ ಪರಿವಾರ ದಪ್ಪಗಿನ ಉಣ್ಣೆಯ ಉಡುಗೆ ತೊಟ್ಟು ಮನೆಯಲ್ಲೇ ಬೆಚ್ಚಗೆ ಉಳಿದರು. ಅವತ್ತು ಅಪ್ಪ ಆಫೀಸಿಗೆ ಹೋಗದೆ ಮನೆಯಲ್ಲೇ ಉಳಿದದ್ದು ಮಗಳ ಸಂತಸವನ್ನು ಹೆಚ್ಚಿಸಿತ್ತು.
"ಅಪ್ಪಾ ದಿನಾಲೂ ಹಿಂಗ ಸ್ನೋ ಬಿದ್ದರ ನೀನು ಮನ್ಯಾಗ ಇರ್ತೀಯಲ್ಲಾ?" ಅಂತ ತನ್ನ ತರ್ಕವನ್ನು ಮಂಡಿಸಿದಳು.
ವೆಂಕಣ್ಣ ನಕ್ಕು ಸುಮ್ಮನಾದ. ಆಫಿಸಿನಲ್ಲಿ ನಡೆಯುತ್ತಿದ್ದ ವಿದ್ಯಮಾನಗಳು ನೆನಪಾದವು. ಬೆಂಗಳೂರಿನಲ್ಲಿ ಜಾನ್ ಏನೇನು ಕರಾಮತ್ತು ನಡೆಸಿದ್ದಾನೋ ಎಂಬ ಚಿಂತೆ ಅವನನ್ನು ಕಾಡಿತು. ತನ್ನನ್ನೂ ಕೆಲಸದಿಂದ ತೆಗೆದುಬಿಟ್ಟರೆ ಮುಂದೇನು ಅನ್ನುವ ಪ್ರಶ್ನೆ ಉದ್ಭವಿಸಿತು.
 
"… ಅಪ್ಪ ದಿನಾಲೂ ಮನ್ಯಾಗ ನನ್ ಜೊತಿ ಇರಲ್ಲಾ? ಪ್ಲೀಜ್ ನೀ ಆಫಿಸಿಗೆ ಹೋಗಬ್ಯಾಡಾ….." ಅಂದ ಖುಷಿಯ ಗೋಗರೆತಕ್ಕೆ ಇವನು ತನ್ನ ಯೋಚನಾ ಲಹರಿಯಿಂದ ಹೊರಬಂದು ಬೆಚ್ಚಿ ಬಿದ್ದ!
ಜಾನ್ ಇವತ್ತು ಬೆಳಿಗ್ಗೆ ಎಂಟು ಗಂಟೆಗೇ ಆಫಿಸಿಗೆ ಬಂದಿದ್ದನೆಂದೂ, ಕೆಲಸಕ್ಕೆ ಯಾರೂ ಬೇಗ ಬರುವುದಿಲ್ಲವೆಂಬ ಸತ್ಯ ಅವನಿಗೆ ಗೊತ್ತಾಗಿಬಿಟ್ಟಿದೆಯೆಂದೂ ಅಫೀಸಿನಲ್ಲೆಲ್ಲ ಗುಲ್ಲೆದದ್ದು ಅವತ್ತೂ ತಡವಾಗಿ ಬಂದಿದ್ದ ರಘುನ ಕಿವಿಗೂ ಬಿದ್ದಿತ್ತು. ಈ ಕೆಲಸ ಬಿಟ್ಟು  ಹೊಸ ಕಂಪನಿಗೆ ಸಧ್ಯದಲ್ಲೇ ಸೇರಿ ಪ್ಯಾರಿಸ್ ಗೆ ಹೋಗುವ ಕನಸು ಕಾಣುತ್ತಿದ್ದ ರಘುಗೆ ಆ ಜಾನ್  ಏನಾದರೂ ಮಾಡಿಕೊಳ್ಳಲಿ ನನಗೇನು? ಎಂಬ ಉಡಾಫೆ ಇತ್ತು. ಆ ಕನಸಿನ ಕಿಡಿ ಹೊತ್ತಿಸಿದ್ದ ತರಂಗಿಣಿಯ ಫೋನ್ ರಿಂಗಿಸಿ ಅವನ ಉತ್ಸಾಹವನ್ನು ಇನ್ನೂ ಇಮ್ಮಡಿಸಿತು. ತನ್ನ ಜಾಗದಿಂದ ತುಸು ಆಚೆ ಸ್ವಲ್ಪ ಮರೆ ಇದ್ದಲ್ಲಿಗೆ ಹೋಗಿ ಅವಳ ಕರೆಯನ್ನು ಸ್ವೀಕರಿಸಿದನವನು.
"ಹೇಳಿ ತರಂಗಿಣಿ ಏನ್ಸಮಾಚಾರ"
"ಏನ್ ಲಕ್ಕಿ ಕಣ್ರೀ ನೀವು" ಅಂತ ಅವನಲ್ಲಿ ಇನ್ನೂ ಪುಳಕವನ್ನುಂಟು ಮಾಡಿದಳವಳು.
"ಯಾಕ್ರೀ ಏನಾಯ್ತು" ಅಂತ ಒಣಗಿದ ಗಂಟಲಲ್ಲೇ ಕೆಳಿದನವನು.
"ನಿಮ್ಮ ರೆಸುಮೆ ನೋಡಿ ಬ್ಲ್ಯಾಕ್ ಇಯರ್ ಕಂಪನಿಯ ಎಂಡಿ ಸಿಕ್ಕಾಪಟ್ಟೆ ಖುಷ್ ಆಗಿದಾರೆ. ನನಗೆ ಬೇಕಾದಂತಾ ವ್ಯಕ್ತಿನೆ ಆರಿಸಿದ್ದೀರ ಅಂತ ನನಗೆ ತುಂಬಾ ಹೊಗಳ್ತಾ ಇದ್ರು ಕಣ್ರೀ."
"ಒಹ್… ಹೌದಾ! ಹಾಗಾದ್ರೆ ಇಂಟರ್ವ್ಯೂ ಯಾವಾಗಂತೆ?" ಅಂತ ತನ್ನ ಖುಷಿಯನ್ನು ಹತ್ತಿಕ್ಕಲಾರದೆ ಕೇಳಿದ ಅವನ ಕಣ್ಣುಗಳಲ್ಲಿ  ಪ್ಯಾರಿಸ್ ನ ಐ ಫೆಲ್ ಟವರ್ ತಕಾ ತಕಾ ಕುಣಿಯುತ್ತಿತ್ತು!
"ಇಂಟರ್ವ್ಯೂ ಎಲ್ಲಾ ಏನೂ ಇಲ್ಲ ರೀ. ನಾನು ರೆಫರ್ ಮಾಡಿದ ಮೇಲೆ ಮುಗಿತು. ಸುಮ್ನೆ ನಿಮ್ಮ ಜೊತೆ ಒಂದು ಫಾರ್ಮಲ್ ಮೀಟಿಂಗ್ ಇರುತ್ತೆ. ಆ ಕಂಪನಿಯ ಎಹ್ ಆರ್ ಮಾತಾಡ್ತಾರೆ. ಅದೂ ಸಂಬಳದ ಬಗ್ಗೆ ನಿಮ್ಮ ನಿರೀಕ್ಷೆ ತಿಳಿದುಕೊಳ್ಳೋಕೆ ಅಷ್ಟೇ. ಮುಂದಿನ ತಿಂಗಳು ಪ್ಯಾರಿಸ್ ಗೆ ಹೋಗೋಕೆ ತಯಾರಾಗಿ" ಅನ್ನುತ್ತಿದ್ದಂತೆ ಇವನು ನಿಟ್ಟುಸಿರಿಟ್ಟ. ರೆಸುಮೆಯಲ್ಲಿ ಏನೇನೋ ಸುಳ್ಳುಗಳ ಸರಮಾಲೆ ತುರುಕಿ, ಇಂಟರ್ವ್ಯೂನಲ್ಲಿ ಹೆಂಗಪ್ಪಾ ಮಾತಾಡೋದು ಅಂತ ಭಯಪಟ್ಟಿದ್ದವನಿಗೆ, ಆ ಒಂದು ಸಂದರ್ಭವೇ ಇಲ್ಲ ಅಂದಾಗ ಎಷ್ಟು ಖುಷಿಯಾಗಬೇಡ? ಅವಳು ಮುಂದುವರೆಸಿ. 
"…ನೋಡಿ ಈಗಲೇ ನಿಮ್ಮ ಹೊಸ ಬಾಸ್ ನಿಮಗೆ ಒಂದು ಕೆಲಸ ಕೊಟ್ಟಿದ್ದಾರೆ. ಪ್ಯಾರಿಸ್ ನಲ್ಲಿ ನಿಮ್ಮ ಟೀಮ್ ಗೆ ಇನ್ನೂ ನಾಲ್ಕು  ಜನ ಬೇಕಂತೆ. ಯಾರಾದರೂ ಒಳ್ಳೆ ಪ್ರೋಗ್ರಾಮರ್ ಗಳಿದ್ದರೆ ಅವರನ್ನು ನೀವು ಶಿಫಾರಸ್ಸು ಮಾಡಬಹುದು. ನಾಳೆ ಒಳಗೆ ಕೆಲವು ರೆಸುಮೆ ಕಳಿಸಿ. ನನಗೆ ಈಗ ಅವರ ಜೊತೆ ಮೀಟಿಂಗ್ ಇದೆ, ಮತ್ತೆ ಫೋನ್ ಮಾಡುವೆ…. ಬೈ" ಅಂತ ಕರೆಯನ್ನು ಮುಗಿಸಿದಳು.
ರಘುಗೆ ಸ್ವರ್ಗಕ್ಕೆ ಮೂರೆ ಗೇಣು! ಕೂಡಲೇ ಅಲ್ಲೇ ಇದ್ದ ಪ್ರದೀಪ, ಸೀನುನಂತಹ ತನ್ನ ನಾಲ್ಕು ಚೆಲಾಗಳನ್ನು ಕಣ್ಣ ಸನ್ನೆಯಲ್ಲೇ ಕರೆದು ಕೆಳಗಿನ ಮಹಡಿಯಲ್ಲಿರುವ ಕೆಫೆತೆರಿಯ ಕ್ಕೆ ಕರೆದೊಯ್ದ. ಅವರಲ್ಲಿಯೂ ಪ್ಯಾರಿಸ್ ನ ಕೆಲಸದ ಕನಸನ್ನು ಬಿತ್ತಿ, ಅವರ ರೆಸುಮೆ ಗಳನ್ನೂ ಇವತ್ತೇ ಅಪ್ಡೇಟ್ ಮಾಡಿ ತನ್ನ ವೈಯುಕ್ತಿಕ ಇಮೇಲ್ ಅಡ್ರೆಸ್ ಗೆ ಕಳಿಸಲು ಆಜ್ಞೆ ಹೊರಡಿಸಿದ.
ಜಾನ್ ತನಗೆ ಅಂತಲೇ ಮೀಸಲಾಗಿದ್ದ ಚೇಂಬರ್ ನಲ್ಲಿ ತನ್ನ ಲ್ಯಾಪ್ ಟಾಪ್ ದಿಟ್ಟಿಸುತ್ತ ಕೂತಿದ್ದ. ಅದು ಸುಧೀರ್ ಕಳಿಸಿದ್ದ ಫೈಲ್ ಆಗಿತ್ತು. ಭಾರತದ ಆ ಶಾಖೆಯಲ್ಲಿ ಕೆಲಸ ಮಾಡುತ್ತಿರುವ ಅಷ್ಟೂ ಉದ್ಯೋಗಿಗಳ ಹೆಸರು ಹಾಗೂ ಅವರ ಬಗ್ಗೆ ಎಲ್ಲ ವಿವರಗಳೂ ಅಲ್ಲಿದ್ದವು. ಎಲ್ಲರ ಕೌಶಲಗಳ, ಸಾಮರ್ಥ್ಯಗಳ ಕುರಿತ ಮಾಹಿತಿಯೂ ಅಲ್ಲಿತ್ತು. ಅಂಥದೊಂದು ಪಟ್ಟಿಯನ್ನು ತಯಾರಿಸಿ ಕಳಿಸು ಅಂದಾಗಲೇ, ಸುಧೀರನಿಗೆ ಅವನು ಅಲ್ಲಿಂದ ಎಷ್ಟೋ ಜನರ ಎತ್ತಂಗಡಿ ಮಾಡುವ ಇರಾದೆ ಹೊಂದಿದ್ದಾನೆಂದು  ಅಂದಾಜಿಸಿದ್ದ. ಮೊತ್ತ ಮೊದಲು ತನ್ನನ್ನೇ ಗುರಿ ಮಾಡಿರಬಹುದೆಂಬ ಬಲವಾದ ನಂಬಿಕೆ ಅವನಲ್ಲಿತ್ತು. ಆದರೆ ಜಾನ್ ತಲೆಯಲ್ಲಿ ಓಡುತ್ತಿದ್ದ ಲೆಕ್ಕಾಚಾರವೇನಾಗಿತ್ತು ಎನ್ನುವುದು ಜಾನ್ ನನ್ನು ಬಿಟ್ಟರೆ ಅವನ ಚೇಲಾ ಜೇಕಬ್ ಗೆ ಮಾತ್ರ ಗೊತ್ತಿತ್ತು!                            
(ಮುಂದುವರಿಯುವುದು…)

Saturday, June 20, 2015

ಬಹುಪರಾಕ್!

(http://www.panjumagazine.com/?p=11024)
 
ಬೆಳಿಗ್ಗೆ ಕೆಲಸಕ್ಕೆ ಹೊತ್ತಾಗಿದ್ದರೂ ಅಂತಹ ಗಡಿಬಿಡಿಯೇನೂ ತೋರಿಸದೆ, ತಾನು ಬೇಗ ಹೋಗಿಯಾದರೂ ಏನು ಮಾಡುವುದು ಅನ್ನುವ ಮನಸ್ಥಿತಿಯಲ್ಲಿ ಆರಾಮವಾಗಿ ಬಂದ ಪ್ರದೀಪ್ ಗೆ ಸ್ವಾಗತಿಸಿದ್ದು ಎಂದಿಗಿಂತಲೂ ಚೊಕ್ಕದಾದ ಆಫೀಸಿನ ಪ್ರಾಂಗಣ. ಅವನಿಗೆ ಆಶ್ಚರ್ಯವಾಗಿತ್ತು. ಅಲ್ಲೇ ನಿಂತು ಅತ್ತಿತ್ತ ಕಣ್ಣಾಡಿಸಿದ. ರಿಸೆಪ್ಶನ್ ನಲ್ಲಿ ಹೂವಿನ ಅಲಂಕಾರ, ಆ ಕಡೆ ಈ ಕಡೆಗೊಂದು ಹೂ ಕುಂಡಲ. ಇದ್ದುದರಲ್ಲೇ ಸುಂದರಿಯರು ಅನಿಸಿಕೊಂಡ ನಾಲ್ಕು ಲಲನೆಯರು, ತಮಗೆ ಪರಿಚಿತವೇ ಅಲ್ಲದ ಸ್ಯಾರಿ ಎಂಬ ದೇಸಿ ಉಡುಗೆಯಲ್ಲಿ ನಿಂತಿದ್ದರು. ಆಗಾಗ ತಮ್ಮ ಸ್ಯಾರಿ ಸರಿ ಇದೆಯೋ ಇಲ್ಲವೋ ಎಂಬಂತೆ ತಮ್ಮದೇ ಸುತ್ತಲೂ ಕಣ್ಣಾಡಿಸುತ್ತ, ಸರಿಯಿಲ್ಲ ಅನಿಸಿದೆಡೆಗೆ ಸರಿ ಮಾಡಿಕೊಳ್ಳುತ್ತ ನಿಂತಿದ್ದರು. ಬೇರೆಯವರು ತಮ್ಮನ್ನು ಗಮನಿಸುತ್ತಿದ್ದಾರೆ ತಾನೇ ಎಂದೂ ಅತ್ತಿತ್ತ ನೋಡುತ್ತ, ಒಬ್ಬನಾದರೂ ನೋಡುತ್ತಿದ್ದರೆ ಅದು ತನ್ನನ್ನೇ ನೋಡುತ್ತಿರಬೇಕು ಎಂದು ಒಂದು ಗಳಿಗೆ ನಿಶ್ಚಿಂತರಾಗುತ್ತಿದ್ದರು. ಸುಗಂಧ ದ್ರವ್ಯವನ್ನು ಯಥೇಚ್ಚವಾಗಿ ಸ್ಪ್ರೇ ಮಾಡಿದ್ದರಿಂದ ಆ ಪ್ರದೇಶದಲ್ಲಿ ಘಾಟು ವಾಸನೆ ಅಡರಿತ್ತು. ಒಟ್ಟಿನಲ್ಲಿ ಅಲ್ಲಿ ಹಬ್ಬದ ವಾತಾವರಣವಿತ್ತು. ಬೆಂಗಳೂರಿಗೆ ಬಂದ ಮೇಲೆ ಹಬ್ಬ ಹರಿದಿನಗಳನ್ನೇ ಮರೆತ ಪ್ರದೀಪಗೆ ಇವತ್ತು ಯಾವುದೋ ಹಬ್ಬವಿರಬೇಕು ತಾನು ಅದನ್ನು ಎಂದಿನಂತೆ ಮರೆತುಬಿಟ್ಟೆನೇನೋ ಎಂಬ ಸಂಶಯ ಉಂಟಾಗಿರುವಾಗಲೇ ಅಲ್ಲೇ ಪಕ್ಕಕ್ಕೆ ಇದ್ದ ಫಲಕದ ಮೇಲೆ ಯಾರಿಗೋ ಸ್ವಾಗತ ಕೋರಿದ ಅಕ್ಷರಗಳು ಕಂಡವು. ಕೂಲಂಕುಷವಾಗಿ ನೋಡಲಾಗಿ 'Welcome to Voice President John C. Becker' ಅನ್ನುವ ವಾಕ್ಯಗಳು ಕಂಡವು. ತಮ್ಮ ಶಾಖೆಗೆ ಜಾನ್ ಬರುತ್ತಿರುವ ವಿಷಯ ಅವನಿಗೆ ಗೊತ್ತಾಗಿದ್ದು ಆಗಲೆ. ಅವನು ಬರುತ್ತಿರುವ ವಿಷಯ ಮೊದಲೇ ಗೊತ್ತಿತ್ತಾದರೂ ಇವತ್ತೇ ಬರುವನೆಂದು ಅವನಿಗೆ ಅಂದಾಜಿರಲಿಲ್ಲ. ತನಗ್ಯಾರೂ ಹೇಳಲೇ ಇಲ್ಲವೆಂಬ ಕೋಪ ಅವನಿಗೆ ಬಂದಿತು. ತನ್ನ ಬಾಸ್ ಸುಜಯ್ ಎಲ್ಲ ವಿಷಯಗಳನ್ನು ತನ್ನ ಗೆಳತಿ ನಿಶಾಗೆ ಮಾತ್ರ ಹೇಳುತ್ತಾನೆ. ಮಿಕ್ಕ ತಾವೆಲ್ಲರೂ ಏನು ಪಾಪ ಮಾಡಿದ್ದೇವೆ? ಅಂತ ತನ್ನಲ್ಲೇ ಅವನನ್ನು ಬೈದುಕೊಂಡ. ಈ ವಿಷಯದ ಬಗ್ಗೆ ಜಾನ್ ಗೆ ದೂರು ಕೊಡಬೇಕು ಅಂತ ಯೋಚಿಸುತ್ತ ತನ್ನ ಜಾಗಕ್ಕೆ ತೆರಳಿದ.
 
ಅಮೆರಿಕಾದ ದೊರೆಗೆ ಅದ್ಧೂರಿಯ ಸ್ವಾಗತ ಕೋರಲು ಎಲ್ಲ ಸಿದ್ಧತೆಗಳಾಗಿದ್ದವು. ಶಾಖೆಯ ಮುಖಸ್ಥನಾದ ಸುಧೀರ್ ತನ್ನ ಮಾಮೂಲಿ ಟೀ ಶರ್ಟ್ ಹಾಕಿಕೊಳ್ಳದೆ ತುಂಬಾ ಡೀಸೆಂಟ್ ಆಗಿರುವ ಸೂಟು ಬೂಟು ಹಾಕಿಕೊಂಡು ತಯಾರಾಗಿದ್ದುದು ವಿಶೇಷವಾಗಿತ್ತು. ಉಳಿದ ಮ್ಯಾನೇಜರ್ ಗಳೂ ತಂತಮ್ಮ ಸೂಟು ಬೂಟುಗಳೊಂದಿಗೆ ಮದುವೆಗೆ ತಯಾರಾದಂತೆ ಸಿಕ್ಕಾಪಟ್ಟೆ ಸ್ಮಾರ್ಟ್ ಆಗಿ ಬಂದಿದ್ದರು. ಮೊದಲೇ ನಿರ್ಧರಿಸಿದಂತೆ ಜಾನ್ ಹನ್ನೆರಡು ಗಂಟೆಗೆ ಬರುವದಿತ್ತಾದರೂ ಅವನು ಬಂದಿದ್ದು ಒಂದು ಗಂಟೆ ಮೊದಲೇ. ಅಂದುಕೊಂಡಿದ್ದಕ್ಕಿಂತ ವಿಭಿನ್ನವಾಗಿ ಎಲ್ಲರಿಗೂ ಅನಿರೀಕ್ಷಿತ ತಿರುವು ಕೊಡುವುದರಲ್ಲಿ ಜಾನ್ ದು ಎತ್ತಿದ ಕೈ. ಅದೇ ಅವನ ವಿಶೇಷ. ಅದನ್ನು ಮೊದಲೇ ತಿಳಿದಿದ್ದ ಸುಧೀರ್ ಎಲ್ಲ ತಯಾರಿಗಳನ್ನೂ ಮುಂಚಿತವಾಗೆ ಮಾಡಿಕೊಂಡಿದ್ದ. 
ಜಾನ್ ಬರುತ್ತಲೇ ಸೀರೆ ಉಟ್ಟ ನೀರೆಯರು ಅವನಿಗೆ ಹೂ ಗುಚ್ಚದೊಂದಿಗೆ ಸ್ವಾಗತಿಸಿದರು. ಅವನು ಗಂಟು ಮುಖದಲ್ಲೇ ಸ್ವೀಕರಿಸಿದ. ಅವನ ಜೊತೆಗೆ ಜೇಕಬ್ ನೂ ಬಂದಿದ್ದ. ಸುಧೀರ್ ತನ್ನನ್ನು ತಾನು ಪರಿಚಯಿಸಿಕೊಂಡ. ಜಾನ್, ಅವನನ್ನು ಅಡಿಯಿಂದ ಮುಡಿಯವರೆಗೆ ನೋಡಿದ ರೀತಿಗೆ ತುಸು ಮುಜುಗರಕ್ಕೊಳಗಾದ. ಆ ನೋಟ ‘ನೀನೆ ಏನು ಈ ಶಾಖೆಯ ಮುಖ್ಯಸ್ಥ?’ ಅನ್ನುವಂತಿತ್ತು. ಮಿಕ್ಕ ಸಹೋದ್ಯೋಗಿಗಳನ್ನೂ ಅವನಿಗೆ ಸುಧೀರ ಪರಿಚಯಿಸಿದ. ಎಲ್ಲರನ್ನೂ ಹುಬ್ಬು ಗಂಟಿಕ್ಕಿಯೇ ಮಾತಾಡಿಸಿದ ಜಾನ್ ಎಲ್ಲರಲ್ಲಿಯೂ ನಡುಕ ಹುಟ್ಟಿಸಿದ. ಪ್ರಥಮ ಚುಂಬನದಲ್ಲೇ ದಂತಭಗ್ನವಾಗಿತ್ತು!
ಸುಧೀರ್ ನ ಜೊತೆಗೆ ಇಡೀ ಆಫೀಸನ್ನು ಸುತ್ತಾಡಿದ ಜಾನ್, ಎಲ್ಲ ಕಡೆಗೂ ಸಂಶಯದ ದೃಷ್ಟಿಯಿಂದಲೇ ಅಡ್ಡಾಡುತ್ತಿದ್ದನೇನೋ ಅಂತ ಅನಿಸುತ್ತಿತ್ತು. ಕೆಲವು ಸಹೋದ್ಯೋಗಿಗಳ ಜೊತೆಗೆ ಮಾತಾಡಿ ಅವರೇನು ಮಾಡುತ್ತಿರುವರೆಂದು ಕೇಳಿ ತಿಳಿದುಕೊಂಡ. ಕೆಲವರಿಗೆ ಇದನ್ನು ಹೀಗೇಕೆ ಮಾಡುತ್ತಿರುವೆ? ಹಾಗೇಕೆ ಮಾಡುತ್ತಿಲ್ಲ ಅಂತೇನೇನೋ ಪ್ರಶ್ನೆ ಕೇಳಿ ಅವರಲ್ಲಿ ಬೆವರು ಹುಟ್ಟಿಸಿದ. ಪ್ರದೀಪನಂತಹ ಕೆಲೆಸಗಳ್ಳರು ಮಾತ್ರ ಅವನು ಬಂದ ಸಮಯಕ್ಕೆ ತಮ್ಮ ಜಾಗದಲ್ಲಿರದೆ ಬಚಾವಾದರು. ಎಂದಿನಂತೆ ಡೆಸ್ಕಿಗೆ ಅಂಟಿಕೊಂಡು ಕೆಲಸ ಮಾಡುವ ಉದ್ಯೋಗಿಗಳು ಮಾತ್ರ ಇದರಿಂದ ಕಿರಿಕಿರಿ ಅನುಭವಿಸುವಂತಾಯಿತು. ಆದರೆ ನಿಶಾ ಮಾತ್ರ ಇದೆ ಒಂದು ಅವಕಾಶಕ್ಕೆ ಕಾಯುತ್ತಿದ್ದವಳಂತೆ ಅವನ ಜೊತೆ ಅಮೆರಿಕಾದ accent ನಲ್ಲಿ ಮಾತಾಡಿ ಅವನ ಮನ ಗೆದ್ದಳು. ಅವಳ ಹೆಸರು ಏನು , ಅವಳು ಯಾರಿಗೆ ರಿಪೋರ್ಟ್ ಮಾಡುತ್ತಿದ್ದಾಳೆ ಎಂಬೆಲ್ಲ ವಿಷಯಗಳನ್ನು ಅವನು ಕೇಳಿ ತಿಳಿದುಕೊಂಡ. ಅವನ ಜೊತೆಗಿದ್ದ ಜೇಕಬ್ ಇದೆಲ್ಲವನ್ನೂ ನೋಟ್ ಮಾಡಿಕೊಂಡ. ಈ ಮನುಷ್ಯ ಯಾವ ಮಟ್ಟಕ್ಕಾದರೂ ಇಳಿಯಬಹುದೆಂದು ಸುಧೀರನಿಗೆ ಮನದಟ್ಟಾಯಿತು. ಯಾವುದೇ ಉಪಾಧ್ಯಕ್ಷ ಇಲ್ಲಿಯವರೆಗೆ ಈ ತರಹ ವರ್ತಿಸಿರಲಿಲ್ಲ.
 
ಮದ್ಯಾಹ್ನದ ಊಟಕ್ಕೆ ಕಂಪನಿಯ ಪಕ್ಕದಲ್ಲೇ ಇದ್ದ ಪಂಚತಾರಾ ಹೋಟೆಲ್ ನಲ್ಲಿ ಪೃಥ್ವಿ ವ್ಯವಸ್ಥೆ ಮಾಡಿಸಿದ್ದ. ಅದೇ ಹೋಟೆಲ್ ನಲ್ಲಿ ಅವನ ವಾಸ್ತವ್ಯಕ್ಕೂ ವ್ಯವಸ್ಥೆ ಮಾಡಲಾಗಿತ್ತು. ಆಫೀಸಿಗೆ ತುಂಬಾ ಹತ್ತಿರದಲ್ಲೇ ಇರುವ ಹೋಟೆಲ್ ನಲ್ಲಿಯೇ ತಾನು ತಂಗಬೇಕೆಂದು ಜಾನ್ ನ ಅಪೇಕ್ಷೆಯಾಗಿತ್ತು.  ಅವನ ಜೊತೆಗೆ ಊಟಕ್ಕೆ ಸುಧೀರ್ ಹಾಗೂ ಇತರ ಮ್ಯಾನೇಜರ್ ಗಳು ಹಾಜರಾಗಿದ್ದರು. ಎಂದೂ ಹಾಕಿಕೊಂಡು ರೂಢಿಯಿರದ ಸೂಟು ಎಲ್ಲರಿಗೂ ಕಸಿವಿಸಿ ಉಂಟುಮಾಡಿತ್ತು. ಎದುರಿಗೆ ಜಾನ್ ನಂತಹ ವ್ಯಕ್ತಿ ಕೂತಿರುವಾಗ ಎಲ್ಲರ ಹಸಿವೆಯೂ ಸಹಜವಾಗಿಯೇ ಮಾಯವಾಗಿತ್ತು. ಅವನು ಏನು ಕೆಳುತ್ತಾನೋ ಎನ್ನುವ ಹೆದರಿಕೆ ಪ್ರತಿಯೊಬ್ಬರಲ್ಲೂ ಇತ್ತು. ಅವನೂ ಕೂಡ ಈ ಸಂದರ್ಭದ ಸದ್ಬಳಕೆ ಮಾಡಿಕೊಂಡಿದ್ದ. ಪ್ರತಿಯೊಬ್ಬ ಮ್ಯಾನೇಜರ್ ಗೂ ಪ್ರಶ್ನೆಗಳನ್ನು ಹಾಕುತ್ತ ಅವರನ್ನು ಪೇಚಿಗೆ ಸಿಕ್ಕಿಸುತ್ತಿದ್ದ. ಅದೇ ಜೇ.ಸಿ.ಬಿ ಎಂಬ ಅನ್ವರ್ಥಕ ನಾಮ ಗಳಿಸಿದ ಜಾನ್ ನ ವಿಶೇಷತೆಯಾಗಿತ್ತು. ಮರುದಿನ ಪ್ರತಿಯೊಬ್ಬ ಮ್ಯಾನೇಜರ್ ಜೊತೆಗೆ ತನ್ನ ಮೀಟಿಂಗ್ ಗೊತ್ತು ಮಾಡಲು ಆದೇಶ ಹೊರಡಿಸಿದ್ದ. ಎಲ್ಲರೂ ಒಂದೊಂದು ತುತ್ತನ್ನೂ ತುಂಬಾ ಪ್ರಯಾಸ ಪಟ್ಟು ಗಂಟಲೊಳಗೆ ಇಳಿಸಿಕೊಳ್ಳುತ್ತಿದ್ದರು.
ಕಡೆಗೂ ಊಟದ ಆಟ ಮುಗಿದಿತ್ತು. ಹಿಂದಿನ ರಾತ್ರಿಯೇ ಬಂದ ಜಾನ್ ಗೆ ನಿದ್ದೆ ಬಂದಿರಬಹುದು ಹಾಗೂ ಅವನು ತನ್ನ ಕೋಣೆಗೆ ಹೋಗಿ ಮಲಗಿ ಸ್ವಲ್ಪ ವಿಶ್ರಾಂತಿ ಪಡೆದುಕೊಳ್ಳಬಹುದೆಂಬ ಎಲ್ಲರ ನಿರೀಕ್ಷೆ ಸುಳ್ಳು ಮಾಡಿ, ಊಟದ ಬಳಿಕ ಎಲ್ಲರ ಜೊತೆಗೆ ಆಫೀಸಿನ ಕಡೆಗೆ ನಡೆದನವನು. ಸುಧೀರ್ ನ ಜೊತೆಗೆ ಕುಳಿತು ಒಂದಿಷ್ಟು ವಿಷಯಗಳ ಮಾಹಿತಿ ಪಡೆಯುವ ಉದ್ದೇಶ ಅವನದಾಗಿತ್ತು… 

(ಮುಂದುವರಿಯುವುದು…)                

Saturday, June 13, 2015

ಜಾನ್ ಎಂಬ ಬಿರುಗಾಳಿಯ ಮುನ್ಸೂಚನೆ…

(http://www.panjumagazine.com/?p=10909)

ಜಾನ್ ಆಯೋಜಿಸಿದ್ದ ಪಾರ್ಟಿ ಮುಗಿಸಿ ಮನೆಗೆ ಬಂದ ವೆಂಕಣ್ಣನ ಮುಖ ತುಂಬಾ ಚಿಂತೆಯಲ್ಲಿದ್ದಂತೆ ಕಂಡು ಬಂದದ್ದರಿಂದ ಜಾನು ಗೆ ಕಳವಳವಾಯಿತು. 
“ಯಾಕ್ರೀ ಪಾರ್ಟಿಯೊಳಗ ಯಾರರೆ ಏನರೆ ಅಂದರೋ ಏನು?” ಅಂತ ಹತ್ತಿರಕ್ಕೆ ಹೋಗಿ ವಿಚಾರಿಸಿದಳು. ಹಾಗೆ ಹತ್ತಿರ ಹೋಗಿದ್ದಕ್ಕೆ ಇನ್ನೊಂದು ಕಾರಣವೂ ಇತ್ತು. ಗಂಡ ವಿದೇಶಕ್ಕೆ ಬಂದು ಅವರ ತರಹವೇ ಪಾರ್ಟಿಲಿ ಗುಂಡು ಹಾಕೋಕೂ ಶುರು ಹಚ್ಚಿಕೊಂಡನೋ ಹೇಗೆ ಎಂಬ ಪರೀಕ್ಷೆ ಅದಾಗಿತ್ತು.
“ಯಾರೇನ್ ಅಂದ್ರೂ ನಾ ತಲಿ ಕೆಡಿಸ್ಕೊಳೋದಿಲ್ಲ ಬಿಡು. ಆದ್ರ ಆ ಜೇ.ಸಿ.ಬಿ ನನ್ ಮಗಾ ಏನೋ ಸ್ಕೆಚ್ ಹಾಕ್ಲಿಕತ್ತಾನ. ಅದ ಸ್ವಲ್ಪ ತಲಿ ಕೊರಿಲಿಖತ್ತದ”  ಅಂದವನ ಉಸಿರಿನಲ್ಲಿ ಶರಾಬಿನ ವಾಸನೆ ಇಲ್ಲದ್ದು ಅವಳಿಗೆ ಸ್ವಲ್ಪ ಸಮಾಧಾನ ತಂದಿತಾದರೂ. ಹೊಸ ಉಪಾಧ್ಯಕ್ಷ  ಜಾನ್ ಕಿರಿಕ್ಕು ಶುರು ಮಾಡಿರುವ ಸಂಗತಿ ಅವಳ ತಲೆಯಲ್ಲೂ ಕೊರೆಯತೊಡಗಿತ್ತು.
“ಏನ್ ಮಾಡ್ತಾನಂತ ಆವಾ?” ಅಂದಳು.
“ಗೊತ್ತಿಲ್ಲ… ಮುಂದಿನ ವಾರ ಬೆಂಗಳೂರಿಗೆ ಹೊಂಟಾನ. ಅಲ್ಲೇ ಯಾರ್ಯಾರ್ನ ಹಾರಸ್ತಾನೋ ಏನ್ ಕತಿನೋ! ಸುಧೀರ್ ಗ ಒಂದ್ ಕಾಲ್ ಮಾಡ್ತೀನಿ ತಡಿ. ಇವತ್ತ ಏನೇನ್ ಆತು ಎಲ್ಲಾ ಅವಂಗ ಹೇಳ್ಬೇಕು.” ಅಂತ ಫೋನ್ ನಲ್ಲಿ ನಂಬರ್ ಡಯಲ್ ಮಾಡತೊಡಗಿದ. ಮಗಳು ಖುಷಿ ಅಲ್ಲಿನ ಹಗಲು ರಾತ್ರಿಗಳಿಗೆ ಆಗಲೇ ಹೊಂದಿಕೊಂಡಿದ್ದಳು. ಅವಳು ಗಾಢ ನಿದ್ರೆಯಲ್ಲಿದ್ದಳು. ಇವನ ಫೋನ್ ಕಾರ್ಯಕ್ರಮ ಇನ್ನು ಕನಿಷ್ಟ ಒಂದು ಗಂಟೆಯಾದರೂ ಸಾಗುವುದೆಂಬ ಅರಿವಿದ್ದ ಜಾನು ತಾನೂ ಮಲಗಲು ತೆರಳಿದಳು.  
ಭಾರತದಲ್ಲಿ ಬೆಳಗಿನ ಹತ್ತು ಗಂಟೆ. ಸುಧೀರನ ಮೊಬೈಲ್ ಮೊಳಗಿತು. ವೆಂಕಟ್ ರಾತ್ರಿ ಜಾನ್ ನ ಪಾರ್ಟಿಗೆ ಹೋಗಿರುವ ಸಂಗತಿ ಗೊತ್ತಿದ್ದುದರಿಂದ ಅವನದೇ ಫೋನ್ ನ ನಿರೀಕ್ಷೆಯಲ್ಲಿದ್ದನವನು. ಅದು ಅವನದೇ ಕರೆಯೆಂದು ಗೊತ್ತಾಗುತ್ತಲೇ ತನ್ನ ಕ್ಯಾಬಿನ್ ನಲ್ಲಿ ಯಾರದೋ ಜೊತೆಗೆ ಮಾತಾಡುತ್ತಿದ್ದವನು ಅವರನ್ನು ಸಾಗ ಹಾಕಿ ವೆಂಕಟ್ ಹೇಳುವುದನ್ನು ಗಮನವಿಟ್ಟು ಕೇಳತೊಡಗಿದ. ಸುಮಾರು ಹೊತ್ತು ಮಾತಾಡಿ ಅವನಿಗೆ ಶುಭರಾತ್ರಿ ಹೇಳಿ ಕರೆಯನ್ನು ಮುಗಿಸಿದ ಮೇಲೆ ಸುಧೀರ್ ಗೂ ಚಿಂತೆ ಶುರುವಾಗಿತ್ತು…
ಯಾವುದೋ ವಿಷಯಕ್ಕೆ ಚರ್ಚಿಸಲು ಅಂತ ಬಂದ ಸುಜಯ್, ಬಾಸ್ ಸುಧೀರ್  ತನ್ನದೇ ಲೋಕದಲ್ಲಿ ಮುಳುಗಿದ್ದು ಗಮನಿಸಿದ. ಬಾಗಿಲು ತಟ್ಟಿ ಒಳಗೆ ಬಂದವನ ಜೊತೆ ವಿಷಯ ಚರ್ಚಿಸುತ್ತಿದ್ದನಾದರೂ ಒಳಗೊಳಗೇ ತನ್ನ ಹಾಗೂ ತಮ್ಮ ಶಾಖೆಯ ಭವಿಷ್ಯದ ಬಗ್ಗೆ ಚಿಂತಿಸುತ್ತಿದ್ದುದು ಅವನ ಮುಖದಲ್ಲಿ ಸ್ಪಷ್ಟವಾಗಿತ್ತು. ಒಟ್ಟಿನಲ್ಲಿ ಜಾನ್ ಎಂಬ ಬಿರುಗಾಳಿಯ ಮುನ್ಸೂಚನೆಗೆ ಭಾರತದ ಈ ಶಾಖೆ ಅಕ್ಷರಶಃ ನಡುಗುತ್ತಿತ್ತು!
ಇತರ ಎಷ್ಟೋ ಚಿಂತಾಮಣಿಗಳಂತೆ ಮಹಾ ಮೈಗಳ್ಳ ರಘುಗೆ ಇನ್ನೂ ಹೆಚ್ಚಿನ ಚಿಂತೆ ಶುರುವಾಗಿತ್ತು. ಜಾನ್ ನ ಕೆಲಸಗಳ್ಳರ  ಪಟ್ಟಿಯಲ್ಲಿ ತಾನು ಮುಂಚೂಣಿಯಲ್ಲಿರುತ್ತೇನೆಂಬ ಸಂಪೂರ್ಣ ಭರವಸೆ ಇವನಿಗಿತ್ತು. ಯಾಕೆಂದರೆ ಕಳೆದ ಕೆಲವು ವರ್ಷಗಳಿಂದ ತಾನು ಏನೂ ಕೆಲಸವನ್ನೇ ಮಾಡದೇ ಈ ಕಂಪನಿಗೆ ಭಾರವಾದ ಸಂಗತಿಯನ್ನು ಜಾನ್ ಗೆ ಸುಧೀರ್ ಹೇಳದೆ ಇರುವ ಸಾಧ್ಯತೆಗಳೇ ಇರಲಿಲ್ಲ. ಹೀಗೆ ತಲೆಗೆ ಕೈಹಚ್ಚಿಕೊಂಡು ಕೂತಾಗಲೇ ತನ್ನ ಫೋನ್ ಕೂಗಿ ಇವನ ಎಚ್ಚರಿಸಿತು. ಹಲೋ ಅಂದವನಿಗೆ ಅವನ ಹಳೆಯ ಸಹೋದ್ಯೋಗಿ ತರಂಗಿಣಿಯ ದನಿ ಕೇಳಿ ಇವಳ್ಯಾಕೆ ಎಷ್ಟೋ ದಿನಗಳ ಬಳಿಕ ತನ್ನ ನೆನಸಿಕೊಂಡಳು ಅಂತ ಕುತುಹಲಿಯಾದನವನು. ಅವಳು ಕೆಲವು ವರ್ಷಗಳ ಹಿಂದೆ ಇವನ ಜೊತೆಗೆ ಕೆಲಸ ಇದೆ ಕಂಪನಿಯಲ್ಲಿ ಮಾಡಿಕೊಂಡಿದ್ದಳು. ಅವಳ ಮದುವೆಯಾದ ಮೇಲೆ, ತಾನೇ ಸ್ವಂತ ಏನಾದರೂ ಮಾಡುತ್ತೇನೆ… ಇವರು ಕೊಡುವ ಪುಟಗೋಸಿ ಕಾಸಿಗೆ ಯಾವನು ಇಲ್ಲಿ ಗುಲಾಮಗಿರಿ ಮಾಡಿಕೊಂಡಿರುತ್ತಾನೆ ಅಂತ ಭಾಷಣ ಬಿಗಿದು ರಾಜಿನಾಮೆ ಕೊಟ್ಟು ಕಾಣೆಯಾಗಿದ್ದಳು. ಮೋದಮೊದಲಿಗೆ ಇವನ ಜೊತೆ ಸಂಪರ್ಕದಲ್ಲಿದ್ದಳಾದರೂ ಕ್ರಮೇಣವಾಗಿ ಅದು ಕಡಿಮೆಯಾಗಿತ್ತು. ಏನೋ ಒಂದು Consultancy ಶುರು ಮಾಡಿದ್ದಳೆಂಬ ವಿಷಯ ಇವನಿಗೆ ಗೊತ್ತಿತ್ತು ಅಷ್ಟೇ. 
“ಏನ್ ಮ್ಯಾಮ್ ಎಷ್ಟೋ ದಿನಾ ಆದ ಮೇಲೆ ಫೋನ್ ಮಾಡಿದೀರಾ? ಏನ್ ಸಮಾಚಾರಾ?”
“ಏನಿಲ್ಲಾ ರಘು… ಎಲ್ಲಾ ಆರಾಮು…. ಒಂದು ಒಳ್ಳೆ opportunity ಇತ್ತು ಅದಕ್ಕೆ ನಿಮ್ಮ ನೆನಪಾಯ್ತು” ಅಂದ್ಲು. ಯಾವ್ದಾದ್ರೂ ಹೊಸ  ಕೆಲಸ ಇರಬಹುದು. ಒಳ್ಳೆ ಟೈಮ್ ಗೆ ಮಾಡಿದಾಳೆ. ಅಂತ ಅಂದುಕೊಂಡವನೇ….
“ಸ್ವಲ್ಪ ಇರಿ, ಆಚೆ ಬರ್ತೀನಿ….” ಅಂತ ತನ್ನ ಜಾಗದಿಂದ ಎದ್ದ. ಇಂತಹ ವಿಚಾರ ಎಲ್ಲಾದರೂ ಆಫೀಸಿನೊಳಗೆ ಮಾತಾಡೋಕಾಯ್ತದಾ! ಅಲ್ಲೇ ಸ್ವಲ್ಪ ದೂರದಲ್ಲಿ ರಿಸೆಪ್ಶನ್ ಪಕ್ಕದಲ್ಲಿದ್ದ ಕಾನ್ಫರೆನ್ಸ್ ಕೋಣೆ ಖಾಲಿ ಇದ್ದುದರಿಂದ ಅದರೊಳಗೆ  ತೂರಿಕೊಂಡು ಮಾತು ಮುಂದುವರಿಸಿದ.
“…. ಹಾ ಹೇಳಿ ಈಗ”
“ಹೆಂಗ್ ನಡೀತಿದೆ ಕೆಲ್ಸಾ?” ಕೇಳಿದಳವಳು.
“ಅಯ್ಯೋ ಸಿಕ್ಕಾಪಟ್ಟೆ ಕೆಲಸ ರೀ… ನಾಯಿ ಪಾಡಾಗೋಗಿದೆ.” ಆಫೀಸಿನಲ್ಲಿ ಇವನೆಷ್ಟು ಘನ ಕಾರ್ಯ ಮಾಡುತ್ತಿದ್ದನೆಂದು ಗೊತ್ತಿಲ್ಲವೇ ಅವಳಿಗೆ!
“ಪ್ಯಾರಿಸ್ ಗೆ ಹೋಗ್ತೀರಾ?” ಇಂತಹ ವಿಚಿತ್ರ ಪ್ರಶ್ನೆಯನ್ನೇ ನಿರೀಕ್ಷಿಸಿದ್ದ ರಘು ನ ಗಂಟಲು ವಣಗಿತ್ತು! ಕಷ್ಟಪಟ್ಟು ಸಾವರಿಸಿಕೊಂಡು…
“ಏನು? ಪ್ಯಾರಿಸ್ ಗಾ?!”
“ಹೂಂ ಕಣ್ರೀ… ಬ್ಲ್ಯಾಕ್ ಇಯರ್ ಸಾಫ್ಟ್ವೇರ್ ಕಂಪನೀಲಿ ಒಂದು ದೊಡ್ಡ ಹುದ್ದೆಯ ಕೆಲಸ ಖಾಲಿ ಇದೆ. ನನಗೆ ತುಂಬಾ ಬೇಕಾದವರು ಅಲ್ಲಿ ಕಂಪನಿಯ ಅದ್ಯಕ್ಷ ಮಂಡಳಿಯಲ್ಲಿ ಇದ್ದಾರೆ. ಅವರದು ಕೋಟಾ ಇರುತ್ತೆ. ಸುಮ್ಮನೆ ಔಪಚಾರಿಕತೆಗೆ ಅಂತ  ಒಂದು ಸಂದರ್ಶನ ಇರುತ್ತೆ. ಪ್ಯಾರಿಸ್ ನಲ್ಲಿ ವಾಸ್ತವ್ಯ. ಅಲ್ಲಿನ ಶಾಖೆಯನ್ನು ನೀವು ನೋಡಿಕೊಳ್ಳಬೇಕು. ಅವರಿಗೆ ತುಂಬಾ ತುರ್ತಾಗಿ ಬೇಕಾಗಿದೆ. ನೀವು ಮುಂದಿನ ವಾರವೇ ಅಲ್ಲಿಗೆ ಹೋಗೋಕೆ ತಯಾರಿದೀರಾ?”
ಇಂತಹದೊಂದು ಪ್ರಶ್ನೆಯನ್ನು ಕನಸಿನಲ್ಲೂ ನಿರೀಕ್ಷಿಸದಿದ್ದ ರಘುಗೆ ಎಚ್ಚರ ತಪ್ಪೋದೊಂದೇ ಬಾಕಿ. ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾಗ ಹೀಗೊಬ್ಬಳು ಕರೆ ಮಾಡಿ ನಿನಗೆ ಅಂತ ಪ್ಯಾರಿಸ್ ನಲ್ಲಿ ಕೆಲಸ ಇದೆ, ಅದೂ ಪ್ರತಿಷ್ಟಿತ ಬ್ಲ್ಯಾಕ್ ಇಯರ್ ಕಂಪನಿಯಲ್ಲಿ.,. ಅದೂ ಅಲ್ಲದೆ ಆ ಕೆಲಸ ಪಡೆದು ಕೊಳ್ಳೋದು ಅಂದ್ರೆ ಬಾಳೆ  ಹಣ್ಣು ಸುಲಿದಷ್ಟೇ ಸುಲಭ ಅಂತ ಅವಳು  ಹೇಳುತ್ತಿದ್ದರೆ, ಇದು ಕನಸೋ ನನಸೋ ಅಂತ ಅರಿವಾಗದೆ, ಅವಳಿಗೆ ಏನು ಹೇಳಬೇಕೆಂದು ತೋಚದೆ, ಮೊಬೈಲ್ ನ ಪರದೆಯನ್ನೇ ಪಿಳಿ ಪಿಳಿ ನೋಡುತ್ತಾ ಕುಳಿತವನಿಗೆ ತರಂಗಿಣಿಯ ಹಲೋ ಹಲೋ ಅನ್ನುವ ದನಿ ಕೇಳಿ, ವಾಸ್ತವಕ್ಕೆ ಬಂದು ಉಗುಳು ನುಂಗಿ ….
“ಹಾ ಹಾ ಹೇಳಿ” ಅಂತ ಉಲಿದ.
“ನಾ ಹೇಳೋದೆಲ್ಲಾ ಹೇಳಾಯ್ತು. ಈಗ ನೀವು ಹೇಳಿ. ಈ ಕೆಲಸ ಬೇಕು ಅಂದ್ರೆ ನಿಮ್ಮ ರೇಸುಮೆ ಈಗಲೇ ಕಳಿಸಿ. ನಾನು ನಿಮ್ಮ ಬಗ್ಗೆ ಅವರಿಗೆ ಆಗಲೇ ಹೇಳಿ ಆಗಿದೆ.” ಅಂತ ಗಡಿಬಿಡಿಸಿದಳು!
ಇವನು ಕೆಲಸದಲ್ಲಿ ಎಷ್ಟು ಮೈಗಳ್ಳನೋ, ಅಷ್ಟೇ ಮೈಗಳ್ಳ ಉಳಿದ ವಿಷಯದಲ್ಲ್ಲೂ ಆಗಿದ್ದ. ತನ್ನ ರೇಸುಮೆ ಅನ್ನುವ ಜಾತಕವನ್ನು ಅವನು ಎಷ್ಟೋ ವರ್ಷಗಳಿಂದ update ಕೂಡ ಮಾಡಿರಲಿಲ್ಲ. ಅದನ್ನು ತರಂಗಿಣಿಗೆ ಹೇಳಿದರೆ ಅವಳು ಫೋನಿನಲ್ಲೇ ಉಗಿಯುವಳೆಂದು ಗೊತ್ತಿದ್ದುದರಿಂದ…
 “ನಾನು ನನ್ನ ಇತ್ತೀಚಿನ ಪ್ರಾಜೆಕ್ಟ್ ಬಗ್ಗೆ ಇನ್ನೂ ರೇಸುಮೆ ನಲ್ಲಿ ಹಾಕಿಲ್ಲ. ಸಂಜೆ ಒಳಗೆ ಬರೆದು ನಿಮ್ಮ ಇಮೇಲ್ ಗೆ ಕಳಿಸುವೆ” ಎಂದು ಹೇಳಿ ಬೀಸುವ ದೊಣ್ಣೆ ತಪ್ಪಿಸಿಕೊಂಡ.
“ಆಯ್ತು ಬೇಗ ಕಳಿಸಿ. ಯಾಕಂದ್ರೆ ಇದು ತುಂಬಾ ಅರ್ಜೆಂಟು” ಅಂತ ಹೇಳಿ ಅವಳು ಕರೆಯನ್ನು ಮೊಟಕುಗೊಳಿಸಿದಳು.
ರಘು ಭೂಮಿಯ ಮೇಲೇ ಇರಲಿಲ್ಲ. ತಕ್ಷಣವೆ ತನ್ನ ಹೆಂಡತಿಗೆ ಕರೆ ಮಾಡಿ ನಡೆದದ್ದನ್ನೆಲ್ಲ ತಿಳಿಸಿ, ಇನ್ನು ಕೆಲವೇ ದಿನಗಳಲ್ಲಿ ತಾವು ಪ್ಯಾರಿಸ್ ಗೆ ಹೋಗಬೇಕಾಗಬಹುದೆಂಬ ಸುದ್ದಿಯನ್ನು ಭಿತ್ತರಿಸಿದ. ಒಂದು ಕ್ಷಣವೂ ತಡಮಾಡದೇ ಲಗುಬಗೆಯಿಂದ ತನ್ನ ರೇಸುಮೆ ಯನ್ನು ಬರೆಯಲುತೊಡಗಿದ. ಸಂಜೆಯೊಳಗೆ, ತಾನು ಇಷ್ಟು ವರುಷ ಮಾಡಲಾರದ್ದನ್ನೆಲ್ಲ ಮಾಡಿದ್ದೇನೆ ಎಂಬಂತೆ ಆ ರೇಸುಮೆ ನಲ್ಲಿ ತುರುಕಿ ಒಂದು ಸುಳ್ಳಿನ ಕಂತೆಯನ್ನು ತಯಾರಿಸಿ ತರಂಗಿಣಿಯ ಇಮೇಲ್ ಗೆ ಕಳಿಸಿ ಕೈ ತೊಳೆದುಕೊಂಡ!
 
 

Thursday, May 7, 2015

ಕಾರ್-ಬಾರ್!


ವೆಂಕಟ್ ಗೆ ಬಾಡಿಗೆ ಕಾರು ತೆಗೆದುಕೊಳ್ಳೋದು ಹೆಚ್ಚು ಕಡಿಮೆ ಅನಿವಾರ್ಯವಾಗಿತ್ತು. ಇವನು ಇನ್ನೂ ಮೂರು ವಾರಗಳಾದರೂ ಅಮೆರಿಕಾದಲ್ಲಿ ಇರುವುದು ಬಾಕಿ ಇತ್ತು. ದಿನಾಲೂ ತನ್ನ ಕಾರಿನಲ್ಲಿ ಕರೆದೊಯ್ಯುತ್ತಿದ್ದ ಇವನ ಸಹೋದ್ಯೋಗಿ ರಜೆಯ ಮೇಲೆ ಭಾರತಕ್ಕೆ ಹೋಗಿದ್ದನಾದ್ದರಿಂದ ಇವನಿಗೆ ದಿನಾಲೂ ಆಫಿಸಿಗೆ ಹೋಗುವುದೇ ಕಷ್ಟವಾಗಿತ್ತು. ಅದೂ ಅಲ್ಲದೆ, ಅಲ್ಲಿ ಕಾರಿಲ್ಲವೆಂದರೆ ಕಾಲೇ ಕಳೆದುಕೊಂಡಂತೆ. ತನ್ನ ಅಪ್ಪ ಕಾರು ತರಲು ಹೋಗುತ್ತಿದ್ದಾನೆ ಎನ್ನುವುದೇ ಖುಷಿ ಗೆ ಕೌತುಕದ ಸಂಗತಿಯಾಗಿತ್ತು. ಜಾನುನೂ  ಅಲ್ಲಿ ಇಲ್ಲಿ ಅಡ್ಡಾಡಲು ಅನುಕೂಲವಾಗುತ್ತದೆಂದು ಖುಷಿಯಲ್ಲಿದ್ದಳು. 
 
… ಅಲ್ಲಿ ಕಾರು ಚಲಾಯಿಸುವುದು ಅಷ್ಟೇನೂ ಕಷ್ಟದ ಕೆಲಸವಲ್ಲ. ಆದರೆ ರಸ್ತೆ ಮೇಲೆ ಪಾಲಿಸುವ ನಿಯಮಗಳ ಬಗ್ಗೆ ಅಲ್ಲಿ ತುಂಬಾ ಕಟ್ಟು ನಿಟ್ಟು. ಅದೂ ಅಲ್ಲದೆ, ಅಲ್ಲಿಗೂ ಇಲ್ಲಿಗೂ ಕೆಲವು ವ್ಯತ್ಯಾಸಗಳೂ ಇದ್ದವು. ಭಾರತದಲ್ಲಿ ಚಾಲಕ ಬಲಕ್ಕೆ ಕುಳಿತು ಓಡಿಸಿದರೆ ಇಲ್ಲಿ ಎಡಕ್ಕೆ ಕುಳಿತುಕೊಳ್ಳಬೇಕು. ಅಲ್ಲಿ ರಸ್ತೆಯ ಎಡಗಡೆಗೆ ಚಲಿಸಿದರೆ ಇಲ್ಲಿ ಬಲಕ್ಕೆ, ಎಲ್ಲಾ ಉಲ್ಟಾ! ಅಮೆರಿಕನ್ನರು ಎಲ್ಲದರಲ್ಲೂ ಉಲ್ಟಾನೆ… ಆದರೆ ತಿನ್ನೋದೊಂದು ಮಾತ್ರ ನಮ್ಮ ತರಾನೆ! ಅಂತ ವೆಂಕಟ್ ತಮಾಷೆಗೆ ಹೇಳುತ್ತಿದ್ದ…
ಕಾರುಗಳ ಬಾಡಿಗೆ ಕೊಡುವ ಆ ಮಳಿಗೆಯಲ್ಲಿ ಒಬ್ಬ ತನ್ನನ್ನು ಪರಿಚಯಿಸಿಕೊಂಡು ಇವನನ್ನು ಸ್ವಾಗತಿಸಿದ. ತಮ್ಮ ಬಳಿ  ಇರುವ ಬಾಡಿಗೆ ಕಾರುಗಳು ಯಾವವು?… ಯಾವ್ಯಾವ ಕಾರಿಗೆ ದಿನಕ್ಕೆ ಎಷ್ಟೆಷ್ಟು ಬಾಡಿಗೆ, ಅಲ್ಲಿನ ನಿಯಮಾವಳಿಗಳೇನು ಅಂತ ತುಂಬಾ ಹೈ ಸ್ಪೀಡ್ ಅಮೇರಿಕನ್ ಅಂಗ್ರೆಜಿಯಲ್ಲಿ ವಿವರಿಸಲು ತೊಡಗಿದ. ಅವನ ಆ ಮಾತಾಡುವ ರೀತಿ ಮತ್ತು ಗತಿ ಎಷ್ಟಿತ್ತೆಂದರೆ ವೆಂಕಟ್ ಗೆ ಅವನು ಹೇಳುವ ಕೆಲವು ವಿಷಯಗಳನ್ನು ಅರ್ಥ ಮಾಡಿಕೊಳ್ಳಲೇ ಕಷ್ಟವಾಯ್ತು. ಸ್ವಲ್ಪ ನಿಧಾನಕ್ಕೆ ಮಾತಾಡು ನೀನು ಮಾತಾಡೋದು ನನಗೆ ತಿಳಿಯುತ್ತಿಲ್ಲ ಅಂತ ನಿರ್ಭಿಡೆಯಿಂದ ಹೇಳಿ ಅವನ ವೇಗದ ಮಾತಿಗೊಂದು ತಡೆ ಹಾಕಿದ! ಅಲ್ವೇ ಮತ್ತೆ? ನಮ್ಮ ಮಾತೃ ಭಾಷೆಯೇ ಅಲ್ಲದ ಇಂಗ್ಲಿಶ್ ನಲ್ಲಿ ನಾವು ಮಾತಾಡೋವಾಗ ಅವರಿಗೇನಾದರೂ ಅರ್ಥವಾಗದಿದ್ದರೆ "ವ್ಹಾಟ್?" ಅಂತ ಗಂಟು ಮೊರೆ ಹಾಕಿ ಇನ್ನೊಮ್ಮೆ ಹೇಳುವಂತೆ ಮಾಡುವ ಅಮೆರಿಕನ್ನರು, ತಾವು ಮಾತ್ರ ಮಾತಾಡಿದ್ದು ಎಲ್ಲರಿಗೂ ಅರ್ಥವಾಗದಿದ್ದರೂ ನಾವು ಸುಮ್ಮನೆ ಕೇಳಲು ಸಾಧ್ಯವಿಲ್ಲ, ಅನ್ನುವುದು ವೆಂಕಟ್ ನ ಅಭಿಪ್ರಾಯವಾಗಿತ್ತು.     
 
ಆತ ನಿಧಾನವಾಗೆ ಮತ್ತೆ ಎಲ್ಲವನ್ನೂ ವಿವರಿಸಿ, ನಿಮಗೆ ಯಾವ ಕಾರ್ ಬೇಕು ಅಂತ ವಿನಯದಿಂದಲೇ ಕೇಳಿದ. ವೆಂಕಣ್ಣ ತನಗೆ ಬೇಕಾದ ಒಂದು ಕಾರಿನ ಹೆಸರು ಹೇಳಿ ಅದನ್ನು ಬುಕ್ ಮಾಡಿಸಿದ. ಇವನ ಕ್ರೆಡಿಟ್ ಕಾರ್ಡಿನಲ್ಲಿ ಅದಕ್ಕೆ ನಿಗದಿಯಾಗಿದ್ದ ಹಣವನ್ನು ಗೀಚಿಕೊಂಡು, ರಸೀದಿಯನ್ನು ಮುದ್ರಿಸಿ ಕೊಟ್ಟ. ಹೊರಗೆ ಕರೆದೊಯ್ದು ಇವನ ಕಾರನ್ನು ತೋರಿಸಿ. ಎಲ್ಲವನ್ನೂ ವಿವರಿಸಿ ನಿಮಗೆ ಶುಭವಾಗಲಿ ಅಂತ ಬೀಳ್ಕೊಟ್ಟ. ಇಷ್ಟೆಲ್ಲಾ ಪ್ರಕ್ರಿಯೆ ಅರ್ಧ ಗಂಟೆಯಲ್ಲೇ ಮುಗಿದಿತ್ತು. ಇಲ್ಲಿ ಕಾರ್ ಬಾಡಿಗೆ ಪಡೆಯೋದು ಅಂದ್ರೆ, ನಾವು ಚಿಕ್ಕವರಿದ್ದಾಗ ನಮ್ಮೂರಲ್ಲಿ  ಸೈಕಲ್ ಬಾಡಿಗೆ ಪಡೆಯುತ್ತಿದ್ದಷ್ಟೇ ಸುಲಭ ಇದೆಯಲ್ಲ ಅಂತ ಇವನಿಗೆ ಆಶ್ಚರ್ಯವಾಗಿತ್ತು. ಇಲ್ಲಿ ಕಾರ್ ಗಳು ವೈಭವೋಪೇತ ಅನ್ನೋದಕ್ಕಿಂತ ಅವಶ್ಯಕತೆ ಆಗಿರೋದರಿಂದಲೇ ಹೀಗಿದೆ ಅಂತ ಅವನಿಗನಿಸಿತು. 
 
ಆ ಕಾರನ್ನು ಓಡಿಸುವುದು ಅವನಿಗೆ ಸುಲಭವೇ ಆಗಿತ್ತು. ಯಾಕೆಂದರೆ ಅಲ್ಲಿನ ಕಾರುಗಳಲ್ಲಿ ಗೇರು ಬದಲಿಸುವ ಪ್ರಮೇಯವಿಲ್ಲ ಎಲ್ಲಾ ಆಟೋಮ್ಯಾಟಿಕ್, ಅದೂ ಅಲ್ಲದೆ ಅವುಗಳಿಗೆ ಕ್ಲಚ್ಚೂ ಇರುವುದಿಲ್ಲ. ಬರಿ ಬ್ರೇಕು ಮತ್ತು ಆಕ್ಸಿಲರೇಟರ್ ಎರಡೇ. ರೋಡ ಗಳಲ್ಲೂ ಲೇನ್ ಗಳಿರುತ್ತವೆ, ಅವುಗಳನ್ನು ಬಿಳಿಯ ಗೆರೆಗಳಲ್ಲಿ ಗುರುತಿಸಿರುತ್ತಾರೆ. ಅದರಲ್ಲೇ ಹೋಗುತ್ತಿದ್ದರಾಯ್ತು. ಅವನು ಮೊದಲ ಸಲ ಬಂದಿದ್ದಾಗ ಓಡಿಸಿದ್ದನಾದ್ದರಿಂದ ಸ್ವಲ್ಪ ಆತ್ಮ ವಿಶ್ವಾಸವೂ ಇತ್ತು. ಆ ಮಳಿಗೆಯಿಂದ ತನ್ನ ಬಾಡಿಗೆ ಕಾರಿನಲ್ಲಿ ಉಮೇದಿಯಲ್ಲೇ ಹೊರಟ. ಆ ಮಳಿಗೆಯಿಂದ ತನ್ನ ಮನೆಗೆ ೫ ಮೈಲುಗಳಷ್ಟೇ ದೂರವಿತ್ತು. ಹೊಸ ಕಾರಿನಲ್ಲಿ ವೆಂಕಣ್ಣ ಬೂಮ್ ಅಂತ ಸಾಗಿದ್ದ. ಆದರೆ ಅತಿಯಾದ ಆತ್ಮವಿಶ್ವಾಸ ಅವನ ಕೈಯಲ್ಲಿ ಒಂದು ಯಡವಟ್ಟು ಮಾಡಿಸಿತ್ತು! ಮನೆಯ ಕಡೆಗೆ ಹೋಗುವ ತಿರುವಿನಲ್ಲಿ, ತಪ್ಪಿ ಬೇರೆಯದೇ ಲೇನ್ ಹಿಡಿದುಬಿಟ್ಟಿದ್ದು ಸ್ವಲ್ಪ ಹೊತ್ತಿನಲ್ಲೇ ಅರಿವಾಯಿತು. ತಿರುಗಿ ಮತ್ತೆ ಮನೆಯ ದಾರಿ ಹಿಡಿಯಲು ತಿರುವು ಸಿಗದೇ ಹಾಗೆ ಇನ್ನೂ ೫ ಮೈಲಿ ಮುಂದೆ ಹೋದ. ಹೇಗೋ ರಸ್ತೆ ಬದಿಯ ಒಂದು ಪಾರ್ಕಿಂಗ್ ನ ಒಳಗೆ ಹೊಕ್ಕು ವಾಪಸ್ಸು ಮನೆಯ ಕಡೆಗೆ ಹೋಗುವ ಲೇನ್ ಗೆ ತಲುಪುವುದರೊಳಗೆ 1 ಗಂಟೆ ಹಿಡಿಯಿತು. ಇವನಿಗೆ ಹವಾನಿಯಂತ್ರಿತ ಕಾರಿನಲ್ಲೂ ಬೆವರು ಹರಿಯಿತು! ಅಂತೂ ಇಂತು ಮನೆ ತಲುಪಿ ಉಸ್ಸಪ್ಪ ಅಂತ ಉಸಿರು ಬಿಟ್ಟ. ನಮ್ಮ ದೇಶದಲ್ಲೇ ಮೇಲು, ಎಲ್ಲಿ ಬೇಕಾದರೂ ತಿರುಗಿಸಿಕೊಂಡರೂ ಆಗಿರೋದು ಅಂತ ತನ್ನ ಜನ್ಮಭೂಮಿಯ ನೆನಪಾಗಿ ಅವನ ಕರುಳು ಮಿಡಿಯಿತು.  
     
ಮನೆಯಲ್ಲಿ ಅಮ್ಮ, ಮಗಳು, ಕಾರು ಈಗ ಬಂದೀತು ಆಗ ಬಂದೀತು ಅಂತ ಕಾದು ಕಾದು ಕೊನೆಗೂ ಇವನು ರೊಂಯ್ ಅಂತ ಬಂದಾಗ ಸಮಾಧಾನಗೊಂಡಿದ್ದರು. ಗಂಡ ತಂದಿದ್ದ ಕಾರು ಬೆಂಗಳೂರಿನಲ್ಲಿದ್ದ ತಮ್ಮ ಕಾರಿಗಿಂತ ದೊಡ್ಡದಾಗಿದ್ದರಿಂದ ಜಾನುನ ಮುಖ ಆ ಕಾರಿನ ಹೆಡ್ ಲೈಟ್ನಂಗೆ ಅರಳಿತ್ತು. ಅವಳ ಅರಳಿದ ಮುಖ ನೋಡಿ ವೆಂಕಣ್ಣ ನ ಮುಖವೂ ಸಹಜವಾಗೇ ಅರಳಿತ್ತು! ಆದರೆ ಖುಷಿ ಮಾತ್ರ ಬೆಂಗಳೂರಿನಲ್ಲಿ ತಮ್ಮ ಬಳಿ ಇರುವ ಸ್ವಂತದ ಕಾರೆ ಇದಕ್ಕಿಂತ ಚೆನ್ನಾಗಿದೆ ಅಂತ ಹೇಳಿದ್ದು, ಮೊದಲು ನಮ್ಮಲ್ಲಿರೋದನ್ನ ಪ್ರೀತಿಸೋದು ಕಲೀರಿ ಅಂತ ಅಪ್ಪ ಅಮ್ಮನಿಗೆ ಬುದ್ಧಿ ಹೇಳಿದಂತಿತ್ತು! ಕಾರಿನಲ್ಲಿ ಇಬ್ಬರಿಗೂ ಒಂದು ಸುತ್ತು ಹೊಡಿಸಿಕೊಂಡು ಬಂದ ಇವನು. ಆಗ ಮಾತ್ರ ಮೊದಲು ಮಾಡಿದ ತಪ್ಪು ಮಾಡದೆ ಸರಿಯಾದ ಲೇನ್ ನಲ್ಲೆ ತಿರುಗಿಸಿಕೊಂಡು ಬಂದಿದ್ದ. ಅವನಿಗೆ ಸಂಜೆ ಹೋಟೆಲ್ ಒಂದಕ್ಕೆ ಊಟಕ್ಕೆ ಹೋಗೋದಿತ್ತು. ಹೊಸದಾಗಿ ನಿಯುಕ್ತನಾಗಿದ್ದ ಉಪಾಧ್ಯಕ್ಷ ಜೇ.ಸಿ.ಬಿ. ಅವತ್ತು ಅಮೆರಿಕಾದ ಶಾಖೆಯ ಎಲ್ಲ ಮ್ಯಾನೇಜರ್ ಗಳಿಗೂ ಊಟಕ್ಕೆ ಕರೆದಿದ್ದ. ಇವನೂ ಅಮೆರಿಕಾದ ಪ್ರವಾಸದಲ್ಲಿದ್ದುದರಿಂದ ಇವನಿಗೂ ಆಮಂತ್ರಣವಿತ್ತು. ಕಾರಿನಲ್ಲೇ ಹೋಗುವ ನಿರ್ಧಾರ ಮಾಡಿದ್ದ. ಇವನಿಗೆ ದಾರಿ ತೋರಿಸಲು ಕಾರಿನಲ್ಲೇ ದಿಕ್ಕು ತೋರಿಸುವ ಯಂತ್ರವಿತ್ತಲ್ಲ! 
ಆ ಹೋಟೆಲ್ ತಲುಪಿದಾಗ ಅಲ್ಲಾಗಲೇ ಕೆಲವು ಮ್ಯಾನೆಜರಗಳು ಆಗಮಿಸಿದ್ದರು. ಎಲ್ಲರೂ ಪರಸ್ಪರ ತಮ್ಮ ತಮ್ಮಲ್ಲೇ  ಪರಿಚಯಿಸಿಕೊಂಡರು. ಐದಾರು ಜನರು ಭಾರತದವರೇ ಇದ್ದರು. ಅದರಲ್ಲಿ ಹೆಚ್ಚಿನವರು ಇವನ ಹಾಗೆ ಸ್ವಲ್ಪ ದಿನಗಳಿಗೋ, ತಿಂಗಳಿಗೋ ಅಂತ ಅಲ್ಲಿಗೆ ಬಂದವರಾಗಿದ್ದರು. ಅದರಲ್ಲಿ ರಘುವರನ್ ಮಾತ್ರ ಕಳೆದ ಹತ್ತು ವರ್ಷಗಳಿಂದ ಅಮೇರಿಕಾದಲ್ಲೇ ತಳ ಊರಿದವನಾಗಿದ್ದಾನೆಂದು ಅವನ ಮಾತಾಡುವ ಶೈಲಿಯಲ್ಲೇ ಇವನಿಗೆ ತಿಳಿಯಿತಲ್ಲದೆ, ಅದನ್ನು ಅವನೇ ಹೇಳಿಕೊಂಡ ಕೂಡ. ಅವನು ಮೂಲತಃ ತಮಿಳುನಾಡಿನವನಂತೆ. ಅಲ್ಲಿದ್ದಿದ್ದ ಉಳಿದವರೆಲ್ಲ ಅಮೇರಿಕಾದವರೇ ಆಗಿದ್ದರೂ ಅವರ ಮೂಲ ದೇಶ ಚೈನಾ, ಮಲೇಶಿಯಾ, ರಶಿಯಾ ಆಗಿತ್ತು. ಹೀಗೆ ಇಡೀ ಜಗತ್ತೇ ಅಲ್ಲಿತ್ತು! ಎಷ್ಟಂದರೂ ಅಮೇರಿಕಾ ವಲಸಿಗರ ದೇಶವಲ್ಲವೇ? 
ಅಷ್ಟರಲ್ಲೇ ಜಾನ್ ಸೀ. ಬೇಕರ್ ತನ್ನ ಚಾಣಕ್ಯ ಜೇಕಬ್ ನೊಂದಿಗೆ ಅಲ್ಲಿಗೆ ಆಗಮಿಸಿದ. ಎಲ್ಲರ ಪರಿಚಯ ಮಾಡಿಕೊಂಡ. ವೆಂಕಣ್ಣ ಭಾರತದ ಶಾಖೆಯವನೆಂದು ಗೊತ್ತಾದಾಗ ಅವನ ಕಣ್ಣುಗಳು ಇವನನ್ನು ಮೇಲಿಂದ ಕೆಳಗೆ ನೋಡಿ ಹುಬ್ಬು ಗಂಟಿಕ್ಕಿದ್ದನ್ನು ಗಮನಿಸಿದ ವೆಂಕಟ್ ಗೆ ಒಂದು ತರಹದ ಮುಜುಗರವಾದರೂ ಅಮೆರಿಕಾದ ದೊರೆಯ ಎದುರು ಅದನ್ನು ತೋರ್ಪಡಿಸದೆ ಒತ್ತಾಯದ ಮುಗುಳ್ನಗೆಯ ಸೂಸಿ ಅವನಿಗೆ ಶುಬಾಶಯ ಹೇಳಿದ.

ಊಟಕ್ಕಿಂತ ಮೊದಲು ಅಲ್ಲಿ ಶರಾಬಿನ ವ್ಯವಸ್ಥೆಯೂ ಇತ್ತು. ಎಲ್ಲರೂ ಕುಡಿಯಲು ಶುರು ಹಚ್ಚಿಕೊಂಡರೂ ವೆಂಕಟ್ ಮಾತ್ರ ಸುಮ್ಮನೆ ಒಂದು ಕೂಲ್ ಡ್ರಿಂಕ್ಸ್ ಹೀರುತ್ತಿದ್ದುದು ನೋಡಿ, ತನ್ನ ಕೈಯಲ್ಲಿ ಬಿಯರ್ ಬಾಟಲ್ ಹಿಡಿದುಕೊಂಡು ಬಂದ ದಿವಾಕರ್ ನೀನು ಯಾಕೆ ಕುಡಿಯುತ್ತಿಲ್ಲ ಎಂದು ಇವನಿಗೆ ಕೇಳಿದ. ತಾನು ವಾಪಸ್ಸು ಮನೆಗೆ ಹೋಗಬೇಕೆಂದೂ, ಕುಡಿದು ಕಾರು ಓಡಿಸುವುದು ಸರಿಯಲ್ಲವೆಂದೂ ವೆಂಕಟ್ ಹೇಳಿದ್ದು ಕೇಳಿ ಸುಧಾಕರ್ ಬಿದ್ದು ಬಿದ್ದು ನಕ್ಕ! 
"ನಿಮ್ಮೂರಿನ ಥರ, ಕಾರಿನಲ್ಲಿ ಕೂತವರ ಬಾಯಿಗೆ ಮಷಿನ್ ಹಿಡಿದು ಕುಡಿದಿದ್ದೀಯೋ ಇಲ್ಲವೋ ಅಂತ ಇಲ್ಲಿ ತಪಾಸಣೆ ಮಾಡೋದಿಲ್ಲ ಮಾರಾಯ! ಕುಡಿದರೂ ಕೂಡ, ನೀನು ಸರಿಯಾಗಿ ಲೇನ್ ಹಿಡಿದು ಕಾರನ್ನು ಓಡಿಸಿಕೊಂಡು ಹೋದ್ರೆ ನಿನ್ನನ್ನು ಯಾರೂ ಕೇಳರು. ಹಾಕು ಒಂದೆರಡು ಪೆಗ್ಗು…" ಅಂತ ಪುಸಲಾಯಿಸಲು ನೋಡಿದ. ಇವನು ನಕ್ಕು, ತನಗೆ ಕುಡಿದು ಕಾರು ಓಡಿಸುವುದು ಅಭ್ಯಾಸವಿಲ್ಲವೆಂದು ನಯವಾಗಿಯೇ ಅವನನ್ನು ಸಾಗಹಾಕಿದ. ದಿವಾಕರ್ ಅಲ್ಲಿಗೆ ಹೋಗಿ ಬರಿ ಆರು ತಿಂಗಳಾಗಿತ್ತಷ್ಟೆ. ಆದರೂ ತನ್ನ ದೇಶವನ್ನೇ "ನಿಮ್ಮೂರು" ಅಂತ ಮೂದಲಿಸುವುದು ಕಂಡು ಇವನಿಗೆ ವಿಚಿತ್ರವೆನಿಸಿತ್ತು. 
ಇವನು ಹಾಗೆ ಸುತ್ತಲೂ ಗಮನಿಸುತ್ತಿದ್ದ. ಜಾನ್ ಕೆಲವರ ಜೊತೆಗೆ ಹರಟುತ್ತಿದ್ದ. ಅದು ಸಹಜದ ಮಾತುಕತೆ ಅಂತ ಇವನಿಗೆ ಕಂಡು ಬರಲಿಲ್ಲ. ಅವನು ಎಲ್ಲರಿಂದಲೂ ಕೆಲವು ಸಂಗತಿಗಳನ್ನು ಹೆಕ್ಕಿ ಹೆಕ್ಕಿ ತೆಗೆಯುತ್ತಿದ್ದ. ಜೇಕಬ್ ಕೂಡ ಅವರ ಮಾತಿನಲ್ಲಿ ಸಿಗುವ ಕೆಲವು ವಿಶಿಷ್ಟಗಳನ್ನು ತನ್ನ ಟ್ಯಾಬ್ಲೆಟ್ ನಲ್ಲಿ ಅವರಿಗೆ ಗೊತ್ತಾಗದಂತೆ ಟಿಪ್ಪಣಿ ಮಾಡಿಕೊಳ್ಳುತ್ತಿದ್ದ. ಅದಕ್ಕೆ ಇವರು ಎಲ್ಲರಿಗೂ ಕುಡಿಸಿರಬೇಕು ಅಂತ ವೆಂಕಟ್ ಗೆ ಮನದಟ್ಟಾಗಿತ್ತು. 
ಇನ್ನೊಂದು ಮೂಲೆಯಲ್ಲಿ ಅಮೆರಿಕದವನೇ ಆಗಿಹೋಗಿದ್ದ ರಘುವರನ್ ತನ್ನ ಅಲ್ಲಿನ ಸಹೋದ್ಯೋಗಿಗಳಿಗೆ ತಾನು ಕೊನೆಯ ಸಲ ಭಾರತಕ್ಕೆ ಹೋಗಿದ್ದಾಗ ನಡೆದ ಘಟನೆಯನ್ನು ಅಮೇರಿಕಾದ ಉಚ್ಚಾರಣೆಯಲ್ಲೇ ವಿವರಿಸುತ್ತಿದ್ದ.
"ನಿಮಗೆ ಗೂತ್ತಾ? ನಾನು ಚೆನ್ನೈ ನಲ್ಲಿ ಹೋಟೆಲ್ ಒಂದರಲ್ಲಿ ಉಳಿದುಕೊಂಡಿದ್ದೆ. ಅದೂ ಮೇ ತಿಂಗಳು ಬೇರೆ. ಅಲ್ಲಿನ ಸೆಕೆ ಹೇಳತೀರದಷ್ಟಿರುತ್ತದೆ. ನಾನು ನನ್ನ ಏಸಿ ರೂಮಿನಿಂದ ಹೊರಬಿದ್ದೆ. ಬೆವರು ಧಾರಾಕಾರ ಸುರಿಯುತ್ತಿತ್ತು. ನನಗೆ ಎಲ್ಲೋ ಹೋಗಬೇಕಿತ್ತು. ಯಾವುದಾದರೂ ಟ್ಯಾಕ್ಸಿ ಸಿಗುತ್ತೇನೋ ಅಂತ ರೋಡಿಗೆ ಬಂದರೆ… ಅಲ್ಲಿ ನನ್ನ ಮುಂದೇನೆ ಎರಡು ಹಸುಗಳು ನಿಂತಿವೆ! ಹಿಂದೆ ತಿರುಗಿದರೆ ಒಂದು ಬಿಡಾಡಿ ನಾಯಿ! ನನಗಂತೂ ದಿಕ್ಕು ತೋಚದೆ, ಹಾಗೆ ವಾಪಸ್ಸು ಹೋಟೆಲ್ ರೂಮಿಗೆ ಬಂದು ಬಾಗಲು ಹಾಕಿಕೊಂಡೆ!"
ವಿದೇಶಿ ಸಹೋದ್ಯೋಗಿಗಳು ಆಶ್ಚರ್ಯ ಚಕಿತರಾಗಿದ್ದರು. ರೋಡಿನಲ್ಲಿ ಹಸುಗಳೇ? ಅದು ಸಾಧ್ಯವೇ ಎಂಬಂತಿತ್ತು ಅವರ ನೋಟ. ಅಲ್ಲೇ ನಿಂತಿದ್ದ ಭಾರತದವನೇ ಆದ ಸುರೇಶ ಇವನ ಅನುಭವ ಕೇಳಿ ಬಿದ್ದು ಬಿದ್ದು ನಕ್ಕ. ತನಗೂ ಒಮ್ಮೆ ಹಿಂಗೆ ಆಗಿತ್ತು ಅಂತ ಹೇಳಿ ತನ್ನ ಅನುಭವವನ್ನೂ ಹಂಚಿಕೊಂಡ!
ವೆಂಕಟ್ ಗೆ ಇದನ್ನು ನೋಡು ರೇಜಿಗೆ ಹುಟ್ಟಿತ್ತು. ಇದೆ ರಘುವರನ್ ಹತ್ತು ವರ್ಷಗಳ ಹಿಂದೆ ಹಸುಗಳ ಹಿಂದೆ ಆಟ ಆಡಿಕೊಂಡಿದ್ದಿರಬೇಕು. ಅಲ್ಲೇ ಹುಟ್ಟಿ ಬೆಳೆದ ಅವನು, ಇಲ್ಲಿಗೆ ಬಂದ ಕೂಡಲೇ ಹೀಗೆ ಬದಲಾಗುವುದೇ? ಅದೂ ಅಲ್ಲದೆ ತನ್ನ ದೇಶದ ಬಗ್ಗೆ ಇತರರಿಗೆ  ಈ ರೀತಿ ಹೇಳುವುದೇ? ಥೂ ಇವರ ಜನ್ಮಕ್ಕಿಷ್ಟು ಬೆಂಕಿ ಹಾಕ… ಅಂತ ಸ್ವಲ್ಪ ಮೆಲುದನಿಯಲ್ಲೇ ಬೈದುಕೊಂಡ. 
ಅಲ್ಲಿಲ್ಲಿ ಮಾತಾಡಿಕೊಂಡಿದ್ದ ಜಾನ್ ಚಿತ್ತ ಈಗ ವೆಂಕಟ್ ಹತ್ರ ಹರಿದಿತ್ತು. ಅದು ಇದೂ ಕೇಳುತ್ತ ಇವನ ಸಮಸ್ಯೆಗಳೇನು ಅಂತ ವಿಚಾರಿಸಿದಂತೆ ಮಾಡಿ, ಅವನ ಮನಸ್ಸನ್ನು ಓದುವ ಕೆಲಸಕ್ಕೆ ಶುರು ಹಚ್ಚಿಕೊಂಡಿದ್ದ. ತಾನು ಮುಂದಿನ ವಾರವೇ ಭಾರತಕ್ಕೆ ಹೋಗುತ್ತಿದ್ದೇನೆಂದೂ, ಅಲ್ಲಿ ನಿನ್ನ ಜೊತೆಗೆ ಮಾತಾಡಲು ಆಗುವುದಿಲ್ಲವಾದ ಕಾರಣ ನಾಳೆ ತನ್ನ ಆಫೀಸಿನಲ್ಲಿ ಮುಕತಃ ಭೆಟಿಯಾಗೆಂದು ಅಪ್ಪಣೆ ಮಾಡಿದ. 
 
ಕುಡಿದಾದ ಮೇಲೆ ಸುಮಾರು ಒಂದು ಗಂಟೆಯ ಬಳಿಕ ಎಲ್ಲರೂ ಊಟ ಮಾಡಿ, ಅಲ್ಲಿಂದ ತಂತಮ್ಮ ಮನೆಗಳಿಗೋ, ಹೋಟೆಲಿಗೋ ತೆರಳಿದರು. ಇವನು ತನ್ನ ಕಾರನ್ನು ಡ್ರೈವ್ ಮಾಡುತ್ತಿದ್ದ. ಮನಸ್ಸು ಜಾನ್ ಬಗ್ಗೆಯೇ ಯೋಚಿಸಲು ತೊಡಗಿತ್ತು. ಅವನು ಭಾರತಕ್ಕೆ ಹೋಗುತ್ತಿರುವ ಬಗ್ಗೆ ಇವನ ಬಾಸ್ ಸುಧೀರ್ ಜೊತೆಗೆ ಮಾತಾಡುತ್ತಿದ್ದಾಗಲೋಮ್ಮೆ, ಜಾನ್ ಅಲ್ಲಿಗೆ ಹೋಗಿ ಎಷ್ಟೋ ತಲೆಗಳನ್ನು ಉರುಳಿಸಲಿದ್ದಾನೆಂದು ಅವನು ಹೇಳಿದ್ದು ನೆನಪಿಗೆ ಬಂತು. ಯಾಕೋ, ಭಾರತದಲ್ಲಿ ತಾನು ಮಾಡಿಕೊಂಡಿದ್ದ ಸಾಲಗಳು ಜಾಸ್ತಿಯಾದವೆಂದು ವೆಂಕಟ್ ಗೆ ಈಗ ಹಠಾತ್ ಆಗಿ ಅನಿಸಲು ಶುರುವಾಗಿತ್ತು…! 
 
(ಮುಂದುವರಿಯುವುದು)  

Saturday, April 25, 2015

ನಾನು ಮತ್ತು ನನ್ನ ನಾಯಿ ಇಬ್ಬರೂ ನಿರ್ಗತಿಕರು!

(http://www.panjumagazine.com/?p=10591)
 
ಅಮೆರಿಕಾಕ್ಕೆ ಬಂದು ಇವತ್ತಿಗೆ ಆಗ್ಲೇ ಒಂದು ವಾರವಾಯ್ತೆ ಅಂತ ವೆಂಕಣ್ಣ ತಲೆ ಕೆರೆಯುತ್ತಾ ಯೋಚಿಸುತ್ತಿದ್ದಾಗಲೇ ಮಗಳು ಖುಷಿ ಇವನ ಭುಜ ಹಿಡಿದು ಅಲುಗಾಡಿಸುತ್ತಿದ್ದಳು.
“ಅಪ್ಪ ಅಮೇರಿಕಾ ಬೋರಿಂಗ್ ಅದ” ಅಂದಳು. 
ಶಾಲೆಗೆ ಹೋಗುವ ರಗಳೆ ಇಲ್ಲ ಅಂತ ಬಂದ ಹೊಸತು ಅವಳಿಗೆ ಖುಷಿಯಾಗಿತ್ತಾದರೂ, ಈಗ ಅವಳಿಗೆ ಬೇಜಾರು ಶುರು ಆಗಿತ್ತು. ಹೊಸ ಜಾಗ, ಅದೂ ಅಲ್ಲದೆ  ಅವಳ ಜೊತೆಗೆ ಆಡಲು ಅಲ್ಲಿ ಯಾರೂ ಇರಲಿಲ್ಲ. ಆದರೆ  ಇವತ್ತು ಶನಿವಾರ, ವೆಂಕಣ್ಣನ ಆಫೀಸಿಗೆ ರಜೆ. ಅದಕ್ಕೆ ಹೆಂಡತಿ ಮಗಳನ್ನು ತಿರುಗಾಟಕ್ಕೆ ಕರೆದುಕೊಂಡು ಹೋಗುವ ನಿರ್ಧಾರ ಇವನು ಆಗಲೇ ಮಾಡಿಯಾಗಿತ್ತು.
“ಪುಟ್ಟಿ ನೀ ಇನ್ನೂ ಅಮೇರಿಕಾ ನೋಡೇ ಇಲ್ಲ! ಇವತ್ತ ನಿಮಗ ಸಾಲ್ಟ್ ಲೇಕ್ ಸಿಟಿ ಗೆ ಕರ್ಕೊಂಡ್ ಹೋಗ್ತೀನಿ!” ಏನೋ ಹೊಸ ತರಹದ ಊರಿನ ಹೆಸರು ಕೇಳಿ ಅವಳ ಕಣ್ಣುಗಳು ಅರಳಿದ್ದವು.
“ಹೇ ವಾವ್, ಆದ್ರ ಹೆಸರು ಮಜಾ ಅದ ಅಲ್ಲಾ? ಹಂಗ್ಯಾಕ ಅಂತಾರ ಅದಕ್ಕ?”   
“….. ಅಲ್ಲೇ ಹೋದ ಮ್ಯಾಲೆ ಹೇಳ್ತೀನಿ. ಅದು ಸರ್ಪ್ರೈಸ್!” ಅಂದ. ಯಾಕೆಂದರೆ ಆ ಊರಿಗೆ ಆ ಹೆಸರು ಯಾಕೆ ಬಂತು ಅಂತ ಅವನಿಗೂ ಗೊತ್ತಿರಲಿಲ್ಲ!
“ಅಲ್ಲಿಗೆ ಹೆಂಗ್ ಹೋಗೋದು?” ಅವಳ ಪ್ರಶ್ನೆ ಸಹಜವಾಗಿತ್ತು. ಯಾಕೆಂದರೆ ಬೆಂಗಳೂರಿನಲ್ಲಿದ್ದಂತೆ ಇಲ್ಲಿ ಇವರ ಸ್ವಂತ ಕಾರ್ ಇರಲಿಲ್ಲವಲ್ಲ. ಇಲ್ಲಿ ಕಾರ್ ಇಲ್ಲದಿದ್ದರೆ ತುಂಬಾ ಕಷ್ಟ. ಬಸ್ಸು ಟ್ರೇನ್ ಗಳಿವೆಯಾದರೂ ಅವುಗಳು ಅಡ್ಡಾಡುತ್ತಿದ್ದುದು ಆಗೀಗ ಅನ್ನುವಂತಿದೆ. ಇಲ್ಲಿ ಎಲ್ಲಿ ಹೋದರು ಕಾರ್ ಬೇಕೇ ಬೇಕು. ಇವನು ಬಂದಾಗಿನಿಂದ,  ಅಮೆರಿಕಾದಲ್ಲೇ ವಾಸವಾಗಿದ್ದ ಇವನ ಸಹೋದ್ಯೋಗಿ ಇವನನ್ನು  ಪ್ರತಿ ನಿತ್ಯ ಆಫೀಸಿಗೆ ತನ್ನ ಕಾರಿನಲ್ಲೇ ಬಿಡುತ್ತಿದ್ದ. ಹೀಗಾಗಿ ಇವತ್ತಿಗೆ ಸಾಲ್ಟ್ ಲೇಕ್ ಸಿಟಿ ಗೆ ಹೋಗಲು ಒಂದು ಟ್ಯಾಕ್ಸಿ ಬುಕ್ ಮಾಡಿದ್ದ. 
ಬೆಳಿಗ್ಗೆ ೯ಕ್ಕೆ ಬುಕ್ ಮಾಡಿದ್ದ ಕಾರು ೮:೫೦ ಕ್ಕೆ ಸರಿಯಾಗಿ ಬಂದು, ಡ್ರೈವರ್ ಫೋನ್ ಮಾಡಿದಾಗ, ಇವನಿನ್ನೂ ಸ್ನಾನ ಮಾಡುತ್ತಿದ್ದ! ಹಾಗೂ ಹೀಗೂ ತಯ್ಯಾರಾಗಿ ವೆಂಕಣ್ಣನ ಪರಿವಾರ ಕೆಳಗೆ ಹೋದಾಗ ಡ್ರೈವರ್ ಅರ್ಧ ಗಂಟೆ ತಡವಾಯ್ತೆಂದು ಭುಸುಗುಡುತ್ತಿದ್ದ. ಎಷ್ಟಂದ್ರೂ ಅಮೆರಿಕಾದ ಡ್ರೈವರ್ ಅಲ್ವೇ? ಬೆಂಗಳೂರಿನಲ್ಲಾದರೆ ವೆಂಕಣ್ಣ ಎಷ್ಟೊತ್ತಿಗೆ ಬಂದರೂ ಡ್ರೈವರ್ ಸಿಟ್ಟು ಮಾಡಿಕೊಳ್ಳುತ್ತಿರಲಿಲ್ಲ.
ಹೋಗಲಿ ತನ್ನದೇ ತಪ್ಪು ಅಂತ ಅರಿವಾಗಿ ವೆಂಕಣ್ಣ ಸೌಜನ್ಯಯುತವಾಗಿ “ಕ್ಷಮಿಸಿ ನನ್ನಿಂದ ತಡಾ ಆಯಿತು” ಅಂದ. ಪರವಾಗಿಲ್ಲ ಬಿಡಿ ಅನ್ನುವ ಉತ್ತರ ನಿರೀಕ್ಷಿಸಿ ಕೇಳಿದ್ದ ಕ್ಷಮಾಪಣೆಗೆ ಡ್ರೈವರ್
“ಹೌದು ನೀವು ಕ್ಷಮೆ ಕೇಳಲೇಬೇಕಾದ ತಪ್ಪು ಮಾಡಿದ್ದೀರಿ” ಅನ್ನಬೇಕೆ! ಇವನಿಗೆಂಥ ಕೋಪ ಬರಬೇಡಾ! ಆದರೂ ಅವನು ತರಲೆ ಅನ್ನುವದು ಗೊತ್ತಾದಮೇಲೂ ಅವನ ಜೊತೆ ಜಗಳ ಮಾಡೋದು ಸರಿಯಲ್ಲವೆಂದು ಇವನಿಗೆ ಅರಿವಾಗಿ “ಇಲ್ಲಿ ಡ್ರೈವರ್ಗೋಳಿಗೆ ಭಾರಿ ಸೊಕ್ಕು. ಮಂಗ್ಯಾನ ಮಗಾ. ಹೆಂಗ್ ಮಾತಾಡ್ತಾನ್ ನೋಡು“ ಅಂತ ಹೆಂಡತಿ ಎದುರು ಬೈದು ಸಿಟ್ಟು ತೀರಿಸಿ ಕೊಂಡ.
       
ಸಾಲ್ಟ್ ಲೇಕ್ ಸಿಟಿ ಯ ಸೆಂಟ್ರಲ್ ಸ್ಟೇಶನ್ ಬಳಿಗೆ ಬಂದು ಮುಟ್ಟಿ, ಕಾರಿನಿಂದ ಇಳಿದು ಬಿಲ್ ದುಡ್ಡು ಕೊಟ್ಟ. ಅಲ್ಲಿ ಬರಿ ಬಿಲ್ ಕೊಟ್ಟರೆ ಸಾಲದು, ಜೊತೆಗೆ ಟಿಪ್ಸ್ ಕೊಡಬೇಕು ಅದು ಶಿಷ್ಟಾಚಾರ! ಡ್ರೈವರ್ ಇವನ ಜೊತೆಗೆ ಅಸಂಬದ್ಧ ಮಾತಾಡಿದ್ದರಿಂದ ಅವನ ಮೇಲೆ ವೆಂಕಣ್ಣ ನಿಗೆ ಮೊದಲೇ ಸಿಟ್ಟು ಬಂದಿತ್ತಲ್ಲವೇ. ಅದಕ್ಕೆ ಬರೀ ಐದೇ ಡಾಲರ್ ಟಿಪ್ಸ್ ಕೊಟ್ಟ. ಆದರೆ ಅದೇ ತರಲೆ ಡ್ರೈವರ್ ಈಗ, ಹಳದಿ ಬಣ್ಣಕ್ಕೆ ತಿರುಗಿದ್ದ ತನ್ನ ಅಷ್ಟೂ ಹಲ್ಲುಗಳ ಝಳಪಿಸುತ್ತ ಕೇಳಿದ! 
“ಸರ್, ನಿಮ್ಮ ಬಿಲ್ ೯೦ ಡಾಲರ್ ಆಗಿದೆ. ಆ ಮೊತ್ತದ ೧೫% ಟಿಪ್ಸ್, ಅಂದ್ರೆ ಬೊರೊಬ್ಬರಿ ೧೩.5 ಡಾಲರ್ ಆಗುತ್ತೆ.”
ಬೆಂಗಳೂರಿನಲ್ಲಾದರೆ ನಾವು ಕೊಟ್ಟಷ್ಟು ತೆಗೆದುಕೊಳ್ಳುತ್ತಾರೆ, ಇಲ್ಲಾದರೆ ಹೀಗೋ ! 
ಆದರೂ ಮೊದಲೇ ತಡವಾಗಿ ಬಂದಿದ್ದಕ್ಕೆ ತನ್ನ ಮರ್ಯಾದೆ ತೆಗೆದ ಅವನು, ಇನ್ನು ಅವನು ಕೇಳಿದಷ್ಟು ಟಿಪ್ಸ್    ಕೊಟ್ಟಿಲ್ಲ ಅಂದ್ರೆ, ಇಂಡಿಯನ್ ಗಳೇ ಹಿಂಗೆ ಅಂತ ಎಲ್ಲರೆದುರು ಹೇಳಿಬಿಟ್ಟರೆ? ಅಂತ ಇವನ ದೇಶ ಭಕ್ತಿ ಜಾಗೃತವಾಗಿ, ತಿಂದು ಸಾಯಿ ಅಂತ ಅವನು ಕೇಳಿದಷ್ಟು  ಟಿಪ್ಸ್ ಕೊಟ್ಟು ಅವನ ಬೀಳ್ಕೊಟ್ಟ.
ಇವನ ತಲೆಯಲ್ಲೊಂದು ಪ್ರಶ್ನೆಯಂತೂ ಉದ್ಭವವಾಯ್ತು. ಈ ಟಿಪ್ಸ್ ಗೂ ನಮ್ಮ ದೇಶದಲ್ಲಿ ಕೊಡುವ ಲಂಚಕ್ಕೂ ಏನು ವ್ಯತ್ಯಾಸ? ಅಂತ! ಅಲ್ಲೂ ಕೆಳಿದಷ್ಟೇ ಕೊಡಬೇಕು, ಇಲ್ಲೂ ಹಂಗೆ. ಸುಮ್ನೆ ನಮ್ಮ ದೇಶದಲ್ಲೂ ಲಂಚಾನ ಹೀಗೆ ನೂರಕ್ಕೆ ಇಷ್ಟು ಅಂತ ನಿಗದಿಸಿದರೆ ಅದನ್ನೂ ಟಿಪ್ಸ್ ಅಂತ ಹೇಳಿಕೊಂಡು ಖುಷಿಯಾಗಿ ಕೊಡಬಹುದಲ್ವೆ? ಹೀಗೊಂದು ಅದ್ಭುತವಾದ ಒಂದು ಕಲ್ಪನೆ ಬಂದು ಪುಳಕಗೊಂಡಿದ್ದಾಗಲೇ, ಮಗಳು
“ಇದ ಏನಪ್ಪಾ ಸಾಲ್ಟ್ ಲೇಕ್ ಸಿಟಿ?” ಅಂದಳು.
“ಹೌದು ಖುಷಿ. ಇಲ್ಲೇ ಹತ್ತರದಾಗ ಒಂದು ಡೆಡ್ ಸೀ ಅದ. ಅದರಿಂದನ ಈ ಊರಿಗೆ ಹೆಸರು ಬಂದಿದ್ದು” ಈಗಾಗಲೇ ಗೂಗಲ್ ನಲ್ಲಿ ಹುಡುಕಿ ಉತ್ತರ ಕಂಡುಕೊಂಡಿದ್ದರಿಂದ, ಈ ಊರಿಗೆ ಆ ಹೆಸರು ಬಂದದ್ದು ಯಾಕೆ ಅಂತ ಮತ್ತೆ ಅವಳು ಕೇಳೋದಕ್ಕಿಂತ ಮೊದಲೇ ಪಟಪಟನೆ ಉತ್ತರಿಸಿದ್ದ. 
“ಡೆಡ್ ಸೀ ಅಂದ್ರ?” ಮಗಳ ಮುಂದಿನ ಪ್ರಶ್ನೆ…
“ಅಂದ್ರ ನೀರೊಳಗ ಉಪ್ಪಿನ ಅಂಶ ಸಮುದ್ರಕ್ಕಿಂತ ಎಷ್ಟೋ ಪಟ್ಟು ಜಾಸ್ತಿ ಇರ್ತದ, ಯಾವುದ ಪ್ರಾಣಿಗಳು ಬದಕಲಿಕ್ಕೆ ಸಾಧ್ಯ ಇಲ್ಲದಷ್ಟು. ಇನ್ನೊಂದ ಮಜಾ ಅಂದ್ರ, ಆ ನೀರೊಳಗ ಮುಳುಗೋದ ಸಾಧ್ಯ ಇಲ್ಲ!”
“ಏ ಹೌದಾ? ಅಲ್ಲೇ ನನ್ನ ಕರಕೊಂಡು ಹೋಗಪ್ಪ!” ಎರಡು ಸಲ ಈಜು ಕಲಿಯಲು ಹೋಗಿ ಮುಳುಗುವ ಭಯದಿಂದ ವಾಪಸ್ಸು ಓಡಿ ಬಂದಿದ್ದ ಮಗಳಿಗೆ ಮುಳುಗಲು ಸಾಧ್ಯವೇ ಇಲ್ಲದ ಸಮುದ್ರದ ಅಸ್ತಿತ್ವವೇ ಸಹಜವಾಗಿ ಬೆರಗು ಮೂಡಿಸಿತ್ತು. 
“ಆಗ್ಲಿ ಇನ್ನೊಂದ್ ಸಲ ಹೋಗೋಣಂತ” ಮಗಳು ಆನಂದದಿಂದ ತಲೆ ಅಲ್ಲಾಡಿಸಿದಳು.   
ಆ ಊರಿನಲ್ಲಿದ್ದ ಸುಪ್ರಸಿದ್ಧ ಮಾಲ್ ಒಂದಕ್ಕೆ ಹೋದರಿವರು. ಅದರ ದ್ವಾರದಲ್ಲಿ ಸ್ವಾಗತಿಸಿದ್ದು ಮೂವರು ಬಿಕ್ಷುಕರು! ನಮ್ಮಲ್ಲಿ ದೇವಸ್ಥಾನದ ಮುಂದೆ ಕೂತಂಗೆ, ಆದರೆ ಇಲ್ಲಿನವರು ಅಕ್ಷರಸ್ಥರು ಅದೇ ವ್ಯತ್ಯಾಸ. ಅವರ ಕೈಯಲ್ಲಿ, ‘ನಾನು ನಿರ್ಗತಿಕ, ನನಗೆ ಸಹಾಯ ಮಾಡಿ!’ ಎಂದು ಇಂಗ್ಲೀಶ್ ನಲ್ಲಿ ಬರೆದಿದ್ದ ಒಂದು ಫಲಕ.  ಒಬ್ಬ ಭಿಕ್ಷುಕನಂತೂ  ತನ್ನ   ಜೊತೆಗೆ ಒಂದು ನಾಯಿಯನ್ನೂ ಕೂಡಿಸಿಕೊಂಡಿದ್ದ . ಅವನ ಕೈಯಲ್ಲಿದ್ದ ಫಲಕದಲ್ಲಿ ಹೀಗೆ ಬರೆದಿದ್ದ “ನನಗೆ ಹಾಗೂ ನನ್ನ ನಾಯಿ ಇಬ್ಬರಿಗೂ ಮನೆಯಿಲ್ಲ, ನಮಗೆ ಸಹಾಯ ಮಾಡಿರಿ!”
ಜಾನುಗೆ ಇದನ್ನು ನೋಡಿ ನಗು ಬಂತು “ಅಲ್ರೀ, ತನಗ ಗತಿ ಇಲ್ಲ, ಮತ್ತ ನಾಯಿ ಬ್ಯಾರೆ ಸಾಕ್ಯಾನಲ್ಲಾ. ಇಲ್ಲ್ಯೂ ಭಾಳ ಇದ್ದಾರ ಬಿಕ್ಷಾದವ್ರು. ನಾ ಒಂದ್ coin ಹಾಕ್ತೀನಿ, ಒಂದು ಫೋಟೋ ತಗೀರಿ” ಅಂದ್ಲು.
“ಲೇ ಫೋಟೋ ತಗೀಲಿಕ್ಕೆ ಇನ್ನೂ ಭಾಳ ಚೊಲೋ ಚೊಲೋ ಜಗಾ ಆವ, ಸುಮ್ನ ಬಾ” ಅಂತ ಹುಸಿ ಕೋಪದಲ್ಲಿ ಎಳೆದುಕೊಂಡು ಹೋದ. ಖುಷಿ, ಮಾಲ್ ನ ಮುಂದಿದ್ದ ಕಾರಂಜಿ ನೋಡಿ ಮೈಮರೆತಿದ್ದಳು.
  
ಮಾಲ್ ನಲ್ಲಿ ಅಡ್ಡಾಡಿ, ಹೊಟ್ಟೆ ತುಂಬದ ಬರ್ಗರ್, ಫ್ರೆಂಚ್ ಫ್ರೈಸ್ ಅಂತೇನೇನೋ ತಿಂದು ಮಾಲ್ ನ ಹೊರಗೆ ಬಿದ್ದರು. ಹಾಗೆ ಅಡ್ಡಾಡುತ್ತ ಆ ಊರಿನ ಸೊಬಗು ಸವಿಯುತ್ತಿದ್ದರು. ದಾರಿಯಲ್ಲಿ ಒಬ್ಬ ಪೂರ್ತಿ ಕುಡಿದು ಮೈ ಮರೆತು ರೋಡಿನ ಪಕ್ಕ ಮಲಗಿ ಬಿಟ್ಟಿದ್ದ. ಇನ್ನೂ ಒಂದಿಷ್ಟು ಕುಡುಕರು ಟೈಟ್ ಆಗಿ ಏನೇನೋ ಕೂಗಾಡಿಕೊಂಡಿದ್ದರು. ಎಲ್ಲಾ ಥೇಟ್ ನಮ್ಮ ಕುಡುಕರ ಥರಾನೇ! 
“ಲೇ ಇಲ್ಲಿ ಕುಡುಕರೂ ಕುಡದಾಗ ಇಂಗ್ಲಿಶ್ ನ್ಯಾಗ ಮಾತಾಡತಾರ ನೋಡು! ನಮ್ಮ ಕುಡಕರ ಥರಾನ. ಅಂದರ ಇಂಗ್ಲಿಷ ಕುಡುಕರ ಭಾಷೆ, ಹೃದಯದಿಂದ ಬರೋ ಭಾಷೆ ಅಂದಗಾತು” ಅಂದ ವೆಂಕಣ್ಣ ನ ಜೋಕಿಗೆ ಜಾನು ಬಿದ್ದು ಬಿದ್ದು ನಗದಿದ್ದರೂ ಒಂದು ಮುಗುಳ್ನಗು ಅವಳ ಮುಖದಲ್ಲಿತ್ತು. ಅಲ್ಲಿ ಇಲ್ಲಿ ಅಡ್ಡಾಡಿ ಇನ್ನೂ ಕೆಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಸಂಜೆಯಾಗುತ್ತಲೇ ತಮ್ಮ ನಿವಾಸಕ್ಕೆ ವಾಪಸ್ಸು ಹೊರಟರು.  

ಜೇ.ಸಿ.ಬಿ

(http://www.panjumagazine.com/?p=10667)

ಬೆಳ್ಳಂ ಬೆಳಿಗ್ಗೆ ಅಮೇರಿಕದಿಂದ ವೆಂಕಟ್ ಕಳಿಸಿದ್ದ ಒಂದು ಇಮೇಲ್ ಭಾರತದಲ್ಲಿದ್ದ ಅವನ ಬಾಸ್ ಸುಧೀರನನ್ನು ಅಧೀರನನ್ನಾಗಿಸಿತ್ತು! ಅದು ಅಲ್ಲಿನ ಒಂದು ಬಹು ಮುಖ್ಯ ಸುದ್ದಿಯನ್ನು ಭಿತ್ತರಿಸಿದ ಸಂದೇಶವಾಗಿತ್ತು. ಇವರ ಕಂಪನಿಯ ಅಮೆರಿಕಾದ ಮೂಲ ಶಾಖೆಯ ಉಪಾಧ್ಯಕ್ಷ ನಾಗಿದ್ದ ರೋಜರ್ ನನ್ನು ಅಲ್ಲಿನ ಆಡಳಿತ ಮಂಡಳಿ ಕಿತ್ತೊಗೆದಿತ್ತು. ಖಾಲಿಯಾದ ಅವನ ಸ್ಥಾನದಲ್ಲಿ ಮೂವತ್ತು ವರ್ಷದಿಂದ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಜಾನ್ ಸಿ. ಬೇಕರ್ ನನ್ನು ಕುಳ್ಳಿರಿಸಿದ್ದರು. 
…ಅಮೆರಿಕಾದಲ್ಲಿ ಇದೆಲ್ಲ ಈಗ ಮಾಮೂಲಿ. ಅದು ಕಂಪನಿಯ ವೆಚ್ಚಗಳ ಕಡಿತಗೊಳಿಸುವ ಒಂದು ವಿಧಾನ. ಕೆಲವು ದೊಡ್ಡ ತಲೆಗಳನ್ನು ಕಿತ್ತುಹಾಕಿ, ಆ ಹಿರಿ ತಲೆಗಳಿಗಿಂತ ಕಡಿಮೆ ದರ್ಜೆಯ, ಕಂಪನಿಯ ಇತರ ಸಹೋದ್ಯೋಗಿಗಳನ್ನು ಮುಂದಿನ ದರ್ಜೆಗೆ ಏರಿಸುವುದು ಇದರ ಉದ್ದೇಶ. ಹಾಗೆ ಕಂಪನಿಯಲ್ಲೇ ಇದ್ದು ಮೇಲೆ ಏರಿದವರ ವೇತನ ವನ್ನು ಸ್ವಲ್ಪ ಏರಿಸಿದರೂ ಹೊರ ಹೋದ ವ್ಯಕ್ತಿಯ ಸಂಬಳಕ್ಕಿಂತ ಎಷ್ಟೋ ಪಟ್ಟು ಕಡಿಮೆ. ಅದೂ ಅಲ್ಲದೆ ಹಾಗೆ ಬರುವ ಹೊಸಬರಿಗೆ ಹೆಚ್ಚಿಗೆ ಜವಾಬ್ದಾರಿ ವಹಿಸಿದರೂ ಮೇಲಿನ ಸ್ಥಾನಕ್ಕೇರಿದ ಉತ್ಸಾಹದಲ್ಲಿ, ಖುಷಿಯಿಂದಲೇ ಕೆಲಸ ಮಾಡುತ್ತಾರೆ. ಇದು ಹೀಗೆ ಮಾಡುವುದರಿಂದಾಗುವ ಮತ್ತೊಂದು ಲಾಭ..     
ಆದರೆ ಸುಧೀರನ ಚಿಂತೆಗೆ ಬೇರೆಯದೇ ಕಾರಣವಿತ್ತು. ಪದಚ್ಯುತ ಉಪಾಧ್ಯಕ್ಷ ರೋಜರ್ ಜೊತೆಗಿದ್ದ ಭಾರತದ ಇವನ ಶಾಖೆಯ ಸಂಬಂಧ ತುಂಬಾ ಉತ್ತಮವಾಗಿತ್ತು. ಅವನು ತುಂಬಾ ಒಳ್ಳೆಯವನೂ ಹಾಗೂ ಎಲ್ಲ ವಿಷಯಗಳಲ್ಲೂ ಸಹಕಾರ ನೀಡುವವನೂ ಆಗಿದ್ದ. ಆದರೆ, ಈಗ ನಿಯುಕ್ತನಾಗಿದ್ದ ಹೊಸಬ ತುಂಬಾ ಘಮಿಂಡಿ ಹಾಗೂ ಹಿಟ್ಲರ್ ತರಹದ ವ್ಯಕ್ತಿ ಅನ್ನುವುದು, ಮೊದಲಿನಿಂದಲೂ ಆ ಕಂಪನಿಯ ಬಗ್ಗೆ ಬಲ್ಲ ಸುಧೀರ್ ಗೆ ಗೊತ್ತಿತ್ತು. ಅದೂ ಅಲ್ಲದೆ, ಅವನು ಮುಂದಿನ ವಾರವೇ ತಮ್ಮ ಶಾಖೆಗೆ ೫ ದಿನಗಳ ಭೇಟಿ ನೀಡಲಿದ್ದಾನೆ ಎನ್ನುವ ವಿಷಯ ಇವನಲ್ಲಿ ಇನ್ನೂ ಕೊಲಾಹಲವನ್ನುಂಟು ಮಾಡಿತ್ತು. ಆ ವಿವರಗಳನ್ನೊಳಗೊಂಡ ಇನ್ನೊಂದು ಇಮೇಲ್ ಅನ್ನು ತನ್ನ ಇಮೇಲ್ ಜೊತೆಗೇ ಲಗತ್ತಿಸಿದ್ದ ವೆಂಕಟ್.
…ಜಾನ್ ಸಿ. ಬೇಕರ್ ಗೆ ಎಲ್ರೂ ಜೇ.ಸಿ.ಬಿ ಅಂತಾನೆ ಕರೀತಿದ್ರು. ಅವನ ಹೆಸರಿನ ಮೊದಲ ಅಕ್ಷರಗಳನ್ನೆಲ್ಲ ಕೂಡಿಸಿ ಓದಿದರೆ ಹಾಗೆ ಕೇಳುತ್ತಿತ್ತು ಅನ್ನುವುದು ಒಂದು ಕಾರಣವಾದರೆ, ಇನ್ನೊಂದು ತರ್ಕದ ಪ್ರಕಾರ, ಜೇ.ಸಿ.ಬಿ ಯಂತ್ರ ಭೂಮಿಯನ್ನು ನಿಷ್ಕರುಣೆಯಿಂದ ಬಗೆದಂತೆ, ಆತ ಹೋದಲ್ಲೆಲ್ಲ ಜನರನ್ನು ಕೆಲಸದಿಂದ ಕಿತ್ತೊಗೆದು ಸ್ವಚ್ಚ ಮಾಡುತ್ತಿದ್ದ. ಹೇಳದೆ ಕೇಳದೆ ಕಂಪನಿಯಿಂದ ಜನರನ್ನು ಓಡಿಸುವುದರಲ್ಲಿ ಅವನು ನಿಸ್ಸೀಮ. ಇವರದು ಅಮೇರಿಕಾದ ಕಂಪನಿಯಾಗಿದ್ದರಿಂದ ಅಲ್ಲಿನವರು ಹೇಳಿದಂತೆ ಕೇಳುವ ಅನಿವಾರ್ಯತೆ ಇವರಿಗಿತ್ತು. ಹೀಗಾಗಿ ಜಾನ್ ಭಾರತಕ್ಕೆ ಬರುತ್ತಿದ್ದಾನೆ ಎಂದರೆ ಎಷ್ಟು ಬಲಿ ಬೀಳುವವೋ ಎಂದು ಇವನು ಚಿಂತಾಕ್ರಾಂತನಾಗಿದ್ದ. ಇವನು ಭಾರತ ಶಾಖೆಯ ಮುಖ್ಯಸ್ಥನಾಗಿದ್ದರಿಂದ ಎಲ್ಲರ ಜವಾಬ್ದಾರಿ ಇವನ ಮೇಲೆಯೇ ಇತ್ತು. ಜಾನ್, ತನ್ನ ತಲೆಗೂ ಸಂಚಕಾರ ತಂದರೂ ತರಬಹುದೆಂಬ ಚಿಂತೆಯೂ ಇವನಿಗಿತ್ತು. ಸುಧೀರ್ ಕೂಡಲೇ ಪೃಥ್ವಿ ಗೆ ಫೋನಾಯಿಸಿ. ಜಾನ್ ಬರುತ್ತಿರುವ ವಿಷಯ ತಿಳಿಸಿ, ಎಲ್ಲ ಮುಖ್ಯಸ್ಥರನ್ನು ಸೇರಿಸಿ ಮದ್ಯಾಹ್ನದ ಊಟದ ನಂತರ ಒಂದು ಮೀಟಿಂಗ್ ಕರೆಯಲು ತಿಳಿಸಿದ… 
ತಂಪು ಹವೆಯನ್ನು ಸೂಸುತ್ತಿದ್ದ ಆ ಮೀಟಿಂಗ್ ಕೋಣೆಯಲ್ಲಿ ಒಟ್ಟು ಇಪ್ಪತ್ತು ಆಸನಗಳು ಹಾಗೂ ಒಂದು ದೊಡ್ಡದಾದ ಮೇಜು ಇತ್ತು. ಮೇಜಿನ ಮೇಲೆ ಫೋನ್ ಗಳು, ಲ್ಯಾಪ್ಟಾಪ್ ಗಳನ್ನು ವಿದ್ಯುತ್ ಪೂರಣಗೊಳಿಸಲು ಅನುಕೂಲವಾಗುವಂತೆ ವಿದ್ಯುತ್ ನ ಕುಹರಗಳು ಇದ್ದವು. ಎದುರಿಗೆ ಎಲ್ಲರಿಗೂ ಕಾಣುವಂತೆ ಇರಿಸಿದ್ದ ದೊಡ್ಡ ಎಲ್ ಇ ಡಿ ಪರದೆ ಇತ್ತು. ಗೋಡೆಗಳ ಮೇಲೆ ಇವರ ಕಂಪನಿಯ ದೃಷ್ಟಿಕೋನವನ್ನು ಸಾರಿ ಸಾರಿ ಹೇಳುವ ಸಂದೇಶಗಳನ್ನು ಹೊತ್ತ ಫಲಕಗಳು ರಾರಾಜಿಸುತ್ತಿದ್ದವು. 
ಮೂರು ಗಂಟೆಗೆ ಅಂತ ಮೀಟಿಂಗ್ ಗೊತ್ತು ಮಾಡಿದ್ದರೂ, ಆಗಲೇ ಆ ಕೋಣೆ ಭರ್ತಿಯಾಗಿತ್ತು. ಯಾವುದೇ ಬೇರೆ ಮೀಟಿಂಗ್ ಗೆ ತಡವಾಗಿ ಬರುವ ಪ್ರಜೆಗಳು ಇವತ್ತು ಇಷ್ಟು ಬೇಗನೆ ಬಂದ ಕಾರಣ ಸುಧೀರ್ ಗೆ ಸ್ಪಷ್ಟವಾಗಿತ್ತು. ಎಲ್ಲರಿಗೂ ಜೇ.ಸಿ.ಬಿ ಬರುತ್ತಿರುವ ಸುದ್ದಿಯನ್ನು ಆಗಲೇ ಡಂಗುರ ಸಾರಿದ್ದ ಪ್ರಥ್ವಿ. ಅದರ ಬಗ್ಗೆ ಮೀಟಿಂಗ್ ಅಂದ ಮೇಲೆ ಎಲ್ಲರಿಗೂ ಕುತೂಹಲವಿತ್ತು. ಅದಕ್ಕೆ, ಇದ್ದ ಬದ್ದ ಕೆಲಸವ ಬಿಟ್ಟು ಬಂದು ಕೂತಿದ್ದರು. ಎಲ್ಲರೂ ಹಿರಿಯ ಮ್ಯಾನೇಜರ್ ಗಳೆ; ತುಂಬಾ ವರ್ಷಗಳಿಂದ ಅದೇ ಕಂಪನಿಯಲ್ಲಿ ಬೇರು ಬಿಟ್ಟು ಹಂತ ಹಂತವಾಗಿ ಮೇಲೇರಿದವರು. ಅವರೆಲ್ಲರಿಗೂ ಸಹಜವಾಗಿ ಜಾನ್  ಬರುತ್ತಿರುವ ಬಗ್ಗೆ ಕುತೂಹಲದ ಜೊತೆಗೆ  ಕಳವಳವೂ ಇತ್ತು. ಅದರಲ್ಲೂ ಮೈಗಳ್ಳತನದಲ್ಲಿ ಔನ್ನತ್ಯಕ್ಕೆ ಏರಿದ್ದ ಷಣ್ಮುಗಂ, ವೆಂಕಟರಾಜು ಹಾಗೂ ಚಂದ್ರಕಾಂತ್ ತುಂಬಾನೇ ಭಯದಲ್ಲಿದ್ದರು. ಅವನು ತಮಗೆಲ್ಲಾ ಎತ್ತಂಗಡಿ ಮಾಡಿಬಿಟ್ಟರೆ  ಏನು ಗತಿ ಅಂತ ಅವರು ಚಿಂತೆಗೊಳಗಾಗಿದ್ದರು.   
ಸುಧೀರ್ ಎಲ್ಲರೂ ಬಂದದ್ದನ್ನು ಖಚಿತಪಡಿಸಿಕೊಂಡು ಇವತ್ತಿನ ಮೀಟಿಂಗ್ ನ ಉದ್ದೇಶವನ್ನು ಹೇಳಿದ. ಎಲ್ಲರಿಗೂ ಅದಾಗಲೇ ಗೊತ್ತಿರುವುದೆಂದು ಅವನು ಊಹಿಸಿದ್ದನಾದರೂ ಅದೊಂದು ಔಪಚಾರಿಕತೆಯಾಗಿತ್ತು. 
"ಜಾನ್ ಮುಂದಿನ ಸೋಮವಾರ ಬರುತ್ತಿದ್ದಾನೆ. ಅವನ ಜೊತೆಗೆ ಅವನ ಸಲಹಾಗಾರ ಜೇಕಬ್ ನೂ ಬರುತ್ತಿದ್ದಾನೆ." ಅಂದ ಸುಧೀರ್. ಜೇಕಬ್ ಒಂತರಹ ಚಾಣಕ್ಯ ಇದ್ದಂತೆ. ಇವರಿಬ್ಬರ ಜೋಡಿ ತಮ್ಮ ಶಾಖೆಯಲ್ಲಿ ಒಳ್ಳೆಯ ಬಿರುಗಾಳಿ ಎಬ್ಬಿಸಲಿದೆಯೆಂದು  ಎಲ್ಲರಿಗೂ ಖಾತ್ರಿಯಾಯ್ತು.
"ಜಾನ್ ಎಷ್ಟು ದಿನ ಇರ್ತಾರೆ?" ಸ್ಮಿತಾ ಕೇಳಿದಳು. ಅವಳು ಹಾಗೇನೆ, ಇನ್ನೂ ಹೇಳುವುದು ಬಾಕಿ ಇದ್ದಾಗಲೇ ಪ್ರಶ್ನೆ ಕೇಳದಿದ್ದರೆ ಅವಳಿಗೆ ಸಮಾಧಾನವೇ ಇಲ್ಲ. ಸುಧೀರ್ ಗೆ ಅವಳ ಪ್ರಶ್ನೆಯಿಂದ ಸಿಟ್ಟು ಬಂತಾದರೂ ಸಮಾಧಾನ ದ ಮುಖವಾಡದಲ್ಲೇ ಹೇಳಿದ 
"ಅವರು ಐದು ದಿನಗಳ ಭೇಟಿಗೆ ಇಲ್ಲಿಗೆ ಬರುತ್ತಿದ್ದಾರೆ. ಅಂದಹಾಗೆ ನಾನು ಹೇಳಬೇಕಿರುವುದನ್ನು ಮೊದಲು ಹೇಳಿ ಮುಗಿಸುತ್ತೇನೆ. ನಿಮ್ಮ ಪ್ರಶ್ನೆಗಳನ್ನು ಆಮೇಲೆ ಕೇಳಬಹುದು." ಅಂತ ಸ್ಮಿತಾಗೆ ಮೆಲ್ಲನೆ ಎಚ್ಚರಿಸಿ ಮುಂದುವರಿಸಿದ…
"ಜಾನ್ ನಿಮ್ಮೆಲ್ಲರ ಜೊತೆಗೂ ಪ್ರತ್ಯೇಕವಾಗಿ ಹಾಗೂ ನೇರವಾಗಿ ಮಾತಾಡಬೇಕಂತೆ. ಅದಕ್ಕೆ ಅವರ ಅನುಕೂಲದ ಸಮಯದಲ್ಲಿ ಮೀಟಿಂಗ್ ಅನ್ನು ಈಗಲೇ ಗೊತ್ತುಪಡಿಸಿಕೊಳ್ಳಿ." ಈ ಮಾತಿನಿಂದ ಕೆಲವರು ತಮ್ಮ ಹೊಟ್ಟೆಯಲ್ಲಿ ಸಣ್ಣ ಪ್ರಮಾಣದ ಕಂಪನಗಳನ್ನು ಅನುಭವಿಸತೊಡಗಿದರು. ಆದರೆ ತನ್ನ ಬಗ್ಗೆ ಹೇಳಿಕೊಳ್ಳಲು ಹಾಗೂ ಮುಂದಿನ ಸ್ಥಾನಕ್ಕೆ ಹೋಗುವ ಉತ್ಸುಕತೆಯನ್ನು ಹೊಂದಿರುವ ಸ್ಮಿತಾ ಹಾಗೂ ಸುಜಯ್ ಅಂಥವರು ತಮ್ಮ ಅಹವಾಲನ್ನು ಜಾನ್ ಗೆ ಹೇಳಲು ಕಾಯುತ್ತಿದ್ದರು. ಇವರನ್ನು ಬಿಟ್ಟರೆ, ಸುಧೀರ್ ತನ್ನ ಬಾಸ್ ಅನ್ನುವುದನ್ನು ಸಹಿಸದ ರೋಶನ್ ಮತ್ತು  ಅವನ ಚೇಲಾಗಳು, ಇವನ ವಿರುದ್ಧ ಸಂಚು ಹೂಡಲು ಇದೊಳ್ಳೆ ಅವಕಾಶವೆಂದು ಜಾನ್ ನನ್ನು ಪ್ರತ್ಯೇಕವಾಗಿ ಭೇಟಿಯಾಗಲು ಕಾತರಿಸಿದ್ದರು.
ಜಾನ್ ಹಾಗೂ ಜೇಕಬ್ ಇಲ್ಲಿಗೆ ಬಂದಾಗ ಏನೇನು ಚಟುವಟಿಕೆಗಳು ನಡೆಯಲಿವೆ ಎಂಬ ಸ್ಥೂಲ ಚಿತ್ರಣವನ್ನು ಎಲ್ಲರಿಗೂ ನೀಡಿದನವನು. ಆ ಐದು ದಿನಗಳಲ್ಲಿ ಒಂದು ದಿನ ಕಂಪನಿಯ ಎಲ್ಲ ಉದ್ಯೋಗಿಗಳನ್ನು ಉದ್ದೇಶಿಸಿ ಒಂದು ಗಂಟೆಯ ಸಭೆಯನ್ನು  ಮಾಡುವ ಇಂಗಿತ ಜಾನ್ ವ್ಯಕ್ತಪಡಿಸಿದ್ದಾನೆ ಅಂತಲೂ ತಿಳಿಸಿದ. ಅಲ್ಲಿ ಹೆಚ್ಚು ಕಡಿಮೆ ೫೦೦ ಉದ್ಯೋಗಿಗಳು ಕೆಲಸ ಮಾಡುತ್ತಿದ್ದರು. ಏನಾದರೂ ಪ್ರಶ್ನೆಗಳಿವೆಯೆ ಎಂದು ಕೇಳಿದ್ದಕ್ಕೆ ಸ್ಮೀತಾ ತನಗೆ ಗೊತ್ತಿರುವ ವಿಷಯಗಳ ಬಗ್ಗೆಯೇ ಮತ್ತೊಂದಿಷ್ಟು ಪ್ರಶ್ನೆಗಳ ಸುರಿಮಳೆ ಸುರಿಸಿ ತನ್ನ ಜ್ಞಾನ ಪ್ರದರ್ಶಿಸಿದಳು! ಸುಧೀರ್ ಅವಳ ಪ್ರಶ್ನೆಗಳಿಗೆ ಸಮಾಧಾನದಿಂದಲೇ ಉತ್ತರಿಸಿ ತನ್ನ ಅಸಮಾಧಾನವನ್ನು ಮುಚ್ಚಿಟ್ಟನು. ಇಷ್ಟು ದೊಡ್ಡ ಸಂಸ್ಥೆಯ ಮುಖ್ಯಸ್ಥನಾದ ಕಾರಣಕ್ಕೆ ಸಾಕಷ್ಟು ತಾಳ್ಮೆಯನ್ನು ಸಹಜವಾಗಿಯೇ ಅವನು ಮೈಗೂಡಿಸಿಕೊಂಡಿದ್ದನು. ಮಿಕ್ಕವರು ಯಾರಿಗೂ ಆ ಮಟ್ಟಿಗೆ ಯಾವ ಪ್ರಶ್ನೆಗಳೂ ಇರಲಿಲ್ಲ. ಕೊನೆಯಲ್ಲಿ ವಿದೇಶದ ಅತಿಥಿಗಳ ವಾಸ್ತವ್ಯ, ವಾಹನ ಹಾಗೂ ಇನ್ನಿತರ ವ್ಯವಸ್ಥೆಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಎಂದಿನಂತೆ  ಪೃಥ್ವಿಗೆ ವಹಿಸಿ, ಅಲ್ಲಿಗೆ ಆ ಮೀಟಿಂಗ್ ನ್ನು ಮುಗಿಸಿದನು. 
ಮೀಟಿಂಗ್ ಮುಗಿಸಿ ತನ್ನ ಜಾಗಕ್ಕೆ ಮರಳಿದ ಸುಜಯ್ ಯಾವುದೋ ಯೋಚನೆಯಲ್ಲಿ ಮುಳುಗಿದ್ದನ್ನು ನಿಶಾ ಗಮನಿಸಿದಳು. ಏನೆಂದು ಕೇಳಲಾಗಿ ಜಾನ್ ಬರುತ್ತಿರುವ ವಿಷಯ ತಿಳಿದು ಅವಳೂ ಪುಳಕಗೊಂಡಳು. ತನ್ನ ಬೇಳೆ ಬೇಯಿಸಿಕೊಳ್ಳಲು ಇದೊಂದು ಸದವಕಾಶವೆಂದು ಅವಳಿಗೂ ಗೊತ್ತಿತ್ತು. ಆದರೆ ಅದನ್ನು ತೋರ್ಪಡಿಸದೆ, ಸುಜಯ್ ಗೆ, ನೀನ್ಯಾಕೆ ಅಮೆರಿಕಾಕ್ಕೆ ಹೋಗಿ ಅಲ್ಲಿಂದ ಕೆಲಸ ಮಾಡುವ ಅವಕಾಶದ ಬಗ್ಗೆ ಜಾನ್ ಜೊತೆಗೆ ಮಾತಾಡಬಾರದು ಎಂಬ ಉಚಿತ ಸಲಹೆಯನ್ನೂ ನೀಡಿದಳು. ನೀನು ವೆಂಕಟ್ ಗಿಂತ ಮೊದಲೇ ಈ ಕಂಪನಿಯಲ್ಲಿ ಇದ್ದವನು, ಜಾನ್ ಖಂಡಿತ ನಿನ್ನ ಮಾತು ಕೇಳಿಯೇ ತೀರುತ್ತಾನೆ ಎಂದು ಒಂದು ಹುಳುವನ್ನು ಅವನ ತಲೆಗೆ ಬಿಟ್ಟಳು. ಸುಜಯ್ ಅವಳ ಮಾತಿಗೆ ಎಂದಿನಂತೆ ಪುಂಗಿಯ ನಾದಕ್ಕೆ ತಲೆ ಆಡಿಸುವ ಹಾವಿನಂತೆ ಹೂಗುಡುತ್ತಾ ಮನದಲ್ಲೇ ಏನೋ ಲೆಕ್ಕ ಹಾಕುತ್ತಿದ್ದ…  


Monday, April 6, 2015

ಕೆಲಸಕೆ ಚಕ್ಕರ್… ಊಟಕೆ ಹಾಜರ್!

 
ನಿಶಾ ಳ ಸಂಗಡ ಹೋಗುತ್ತಿರುವಂತೆ, ಆಫೀಸಿನಲ್ಲಿ ಎಲ್ಲರ ಕಣ್ಣುಗಳು ಇವರನ್ನೇ ನೋಡುತ್ತಿದ್ದರೆ ಸುಜಯ್ ಗೆ ಒಳಗೊಳಗೇ  ಖುಷಿ. ಅದರೂ ಅದು ಹೇಗೋ ಅವನ ಮುಖದ ಮೇಲೆಯೂ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಅದನ್ನು ಗಮನಿಸಿದ ಅವಳ ಮುಖದಲ್ಲೊಂದು ತುಂಟ ಮುಗುಳ್ನಗು ಸುಳಿಯಿತು. ಇಬ್ಬರೂ ರಿಸೆಪ್ಶನ್ ದಾಟಿಕೊಂಡು ಹೋಗುತ್ತಿದ್ದಂತೆ, “ಸುಜಯ್… ಹೇ ಸುಜಯ್…” ಅಂತ ಕೂಗುತ್ತಿದ್ದ ಕೋಮಲ ದನಿಯೊಂದು ಇವರಿಬ್ಬರಿಗೂ ನಿಲ್ಲುವಂತೆ ಮಾಡಿತು. ಯಾರು ಅಂತ ಹಿಂತಿರುಗಿ ನೋಡಿದರೆ ಆ ಕೋಮಲ ದನಿ ಬೇರೆ ಯಾರದೂ ಅಲ್ಲ, ಪೃಥ್ವಿ ಅನ್ನುವ ಗಂಡಸಿನದು! 
 
…ಪ್ರಥ್ವಿ ಇವರ ಕಂಪನಿಯ ಮುಖ್ಯ ಸಂಯೋಜಕ. ಅಲ್ಲಿ ಟಿಶ್ಯೂ ಪೇಪರ್ ಗಳ ಖರೀದಿಯಿಂದ ಮೊದಲುಗೊಂಡು ಹೊರದೇಶದ ಗ್ರಾಹಕರು ಅಥವಾ ಕಂಪನಿಯ ಮುಖ್ಯಸ್ಥರು ಭೇಟಿ ನೀಡಿದರೆ ಅವರ ಉಪಚಾರ ನೋಡಿಕೊಳ್ಳುವ ಜವಾಬ್ದಾರಿಯವರೆಗೆ ಎಲ್ಲ ಕಾರುಭಾರು ಇವನದೇ. ಅವನ ದನಿ ಮಾತ್ರ ಹುಡುಗಿಯರ ತರಹವೆ ಇತ್ತು. ಅದರಲ್ಲಿ ಪಾಪ ಅವನ ತಪ್ಪಿರಲಿಲ್ಲ ಬಿಡಿ! ಆದರೂ ತುಂಬಾ ಜನರು ಇದರಿಂದ ಗಲಿಬಿಲಿಗೊಳ್ಳುತ್ತಿದ್ದರು. ಅದರಲ್ಲೂ ಹೆಸರೂ ಕೂಡ ಪ್ರಥ್ವಿ ಇದ್ದುದರಿಂದ, ಯಾರಾದರೂ ಹೊಸಬರ ಜೊತೆಗೆ “ಹಲೋ ಪ್ರಥ್ವಿ ಹಿಯರ್” ಅಂತ ವೈಯಾರದಿಂದ ಹೇಳಿದಾಗ ಆ ಹೊಸಬರು ಇವನು ಹುಡುಗಿ ಅಂತಲೇ ಭಾವಿಸಿ  “ಹಲೋ ಮ್ಯಾಡಂ…” ಅಂತ ಸಂಭಾಷಣೆ ಮುಂದುವರಿಸುತ್ತಿದ್ದರು. ಆಮೇಲೆ ಮುಖತಃ ಭೇಟಿಯಾದಾಗ, ಇವನು ಹುಡುಗಿ ಅಲ್ಲ ಅಂತ ಅರಿವಾಗಿ ಆಶ್ಚರ್ಯ ಪಡುತ್ತಿದ್ದರು! ಇನ್ನೂ ಕೆಲವರು ಆ ದನಿಯ ಕೇಳಿ ಸುಂದರ ಹೆಣ್ಣಿನ ಕಲ್ಪನೆ ಮಾಡಿಕೊಂಡು, ಅದು ಸುಳ್ಳಾದಾಗ ಅತೀವ ನಿರಾಸೆ ಹೊಂದುತ್ತಿದ್ದರು! ಈ ವಿಷಯವಾಗಿ ತುಂಬಾ ಜನ ಸಹೋದ್ಯೋಗಿಗಳು ಇವನ ಗೋಳು ಹೊಯ್ದುಕೊಳ್ಳುತ್ತಿದ್ದರು ಕೂಡ. ಆದರೆ ಅವನು ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಈ ಜಗದ ಕೊಂಕುಗಳಿಗೆ ಕುಗ್ಗಿದರೆ ಬದುಕು ಸಾಧ್ಯವೇ?     
“ಹೇ ಸುಜಯ್, ಎರಡು ಜನ ಇಂಟರ್ವ್ಯೂಗೆ ಕಾಯ್ತಿದಾರೆ. ಯಾವಾಗ ಕಳಸ್ಲಿ?” ಪ್ರಥ್ವಿ ಕೇಳಿದ. ನಿಶಾ ಳ ಜೊತೆಗೆ ಸ್ವಲ್ಪ ಹೊತ್ತು ಆರಾಮವಾಗಿ ಕಳೆಯುವ ತನ್ನ ಯೋಜನೆಗೆ ಇಂಥದೊಂದು ಕಲ್ಲು ಬೀಳುವುದೆಂದು ಇವನು ನಿರೀಕ್ಷಿಸಿರಲಿಲ್ಲ. ಆದರೂ ಸಾವರಿಸಿಕೊಂಡು,
“ನಾನೀಗ ಊಟಕ್ಕೆ ಹೊರಟಿದ್ದೇನೆ. ಆಮೇಲೆ ಒಂದು ಬೇರೆ ಮೀಟಿಂಗ್ ಇದೆ. ೪ ಗಂಟೆಗೆ ಇಂಟರ್ವ್ಯೂ ಶೆಡ್ಯೂಲ್ ಮಾಡು” ಅಂತ ಹೇಳಿ ತಾನು ತುಂಬಾ ಗಡಿಬಿಡಿಯಲ್ಲಿರುವವನಂತೆ, ಅಲ್ಲಿಂದ ನಿರ್ಗಮಿಸುವ ಆತುರ ತೋರಿದ. ಹಾಗೆ ಆಗ್ಲಿ ಅಂತ ಕಣ್ಣು ಮಿಟುಕಿಸಿ ಅವರ ಬೀಳ್ಕೊಟ್ಟ ಪ್ರಥ್ವಿ. ಇಬ್ಬರೂ ತುಂಬಾ ವರ್ಷಗಳಿಂದ ಆ ಕಂಪನಿಯಲ್ಲಿದ್ದುದರಿಂದ ಅವರಲ್ಲೊಂದು ಸಲುಗೆ ಇತ್ತು. ಸುಜಯ್ ನ ಮೀಟಿಂಗ್ ಯಾವುದು ಅಂತಲೂ ಅವನಿಗೆ ಗೊತ್ತಾಗಿತ್ತು!    
ಅನಿರೀಕ್ಷಿತವಾಗಿ ಎದುರಾಗಿ ಬಂದ ಪ್ರಥ್ವಿ, ಸುಜಯ್ ನ ಕರ್ತವ್ಯ ಪ್ರಜ್ಞೆಯನ್ನು ಜಾಗೃತ ಗೊಳಿಸಿದ್ದರಿಂದಲೋ ಏನೋ, ಇವನ ಮುಖ ಬಾಡಿದ್ದು ಕಂಡು ನಿಶಾ,
“ನಿನಗೆ ಯಾವ ತರಹದ ಫುಡ್ ಇಷ್ಟ?” ಅಂತ ಕೇಳಿ ಇವನನ್ನು ತಿರುಗಿ ಹಳಿಗೆ ತರುವ ಪ್ರಯತ್ನ ಮಾಡಿದಳು. ಅದು ಫಲಿಸಿತೋ ಎಂಬಂತೆ ಇವನ ಮುಖದಲ್ಲಿ ಬದಲಾವಣೆ ಕಂಡು ಬಂತು…
“ಹಸಿದಾಗ ಏನು ಕೊಟ್ಟರೂ ಇಷ್ಟವೇ… ಅದು ಇದು ಅಂತ ಬೇಧ ಭಾವ ಮಾಡೋನೇ ಅಲ್ಲ ನಾನು” ಅಂತ ತುಂಬಾ ಸಹಜವಾಗಿ ಹೇಳಿದ ತನ್ನ ಮಾತು ಕೇಳಿ ನಿಶಾ ಆ ಪರಿ ನಗುವಳೆಂದು ಸುಜಯ್ ನಿರೀಕ್ಷಿಸರಲಿಲ್ಲ!
“ಹೌದೆ ಈಗ ನಿನಗೆ ಹಸಿವೆಯಾಗಿದೆಯಲ್ಲವೇ? ಹಾಗಿದ್ದರೆ ಚಿಕನ್ ಬಿರಿಯಾನಿ ತಿನ್ನೋಣ. ಆಯ್ತಾ?” ಅಂದು ಇನ್ನೂ ಜೋರಾಗಿ ನಗತೊಡಗಿದಳು. ಅವಳಿಗೆ ತಾನು ಸಸ್ಯಾಹಾರಿ ಅಂತ ಗೊತ್ತಿದ್ದೂ ತನ್ನ ಕಾಲೆಲೆಯುತ್ತಿರುವಳೆಂದು ಗೊತ್ತಾಗಿ ಸುಮ್ಮನೆ ನಕ್ಕ.
ಅವಳ ನಗುವನ್ನು ನಿಯಂತ್ರಿಸಲೋ ಏನೋ ಎಂಬಂತೆ,
“ನಿನ್ನ ಊರು ಯಾವುದು?” ಅಂತ ಇವನು ಕೇಳಿದ್ದಕ್ಕೆ, ಅವಳ ನಗುವೇನೋ ನಿಂತಿತು. ಆದರೆ ಉತ್ತರವನ್ನು ಬ್ರೇಕ್ ಬಳಿಕ ಹೇಳುತ್ತೇನೆ ಅನ್ನುವ ತರಹ, “ಊಟ ಮಾಡುವಾಗ ಹೇಳುತ್ತೇನೆ” ಅಂತ ಕಣ್ಣು ಮಿಟುಕಿಸಿದಳವಳು. ಹಾಗೆ ಕಣ್ಣು ಮಿಟುಕಿಸಿದಾಗ ತುಂಬಾ ಕ್ಯೂಟ್ ಕಾಣುತ್ತೀಯ ಅಂತ ಹೇಳಬೇಕೆಂದವನು ಸುಮ್ಮನಾದ.
ತಂದೂರಿ ಹಟ್ ಅನ್ನುವ ಆ ಹೋಟೆಲಿನಲ್ಲಿ ಕಾಲಿಡಲೂ ಜಾಗವಿರದಷ್ಟು ಜನವಿದ್ದರು. ಆಫೀಸಿನಲ್ಲಿ ಖಾಲಿ ಖಾಲಿ ಹೊಡೆಯುತ್ತಿದದ್ದು ಯಾಕೆ ಅಂತ ಇಲ್ಲಿ ಕುಳಿತವರ ನೋಡಿದರೆ ಗೊತ್ತಾಗುತ್ತಿತ್ತು. ಆದರೆ ಇಲ್ಲಿ ಪ್ರೈವಸಿ ಗೆ ಅವಕಾಶವೇ ಇರಲಿಲ್ಲ. ಇಲ್ಲಿ ಬೇಡ, ಬೇರೆ ಕಡೆ ಹೋಗೋಣ ಅಂದವನ ಮನಸ್ಸನ್ನು ಓದಿ ಅರ್ಥ ಮಾಡಿಕೊಳ್ಳದಷ್ಟು ಅನಕ್ಷರಿಯಾಗಿರಲಿಲ್ಲ ಅವಳು! ಅಲ್ಲಿರುವ ನಾಲ್ಕೋ ಐದೋ  ಹೋಟೆಲು ಗಳಲ್ಲೇ, ಜನರು ಕಡಿಮೆ ಇದ್ದ ಕಡೆ ಹೋಗಿ ಕೂತರು. ಊಟ ಆರ್ಡರ್ ಮಾಡುವ ಗಡಿಬಿಡಿ ಇವನಿಗಿರಲಿಲ್ಲವಾದರೂ, ಆರ್ಡರ್ ತೆಗೆದುಕೊಳ್ಳುವ ಗಡಿಬಿಡಿ ಹೋಟೆಲಿನ ಮಾಣಿಗಿತ್ತಲ್ಲ! ಆ ಮಾಣಿ ಕೊಟ್ಟ ಮೆನುನಲ್ಲಿ  ಅವಳಿಗಿಷ್ಟವಾದ ಎಲ್ಲವೂ ಸಹಜವಾಗಿ ಇವನಿಗೂ ಇಷ್ಟವಾಯ್ತು! ಅವಳೇ ಊಟಕ್ಕೆ ಏನು ಬೇಕು ಅಂತ ಆರ್ಡರ್ ಮಾಡಿದಳು.  ಅಡಿಗೆ ಆರಾಮವಾಗಿ ತಯಾರಾಗಲಿ ಎಂಬ ಅಣತಿಯನ್ನು ಮಾಣಿಗೆ ಕಣ್ಣಲ್ಲೇ ಹೇಳಿದನವನು. ಇಂಥ ಎಷ್ಟೋ ಜೋಡಿಗಳನ್ನು ದಿನವೂ ನೋಡುವ ಮಾಣಿಗೆ ಇಂತಹ ಅಣತಿಗಳು ಸುಲಭವಾಗಿ ಅರ್ಥವಾಗುತ್ತಿದ್ದವು. ಅದನ್ನು ಪಾಲಿಸಿದರೆ ಅವನ ಜೇಬಿಗೊಂದಿಷ್ಟು ಜಾಸ್ತಿ ದುಡ್ಡು ಸೇರುತ್ತಿತ್ತು!   
“ನನ್ನ ಅಮ್ಮ ಕೆರಳದವಳು, ಅಪ್ಪ ಕಾಶ್ಮೀರದವನು. ನಾನು ಹುಟ್ಟಿದ್ದು ನನ್ನ ಅಜ್ಜಿಯ ಊರಾದ ಕೊಟ್ಟಾಯಂ ನಲ್ಲಿ” ಅಂತ ತನ್ನ ಉಗಮದ ಬಗ್ಗೆ ತಿಳಿಸಿದಳು. ಎರಡು ರಾಜ್ಯಗಳ ಸುಂದರಿಯರಲ್ಲಿರಬೇಕಾದ ಲಕ್ಷಣಗಳ ಸಂಗಮವಿರುವುದಕ್ಕೇ ಇವಳು ಇಷ್ಟು ಸುಂದರಿ ಇರಬೇಕು ಅಂದುಕೊಂಡನವನು.
“ನನಗೊಬ್ಬಳು ತಂಗಿ ಇದ್ದಾಳೆ, ನನ್ನ ಅಪ್ಪನಿಗೆ ಏರ ಫೋರ್ಸ್ ನಲ್ಲಿ ಕೆಲಸ. ಹೀಗಾಗಿ ನಾನು ಹೆಚ್ಚು ಕಡಿಮೆ ಇಡೀ ದೇಶವೆಲ್ಲಾ ಸುತ್ತಾಡಿದ್ದೇನೆ…” ಅವಳ ಮಾತುಗಳನ್ನೆ ಮಂತ್ರಮುಗ್ಧನಾಗಿ ಕೇಳುತ್ತಿದ್ದ…
 
------
 
ನಾನು ಮತ್ತು ನನ್ನ ನಾಯಿ ಇಬ್ಬರೂ ನಿರ್ಗತಿಕರು!
 
ಅಮೆರಿಕಾಕ್ಕೆ ಬಂದು ಇವತ್ತಿಗೆ ಆಗ್ಲೇ ಒಂದು ವಾರವಾಯ್ತೆ ಅಂತ ವೆಂಕಣ್ಣ ತಲೆ ಕೆರೆಯುತ್ತಾ ಯೋಚಿಸುತ್ತಿದ್ದಾಗಲೇ ಮಗಳು ಖುಷಿ ಇವನ ಭುಜ ಹಿಡಿದು ಅಲುಗಾಡಿಸುತ್ತಿದ್ದಳು.
“ಅಪ್ಪ ಅಮೇರಿಕಾ ಬೋರಿಂಗ್ ಅದ” ಅಂದಳು. 
ಶಾಲೆಗೆ ಹೋಗುವ ರಗಳೆ ಇಲ್ಲ ಅಂತ ಬಂದ ಹೊಸತು ಅವಳಿಗೆ ಖುಷಿಯಾಗಿತ್ತಾದರೂ, ಈಗ ಅವಳಿಗೆ ಬೇಜಾರು ಶುರು ಆಗಿತ್ತು. ಹೊಸ ಜಾಗ, ಅದೂ ಅಲ್ಲದೆ  ಅವಳ ಜೊತೆಗೆ ಆಡಲು ಅಲ್ಲಿ ಯಾರೂ ಇರಲಿಲ್ಲ. ಆದರೆ  ಇವತ್ತು ಶನಿವಾರ, ವೆಂಕಣ್ಣನ ಆಫೀಸಿಗೆ ರಜೆ. ಅದಕ್ಕೆ ಹೆಂಡತಿ ಮಗಳನ್ನು ತಿರುಗಾಟಕ್ಕೆ ಕರೆದುಕೊಂಡು ಹೋಗುವ ನಿರ್ಧಾರ ಇವನು ಆಗಲೇ ಮಾಡಿಯಾಗಿತ್ತು.
“ಪುಟ್ಟಿ ನೀ ಇನ್ನೂ ಅಮೇರಿಕಾ ನೋಡೇ ಇಲ್ಲ! ಇವತ್ತ ನಿಮಗ ಸಾಲ್ಟ್ ಲೇಕ್ ಸಿಟಿ ಗೆ ಕರ್ಕೊಂಡ್ ಹೋಗ್ತೀನಿ!” ಏನೋ ಹೊಸ ತರಹದ ಊರಿನ ಹೆಸರು ಕೇಳಿ ಅವಳ ಕಣ್ಣುಗಳು ಅರಳಿದ್ದವು.
“ಹೇ ವಾವ್, ಆದ್ರ ಹೆಸರು ಮಜಾ ಅದ ಅಲ್ಲಾ? ಹಂಗ್ಯಾಕ ಅಂತಾರ ಅದಕ್ಕ?”   
“….. ಅಲ್ಲೇ ಹೋದ ಮ್ಯಾಲೆ ಹೇಳ್ತೀನಿ. ಅದು ಸರ್ಪ್ರೈಸ್!” ಅಂದ. ಯಾಕೆಂದರೆ ಆ ಊರಿಗೆ ಆ ಹೆಸರು ಯಾಕೆ ಬಂತು ಅಂತ ಅವನಿಗೂ ಗೊತ್ತಿರಲಿಲ್ಲ!
“ಅಲ್ಲಿಗೆ ಹೆಂಗ್ ಹೋಗೋದು?” ಅವಳ ಪ್ರಶ್ನೆ ಸಹಜವಾಗಿತ್ತು. ಯಾಕೆಂದರೆ ಬೆಂಗಳೂರಿನಲ್ಲಿದ್ದಂತೆ ಇಲ್ಲಿ ಇವರ ಸ್ವಂತ ಕಾರ್ ಇರಲಿಲ್ಲವಲ್ಲ. ಇಲ್ಲಿ ಕಾರ್ ಇಲ್ಲದಿದ್ದರೆ ತುಂಬಾ ಕಷ್ಟ. ಬಸ್ಸು ಟ್ರೇನ್ ಗಳಿವೆಯಾದರೂ ಅವುಗಳು ಅಡ್ಡಾಡುತ್ತಿದ್ದುದು ಆಗೀಗ ಅನ್ನುವಂತಿದೆ. ಇಲ್ಲಿ ಎಲ್ಲಿ ಹೋದರು ಕಾರ್ ಬೇಕೇ ಬೇಕು. ಇವನು ಬಂದಾಗಿನಿಂದ,  ಅಮೆರಿಕಾದಲ್ಲೇ ವಾಸವಾಗಿದ್ದ ಇವನ ಸಹೋದ್ಯೋಗಿ ಇವನನ್ನು  ಪ್ರತಿ ನಿತ್ಯ ಆಫೀಸಿಗೆ ತನ್ನ ಕಾರಿನಲ್ಲೇ ಬಿಡುತ್ತಿದ್ದ. ಹೀಗಾಗಿ ಇವತ್ತಿಗೆ ಸಾಲ್ಟ್ ಲೇಕ್ ಸಿಟಿ ಗೆ ಹೋಗಲು ಒಂದು ಟ್ಯಾಕ್ಸಿ ಬುಕ್ ಮಾಡಿದ್ದ. 
ಬೆಳಿಗ್ಗೆ ೯ಕ್ಕೆ ಬುಕ್ ಮಾಡಿದ್ದ ಕಾರು ೮:೫೦ ಕ್ಕೆ ಸರಿಯಾಗಿ ಬಂದು, ಡ್ರೈವರ್ ಫೋನ್ ಮಾಡಿದಾಗ, ಇವನಿನ್ನೂ ಸ್ನಾನ ಮಾಡುತ್ತಿದ್ದ! ಹಾಗೂ ಹೀಗೂ ತಯ್ಯಾರಾಗಿ ವೆಂಕಣ್ಣನ ಪರಿವಾರ ಕೆಳಗೆ ಹೋದಾಗ ಡ್ರೈವರ್ ಅರ್ಧ ಗಂಟೆ ತಡವಾಯ್ತೆಂದು ಭುಸುಗುಡುತ್ತಿದ್ದ. ಎಷ್ಟಂದ್ರೂ ಅಮೆರಿಕಾದ ಡ್ರೈವರ್ ಅಲ್ವೇ? ಬೆಂಗಳೂರಿನಲ್ಲಾದರೆ ವೆಂಕಣ್ಣ ಎಷ್ಟೊತ್ತಿಗೆ ಬಂದರೂ ಡ್ರೈವರ್ ಸಿಟ್ಟು ಮಾಡಿಕೊಳ್ಳುತ್ತಿರಲಿಲ್ಲ.
ಹೋಗಲಿ ತನ್ನದೇ ತಪ್ಪು ಅಂತ ಅರಿವಾಗಿ ವೆಂಕಣ್ಣ ಸೌಜನ್ಯಯುತವಾಗಿ “ಕ್ಷಮಿಸಿ ನನ್ನಿಂದ ತಡಾ ಆಯಿತು” ಅಂದ. ಪರವಾಗಿಲ್ಲ ಬಿಡಿ ಅನ್ನುವ ಉತ್ತರ ನಿರೀಕ್ಷಿಸಿ ಕೇಳಿದ್ದ ಕ್ಷಮಾಪಣೆಗೆ ಡ್ರೈವರ್
“ಹೌದು ನೀವು ಕ್ಷಮೆ ಕೇಳಲೇಬೇಕಾದ ತಪ್ಪು ಮಾಡಿದ್ದೀರಿ” ಅನ್ನಬೇಕೆ! ಇವನಿಗೆಂಥ ಕೋಪ ಬರಬೇಡಾ! ಆದರೂ ಅವನು ತರಲೆ ಅನ್ನುವದು ಗೊತ್ತಾದಮೇಲೂ ಅವನ ಜೊತೆ ಜಗಳ ಮಾಡೋದು ಸರಿಯಲ್ಲವೆಂದು ಇವನಿಗೆ ಅರಿವಾಗಿ “ಇಲ್ಲಿ ಡ್ರೈವರ್ಗೋಳಿಗೆ ಭಾರಿ ಸೊಕ್ಕು. ಮಂಗ್ಯಾನ ಮಗಾ. ಹೆಂಗ್ ಮಾತಾಡ್ತಾನ್ ನೋಡು“ ಅಂತ ಹೆಂಡತಿ ಎದುರು ಬೈದು ಸಿಟ್ಟು ತೀರಿಸಿ ಕೊಂಡ.
       
ಸಾಲ್ಟ್ ಲೇಕ್ ಸಿಟಿ ಯ ಸೆಂಟ್ರಲ್ ಸ್ಟೇಶನ್ ಬಳಿಗೆ ಬಂದು ಮುಟ್ಟಿ, ಕಾರಿನಿಂದ ಇಳಿದು ಬಿಲ್ ದುಡ್ಡು ಕೊಟ್ಟ. ಅಲ್ಲಿ ಬರಿ ಬಿಲ್ ಕೊಟ್ಟರೆ ಸಾಲದು, ಜೊತೆಗೆ ಟಿಪ್ಸ್ ಕೊಡಬೇಕು ಅದು ಶಿಷ್ಟಾಚಾರ! ಡ್ರೈವರ್ ಇವನ ಜೊತೆಗೆ ಅಸಂಬದ್ಧ ಮಾತಾಡಿದ್ದರಿಂದ ಅವನ ಮೇಲೆ ವೆಂಕಣ್ಣ ನಿಗೆ ಮೊದಲೇ ಸಿಟ್ಟು ಬಂದಿತ್ತಲ್ಲವೇ. ಅದಕ್ಕೆ ಬರೀ ಐದೇ ಡಾಲರ್ ಟಿಪ್ಸ್ ಕೊಟ್ಟ. ಆದರೆ ಅದೇ ತರಲೆ ಡ್ರೈವರ್ ಈಗ, ಹಳದಿ ಬಣ್ಣಕ್ಕೆ ತಿರುಗಿದ್ದ ತನ್ನ ಅಷ್ಟೂ ಹಲ್ಲುಗಳ ಝಳಪಿಸುತ್ತ ಕೇಳಿದ! 
“ಸರ್, ನಿಮ್ಮ ಬಿಲ್ ೯೦ ಡಾಲರ್ ಆಗಿದೆ. ಆ ಮೊತ್ತದ ೧೫% ಟಿಪ್ಸ್, ಅಂದ್ರೆ ಬೊರೊಬ್ಬರಿ ೧೩.5 ಡಾಲರ್ ಆಗುತ್ತೆ.”
ಬೆಂಗಳೂರಿನಲ್ಲಾದರೆ ನಾವು ಕೊಟ್ಟಷ್ಟು ತೆಗೆದುಕೊಳ್ಳುತ್ತಾರೆ, ಇಲ್ಲಾದರೆ ಹೀಗೋ ! 
ಆದರೂ ಮೊದಲೇ ತಡವಾಗಿ ಬಂದಿದ್ದಕ್ಕೆ ತನ್ನ ಮರ್ಯಾದೆ ತೆಗೆದ ಅವನು, ಇನ್ನು ಅವನು ಕೇಳಿದಷ್ಟು ಟಿಪ್ಸ್    ಕೊಟ್ಟಿಲ್ಲ ಅಂದ್ರೆ, ಇಂಡಿಯನ್ ಗಳೇ ಹಿಂಗೆ ಅಂತ ಎಲ್ಲರೆದುರು ಹೇಳಿಬಿಟ್ಟರೆ? ಅಂತ ಇವನ ದೇಶ ಭಕ್ತಿ ಜಾಗೃತವಾಗಿ, ತಿಂದು ಸಾಯಿ ಅಂತ ಅವನು ಕೇಳಿದಷ್ಟು  ಟಿಪ್ಸ್ ಕೊಟ್ಟು ಅವನ ಬೀಳ್ಕೊಟ್ಟ.
ಇವನ ತಲೆಯಲ್ಲೊಂದು ಪ್ರಶ್ನೆಯಂತೂ ಉದ್ಭವವಾಯ್ತು. ಈ ಟಿಪ್ಸ್ ಗೂ ನಮ್ಮ ದೇಶದಲ್ಲಿ ಕೊಡುವ ಲಂಚಕ್ಕೂ ಏನು ವ್ಯತ್ಯಾಸ? ಅಂತ! ಅಲ್ಲೂ ಕೆಳಿದಷ್ಟೇ ಕೊಡಬೇಕು, ಇಲ್ಲೂ ಹಂಗೆ. ಸುಮ್ನೆ ನಮ್ಮ ದೇಶದಲ್ಲೂ ಲಂಚಾನ ಹೀಗೆ ನೂರಕ್ಕೆ ಇಷ್ಟು ಅಂತ ನಿಗದಿಸಿದರೆ ಅದನ್ನೂ ಟಿಪ್ಸ್ ಅಂತ ಹೇಳಿಕೊಂಡು ಖುಷಿಯಾಗಿ ಕೊಡಬಹುದಲ್ವೆ? ಹೀಗೊಂದು ಅದ್ಭುತವಾದ ಒಂದು ಕಲ್ಪನೆ ಬಂದು ಪುಳಕಗೊಂಡಿದ್ದಾಗಲೇ, ಮಗಳು
“ಇದ ಏನಪ್ಪಾ ಸಾಲ್ಟ್ ಲೇಕ್ ಸಿಟಿ?” ಅಂದಳು.
“ಹೌದು ಖುಷಿ. ಇಲ್ಲೇ ಹತ್ತರದಾಗ ಒಂದು ಡೆಡ್ ಸೀ ಅದ. ಅದರಿಂದನ ಈ ಊರಿಗೆ ಹೆಸರು ಬಂದಿದ್ದು” ಈಗಾಗಲೇ ಗೂಗಲ್ ನಲ್ಲಿ ಹುಡುಕಿ ಉತ್ತರ ಕಂಡುಕೊಂಡಿದ್ದರಿಂದ, ಈ ಊರಿಗೆ ಆ ಹೆಸರು ಬಂದದ್ದು ಯಾಕೆ ಅಂತ ಮತ್ತೆ ಅವಳು ಕೇಳೋದಕ್ಕಿಂತ ಮೊದಲೇ ಪಟಪಟನೆ ಉತ್ತರಿಸಿದ್ದ. 
“ಡೆಡ್ ಸೀ ಅಂದ್ರ?” ಮಗಳ ಮುಂದಿನ ಪ್ರಶ್ನೆ…
“ಅಂದ್ರ ನೀರೊಳಗ ಉಪ್ಪಿನ ಅಂಶ ಸಮುದ್ರಕ್ಕಿಂತ ಎಷ್ಟೋ ಪಟ್ಟು ಜಾಸ್ತಿ ಇರ್ತದ, ಯಾವುದ ಪ್ರಾಣಿಗಳು ಬದಕಲಿಕ್ಕೆ ಸಾಧ್ಯ ಇಲ್ಲದಷ್ಟು. ಇನ್ನೊಂದ ಮಜಾ ಅಂದ್ರ, ಆ ನೀರೊಳಗ ಮುಳುಗೋದ ಸಾಧ್ಯ ಇಲ್ಲ!”
“ಏ ಹೌದಾ? ಅಲ್ಲೇ ನನ್ನ ಕರಕೊಂಡು ಹೋಗಪ್ಪ!” ಎರಡು ಸಲ ಈಜು ಕಲಿಯಲು ಹೋಗಿ ಮುಳುಗುವ ಭಯದಿಂದ ವಾಪಸ್ಸು ಓಡಿ ಬಂದಿದ್ದ ಮಗಳಿಗೆ ಮುಳುಗಲು ಸಾಧ್ಯವೇ ಇಲ್ಲದ ಸಮುದ್ರದ ಅಸ್ತಿತ್ವವೇ ಸಹಜವಾಗಿ ಬೆರಗು ಮೂಡಿಸಿತ್ತು. 
“ಆಗ್ಲಿ ಇನ್ನೊಂದ್ ಸಲ ಹೋಗೋಣಂತ” ಮಗಳು ಆನಂದದಿಂದ ತಲೆ ಅಲ್ಲಾಡಿಸಿದಳು.   
ಆ ಊರಿನಲ್ಲಿದ್ದ ಸುಪ್ರಸಿದ್ಧ ಮಾಲ್ ಒಂದಕ್ಕೆ ಹೋದರಿವರು. ಅದರ ದ್ವಾರದಲ್ಲಿ ಸ್ವಾಗತಿಸಿದ್ದು ಮೂವರು ಬಿಕ್ಷುಕರು! ನಮ್ಮಲ್ಲಿ ದೇವಸ್ಥಾನದ ಮುಂದೆ ಕೂತಂಗೆ, ಆದರೆ ಇಲ್ಲಿನವರು ಅಕ್ಷರಸ್ಥರು ಅದೇ ವ್ಯತ್ಯಾಸ. ಅವರ ಕೈಯಲ್ಲಿ, ‘ನಾನು ನಿರ್ಗತಿಕ, ನನಗೆ ಸಹಾಯ ಮಾಡಿ!’ ಎಂದು ಇಂಗ್ಲೀಶ್ ನಲ್ಲಿ ಬರೆದಿದ್ದ ಒಂದು ಫಲಕ.  ಒಬ್ಬ ಭಿಕ್ಷುಕನಂತೂ  ತನ್ನ   ಜೊತೆಗೆ ಒಂದು ನಾಯಿಯನ್ನೂ ಕೂಡಿಸಿಕೊಂಡಿದ್ದ . ಅವನ ಕೈಯಲ್ಲಿದ್ದ ಫಲಕದಲ್ಲಿ ಹೀಗೆ ಬರೆದಿದ್ದ “ನನಗೆ ಹಾಗೂ ನನ್ನ ನಾಯಿ ಇಬ್ಬರಿಗೂ ಮನೆಯಿಲ್ಲ, ನಮಗೆ ಸಹಾಯ ಮಾಡಿರಿ!”
ಜಾನುಗೆ ಇದನ್ನು ನೋಡಿ ನಗು ಬಂತು “ಅಲ್ರೀ, ತನಗ ಗತಿ ಇಲ್ಲ, ಮತ್ತ ನಾಯಿ ಬ್ಯಾರೆ ಸಾಕ್ಯಾನಲ್ಲಾ. ಇಲ್ಲ್ಯೂ ಭಾಳ ಇದ್ದಾರ ಬಿಕ್ಷಾದವ್ರು. ನಾ ಒಂದ್ coin ಹಾಕ್ತೀನಿ, ಒಂದು ಫೋಟೋ ತಗೀರಿ” ಅಂದ್ಲು.
“ಲೇ ಫೋಟೋ ತಗೀಲಿಕ್ಕೆ ಇನ್ನೂ ಭಾಳ ಚೊಲೋ ಚೊಲೋ ಜಗಾ ಆವ, ಸುಮ್ನ ಬಾ” ಅಂತ ಹುಸಿ ಕೋಪದಲ್ಲಿ ಎಳೆದುಕೊಂಡು ಹೋದ. ಖುಷಿ, ಮಾಲ್ ನ ಮುಂದಿದ್ದ ಕಾರಂಜಿ ನೋಡಿ ಮೈಮರೆತಿದ್ದಳು.
  
ಮಾಲ್ ನಲ್ಲಿ ಅಡ್ಡಾಡಿ, ಹೊಟ್ಟೆ ತುಂಬದ ಬರ್ಗರ್, ಫ್ರೆಂಚ್ ಫ್ರೈಸ್ ಅಂತೇನೇನೋ ತಿಂದು ಮಾಲ್ ನ ಹೊರಗೆ ಬಿದ್ದರು. ಹಾಗೆ ಅಡ್ಡಾಡುತ್ತ ಆ ಊರಿನ ಸೊಬಗು ಸವಿಯುತ್ತಿದ್ದರು. ದಾರಿಯಲ್ಲಿ ಒಬ್ಬ ಪೂರ್ತಿ ಕುಡಿದು ಮೈ ಮರೆತು ರೋಡಿನ ಪಕ್ಕ ಮಲಗಿ ಬಿಟ್ಟಿದ್ದ. ಇನ್ನೂ ಒಂದಿಷ್ಟು ಕುಡುಕರು ಟೈಟ್ ಆಗಿ ಏನೇನೋ ಕೂಗಾಡಿಕೊಂಡಿದ್ದರು. ಎಲ್ಲಾ ಥೇಟ್ ನಮ್ಮ ಕುಡುಕರ ಥರಾನೇ! 
“ಲೇ ಇಲ್ಲಿ ಕುಡುಕರೂ ಕುಡದಾಗ ಇಂಗ್ಲಿಶ್ ನ್ಯಾಗ ಮಾತಾಡತಾರ ನೋಡು! ನಮ್ಮ ಕುಡಕರ ಥರಾನ. ಅಂದರ ಇಂಗ್ಲಿಷ ಕುಡುಕರ ಭಾಷೆ, ಹೃದಯದಿಂದ ಬರೋ ಭಾಷೆ ಅಂದಗಾತು” ಅಂದ ವೆಂಕಣ್ಣ ನ ಜೋಕಿಗೆ ಜಾನು ಬಿದ್ದು ಬಿದ್ದು ನಗದಿದ್ದರೂ ಒಂದು ಮುಗುಳ್ನಗು ಅವಳ ಮುಖದಲ್ಲಿತ್ತು. ಅಲ್ಲಿ ಇಲ್ಲಿ ಅಡ್ಡಾಡಿ ಇನ್ನೂ ಕೆಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಸಂಜೆಯಾಗುತ್ತಲೇ ತಮ್ಮ ನಿವಾಸಕ್ಕೆ ವಾಪಸ್ಸು ಹೊರಟರು.
 

Wednesday, March 25, 2015

ಕಾಯಕವೇ ಕೈಲಾಸ

(http://www.panjumagazine.com/?p=10456)

ಅವತ್ತು ಸಂಜೆ ಬೇಗನೆ ಮನೆಗೆ ತಲುಪಿದ ವೆಂಕಣ್ಣನ ಕಿವಿಯಲ್ಲಿ ಜೇಮ್ಸ್ ನ ಮಾತುಗಳು ಗುಂಯ್ ಗುಡುತ್ತಿತ್ತು. ಹೌದೆ? ನಾವೆಲ್ಲ ಅಮೆರಿಕಾಕ್ಕೆ ಬಂದು ಇವರ ಕೆಲಸಗಳನ್ನು ಕಸಿಯುತ್ತಿದ್ದೇವೆಯೇ? ಅನ್ನುವ ಪ್ರಶ್ನೆ ಇವನ ಕಾಡತೊಡಗಿತ್ತು. ಜಾನು ಮತ್ತು ಖುಷಿ ಇನ್ನೂ ಅಮೆರಿಕಾದ ದಿನಗಳಿಗೆ ಹೊಂದಿಕೊಳ್ಳದೆ ದಿನವಿಡಿ ನಿದ್ದೆಯಲ್ಲೇ ಕಳೆದಿದ್ದರು. ಇವನಿಗೂ ನಿದ್ದೆ ಎಳೆಯುತ್ತಿದ್ದರೂ ಬಲವಂತವಾಗಿ ಅದನ್ನು ತಡೆಯುತ್ತಿದ್ದ. ಆಗ ತಾನೇ ಎದ್ದು ಕುಳಿತಿದ್ದ ಖುಷಿಗೆ ಬೇರೆ ಏನೂ ಮಾಡಲು ತೋಚದೆ ಅಲ್ಲಿನ ಟೀವಿಯಲ್ಲಿ ಬರುತ್ತಿದ್ದ ಕಾರ್ಟೂನು ನೋಡುತ್ತಿದ್ದಳು.  ಜಾನು ರಾತ್ರಿಗೆ ಊಟಕ್ಕೆ ಏನು ಮಾಡುವುದೆಂಬ ಗೊಂದಲದಲ್ಲಿದ್ದಳು. ರಾತ್ರಿ ಒಂಬತ್ತಾದರೂ ಇನ್ನೂ ಸೂರ್ಯ ಮುಳುಗಿರಲಿಲ್ಲ.  ಅವರಿಗೆಲ್ಲ  ಅದೊಂದು ವಿಚಿತ್ರವಾದ ವಿದ್ಯಮಾನವಾಗಿತ್ತು. ಭಾರತದಲ್ಲೂ ಹೀಗೆ ಇದ್ದರೆ ಎಷ್ಟು ಚೆನ್ನ ಅಂತ ಜಾನು ಹೇಳುತ್ತಿದ್ದಳು. ವಿದ್ಯುತ್ ಸಮಸ್ಯೆಯಾದರೂ ಬಗೆ ಹರಿಯುತ್ತೆ ಅಲ್ಲವೇ? ಎಂದ ಅವಳ  ಪ್ರಶ್ನೆಗೆ ವೆಂಕಣ್ಣ ನಕ್ಕು ಸುಮ್ಮನಾದ. ಕತ್ತಲಾದ ಮೇಲೆ ಮಲಗುವ ರೂಢಿ ಇಲ್ಲಿಗೆ ಅನ್ವಯವಾಗದೆಂಬ ಸತ್ಯ ಬಹು ಬೇಗನೆ ಗೋಚರಿಸಿತು. ರಾತ್ರಿ ೧೦ ಗಂಟೆಗೆ ಇನ್ನೂ ಸೂರ್ಯಾಸ್ತವೆ ಆಗಿಲ್ಲದಿದ್ದ ಮೇಲೆ ಕತ್ತಲಾಗುವವರೆಗೆ ಕಾಯುವ ತಾಳ್ಮೆ ಯಾರಿಗಿತ್ತು? ವೆಂಕಣ್ಣನ ಪರಿವಾರ ಊಟ ಮಾಡಿ  ಮಲಗಿತ್ತು. 
 
ಸುಜಯ್ ಅವತ್ತು ಉತ್ಸಾಹದಿಂದಲೇ ಕೆಲಸಕ್ಕೆ ಬಂದಿದ್ದ. ಪ್ರತಿ ಸೋಮವಾರ ಕಾಡುತ್ತಿದ್ದ ಬೇಸರಿಕೆ ಇಂದಿರಲಿಲ್ಲ. ಅದಕ್ಕೆ 'ನಿಶಾ'ಗಮನವೇ ಕಾರಣವಲ್ಲದೆ ಬೇರೇನೂ ಇರಲಿಲ್ಲ. ತನ್ನ ಜಾಗದಲ್ಲಿ ಕುಳಿತು laptop ಹೊತ್ತಿಸಿದವನಿಗೆ ಅದರ ಫಲಕದಲ್ಲಿ ನಿಶಾ ಳ  ಮುಖಾರವಿಂದವನ್ನು ಕಂಡಂತಾಗಿ ಬೆಚ್ಚಿ ಬಿದ್ದ. ಅವಳ್ಯಾಕೋ ಇವನನ್ನು ಜಾಸ್ತಿಯೇ ಅನ್ನಿಸುವಷ್ಟು ಆವರಿಸಿಕೊಳ್ಳತೊಡಗಿದ್ದಳು. ಮುಖ ಕೊಡವಿಕೊಂಡು ಅವತ್ತಿನ email ಗಳ ಪರಿಶೀಲಿಸತೊಡಗಿದ.  ವೆಂಕಣ್ಣ ಅಮೆರಿಕಾದ ಪ್ರವಾಸದಲ್ಲಿದ್ದುದರಿಂದ ಅವನ ಅನುಪಸ್ಥಿತಿಯಲ್ಲಿ ಅವನ  ಟೀಮಿನ ಉಸ್ತುವಾರಿಯನ್ನೂ ಇವನೇ ನೋಡಿಕೊಳ್ಳಬೇಕೆಂದು ಇವನ ಬಾಸ್ ಸುಧೀರ್ ಅಪ್ಪಣೆ ಹೊಡಿಸಿದ್ದ. ವೆಂಕಣ್ಣನ ಟೀಮ್ ನಲ್ಲಿ ಇಪ್ಪತ್ತು ಜನರಿದ್ದರು. ತನ್ನ ಟೀಮ್ ನೋಡಿಕೊಳ್ಳುವುದರ ಜೊತೆಗೆ ಇದೊಂದು ಜವಾಬ್ದಾರಿ ಸುಜಯ್ ಗೆ ಭಾರವೆನಿಸಿತ್ತು. ಅದರೂ ಏನೂ ಮಾಡುವ ಹಾಗಿರಲಿಲ್ಲ. 
ಇವನು ತನ್ನ laptop ನಲ್ಲಿ ಮುಳುಗಿದ್ದಾಗಲೇ, ಎದುರಿಗೆ ಪ್ರದೀಪ್ ಬಂದು ನಿಂತಿದ್ದ. ಏನೋ ತುರ್ತಾದ ವಿಷಯ ಮಾತಾಡುವುದಿದೆಯೆಂದು ಹೇಳಿದ. ಪ್ರದೀಪ್ ಒಬ್ಬ ಡೆವೆಲಪರ್. ತಾನು ಏನೋ ಕೆಲಸದಲ್ಲಿದ್ದಾಗಲೇ ಅವನು ಬಂದು ತೊಂದರೆ ಕೊಡುತ್ತಿದ್ದುದು ಇವನಿಗೆ ಕೋಪ ತರಿಸಿತ್ತು. ಈಗ ಆಗೋಲ್ಲ, ಆಮೇಲೆ ಮಾತಾಡೋಣ ಅಂದಿದ್ದಕ್ಕೆ, ಇಲ್ಲ ತುಂಬಾ ಅರ್ಜೆಂಟ್ ಅಂತ ಸೊಟ್ಟ ಮೊರೆ ಹಾಕಿ ನಿಂತನವನು. ಅವನು ಹೋಗುವ ಲಕ್ಷಣ ಕಾಣದಿದ್ದಾಗ ಕೂಡು ಅಂತ ಸನ್ನೆ ಮಾಡಿದ. ಆದರೂ ಬಂದ ಕೂಡಲೇ ಮಾತಾಡಿಸಿದರೆ ಮ್ಯಾನೇಜರ್ ಹುದ್ದೆಯನ್ನು  ಅವಮಾನಿಸಿದಂತೆ ಅಲ್ಲವೇ? ಯಾವುದೋ ಮುಖ್ಯವಾದ ಒಂದು ಕೆಲಸದಲ್ಲಿದ್ದಂತೆ ನಟಿಸಿ ಅವನಿಗೆ ಸ್ವಲ್ಪ ಕಾಯಿಸಿ, ಆಮೇಲೆ  "ಎಸ್?" ಅಂದ. ಪ್ರದೀಪ್ ಈಗ ಕೆಲವು ದಿನಗಳಿಂದ ತನ್ನ ಆರೋಗ್ಯ ಕೆಟ್ಟು ಹೋಗಿದೆ ಎಂದು ಹೇಳಿ, ತನ್ನ ಬೆನ್ನು ನೋವು ತುಂಬಾ ಹೆಚ್ಚಾಗಿದೆಯೆಂತಲೂ, ತನಗೆ ವೈದ್ಯರು ಕೆಲವು ತಿಂಗಳ ಮಟ್ಟಿಗೆ ಆಫೀಸಿಗೆ ಹೋಗಲೇಕೂಡದೆಂಬ ಹುಕುಂ ಮಾಡಿದ್ದಾರೆಂದು ಹೇಳಿದ. ಸುಜಯ್ ಗೆ ನಗು ಬಂದಿತ್ತು. ಯಾಕಂದ್ರೆ ಆಫಿಸಿನಲ್ಲಿ ಅವನು ಮಾಡುತ್ತಿದ್ದ ಕೆಲಸವೂ ಅಷ್ಟಕ್ಕಷ್ಟೇ.

…ಪ್ರದೀಪನ ದಿನಚರಿಯೇ ಹಾಗಿತ್ತು. ಬೆಳಿಗ್ಗೆ ಹನ್ನೊಂದಕ್ಕೆ ಆಫಿಸಿಗೆ ಬಂದು, ತನ್ನ ಚೀಲ, ಊಟದ ಡಬ್ಬಿಗಳನ್ನು ತಾನು ಕುಳಿತುಕೊಳ್ಳುವ ಜಾಗದಲ್ಲಿ ಸ್ಥಾಪಿಸಿ, ಕಂಪ್ಯೂಟರ್ ನ ಹೊತ್ತಿಸುತ್ತಿದ್ದ. ಅದ್ಯಾಕೆ ಅಂದರೆ, ನೋಡಿದವರಿಗೆ ಗೊತ್ತಾಗುವುದು ಬೇಡವೇ ಇವನು ಬಂದ ವಿಷಯ! ಅಷ್ಟು ಮಾಡಿದ ಮೇಲೆ ಚಹಾ ಕುಡಿಯಲು ಅಂತ ಕೆಳಗೆ ಹೋಗುತ್ತಿದ್ದ. ಸೀನು ಮತ್ತು ನಾರಾಯಣ ಅವನ ಜೊತೆಗಾರರು.  ಚಹದ ಜೊತೆಗೆ ಒಂದಿಷ್ಟು ಹರಟೆ. ಅದರಲ್ಲಿ ಇಣುಕುತ್ತಿದ್ದ ವದಂತಿಗಳ ವಿಶ್ಲೇಷಣೆ… ಹೀಗೆ ಎಲ್ಲ ಮುಗಿಸಿ ತನ್ನ ಸ್ವ ಸ್ಥಾನಕ್ಕೆ ಹಿಂತಿರುಗುವುದರೊಳಗೆ ಮಟ ಮಟ ಮದ್ಯಾಹ್ನದ ೧೨ ಗಂಟೆ. ಅವತ್ತಿನ ಕೆಲಸವೇನಿರಬಹುದು ಎಂದು ಪರಿಶೀಲಿಸುವುದರಲ್ಲೇ ಊಟದ ಸಮಯವಾಗಿ ಬಿಡುತ್ತದೆ. ಪಾಪ ಅವನಾದರೂ ಏನು ಮಾಡುವುದು? ಎಲ್ಲಾನೂ ಮಾಡೋದು ಹೊಟ್ಟೆಗಾಗಿಯೇ ಅಲ್ಲವೇ? ಹೊತ್ತಿಗೆ ಸರಿಯಾಗಿ ಇವನ ಸಹಚರರರೂ ಹಾಜರು! ಮತ್ತೆ ಊಟಕ್ಕೆ ಅಂತ ಹೋದವನು ಬಂದು ಒಂದು ಮಟ್ಟಕ್ಕೆ ಕೆಲಸಕ್ಕೆ ಅಂತ ಕೂಡುವುದರೊಳಗೆ 3 ಗಂಟೆ. ಒಂದೆರಡು ತಾಸು ಕೆಲಸ ಮಾಡಿದಂಗೆ ಮಾಡಿ, ಮತ್ತೆ ಚಹಾ ಕುಡಿಯುವುದರೊಳಗೆ ಸಂಜೆಯಾಗಿ, ಮನೆಗೆ ಹೊರಡುವ ತಯ್ಯಾರಿಯೇ! ಅದೂ ಅಲ್ಲದೆ ಅವನು ಒಂದು ವಾರ ಸರಿಯಾಗಿ ಆಫೀಸಿಗೆ ಬಂದನೆಂದರೆ ಮುಂದಿನ ವಾರ  ಎರಡು ದಿನ ರಜಾ ಹಾಕೋದು ನಿಶ್ಚಿತ. ಹೊಟ್ಟೆ ಸರಿಯಿಲ್ಲವೆಂತಲೋ ಕೆಮ್ಮು ಅಂತಲೋ ಏನೋ ಒಂದು ನೆಪ. ಅವನ ರಜೆ ಹಾಕುವ ಬಗೆಯನ್ನು ಅವನ ಕೆಲವು ಕ್ರಮಗಳಿಂದ ಊಹಿಸಿಬಿಡಬಹುದಾಗಿತ್ತು, ಅದು ಎಷ್ಟೋ ಸರ್ತಿ ನಿಜವೂ ಆಗಿರುತ್ತಿತ್ತು. ಉದಾಹರಣೆಗೆ, ಇವತ್ತು ಅವನು ಸ್ವೇಟರ್ ಹಾಕಿಕೊಂಡು ಬಂದನೆಂದರೆ ಮರುದಿನ ಖಂಡಿತವಾಗಿಯೂ ಜ್ವರ ಬರುತ್ತಿತ್ತು! ರಜೆ ಹಾಕೆ ತೀರುತ್ತಿದ್ದ! ಇದನ್ನು ಬಿಟ್ಟರೆ, ಯಾವುದಾದರೂ ತ್ವರಿತವಾಗಿ ಮುಗಿಸುವ ಕೆಲಸವನ್ನು ಕೊಟ್ಟರೂ ಅಷ್ಟೇ, ಅವನ ಹೊಟ್ಟೆ ನೋವು ಹಠಾತ್ ಆಗಿ ಜಾಸ್ತಿಯಾಗಿಬಿಡುತ್ತಿತ್ತು! ಆಗ ಅನಿವಾರ್ಯವಾಗಿ ಸುಜಯ್ ಬೇರೆ ಯಾವನೊ ಪ್ರಾಮಾಣಿಕ ಕೆಲಸಗಾರನಿಗೆ ಈ ಪ್ರದೀಪನ ಕೆಲಸವನ್ನೂ ಹೇರುತ್ತಿದ್ದ. ಆ ಇನ್ನೊಬ್ಬ ಡೆವೆಲಪರ್ ಇವನ ಕೆಲಸ ಮುಗಿಸಿದ ಮೇಲೆ ಪ್ರದೀಪನ ಹೊಟ್ಟೆ ನೋವು ತಂತಾನೇ ಕಡಿಮೆಯಾಗಿ ಮತ್ತೆ ಆಫೀಸಿಗೆ ಬರುತ್ತಿದ್ದ. ಅವನು ಹೀಗೆ ಆರಾಮವಾಗಿ ಇದ್ದುದರಿಂದಲೇ ಈ ಕಂಪನಿಯಲ್ಲಿ ಹತ್ತು ವರ್ಷದಿಂದ ಅಲ್ಲೇ ಕಚ್ಚಿಕೊಂಡಿದ್ದಾನೆ. ಅವನಿಗೆ ಮೇಲ್ವರ್ಗಕ್ಕೆ ಬಡ್ತಿ ಪಡೆಯುವ ಆಸೆಯೂ ಇಲ್ಲ. ಬರುವ ಪುಗಸಟ್ಟೆ ಸಂಬಳ ಬರುತ್ತಿದ್ದರಷ್ಟೇ ಸಾಕು…
 
ಇಂತಹ ಘಟಾನುಘಟಿ ಡೆವೆಲಪರ್ ಎರಡು ಮೂರು ತಿಂಗಳು ಆಫೀಸಿಗೆ ಬರಲಾಗದು ಎಂದು ಹೇಳುತ್ತಿದ್ದರೆ ಸುಜಯ್ ಗೆ ಖುಷಿ ಆಗದೆ ಇದ್ದೀತೆ? ಹೀಗೆ ಅವನ ರಜೆಯನ್ನೇ ನೆಪ ಮಾಡಿಕೊಂಡು ಅವನನ್ನು ಹೊರ ಹಾಕುವ ಸುವರ್ಣ ಅವಕಾಶವೂ ಇವನಿಗೆ ಕಂಡಿತು. ಆದರೂ ಕೆಲಸವನ್ನೇ ಮಾಡದ ಅವನ ಬೆನ್ನಿಗೆ ನೋವಾದರೂ ಬರಲು ಹೇಗೆ ಸಾಧ್ಯ ಅಂತ ಮನದಲ್ಲೇ ಆಶ್ಚರ್ಯಪಟ್ಟ! ರಜೆ ಕೊಡಲು ಕೂಡಲೇ ಒಪ್ಪಿಗೆ ಕೊಟ್ಟ. ಆದರೆ ಅಲ್ಲಿ ರಜೆ ಯಾರು ಕೇಳಿದ್ದು? ಪ್ರದೀಪ, ತಾನು ಹೇಳಿದ್ದು ಹಾಗಲ್ಲ ಅಂದ. ಮತ್ತೆ ಏನು ಅನ್ನುವ ಸುಜಯ್ ನ ಗಂಟು ಮುಖದ ಪ್ರಶ್ನೆಗೆ, ತಾನು ಆಫೀಸಿಗೆ ಬರಲಾಗದು, ಆದರೆ ಮನೆಯಿಂದಲೇ ಕೆಲಸ ಮಾಡುವೆನೆಂದೂ, ಅದಕ್ಕಾದರೆ ವೈದ್ಯರು ಅಡ್ಡಿ ಇಲ್ಲವೆಂದು ಹೇಳಿದ್ದಾರೆಂದೂ ಹೇಳಿ, ಆ ವೈದ್ಯರ ಶಿಫಾರಸ್ಸನ್ನು ಇವನ ಮುಂದಿರಿಸಿ ಕೈ ಕಟ್ಟಿ ಕೂತ! ಕಣ್ಣ ಮುಂದೆ ಇದ್ದುಕೊಂಡೇ ಅವನ ಬಳಿ ಕೆಲಸ ಮಾಡಿಸಲಾಗದಿದ್ದಾಗ, ಮನೆಯಿಂದ ಅವನು ಕೆಲಸ ಮಾಡಬಹುದಾದ ಸಾಧ್ಯತೆಗಳೇ ಇಲ್ಲದಾಗಿತ್ತು. ಅದೂ ಅಲ್ಲದೆ, ಮನೆಯಿಂದ ಕೆಲಸ ಮಾಡಲು ಅವನಿಗೆ laptop ಹಾಗೂ ಅದಕ್ಕೆ ಬೇಕಾಗುವ ಅಂತರ್ಜಾಲದ ವ್ಯವಸ್ಥೆ ಮಾಡಿಸಬೇಕು. ಅದೊಂದು ಖರ್ಚಿನ ವ್ಯವಹಾರವಾಗಿತ್ತಲ್ಲದೆ ಅನವಶ್ಯಕವೂ ಆಗಿತ್ತು. ಆದರೂ ಯೋಚನೆ ಮಾಡಿ ಹೇಳುತ್ತೇನೆಂದು ಅವನ ಸಾಗ ಹಾಕಿದ. 
ಅವನ ಬೀಳ್ಕೊಟ್ಟು ಮತ್ತೆ laptop ನ ಪರದೆಯಲ್ಲಿ ಮುಳುಗಿದವನಿಗೆ ಘಂ ಅನ್ನುವ ಪರಿಮಳ ಹೊಡಿದೆಬ್ಬಿಸಿತು. ಕತ್ತೆತ್ತಿ ನೋಡಿದವನ ಎದುರು ನಿಶಾ ನಿಂತಿದ್ದಳು! ಅವಳಲ್ಲೊಂದು ಮುಗುಳ್ನಗುವಿತ್ತು. "ಹಾಯ್" ಅನ್ನುತ್ತ ಕೈ ಕುಲುಕಿದಳವಳು… ಜೊತೆಗೆ ಇವನ ಮನವನ್ನೂ ಕಲುಕಿದಳು. ಯಾರ ಸಾಂಗತ್ಯಕ್ಕೆ ಹಾತೊರೆಯುತ್ತಿದ್ದನೋ, ಅವಳೇ ಬಂದು ದರ್ಶನ ಕೊಟ್ಟರೆ ಎಷ್ಟು ಖುಷಿಯಾಗಬೇಡಾ? ಅವಳು ಇವನನ್ನು  ಊಟಕ್ಕೆ ಕರೆಯಲು ಬಂದಿದ್ದಳು. ಅವನು ಇದ್ದ ಬದ್ದ ಕೆಲಸವ ಮುಂದೂಡಿ ಅವಳ ಹಿಂಬಾಲಿಸಿದ! ತುಂಬಾ ಬ್ಯುಸಿ ಇದ್ದೆನೆಂದು ಕೆಲವೇ ನಿಮಿಷಗಳಿಗೆ ಮೊದಲು ತನ್ನೊಂದಿಗೆ ಮಾತಾಡಲು ನಿರಾಕರಿಸಿದ್ದ ತನ್ನ ಮ್ಯಾನೇಜರ್ ನಿಶಾಳ ಜೊತೆ ಹೊರಟಿದ್ದು ಕಂಡ ಪ್ರದೀಪ್ ತನ್ನ ಪಕ್ಕವೇ ಕೂತಿದ್ದ ಸೀನು ನನ್ನು ನೋಡಿ ಕಣ್ಣು ಮಿಟುಕಿಸಿ ನಕ್ಕ…

Saturday, March 14, 2015

ಅವನ ಹೆಸರೇ ಜೇಮ್ಸ್

(http://www.panjumagazine.com/?p=10216)

ಅಂತೂ ಅಮೆರಿಕಾದಲ್ಲಿ ಬೆಳಗಾಗಿತ್ತು! ಜಾನು ಆ ಸುಸಜ್ಜಿತವಾದ ಫ್ಲಾಟ್ ನ ಒಂದು ಸುತ್ತು ತಿರುಗಿ ಎಲ್ಲವನ್ನೂ  ಪರೀಕ್ಷಿಸುತ್ತಿದ್ದಳು. ಬಟ್ಟೆ ಒಗೆದು, ಒಣಗಿಸುವ ಯಂತ್ರವಿದ್ದದ್ದು  ಅಷ್ಟು ವಿಶೇಷವೆನಿಸದಿದ್ದರೂ  ಪಾತ್ರೆ ತೊಳೆಯುವ ಯಂತ್ರ ಗಮನ ಸೆಳೆಯಿತು. ಸಧ್ಯ ಕೆಲಸದವಳನ್ನು ಕಾಯುವ, ಓಲೈಸುವ ಚಿಂತೆಯಿಲ್ಲವೆನ್ನುವ ಸಮಾಧಾನ ಅವಳಿಗೆ. ಅಡಿಗೆ ಮನೆಯಲ್ಲಿ ಓವನ್, ಹೀಟರ್, ಇಂಡಕ್ಶನ್ ಓಲೆಗಳ ಜೊತೆಗೆ ಸೌಟು, ಪಾತ್ರೆ ಪಗಡಗಳೆಲ್ಲವೂ  ಇದ್ದದ್ದು ಖುಷಿಯಾಯ್ತಾದರೂ ಅಲ್ಲೆಲ್ಲೂ ಲಟ್ಟಣಿಗೆ ಕಾಣದೇ ಅವಳು ಚಿಂತೆಗೊಳಗಾದಳು. ಆಗಲೇ ಸ್ನಾನ ಮುಗಿಸಿ ಬಂದಿದ್ದ ವೆಂಕಣ್ಣ ಇವಳ ಮುಖಭಾವವನ್ನು ಗಮನಿಸಿ, ಲಟ್ಟಣಿಗೆಯ ಸುದ್ದಿ ಕೇಳಿ ಬಿದ್ದು ಬಿದ್ದು ನಕ್ಕ. 
"ನನ್ನ ತಲಿಗೆ ಹೊಡಿಲಿಕ್ಕೆ ಇಲ್ಲೇ ಬೇಕಂದ್ರ ಬ್ಯಾರೆ ಏನರೆ ಕೊಡಸ್ತೀನಿ, ಲಟ್ಟಣಿಗೆ ಇಲ್ಲ ಅಂತ ತಲಿ ಕೆಡಿಸ್ಕೊಬ್ಯಾಡ" ಅಂದದ್ದಕ್ಕೆ…
"ನಿಮ್ಮ ತಲಿ! ಚಪಾತಿ ಹೆಂಗ ಲಟ್ಟಸೋದು ಅಂತ ನನಗ ಚಿಂತಿ ಇದ್ರ ನಿಮಗ ನಿಮ್ಮ ತಲಿ ಚಿಂತಿ.."
"ಅಲ್ಲಲೇ ಇಲ್ಲೇ ಯಾರೂ ಚಪಾತಿ ಮಾಡಂಗಿಲ್ಲ ಅದಕ್ಕ ಅವ್ರ ಅಡಿಗಿ ಮನ್ಯಾಗ ಅದು ಇರಂಗಿಲ್ಲ ತಿಳ್ಕೋ. ಇದ ನೋಡು ಬ್ಯಾಡ ಅನ್ನೋದು. ಇರೋದು ಬಿಟ್ಟು ಇರಲಾರದ್ದರ ಬಗ್ಗೆ ತಲಿ ಕೆಡ್ಸಕೊಬಾರ್ದೂ" ಅಂತ ದೊಡ್ಡ ತತ್ವಜ್ಞಾನವ ಅರುಹಿ…ಹಾಗೆ ಮುಂದುವರಿದು "ಅಮೆರಿಕಾದಾಗ ಇದ್ದಾಗ ಇಲ್ಲಿ ಎಲ್ಲಾರೂ ಇರೂ ಹಂಗ ನಾವ್ ಇರ್ಬೇಕು. ಒಂದ ತಿಂಗಳ ಚಪಾತಿ ತಿಂದಿಲ್ಲ ಅಂದ್ರ ಏನ್ ಧಾಡಿ ಆಗಂಗಿಲ್ಲ" ಅಂತ ಖಡಾ ಖಂಡಿತವಾಗಿ ತನ್ನ ವಿಚಾರ ಧಾರೆ ತಿಳಿಸಿದ.
"ಹಂಗಂದ್ರ ಇಲ್ಲಿಯವರ ಹಂಗ ನಾವೂ ಹಂದಿ, ದನಾ ತಿನ್ಬೇಕು ಅಂತೀರೇನು?" ಅಂದು ವೆಂಕಣ್ಣನ ಬಾಯಿಗೆ ಬೀಗ ಹಾಕಿದಳು. ಅವನು ತೆಪ್ಪಗೆ ಅಂಗಿ ಚಣ್ಣ ಹಾಕಿಕೊಂಡು ಆಫಿಸಿಗೆ ತೆರಳಿದ.          
*****
ವೆಂಕಣ್ಣ ಆಫೀಸಿಗೆ ದರ್ಶನ ನೀಡಿದಾಗ ಇವನ ಕ್ಲೈಂಟ್ ಜೇಮ್ಸ್ ತನ್ನ ಚೇಂಬರ್ ನಲ್ಲಿ ಕೂತು ಏನೋ ಜಗಿಯುತ್ತಿದ್ದ. ತನ್ನ ಮಾಮೂಲಿ ಅಮೆರಿಕಾದ ಶೈಲಿಯಲ್ಲಿ ಇವನ ಬರಮಾಡಿಕೊಂಡು ಕೈ ಕುಲುಕಿ ಇಲ್ಲದ ಸಂಭ್ರಮವನ್ನು ತೋರಿಸಿದ! ಉಭಯ ಕುಶಲೋಪರಿಗಳಾದವು. ಮೊದಲನೇ ದಿನವೇ ಕೆಲಸದ ಬಗ್ಗೆ ಮಾತಾಡುವುದು ವೆಂಕಣ್ಣನಿಗೂ ಬೇಡವಾಗಿತ್ತು. ಹಾಗೆ ತವಡು ಕುಟ್ಟುತ್ತ ಅವನ ಹವ್ಯಾಸಗಳ ಬಗ್ಗೆ ಕೇಳತೊಡಗಿದ. ಜೇಮ್ಸ್ ಸಾಹಸ ಪ್ರವೃತ್ತಿಯವನಾಗಿದ್ದು ಅವನ ಮಾತುಗಳಿಂದ ಸ್ಪಷ್ಟವಾಯ್ತು. ತನ್ನ ಸಾಹಸಗಾಥೆಯನ್ನು ಮುಂದುವರಿಸುತ್ತಾ…      
"ನಾನವಾಗ ಸುಮಾರು ಹದಿನಾರು ವಯಸ್ಸಿನ ಹುಡುಗ" ಅಂತ ಹೇಳುತ್ತಾ ತನ್ನ ನೀಳವಾದ, ಚಿನ್ನದ ಎಳೆಗಳಂತಿದ್ದ ಕೂದಲನ್ನು ಕೈಯಿಂದ ಸರಿಮಾಡಿಕೊಳ್ಳುತ್ತ ಹೇಳಿದ. ಸೂರನ್ನು ಎವೆಯಿಕ್ಕದೆ ದೃಷ್ಟಿಸುತ್ತಿದ್ದ ಅವನ ನೀಲಿ ಕಣ್ಣುಗಳು ತನ್ನದೇ ಭೂತಕಾಲದ ಸಿನಿಮಾ ನೋಡುತ್ತಿದ್ದದ್ದು ಸ್ಪಷ್ಟವಾಗಿತ್ತು. ಮುಂದುವರಿಸಿದ…
"… ನಾನವತ್ತು ಡರ್ಟ್ ಬೈಕಿಂಗ್ ಮಾಡೊಕೆ ಹೋಗಿದ್ದೆ. ಇಲ್ಲೆ ಹತ್ತಿರದ ಮರುಭೂಮಿಯದು. ಬೆಟ್ಟವೇರಿ ಮೇಲೆ ಹೋಗಿದ್ದವನಿಗೆ, ಕೆಳಗಿಳಿಯುವಾಗ ಇನ್ನೂ ಜೋರಾಗಿ ಇಳಿಯುವ ಉಮೇದಿ. ಆ ಉಮೇದಿಯಲ್ಲಿ ನನ್ನ ಬೈಕಿನ ಗಾಲಿಗೆ ತೊಡರಿದ ಆ ಕಲ್ಲು ನನಗೆ ಕಂಡೆ ಇಲ್ಲ. ಉರುಳುರುಳಿ ಬಿದ್ದೆ. ನನ್ನ ಹೆಲ್ಮೇಟು ತುಂಡು ತುಂಡಾಗಿತ್ತು. ಅದರ ಜೊತೆಗೆ ನನ್ನ ಕೆಳ ದವಡೆಯ ಹಲ್ಲುಗಳೂ ಕೂಡ. ನಾನು ಬದುಕಿದ್ದೆ ಒಂದು ಪವಾಡ" ಅಂತ ಹೇಳಿಕೊಂಡು ಗಹಗಹಿಸಿ ನಗುತ್ತಿದ್ದ. ಡರ್ಟ್ ಬೈಕಿಂಗ್ ಅಂದ್ರೆ  ಕುರುಚಲು ಗಿಡಗಳು ಬೆಳೆದ ಮರುಭೂಮಿಯಂತಹ, ಏರಿಳಿತದ ವಿಶಾಲ ಭೂಮಿಯಲ್ಲಿ, ಕುರ್ರೋ ಮರ್ರೋ ಎಂದು ಕೂಗುವ ಬಗೆ ಬಗೆಯ ಬೈಕುಗಳನ್ನು ಓಡಿಸುವುದು ಅಂತ ವೆಂಕಣ್ಣನಿಗೆ ಮೊದಲೇ ಗೊತ್ತಿತ್ತು. ಅದರ ಬಗ್ಗೆ ಮತ್ತೆ ಏನಾದರೂ ಹೇಳಲು ಶುರು ಮಾಡಬಹುದೆಂದು, ಮಾತು ಬದಲಿಸುವ ಪ್ರಯತ್ನದಲ್ಲಿ…
"ನಿನಗೆ ವಯಸ್ಸೆಷ್ಟು ಜೇಮ್ಸ್?" ಅರವತ್ತಾದ್ರೂ ಆಗಿರಲೇಬೇಕು ಅನ್ನುವ ಕುತುಹಲದಿಂದ ಕೇಳಿದ.
ಅವನು "ಐವತ್ಮೂರು" ಅಂದದ್ದು ಕೇಳಿ ಆಶ್ಚರ್ಯಪಟ್ಟು ಅರೇ ಇವನೆಷ್ಟು ವಯಸ್ಸಾದವ್ನ ಥರ ಕಾಣ್ತಾನೆ! ಇಲ್ಲಿ ಬೆಳವಣಿಗೆ ತುಂಬಾ ಜಾಸ್ತಿ. ಅದಕ್ಕೆ ನಮಗಿಂತ ಒಂದ್ ಹತ್ತು ವರ್ಷ ಜಾಸ್ತಿನೇ ಕಾಣ್ತಾರೇನೋ ಅಂದುಕೊಂಡ ಇವನು.  
"ಎಷ್ಟು ಮಕ್ಳು?"
"ನನಗೆ ಇಬ್ಬರು ಹೆಂಡತಿಯರು. ಒಟ್ಟು ನಾಲ್ಕು ಮಕ್ಕಳು. ಇಬ್ಬರು ಹೆಣ್ಣು ಮಕ್ಳು. ಒಬ್ಬಳದು ಮದುವೆ ಆಗಿದೆ. ಅವಳು ತನ್ನ ಗಂಡನ ಜೊತೆಗೆ ನನ್ನ ಮನೆಯಲ್ಲೇ ಇರ್ತಾಳೆ"
ಓಹ್ ಇಲ್ಲೂ ಮನೆ ಅಳಿಯ ಸಂಸ್ಕೃತಿ ಇದೆಯಾ? ಇವನಿಗೆ ಆಶ್ಚರ್ಯವಾಗಿತ್ತು.
"… ಇನ್ನೊಬ್ಳು ಮಗಳಿಗೆ ಇಪ್ಪತ್ತು ವರ್ಷ ವಯಸ್ಸು. ಅವಳಿಗಿನ್ನೂ ಮದುವೆಯಾಗಿಲ್ಲ. ಅವಳು ಬೇರೆ ಮನೆ ಮಾಡಿಕೊಂಡಿದ್ದಾಳೆ"
ವಾಹ್! ಇದೇ ಅಲ್ವೆ ನಮಗೂ ಇವರಿಗೂ ಇರುವ ವ್ಯತ್ಯಾಸ! ಮದುವೆಯಾಗದ ಹೆಣ್ಣು ಮಗಳು ಭಾರತದಲ್ಲಿ ಅಪ್ಪನ ಮನೆಯಲ್ಲಿರುತ್ತಾಳೆ, ಇಲ್ಲಿ ನೋಡಿದರೆ ಇವನ ಅವಿವಾಹಿತ ಮಗಳು ಬೇರೆ ಮನೆ ಮಾಡಿಕೊಂಡಿದ್ದಾಳೆ. ನಾವು ಮದುವೆಯಾದ ಮಗಳನ್ನು ಗಂಡನ ಮನೆಗೆ ಕಳಿಸುತ್ತೇವೆ, ಆದರೆ ಇಲ್ಲಿ ಮದುವೆಯಾದವಳು ಗಂಡನ ಜೊತೆಯಲ್ಲೇ ತನ್ನ ಅಪ್ಪನ ಮನೆಯಲ್ಲಿದ್ದಾಳಂತೆ! ಇಲ್ಲಿಯ ಸಂಸ್ಕೃತಿ ತುಂಬಾ ಆಸಕ್ತಿದಾಯಕವಾಗಿದೆ ಅನಿಸಿತವನಿಗೆ. 
"…ಇಬ್ರು ಗಂಡು ಮಕ್ಕಳು ಇದ್ದಾರೆ. ಇನ್ನೂ ಕಲೀತಿದಾರೆ."
"ನಿನಗೆಷ್ಟು ಮಕ್ಕಳು?" ಜೇಮ್ಸ್ ಇವನಿಗೆ ಕೇಳಿದ. ಇವನು ತುಂಬಾ ಕೀಳರಿಮೆಯಲ್ಲಿದ್ದ! ಅವನ ಸಾಧನೆ ಮುಂದೆ ತಂದೇನೂ ಅಲ್ಲ ಅನಿಸಿತ್ತು.
"ಒಬ್ಳೇ ಹೆಂಡ್ತಿ, ಒಬ್ಳೆ ಮಗಳು" ಅಂದ. ಅವನು ನಕ್ಕು ಸುಮ್ಮನಾದ.
"ನನಗೆ ಓಡೋದು ಅಂದ್ರೆ ತುಂಬಾ ಇಷ್ಟ. ಒಂದು ಟೈಮಿನಲ್ಲಿ, ದಿನಕ್ಕೆ ೧೦ ಮೈಲಿ ಓಡುತ್ತಿದ್ದೆ." ೧೦ ಮೈಲಿಯಂದ್ರೆ ಹೆಚ್ಚು ಕಡಿಮೆ ೧೬ ಕಿಲೋಮೀಟರ್! ಇವನು ಸುಮ್ನೆ ರೈಲು ಬಿಡ್ತಿರಬಹುದೆ ಅನಿಸ್ತು ಇವನಿಗೆ. 
"…. ಸೈಕಲ್ಲು ಓಡಸ್ತಿದ್ದೆ. ಒಂದು ಸಲ ನಾನು ಏಷ್ಟು ವೇಗವಾಗಿ ಓಡಿಸ್ತಿದ್ದೆ ಅಂದ್ರೆ. ಆ ರಸ್ತೆಯ ವೇಗ ಮಿತಿಯನ್ನು ಮೀರಿದ್ದೆ. ಪೋಲಿಸ್ ನನ್ನ ಹಿಡಿದು ಎಚ್ಚರಿಕೆ ಕೊಟ್ಟಿದ್ದ. ಸ್ವಲ್ಪ ದಿನ ನಾನು ಕುದುರೆ ಓಡ್ಸೋ ಟ್ರೇನಿಂಗೂ ಕೊಡ್ತಿದ್ದೆ."  
ಹಾಗೆ ಹೇಳುತ್ತಾ ತನ್ನ ಎರಡೂ ಕಾಲುಗಳನ್ನು ತನ್ನ ಡೆಸ್ಕಿನ ಮೇಲೆ ಅನಾಮತ್ತಾಗಿಟ್ಟ. ದುರಾದೃಷ್ಟಕ್ಕೆ ಅವನೆದುರೇ ಇವನು ಕುಂತಿದ್ದನಲ್ಲ! ಅವನ ಕಾಲುಗಳು ಹೆಚ್ಚು ಕಡಿಮೆ ಇವನ ಮುಂದೇಯೇ ಇದ್ದವು! ಅವರಿಗದು ಮಾಮೂಲಿ, ಆದರೆ ಇವನಿಗೆ ಅದು ಸರಿ ಹೋಗಬೇಕಲ್ಲ!
ಇವನು ಪಕ್ಕದಲ್ಲಿದ್ದ ಅವನ ಪುಸ್ತಕದ ಶೆಲ್ಫ್ ನೋಡುವ ನೆಪದಲ್ಲಿ ಎದ್ದು ಅಲ್ಲಿಗೆ ಹೋದ. 
 "ಇದೆಲ್ಲಾ ನಿನ್ನ ಪುಸ್ತಕಗಳೆ?" ಅಂದ. ಅವನೂ ಎದ್ದು ಬಂದು ತನ್ನ ಒಂದೊಂದೆ ಪುಸ್ತಕಗಳ ಬಗ್ಗೆ ತುಂಬಾ ಅಸ್ಥೆಯಿಂದ ಹೇಳತೊಡಗಿದ. ಇವನೂ ಕುತೂಹಲದಿಂದ ಕೇಳುತ್ತಿದ್ದ. ಅವನು ತುಂಬಾ ಓದುತ್ತಾನೆ ಅನಿಸಿತು. ಅವನಿಗೆ ಹೆಚ್ಚು ಕಡಿಮೆ ೨೫ ವರ್ಷಗಳ ಅನುಭವವಿದೆಯಂತೆ. ಅವನಾಗಲೇ ಡೈರೆಕ್ಟರ್ ಆದರೂ ತಾಂತ್ರಿಕ ವಿಷಯಗಳ ಬಗ್ಗೆ ತುಂಬಾ ಆಸಕ್ತಿ. ಅವನು ಇನ್ನೂ software engineer ತರಹ coding ಮಾಡುತ್ತಾನೆ. 
"ನೀನು ಡೈರೆಕ್ಟರ್ ಆಗಿದ್ದರೂ ಇನ್ನೂ coding ಮಾಡುತ್ತೀಯಲ್ಲ, ಮೆಚ್ಚಬೇಕು ಬಿಡು ನಿನ್ನ" ಅಂದ. ಅವನು ಮುಗುಳ್ನಕ್ಕ. ಇವನು ಮುಂದುವರೆಸಿ "ನಮ್ಮಲಾದರೆ ಟೀಮ್ ಲೀಡ್ ಆದ್ರೆನೇ ಸಾಕು ಕೋಡಿಂಗ್ ಬಿಟ್ಟು ಬಿಡ್ತೀವಿ. ಆಮೇಲೆಲ್ಲಾ ಬರಿ ಮ್ಯಾನೇಜ್ ಮೆಂಟ್. ಇದಕ್ಕೆಲ್ಲಾ ಹೇಗೆ  ಉತ್ಸಾಹ ಬರುತ್ತೆ ನಿಮಗೆ ಅಂತ?" ವೆಂಕಣ್ಣ ಸ್ವಲ್ಪ ಘಮಿಂಡಿಯಿಂದಲೇ ಹೇಳಿದನೇನೊ. ಅವನು ಮತ್ತೆ ನಕ್ಕ. "ಅದು ನನಗೆ ಇಷ್ಟ ಅದಕ್ಕೇ ಮಾಡ್ತೀನಿ. ಬಹುಷಃ ಇಲ್ಲಿ ಜನರನ್ನ ಮ್ಯಾನೇಜ್ ಮಾಡೋದಕ್ಕೆ ಅಷ್ಟೆಲ್ಲ ಪ್ರಯಾಸ ಪಡಬೇಕಿಲ್ಲ. ಅದಕ್ಕೆ ನಮ್ಮ ಸಮಯವೆಲ್ಲ ಪ್ರೊಡಕ್ಟಿವ್ ಆಗಿ ಕೋಡಿಂಗ್ ಮಾಡ್ತೀವಿ" ಅಂದು ಇವನಿಗೆ ಸಿಟ್ಟು ಬರಿಸಿದ.
ಎಷ್ಟೊಂದು ಕೊಬ್ಬು ನನ್ ಮಗನಿಗೆ. ಅಂದ್ರೆ ಭಾರತೀಯರನ್ನು ಮ್ಯಾನೇಜ್ ಮಾಡೊದು ಕಷ್ಟ ಹಾಗೂ ನಾವು ಮ್ಯಾನೇಜ್ ಮಾಡೋದು ಪ್ರೊಡಕ್ಟಿವ್ ಅಲ್ಲ ಅಂತ ಇವನರ್ಥ. ವೆಂಕಣ್ಣನಿಗೆ  ಅವನ ಮೇಲೆ ಸಿಟ್ಟು ಬಂತು.  
ಅವನಿಗೆ ಇವನ ಕೋಪ ಗೊತ್ತಾಯಿತೇನೊ! ಮಾತು ಬದಲಿಸಲು ಕೇಳಿದ ಅನ್ಸುತ್ತೆ. "ನೀನು ಅಮೇರಿಕಾಗೆ ಬರ್ತಿರೋದು ಮೊದಲ ಸಲವೆ?" ಅಂದವನ ಕಣ್ಣಲ್ಲಿ ಕುತೂಹಲಕ್ಕಿಂತ ಅಸಡ್ಡೆ ಇತ್ತು ಅಂತ ಇವನಿಗನ್ನಿಸಿತು. ಇವನೂ ಅಷ್ಟೇ ಅಸಡ್ಢೆಯಿಂದ  "ಇಲ್ಲ, ಇದು ಎರಡನೇ ಬಾರಿ" ಅಂದು, ಕಿಟಕಿಯಿಂದ ಹೊರಗೆ ನೋಡಿದ. ಅಲ್ಲಿಂದ ಹೊರಗೆ ಕಾರ್ ಪಾರ್ಕಿಂಗ್ ಕಾಣುತ್ತಿತ್ತು. ಅಲ್ಲಿಬ್ಬರು ಇವನ ಹಾಗೆಯೇ ಕೆಲಸದ ಮೇಲೋ, ಟ್ರೇನಿಂಗ್ ಸಲುವಾಗಿಯೋ ಅಮೇರಿಕೆಗೆ ಬಂದಿದ್ದ ಭಾರತೀಯರು ಕಂಡರು. ಇವನು ಗಮನಿಸುತ್ತಿದ್ದನ್ನು ಅವನೂ ನೋಡುತ್ತಲೇ ಖಿನ್ನಮನಸ್ಕನಾದಂತೆ ಕಂಡ.  
"ನೀವೆಲ್ಲ ಇಲ್ಲಿಗೆ ಬಂದು ನಮ್ಮ ಕೆಲಸ ಕಸಿಯುತ್ತಿದ್ದೀರಾ!" ಅಂದವನ ಮುಖದಲ್ಲಿ ಒಂದು ಶುಷ್ಕ ನಗು ಇದ್ದುದನ್ನು ವೆಂಕಣ್ಣ ಗಮನಿಸಿದ…

(ಮುಂದುವರಿಯುವುದು)

Tuesday, February 24, 2015

ಹಗಲು ರಾತ್ರಿಗಳ ಗೊಂದಲದಲ್ಲಿ...

(http://www.panjumagazine.com/?p=10099)

ವೆಂಕಣ್ಣ ಯಾರೋ ಒದ್ದೆಬ್ಬಿಸಿದಂತೆ ನಿದ್ದೆಯಿಂದ ಎದ್ದು ಕೂತಿದ್ದ. ಅವನ ನಿದ್ರಾ ಭಂಗಕ್ಕೆ ಕಾರಣವಾಗಿದ್ದು ಗಾಳಿಕುಳಿ ಗೆ ಸಿಕ್ಕು ನಡುಗುತ್ತಿದ್ದ ವಿಮಾನವೋ ಅಥವಾ ಅದರ ಪರಿಣಾಮ ಬಿದ್ದ ಕನಸಿನಿಂದಲೋ ಅವನಿಗೆ ಅರ್ಥವಾಗದಾಯ್ತು. ಆದರೂ ಅವನು  ಕಂಡ ಆ ಕನಸು ಬಲೆ ವಿಚಿತ್ರವಾಗಿತ್ತು. ಅದರಲ್ಲಿ, ಅ ದೊಡ್ಡ ವಿಮಾನದ ತುಂಬಾ ಇವನು ಹಾಗೂ ಜರ್ಮನ್ ವಿಮಾನ ಸಖಿ ಇಬ್ಬರೇ ಇದ್ದರು. ಇವನಿಗೆ ಖುಷಿಯಾಯ್ತಾದರೂ ಆಕಾಶದಲ್ಲಿ ಹಾರುತ್ತಿದ್ದ ವಿಮಾನದಲ್ಲಿ ತಮ್ಮಿಬ್ಬರ ಬಿಟ್ಟು ಉಳಿದವರೆಲ್ಲಿ ಎಂಬ ಆತಂಕದಲ್ಲಿ, ಎಲ್ರೂ ಎಲ್ಲಿಗೆ ಹೋದ್ರು? ಅಂತ ಕೇಳಿದ್ದಕ್ಕೆ ಆ ಸಖಿ, ಫುಟ್ ಬಾಲ್ ಆಡ್ತೀನಿ ಅಂದ್ರು ಅದಕ್ಕೆ ಎಲ್ರನ್ನೂ ಹೊರಗೆ ಕಳಿಸಿದ್ದೀನಿ, ನೀನು ಮಲಗಿದ್ದೆಯಲ್ಲಾ ಅದಕ್ಕೆ ನಿನ್ನನ್ನ ಎಬ್ಬಿಸಲಿಲ್ಲ ಅಂತ ಗಂಭೀರವಾಗಿ ಹೇಳಿ ಇವನ ಎದೆಯಲ್ಲಿ ಬಡಿತವನ್ನು ಹೆಚ್ಚು ಕಡಿಮೆ ನಿಲ್ಲಿಸಿದ್ದಳು! ಅದೃಷ್ಟ ವಶಾತ್ ಅಷ್ಟಕ್ಕೇ ಆ ಕನಸಿನಿಂದ ಎಚ್ಚರವಾಗಿತ್ತವನಿಗೆ. ವಾಸ್ತವಕ್ಕೆ ಬಂದು ದೀರ್ಘ ಉಸಿರೆಳೆದುಕೊಂಡ. ಪಕ್ಕದಲ್ಲಿ ಹೆಂಡತಿ ಇನ್ನೂ ಇದ್ದಳು ಅನ್ನುವುದೂ ಗಮನಿಸಿ ದೊಡ್ಡ ನಿಟ್ಟುಸಿರು ಬಿಟ್ಟ! ಕನಸುಗಳ ಲೋಕವೇ ಒಂದು ವಿಚಿತ್ರ. ನಾವಿರುವ ಪರಿಸರದ ಮೇಲೆ ನಮಗೆ ಬೀಳುವ ಕನಸುಗಳು ತಮ್ಮ ಸೀನುಗಳಲ್ಲಿ ಮಾರ್ಪಾಡು ಮಾಡಿಕೊಳ್ಳುತ್ತವೆ. ಬೆಂಗಳೂರಿನಲ್ಲಿ ಬೀಳುವ ಕನಸೇ ಬೇರೆ, ವಿಮಾನದಲ್ಲಿ ಕಾಣುವ ಕನಸೇ ಬೇರೆ. ಅದರೂ ಆ ಕನಸಿನ ದೆಸೆಯಿಂದ ಈಗ ನಿಜಕ್ಕೂ ಬಾಯಿ ಒಣಗಿ ನೀರಡಿಕೆ ಆಗಿತ್ತಾದರೂ, ಆ ಸಖಿಯನ್ನು ಕರಿಸಿ ನೀರು ಕೇಳಿ ಮತ್ತೆ ಹೆಂಡತಿಯ ಹತ್ತಿರ ತಿವಿಸಿಕೊಳ್ಳುವ ತೆವಲು ಅವನಿಗಿರಲಿಲ್ಲ. ಅದಕ್ಕೇನೆ ನೀರಿದ್ದ ಕಡೆಯೇ ಕುದುರೆ ಹೋಗಬೇಕು ಎಂಬಂತೆ ತಾನೇ ಎದ್ದು ಸಖಿಯನ್ನು ಹುಡುಕಿಕೊಂಡು ಹೋಗಿ ಮನಃ ಪೂರ್ತಿ ನೀರು ಕುಡಿದು ಅವಳಿಗೊಂದು ತುಂಬು ಹೃದಯದ  ಥ್ಯಾಂಕ್ಸ್ ಹೇಳಿ ವಾಪಸ್ಸು ಬಂದ. 
 
ಅಂತೂ ವಿಮಾನ ಜರ್ಮನಿಯ ಭೂ ಸ್ಪರ್ಶ ಮಾಡಿ, ಒಂದಿಷ್ಟು ಹೊತ್ತು ಅಲ್ಲಿನ ಔಪಚಾರಿಕತೆಗಳ ಮುಗಿಸಿ, ಅಮೆರಿಕಾಕ್ಕೆ ಹೋಗುವ ಮತ್ತೊಂದು ವಿಮಾನವೇರಿ ಕುಳಿತರು. ಮತ್ತದೇ ಏಕತಾನತೆ, ಬಾಯಾರಿಕೆ, ಕನಸುಗಳು ಮುಂದುವರಿದವು… ಆದರೆ ಈ ಬಾರಿ ಕನಸಿನಲ್ಲಿ ಜರ್ಮನ್ ಸುಂದರಿಯ ಬದಲು ಅಮೆರಿಕಾದ ಸ್ವರ್ಣಕೇಶಿ ಚೆಲುವೆ ಪದೆ ಪದೆ ಬಂದು ನಿದ್ದೆ ಕೆಡಿಸತೊಡಗಿದಳು!
                                                       —–
ಸಂಜೆಯಾದರೂ ಯಾರೊಬ್ಬರು ಕುಣಿಯುವುದ ನಿಲ್ಲಿಸುವ ಲಕ್ಷಣಗಳಿರಲಿಲ್ಲ. ಎಲ್ಲರಲ್ಲೂ ಪರಮಾತ್ಮ ಹೊಕ್ಕಿದ್ದನಲ್ಲ! ಸುಜಯ್ ನಂತೂ ಕುಡಿಯುವುದನ್ನೇ ಮರೆತು ನಿಶಾಳ ಧ್ಯಾನದಲ್ಲೇ ಮುಳುಗಿದ್ದ. ಅವಳ ನಗು ಅವನಿಗೆ ಮದ್ಯಕ್ಕಿಂತ ಜಾಸ್ತಿ ಕಿಕ್ಕು ಕೊಟ್ಟಿತ್ತು. ಅವಳು ಕುಣಿಯುತ್ತಿದ್ದುದನ್ನು ತದೇಕ ಚಿತ್ತನಾಗಿ ನೋಡುತ್ತಿದ್ದ. ಇದ್ದಕ್ಕಿದ್ದಂತೆ ಇವನ ಮನವರಿತವಳಂತೆ ಇವನ ಬಳಿಗೆ ಬಂದು 'come on lets dance!' ಅಂತ ಇವನ ಎಳೆದೊಯ್ದಳಲ್ಲ! ಇವನು ಬಿರುಗಾಳಿಗೆ ಸಿಲುಕಿ ತನ್ನ ಮೇಲಿನ ನಿಯಂತ್ರಣವನ್ನೇ ಕಳೆದುಕೊಂಡ ತರಗೆಲೆಯಂತಾಗಿ ಅವಳ ಹಿಂದೆಯೇ ನಡೆದಿದ್ದ. ಅವಳು ಕುಣಿಸಿದಂತೆ ಇವನೂ ಕುಣಿಯತೊಡಗಿದ …
 
ಅಂತೂ ಔಟಿಂಗ್ ಅನ್ನುವ ಜಾತ್ರೆ ಕೊನೆಯ ಹಂತ ಮುಟ್ಟಿತ್ತು. ಒಬ್ಬಿಬ್ಬರು ಹಪಹಪಿಸಿ ತಮ್ಮ ದೇಹದ ಸಾಮರ್ಥ್ಯಕ್ಕಿಂತ ಹೆಚ್ಚೇ ಕುಡಿದು, ದಕ್ಕಿಸಿಕೊಳ್ಳಲಾಗದೆ  ಔಕ್ ಔಕ್ ಅಂತ ಅಮ್ಲೆಟ್ ಹಾಕಲು ಶುರು ಮಾಡಿದ್ದರು. ಒಬ್ಬನಂತೂ ಟೈಟ್ ಆಗಿ ಎಲ್ಲರ ಜೊತೆಗೂ ಜಗಳ ಶುರು ಹಚ್ಚಿಕೊಂಡಿದ್ದ. ಇನ್ನೊಬ್ಬ ಕುಡಿದಿರದಿದ್ದರೂ ಕುಡಿದಂತೆ ನಟಿಸಿ ತಾನೂ ಯಾರಿಗೆ ಕಡಿಮೆ ಇಲ್ಲ ಅಂತ ತೋರಿಸುವ ಪ್ರಯತ್ನದಲ್ಲಿದ್ದ. ಇನ್ನೊಂದಿಬ್ಬರು 'ಯಾರಿಗೆ ಬೇಕು ಈ ಲೋಕ … ' ಅಂತ ಅಲ್ಲೇ ಜಾಗ ಸಿಕ್ಕಲ್ಲಿ ಗಡದ್ದಾಗಿ ಗೊರಕೆ ಹೊಡೆಯುತ್ತಿದ್ದರು. ಮತ್ತೂ ಕೆಲವರು, ಕುಡಿದಾಯಿತು ಇನ್ನು ಮನೆಗೆ ಹೋಗಿ ತಂತಮ್ಮ ಹೆಂಡದಿರನ್ನು ಎದುರಿಸುವ ಬಗೆಯೆಂತು ಎನ್ನುವ ಗಹನವಾದ ಯೋಚನೆಯಲ್ಲಿ ಮುಳುಗಿದ್ದರು. 
ಸುಜಯ್ ಮಾತ್ರ ಹೊಸ ಗೆಳತಿಯೊಬ್ಬಳು ದೊರಕಿದ ಸಂಭ್ರಮದಲ್ಲಿದ್ದ! ಎಲ್ಲರಿಗೂ ಬೀಳ್ಕೊಟ್ಟು ಶಾಂತನನ್ನು ತನ್ನ ಕಾರಿನಲ್ಲಿ  ಅವನ ಮನೆಗೆ ಬಿಟ್ಟು ತನ್ನ ಗೂಡಿಗೆ ಮರಳಿದವನು ರಾತ್ರಿ ಎಷ್ಟೋ ಹೊತ್ತಿನವರೆಗೆ ಮತ್ತೆ ನಿದ್ರಾಹೀನನಾಗಿ ಹೊರಳಾಡಿದ. ಅವನನ್ನು ನಿಶಾ ಸಂಪೂರ್ಣವಾಗಿ ಆವರಿಸಿದ್ದಳು!
                                                            ——
ಕಡೆಗೂ ಮೂರು ವಿಮಾನಗಳ ಬದಲಿಸಿ, ಹಗಲು ರಾತ್ರಿಗಳ ಲೆಕ್ಕ ಹಾಕುತ್ತಲೇ, ವೆಂಕಣ್ಣ ಕುಟುಂಬ ಸಮೇತನಾಗಿ ಸ್ಯಾಂಡಿಗೆ ಬಂದಿಳಿದಾಗ ಅಲ್ಲಿನ ಕಾಲಮಾನದ ಪ್ರಕಾರ ಗಂಟೆ ಎಂಟಾಗಿತ್ತು. ಮೂವತ್ತು ಗಂಟೆಗಳ ಪ್ರಯಾಣದಲ್ಲಿ ಜಾನು ಮತ್ತು ಖುಷಿ ಬಳಲಿದ್ದರು ಆದರೂ ಅಮೇರಿಕಾ ಖಂಡದ ದರ್ಶನ ಮಾಡಿದ ಸಂಭ್ರಮ ಅವರ ಮುಖದಲ್ಲಿತ್ತು. ಟ್ಯಾಕ್ಸಿ ಯಲ್ಲಿ ಕಂಪನಿಯ ಫ್ಲಾಟ್ ಗೆ ತೆರಳಿ ಗ್ರಹಪ್ರವೇಶ ಮಾಡಿ ಮಲಗಲು ಹವಣಿಸಿದವರಿಗೆ ನಿದ್ರೆ ಬರುತ್ತಿಲ್ಲ. ಕಾರಣವಿಷ್ಟೇ, ಪಾತಾಳದಲ್ಲಿ ರಾತ್ರಿಯಾದರೂ ಈಗ ಭಾರತದಲ್ಲಿ ಬೆಳಗಿನ ಸಮಯ! ಅಮೆರಿಕಾದ ಹಗಲು ರಾತ್ರಿಗಳಿಗೆ ಇವರ ದೇಹ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಿತ್ತು. ಆದರೆ ಮರುದಿನ ಬೆಳಿಗ್ಗೆ ಎದ್ದು ಇವನು ಅಮೆರಿಕಾದ ತನ್ನ ಆಫೀಸಿಗೆ ಹೋಗಲೇಬೇಕಿತ್ತು. ತನ್ನ ಕ್ಲೈಂಟ್ ಜೇಮ್ಸ್ ಗೆ ಮುಖ ತೋರಿಸಬೇಕಿತ್ತು … ಎಷ್ಟೇ ಹೊರಳಾಡಿದರೂ ನಿದ್ದೆ ಮಾತ್ರ ಹತ್ತಿರಕ್ಕೂ ಸುಳಿಯದಾಗಿತ್ತು….    

Thursday, February 5, 2015

'ನಿಶಾ'ಗಮನ!

 
 
ಇಡೀ ರಾತ್ರಿ ನಿದ್ದೆ ಹತ್ತಿರಕ್ಕೂ ಸುಳಿಯದೇ ಒದ್ದಾಡಿ ತನಗೆ ಯಾವಾಗಲೋ ನಿದ್ದೆ ಹತ್ತಿದ್ದು ಬೆಳಿಗ್ಗೆ ಎದ್ದಾಗಲೇ ಸುಜಯ್ ಗೆ ಗೊತ್ತಾಗಿದ್ದು. ಎದ್ದವನೇ ಅತ್ತಿತ್ತ ತಡಕಾಡಿ ತನ್ನ ಸ್ಮಾರ್ಟ್ ಫೋನು ಎಲ್ಲಿಹುದು ಅಂತ ಹುಡುಕಾಡಿದ. ಎದ್ದ ಕೂಡಲೇ ಅದರ ಮುಖ ನೋಡದಿದ್ದರೆ ಸಮಾಧಾನವಿಲ್ಲ ಅವನಿಗೆ. ಅದು ಪಕ್ಕದಲ್ಲಿರದಿದ್ದರೆ ಅವನಿಗೆ ಉಸಿರಾಡುವುದೂ ಕಷ್ಟವೇ! ಹಿಂದಿನ ಕಾಲದ  ಕಥೆಗಳಲ್ಲಿ ರಾಕ್ಷಸರ ಜೀವ ಒಂದು ಗಿಣಿಯಲ್ಲಿ ಇರುತ್ತಿತ್ತಂತೆ ಹಾಗೆಯೇ ಸುಜಯ್ ನ ಜೀವ ಅವನ ಸ್ಮಾರ್ಟ್ ಫೋನ್ ನಲ್ಲೆ ಇದೆ. ಅದನ್ನೊಂದು ಕ್ಷಣವೂ ಬಿಟ್ಟಿರಲಾರದ ಪರಿಸ್ಥಿತಿ. ಅವನ ಸಕಲ ಮಿತ್ರವರ್ಗದ ಸಂಪರ್ಕದ ಕೊಂಡಿ ಅದು. ಅದರ ಜೊತೆಗೆ ಅವನ ಬ್ಯಾಂಕಿನ ವ್ಯವಹಾರಗಳು, ಅಂತರ್ಜಾಲದಲ್ಲಿ ಅವನಿಗೆ ಬೇಕಾದ ಬೇಡವಾದ ಎಲ್ಲ ವಸ್ತುಗಳ ಖರೀದಿ ಗೆ ಅದು ಅನುವು ಮಾಡಿಕೊಟ್ಟಿತ್ತು. ಅಂತಹ ಅದ್ಭುತವಾದ ಪರಿಕರವನ್ನು ಬಿಟ್ಟಿರಲಾದೀತೆ?

ಕೊನೆಗೂ ಕೈಗೆ ಫೋನು ಸಿಕ್ಕು ನಿರಂಬಳವಾಗಿ ಅದರ ಪರದೆಯ ಮೇಲೆ ಕಣ್ಣಾಡಿಸಿದಾಗ ಇವನ ಸಹೋದ್ಯೋಗಿ ಶಾಂತಕುಮಾರ್ ಮಾಡಿದ ಹತ್ತು ಕರೆಗಳು, ನಿದ್ರಾ ದೇವಿಯ ವಶವಾಗಿದ್ದ ತನಗೆ ಗೊತ್ತೇ ಆಗಿರಲಿಲ್ಲ ಎನ್ನುವ ಅರಿವಾಯಿತವನಿಗೆ. ಏನೋ ತುರ್ತು ವಿಷಯವೇ ಇದ್ದಿರಬೇಕೆಂದು ಕ್ಷಣವೂ ತಡ ಮಾಡದೆ ಅವನಿಗೆ ವಾಪಸ್ಸು ಕರೆ ಮಾಡಿದ. ಕುಶಲ ಕ್ಷೆಮಗಳ ವಿಚಾರಿಸಿ, ಏನಯ್ಯ ಫೋನ್ ಮಾಡಿದ್ದು ಅಂತ ಕೇಳಿದ್ದಕ್ಕೆ. ಇವತ್ತು ಕಂಪನಿಯವರು ಟೀಂ ಔಟಿಂಗ್ ಕರೆದೊಯ್ಯುತ್ತಿರುವ ಘನವಾದ ವಿಷಯವನ್ನು ಹೇಳಿದನವನು. 
ಇವನ ಕಂಪನಿಯಲ್ಲಿ ವರ್ಷಕ್ಕೊಮ್ಮೆ ಎಲ್ಲ ಉದ್ಯೋಗಿಗಳಿಗೆ ಬೆಂಗಳೂರಿನ ರೆಸಾರ್ಟ್ ಒಂದಕ್ಕೆ ಕರೆದೊಯ್ಯುವುದು ವಾಡಿಕೆ. ಅಲ್ಲಿ ಸಮಸ್ತ ಉದ್ಯೋಗಿಗಳು ತಮ್ಮ ದಿನನಿತ್ಯದ ಕಿರಿಕಿರಿಗಳ ಮರೆತು ಕುಡಿದು-ಕುಣಿದು-ಕುಪ್ಪಳಿಸಲು ಅನುಕೂಲ ಮಾಡಿಕೊಡುವ ಒಂದು ಪ್ರಕ್ರಿಯೆ ಅದು. ನಿತ್ಯದ ಕೆಲಸಕ್ಕೆ ತೊಂದರೆಯಾಗಬಾರದೆಂದು ಆ ಪ್ರವಾಸವನ್ನು ರವಿವಾರ ಇಲ್ಲವೇ ಅಮೆರಿಕಾ ದೇಶದ ರಜೆಯ ದಿನಗಳಲ್ಲೇ ಇಟ್ಟುಕೊಳ್ಳುತ್ತಾರೆ. ಹೀಗಾಗಿ ಅವತ್ತು ಪಾತಾಳದ ಆ ರಾಕ್ಷಸರ ಕಾಟವೂ ಇರುವುದಿಲ್ಲ! ಅವತ್ತು ರವಿವಾರ ಇದ್ದುದರಿಂದ ಆ ಔಟಿಂಗ್ ಏರ್ಪಡಿಸಿದ್ದರು. ಸುಜಯ್ ಗೆ ಅದು ಮೊದಲೇ ಗೊತ್ತಿತ್ತಾದರೂ, ಅಲ್ಲಿ ಹೋಗಿ ದಿನವೂ ಆಫೀಸಿನಲ್ಲಿ ಕಾಣುವ ಅದೇ ಮುಖಗಳನ್ನು ನೋಡುವ ಮನಸ್ಸು ಅವನಿಗಿರಲಿಲ್ಲ. ಅದೂ ಅಲ್ಲದೆ ತನ್ನ ಬದಲಿಗೆ ಆ ವೆಂಕಣ್ಣ ನನ್ನು ಅಮೆರಿಕಾಕ್ಕೆ ಕಳಿಸಿದ ಆ ಬಾಸ್ ನ ಮುಖ ನೋಡುವುದಂತೂ ಅವನಿಗೆ ಸುತಾರಾಂ ಇಷ್ಟವಿರಲಿಲ್ಲ. ಆದರೆ ಶಾಂತ ಕುಮಾರ ಬಿಡಬೇಕಲ್ಲ! ಅವನಿಗೆ ಕುಡಿಯಲು ಇವನ ಕಂಪನಿ ಬೇಕು. ಏ ಬಾರಯ್ಯ, ಹೊಟ್ಟೆ ತುಂಬಾ ಕುಡಿದು ಮಜಾ ಮಾಡೋಣ ಅಂತ ಹೇಳಿದ್ದು ಇವನಲ್ಲಿ ಸ್ವಲ್ಪ ಮಟ್ಟಿಗೆ ಆಸಕ್ತಿ ಕೆರಳಿಸಿತಲ್ಲದೆ, ಇತ್ತೀಚೆಗಷ್ಟೇ ಇವನ ಟೀಂ ಗೆ ಸೇರಿಕೊಂಡಿದ್ದ ಬಳಕುವ ಸುಂದರಿ ನಿಶಾನೂ ಬರುತ್ತಿದ್ದಾಳೆ ಅನ್ನುವ ವಿಷಯ ಅಲ್ಲಿಗೆ ಹೋಗಲು ಅವನನ್ನು ಮತ್ತೂ ಪ್ರೇರೇಪಿಸಿತು. ಆಗಲಿ ನಿನಗೋಸ್ಕರ ಬರುವೆ ಅಂತ ಶಾಂತನಿಗೆ ಹೇಳಿ ಲಗುಬಗೆಯಿಂದ ಸ್ನಾನಕ್ಕೆ ತೆರಳಿದ.      
          
                                           ****
ತನ್ನ ಟೊಯೋಟಾ ಕಾರಿನಲ್ಲಿ ಶಾಂತನನ್ನು  ಅವನ ಮನೆಯಿಂದ ಹತ್ತಿಸಿಕೊಂಡು ಆ ರೆಸಾರ್ಟ್ ಗೆ ಬಂದಾಗ ಹೆಚ್ಚು ಕಡಿಮೆ ಎಲ್ಲ  ಸಹೋದ್ಯೋಗಿಗಳು ಸಮಯಕ್ಕೆ ಸರಿಯಾಗಿ ಅಲ್ಲಿ ಹಾಜರಿದ್ದರು. ಕೆಲಸ ಮಾಡುವಾಗ ಇರದಿದ್ದ ಉತ್ಸಾಹ ಇವತ್ತು ಮಾತ್ರ  ಅವರಲ್ಲಿ ಎದ್ದು ಕಾಣುತ್ತಿತ್ತು. ಎಲ್ಲರ ಮುಖಗಳು ನಳನಳಿಸುತ್ತಿದ್ದವು. ಆದರೆ ಇವನ ಕಣ್ಣುಗಳು ನಿಶಾಳ ಹುಡುಕಾಟದಲ್ಲಿ ತೊಡಗಿದ್ದವು. 
ಅಲ್ಲಿಲ್ಲಿ ಅಡ್ಡಾಡಿಕೊಂಡು, ಎದುರಾದವರಿಗೆ ಔಪಚಾರಿಕತೆಯ ನಗೆ ನಕ್ಕು ರೆಸಾರ್ಟ್ ನ ಅಂಗಳದಲ್ಲಿದ್ದ ಚಿಕ್ಕ ಆಟದ ಬಯಲಿಗೆ  ಹೋದಾಗ, ಅಲ್ಲಿಟ್ಟಿದ್ದ ಸೈಕಲ್ಲುಗಳು ಇವನಿಗೆ ಆಕರ್ಷಿಸಿದವು. ಅಲ್ಲಿ ಕೆಲವರು, ಕುಡಿದು ತಿಂದು ಪೊಗದಸ್ತಾಗಿ ಬೆಳೆದು ಜಡವಾಗಿದ್ದ ತಮ್ಮ ದೇಹಗಳನ್ನು ಹೊತ್ತು, ಸೈಕಲ್ಲು ಓಡಿಸಲು ಸಾಧ್ಯವಾಗದೆ ಅದರ ಮೇಲೆ ಕುಳಿತುಕೊಂಡು ತಮ್ಮ ಫೋಟೋ ತೆಗೆಸಿಕೊಳ್ಳುವುದರಲ್ಲಿ ಮಗ್ನರಾಗಿದ್ದರು. ಸ್ವಲ್ಪ ಸಮಯದ ಬಳಿಕ ಇವನಿಗೂ ಒಂದು ಸೈಕಲ್ಲು ದೊರೆತು ಅದರಲ್ಲೆರಡು ಸುತ್ತು ಓಡಿಸಿದನು. ಸುಜಯ್ ತಿನ್ನುವ, ಕುಡಿಯುವ ವಿಷಯದಲ್ಲಿ ಧಾರಾಳಿಯಾಗಿದ್ದನಾದರೂ, ನಿಯಮಿತವಾಗಿ ವ್ಯಾಯಾಮ ಮಾಡಿಕೊಂಡಿದ್ದು ಕಟ್ಟುಮಸ್ತಿನ ದೇಹವನ್ನು ಹೊಂದಿದ್ದ. ಅದು ಕೆಲವು ಜಡದೇಹಿಗಳ ಈರ್ಶೆಗೂ ಕಾರಣವಾಗಿತ್ತು. ಅವಿವಾಹಿತನೂ ಆಗಿದ್ದನಾದ್ದರಿಂದ ಕಂಪನಿಯಲ್ಲಿದ್ದ ಸುಂದರಿಯರನ್ನು ಆಕರ್ಷಿಸಿಬಿಡುವನೆಂಬ ಹೆದರಿಕೆಯೂ ಅವರನ್ನು ನಿರಂತರವಾಗಿ ಕಾಡುತ್ತಿತ್ತು. ಶಾಂತನಿಗೆ ಮುಂದಿನ ‘ತೀರ್ಥ’ ಸಮಾರಾಧನೆಯ ಬಗ್ಗೆ ಚಿಂತೆಯಿದ್ದುದರಿಂದ, ಸೈಕಲ್ಲು ಹೊಡೆದುಕೊಂಡು ಕಾಲಹರಣ ಮಾಡುತ್ತಿದ್ದ ಸುಜಯ್ ಗೆ ಮೆಲ್ಲಗೆ ತಿವಿದು ಎಚ್ಚರಿಸಿದ. ಇವನಿಗೂ ಅದೇ ಬೇಕಾಗಿತ್ತದ್ದರಿಂದ ಅವನ ಮಾತಿಗೆ ಬೆಲೆ ಕೊಟ್ಟು ಸಕಲ್ಲು ಓಡಿಸುವ ಕಾರ್ಯಕ್ಕೆ ತಡೆ ಹಾಕಿದ. ಅವರು ಅಲ್ಲಿಗೆ ಬಂದದ್ದೆ ಕುಡಿದು ಮಜಾ ಮಾಡಲು ಅಲ್ಲವೇ? ಅದರೂ ಸೈಕಲ್ಲಿನ ಮೇಲೇ ಕುಳಿತ ಒಂದು ಫೋಟೋ ಇರದಿದ್ದರೆ ಹೇಗೆ? ಶಾಂತ ನಿಗೆ ತನ್ನದೊಂದು ಫೋಟೋ ತೆಗೆಯಲು ಹೇಳಿ ಒಂದೊಳ್ಳೆಯ ಭಂಗಿಯಲ್ಲಿ ಸೈಕಲ್ಲಿನ ಮೇಲೆ ಕುಳಿತನಿವನು. ಹಾಗೆ ಕೂತಿದ್ದವನ ಹಿಂದುಗಡೆಗೆ ಯಾರೋ ಬಂದು ನಿಂತು, ಇವನ ಎರಡೂ ಹೆಗಲುಗಳ ಮೇಲೆ ಇಟ್ಟ ಕೈಗಳು ಕೋಮಲವಾಗಿದ್ದವಲ್ಲದೆ, ಅವು ಹುಡುಗಿಯದೆ ಅಂತ ಇವನು ಆ ಸ್ಪರ್ಶದಿಂದಲೇ ಅಂದಾಜಿಸಿದ, ಹಿಂದೆ ನಿಂತವಳು ಹುಡುಗಿ ಅನ್ನುವದಕ್ಕೆ ಇನ್ನೊಂದು ಸಾಕ್ಷಿ ಇವನ ಮೂಗಿಗಡರಿದ, ಅವಳು ಬಳಿದುಕೊಂಡಿದ್ದ ಸುಗಂಧ ದ್ರವ್ಯ! ಅದೂ ಅಲ್ಲದೆ ಇವನ ಎದುರಿಗೆ ನಿಂತು ಫೋಟೋ ತೆಗೆಯುತ್ತಿದ್ದ ಶಾಂತ ಹಾಗೂ ಮತ್ತಿತರ ಸಹೋದ್ಯೋಗಿಗಳು ಆ ಅಂತ ಬಾಯಿ ತೆಗೆದು ಇವನ ಸುದೈವಕ್ಕೆ ಕರುಬುತ್ತಿದ್ದ ಬಗೆ ನೋಡಿ, ಹಿಂದೆ ನಿಂತಿದ್ದು ಹುಡುಗಿಯೇ ಅಂತ ನಿಚ್ಚಳವಾಗಿತ್ತು, ಫೋಟೋ ತೆಗೆಸಿಕೊಂಡಾದ ಮೇಲೆ ಹಿಂತಿರುಗಿ ನೋಡಿದವನಿಗೆ ತೆಳ್ಳಗಿನ, ಬೆಳ್ಳಗಿನ ಚೆಲುವೆ ನಿಶಾ, ಹಾಯ್ ಅಂತ ಕೈ ಕುಲುಕಿದಾಗ ಆದ ಸಂಭ್ರಮ ಹೇಳತೀರದಾಗಿತ್ತು. ಅವಳ ಸ್ನೇಹಕ್ಕೆ ಎಲ್ಲರೂ ಹಾತೊರೆಯುತ್ತಿರುವಾಗ, ಆ ಚೆಲುವೆ ತನ್ನನ್ನ ಹುಡುಕಿಕೊಂಡು ಬಂದಿದ್ದು ಇವನ ತಲೆಯ ಮೇಲೆ ಕೋಡುಗಳನ್ನು ಮೂಡಿಸಿದ್ದವು, 
“ಹೇ ಸುಜಯ್ ಇವತ್ತು ತುಂಬಾ ಸೆಕ್ಸಿ ಕಾಣ್ತಿದೀಯ. ಈ ತರಹ ಡ್ರೆಸ್ ನಲ್ಲಿ ನಿನ್ನನ್ನ ಮೊದಲ ಸಲ ನೋಡ್ತಿರೋದು” ಅಂತ ನಿಶಾ ಹೇಳಿದ್ದಂತೂ ಇವನಿಗೆ ಸ್ವರ್ಗದಲ್ಲಿ ಕುಳಿತ ಅನುಭವ ನೀಡಿತ್ತು. ತಾವು ತೀರ್ಥ ಸೇವನೆಗೆ ಹೋಗುವ ತಯಾರಿಯಲ್ಲಿರುವಾಗಲೇ ಇವನಿಗೆ ನಿಶಾ ಸಿಕ್ಕಿದ್ದು ಶಾಂತನಿಗೆ ಅಪ್ರಿಯವಾದ ಸಂಗತಿಯಾಗಿತ್ತು. ಈ ನಿಶೆಯ ಎದುರು ಮದ್ಯದ ನಿಶೆಯನ್ನು ಇವನು ಕಡೆಗಣಿಸಿಬಿಡಬಹುದಾದ ಸಾಧ್ಯತೆಗಳು ಇಲ್ಲದಿರಲಿಲ್ಲ. ಶಾಂತ ತಮ್ಮ ಮುಂದಿನ ಕಾರ್ಯಕ್ರಮದ ಬಗ್ಗೆ ಇವನಿಗೆ ಸೂಚ್ಯವಾಗಿ ನೆನಪಿಸಿದ. ಆದರೂ ನಿಶಾಳ ಎದುರು ತಾವು  ಮದ್ಯ ಸೇವೆನೆಗೆ ಹೊರಟಿರುವ ವಿಷಯ ಹೇಳಿ ಅವಳಿಗೆ ತನ್ನ ಮೇಲೆ ಮೂಡಿರಬಹುದಾದ ಒಳ್ಳೆಯ ಅಭಿಪ್ರಾಯವನ್ನು ಕೆಡಿಸಿಕೊಳ್ಳುವ ಮನಸ್ಸು ಸುಜಯ್ ಗೆ ಇರಲಿಲ್ಲ. ಇವರ ಮನಸ್ಸನ್ನು ಓದಿದವಳಂತೆ ನಿಶಾ, ಏನು ನಿಮ್ಮ ಮುಂದಿನ ಕಾರ್ಯಕ್ರಮ? ನೀವು ಬಾರ್ ಗೆ ಹೋಗ್ತಾ ಇಲ್ಲವೇ? ಎಂದು ಕೇಳಿ ಇವರಿಗೆ ಅಚ್ಕರಿ ಹುಟ್ಟಿಸಿದಳು. ಶಾಂತನಿಗೆ ಅವಳೇ ಆ ವಿಷಯ ತೆಗೆದದ್ದು ಖುಷಿ ತಂದಿತು. ನಾವು ಅಲ್ಲಿಗೇ ಹೊರಟಿದ್ದು ಅಂತ ತಕ್ಷಣವೇ ಉತ್ತರಿಸಿ ಸುಜಯ್ ನ ಕೆಂಗಣ್ಣಿಗೆ ಗುರಿಯಾದ. 
ಓ ಹೌದಾ? ಏನು ನೀನು ಕುಡಿಯೋದು ಅಂತ ಸುಜಯ್ ಗೆ ಕೇಳಿದಳು. ಸುಜಯ್ ಅವಳ ಎದುರು ಮಾನ ಕಾಯ್ದುಕೊಳ್ಳುವ ಪ್ರಯತ್ನದ ಅಂಗವಾಗಿ ತಾನು ಕುಡಿಯೋದೆ ಅಪರೂಪವೆಂತಲೂ, ಅದೂ ಇಂಥ ಸಂದರ್ಭಗಳಲ್ಲಿ ಮಾತ್ರ, ತಾನು ಕುಡಿಯೋದು ಬರೀ ಬಿಯರ್ ಅಂತ ಹೇಳಿದ. ಅವಳು ಮನಪೂರ್ತಿ ನಕ್ಕಳು. ನಕ್ಕಾಗ ಇನ್ನೂ ಸುಂದರವಾಗಿ ಕಾಣುತ್ತಾಳಲ್ಲ ಅಂತ ಬೆರಗಿನಿಂದ ನೋಡುತ್ತಿದ್ದಂತೆ… “ಈಗೀಗ ಕಾಲದಲ್ಲಿ ಹುಡುಗಿಯರೇ ಬಿಯರ್ ನ ಕುಡಿಯೋದಿಲ್ಲ! ನೀನೇನು ಅದನ್ನ ಕುಡಿತೀಯಾ? ಇವತ್ತು ಬೇರೆ ಟ್ರೈ ಮಾಡೂವಂತೆ ಬಾ… come on guys let us have some special drink today” ಅಂತ ಅವಳಂದದ್ದನ್ನು ಅರಗಿಸಿಕೊಳ್ಳಲು ಇವನಿಗೆ ಸ್ವಲ್ಪ ಸಮಯ ಹಿಡಿಯಿತು. ಇವಳೂ ಕುಡಿಯುತ್ತಾಳೆಯೇ ಅನ್ನುವ ಸಂಗತಿಯೇ ಅವನಿಗೆ ಅಚ್ಚರಿ ತಂದಿತ್ತಾದರೂ, ಜೊತೆಗೆ ಸಾಕಷ್ಟು ಪುಳಕವನ್ನೂ ಉಂಟು ಮಾಡಿತ್ತು!
(ಮುಂದುವರಿಯುವುದು…)

Friday, January 23, 2015

ಪಾತಾಳದೆಡೆಗೆ

(ಪಂಜು ಪತ್ರಿಕೆಯಲ್ಲಿ ಪ್ರಕಟವಾಗಿತ್ತು  http://www.panjumagazine.com/?p=9851)
-------------------------------------------

ವೆಂಕಣ್ಣ ಪರಿವಾರ ಸಮೇತ ಬೆಂಗಳೂರಿನ ವಿಮಾನಾಲಯದ ಪ್ರವೇಶದ್ವಾರಕ್ಕೆ ಪಾದಸ್ಪರ್ಶ ಮಾಡಿದಾಗ ಗಂಟೆ ರಾತ್ರಿ ಹನ್ನೊಂದಾಗಿತ್ತು. ಮುಂಜಾನೆ ಎರಡು ಗಂಟೆಗೆ ಪ್ಲೇನು ಹೊರಡುವದಿತ್ತಾದರೂ ಆದಕ್ಕಿಂತ ನಾಲ್ಕು ತಾಸು ಮೊದಲೇ ಅಲ್ಲಿರಬೇಕಿತ್ತು. ಎಲ್ಲ ಔಪಚಾರಿಕತೆಗಳನ್ನು ಮುಗಿಸಬೇಕಲ್ಲ. ಅಮೆರಿಕಾಕ್ಕೆ ಹೋಗುವುದೆಂದರೆ ಅಷ್ಟು ಸುಲಭವೇ? ಬೆಂಗಳೂರಿನಿಂದ ಜರ್ಮನ್ ದೇಶಕ್ಕೆ ಮೊದಲ ಫ್ಲೈಟು. ಅಲ್ಲಿಂದ ಅಮೇರಿಕಾದ ಚಿಕ್ಯಾಗೊ ನಗರಕ್ಕೆ ಇನ್ನೊಂದು ಫ಼್ಲೈಟು. ಕೊನೆಗೆ ಇವನು ಹೋಗಬೇಕಾಗಿದ್ದ ಊರಾದ ಸ್ಯಾಂಡಿ ಗೆ ಮತ್ತೊಂದು! ಒಂದೇ ಫ್ಲೈಟಿನಲ್ಲಿ ಅಷ್ಟು ದೂರ ಕ್ರಮಿಸುವುದು ಕಷ್ಟ. ಆ ದೇಶಕ್ಕೆ ಹೋಗೋದು ಅಂದ್ರೆ ಹೆಚ್ಚು ಕಡಿಮೆ ಭೂಗೋಳದ ಅರ್ಧ ಪ್ರದಕ್ಷಿಣೆ ಹಾಕಿದಂತೆ! ವೆಂಕಣ್ಣ ಯೋಚಿಸುತ್ತಿದ್ದ, ಒಂದುವೇಳೆ ಬೆಂಗಳೂರಿನಲ್ಲಿ, ಅದೃಷ್ಟವಶಾತ್ ಒಂದು ಖಾಲಿ ಸೈಟು ಸಿಕ್ಕು, ಅಲ್ಲೊಂದು ಸುರಂಗ ಕೊರೆಯುತ್ತಾ ಹೋದರೆ ಅದು ಅಮೆರಿಕಾಕ್ಕೆ ತೆರೆದುಕೊಳ್ಳುತ್ತದೇನೋ, ಅಷ್ಟು ಸರಿಯಾಗಿ ನಮ್ಮ ಭೂ ಪ್ರದೇಶದ ಕೆಳಗೆ ಇದೆ ಆ ದೇಶ. ಬಹುಶಃ ಪುರಾಣಗಳಲ್ಲಿ ಪ್ರಸ್ತಾಪಿಸಿದ ಪಾತಾಳ ಇದೆ ಆಗಿದ್ದಿರಬೇಕು. ಅದಕ್ಕೆ ಇರಬೇಕು ಅಮೆರಿಕನ್ನರು ರಾಕ್ಷಸರಂತೆ ಹಗಲು ರಾತ್ರಿ ತನ್ನನ್ನು ಕಾಡುತ್ತಾರೆ! ವೆಂಕಣ್ಣ ತನ್ನ ವಿಚಿತ್ರವಾದ ಕಲ್ಪನೆಗೆ ತನ್ನಲ್ಲೇ ನಗುತ್ತಿದ್ದ. ಜಾನುಗೆ ಇದೆಲ್ಲ ಮಾಮೂಲು. ಅವನನ್ನು ಮದುವೆಯಾದ ಹೊಸತಾಗಿ ಸ್ವಲ್ಪ ವಿಚಿತ್ರವಾಗಿ ಕಾಣುತ್ತಿತ್ತು. ಹೊತ್ತಿಲ್ಲದ ಹೊತ್ತಿನಲ್ಲಿ ಅವನು ಆಫೀಸಿನ ಕೆಲಸ ಮಾಡುವುದು, ಮಧ್ಯರಾತ್ರಿ ಅಮೆರಿಕಾದ ಕಸ್ಟಮರುಗಳು ಅವನಿಗೆ ಫೋನ್ ಮಾಡಿ ಎಬ್ಬಿಸುವುದು, ಇವನು ಲ್ಯಾಪ್ ಟಾಪ್ ಅನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಕಾನ್ಫರನ್ಸ್ ಕರೆಗಳಲ್ಲಿ ಗಂಟೆಗಟ್ಟಲೆ ಮಾತಾಡೋದು, ಮಲಗಿದಾಗಲೂ ನಿದ್ದೆಗಣ್ಣಲ್ಲಿ ಬಡಬಡಿಸುವುದು... ಇವೆಲ್ಲ ಅವಳಿಗೆ ಕ್ರಮೇಣ ಅಭ್ಯಾಸವಾಯ್ತು. ಹಾಗೆಯೇ ಏನೋ ನೆನಸಿಕೊಂಡು ನಗುತ್ತಿರಬೇಕೆಂದು ಸುಮ್ಮನಾದಳು. ತಮ್ಮ ಬ್ಯಾಗುಗಳ ತೂಕ ನೋಡಿ ಅದಕ್ಕೊಂದು ಚೀಟಿ ಅಂಟಿಸುವ ಕೌಂಟರಿನ ಮುಂದೆ ಸರದಿಯಲ್ಲಿ ನಿಂತಿದ್ದರವರು. ಹೆಚ್ಚುಕಡಿಮೆ ಮನೆಯಲ್ಲಿದ್ದ ಸಾಮಾನುಗಳನ್ನೆಲ್ಲ ಬ್ಯಾಗುಗಳಲ್ಲಿ ತುಂಬಿಸಿದ್ದಳು ಜಾನು. ತಲೆಗೆ ಎರಡು ಬ್ಯಾಗು, ಒಂದೊಂದರಲ್ಲಿ ೨೩ ಕಿಲೋ ಭಾರವನ್ನು ವಿಮಾನದಲ್ಲಿ ಕೊಂಡೊಯ್ಯುವ ಅವಕಾಶವಿತ್ತು. ಹಾಗೆ ಪ್ರಯಾಣಿಕರು ತಂದ ಬ್ಯಾಗುಗಳನ್ನೆಲ್ಲಾ ತೂಕ ಮಾಡಿ, ವಿಶೇಷವಾದ ಸ್ಕ್ಯಾನರಿನ ಒಳಗಣ್ಣಿನಿಂದ ಕಂಪ್ಯೂಟರಿನ ಪರದೆಯ ಮೇಲೆ ಮೂಡುತ್ತಿದ್ದ ಚಿತ್ರಗಳನ್ನು ನೋಡುತ್ತಾ ಕೂತಿದ್ದವನೊಬ್ಬ ಬ್ಯಾಗುಗಳ ಒಳಗೆನಿರಬಹುದು ಅಂತ ತಪಾಸಣೆ ಮಾಡುತ್ತಿದ್ದ. ಅಂತೂ ಇವರ ತಪಾಸಣೆಗಳಲ್ಲ ಮುಗಿದು ವಿಮಾನದೊಳಗೆ ಪ್ರವೇಶ ಪಡೆದು ತಂತಮ್ಮ ಆಸನದಲ್ಲಿ ಉಸ್ಸಪ್ಪಾ ಅಂತ ಕೂತಾಗ ಒಂದು ಗಂಟೆ. ಎರಡು ಗಂಟೆಗೆ ಸರಿಯಾಗಿ ವಿಮಾನ ತನ್ನ ರೆಕ್ಕೆ ಬಿಚ್ಚಿ ಹಾರತೊಡಗಿತ್ತು. ಇನ್ನೂ ಎಂಟು ಗಂಟೆಗಳು ಇವರು ಅಂತರ್ ಪಿಶಾಚಿಗಳಂತೆ ಆಕಾಶದಲ್ಲೇ ಇರುವ ಅನಿವಾರ್ಯತೆಯಿತ್ತು!   
ಬೆಂಗಳೂರಿನಿಂದ ಫ್ರ್ಯಾಂಕ್ ಫ಼ರ್ಟ್ ಗೆ ಪಯಣಿಸುತ್ತಿದ್ದ ಆ ವಿಮಾನದಲ್ಲಿ ಜರ್ಮನ್ ದೇಶದವಳಾದ ಗಗನ ಸಖಿ ಸಖತ್ತಾಗಿದ್ದುದರಿಂದಲೋ ಏನೋ ವೆಂಕಣ್ಣನಿಗೆ ಬಾಯಾರಿಕೆ ಸ್ವಲ್ಪ ಜಾಸ್ತಿನೆ ಆಗತೊಡಗಿತ್ತು. ಆಗಾಗ  ಅವಳನ್ನು ಕರೆದು "can I have water please?" ಅನ್ನೋದು, ಅವಳು ತಂದು ಕೊಟ್ಟಾಗ 'Thank you!" ಅನ್ನೋದು ನಡೆದೇ ಇತ್ತು. ತನಗೆ ಮಾತ್ರ ಒಂದು ಸಲವೂ ಯಾವುದಕ್ಕೂ "Thank you" ಹೇಳದ ಗಂಡ ನೀರು ಕುಡಿಸುತ್ತಿದ್ದ ಈ ಬೆಕ್ಕಿನ ಕಣ್ಣಿನ ಚೆಲುವೆಗೆ ಇಷ್ಟೊಂದು ಆದರ ತೋರಿಸುತ್ತಿದ್ದುದು ಜಾನುಗ್ಯಾಕೋ ಸರಿ ಕಾಣಲಿಲ್ಲ. 
"ನೀರು ಭಾಳ ಕುಡಿಬ್ಯಾಡ್ರಿ, ಅಜೀರ್ಣ ಆದೀತು!" ಅಂತ ಎಚ್ಚರಿಸಿದಳು.
"ಎಲ್ಲಾದಕ್ಕೂ ಕಿರಿಕಿರಿ ನೋಡಲೇ ನಿಂದು. ಏನೂ ತಿನ್ಲಿಕ್ಕಂತೂ ಬಿಡಂಗಿಲ್ಲ, ಕುಡಿಲಿಕ್ಕರೆ ಬಿಡ್ತೀಯಾ ಅದೂ ಇಲ್ಲಾ." ಅಂತ ಸ್ವಲ್ಪ ಜೋರಾಗೆ ಹೇಳಿದ್ದು ಕನ್ನಡದಲ್ಲೇ ಆಗಿದ್ದರು ಜರ್ಮನ್ ಸಖಿಗದು ಹೇಗೋ ಅರ್ಥವಾಗಿ ಅವಳು ಕಣ್ಣು ಮಿಟುಕಿಸಿ ನಕ್ಕಂತೆನಿಸಿತು! ಅಂತೂ ನೀರು ಕುಡಿಯುವುದಕ್ಕೂ ರೇಷನ್ನು ಲಾಗು ಆದ ಮೇಲೆ, ವೆಂಕಣ್ಣ ನಿಗೆ ಇನ್ನೂ ೮ ಗಂಟೆ ಕಾಲಹರಣ ಮಾಡುವ ಬಗೆ ತಿಳಿಯದೆ ಅತ್ತಿತ್ತ ಪಿಳಿ ಪಿಳಿ ನೋಡತೊಡಗಿದ. ಮಗಳು ಖುಷಿ ತನ್ನ ಆಸನದ ಎದುರಿಗಿನ ಸಣ್ಣ  ಟೀವಿ ಪರದೆಯಲ್ಲಿ ಕಾಣುತ್ತಿದ್ದ ಕಾರ್ಟೂನುಗಳನ್ನು ನೋಡುತ್ತಾ ಅನಂದದಿಂದಿದ್ದಳು. ಜಾನು ಕಿವಿಗೆ ಈಯರ್ ಫೋನ್ ಹಾಕಿಕೊಂಡು ಯಾವುದೋ ಸಂಗೀತ ಕೇಳುತ್ತಿದ್ದಳು. ಆದರೂ ಗಂಡನ ಮೇಲೆ ಒಂದು ಕಣ್ಣಿಟ್ಟಿದ್ದಳು! ಪಕ್ಕದ ಕಿಟಕಿಯ ಹೊರಗೆ ಕಣ್ಣು ಹಾಯಿಸಿದವನಿಗೆ ಕೆಳಗೆ ಬರೀ ಮೋಡಗಳು ಕಾಣುತ್ತಿದ್ದವು. ವಿಮಾನಯಾನದ ಏಕತಾನತೆಯಿಂದ ಬೇಸರ ಮೂಡಿತವನಿಗೆ. ಟ್ರೇನು, ಬಸ್ಸಿನಲ್ಲಾದರೆ ನಾವು ಚಲಿಸುತ್ತಿರುವ ಅನುಭವವಾದರೂ ಆಗುತ್ತೆ. ಇಲ್ಲಿ ಅದೂ ಗೊತ್ತಾಗದು. ವಿಮಾನದ ಎದುರಿಗೊಂದಿಷ್ಟು ಗಾಳಿಕುಳಿಗಳು (air packets) ಬಂದಾಗಲಷ್ಟೆ, ಬೆಂಗಳೂರಿನ ಕೆಟ್ಟ ರಸ್ತೆಯ ಮೇಲೆ ಹೋದಂತೆ ವಿಮಾನ ತಡಪಡಿಸಿದಂತಾಗಿ ಧಡಿಕೆಯಾಗಿ ಚಲನೆಯ ಅನುಭವವಾಗುತ್ತಿತ್ತು. ಇಲ್ಲವೆಂದರೆ ಒಂದು ಹವಾನಿಯಂತ್ರಿತ ಕೋಣೆಯೊಳಗೆ ಕುಳಿತುಕೊಂಡ ಅನುಭವ ಅಷ್ಟೇ. ಟ್ರೇನಿನಲ್ಲಿ ಬೇಸರವಾದರೆ ಬಾಗಿಲ ಬಳಿ ಹೋಗಿ ನಿಂತು ಹೊರಗಿನ ಪ್ರಕೃತಿ ಸೌಂದರ್ಯ ನೋಡುತ್ತಾ ತಾಜಾ ಗಾಳಿಯನ್ನು ಸವಿಯಬಹುದು. ವಿಮಾನದಲ್ಲಿ ಅದೂ ಸಾಧ್ಯವಿಲ್ಲವಲ್ಲವಲ್ಲ ಅಂತ ಪೇಚಾಡಿದನವನು. ಇತ್ತೀಚಿಗೆ ಚೈನಾದವರು ತಮ್ಮ ದೇಶದಿಂದ ಅಮೆರಿಕಾದವರೆಗೂ ಟ್ರೇನ್ ಸಂಚಾರ ಶುರು ಮಾಡಿದ್ದಾರೆಂಬ ಸುದ್ದಿ ಕೇಳಿದ್ದ. ಮುಂದಿನ ಸಲ ಅಮೆರಿಕಾಕ್ಕೆ ಹೋದರೆ ಚೈನಾಕ್ಕೆ ಹೋಗಿ ಅಲ್ಲಿಂದ ಟ್ರೇನಿನಲ್ಲೇ ಹೋಗುವುದು ಒಳ್ಳೆಯದು ಅಂತ ನಿರ್ಧರಿಸಿ, ಈಗ ಸಧ್ಯಕ್ಕೆ ನಿದ್ದೆ ಮಾಡುವುದೊಂದೇ ಒಳ್ಳೆಯ ಉಪಾಯ ಅಂತ ಮನಗಂಡು ಕಣ್ಣು ಮುಚ್ಚಿ ನಿದ್ದೆಗೆ ಶರಣಾದ.
---
ಬೆಂಗಳೂರಿನ ತನ್ನ ಸುಸಜ್ಜಿತವಾದ ಫ್ಲ್ಯಾಟಿನಲ್ಲಿ ಮಲಗಿದ್ದ ಸುಜಯ್ ಗೆ, ಗಂಟೆ ಮೂರಾದರೂ ನಿದ್ದೆ ಹತ್ತಿರ ಸುಳಿಯುಲಾರದಾಗಿತ್ತು. ನಿನ್ನೆ ಮೊನ್ನೆ ಕಂಪನಿ ಸೇರಿದ್ದ ವೆಂಕಟ್ ಅಮೆರಿಕಾಕ್ಕೆ ಹೊರಟಿದ್ದಾನೆ ಅನ್ನುವ ಸಂಗತಿಯೇ ಅವನ ನಿದ್ರಾ ಹೀನತೆಗೆ ಕಾರಣವಾಗಿತ್ತು. ಸುಜಯ್ ಹಾಗೂ ವೆಂಕಟ್ ಇಬ್ಬರಿಗೂ ಸುಧೀರ್ ನೆ ಬಾಸ್. ತನ್ನನ್ನು ಅಮೆರಿಕಕ್ಕೆ ಕಳಿಸುತ್ತೇನೆ ಎಂದು ಹೇಳಿದ್ದ ಬಾಸು ಕೊನೆಯ ಕ್ಷಣದಲ್ಲಿ ತನಗೆ ಕೈ ಕೊಟ್ಟಿದ್ದು ಇವನಿಗೆ ಸಿಟ್ಟು ಬರಿಸಿತ್ತು. ಕಸ್ಟಮರ್ರು ವೆಂಕಟ್ ನೇ ಅಲ್ಲಿಗೆ ಬರಬೇಕೆಂದು ಬೇಡಿಕೆ ಸಲ್ಲಿಸಿದ್ದಾರೆಂದೂ, ಮುಂದಿನ ಸಲ ನಿನ್ನನ್ನು ಕಳಿಸುವೆನೆಂದೂ ಹೇಳಿದ ಸುಧೀರನ ಮಾತು ಆ ಮಟ್ಟಿಗಿನ ಬೀಸುವ ದೊಣ್ಣೆ ತಪ್ಪಿಸಿಕೊಳ್ಳುವ ಉತ್ತರವಾಗಿತ್ತೆಂದು ಅವನಿಗೆ ಸ್ಪಷ್ಟವಾಗಿತ್ತು. ಅದೂ ಅಲ್ಲದೆ ಹೊಸದಾಗಿ ಇವನ ಟೀಮಿಗೆ ಸೇರಿದ್ದ  ನಿಶಾ, ನೀನು ಅಮೆರಿಕಾಕ್ಕೆ ಹೋಗುತ್ತಿಲ್ಲವೇ ಅಂತ ಆಶ್ಚರ್ಯ ಚಕಿತಳಾಗಿ ಕೇಳಿದ್ದು ಇವನಿಗೆ ಗಾಯದ ಮೇಲೆ ಬರೆ ಎಳೆದಂತಾಗಿತ್ತು. ಆ ದೇಶದ ಮಣ್ಣನ್ನು ಮುಟ್ಟುವ ಸುಜಯ್ ನ ಬಹುದಿನದ ಕನಸು ಸಧ್ಯಕ್ಕೆ ಕನಸಾಗಿಯೇ ಉಳಿದಿತ್ತು. 

(ಮುಂದುವರಿಯುವುದು...)            


         

Sunday, January 4, 2015

ಆಪ್ತ ರಕ್ಷಕ!

(ಪಂಜು ಪತ್ರಿಕೆಯಲ್ಲಿ ಪ್ರಕಟವಾಗಿತ್ತು http://www.panjumagazine.com/?p=9571)

ಅವತ್ತು  ಕೆಲಸ ಮುಗಿಸಿ ನಾನು ಮನೆಗೆ ಬಂದಾಗ ರಾತ್ರಿ ಹನ್ನೊಂದು ಗಂಟೆ. ಕೆಲಸದ ಸುಸ್ತು, ತಲೆ ಬೇರೆ ಸಣ್ಣಗೆ ನೋಯುತ್ತಿತ್ತು. ನಮ್ಮ ಅಪಾರ್ಟಮೆಂಟಿನ ಹೊರಗೆ ಕಾರು ನಿಲ್ಲಿಸಿಕೊಂಡು "ಅವನು" ಗೇಟು ತೆಗೆಯಲೆಂದು ಕಾಯುತ್ತಿದ್ದೆ...

ಅವನ ಹೆಸರು ನಂದೀಶ. ಅವನನ್ನು ಏನಂತ ಪರಿಚಯಿಸಬೇಕೆಂದು ಗೊತ್ತಾಗುತ್ತಿಲ್ಲ. ಸೆಕ್ಯುರಿಟಿ ಅನ್ನಲೇ? ಊಹುಂ, ಅವನು ಅದಕ್ಕಿಂತ ಜಾಸ್ತಿ. ವಾಚ್ ಮನ್ ಅನ್ನಲೂ  ಮನಸ್ಸಿಲ್ಲ, ಏಕೆಂದರೆ ವಾಚ್ ಮ್ಯಾನ್ ಗಳು ಬರೀ ವಾಚ್ ಮಾಡುತ್ತಾರೆ ಅಷ್ಟೆ!  ಅವನನ್ನು  ನಮ್ಮ "ಆಪ್ತ ರಕ್ಷಕ" ಅಂತ ಕರೆಯುವುದೇ ಸರಿ ಅನಿಸುತ್ತದೆ. 

... ಗೇಟು ತೆಗೆದವನೆ ಓಡುತ್ತ ನನ್ನ ಕಡೆಗೆ ಬಂದು "ಸಾರ್ ಅಲ್ಲೇ ಇರಿ, ಒಳ್ಗೆ ಬರ್ಬೇಡಿ" ಅಂತ ಸ್ವಲ್ಪ ಎಚ್ಚರಿಸುವ ರೀತಿಯಲ್ಲಿ ಹೇಳಿದ. ಮೊದಲೆ ತಡವಾಗಿ ಬಂದಿದ್ದ ನಾನು ತಾಳ್ಮೆ ಕಳೆದುಕೊಂಡಿದ್ದೆ. 
"ಯಾಕ್ರಿಪಾ?" ಸ್ವಲ್ಪ ಗಂಟು ಮುಖದಿಂದಲೇ ಕೇಳಿದೆ
"ಹಾವ್ ಬಂದೈತೆ ಸಾರ್! ಮಿಡಿ ನಾಗ್ರಾ... ಅಲ್ಲೆ ಇರಿ..." ಹಾವು ಅನ್ನುವ ಶಬ್ಧವೇ ನನ್ನ ಬಾಯಿ ಮತ್ತು ಕಣ್ಣುಗಳನ್ನು ಅಗಲಿಸಿತ್ತು. ನನ್ನ ತಲೆ ನೋವು ಸದ್ದಿಲ್ಲದೇ ಓಡಿ ಹೋಗಿತ್ತು. ಹಾವು ಹಿಡಿಯುವಷ್ಟು ಧೈರ್ಯವಾನನಲ್ಲ ನಾನು. 
"ಹಾವು ಹಿಡಿಯವ್ರಿಗೆ ಫೋನ್ ಮಾಡೋಣ್ ತಡ್ರಿ" ಅಂತ ಅಂದೆ. 
"ಅದ್ಯಾಕೆ ಬುಡಿ ಸಾರ್. ನಾನಿಲ್ವೆ? ಒಂದ್ನಿಮಿಷ ಹಂಗೆ ಇರಿ" ಅಂದವನೆ ಎಲ್ಲಿಂದಲೋ ಒಂದು ಕೋಲು, ಗೋಣಿ ಚೀಲವೊಂದನ್ನು ತಂದು. ಆ ಮಿಡಿನಾಗರವನ್ನು ಆ ಚೀಲದಲ್ಲಿ ಯಶಸ್ವಿಯಾಗಿ ಕಳಿಸಿ, ಚೀಲದ ಬಾಯಿ ಮುಚ್ಚಿ, ಹಾಗೆ ಹಿಡಿದುಕೊಂಡು ಹೋಗಿ ದೂರದಲ್ಲೆಲ್ಲೋ ಬಿಟ್ಟು ಬಂದ. ಇದೆಲ್ಲವನ್ನು ಅವನು ನನ್ನ ಕಣ್ಣ ಮುಂದೆಯೇ ಮಾಡಿದ್ದು, ಅದೂ ಒಂದೆ ಕೈಯಲ್ಲಿ ಅಂದರೆ ನೀವು ನಂಬಲಿಕ್ಕಿಲ್ಲ. ಒಂದೇ ಕೈಯಲ್ಲಿ ಯಾಕೆ ಅಂದರೆ ಅವನ ಎಡಗೈಯನ್ನು ಒಂದು ದುರ್ಘಟನೆಯಲ್ಲಿ ಕಳೆದುಕೊಂಡಿದ್ದಾನೆ! ನಾನು ನನ್ನ ಎರಡೂ ಕೈ ಇಟ್ಟುಕೊಂಡೂ ಮಾಡಲಾಗದ ಕೆಲಸವನ್ನು ಒಂದೇ ಕೈಯಲ್ಲಿ ಮಾಡಿ ನಮ್ಮ ರಕ್ಷಣೆ ಮಾಡುವವನನ್ನು ಆಪ್ತ ರಕ್ಷಕ ಅನ್ನದೆ ಬೇರೇನೂ ಅನ್ನಲು ಸಾಧ್ಯ?        

ಅವತ್ತೊಂದು ದಿನ, ತನಗಾದ ದುರ್ಘಟನೆಯನ್ನು ನೆನಪಿಸಿಕೊಂಡು ಹೇಳುತ್ತಿದ್ದ.  

"... ಇಲ್ಲಿ ಬರೋಕಿಂತ ಮೊದ್ಲು ನಮ್ಮ ಹಳ್ಳಿನಾಗೆ ನಾನು ಗೂಡ್ಸ್ ಗಾಡಿ ಓಡಸ್ತಿದ್ದೆ ಅನ್ನಿ. ಅವೊತ್ತು ಸಾಮಾನು ತುಂಬ್ಕೊಂಡು ಹೊಯ್ತಿದ್ದೆ. ದಾರೀಲಿ ಎಲ್ಲೋ ಎಡವಟ್ಟು ಆಗಿ ಗಾಡಿ ಪಲ್ಟಿ ಹೊಡೀತು ಸಾರ್. ಎರಡು ಮೂರು ಸರ್ತಿ ಉಳ್ಳಿರಬೇಕು. ಎಡಕಿನ ಕೈ ಮ್ಯಾಕೆ ಗಾಡಿ ಬಿದ್ದಿತ್ತು. ನನಗೆ  ಎಚ್ಕಾರಾನೆ ಇರಲಿಲ್ಲ ಅನ್ನಿ. ಆಮ್ಯಾಕೆ ಆಸ್ಪತ್ರೇಲಿ ಎಚ್ಚರಾ ಆದಾಗ್ಲೆ ನಂದೊಂದು ಕೈ ಕಳ್ಕೊಂಡಿದ್ದು ಗೊತ್ತಾಗಿದ್ದು." ತನ್ನ ಕೈಯನ್ನೇ ಕಸಿದುಕೊಂಡ ಆ ವಿಧಿಯಾಟವನ್ನು ವಿವರಿಸಿದ ಅವನ ಮುಖದಲ್ಲಿ ಎಳ್ಳಷ್ಟೂ ಬೇಸರವಿರಲಿಲ್ಲ. ಆದರೆ ಅದನ್ನು ಕೇಳಿ ನನ್ನ ಮನಸ್ಸು ಭಾರವಾಗಿತ್ತು.

ಮೊಳಕೈಯಿಂದ  ಕೆಳಗೆ ಕತ್ತರಿಸಿ ತುಂಡಾಗಿದ್ದ ಕೈಯನ್ನು ಮರು ಜೋಡಿಸುವ ಸಾಧ್ಯತೆಗಳನ್ನು ವೈದ್ಯರು ಅಲ್ಲಗಳೆದರಂತೆ. ಸ್ವಲ್ಪ ದಿನಗಳ ಬಳಿಕ ಈ ಘಟನೆಯಿಂದ ಚೇತರಿಸಿಕೊಂಡ ಮೇಲೆ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದನಂತೆ. 
 
ನಮ್ಮ ಅಪಾರ್ಟ್ಮೆಂಟಿನ  ರಕ್ಷಣೆಯ ಜವಾಬ್ದಾರಿ ಹೊತ್ತು ಈಗಾಗಲೇ ಐದು ವರ್ಷಗಳು ಸಂದಿದೆ. ದಿನದ ೨೪ ಗಂಟೆಯೂ ನಮ್ಮ ಕಟ್ಟಡದ ಯಾವುದೇ ಒಂದು ಸದ್ದಿಗೂ ಅವನದೊಂದು ಕಿವಿ ಇಟ್ಟಿರುತ್ತಾನೆ! ಅವನು ಯಾವಾಗ ಮಲಗುತ್ತಾನೋ ಆ ದೇವರಿಗೆ ಗೊತ್ತು. ನಮಗಂತೂ ನೆಮ್ಮದಿಯ ನಿದ್ದೆಯನ್ನು ದಯಪಾಲಿಸಿದ್ದಾನೆ.
ಕೆಲವರಿಗೆ ಕಾರ್ ಚಾಲನೆಯನ್ನೂ ಕಲಿಸಿದ್ದಾನೆ. ಯಾವಾಗಲೂ ನಗುಮುಖದಲ್ಲೇ ಮಾತಾಡುತ್ತಾನೆ. ಯಾವುದೇ ಕೆಲಸಕ್ಕೆ ಸಂಬಂದಿಸಿದವರ ಫೋನ್ ನಂಬರು ಅವನ ಬಳಿ ಇರುತ್ತದೆ. ಒಂದು ವೇಳೆ ಕೆಲಸಕ್ಕೆ ಯಾರೂ ಸಿಕ್ಕಿಲ್ಲವೆಂದರೆ ಆ ಕೆಲಸವನ್ನು ಯಾವುದೇ ಅಪೇಕ್ಷೆಯಿಟ್ಟುಕೊಳ್ಳದೆ ಮಾಡುತ್ತಾನೆ. ಅದು ಪ್ಲಂಬಿಂಗ್ ಆಗಿರಬಹುದು, ಇಲೆಕ್ಟ್ರಿಕ್ ಕೂಡಾ ಆಗಿರಬಹುದು!
 
ಯಾರೇ ಅಪರಿಚಿತರು ಯಾವುದೇ ಫ಼್ಲ್ಯಾಟಿಗೆ ಬಂದರೂ ಅವರ ಜೊತೆಗೆ ಆ ಮನೆಯವರೆಗೂ ಬಂದು ಅವರು ನಮಗೆ ಪರಿಚಿತರು ಅಂತ ಗೊತ್ತಾದಾಗಲೇ ಅಲ್ಲಿಂದ ಹೋಗುತ್ತಾನೆ. ಅವನು ಸುಮ್ಮನೆ ಕೂಡೋದೇ ಕಡಿಮೆ. ಕಸ ಗೂಡಿಸುತ್ತಲೋ, ಕಾರು ತೊಳೆಯುತ್ತಲೋ ಏನೋ ಒಂದು ಕೆಲಸ ಮಾಡುತ್ತಾ 'ಕಾಯಕವೇ ಕೈಲಾಸವೆನ್ನುವ' ಬಸವಣ್ಣನ ತತ್ವವನ್ನು ಅಕ್ಷರಶಃ ಮೈಗೂಡಿಸಿಕೊಂಡಿದ್ದಾನೆ.    

 
ಅವನ ಸಹಧರ್ಮಿಣಿ ಕೂಡ ಅವನಿಗೆ ಹೀಗಾಯ್ತಲ್ಲಾ ಅಂತ ಬೇಸರಿಸದೆ, ಅವನ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದಾಳೆ. ಅವರಿಗೊಬ್ಬಳು ಮುದ್ದಾದ ಮಗಳಿದ್ದಾಳೆ. ಅವಳಿಗೆ ಒಳ್ಳೆಯ ಶಿಕ್ಷಣ ಕೊಡಿಸುತ್ತಿದ್ದಾನೆ. ತನ್ನ ಕೈ ಹೋಯಿತಲ್ಲಾ  ಅಂತ ಅಳುತ್ತ ಕೂಡದೆ, ತನ್ನ ಹಣೆಬರಹವನ್ನು ಹಳಿಯದೆ, ಯಾವಾಗಲೂ ನಗುತ್ತಾ, ಸ್ವಾಭಿಮಾನದ ಬದುಕನ್ನು ನಡೆಸುವ ನಂದೀಶ ಖಂಡಿತವಾಗಿಯೂ ಒಂದು ಆದರ್ಶವೇ ಅಂದರೆ ಉತ್ಪ್ರೇಕ್ಷೆಯಾಗಲಾರದು. ಅವನಿಗೆ ಒಳ್ಳೆಯದಾಗಲೆಂದು ಹಾರೈಸುತ್ತಾ...     
 

Friday, December 19, 2014

ವಿಮಾನಾಲಯ ಅಂದ್ರ ಏನ್ ಮೀನಿಂಗು?:


(ಪಂಜು ಪತ್ರಿಕೆಯಲ್ಲಿ ಪ್ರಕಟವಾಗಿತ್ತು >> http://www.panjumagazine.com/?p=9503)

ವೆಂಕಣ್ಣನನ್ನು ಅವನ ಕಂಪನಿಯವರು ಅಮೆರಿಕಾಕ್ಕೆ ಕಳಿಸುವ ನಿರ್ಧಾರ ಮಾಡುತ್ತಾರೆ. ಹೆಂಡತಿ, ಮಗಳನ್ನೂ ಜೊತೆಗೆ ಕರೆದೊಯ್ಯುವ ನಿರ್ಧಾರ ಮಾಡಿ ಅವರಿಗೆ ವೀಸಾ ಮಾಡಿಸಲು ಚೆನ್ನೈಗೆ ಹೋಗುತ್ತಾನೆ. ವಿಸಾ ಕೊಡುವದಕ್ಕೆ ಅಮೇರಿಕದವರು ಕಾಡಿಸುವ ರೀತಿಗೆ ಬೇಸತ್ತು,  ಆ ದೇಶಕ್ಕೆ ಹೋಗುವುದೇ ಬೇಡ ಅನ್ನುವ ನಿರ್ಧಾರ ಮಾಡುತ್ತಾನಾದರೂ ಹೆಂಡತಿ ಮಗಳಿಗೋಸ್ಕರ ನಿರ್ಧಾರ ಬದಲಿಸುತ್ತಾನೆ.  ಮುಂದೆ ಓದಿ… )
 
ಮೊದಲೆಲ್ಲಾ ವಿದೇಶ ಪ್ರಯಾಣ ಮಾಡುವವರ ದೊಡ್ಡದೊಂದು ಫೋಟೊ ಪೇಪರಿನಲ್ಲಿ ಹಾಕಿಸಿ, ಅವರಿಗೆ ಬಂಧು ಮಿತ್ರರು ಶುಭ ಕೋರುತ್ತಿದ್ದರು. ಅದು ಯಾಕೆ ಹಾಗೆ ಮಾಡುತ್ತಿದ್ದರೋ? ಆಗೆಲ್ಲ ಕೆಲವೇ ಕೆಲವು ಜನರು ವಿದೇಶಕ್ಕೆ ಹೋಗುತ್ತಿದ್ದುದರಿಂದ ಅದೂ ಒಂದು ಪ್ರತಿಷ್ಠೆಯ ವಿಷಯವಾಗಿತ್ತೇನೊ? ಹಾಗೆ ಶುಭ ಕೋರುವವರು ಆ ವಿದೇಶ ಪ್ರಯಾಣಿಕರ ಜೊತೆಗೆ ತಮ್ಮನ್ನು ಗುರುತಿಸಿಕೊಂಡು ತಮ್ಮ ಪ್ರತಿಷ್ಠೆ ಮೆರೆಯುತ್ತಿದ್ದರೇನೊ! ಅಥವಾ ಅದಕ್ಕಿದ್ದ ಇನ್ನೊಂದು ಕಾರಣವೆಂದರೆ ಆಗ ಫೆಸ್ ಬುಕ್ ಇರಲಿಲ್ಲವೆಂದೆ?! ಆದರೆ ಈಗ ಇದೆಯಲ್ಲ! 
ಅದಕ್ಕೆ ಜಾನು ತನ್ನ ಫೆಸ್ ಬುಕ್ಕ್ ನ ಮುಖಪುಟದಲ್ಲಿ ದೊಡ್ಡದಾಗಿ "going to miss you India … ನಾವು ಹೊರಟೆವು ಅಮೆರಿಕಾಕ್ಕೆ…   " ಅಂತೇನೊ ಬರೆದದ್ದೇ  ತಡ ಅವಳ ಪೋಸ್ಟಿಗೆ ಬಂಧುಮಿತ್ರರು ಲಗ್ಗೆ ಹಾಕಿ ಲೈಕ್ ಒತ್ತಿದ್ದರು! ಕಮೆಂಟು ಗೀಚಿದರು. ಇದನ್ನು ನೋಡಿ ವೆಂಕಣ್ಣನಿಗೆ ಕೆಂಡದಂಥ ಕೋಪ ಬಂದಿತ್ತು.
"ಹಿಂಗೆಲ್ಲಾ ಸ್ಟೇಟಸ್ ಹಾಕಿ, ಊರಾಗಿನ ಕಳ್ಳರಿಗೆಲ್ಲಾ ನಾವು ಒಂದ ತಿಂಗಳ ನಮ್ಮ ಮನಿ ಬಿಟ್ಟು ಹೊಂಟೇವಿ ಅಂತ ಗೊತ್ತಾಗತದ. ನಾವ್ ವಾಪಸ ಬರೋದರಾಗ ಎಲ್ಲ ಕಳುವು ಮಾಡಿ ಮನಿ ಖಾಲಿ ಮಾಡತಾರ!" ಅಂತ  ಬೈದಿದ್ದಕ್ಕೆ, ಜಾನು ತನ್ನ ಹುಬ್ಬೇರಿಸಿ
"ನಮ್ಮ ಮನ್ಯಾಗ ಅಂಥ ಸಾಮಾನು ಏನೂ ಇಲ್ಲಾ ಬಿಡ್ರಿ. ಕಳ್ಳರು ಬಂದ್ರ ಅವ್ರಿಗೆ ಏನೂ ಸಿಗೂದಿಲ್ಲ." ಅಂದಾಗ ಟ್ರ್ಯಾಕು ಬದಲಿಸುವ ಅವಶ್ಯಕತೆ ಉಂಟಾಗಿ.
"ಅಂಧಂಗ ನಾವು ಹೊಂಟಿದ್ದು ನಿನ್ನ ಅಪ್ಪ ಅಮ್ಮಗ ಹೇಳಿದಿಲ್ಲೊ?" ಅನ್ನುವ ದಡ್ಡತನದ ಪ್ರಶ್ನೆಯೊಂದನ್ನು ಕೇಳಿದನು. ಆಯಾ ದಿನದ ಅಡಿಗೆಯಲ್ಲಿ ಏನು ಮಾಡಿದ್ದೇನೆಂಬುದರಿಂದ ಹಿಡಿದು ಕೆಲಸದವಳು ಇವತ್ತು ಬಂದಿಲ್ಲ ಅನ್ನುವ ಪ್ರತಿಯೊಂದು ವಿಷಯಗಳನ್ನು ಅಮ್ಮನಿಗೆ ಚಾಚುತಪ್ಪದೆ ವರದಿ ಒಪ್ಪಿಸುವ ಜಾನು ವಿದೇಶ ಪ್ರಯಾಣದಂತಹ ದೊಡ್ಡ ವಿಷಯವನ್ನು ಅವರಮ್ಮನಿಗೆ ಹೇಳಿರುವುದಿಲ್ಲವೆ? ಆ ತರಹದ ಪ್ರಶ್ನೆ ಕೇಳುವುದು ದಡ್ಡತನವಲ್ಲದೆ ಮತ್ತೇನು?!    
"ನಿನ್ನೆನ ಹೇಳೇನಿ. ನಾಳೆ ಎಲ್ಲಾರೂ ಬರ್ಲಿಕತ್ತಾರ. ಒಂದ ವಾರ ಇಲ್ಲೇ ಇದ್ದು ನಮ್ಮನ್ನ ವಿಮಾನದಾಗ ಕುಡಿಸಿದ ಮ್ಯಾಲೇ ಊರಿಗೆ ವಾಪಸ್ಸು ಹೋಗ್ತಾರಂತ" ಅಂದಳು.
"ಎಲ್ಲಾರು ಅಂದ್ರ?!" ವೆಂಕಣ್ಣ ಉಗುಳು ನುಂಗುತ್ತ ಕೇಳಿದ.
"ಅಪ್ಪಾ, ಅಮ್ಮಾ, ಇಬ್ಬರೂ  ಅಣ್ಣಂದರು, ಅತ್ತಿಗೆಂದರು ಮತ್ತ ಅವರ ಮಕ್ಕಳು."
"ಒಹ್ ಹೌದಾ?! ಭಾರಿ ಆತಲ್ಲ!" ಅಂತ ಹೇಳಿ, ತನಗಾಗದ ಖುಷಿಯನ್ನು ತೋರಿಸುವ ವ್ಯರ್ಥ ಪ್ರಯತ್ನ ಮಾಡಿ, ಮುಖವನ್ನು ಅರಳಿಸಲು ಸಾಧ್ಯವಾಗದೆ ಬೇರೆ ಕಡೆ ಹೊರಳಿಸಿದ! 
’ಒಂದು ವಾರ ಇಕಿ ತೌರುಮನಿಯವ್ರು ಇಲ್ಲೆ ಟೆಂಟ್ ಹೊಡದರ ಸುದ್ದ ಆತು’ ಅಂತ ಸ್ವಗತದಲ್ಲೆ ಹೇಳಿಕೊಂಡ. ಹೆಂಡತಿಯೆದುರು ಹೇಳಿಕೊಳ್ಳುವ ಧೈರ್ಯಶಾಲಿ ಗಂಡ ಇವನಲ್ಲವಲ್ಲ.
ಅಂತೂ ಇಂತೂ ಇವನು ಅಮೆರಿಕಾಕ್ಕೆ ಹೋಗುವ ಸುದ್ದಿ ಎಲ್ಲಾ ದಿಕ್ಕಿನಲ್ಲೂ ವಿಚಿತ್ರ ರೀತಿಯಲ್ಲಿ ಪಸರಿಸತೊಡಗಿತು. ಹೀಗಿರುವಾಗ ಒಂದು ದಿನ ಇವನ ಫೋನು ರಿಂಗಣಿಸಿ ಹೆಲೋ ವೆಂಕಟ್ ಹಿಯರ್ ಅಂದವನಿಗೆ. 
"ಮತ್ತೇನಪಾ ದೋಸ್ತ, ಭಾರಿ ಧೊಡ್ಡ ಮನಶ್ಯಾ ಆಗಿ ಬಿಡು. ನಾವ ಫೋನ್ ಮಾಡಬೇಕ್ ನೋಡು ನಿನಗ. ನೀನಂತೂ ಮರ್ತಬಿಟ್ಟಿ ನಮ್ಮನ್ನ. ನಾನು ನಿನ್ನ ಗೆಳೆಯಾ ರವಿ ಅನ್ನೋದರೆ ನೆನಪದನೊ ಇಲ್ಲೊ…" ಅಂತ ಬಹಳ ದಿನಗಳ ಮೇಲೆ ಫೋನ್ ಮಾಡಿದ್ದರಿಂದ ಮತ್ತೆ ತನ್ನ ಪರಿಚಯವನ್ನು ಮಾಡಿಕೊಂಡ ಇವನ ಗೆಳೆಯ. ಅದು ಇದು ಮಾತನಾಡಿ ’ಅಮೇರಿಕಾಕ್ಕ ಹೊಂಟಿಯಂತ ಸುದ್ದಿ ಬಂತು…’ ಅಂತ ಅವನಂದಾಗ, ವೆಂಕಣ್ಣ ಹುಷಾರಾದ!
"ಹೌದಪಾ ಒಂದ ತಿಂಗಳಿಗೆ ಹೊಂಟಿನಿ" ಅಂದ.
"ಏ ಅಂಧಂಗ ಅಲ್ಲೆ ಲ್ಯಾಪ್ ಟಾಪ್ ಭಾರಿ ಸಸ್ತಾದಾಗ ಸಿಗತಾವಂತ ಕೇಳ್ದೆ. ನನಗೊಂದು ತೊಗೊಂಬಾ. ಹಂಗ ಒಂದು ಬಾಟಲ್ ವಿಸ್ಕಿನೂ ತೊಗೊಂಡು ಬಾರಪಾ. ಒಮ್ಮೆರೆ ಫಾರಿನದ್ದು ಕುಡ್ಯೋಣಂತ." ಅಂದ. ಗೆಳೆಯ ಬಹಳ ದಿನಗಳ ಮೇಲೆ ಇವನನ್ನು ನೆನಪಿಸಿಕೊಂಡ ಉದ್ದೇಶ ಈಗ ಸ್ಪಷ್ಟವಾಗಿತ್ತು.
"ಆತು ತೊಗೊ ನೋಡೊಣಂತ. ಈಗ ನಂದ ಮೀಟಿಂಗ್ ಅದ, ಅಮ್ಯಾಲೆ ಫೋನ್ ಮಾಡ್ತೀನಿ." ಅಂತ ಹೇಳಿ ಕರೆಯನ್ನು ಮೊಟಕುಗೊಳಿಸಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡ.
ಹೀಗೆ ಒಬ್ಬೊಬ್ಬರಾಗಿ, ಯಾರ್ಯಾರೊ ಫೋನ್ ಮಾಡಿ, ನನಗೆ ಅದು ಬೇಕು ಇದು ಬೇಕು ಅಂತ ಕೇಳತೊಡಗಿ ಇವನ ಇಂಪೊರ್ಟೆಡ್ ವಸ್ತುಗಳ ಪಟ್ಟಿ ಉದ್ದವಾಗತೊಡಗಿತು! ಅಮೇರಿಕಾದಲ್ಲಿ ಸಿಗೋದೆ ’ಮೇಡ್ ಇನ್ ಚೈನಾ’ ಸಾಮಾನುಗಳು. ಅದನ್ನ ಅಮೇರಿಕಾದಿಂದಲೇ ತರಿಸಿಕೊಳ್ಳಬೇಕೆಂಬ ಜನರ ಬಯಕೆ ಕಂಡು ಬೆರಗಾದನವನು. 
ಇವನ ಇನ್ನೊಬ್ಬ ಗೆಳೆಯ ಇವನ ಜೊತೆಗೆ ತನ್ನ ಸಂಕಟವನ್ನೂ ತೋಡಿಕೊಂಡ. ಏನಾಗಿತ್ತೆಂದರೆ, ಇವನು ತನ್ನ ಪರಿವಾರ ಸಮೇತ ಅಮೇರಿಕಾಕ್ಕೆ ಹೊರಟ ಸುದ್ದಿ ಕೇಳಿ ಆ ಗೆಳೆಯನ ಹೆಂಡತಿ,
"ವೆಂಕಣ್ಣನ್ನ ನೋಡಿ ಸ್ವಲ್ಪ ಕಲೀರಿ. ನಾವಂತೂ ಇಲ್ಲೆ ಭಾಂಡಿ ತೊಳಕೋತ ಕೂಡೊದ ಆತು. ನಾನು ಯಾವಾಗ ಅಮೇರಿಕಾ ಕಾಣತೇನೊ ಏನೊ. ಎಲ್ಲಾ ನಮ್ಮ ಕರ್ಮ" ಅಂತ ಅವನೊಂದಿಗೆ ಜಗಳ ಮಾಡಿದ್ದಳಂತೆ.
"ನೀ ಬರೆ ಇಂಥಾ ಬ್ಯಾಟಾ ಹಚ್ಚತಿ ನೋಡಪಾ. ನೀ ಮಾಡೊ ಕೆಲಸಕ್ಕ ಮನ್ಯಾಗ ನಾವ್ ಬೈಸಿಕೋಬೇಕು." ಅಂತ ಕೋಪಗೊಂಡಿದ್ದ ಇವನ ಮಿತ್ರ.
’ಇದೊಳ್ಳೆ ಕಥೆ ಆಯ್ತಲ್ಲ! ನನ್ನ ಹೆಂಡತೀನ ನಾ ಕರ್ಕೊಂಡು ಹೊಂಟ್ರ ಇವರಿಗೇನ್ ಸಮಸ್ಸೆ’ ಅಂತ ವೆಂಕಣ್ಣ ತಲೆ ಚಚ್ಚಿಕೊಂಡ.
ಇದೆಲ್ಲದರ ಜೊತೆಗೆ ಅಮೇರಿಕಾಕ್ಕೆ ಏನೇನು ಒಯ್ಯುವುದು ಅನ್ನುವ ಬಗ್ಗೆ ಜಾನು ತುಂಬಾ ತಲೆ ಕೆಡಿಸಿಕೊಂಡಳು. ತನ್ನ ಬಳಿ ಇದ್ದ ಬಟ್ಟೆಗಳೆಲ್ಲಾ ಅವಳಿಗೆ ತುಂಬಾ ಹಳೆಯದಾಗಿ ಕಾಣತೊಡಗಿ ಒಂದಿಷ್ಟು ಹೊಸ ಹೊಸ ಮಾಡರ್ನ್ ಬಟ್ಟೆಬರೆಗಳನ್ನು ತನಗೂ ತನ್ನ ಮಗಳಿಗೂ ಅಂತ ಖರಿದಿಸಿ ಇವನ ಕ್ರೆಡಿಟ್ ಕಾರ್ಡಿಗೆ ಕತ್ತರಿ ಹಾಕಿದಳು! ಕಾಯಿ ಪಲ್ಲೆಗಳನ್ನೊಂದು ಬಿಟ್ಟು ಉಳಿದೆಲ್ಲ ದಿನಸಿಗಳನ್ನೂ ಖರಿದಿಸಿ ಅಮೇರಿಕಾಕ್ಕೆ ಒಯ್ಯಲು ಪ್ಯಾಕ್ ಮಾಡಿಟ್ಟುಕೊಂಡಳು.
"ಅಲ್ಲೆ ಹೋಗಿ ಅಂಗಡಿ ಹಾಕು ವಿಚಾರದ ಏನ್ಲೆ? ಅಲ್ಲೆ ಎಲ್ಲಾ ಸಿಗತಾವು. ನಾವು ಮರಭೂಮಿಗೆ ಹೊಂಟಿಲ್ಲ" ಅಂತ ವೆಂಕಣ್ಣ ದಬಾಯಿಸಿದಾಗ,
"ನಿಮಗ ಗೊತ್ತಾಗಂಗಿಲ್ಲ ಸುಮ್ಮನಿರ್ರಿ, ಆಲ್ಲೆ ತೊಗೊಂಡ್ರ ದುಬಾರಿ ಆಗ್ತದ. ಅದೂ ಅಲ್ಲದ ಡಾಲರ್ ಕೊಟ್ಟು ಕೊಂಡಕೊಬೇಕು. ಇದಕ್ಕ ಎಲ್ಲಾ ರೊಕ್ಕಾ ಖರ್ಚು ಮಾಡಿದರ ಅಮ್ಯಾಲೆ ಅಲ್ಲೆ ಶಾಪಿಂಗ್ ಏನ್ ಮಾಡೋದು?" ಅಂತ ಹೇಳಿ, ಇವನ ಎದೆಯ ಕಂಪನಕ್ಕೆ ಕಾರಣಳಾದಳು.

ತೌರು ಮನೆಯವರೆಲ್ಲಾ ಬಂದದ್ದರಿಂದ ಮನೆಯಲ್ಲಿ ಹಬ್ಬದ ವಾತಾವರಣವಿತ್ತು. ಯಾರಿಗೆ? ಜಾನುಗೆ! ವೆಂಕಣ್ಣನಿಗಲ್ಲ!! ಅಂತೂ ಹೊರಡುವ ದಿನ ಬಂದಾಗ ನಿಟ್ಟುಸಿರಿಟ್ಟ. ಟ್ಯಾಕ್ಸಿ ಯಲ್ಲಿ ಬೆಂಗಳೂರಿನ ವಿಮಾನ ನಿಲ್ದಾಣದ ಒಳಗೆ ಪ್ರವೇಶಿಸುತ್ತಿದ್ದಂತೆ "ವಿಮಾನಾಲಯ" ಅನ್ನುವ ಕನ್ನಡದಲ್ಲಿ ಬರೆಸಿಕೊಂಡ ಬೋರ್ಡು ಗೋಚರಿಸಿತು. ಅದನ್ನು ಕಂಡು, "ಅಪ್ಪಾ ವಿಮಾನಾಲಯ ಅಂದ್ರ ಏನ್ ಮೀನಿಂಗು?" ಅಂತ ಸೆಕೆಂಡ್ ಲ್ಯಾಂಗ್ವೇಜ್ ಕನ್ನಡಾ ಓದುತ್ತಿದ್ದ ಮಗಳು ಕೇಳಲಾಗಿ "ಹಂಗಂದ್ರ ಟರ್ಮಿನಲ್ ಅಂತ ಅರ್ಥ ಮಗಳ ಅಂತ ಹೇಳಿ, ಮೇಲೆರುತ್ತಿದ್ದ ವಿಮಾನವೊಂದನ್ನು ಟ್ಯಾಕ್ಸಿಯ ಕಿಟಕಿಯಿಂದಲೆ ನೆಟ್ಟ ದೃಷ್ಟಿಯಿಂದ ನೋಡತೊಡಗಿದನವನು.