Saturday, February 1, 2014

ಕನ್ನಡೋದ್ಧಾರ!

ಪಂಜುನಲ್ಲಿ ಪ್ರಕಟವಾಗಿದ್ದ "ಕನ್ನಡೋದ್ಧಾರ!", ಓದಿ ಅನಂದಿಸಿ!
 
ಮದುವೆಯಾಗಿ ಬೆಂಗಳೂರಿಗೆ ಬಂದಮೇಲೆ ಇನ್ನೂ ಒಂದು ಸಲಾನೂ ಸಿನಿಮಾಗೇ ಕರೆದುಕೊಂಡು ಹೋಗಿಲ್ಲಾ ಅಂತ ಅವತ್ಯಾಕೋ ಅನಿರೀಕ್ಷಿತವಾಗಿ ನೆನಪಾಗಿ ಜಾನು ರಂಪ ಮಾಡಿಕೊಂಡಿದ್ದಳು. ಗಪ್ಪಣ್ಣನಿಗೆ ಅವಳ್ಯಾಕೋ ಸಿಕ್ಕಾಪಟ್ಟೆ ತವರನ್ನು ಮಿಸ್ ಮಾಡಿಕೊಳ್ಳುತ್ತಿರಬಹುದೇ ಎಂದು ಅನಿಸಿತಾದ್ದರಿಂದ, ತಡ ಮಾಡದೇ … "ಅದಕ್ಕೇನಂತ ಇವತ್ತ ಹೋಗೋಣ ನಡಿ" ಅಂದು ಜಾನುನಲ್ಲಿ ಜಾನ್ ತಂದ! ಕೂಡಲೇ ಜಾನು ಕಾರ್ಯಪ್ರವೃತ್ತಳಾಗಿ, ಪಲ್ಲಂಗದ ಕೆಳಗಿನ ಮೂಲೆಯಲ್ಲಿ ಜೋಪಾನವಾಗಿ ಎಸೆದಿದ್ದ ಅವತ್ತಿನ ಪೇಪರ್ ಅನ್ನು ಎತ್ತಿ ತಂದು ಅದರಲ್ಲಿನ ಸಾಪ್ತಾಹಿಕ ಪುರವಣಿಯಲ್ಲಿದ್ದ ಅಸಂಖ್ಯಾತ ಸಿನಿಮಾಗಳ ಯಾದಿಯಲ್ಲಿ ಒಂದಕ್ಕೆ ಬೆರಳು ಹಿಡಿದು ತೋರಿಸಿದಾಗ ಗಪ್ಪಣ್ಣನ ಎದೆಯಲ್ಲಿ ರಕ್ತ ಹೆಪ್ಪುಗಟ್ಟಿದಂತಾಗಿತ್ತು! ಅವಳು ನೋಡಲು ಬಯಸಿದ್ದ ಸಿನಿಮಾ ಶಾಹ್ ರುಖ್ ಖಾನ್ ನ ’ಚೆನ್ನೈ ಎಕ್ಸ್ ಪ್ರೆಸ್’ ಎಂಬ ಹಿಂದಿ ಸಿನಿಮಾ. ಈ ಖಾನ್ ನ ಎಲ್ಲ ಹಲ್ಲುಗಳುದುರಿ ಮುದುಕನಾದರೂ ಅವನ ಅಭಿಮಾನಿಗಳಿಗೇನು ಕೊರತೆಯಿಲ್ಲ. ಆ ಹೆಣ್ಣೂ ಮಕ್ಕಳಿಗಂತೂ ಏನು ಮೋಡಿ ಮಾಡಿದ್ದಾನೋ ನನ ಮಗಾ ಅಂತ ಮಾತ್ಸರ್ಯದಿಂದ ತಾನೇನು ಅವನಿಗೆ ಕಡಿಮೆಯಿರಬಹುದು ಅಂತ ಕನ್ನಡಿ ನೋಡಿಕೊಂಡ. ತನ್ನ ಅಖಂಡವಾದ ಸಿಂಗಲ್ ಪ್ಯಾಕ್ ಬಾಡಿ ಕಂಡು ಬೆಚ್ಚಿ ಬಿದ್ದ! ........  

http://www.panjumagazine.com/?p=6134

 

Friday, January 24, 2014

ಪೂರ್ವ ಹಾಗೂ ಈಶಾನ್ಯ ಭಾರತದ ಪ್ರವಾಸ

ನಮ್ಮ ಪ್ರವಾಸ ಕಥನ ಪಂಜು ಪತ್ರಿಕೆಯಲ್ಲಿ ಐದು ಭಾಗಗಳಲ್ಲಿ ಪ್ರಕಟವಾಗಿತ್ತು. ಕೆಳಗೆ ಐದು ಭಾಗಗಳ ಲಿಂಕ್ ಇವೆ. ಓದಿ ಆನಂದಿಸಿ :)

ಮೊದಲನೇ ಭಾಗ: http://www.panjumagazine.com/?p=5012

"ಯಾವುದೆ ಪ್ರವಾಸದಲ್ಲಿ ಅನುಭವಿಸುವ ಅನಂದಕ್ಕಿಂತ ಆ ಪ್ರವಾಸಕ್ಕಾಗಿ ಮಾಡುವ ಸಿಧ್ಧತೆ ಹಾಗೂ ಅದರ ಕಲ್ಪನೆಯಲ್ಲಿ ಸಿಗುವ ಮಜವೇ ಅದ್ಭುತ!" ಅಂತ ನಮ್ಮ ಕೃಷ್ಣ ಮೂರ್ತಿ ಅವರ ಅಂಬೋಣ. ಅದು ನಿಜವೂ ಹೌದು. ಹಾಗೂ ಆ ಮಾತು ಪ್ರವಾಸಕ್ಕಷ್ಟೇ ಸೀಮಿತವಲ್ಲ. ಯಾವುದೇ ವಿಷಯದಲ್ಲೂ ಕಲ್ಪನೆಯಲ್ಲಿರುವ ಖುಷಿಯೇ ಬೇರೆ. ಹೀಗೆ ನಮ್ಮ ಪೂರ್ವ ಹಾಗೂ ಈಶಾನ್ಯ ಭಾರತದ ಪ್ರವಾಸದ ಪರಿಕಲ್ಪನೆ ಶುರುವಾದದ್ದು ಮೂರು ತಿಂಗಳ ಹಿಂದೆ. ಎಲ್ಲೆಲ್ಲಿ ಹೋಗುವುದು, ಏನೇನು ಸಿದ್ಧತೆಗಳು, ಎಲ್ಲಿ ಪ್ಲೇನು, ಎಲ್ಲಿ ಟ್ರೇನು  [...]

ಎರಡನೇ ಭಾಗ: http://www.panjumagazine.com/?p=5086

ಇಷ್ಟು ಬೇಗ ಬೆಳಕಾಯ್ತೆ!? ಒಂದೊಂದು ಸಲ ನಿದ್ದೆ ಸಾಲದಾದಾಗ, ಏಳಲೇಬೇಕಾದ ಅನಿವಾರ್ಯತೆಯಿದ್ದಾಗ ಹಾಗನ್ನಿಸಿಬಿಡುತ್ತದೆ! ಇನ್ನೂ ಹಳೆಯದರಂತೇ ಗೋಚರಿಸುವ ಬಂಗಾಲದ New Jalpaiguri ಎಂಬ ಊರಿನಲ್ಲಿ ಗಂಟು ಮೂಟೆಗಳೊಂದಿಗೆ ಬೆಳ್ಳಂ ಬೆಳಿಗ್ಗೆ ಟ್ರೇನಿನಿಂದ ಇಳಿದಾಗ, ಇಲ್ಲಿ ಹೊಸ (New) ದೇನಿರಬಹುದು ಅಂತ ಯೋಚಿಸುತ್ತಲೇ ಹೊರಗೆ ಬಂದಾಗ ಎರಡು ಝೈಲೋ ಗಾಡಿಗಳು ಹಾಗೂ ಇಬ್ಬರು ಸಾರಥಿಗಳು ನಮಗಾಗಿ ಕಾಯ್ದಿದ್ದರು. ಒಬ್ಬನ ಹೆಸರು ಸರೋಜ್ ಇನ್ನೊಬ್ಬ ನೀ ಮಾ. ಇಬ್ಬರೂ ನೇಪಾಳಿಗಳು. ನೀ ಮಾ ಅಂದರೆ ನೇಪಾಳೀ ಭಾಷೆಯಲ್ಲಿ ಸುರ್ಯೋದಯವಂತೆ. [...]

ಮೂರನೇ ಭಾಗ: http://www.panjumagazine.com/?p=5208

ಟೈಗರ್ ಹಿಲ್ ನ ಸುರ್ಯೋದಯ ನೋಡಿ ಬಂದು ಒಂಭತ್ತು ಗಂಟೆಗೆಲ್ಲಾ ತಯಾರಾಗಿ ಹೋಟೆಲ್ ಹೊರಗೆ ನಿಂತವರ ಮುಖಗಳು ಲವಲವಿಕೆಯಿಂದ ಕಂಗೊಳಿಸುತ್ತಿದ್ದವು. ಯಾಕಂತೀರಾ? ಬೆಂಗಳೂರು ಬಿಟ್ಟ ಮೇಲೆ ಮೊದಲ ಬಾರಿಗೆ ಎಲ್ಲರಿಗೂ ಸ್ನಾನ ಮಾಡುವ ಅವಕಾಶ ಸಿಕ್ಕಿದ್ದು ಅವತ್ತೇ! ತಾನು ಹೇಳಿದ್ದ ಟೈಮಿಗೆ ನಾವು ಸರಿಯಾಗಿ ಬಂದಿಲ್ಲಾ ಅಂತ ನೀಮಾ ಮುಖ ಸಿಂಡರಿಸಿಕೊಂಡಿದ್ದ. ಮೊದಲೇ ಕೆಂಪಗಿದ್ದವನು ಇನ್ನೂ ಕೆಂಪಾಗಿದ್ದ ಏನೇನೋ ಪ್ರಯತ್ನಗಳನ್ನು ಮಾಡಿ ಅವನ ಮುಖದ ಗಂಟುಗಳನ್ನು ಯಶಸ್ವಿಯಾಗಿ ಬಿಡಿಸಿದೆವು. [...]

ನಾಲ್ಕನೇ ಭಾಗ: http://www.panjumagazine.com/?p=5336

  ಅವತ್ತು ಬೆಳಿಗ್ಗೆ ದಾರ್ಜಿಲಿಂಗ್ ಗೆ ವಿದಾಯ ಹೇಳಿ ಕಾಲಿಮ್ ಪಾಂಗ್‍ಗೆ ನಮ್ಮ ಸವಾರಿ ಸಾಗಿತ್ತು. ಮಾರ್ಗ ಮಧ್ಯದಲ್ಲಿ ಒಂದು ಅದ್ಭುತ ಜಾಗದಲ್ಲಿ ಟ್ರೆಕ್ಕಿಂಗ್‍ಗೆ ಕರೆದೊಯ್ಯುವುದಾಗಿ ಭರವಸೆ ಕೊಟ್ಟು ನಮ್ಮನ್ನು ಕುತೂಹಲಿಗಳನ್ನಾಗಿರಿಸಿದ್ದ ನಮ್ಮ ನೀ ಮಾ. ನಾವು ಹೊರಟು ಸುಮಾರು ಎರಡು ಗಂಟೆಗಳಾಗಿತ್ತೇನೊ ಲಾಮಾ ಹಟ್ಟಾ ಅನ್ನುವ ಒಂದು ಹಳ್ಳಿಯಲ್ಲಿ ನಮ್ಮ ಗಾಡಿ ನಿಂತಿತು. ಅದು ಮುಖ್ಯ ರಸ್ತೆಯಲ್ಲೇ ಇರುವ ಒಂದು ಹಳ್ಳಿ.  [...]

ಐದನೇ ಭಾಗ: http://www.panjumagazine.com/?p=5432

ಕಾಲಿಮ್ ಫಾಂಗ್ ನಿಂದ ಗ್ಯಾಂಗ್ ಟಾಕ್ ಗೆ ಹೋಗುತ್ತಿದ್ದಾಗ ಮಧ್ಯೆ ದಾರಿಯಲ್ಲಿ ನಮಗರಿವಿಲ್ಲದಂತೆ ಒಮ್ಮೆಲೆ ಬೆಂಗಳೂರಿನ ನೆನಪಾಯಿತು. ಅದಕ್ಕಿದ್ದ ಒಂದೇ ಕಾರಣವೆಂದರೆ… ಈ ಪ್ರವಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಅರ್ಧ ಗಂಟೆ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕೊಂಡಿದ್ವಿ! ಅಂತೂ ಪೋಲಿಸರಿಲ್ಲದಿದ್ದರೂ ಹೇಗೋ ಆ ಜಾಮ್ ಕರಗಿ ನಮ್ಮ ಪಯಣ ಮುಂದುವರಿಯಿತು. ಗ್ಯಾಂಗ್ ಟಾಕ್, ಸಿಕ್ಕಿಂ ಎಂಬ ಪುಟ್ಟ ರಾಜ್ಯದ ರಾಜಧಾನಿ. ಆ ಊರಿಗೆ ಪ್ರವೇಶಿಸುವುದಕ್ಕೆ ಮೊದಲು, ಬಂಗಾಲ ಹಾಗೂ ಸಿಕ್ಕಿಂ ನ ಗಡಿಯಲ್ಲಿ [...]

Sunday, October 27, 2013

ನಾನು ಬಡವ?

(ಪಂಜು ಪತ್ರಿಕೆಯಲ್ಲಿ ದಿ. ೩೦ ಸೆಪ್ಟೆಂಬರ್, ೨೦೧೩ ರಂದು ಪ್ರಕಟವಾಗಿತ್ತು)
http://www.panjumagazine.com/?p=4620

-------------------------------------------------------------------------------

ಮೂರ್ತಿ ಯಾವುದೋ ಒಂದು ಪುಸ್ತಕದಲ್ಲಿ ಗಹನವಾಗಿ ಮುಳುಗಿದ್ದವರು ನಿಟ್ಟುಸಿರು ಬಿಟ್ಟು ಹೀಗೆ ಅರುಹಿದರು…

ಮೂರ್ತಿ: "ಗುರು, ಹಿಂದಿನ ಕಾಲದಲ್ಲಿ ನಮ್ಮ ದೇಶದಲ್ಲಿ ಎಂಥಾ ಸುಭಿಕ್ಷೆ ಇತ್ತಂತೆರೀ… ನಿಮಗೊತ್ತಾ? ಆಗ ವಿಜಯನಗರ ಸಾಮ್ರಾಜ್ಯದಲ್ಲಿ ಮುತ್ತು, ರತ್ನ, ಬಂಗಾರಗಳನ್ನ ತರಕಾರಿಗಳ ತರ ಸಂತೆಲಿ ಮಾರುತ್ತಿದ್ದರಂತೆ!"

ಗುರು: "ಹೌದು, ಆದ್ರೆ ಆಗಿನ ಕಾಲಕ್ಕೆ ಈಗಿನ ಕಾಲಕ್ಕೆ ಅಷ್ಟೆಲ್ಲಾ ಡಿಫರನ್ಸು ಇಲ್ಲಾ ಬಿಡ್ರೀ."

ಮೂ: "ಅಧೆಂಗ್ರೀಪಾ?"

ಗು: "ಈಗ ತರಕಾರಿಗಳನ್ನ ಮುತ್ತು, ರತ್ನ, ಬಂಗಾರಗಳ ರೇಟಿನಲ್ಲಿ ಮಾರ್ತಾರೆ ಅಷ್ಟೆ!!"

ಮೂ: "ಹ್ಹ ಹ್ಹ ಹ್ಹ! ಹೌದು ಬಿಡ್ರೀ. ಈರುಳ್ಳಿ ರೇಟು 100 ರುಪಾಯಿ ಕೇಜಿ ಅಂತ್ರೀಪಾ."

ಗು: "ಹೌದ್ರೀ, ತುಂಬಾ ದಿನಾ ಆಯ್ತು ಮನೇಲಿ ಈರುಳ್ಳಿ ಭಜಿ ತಿಂದು…"

ನಾನು ಕನಸು ಕಾಣತೊಡಗಿ ಒಂದು ದೊಡ್ಡ ನಿಟ್ಟುಸಿರು ಬಿಟ್ಟೆ.



ಗು: "ಅಲ್ರೀ ಮೂರ್ತಿ ನಮ್ಮ ಪರಿಸ್ಥಿತಿನೇ ಹೀಂಗಾದ್ರೆ, ಪಾಪಾ ಬಡವರ ಗತಿ ಏನು?"

ನಾನು ಮಹಾ ಶ್ರಿಮಂತನೆನ್ನುವ ಮುಖಮುದ್ರೆಯೊಂದಿಗೆ ಈ ಡೈಲಾಗು ಹೊಡೆದು ಮೂರ್ತಿಯವರನ್ನು ನೋಡಿದೆ. ಅವರು ಗಹನ ಯೋಚನೆಯಲ್ಲಿ ಮುಳುಗಿದ್ದರಾ ಇಲ್ಲಾ ಹಾಗೆ ನಟಿಸುತ್ತಿದ್ದರಾ ಗೊತ್ತಿಲ್ಲ! ಕೆಲವು ಕ್ಷಣಗಳ ಬಳಿಕ ನನ್ನ ಮೇಲೊಂದು ಪ್ರಶ್ನೆಯ ಬಾಣವೊಂದನ್ನು ಎಸೆದು ಕಂಗಾಲುಗೊಳಿಸಿದರು!

ಮೂ: "ಬಡವರು ಅಂದ್ರೆ ಯಾರು? ಹೇಳಿ ನೋಡೋಣಾ!"

ಇದೆಂತಹ ಪ್ರಶ್ನೆ?! ನಾನು ಗೊಂದಲಕ್ಕೆ ಬಿದ್ದೆ. ಆದರೂ ಗೊತ್ತಿಲ್ಲವೆಂದು ಹೇಳೋಕಾಗುತ್ತೆಯೆ?

ಗು: "ಬಡವರೆಂದರೆ ಬಡತನದ ರೇಖೆಗಿಂತ ಕೆಳಗಿರುವವರು."

ಅಂತ ಹೇಳಿ, ಇದೇನ್ಮಹಾ ಪ್ರಶ್ನೆ ಅನ್ನುವ ವದನದೊಂದಿಗೆ ಇರುವಾಗಲೇ…

ಮೂ: "ತಪ್ಪು" ಅಂದರು!

ನನಗೆ ಕನ್ನಡದ ಕೋಟ್ಯಾಧಿಪತಿಯಲ್ಲಿ ತಪ್ಪು ಉತ್ತರ ಹೇಳಿ ಪುನೀತನ ಎದುರು ಪೆಚ್ಚು ಮೋರೆ ಹಾಕಿ ಕುಂತಗಾಯ್ತು!



ಗು: "…. ?"

ಮೂ: "ತನ್ನಲ್ಲಿ ಏನೋ ಒಂದು ಕೊರತೆ ಇದೆ ಅಂದುಕೊಂಡು, ಆ ಕೊರತೆಯ ಕೊರಗನ್ನು ಅನುಭವಿಸುವವನೇ ಬಡವ"

ಗು: "ಅಂದ್ರೆ, ಈರುಳ್ಳಿಯ ಕೊರತೆಯನ್ನು ಅನುಭವಿಸುತ್ತಿರುವ ನಾನೂ ಬಡವನೇ??" ಸ್ವಲ್ಪ ಸಿಟ್ಟಿನಿಂದಲೇ ಕೇಳಿದೆ.

ಅವರು ನಸು ನಕ್ಕು ಹೇಳಿದರು.

ಮೂ: "ಹಾಗಂತ ಅಲ್ಲಾ ಗುರು. ಯಾವನು ಎಲ್ಲಿಯವರೆಗೆ ತನಗೆ ಅದು ಬೇಕು ಇದು ಬೇಕು ಅಂತ ಹಪಹಪಿಸಿ ಕೊರತೆ ಅನುಭವಿಸುವನೋ, ಅಲ್ಲಿಯವರೆಗೆ ಅವನು ಬಡವನೇ. ಅದು ನಾನೂ ಆಗಿರಬಹುದು, ನೀವು ಅಥವ ಅಂಬಾನಿಯೂ ಆಗಿರಬಹುದು! ನಿಮ್ಮ ಹತ್ತಿರ ಒಂದು ಕಾರು ಇದೆ, ಆದರೂ ನೀವು ಇದಕ್ಕಿಂತ ದೊಡ್ಡ ಕಾರು ನಿಮ್ಮ ಬಳಿ ಇರಬೇಕಿತ್ತು ಅಂತ ಆಸೆ ಪಟ್ಟು, ಆ ಕೊರತೆ ಅನುಭವಿಸಿದರೆ ನೀವೂ ಬಡವರೆ!"

ಹೌದಲ್ಲವೇ! ಮೂರ್ತಿಗಳು ಒಂದು ಯಾಂಗಲ್‍ನಲ್ಲಿ ಕ್ಲೀನ್ ಆಗಿ ಶೇವ್ ಮಾಡಿದ ಯವುದೋ ಒಬ್ಬ ತತ್ವ ಜ್ಞಾನಿಗಳಂತೆ ಕಾಣತೊಡಗಿದರು! ಅವರು ಹೇಳಿದ್ದು ಸತ್ಯವೆನಿಸಿತು ಕೂಡ. ನಾನೂ ಯೋಚನೆಗೆ ತೊಡಗಿದೆ. ನನ್ನ ಆಸೆಗಳ ಯಾದಿ ದೊಡ್ಡದೇ ಇದೆ. ನಾನೂ ಒಬ್ಬ ಬಡವನೇ!

ಗು: "ಸರಿಯಾಗಿ ಹೇಳಿದ್ರಿ ಮೂರ್ತಿ. ನಿಮ್ಮ ಮಾತು ಒಪ್ಪಬೇಕಾದದ್ದೆ."

ಅಷ್ಟರಲ್ಲೇ ಮನೆಯ ಹೊರಗೆ "ನೂರು ರುಪಾಯಿಗೆ ಎರಡು ಕೇಜಿ ಈರುಳ್ಳೀ…" ಅಂತಾ ಕೂಗಿದಂತಾಯ್ತು. ನನ್ನ ಕಿವಿಗಳು ನಿಮಿರಿದವು. ಕೈಗೆ ಸಿಕ್ಕ ಚೀಲ ಹಿಡಿದು ಹೆಂಡತಿಯ ಅಪ್ಪಣೆಗೂ ಕಾಯದೇ ಹೊರಗೆ ಓಡಿದೆ. ತಳ್ಳುವ ಗಾಡಿಯಲ್ಲಿ ಈರುಳ್ಳಿಗಳು. ಅವುಗಳ ಗಾತ್ರ ಮಾತ್ರ ಬೆಳ್ಳುಳ್ಳಿಗಿಂತ ಸ್ವಲ್ಪ ದೊಡ್ಡ ಅಷ್ಟೆ! ನಮಗೇನಾಗಬೇಕು, ಒಟ್ಟಿನಲ್ಲಿ ಈರುಳ್ಳಿ ಭಜಿ ತಿನ್ನಬೇಕು ಅಷ್ಟೆ! ಇದ್ದುದರಲೇ ಸ್ವಲ್ಪ ದೊಡ್ಡದನ್ನು ಆರಿಸೋಣವೆಂದರೆ, ತಳ್ಳುವ ಗಾಡಿಯವನು ಅದಕ್ಕೂ ಅವಕಾಶ ಕೊಡಲಿಲ್ಲ. ಒಟ್ಟಿನಲ್ಲಿ ಎರಡು ಕೇಜಿ ಈರುಳ್ಳಿಗಳನ್ನು ಪೇರಿಸಿಕೊಂಡು ಮನೆಗೆ ತಂದೆ. ಈರುಳ್ಳಿ ಭಜಿ ಮಾಡಿಸಿಕೊಂಡು ತಿಂದು ಕೊರತೆ ನೀಗಿಸಿಕೊಂಡೆವು. ಆದರೂ ಬಡತನದ ಹೊಸ ವ್ಯಖ್ಯಾನ ತಲೆ ಕೊರೆಯುತ್ತಿತ್ತು…

Saturday, September 14, 2013

ಅವಳು!

(ಪಂಜು ಪತ್ರಿಕೆಯಲ್ಲಿ ದಿ. ೦೯ ಸೆಪ್ಟೆಂಬರ್, ೨೦೧೩ ರಂದು ಪ್ರಕಟವಾಗಿತ್ತು)
http://www.panjumagazine.com/?p=4340

----------------------------------------------------------------------------------------------
ಇವತ್ತಿಗೆ ಸರಿಯಾಗಿ ಆರು ವರುಷಗಳ ಹಿಂದೆ ನಾನವಳ ಭೇಟಿಯಾಗಿದ್ದೆ. ಮೊದಲ ನೋಟದಲ್ಲೇ ಅವಳಲ್ಲಿ ಅನುರಕ್ತನಾದೆ. ಅವಳಲ್ಲಿ ತುಂಬಾ ಇಷ್ಟವಾಗಿದ್ದು ಅವಳ ಸ್ನಿಗ್ಧ ಸೌಂದರ್ಯ ಹಾಗು ಅವಳ ಬಣ್ಣ! ಅವತ್ತೇ ಅವಳನ್ನು ಮನೆಗೆ ಕರೆದುಕೊಂಡು ಬಂದಿದ್ದೆ. ಅಪ್ಪ ಎಂದಿನಂತೆ ಬೈದಿದ್ದ. ನಾನವಳನ್ನು ಕರೆದುಕೊಂಡು ಬಂದಿದ್ದು ಅವನಿಗೆ ಸುತಾರಾಮ್ ಇಷ್ಟವಿರಲಿಲ್ಲ. ಆತ ನನ್ನ ಮೇಲೆ ಕೋಪಗೊಂಡಿದ್ದು ಸ್ಪಷ್ಟವಾಗಿತ್ತು. ಆದರೆ ಮುಂದೆ ಎಲ್ಲಾ ಸರಿ ಹೋಗುವುದೆಂಬ ಭರವಸೆ ನನಗೆ. ಅವತ್ತಿಗೆ ಅವನಿಗೆ ಎದುರು ಮಾತನಾಡದೇ ಸುಮ್ಮನಿದ್ದೆ. ಆದರೆ ನನಗಿದ್ದ ದೊಡ್ಡ ಅಳುಕು, ನನ್ನ ಹೆಂಡತಿ ಅವಳನ್ನು ಹೇಗೆ ಸ್ವೀಕರಿಸುವಳೋ ಎಂದು. ಆದರೆ ಮೊದಲ ದಿನವೇ ಆರತಿ ತಟ್ಟೆಯೊಂದಿಗೆ ಅವಳನ್ನು ಸ್ವಾಗತಿಸಿ ಅಚ್ಚರಿ ಮೂಡಿಸಿದ್ದಳು. ಮೊದ ಮೊದಲು ಅವಳ ಜೊತೆ ಹೊರಗೆ ಹೋದಾಗ ತುಂಬಾ ಮುಜುಗರವಾಗುತ್ತಿತ್ತು. ಎಲ್ಲರ ಕಣ್ಣು ನಮ್ಮ ಮೇಲೇ ಇದೆಯೆನೋ ಎಂದು ಸಂಕೋಚದಿಂದ ಮುದುಡಿ ಹೋಗುತ್ತಿದ್ದೆ. ಆದರೆ ಬರ್ತಾ ಬರ್ತಾ ನನಗವಳು, ಅವಳಿಗೆ ನಾನು ಹೋಂದಿಕೊಂಡೆವು. ಸುತ್ತಲಿನ ಜನರೂ ದುರುಗುಟ್ಟಿ ನೋಡುವುದು ಕ್ರಮೇಣ ಅಭ್ಯಾಸವಾಯ್ತೊ ಅಥವ ಅವರು ಹಾಗೆ ನೋಡುವುದ ಕಡಿಮೆ ಮಾಡಿದರೋ ಒಟ್ಟಿನಲ್ಲಿ ಅವಳ ಸಂಗ ನನಗೆ ರೂಢಿಯಯ್ತು.

 

ಅವಳು ನನ್ನನ್ನು ಎಷ್ಟು ಕಾಳಜಿವಹಿಸಲು ಶುರು ಮಾಡಿದಳೆಂದರೆ, ತಾನು ಮಳೆಯಲ್ಲಿ ನೆಂದು ತೊಪ್ಪೆಯಾದರೂ ನನಗೊಂದು ಹನಿ ಸಿಡಿಯಲೂ ಬಿಡುತ್ತಿರಲಿಲ್ಲ.  ತಾನು ಬಿಸಿಲಲ್ಲಿ ಬೆಂದರೂ ನನಗೆ ತಂಪನೆರಗಿದಳು. ಅಂಥ ತ್ಯಾಗಮಯಿ ಅವಳು. ನನ್ನ ಮಾತೇ ಅವಳಿಗೆ ವೇದ ವಾಕ್ಯ. ನಾನು ಹೇಳಿದಂತೆ ಕೇಳತೊಡಗಿದಳು. ಆದರೆ ದಿನಕಳೆದಂತೆ ನಾನು ಅವಳ ಮೇಲೆ ತುಂಬಾ ಅವಲಂಬಿತನಾಗತೊಡಗಿದೆ. ಅವಳನ್ನು ಬಿಟ್ಟು ಎಲ್ಲೂ ಹೋಗಲಾರದಷ್ಟು, ನಾನವಳಿಗೆ ಹೊಂದಿಕೊಂಡು ಬಿಟ್ಟೆ. ನನ್ನ ಹೇಂಡತಿಗದು ಇಷ್ಟವಾಗದಾಯ್ತು. ಯಾವ ಹೇಂಡತಿ ತಾನೆ ಇಷ್ಟ ಪಟ್ಟಾಳು? ತಾನೂ ಅವಳ ಜೊತೆ ಇದ್ದಾಗ ಖುಷಿಯಿಂದ ಇರುತ್ತಿದ್ದ ಹೆಂಡತಿ, ನಾನು ಅವಳ ಜೊತೆ ಒಬ್ಬನೇ ಹೋದರೆ ಕೋಪ ಮಾಡಿ ಕೊಳ್ಳತೊಡಗಿದಳು. ಬರ ಬರುತ್ತಾ ಅವಳ ಅರೈಕೆ ಹೆಚ್ಚಾದುದರಿಂದಲೋ ಏನೋ ನನ್ನ ದೇಹದ ಗಾತ್ರವೂ ಹೆಚ್ಚಾಗತೊಡಗಿತು. ಅದೂ ಅಲ್ಲದೇ ಕೆಲವು ಕಡೆ ಅವಳ ದೆಸೆಯಿಂದ ನನ್ನ ವ್ಯಕ್ತಿತ್ವಕ್ಕೂ ಒಂದು ತೂಕ ಬಂತು. ಕೆಲವರು ಅವಳು ನನ್ನ ಜೊತೆಗಿರುವ ಕಾರಣಕ್ಕೆ ನನಗೆ ಜಾಸ್ತಿಯೇ ಮರ್ಯಾದೆ ಕೊಡತೊಡಗಿದರು. ಏನೆ ಆದರೂ ನಾನೂ ಆ ಒಂದು ಅಟೆನ್ಷನ್ ಇಷ್ಟ ಪಡತೊಡಗಿದೆ. ಅವಳು ಮಾತ್ರ ನಿರ್ಲಿಪ್ತಳಾಗಿದ್ದಳು!

 

ಈ ಒಂದು ಖುಷಿಯನ್ನು ಸಹಿಸಲಾರದವರ ಕಣ್ಣು ಬಿತ್ತೋ ಏನೊ. ಒಂದು ದಿನ ನಾವಿಬ್ಬರೂ ರಸ್ತೆಯಲ್ಲಿ ಬರುತ್ತಿರುವಾಗ ಒಂದು ಸಣ್ಣ ದುರ್ಘಟನೆ ನಡೆದು ಹೋಯ್ತು. ಬೈಕಿನವನೊಬ್ಬ ಅವಳಿಗೆ ಬಡಿಸಿಕೋಂಡು ಹೋದ. ನಾನು ಅವನ ಮೇಲೆ ಕೂಗಾಡಿದೆ. ಅವಳಿಗೆ ಸಣ್ಣ ಪುಟ್ಟ ತರಚಿದ ಗಾಯಗಳಾದರೂ ತುಟಿ ಪಿಟಕ್ಕೆನ್ನದೇ ಎಲ್ಲಾ ಸಹಿಸಿಕೊಂಡಳು. ಅದು ಮೊದಲ ಸಲವಲ್ಲವೇ? ನನ್ನ ಕಣ್ಣಲ್ಲಿ ಸಣ್ಣಗೆ ನೀರು ಜಿನುಗುತ್ತಿತ್ತು. ಅವಳನ್ನು ರಕ್ಷಿಸಲಾಗಲಿಲ್ಲವೆಂಬ ಅಪರಾಧಿ ಮನೋಭಾವ ನನ್ನ ಮನದಲ್ಲಿ ಇನ್ನೂ ಇದೆ.

 

ನನ್ನ ಬದುಕಿನ ಯಾವುದೆ ಕಷ್ಟದ ದಾರಿಯಲ್ಲೂ ಅವಳು ನನ್ನ ಜೊತೆಗೆ ಬರುತ್ತಾಳೆ. ಕಲ್ಲು ಮುಳ್ಳುಗಳಿರಲಿ ಎಂಥದೇ ತಿರುವುಗಳಿರಲಿ ಅವಳು ನನ್ನ ಕೈ ಬಿಟ್ಟಿಲ್ಲ, ಸುಸ್ತಾಗಿದೆಯೆಂದು ನಿಟ್ಟುಸಿರಿಟ್ಟಿಲ್ಲ. ನಾನೊಬ್ಬ ಕಟುಕನಂತೆ ಬಾಳಿನ ಪಯಣದಲ್ಲಿ ಅವಳನ್ನು ತುಂಬಾ ದಣಿಸಿದ್ದೇನೆ. ಅದಕ್ಕವಳು ಮರು ಮಾತಾಡದೇ ಎಲ್ಲ ಕಷ್ಟಗಳನ್ನೂ ಸಹಿಸಿಕೊಂಡಿದ್ದಾಳೆ. ಅಂಥವಳನ್ನು ಬಿಟ್ಟಿರಲು ಹೇಗೆ ಸಾಧ್ಯ? ಒಂದೊಂದು ಸಲ ಅವಳಿಗಿಂತ ಚೆನಾಗಿರುವವಳನ್ನು ನಾನು ಕಣ್ಣಗಲಿಸಿ ನೋಡುವುದ ನೋಡಿಯೂ ಕೂಡ ಅವಳೆಂದೂ ನನ್ನ ಮೇಲೆ ಮುನಿಸಿಕೊಂಡಿಲ್ಲ. ಅದು ಅವಳ ದೊಡ್ಡ ಗುಣ. ಅವಾಗಾವಾಗ ನಾನೇ ನನ್ನ ಕೈಯಾರೆ ಅವಳಿಗೆ ನೀರೆರೆದು ಸ್ನಾನ ಮಾಡಿಸುತ್ತೇನೆ…….  ಛೆ ಛೆ .. ಏನೇನೋ ಯೋಚಿಸಿ ತಪ್ಪು ತಿಳ್ಕೋಬೇಡಿ. ನಾನಿಷ್ಟೊತ್ತು ಹೇಳಿದ್ದ ನನ್ನ ನೆಚ್ಚಿನ ಕಾರಿನ ಬಗ್ಗೆ! ಇವತ್ತಿಗೆ ಸರಿಯಾಗಿ ನನ್ನ ಜೊತೆ ಐವತ್ತು ಸಾವಿರ ಕಿಲೋಮೀಟರು ಕ್ರಮಿಸಿದ ನನ್ನ ನಲ್ಲೆ "ಅವಳು" . I JUST LOVE HER!!

Sunday, June 9, 2013

"ಕಡ್ಡಿಪುಡಿ" ಮಿಸ್ ಮಾಡ್ಲೇ ಬೇಡಿ!

"ಕಡ್ಡಿಪುಡಿ" ಎಂಬ ತುಂಬಾ ಇಂಟರೆಸ್ಟಿಂಗಾದ ಹೆಸರಿನ ಚಲನ ಚಿತ್ರದ ಬಿಡುಗಡೆಗೆ ತುಂಬಾ ಕಾಯ್ದಿದ್ದೆವು. ಅಂತೂ ಅದು ಬಿಡುಗಡೆಗೊಂಡ ಮರುದಿನವಾದ ನಿನ್ನೆ ಶನಿವಾರ ರಾತ್ರಿ ಎಂಟು ವರೆಗೆ ರಾಜಮುರಳಿ ಚಿತ್ರಮಂದಿರಕ್ಕೆ ದಾಪುಗಾಲು ಹಾಕಿ ಹೊರಟೆವು. ಒಳ್ಳೆ ರಿವ್ಯು ಬಂದಿದ್ದರಿಂದ ಜನ ಜಾತ್ರೆ ಇರಬಹುದೇನೋ, ಟಿಕೇಟು ಸಿಗುತ್ತದೋ ಇಲ್ಲವೋ ಅಂದುಕೊಂಡು ಹೋದವರಿಗೆ ನಿರೀಕ್ಷಿತ ಪ್ರಮಾಣದಲ್ಲಿ ಜನ ಇಲ್ಲಾದ್ದು ಕಂಡು ಟಿಕೇಟು ಸಿಕ್ಕ ಖುಷಿಯ ಜೊತೆಗೆ ಸಿನಿಮಾ ಚೆನ್ನಾಗಿರಲಿಕ್ಕಿಲ್ಲವೇ ಎಂಬ ಸಂಶಯವೂ ಸುಳಿಯಿತು. ಆದರೂ ಕೊಟ್ಟ ದುಡ್ಡಿಗೆ ಸೂರಿ ಮೋಸ ಮಾಡಲಾರರೂ ಎಂಬ ಅಚಲ ನಂಬಿಕೆಯೊಂದಿಗೆ "ರಾಜಮುರಳಿ"ಯ ರಾಜ ಸಿಂಹಾಸನಗಳಲ್ಲಿ ಆಸೀನರಾದೆವು! ಸಧ್ಯ ಚಿತ್ರ ಶುರುವಾಗುವ ಹೊತ್ತಿಗೆ ಚಿತ್ರಮಂದಿರ ತುಂಬಿ ತುಳುಕಾಡುತ್ತಿತ್ತು.
 
ಚಿತ್ರದ ಟೈಟಲ್ ತೋರಿಸುವುದರೊಂದಿಗೇನೆ ಸೂರಿ ತಾನೊಬ್ಬ ಕಲಾವಿದ ಎಂಬುದನ್ನು ತೋರಿಸುವುದಕ್ಕೆ ಶುರುಮಾಡುತ್ತಾರೆ. ಮಳೆಯ ಹನಿಗಳು ಕಾರಿನ ಗ್ಲಾಸಿನ ಮೇಲೆ ಬೀಳುತ್ತಿರುವಂತೆಯೆ ವೈಪರ್ ಅದನ್ನು ಸ್ಲೋ ಮೋಷನ್ನಿನಲ್ಲಿ ಒರೆಸುತ್ತಿರುವಾಗ ಮೂಡುವದೊಂದು ಅದ್ಬುತ ಕಲಾಕೃತಿ! ಹೀಗೆ ಇಂಟರೆಸ್ಟಿಂಗಾಗಿ ಶುರುವಾಗುವ ಸಿನೆಮಾ, ಅನಂತನಾಗ್ ಒಬ್ಬ ಎಸ್ ಐ ಗೆ ಅನಂದ ಅಲಿಯಾಸ್ ಕಡ್ಡಿಪುಡಿ ಯ ವೃತ್ತಾಂತ ಹೇಳುತ್ತಾ ಸಾಗುವಾಗ ಯಾಕೊ ಮಾಮೂಲಿ ನಿರುಪಣಾ ಶೈಲಿ ಅನ್ನಿಸುವುದಕ್ಕೆ ಶುರುವಾಗುತ್ತದೆ. ಹಾಗಂತ ಬೋರು ಹೊಡೆಯುವುದಿಲ್ಲ. ಎರಡನೇ ಅರ್ಧದಲ್ಲಿ ಸಿನಿಮಾ ಅದ್ಭುತವಾಗಿ ಪಿಕ್ ಅಪ್ ಪಡೆದುಕೊಳ್ಲುತ್ತೆ. ಶಿವಣ್ಣ ಅವರ ಮಾಗಿದ ಅಭಿನಯ, ರಾಧಿಕಾ ಪಂಡಿತ ರ ಸಹಜ ಅಭಿನಯ ಮನ ಸೂರೆಗೊಳ್ಳುತ್ತದೆ. ರಾಧಿಕಾ ತುಂಬಾ ಪ್ರತಿಭಾವಂತೆ. ಅವರು ಇರುವ ಪ್ರತಿಯೊಂದು ದೃಶ್ಯಗಳೂ ನೆನಪಿನಲ್ಲುಳಿಯುವಂಥವೆ. ಅಣ್ಣಾಬಾಂಡನಂತೆ ಇಲ್ಲಿ ಹೀರೊನನ್ನು ವೈಭವಿಕರಿಸಿಲ್ಲ. ಇಲ್ಲಿ ಚಿತ್ರದ ಹೀರೋ ಖಂಡಿತವಾಗಿಯೂ ಸೂರಿ ಅವರೇ. ನಿರ್ದೇಶಕ ಹೀರೋ ಆದಾಗಲೇ ಅಲ್ಲವೇ ಚಿತ್ರ ಗೆಲ್ಲೋದು?! ಸ್ವಲ್ಪ ಮಟ್ಟಿಗೆ ಆರ್ ಗೀ ವೀ ಯ "ರಕ್ತ ಚರಿತ್ರ" ದಿಂದ ಪ್ರಭಾವಿತರಾಗಿದ್ದಾರೆಂದು ನನ್ನ ಅನಿಸಿಕೆ. ಕತೆಯಲ್ಲಿ ಏನೂ ಹೊಸತನವಿಲ್ಲದಿದ್ದರೂ ಸೂರಿಯವರ ಹೊಸತನ ಮೋಡಿ ಮಾಡುತ್ತದೆ. ಚಿತ್ರ ವಿಚಿತ್ರ ಮುಖಭಾವ, ಆಕೃತಿಗಳ ಆ ಪಾತ್ರಧಾರಿಗಳನ್ನು ಹುಡುಕುವುದರಲ್ಲಿ ರಾಮಗೋಪಾಲ್ ವರ್ಮಾರ ನಂತರ ಸೂರಿಯವರದೇ ಎತ್ತಿದ ಕೈ ಅಂತ ನನ್ನ ಅಭಿಪ್ರಾಯ. 
 
ಅದ್ಯಾಕೋ ಐಂದ್ರಿತಾಳ "ಬೆಂಗಾವಲು" ಅನಾವಶ್ಯಕ ಅನಿಸುತ್ತದೆ! "ಕಡ್ಡಿಪುಡಿ" ಅನಂದನ ಮೊದಲನೇ ರಾತ್ರಿಯ ಸಂದರ್ಭದಲ್ಲಿ ಕೆಲವೇ ಪೋಲಿ ಸಂಭಾಷಣೆಗಳು, ಸನ್ನಿವೇಶಕ್ಕೆ ಅನುಗುಣವಾಗಿ, ಊಟದ ಜೊತೆಗೆ ಉಪ್ಪಿನ ಕಾಯಿ ತರ ಇದ್ದು, ವಲ್ಗರ್ ಅನ್ನಿಸುವುದಿಲ್ಲ. ನನಗಿಷ್ಟವಾದ ಸನ್ನಿವೇಶವೊಂದರಲ್ಲಿ ರಾಧಿಕಾ ಗಂಡನೊಂದಿಗೆ ಜಗಳ ಮಾಡಿಕೊಂಡು, ಲಾಂಗು ಹಿಡಿದುಕೊಂಡು ಶಿವಣ್ಣನನ್ನು ಮನೆಯ ಮುಂದೆ ಬೆನ್ನಟ್ಟಿರುತ್ತಾಳೆ, ಕೊನೆಗೆ ಲಾಂಗನ್ನು ಅವನತ್ತ ಎಸೆದು ಹುಸಿ ಮುನಿಸಿನೊಂದಿಗೆ ಹಿಂದಿರುಗುತ್ತಾಳೆ. ರೌಡಿಸಂ ಬಿಟ್ಟು ಬದುಕು ನಡೆಸುತ್ತಿರುವ ಕಡ್ಡಿಪುಡಿ, ಕೆಳಗೆ ಬಿದ್ದಿರುವ ಲಾಂಗ್ ಎತ್ತಿ ನಿಲ್ಲುವುದಕ್ಕೂ, ಅವನನ್ನು ಕೊಲ್ಲಲು ಬಂದ ಹಳೆಯ ವೈರಿಗಳು ಅವನ ಮುಂದೆ ಬಂದು ನಿಲ್ಲುವುದಕ್ಕೂ ಸರಿ ಹೋಗುತ್ತದೆ. ಹೊಡೆಯಲು ಕೈ ಎತ್ತಿದವರು ಅವನ ಕೈಯಲ್ಲಿ ಲಾಂಗು ನೋಡಿ ಭಯದಿಂದ ವಾಪಸ್ಸು ಹೋಗುತ್ತಾರೆ. ಕಡ್ಡಿ ಆ ಲಾಂಗನ್ನು ಅಂಗಿಯಲ್ಲಿ ಸೇರಿಸಿಕೊಳ್ಳುತ್ತಾನೆ! ಅದೊಂದು ಕೆಲವೇ ಕ್ಷಣಗಳಲ್ಲಿ ನಡೆಯುವ ಅನಿರೀಕ್ಷಿತ ಘಟನೆಗಳ, ಮಂತ್ರಮುಗ್ಧಗೊಳಿಸುವ ಒಂದು ದೃಶ್ಯ. ಈ ತರಹದ ಚಿತ್ರಣ ಸೂರಿಯಿಂದ ಮಾತ್ರ ಸಾಧ್ಯ. ಇದೆಲ್ಲದರ ಜೊತೆಗೆ ಚಿತ್ರದ ಮತ್ತೊಬ್ಬ ಹೀರೊ ಅಂದರೆ "ಲಾಂಗು" ಅನ್ನುವ ಆ ವಿಚಿತ್ರ ಆಯುಧ! ಎಷ್ಟೋ ವರುಷಗಳಿಂದ ಇನ್ನೂ ಚಾಲ್ತಿಯಲ್ಲಿದೆಯೆ ಅಂತ ಆಶ್ಚರ್ಯವಾಗುತ್ತೆ. ಲಾಂಗಿಗೋಂದು "ಲಾಂಗ್" ಹಿಸ್ಟರಿ ಇರುವುದಂತೂ ಸತ್ಯ ಹಾಗೂ "ಲಾಂಗ್" ಫ಼್ಯುಚರೂ ಇದೆ ಅನಿಸುತ್ತೆ! ಒಟ್ಟಿನಲ್ಲಿ ಈ ಚಿತ್ರ ಸೂರಿ ಯವರು ತುಂಬಾ ಸೂಕ್ಷ್ಮವಾಗಿ ನೇಯ್ದ ನೇಯ್ಗೆ. ಒಂದೊಂದು ಪಾತ್ರಗಳು ಆವರಿಸಿಕೊಳ್ಲುತ್ತವೆ. ನೋಡಿ ಬನ್ನಿ, ಮಿಸ್ಸ್ ಮಾಡ್ಕೊಳ್ಲೇ ಬೇಡಿ!  

Sunday, March 31, 2013

ಸಿಂಪಲ್ಲಾಗ್ ಒಂದು ಮುಂಜಾನೆ!

ಇಂದು ಬೆಳಿಗ್ಗೆ ಕೃಷ್ಣಮೂರ್ತಿ ಫೋನು ಮಾಡಿದಾಗ ಸರಿಯಾಗಿ ೪.೨೫. ಅವರ ಕರೆಯನ್ನೇ ನಿರೀಕ್ಷಿಸುತ್ತಿದ್ದೆನೇನೊ ಎಂಬಂತೆ, ಧಡಕ್ಕನೆ ಎಚ್ಚೆತ್ತು ಕರೆಯನ್ನು ಸ್ವೀಕರಿಸಿದೆ. "ಹೂಂ... ಬರ್ತೀರೇನ್ರೀ?" ಅಂದ್ರು. ಎಲ್ಲಿಗೆ ಅಂತ ನನಗೂ ಗೊತ್ತು, ಅವರಿಗೂ ಗೊತ್ತು.  "ಆಯ್ತು... ಐದು ಮೂವತ್ತಕ್ಕೆ ನಿಮ್ಮ ಮನೆ ಮುಂದೆ ಹಾಜರಾಗುವೆ " ಅಂದೆ. ನಾನು ಬರಲಾರೆನೇನೊ ಎಂದುಕೊಂಡಿದ್ದ ಅವರಿಗೆ ಘನಘೋರ ಅಶ್ಚರ್ಯವಾಗಿದ್ದಂತೂ, ಅವರು "ವಾರೆಹ್ ವಾಹ್!" ಅಂದಾಗ ಸ್ಪಷ್ಟವಾಯ್ತು. ಯಾಕೆಂದರೆ ಹಿಂದೆ ಎರಡು ಮೂರು ಸಲ ನಾನು ಕೈ ಕೊಟ್ಟಿದ್ದೆ. ಆದರೆ ಇವತ್ತು ಗಟ್ಟಿ ನಿರ್ಧಾರ ಮಾಡಿದ್ದೆ. ಅಂದ ಹಾಗೆ ನಾವು ಹೊರಟಿದ್ದು ಸಿಂಪಲಾಗ್ ಒಂದು ವಾಕಿಂಗ ಮಾಡೋಕೆ. ಈಗಾಗಲೇ ಎರಡು ವರ್ಷಗಳಿಂದ ದಿನಾಲೂ ತಪ್ಪದೇ ಹೋಗುತ್ತಿರುವ ಗುಂಪಿನ ಜೊತೆಗೆ ನಾನೂ ಇವತ್ತು ಸೇರಿಕೊಳ್ಳುತ್ತಿದ್ದೆ.
 
ಮೂರ್ತಿಯವರ ಮನೆ ನನ್ನ ಮನೆಯಿಂದ ಕೂಗಳತೆಯಲ್ಲಿದೆ ಅಂತ ಹೇಳಬಹುದು. ಈಗ ಬಿಡಿ ಮೊಬೈಲ್ ಬಂದ ಮೇಲೆ ಎಲ್ಲರೂ ಕೂಗಳತೆ ಯಲ್ಲಿಯೇ ಇದ್ದಂತೆ! ಆದರೆ ಇವರ ಮನೆ ನಿಜವಾಗಿಯೂ ಕೂಗಳತೆಯೆ. ನಾನವರ ಮನೆ ತಲುಪಿದಾಗ ಸರಿಯಾಗಿ ೫.೩೦. ನಾನು ನಿಜವಾಗಿಯೂ ಬಂದದ್ದು ನೋಡಿ ಮೂರ್ತಿಗಳು ಸ್ವಲ್ಪ ಹೊತ್ತು ಮಾತೆ ಮರಿತಂತಿತ್ತು! ಅವರು, ಬಂದಿದ್ದು ನಾನೇ ಎಂದು ಖಚಿತ ಪಡಿಸಿಕೊಂಡು, ಪರಸ್ಪರ ನಮಸ್ಕಾರಗಳ ವಿನಿಮಯವಾಗುತ್ತಿರುವಾಗಲೇ, ಶ್ರೀಧರ್ ಅವರು ಬಂದರು. "ನಿಮ್ಮನ್ನು ಆರು ತಿಂಗಳಿನಿಂದ ಕಾಯ್ತಾ ಇದ್ದೀವಿ ಗುರುದತ್ ಅಂದರು"! ಗುರುಪ್ರಸಾದ, ಅವರಿಗೆ ಗುರುದತ್ ಥರ ಕಂಡಿರಬಹುದು, ಪರವಾಗಿಲ್ಲ ಇನ್ನೊಮ್ಮೆ ಗುರುದತ್ ಅಂತ ಕರೆದರೆ ಹೇಳಿದ್ರಾಯ್ತು ಅಂತ "ನನಗೂ ಬರ್ಬೇಕು ಅಂತ ತುಂಬಾ ಇತ್ತು, ಆದರೆ ಹಲವಾರು ಕಾರಣಗಳಿಂದ ಆಗಿರಲಿಲ್ಲ ಬಿಡಿ ಶ್ರಿಧರ್" ಅಂತ ನನ್ನ ಕಷ್ಟ ತೋಡಿಕೊಂಡೆ. ಮತ್ತೇನು? ಬೆಳಿಗ್ಗೆ ಏಳೋದು ಕಷ್ಟ ಮಾರಾಯ್ರೆ ಅಂತ ಸತ್ಯ ಹೇಳೊ ಅಷ್ಟು ಸತ್ಯ ಸಂಧನೇ ನಾನು? ಹೀಗೇ ಮುಂದುವರಿದಾಗ ಕುಮಾರಣ್ಣ ನಮ್ಮನ್ನು ಸೇರಿಕೊಂಡರು. ಮುಂದೆ ರೆಡ್ಡಿಯವರು. ಶುರುವಾಯ್ತು ನಮ್ಮ ಸಿಂಪಲ್ಲಾಗ್ ಒಂದು ವಾಕಿಂಗು...
   
ನಮ್ಮ ಮನೆಯ ಸ್ವಲ್ಪ ಹಿಂದೆ ಹೋದರೆ ಜೀಕೆವೀಕೆ ಕಂಪೌಂಡು. ಅಲ್ಲಿನ ಸಸ್ಯಕಾಶಿ ನೋಡಿ ಖುಷಿಯಾಯ್ತು. ಬೆಂಗಳೂರಿನಲ್ಲಿ ಇಂತಹ ಜಾಗ ಅಪರೂಪವಲ್ಲವೆ? ಇಷ್ಟು ವರ್ಷಗಳಿಂದ ಇಲ್ಲಿಯೇ ವಾಸಿಸುತ್ತಿದ್ದರೂ, ದಾರಿಗುಂಟ ಇಷ್ಟು ಗಿಡಗಳಿರುವುದೇ ನನಗೆ ಕಂಡಿರಲಿಲ್ಲವಲ್ಲಾ ಅಂತ ಆಷ್ಚರ್ಯ ಚಕಿತನಾದೆ. ಹಕ್ಕಿಗಳ ಚಿಲಿ ಪಿಲಿ ರಂಗನತಿಟ್ಟಿನಲ್ಲಿ ಮಾತ್ರ ಕೇಳಬಹುದು ಅಂದ್ಕೊಂಡಿದ್ದವನಿಗೆ ಇಲ್ಲಿಯೂ ಕಡಿಮೆಯಿಲ್ಲ ಅನಿಸಿತು. ಶ್ರೀಧರ್ ಅಂತೂ ಅವ್ಯಾಹತವಾಗಿ ಮಾತನಾಡುತ್ತಿದ್ದರು. ತುಂಬಾ ವಿಚಾರ ಭರಿತ ಚಿಂತನೆಗಳು! ಅವುಗಳ ಬಗ್ಗೆ ಇನ್ನೊಮ್ಮೆ ಅವರ ಅನುಮತಿ ತೆಗೆದುಕೊಂಡು ಬರೆಯುವೆ. ಶ್ರೀಧರ ಅವರ ವಿಚಾರ ಧಾರೆಗೆ ಮೂರ್ತಿಯವರ ಆಕ್ಷೇಪಗಳು, ಅದಕ್ಕೆ ಶ್ರೀಧರ ಅವರು ಒಪ್ಪದೇ ನೀಡುವ ಸಮಝಾಯಿಶಿಗಳು, ಕೇಳಲು ಒಂಥರ ಚೆನ್ನಾಗಿತ್ತು. ನಮ್ಮ ಮಾತು ಕತೆಗಳಲ್ಲಿ ರಾಜಕೀಯದವರು, ಸೆಲೆಬ್ರಿಟಿಗಳು ಎಲ್ಲರೂ ಬಂದು ಹೋದರು. ಹಾಗೇ ನಡೆಯುತ್ತಾ ಖುಷಿಯಾಗುತ್ತಿತ್ತು. ಏನೋ ಸಾಧನೆ ಮಾಡುತ್ತಿದ್ದಂತೆ ಭಾಸವಾಗುತ್ತಿತ್ತು. ಇನ್ನೂ ಮಲಗಿ ನಿದ್ದೆ ಮಾಡುತ್ತಿರುವವರ ಬಗ್ಗೆ ಕನಿಕರ ಮೂಡುತ್ತಿತ್ತು. ಛೇ ಎಷ್ಟೊಂದು ಮೈಗಳ್ಳರಲ್ಲವೇ ಈ ಜಗತ್ತಿನಲ್ಲಿ ? ಅನಿಸತೊಡಗಿತ್ತು! ನಿನ್ನೆಯವರೆಗೂ ನಾನು ಹಿಂಗೆ ಮಲಗಿದ್ದೆನೆಂಬುದು ಮರೆತಿತ್ತು! ಆದರೆ ಈ ಖುಷಿ ತುಂಬಾ ಹೊತ್ತು ಇರಲಿಲ್ಲ! ಮೊದಲನೇ ದಿನವಲ್ಲವೇ, ನನ್ನ ಕಾಲುಗಳು ಮಾತನಾಡಲು ತೊಡಗಿದವು. ಅದನ್ನು ತೋರ್ಪಡಿಸುವುದಕ್ಕಾಗುತ್ತೆಯೆ? ಅಂತೂ ಒಂದು ಕಡೆ ರೋಡು ಹೊರಳಿದ್ದು ಕಂಡು ವಾಪಸ್ಸು ಹೋಗುತ್ತಿರುವಂತೆ ಖಾತ್ರಿ ಮಾಡಿಕೊಂಡು ಮನಸ್ಸಿಗೆ ಸ್ವಲ್ಪ ಸಮಾಧಾನವಾಯ್ತು. ಆದರೆ ನಮ್ಮ "ಶ್ರೀ" ಗಳು, "ಗುರುದತ್ ನಿಮಗೊಂದು ಎಕ್ಸೈಟ್ಮೆಂಟು ತೋರಿಸ್ತೀನಿ ಇರಿ" ಅಂದಾಗ ನಾನು ಗಾಬರಿಯಾದೆ. ಒಂದು ಚಿಕ್ಕ ಬೆಟ್ಟವನ್ನು ವಿರುದ್ಧ ದಿಕ್ಕಿನಲ್ಲಿ ಏರತೊಡಗಿದರು. ಅವರು ಏರಿದರೆ ಪರವಾಗಿಲ್ಲ ಬಿಡಿ, ನನಗೂ ಹಾಗೇ ನಡೀರಿ ಅಂತ ಒತ್ತಾಯಿಸತೊಡಗಿದರು. ಬೇರೆ ದಾರಿಯಿಲ್ಲದೆ ಒಪ್ಪಿಕೊಂಡೆ. ಸುಪರ್ ಎಕ್ಸೈಟ್ಮೇಂಟು ಬಿಡಿ ಅಂತ ರೀಲು ಬಿಟ್ಟೆ. ಮೂರ್ತಿ ನಗುತ್ತಿದ್ದರು! ನನ್ನಲ್ಲಿದ್ದ ಎನರ್ಜೀ ಮುಗಿಯತೊಡಗಿತ್ತು. ಸ್ವಲ್ಪ ಕುಳಿತುಕೊಳ್ಳೋಣವೇ ಎಂದು ಕೇಳಿದರೆ ಮರ್ಯಾದೆ ಹೋಗಬಹುದೆಂದು, "ಇಲ್ಲಿ ಹತ್ತಿರದಲ್ಲಿ ಕ್ಯಾಂಟೀನ್ ಇಲ್ಲವೇ" ಅಂದೆ. "ಇಲ್ಲೇ ಇದೆ ಗುರುದತ್, ಕಾಫಿ ಕುಡಿಯೋಣ ಇರಿ" ಅಂದಾಗ ಹೋದ ಜೀವ ಬಂದಂತಾಯ್ತು. ಅಲ್ಲಿ ಉಸ್ಸಪ್ಪಾ ಅಂತ ಕುಳಿದು ಕಾಫಿ ಹೀರಿದಾಗ ಸ್ವಲ್ಪ ನೆಮ್ಮದಿಯಾಯ್ತು. ಅಲ್ಲಿ ಕಲ್ಲಿನ ಬೆಂಚಿನ ಮೇಲೆ ಕುಳಿತು ಮತ್ತೊಂದಿಷ್ಟು ಹರಟೆ ಹೊಡೆದದ್ದಾಯ್ತು. ಅದೇ ಕ್ಯಾಂಟೀನಿನಲ್ಲಿ ಇಡ್ಲಿ ಪಾರ್ಸಲ್ ತೊಗೊಂಡೆ. ಹೇಂಡತಿಗೆ ವಾಕಿಂಗ್ ಹೋಗಿದ್ದಕ್ಕೆ ಪ್ರೂಫ್ ಕೊಡಬೇಕಲ್ಲವೆ? ಸ್ವಲ್ಪ ಹೊತ್ತಿಗೆ, ವಾಪಸ್ಸು ಹೊರಟು ಬಂದೆವು. ಶ್ರೀಧರ್ ಅವರು ನಿಮ್ಮ ನಂಬರ್ ಕೊಡಿ ಅಂದರು . ಅವರಿಗೆ ನಂಬರು ಹೇಳಿ, ಅವರು ಗುರುದತ್ ಅಂತ ಸ್ಟೊರ್ ಮಾಡಿಕೊಳ್ಳುವುದರ ಮೊದಲೆ "ಗುರುಪ್ರಸಾದ" ಅಂತ ಹೇಳಿದೆ. "ಧತ್! ನಿಮ್ಮ ಹೆಸರು ಗುರುದತ್ ಅಂದ್ಕೊಂಡು ಬಿಟ್ಟಿದ್ದೆ!" ಅಂದರು. ಪರವಾಗಿಲ್ಲ ಬಿಡಿ ಸರ್ ಅಂದೆ. ಮೂರ್ತಿಗಳಿಗೆ ಬೈ ಹೇಳಿ, ಮನೆಗೆ ಬಂದು ಇಡ್ಲಿ ತಿಂದು ಮಲಗಿದವನು ಊಟದ ಟೈಮಿಗೇ ಎದ್ದಿದ್ದು!!
 
... ಆದರೆ ಮುಂಜಾನೆಯ ಆ ಸೊಬಗು, ಸುಂದರ ವಾತವರಣ, ಹಕ್ಕಿಗಳ ಚಿಲಿ ಪಿಲಿ ಇದನ್ನೆಲ್ಲ ಅನುಭವಿಸಿ ಆರೋಗ್ಯದಿಂದಿರಬೇಕೆಂದರೆ ವಾಕಿಂಗ ಮಾಡಲೇ ಬೇಕು ಅಲ್ಲವೆ? ನಿಯಮಿತವಾಗಿ ಹೋಗೋಣ ಅಂದೊಕೊಂಡಿದ್ದೀನಿ, ನೋಡೋಣ!

Saturday, January 26, 2013

ಬೇಟೆ

ಜೇಡ ಕಾದಿತ್ತು ಬೇಟೆ ಬಲೆಗೆ ಬೀಳುವುದನ್ನು
ಆದರೆ ಸೆರೆ ಹಿಡಿದದ್ದು ಏನನ್ನು?
ರವಿಯ ರಶ್ಮಿಯನ್ನು
ಮಂಜಿನ ಹನಿಗಳನ್ನು !