Wednesday, April 16, 2014

ನಾಯಿ ನಕ್ಕಿದ್ದು ಯಾಕೆ?!

ಪಂಜುನಲ್ಲಿ ಈ ಕತೆ ಪ್ರಕಟವಾಗಿತ್ತು.

http://www.panjumagazine.com/?p=6987

-------------------------------------------------------
 
 
ಹೊಟ್ಟೆ ಹಸಿವೆಯಿಂದ ಗುರುಗುಡುತ್ತಿತ್ತು. ಯಾಕಿವತ್ತು ಇನ್ನೂ ತಟ್ಟೆಯ ಸಪ್ಪಳವೇ ಇಲ್ಲಾ? ನಾಲಿಗೆ ಹೊರ ಚಾಚಿ, ಮುಚ್ಚಿರುವ ತಲಬಾಗಿಲನ್ನೊಮ್ಮೆ ದಿಟ್ಟಿಸಿ ನೋಡುತ್ತಾ, ತಲೆಯ ಮೇಲೆ ಸುಡುತ್ತಿರುವ ಸೂರ್ಯನ ಶಾಖವನ್ನು ತಾಳಲಾರದೇ ತನ್ನ ಗೂಡಿನೆಡೆಗೆ ಕುಂಯ್ ಗುಡುತ್ತಾ ರಾಜಾ ವಾಪಸ್ಸಾದ. ಗೂಡಿನಲ್ಲಿ ತಾಪ ಇನ್ನೂ ಜಾಸ್ತಿಯಿತ್ತು. ತಾನು ಆ ಮನೆಯನ್ನು ಸೇರಿದ್ದು ಚಿಕ್ಕ ಕುನ್ನಿಯಾಗಿದ್ದಾಗ. ತನ್ನ ಅಮ್ಮ ಟ್ರಕ್ಕಿನಡಿಯಲ್ಲಿ ಸಿಕ್ಕಿ ಸತ್ತು ತಾನು ತಬ್ಬಲಿಯಾದಾಗ, ಮುದ್ದಾಗಿದ್ದೆನೆಂದೋ ಅಥವಾ ಮುಂದೆ ಮನೆ ಕಾಯುವೆನೆಂದೋ ತನ್ನನ್ನು ಮನೆಗೆ ತಂದು ಸಾಕಿದ್ದು ಈ ಮನೆಯ ಯಜಮಾನ ಸಿದ್ದಣ್ಣ. ಊಟಕ್ಕೇನು ಕೊರತೆಯಿರಲಿಲ್ಲ ಅಲ್ಲಿ. ಸರಿಯಾದ ಸಮಯಕ್ಕೆ ತಿಂಡಿ ತೀರ್ಥಗಳು ದೊರಕಿದ್ದೂ ಅಲ್ಲದೇ, ತನಗೆ ಒಂದು ಗೂಡು ಕಟ್ಟಿ ಕೊಟ್ಟಿದ್ದು ಸಿದ್ದಣ್ಣನ ದೊಡ್ಡತನ. ಕಂಪೌಂಡಿನಲ್ಲಿದ್ದುಕೊಂಡು ಬಂದವರೆಲ್ಲರ ಕಂಡು, ಅಪರಿಚಿದ್ದರೆ ಬೊಗಳಿ ಸಿದ್ದಣ್ಣನ ವಿಶ್ವಾಸ ಬಹು ಬೇಗನೇ ಗಳಿಸಿಕೊಂಡಿದ್ದವನಿಗೆ ರಾಜ ಅಂತ ನಾಮಕರಣ ಬೇರೆ ಆಗಿತ್ತು. ವಾರಕ್ಕೊಮ್ಮೆ ಸ್ನಾನ, ಸಂಜೆಗೊಮ್ಮೆ ಹೊರಗಡೆ ಯಜಮಾನನೊಟ್ಟಿಗೆ ವಾಕಿಂಗು. ಹಬ್ಬಕ್ಕೆ ಸಿಹಿ ಊಟ, ಸ್ವರ್ಗಕ್ಕೆ ಮೂರೇ ಗೇಣು. ಆದರಿವತ್ತ್ಯಾಕೋ ಇನ್ನೂ ಊಟ ಹಾಕಿಲ್ಲದಿದ್ದದ್ದು ರಾಜಾನಿಗೆ ಬಗೆ ಹರಿಯಲಾರದ ಸಮಸ್ಸೆಯಾಗಿತ್ತು.
*
ಆ ಸುಡುಗಾಡು ಮೀಟಿಂಗು ಮುಗಿಯುವ ಲಕ್ಷಣಗಳು ಕಾಣುತ್ತಿರಲಿಲ್ಲ. ಆಗಲೇ ಗಂಟೆ ಮೂರಾಗಿತ್ತು. ಅನಂತನ ಹೊಟ್ಟೆಯಲ್ಲಿ ತಳಮಳ ಶುರುವಾಗಿತ್ತು. ಆ ಆದಿನಾರಾಯಣ ಊಟಕ್ಕೆ ಕರೆದಾಗಲೇ ಅವನೊಟ್ಟಿಗೆ ಹೋಗಿ ಬರಬೇಕಿತ್ತು. ಅವನು, ಪ್ರಳಯವಾದರೂ ತನ್ನ ಸಮಯಕ್ಕೆ ಸರಿಯಾಗಿ ಊಟ ಮುಗಿಸುತ್ತಿದ್ದ. ಮೀಟಿಂಗುಗಳಿದ್ದರಂತೂ ಇನ್ನೂ ಬೇಗನೇ ಊಟ ಮಾಡಿಕೊಂಡು ಬಂದು ಬಿಡುತ್ತಿದ್ದನವನು. ಜೊತೆಗೆ ಸಣ್ಣಗೆ ತಲೆ ನೋವು ಶುರುವಾಗಿತ್ತು. ಇನ್ನು ಸ್ವಲ್ಪ ಹೊತ್ತಿಗೆ ಹಸಿವೆಯೂ ಸತ್ತು ಹೋಗುತ್ತದೆ. ಮುಂದಿದ್ದ ಬಾಟಲಿ ನೀರನ್ನು ಗಟಗಟನೇ ಕುಡಿದು ಉದರಾಗ್ನಿಯ ಶಮನ ಮಾಡುವ ವ್ಯರ್ಥ ಪ್ರಯತ್ನ ಮಾಡಿದ. ಮೀಟಿಂಗು ಮುಗಿಯುತ್ತಲೇ ಊಟಕ್ಕೆ ಹೋಗಬೇಕೆನ್ನುವ ತವಕಕ್ಕೆ ಹಸಿವೆ ಇನ್ನೂ ಜೋರಾಗಹತ್ತಿತ್ತು. ತನ್ನ ಮ್ಯಾನೇಜರ್ ಹೇಳಿದ್ದನ್ನೇ ಹೇಳುತ್ತಾ ತವಡು ಕುಟ್ಟುತ್ತಿದ್ದ. ಅವನ ಚೇಲಾಗಳು ಅವನು ಹೇಳಿದ್ದಕ್ಕೆಲ್ಲಾ ತಲೆ ಅಲ್ಲಾಡಿಸಿ ಮೆಚ್ಚುಗೆ ಸೂಚಿಸುತ್ತಿದ್ದರು. ತಾನು ಅಲ್ಲಿದ್ದು ಏನು ಶತಕೃತ್ಯ ಮಾಡುತ್ತಿದ್ದೇನೆ ಎನಿಸಿತವನಿಗೆ.
*
ಅಂತೂ ತಲಬಾಗಿಲು ಕಿರುಗುಟ್ಟಿದಾಗ ತನ್ನ ಬಾಲ ತನಗರಿವಿಲ್ಲದಂತೆ ಅಲ್ಲಾಡಗಿದ್ದು ರಾಜಾನ ಗಮನಕ್ಕೆ ಬಂತು. ಗಕ್ಕನೇ ಗೂಡಿನಿಂದ ಹೊರಗೋಡಿ ಬಂದವನಿಗೆ ಸಿದ್ದಣ್ಣ ನಿರಾಶೆ ಮಾಡಲಿಲ್ಲ. ತನಗಾಗಿ ಮೀಸಲಿಟ್ಟಿದ್ದ ತಟ್ಟೆಯಲ್ಲಿ ಅನ್ನವನ್ನು ಸುರಿದು ಲಗುಬಗೆಯಿಂದ ಒಳ ನಡೆದ. ಗಬಗಬನೇ ಹೊಟ್ಟೆಗಿಳಿಸಿ ಗೂಡಿಗೆ ತೆರಳಿದ ರಾಜಾಗೆ ಹೊಟ್ಟೆಯೇನೋ ತುಂಬಿತ್ತು ಆದರೆ ತನ್ನ ಯಜಮಾನನ ಮೇಲೆ ಕೋಪ ಬಂದಿತ್ತು. ಸೆಕೆಗೆ ಆ ಕೋಪ ಇನ್ನೂ ಜಾಸ್ತಿಯಾಗಿತ್ತು. ತಾನು ಇಷ್ಟು ಭಕ್ತಿಯಿಂದ ಮನೆ ಕಾದರೂ ಇವನು ಹೀಗೆ ಊಟಕ್ಕೆ ತನಗೆ ಕಾಯಿಸಬಹುದೆ? ಅನ್ನುವುದು ರಾಜಾನ ಸಿಟ್ಟಿಗೆ ಕಾರಣವಾಗಿತ್ತು. ಹೊಟ್ಟೆ ತಣ್ಣಗಾಗಿದ್ದರಿಂದ ಸ್ವಲ್ಪ ಜೋಂಪು ಹತ್ತಿತ್ತು.
*
ಕೊನೆಗೂ ಮೀಟಿಂಗ್ ಮುಗಿದಾಗ ನಾಲ್ಕು ಘಂಟೆ. ಲಗುಬಗೆಯಿಂದ ಊಟಕ್ಕೆ ಹೊರಟವನ ಹೊಟ್ಟೆ ತಮಟೆ ಬಾರಿಸುತ್ತಿದ್ದರೆ, ತಲೆಯಲ್ಲಿ ಯೋಚನೆಗಳು ಮುತ್ತಿಕೊಂಡಿದ್ದವು. ತಾನು ಈ ಕಂಪನಿ ಸೇರಿ ಅವತ್ತಿಗೆ ಎಂಟು ವರುಷಗಳಾಗಿತ್ತು. ಎಷ್ಟೇ ಹಾರ್ಡ್ ವರ್ಕ್ ಮಾಡಿದರೂ ತನ್ನ ಪ್ರತಿಭೆಗೆ ತಕ್ಕ ಸ್ಥಾನ ಸಿಕ್ಕಿಲ್ಲಾ ಅನ್ನುವ ಕೊರಗು ಇವನನ್ನು ಕಾಡುತ್ತಿತ್ತು. ಮ್ಯಾನೇಜರ್ ನ ಬಾಲ ಬಡಿಯುತ್ತಿದ್ದವರಿಗೆ ತನಗಿಂತ ಮೇಲಿನ ದರ್ಜೆ ಸಿಕ್ಕಿದ್ದು ಗಾಯದ ಮೇಲಿನ ಬರೆಯಂತಾಗಿತ್ತು. ಕೆಲಸವಾಗಬೇಕಾದಾಗ ತನ್ನ ಕಾಲು ಹಿಡಿದು ಗೋಗರೆದು ಕೆಲಸ ಮಾಡಿಸಿಕೊಳ್ಳುತ್ತಿದ್ದವನು ಅಪ್ರೈಸಲ್ ಇದ್ದಾಗ ಮಾತ್ರ ಇವನ ಸಣ್ಣ ಸಣ್ಣ ತಪ್ಪುಗಳನ್ನು ಎತ್ತಿ ಹಿಡಿಯುತ್ತಿದ್ದ. ಅವನು   ಹೇಳಿದ ಕೆಲಸಗಳನ್ನೆಲ್ಲಾ ತಕರಾರಿಲ್ಲದೇ ಮಾಡುತ್ತಿರುವುದೇ ತನ್ನ ತಪ್ಪಿರಬಹುದು ಅಂತವನಿಗೆಷ್ಟೋ ಸಲ ಅನಿಸಿದ್ದಿದೆ. ಯಾಂತ್ರಿಕವಾಗಿ ಊಟದ ಆಟ ಮುಗಿದಿತ್ತು. ರಾತ್ರಿಯವರೆಗೆ ಕೆಲಸಗಳು ತುಂಬಿದ್ದವು. ಇವತ್ತು ರಾತ್ರಿ ಮನೆಗೆ ಹೋಗುವಂತಾದರೆ ಸಾಕು ಅನಿಸಿತ್ತವನಿಗೆ.
*
ಗೇಟಿನ ಬಳಿ ಯಾರೋ ಬಿಕ್ಷುಕ ಬಂದಿರುವುದು ಅಧೇಗೋ ನಿದ್ದೆಯಲ್ಲಿದ್ದ ರಾಜಾನನ್ನು ಬಡಿದೆಬ್ಬಿಸಿತು. ಕೂಡಲೇ ಕಾರ್ಯ ತತ್ಪರನಾಗಿ ಬೌ ಎನ್ನುವ ತನ್ನ ವಿಶಿಷ್ಠ ಸ್ವರದಲ್ಲಿ ಅರಚತೊಡಗಿ, ಬಿಕ್ಷುಕ ಅಲ್ಲಿಂದ ಕಾಲು ಕಿತ್ತಾಗಲೇ ನೆಮ್ಮದಿಯ ನಿಟ್ಟುಸಿರು ಬಿಟ್ಟು, ಯಜಮಾನ ಅದನ್ನು ಗಮನಿಸಿರಬಹುದೇ ಎಂದು ತಲಬಾಗಿಲ ಕಡೆಗೆ ಒಮ್ಮೆ ನೋಡಿತು. ಯಾರೂ ಇಲ್ಲದ್ದರಿಂದ ನಿರಾಶೆಯಿಂದ ಗೋಣು ಚೆಲ್ಲಿ ಮಲಗಿ ಮತ್ತೆ ಯೋಚನೆಗೆ ತೊಡಗಿತು. ತಾನಿಲ್ಲದಿದ್ದರೆ ಈ ಮನೆಯ ಗತಿಯೇನು? ಹಗಲು ರಾತ್ರಿಯೆನ್ನದೆ ತಾನು ಕಾಯುತ್ತಿರುವುದಕ್ಕೇ ಅಲ್ಲವೇ ಇವರಿಷ್ಟು ನಿಶ್ಚಿಂತರಾಗಿ ಮಲಗುವುದು?  ತಾನು ಇಲ್ಲದಾಗಲೇ ಈ ಯಜಮಾನನಿಗೆ ಬುದ್ಧಿ ಬರುವುದೇನೊ. ಇವನಿಗಿಂತ ಒಳ್ಳೆಯವನು ತನಗೆ ಸಿಕ್ಕೇ ಸಿಗುತ್ತಾನೆ. ಇವನಿಗೆ ಬುದ್ಧಿ ಕಲಿಸಲೇಬೇಕು ಅನ್ನುವ ಹಟ್ಟಕ್ಕೆ ಬಿದ್ದಾಗಿತ್ತು.
*
ರಾತ್ರಿ ಅಂತೂ ಅನಂತ ಮನೆ ತಲುಪಿದಾಗ, ಬೆಳಗಾಗಲು ಇನ್ನು ಬರೀ ಮೂರೆ ಗಂಟೆಗಳು ಬಾಕಿ ಅನ್ನುವ ಯೋಚನೆಗೇ ಅವನಿಗೆ ನಿದ್ದೆ ಬರುವ ಲಕ್ಷಣಗಳಿರಲಿಲ್ಲ. ಈ ಕಂಪನಿಯೂ ಬೇಡ, ಇವರು ಕೊಡುವ ಪುಡಿ ಕಾಸೂ ಬೇಡ, ಬೇರೆಲ್ಲಾದರೂ ನೋಡಬೇಕು ಅನ್ನುತ್ತ ನಿದ್ದೆ ಹೋದವನಿಗೆ, ಬೆಳಗಿನ ಅಲಾರ್ಮ್ ತರಹ ಬಡಿದೆಬ್ಬಿಸಿದ್ದು ಅವನ ಮ್ಯನೇಜರ್ ನ ಫೋನು. ಈ ಮುಂಡೆ ಮಗ ರಾತ್ರಿಯೆಲ್ಲಾ ಸುಖವಾಗಿ ನಿದ್ದೆ ಮಾಡಿರುತ್ತಾನೆ. ಹಗಲು ನಮ್ಮನ್ನು ಕಾಡುತ್ತಾನೆ ಎನ್ನುತ್ತ ಫೋನು ರಿಸೀವ್ ಮಾಡಿದವನಿಗೆ ಆಫಿಸಿಗೆ ಇನ್ನೂ ಬಂದಿಲ್ಲ ಅಂತ ಕೂಗಾಡಿ ಅವನ ನೆಮ್ಮದಿಯನ್ನೇ ಹಾಳು ಮಾಡಿದ. ತನ್ನನ್ನೊಂದು ಪ್ರಾಣಿ ಅಥವಾ ಗುಲಾಮನಂತೆ ನಡೆಸಿಕೊಳ್ಳುತ್ತಿರುವ ಬಾಸ್ ಬಗ್ಗೆ ಅಸಮಾಧಾನವಾಗಿತ್ತು. ಇವನು ಕರೆದಾಗ ಬರಲು ತಾನೇನು ಸೂಳೆಯೆ? ತನಗೆ ಬರುವ ಕೋಪಕ್ಕೆ ಸಿಕ್ಕದ್ದನ್ನೆಲ್ಲಾ ಎತ್ತಿ ಕುಕ್ಕುವ ಮನಸ್ಸಾದರೂ, ಬಡವನ ಸಿಟ್ಟು ದವಡೆಗೆ ಮೂಲ ಅಂದ್ಕೊಂಡು ಸುಮ್ಮನಾದ.
ಅವತ್ತು ಎಂದಿನಂತೆ ಬೆಳಗಾಗಿತ್ತಾದರೂ ರಾಜಾನಿಗೆ ಉತ್ಸಾಹವಿರಲಿಲ್ಲ. ಅದಕ್ಕೆ ರಾತ್ರಿಯೆಲ್ಲ ಇಲ್ಲಿಂದ ಹೇಗೆ ತಪ್ಪಿಸಿಕೊಂಡು ಓಡಿ ಹೋಗಲಿ ಅನ್ನುವ ಚಿಂತೆಯಲ್ಲಿ ನಿದ್ದೇನೆ ಬಂದಿರಲಿಲ್ಲ. ಬೆಳಗ್ಗೆ ಪೇಪರ್ ತರಲು ಅಂತ ಹೊರಗೆ ಬಂದ ಸಿದ್ದಣ್ಣ. ಅವನು ಹಾಗೆ ಹೊರ ಬಂದಾಗಗಲೆಲ್ಲಾ ರಾಜಾನನ್ನೂ ಗೇಟಿನ ಹೊರಗೆ ಬಿಡುತ್ತಿದ್ದ. ರಾಜಾನಿಗೆ ಅದೊಂದು ತರಹದ ಅರ್ಧ ಗಂಟೆಯ ಸ್ವಾತಂತ್ರ! ಅಲ್ಲೆಲ್ಲಾ ಸುತ್ತ ಮುತ್ತಲಿನ ಪರಿಸರವನ್ನೆಲ್ಲಾ ಜಾಲಾಡಿ, ಯಜಮಾನ ಹೊರಗೆ ನಿಲ್ಲಿಸಿದ್ದ ಅವನ ಕಾರಿನ ಚಕ್ರವೊಂದಕ್ಕೆ ಅವನ ಕಣ್ಣು ತಪ್ಪಿಸಿ ಉಚ್ಚೆ ಹೊಯ್ದರೆ ಅದೇ ದೊಡ್ಡ ಸಾಧನೆ! ಇವತ್ತೂ ಕೂಡ ರಾಜಾನನ್ನು ಅಡ್ಡಾಡಿ ಬರಲಿ ಅಂತ ಗೇಟಿನ ಹೊರಗೆ ಬಿಟ್ಟಿದ್ದೆ ಚಾನ್ಸು ಅಂತ ಅದು ಓಡಿ ಹೋಗಿ ಬಿಡೋದೆ!
ಬಾಸ್ ನ ಹಾಳು ಪೋನ್ ಕರೆಗೆ ನಿದ್ದೆಯಂತೂ ಹಾಳಾಗಿತ್ತು. ಬೆಳಗಿನ ಟೀ ಮಾಡಿಕೊಂಡು ಹಾಗೇ ಕಪ್ಪು ಕೈಯಲ್ಲಿ ಹಿಡ್ಕೊಂಡು ವರಾಂಡದಲ್ಲಿ ಬಂದು ನಿಂತು  ಗೇಟಿನ ಹೊರಗೆ ಕಣ್ಣು ಹಾಯಿಸಿದವನಿಗೆ ಕಂಡದ್ದು ಕಂಗಾಲಾಗಿ ತನ್ನ ನೀಳ ನಾಲಿಗೆಯ ಹೊರ ಚಾಚಿ ನಿಂತಿದ್ದ ನಾಯಿ, ರಾಜಾ! ಅನಂತನಿಗೆ ಮೊದಲಿನಿಂದಲೂ ನಾಯಿಗಳ ಕಂಡರೆ ಪ್ರೀತಿ. ಮೊದಲು ತನ್ನ ಮನೆಯಲ್ಲೊಂದು ನಾಯಿಯನ್ನೂ ಸಾಕಿದ್ದ. ಅದಕ್ಕೆಲ್ಲ ತಕ್ಕುದಾದ ವ್ಯವಸ್ಥೆಯೂ ಮನೆಯಲ್ಲಿತ್ತು. ಆದರೆ ಅದು ಸತ್ತ ಮೇಲೆ ಬೇರೆ ನಾಯಿ ಸಾಕಿರಲಿಲ್ಲ. ರಾಜಾನನ್ನು ನೋಡಿ ಅದು ಒಳ್ಳೆಯ ಜಾತಿಯ ನಾಯಿಯೇ ಅಂತ ಅವನಿಗೆ ಅಂದಾಜಾಗಿ ಹೋಯಿತು. ಕೂಡಲೇ ಒಳಗೆ ಹೋಗಿ ಒಂದಿಷ್ಟು ಬ್ರೆಡ್ಡು , ತಾನು ತಿಂದು ಉಳಿದಿದ್ದ ಪಿಡ್ಜ಼ಾವನ್ನು ಆಫರ್ ಮಾಡಿದಾಗ, ಓಡೋಡಿ ಬಂದು ಹಸಿದು ಕಂಗಾಲಾಗಿದ್ದ ರಾಜಾ ಒಂಚೂರು ಉಳಿಸದಂತೆ ತಿಂದು ಚೊಕ್ಕ ಮಾಡಿತ್ತು. ಸಿದ್ದಣ್ಣನ ಅನ್ನ ತಿಂದು ಜಿಡ್ಡು ಗಟ್ಟಿದ್ದ ನಾಲಿಗೆಯ ಎಲ್ಲ ಕಡೆಯಿಂದ ಜೀರ್ಣ ರಸಗಳು ಪ್ರವಾಹದೋಪಾದಿಯಲ್ಲಿ ಚಿಮ್ಮಿ ಹರಿಯುತ್ತಿದ್ದುದು ಅದರ ಗಮನಕ್ಕೆ ಬಂತು. ಅನ್ನದ ಋಣಕ್ಕೆ ಬಿದ್ದಾಗಿತ್ತು. ತಿಂದಾದ ಮೇಲೆ ಬಾಲ ಇನ್ನೂ ಜೋರಾಗಿ ಬಡೆದುಕೊಳ್ಳುತ್ತಿತ್ತು. ಹೊಸ ಯಜಮಾನನನ್ನು ಒಪ್ಪಿಕೊಂಡಾಗಿತ್ತು. ಅನಂತ ತನ್ನ ಕೊರಳ ಮೇಲೆ ಕೈ ಆಡಿಸಿದ್ದು ಇನ್ನೂ ಹಿತವೆನಿಸಿತ್ತು.
*
ದಿನಗಳೆದಂತೆ ಇಬ್ಬರೂ ಒಬ್ಬರಿಗೊಬ್ಬರು ಹೊಂದಿಕೊಂಡರು. ಅವನು ಬೆಳಿಗ್ಗೆ ಕೆಲಸಕ್ಕೆ ಹೋಗುವಾಗ ಸಂಜೆಯವರೆಗೆ ಆಗುವಷ್ಟು ಊಟವನ್ನಿಕ್ಕಿ ಹೋಗುತ್ತಿದ್ದುದರಿಂದ ರಾಜನಿಗೆ ಯಾವುದೇ ಕೊರತೆಯಿರಲಿಲ್ಲ. ಸಿದ್ದಣ್ಣನ ಕೊರಳು ಕೊರೆಯುವ ಕಬ್ಬಿಣದ ಸರಪಳಿಗಿಂತ ಅನಂತ ಹಾಕಿದ್ದ ಬಟ್ಟೆಯ ಸರಪಳಿ ಹಿತವಾಗಿತ್ತು. ಇಲ್ಲಿಯ ಗೂಡು ಅಲ್ಲಿಯದಕ್ಕಿಂತ ತಂಪಾಗಿತ್ತು, ಯಾಕೆಂದರೆ ಪಕ್ಕದಲ್ಲೇ ಮರವೊಂದಿತ್ತು. ಹತ್ತಿರದಲ್ಲಿ ಗಾರ್ಡನ್ ಇರಲಿಲ್ಲವಾದ್ದರಿಂದ ಸ್ವಲ್ಪ ದೂರದಲ್ಲಿರುವ ಗಾರ್ಡನ್ ಗೆ ಕಾರಿನಲ್ಲೇ ರಾಜಾನನ್ನು ಕರೆದುಕೊಂಡು ಹೋಗುತ್ತಿದ್ದದ್ದು ರಾಜನಿಗೆ ಹೆಚ್ಚಿನ ಮರ್ಯಾದೆಯನ್ನು ಕೊಟ್ಟಿತ್ತು.
ಆದರೆ, ಹೀಗೆ ಒಂದು ದಿನ, ಸಂಜೆ ಕಳೆದು ರಾತ್ರಿಯಾದರೂ ಹೊಸ ಯಜಮಾನ ಇನ್ನೂ ಮನೆಗೆ ಬರಲಿಲ್ಲವೆನ್ನುವದು ರಾಜನ ಆತಂಕಕ್ಕೆ ಕಾರಣವಾಗಿತ್ತು. ಬೆಳಿಗ್ಗೆ ಇಟ್ಟು ಹೋಗಿದ್ದ ಆಹಾರ ಖಾಲಿಯಾಗಿತ್ತು. ಹೊಟ್ಟೆ ಎಷ್ಟೋ ದಿನಗಳ ಬಳಿಕ ಮತ್ತೇ ಗುರುಗುಡತೊಡಗಿತ್ತು. ಕಾದು ಕಾದು ಸುಸ್ತಾಗಿ ನಿದ್ದೆಯೂ ಬರದೆ ಅತ್ತಿಂದಿತ್ತ ಹೊರಳಾಡಿಯೇ ರಾತ್ರಿ ಕಳೆದಿತ್ತು. ಅನಂತ ಮನೆಗೆ ಬಂದಿದ್ದು ಮರುದಿನ ಬೆಳಿಗ್ಗೆಯೇ. ರಾಜನಿಗೆ ಯಾಕೋ ತನ್ನ ಹಳೆಯ ಯಜಮಾನ ನೆನಪಾಗತೊಡಗಿದ. ಅವನು ತಡ ಮಾಡಿದರೂ ಊಟವಾದರೂ ಹಾಕುತ್ತಿದ್ದ, ಇಡೀ ರಾತ್ರಿ ಉಪವಾಸ ಕೆಡವಿದ್ದ ಹೊಸ ಯಜಮಾನನ ವರ್ತನೆ ತನಗೆ ಯಾಕೋ ಸರಿ ಕಾಣಲಿಲ್ಲ. ಎಲ್ಲಿ ಹೋದರೂ ತನ್ನ ಕಷ್ಟಗಳಿಗೆ ಕೊನೆಯೇ ಇಲ್ಲ ಅಂತ ರಾಜಾನಿಗೆ ಮನದಟ್ಟಾಗಿತ್ತು.
ಮಾಮುಲಿಯಾಗಿ ಟೀ ಕಪ್ಪು ಹೀಡಿದು ಹೊರಗೆ ಬಂದ ಯಜಮಾನ ಫೋನಿನಲ್ಲಿ ಯರೊಟ್ಟಿಗೋ ಮಾತಾಡುತ್ತಿದ್ದ. ತಾನು ಇಡೀ ರಾತ್ರಿ ಉಪವಾಸವಿದ್ದ ಬಗ್ಗೆ ಇವನಿಗೆ ಎಳ್ಳಷ್ಟು ಕಾಳಾಜಿಯೇ ಇಲ್ಲವೆ? ರಾಜಾ ಅವನ ದುರುಗುಟ್ಟಿ ನೋಡುತ್ತಿದ್ದ. ಆಗಾಗ ಕುಂಯ್ ಗುಟ್ಟಿ ಅವನ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದ.
ಅನಂತ ಮಾತ್ರ ತನ್ನದೇ ಲೋಕದಲ್ಲಿ ಮುಳುಗಿದ್ದ. ಫೋನಿನಲ್ಲಿ ತನ್ನ ಯಾರೋ ಮಿತ್ರನಿಗೆ ತನಗೆ ಹೊಸ ಕಂಪನಿಯಲಿ ಕೆಲಸ ಸಿಕ್ಕ ಬಗ್ಗೆ ಹೇಳಿಕೊಳ್ಳುತ್ತಿದ್ದ. ಅಲ್ಲಿ ಇಲ್ಲಿಗಿಂತ ಚೆನ್ನಾಗಿರುವುದೆಂತಲೂ, ಸಂಬಳವೂ ಸಿಕ್ಕಾಪಟ್ಟೆ ಜಾಸ್ತಿಯೆಂತಲೂ ಹೇಳುತ್ತಿದ್ದ. ತನ್ನ ಕಷ್ಟಗಳಿಗಿನ್ನು ಮುಕ್ತಿ. ತಾನು ಆರಾಮವಾಗಿರಬಹುದೆಂದು ಖುಷಿ ಹಂಚಿಕೊಳ್ಳುತ್ತಿದ್ದ. ಮನುಷ್ಯರ ಒಡನಾಟದಿಂದಲೋ ಏನೊ ರಾಜಾನಿಗೆ ಅವರ ಮಾತು ತಿಳಿಯದಿದ್ದರೂ ಭಾವನೆಗಳು ಅರ್ಥವಾಗುತ್ತಿದ್ದವು. ಅದರ ಕಿವಿ ನಿಮಿರಿದವು. ಅವನು ಫೋನಲ್ಲಿ ಹೇಳುತ್ತಿದ್ದುದನ್ನು ಲಕ್ಶ್ಯಗೊಟ್ಟು ಕೇಳುತ್ತಿತ್ತು. …. ಅನಂತ ಹಾಗೆ ಮಾತನಾಡುತ್ತಾ ಅಕಸ್ಮಾತಾಗಿ ತನ್ನನ್ನೇ ದಿಟ್ಟಿಸಿ ನೋಡುತ್ತಿದ್ದ ರಾಜಾನ ಮುಖ ಕಂಡು, ಕೂಲಂಕುಷವಾಗಿ ಗಮನಿಸಿದ. ಬೆರಗುಗಣ್ಣಿನಿಂದ ಮತ್ತೆ ಮತ್ತೆ ಅದರ ಮುಖವನ್ನೇ ನೋಡಿದ, ರಾಜಾ ನಗುತ್ತಿರುವಂತೆ ಅವನಿಗೆ ಭಾಸವಾಗಿ ಬೆಚ್ಚಿಬಿದ್ದ! 



 

Saturday, February 1, 2014

ಕನ್ನಡೋದ್ಧಾರ!

ಪಂಜುನಲ್ಲಿ ಪ್ರಕಟವಾಗಿದ್ದ "ಕನ್ನಡೋದ್ಧಾರ!", ಓದಿ ಅನಂದಿಸಿ!
 
ಮದುವೆಯಾಗಿ ಬೆಂಗಳೂರಿಗೆ ಬಂದಮೇಲೆ ಇನ್ನೂ ಒಂದು ಸಲಾನೂ ಸಿನಿಮಾಗೇ ಕರೆದುಕೊಂಡು ಹೋಗಿಲ್ಲಾ ಅಂತ ಅವತ್ಯಾಕೋ ಅನಿರೀಕ್ಷಿತವಾಗಿ ನೆನಪಾಗಿ ಜಾನು ರಂಪ ಮಾಡಿಕೊಂಡಿದ್ದಳು. ಗಪ್ಪಣ್ಣನಿಗೆ ಅವಳ್ಯಾಕೋ ಸಿಕ್ಕಾಪಟ್ಟೆ ತವರನ್ನು ಮಿಸ್ ಮಾಡಿಕೊಳ್ಳುತ್ತಿರಬಹುದೇ ಎಂದು ಅನಿಸಿತಾದ್ದರಿಂದ, ತಡ ಮಾಡದೇ … "ಅದಕ್ಕೇನಂತ ಇವತ್ತ ಹೋಗೋಣ ನಡಿ" ಅಂದು ಜಾನುನಲ್ಲಿ ಜಾನ್ ತಂದ! ಕೂಡಲೇ ಜಾನು ಕಾರ್ಯಪ್ರವೃತ್ತಳಾಗಿ, ಪಲ್ಲಂಗದ ಕೆಳಗಿನ ಮೂಲೆಯಲ್ಲಿ ಜೋಪಾನವಾಗಿ ಎಸೆದಿದ್ದ ಅವತ್ತಿನ ಪೇಪರ್ ಅನ್ನು ಎತ್ತಿ ತಂದು ಅದರಲ್ಲಿನ ಸಾಪ್ತಾಹಿಕ ಪುರವಣಿಯಲ್ಲಿದ್ದ ಅಸಂಖ್ಯಾತ ಸಿನಿಮಾಗಳ ಯಾದಿಯಲ್ಲಿ ಒಂದಕ್ಕೆ ಬೆರಳು ಹಿಡಿದು ತೋರಿಸಿದಾಗ ಗಪ್ಪಣ್ಣನ ಎದೆಯಲ್ಲಿ ರಕ್ತ ಹೆಪ್ಪುಗಟ್ಟಿದಂತಾಗಿತ್ತು! ಅವಳು ನೋಡಲು ಬಯಸಿದ್ದ ಸಿನಿಮಾ ಶಾಹ್ ರುಖ್ ಖಾನ್ ನ ’ಚೆನ್ನೈ ಎಕ್ಸ್ ಪ್ರೆಸ್’ ಎಂಬ ಹಿಂದಿ ಸಿನಿಮಾ. ಈ ಖಾನ್ ನ ಎಲ್ಲ ಹಲ್ಲುಗಳುದುರಿ ಮುದುಕನಾದರೂ ಅವನ ಅಭಿಮಾನಿಗಳಿಗೇನು ಕೊರತೆಯಿಲ್ಲ. ಆ ಹೆಣ್ಣೂ ಮಕ್ಕಳಿಗಂತೂ ಏನು ಮೋಡಿ ಮಾಡಿದ್ದಾನೋ ನನ ಮಗಾ ಅಂತ ಮಾತ್ಸರ್ಯದಿಂದ ತಾನೇನು ಅವನಿಗೆ ಕಡಿಮೆಯಿರಬಹುದು ಅಂತ ಕನ್ನಡಿ ನೋಡಿಕೊಂಡ. ತನ್ನ ಅಖಂಡವಾದ ಸಿಂಗಲ್ ಪ್ಯಾಕ್ ಬಾಡಿ ಕಂಡು ಬೆಚ್ಚಿ ಬಿದ್ದ! ........  

http://www.panjumagazine.com/?p=6134

 

Friday, January 24, 2014

ಪೂರ್ವ ಹಾಗೂ ಈಶಾನ್ಯ ಭಾರತದ ಪ್ರವಾಸ

ನಮ್ಮ ಪ್ರವಾಸ ಕಥನ ಪಂಜು ಪತ್ರಿಕೆಯಲ್ಲಿ ಐದು ಭಾಗಗಳಲ್ಲಿ ಪ್ರಕಟವಾಗಿತ್ತು. ಕೆಳಗೆ ಐದು ಭಾಗಗಳ ಲಿಂಕ್ ಇವೆ. ಓದಿ ಆನಂದಿಸಿ :)

ಮೊದಲನೇ ಭಾಗ: http://www.panjumagazine.com/?p=5012

"ಯಾವುದೆ ಪ್ರವಾಸದಲ್ಲಿ ಅನುಭವಿಸುವ ಅನಂದಕ್ಕಿಂತ ಆ ಪ್ರವಾಸಕ್ಕಾಗಿ ಮಾಡುವ ಸಿಧ್ಧತೆ ಹಾಗೂ ಅದರ ಕಲ್ಪನೆಯಲ್ಲಿ ಸಿಗುವ ಮಜವೇ ಅದ್ಭುತ!" ಅಂತ ನಮ್ಮ ಕೃಷ್ಣ ಮೂರ್ತಿ ಅವರ ಅಂಬೋಣ. ಅದು ನಿಜವೂ ಹೌದು. ಹಾಗೂ ಆ ಮಾತು ಪ್ರವಾಸಕ್ಕಷ್ಟೇ ಸೀಮಿತವಲ್ಲ. ಯಾವುದೇ ವಿಷಯದಲ್ಲೂ ಕಲ್ಪನೆಯಲ್ಲಿರುವ ಖುಷಿಯೇ ಬೇರೆ. ಹೀಗೆ ನಮ್ಮ ಪೂರ್ವ ಹಾಗೂ ಈಶಾನ್ಯ ಭಾರತದ ಪ್ರವಾಸದ ಪರಿಕಲ್ಪನೆ ಶುರುವಾದದ್ದು ಮೂರು ತಿಂಗಳ ಹಿಂದೆ. ಎಲ್ಲೆಲ್ಲಿ ಹೋಗುವುದು, ಏನೇನು ಸಿದ್ಧತೆಗಳು, ಎಲ್ಲಿ ಪ್ಲೇನು, ಎಲ್ಲಿ ಟ್ರೇನು  [...]

ಎರಡನೇ ಭಾಗ: http://www.panjumagazine.com/?p=5086

ಇಷ್ಟು ಬೇಗ ಬೆಳಕಾಯ್ತೆ!? ಒಂದೊಂದು ಸಲ ನಿದ್ದೆ ಸಾಲದಾದಾಗ, ಏಳಲೇಬೇಕಾದ ಅನಿವಾರ್ಯತೆಯಿದ್ದಾಗ ಹಾಗನ್ನಿಸಿಬಿಡುತ್ತದೆ! ಇನ್ನೂ ಹಳೆಯದರಂತೇ ಗೋಚರಿಸುವ ಬಂಗಾಲದ New Jalpaiguri ಎಂಬ ಊರಿನಲ್ಲಿ ಗಂಟು ಮೂಟೆಗಳೊಂದಿಗೆ ಬೆಳ್ಳಂ ಬೆಳಿಗ್ಗೆ ಟ್ರೇನಿನಿಂದ ಇಳಿದಾಗ, ಇಲ್ಲಿ ಹೊಸ (New) ದೇನಿರಬಹುದು ಅಂತ ಯೋಚಿಸುತ್ತಲೇ ಹೊರಗೆ ಬಂದಾಗ ಎರಡು ಝೈಲೋ ಗಾಡಿಗಳು ಹಾಗೂ ಇಬ್ಬರು ಸಾರಥಿಗಳು ನಮಗಾಗಿ ಕಾಯ್ದಿದ್ದರು. ಒಬ್ಬನ ಹೆಸರು ಸರೋಜ್ ಇನ್ನೊಬ್ಬ ನೀ ಮಾ. ಇಬ್ಬರೂ ನೇಪಾಳಿಗಳು. ನೀ ಮಾ ಅಂದರೆ ನೇಪಾಳೀ ಭಾಷೆಯಲ್ಲಿ ಸುರ್ಯೋದಯವಂತೆ. [...]

ಮೂರನೇ ಭಾಗ: http://www.panjumagazine.com/?p=5208

ಟೈಗರ್ ಹಿಲ್ ನ ಸುರ್ಯೋದಯ ನೋಡಿ ಬಂದು ಒಂಭತ್ತು ಗಂಟೆಗೆಲ್ಲಾ ತಯಾರಾಗಿ ಹೋಟೆಲ್ ಹೊರಗೆ ನಿಂತವರ ಮುಖಗಳು ಲವಲವಿಕೆಯಿಂದ ಕಂಗೊಳಿಸುತ್ತಿದ್ದವು. ಯಾಕಂತೀರಾ? ಬೆಂಗಳೂರು ಬಿಟ್ಟ ಮೇಲೆ ಮೊದಲ ಬಾರಿಗೆ ಎಲ್ಲರಿಗೂ ಸ್ನಾನ ಮಾಡುವ ಅವಕಾಶ ಸಿಕ್ಕಿದ್ದು ಅವತ್ತೇ! ತಾನು ಹೇಳಿದ್ದ ಟೈಮಿಗೆ ನಾವು ಸರಿಯಾಗಿ ಬಂದಿಲ್ಲಾ ಅಂತ ನೀಮಾ ಮುಖ ಸಿಂಡರಿಸಿಕೊಂಡಿದ್ದ. ಮೊದಲೇ ಕೆಂಪಗಿದ್ದವನು ಇನ್ನೂ ಕೆಂಪಾಗಿದ್ದ ಏನೇನೋ ಪ್ರಯತ್ನಗಳನ್ನು ಮಾಡಿ ಅವನ ಮುಖದ ಗಂಟುಗಳನ್ನು ಯಶಸ್ವಿಯಾಗಿ ಬಿಡಿಸಿದೆವು. [...]

ನಾಲ್ಕನೇ ಭಾಗ: http://www.panjumagazine.com/?p=5336

  ಅವತ್ತು ಬೆಳಿಗ್ಗೆ ದಾರ್ಜಿಲಿಂಗ್ ಗೆ ವಿದಾಯ ಹೇಳಿ ಕಾಲಿಮ್ ಪಾಂಗ್‍ಗೆ ನಮ್ಮ ಸವಾರಿ ಸಾಗಿತ್ತು. ಮಾರ್ಗ ಮಧ್ಯದಲ್ಲಿ ಒಂದು ಅದ್ಭುತ ಜಾಗದಲ್ಲಿ ಟ್ರೆಕ್ಕಿಂಗ್‍ಗೆ ಕರೆದೊಯ್ಯುವುದಾಗಿ ಭರವಸೆ ಕೊಟ್ಟು ನಮ್ಮನ್ನು ಕುತೂಹಲಿಗಳನ್ನಾಗಿರಿಸಿದ್ದ ನಮ್ಮ ನೀ ಮಾ. ನಾವು ಹೊರಟು ಸುಮಾರು ಎರಡು ಗಂಟೆಗಳಾಗಿತ್ತೇನೊ ಲಾಮಾ ಹಟ್ಟಾ ಅನ್ನುವ ಒಂದು ಹಳ್ಳಿಯಲ್ಲಿ ನಮ್ಮ ಗಾಡಿ ನಿಂತಿತು. ಅದು ಮುಖ್ಯ ರಸ್ತೆಯಲ್ಲೇ ಇರುವ ಒಂದು ಹಳ್ಳಿ.  [...]

ಐದನೇ ಭಾಗ: http://www.panjumagazine.com/?p=5432

ಕಾಲಿಮ್ ಫಾಂಗ್ ನಿಂದ ಗ್ಯಾಂಗ್ ಟಾಕ್ ಗೆ ಹೋಗುತ್ತಿದ್ದಾಗ ಮಧ್ಯೆ ದಾರಿಯಲ್ಲಿ ನಮಗರಿವಿಲ್ಲದಂತೆ ಒಮ್ಮೆಲೆ ಬೆಂಗಳೂರಿನ ನೆನಪಾಯಿತು. ಅದಕ್ಕಿದ್ದ ಒಂದೇ ಕಾರಣವೆಂದರೆ… ಈ ಪ್ರವಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಅರ್ಧ ಗಂಟೆ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕೊಂಡಿದ್ವಿ! ಅಂತೂ ಪೋಲಿಸರಿಲ್ಲದಿದ್ದರೂ ಹೇಗೋ ಆ ಜಾಮ್ ಕರಗಿ ನಮ್ಮ ಪಯಣ ಮುಂದುವರಿಯಿತು. ಗ್ಯಾಂಗ್ ಟಾಕ್, ಸಿಕ್ಕಿಂ ಎಂಬ ಪುಟ್ಟ ರಾಜ್ಯದ ರಾಜಧಾನಿ. ಆ ಊರಿಗೆ ಪ್ರವೇಶಿಸುವುದಕ್ಕೆ ಮೊದಲು, ಬಂಗಾಲ ಹಾಗೂ ಸಿಕ್ಕಿಂ ನ ಗಡಿಯಲ್ಲಿ [...]

Sunday, October 27, 2013

ನಾನು ಬಡವ?

(ಪಂಜು ಪತ್ರಿಕೆಯಲ್ಲಿ ದಿ. ೩೦ ಸೆಪ್ಟೆಂಬರ್, ೨೦೧೩ ರಂದು ಪ್ರಕಟವಾಗಿತ್ತು)
http://www.panjumagazine.com/?p=4620

-------------------------------------------------------------------------------

ಮೂರ್ತಿ ಯಾವುದೋ ಒಂದು ಪುಸ್ತಕದಲ್ಲಿ ಗಹನವಾಗಿ ಮುಳುಗಿದ್ದವರು ನಿಟ್ಟುಸಿರು ಬಿಟ್ಟು ಹೀಗೆ ಅರುಹಿದರು…

ಮೂರ್ತಿ: "ಗುರು, ಹಿಂದಿನ ಕಾಲದಲ್ಲಿ ನಮ್ಮ ದೇಶದಲ್ಲಿ ಎಂಥಾ ಸುಭಿಕ್ಷೆ ಇತ್ತಂತೆರೀ… ನಿಮಗೊತ್ತಾ? ಆಗ ವಿಜಯನಗರ ಸಾಮ್ರಾಜ್ಯದಲ್ಲಿ ಮುತ್ತು, ರತ್ನ, ಬಂಗಾರಗಳನ್ನ ತರಕಾರಿಗಳ ತರ ಸಂತೆಲಿ ಮಾರುತ್ತಿದ್ದರಂತೆ!"

ಗುರು: "ಹೌದು, ಆದ್ರೆ ಆಗಿನ ಕಾಲಕ್ಕೆ ಈಗಿನ ಕಾಲಕ್ಕೆ ಅಷ್ಟೆಲ್ಲಾ ಡಿಫರನ್ಸು ಇಲ್ಲಾ ಬಿಡ್ರೀ."

ಮೂ: "ಅಧೆಂಗ್ರೀಪಾ?"

ಗು: "ಈಗ ತರಕಾರಿಗಳನ್ನ ಮುತ್ತು, ರತ್ನ, ಬಂಗಾರಗಳ ರೇಟಿನಲ್ಲಿ ಮಾರ್ತಾರೆ ಅಷ್ಟೆ!!"

ಮೂ: "ಹ್ಹ ಹ್ಹ ಹ್ಹ! ಹೌದು ಬಿಡ್ರೀ. ಈರುಳ್ಳಿ ರೇಟು 100 ರುಪಾಯಿ ಕೇಜಿ ಅಂತ್ರೀಪಾ."

ಗು: "ಹೌದ್ರೀ, ತುಂಬಾ ದಿನಾ ಆಯ್ತು ಮನೇಲಿ ಈರುಳ್ಳಿ ಭಜಿ ತಿಂದು…"

ನಾನು ಕನಸು ಕಾಣತೊಡಗಿ ಒಂದು ದೊಡ್ಡ ನಿಟ್ಟುಸಿರು ಬಿಟ್ಟೆ.



ಗು: "ಅಲ್ರೀ ಮೂರ್ತಿ ನಮ್ಮ ಪರಿಸ್ಥಿತಿನೇ ಹೀಂಗಾದ್ರೆ, ಪಾಪಾ ಬಡವರ ಗತಿ ಏನು?"

ನಾನು ಮಹಾ ಶ್ರಿಮಂತನೆನ್ನುವ ಮುಖಮುದ್ರೆಯೊಂದಿಗೆ ಈ ಡೈಲಾಗು ಹೊಡೆದು ಮೂರ್ತಿಯವರನ್ನು ನೋಡಿದೆ. ಅವರು ಗಹನ ಯೋಚನೆಯಲ್ಲಿ ಮುಳುಗಿದ್ದರಾ ಇಲ್ಲಾ ಹಾಗೆ ನಟಿಸುತ್ತಿದ್ದರಾ ಗೊತ್ತಿಲ್ಲ! ಕೆಲವು ಕ್ಷಣಗಳ ಬಳಿಕ ನನ್ನ ಮೇಲೊಂದು ಪ್ರಶ್ನೆಯ ಬಾಣವೊಂದನ್ನು ಎಸೆದು ಕಂಗಾಲುಗೊಳಿಸಿದರು!

ಮೂ: "ಬಡವರು ಅಂದ್ರೆ ಯಾರು? ಹೇಳಿ ನೋಡೋಣಾ!"

ಇದೆಂತಹ ಪ್ರಶ್ನೆ?! ನಾನು ಗೊಂದಲಕ್ಕೆ ಬಿದ್ದೆ. ಆದರೂ ಗೊತ್ತಿಲ್ಲವೆಂದು ಹೇಳೋಕಾಗುತ್ತೆಯೆ?

ಗು: "ಬಡವರೆಂದರೆ ಬಡತನದ ರೇಖೆಗಿಂತ ಕೆಳಗಿರುವವರು."

ಅಂತ ಹೇಳಿ, ಇದೇನ್ಮಹಾ ಪ್ರಶ್ನೆ ಅನ್ನುವ ವದನದೊಂದಿಗೆ ಇರುವಾಗಲೇ…

ಮೂ: "ತಪ್ಪು" ಅಂದರು!

ನನಗೆ ಕನ್ನಡದ ಕೋಟ್ಯಾಧಿಪತಿಯಲ್ಲಿ ತಪ್ಪು ಉತ್ತರ ಹೇಳಿ ಪುನೀತನ ಎದುರು ಪೆಚ್ಚು ಮೋರೆ ಹಾಕಿ ಕುಂತಗಾಯ್ತು!



ಗು: "…. ?"

ಮೂ: "ತನ್ನಲ್ಲಿ ಏನೋ ಒಂದು ಕೊರತೆ ಇದೆ ಅಂದುಕೊಂಡು, ಆ ಕೊರತೆಯ ಕೊರಗನ್ನು ಅನುಭವಿಸುವವನೇ ಬಡವ"

ಗು: "ಅಂದ್ರೆ, ಈರುಳ್ಳಿಯ ಕೊರತೆಯನ್ನು ಅನುಭವಿಸುತ್ತಿರುವ ನಾನೂ ಬಡವನೇ??" ಸ್ವಲ್ಪ ಸಿಟ್ಟಿನಿಂದಲೇ ಕೇಳಿದೆ.

ಅವರು ನಸು ನಕ್ಕು ಹೇಳಿದರು.

ಮೂ: "ಹಾಗಂತ ಅಲ್ಲಾ ಗುರು. ಯಾವನು ಎಲ್ಲಿಯವರೆಗೆ ತನಗೆ ಅದು ಬೇಕು ಇದು ಬೇಕು ಅಂತ ಹಪಹಪಿಸಿ ಕೊರತೆ ಅನುಭವಿಸುವನೋ, ಅಲ್ಲಿಯವರೆಗೆ ಅವನು ಬಡವನೇ. ಅದು ನಾನೂ ಆಗಿರಬಹುದು, ನೀವು ಅಥವ ಅಂಬಾನಿಯೂ ಆಗಿರಬಹುದು! ನಿಮ್ಮ ಹತ್ತಿರ ಒಂದು ಕಾರು ಇದೆ, ಆದರೂ ನೀವು ಇದಕ್ಕಿಂತ ದೊಡ್ಡ ಕಾರು ನಿಮ್ಮ ಬಳಿ ಇರಬೇಕಿತ್ತು ಅಂತ ಆಸೆ ಪಟ್ಟು, ಆ ಕೊರತೆ ಅನುಭವಿಸಿದರೆ ನೀವೂ ಬಡವರೆ!"

ಹೌದಲ್ಲವೇ! ಮೂರ್ತಿಗಳು ಒಂದು ಯಾಂಗಲ್‍ನಲ್ಲಿ ಕ್ಲೀನ್ ಆಗಿ ಶೇವ್ ಮಾಡಿದ ಯವುದೋ ಒಬ್ಬ ತತ್ವ ಜ್ಞಾನಿಗಳಂತೆ ಕಾಣತೊಡಗಿದರು! ಅವರು ಹೇಳಿದ್ದು ಸತ್ಯವೆನಿಸಿತು ಕೂಡ. ನಾನೂ ಯೋಚನೆಗೆ ತೊಡಗಿದೆ. ನನ್ನ ಆಸೆಗಳ ಯಾದಿ ದೊಡ್ಡದೇ ಇದೆ. ನಾನೂ ಒಬ್ಬ ಬಡವನೇ!

ಗು: "ಸರಿಯಾಗಿ ಹೇಳಿದ್ರಿ ಮೂರ್ತಿ. ನಿಮ್ಮ ಮಾತು ಒಪ್ಪಬೇಕಾದದ್ದೆ."

ಅಷ್ಟರಲ್ಲೇ ಮನೆಯ ಹೊರಗೆ "ನೂರು ರುಪಾಯಿಗೆ ಎರಡು ಕೇಜಿ ಈರುಳ್ಳೀ…" ಅಂತಾ ಕೂಗಿದಂತಾಯ್ತು. ನನ್ನ ಕಿವಿಗಳು ನಿಮಿರಿದವು. ಕೈಗೆ ಸಿಕ್ಕ ಚೀಲ ಹಿಡಿದು ಹೆಂಡತಿಯ ಅಪ್ಪಣೆಗೂ ಕಾಯದೇ ಹೊರಗೆ ಓಡಿದೆ. ತಳ್ಳುವ ಗಾಡಿಯಲ್ಲಿ ಈರುಳ್ಳಿಗಳು. ಅವುಗಳ ಗಾತ್ರ ಮಾತ್ರ ಬೆಳ್ಳುಳ್ಳಿಗಿಂತ ಸ್ವಲ್ಪ ದೊಡ್ಡ ಅಷ್ಟೆ! ನಮಗೇನಾಗಬೇಕು, ಒಟ್ಟಿನಲ್ಲಿ ಈರುಳ್ಳಿ ಭಜಿ ತಿನ್ನಬೇಕು ಅಷ್ಟೆ! ಇದ್ದುದರಲೇ ಸ್ವಲ್ಪ ದೊಡ್ಡದನ್ನು ಆರಿಸೋಣವೆಂದರೆ, ತಳ್ಳುವ ಗಾಡಿಯವನು ಅದಕ್ಕೂ ಅವಕಾಶ ಕೊಡಲಿಲ್ಲ. ಒಟ್ಟಿನಲ್ಲಿ ಎರಡು ಕೇಜಿ ಈರುಳ್ಳಿಗಳನ್ನು ಪೇರಿಸಿಕೊಂಡು ಮನೆಗೆ ತಂದೆ. ಈರುಳ್ಳಿ ಭಜಿ ಮಾಡಿಸಿಕೊಂಡು ತಿಂದು ಕೊರತೆ ನೀಗಿಸಿಕೊಂಡೆವು. ಆದರೂ ಬಡತನದ ಹೊಸ ವ್ಯಖ್ಯಾನ ತಲೆ ಕೊರೆಯುತ್ತಿತ್ತು…

Saturday, September 14, 2013

ಅವಳು!

(ಪಂಜು ಪತ್ರಿಕೆಯಲ್ಲಿ ದಿ. ೦೯ ಸೆಪ್ಟೆಂಬರ್, ೨೦೧೩ ರಂದು ಪ್ರಕಟವಾಗಿತ್ತು)
http://www.panjumagazine.com/?p=4340

----------------------------------------------------------------------------------------------
ಇವತ್ತಿಗೆ ಸರಿಯಾಗಿ ಆರು ವರುಷಗಳ ಹಿಂದೆ ನಾನವಳ ಭೇಟಿಯಾಗಿದ್ದೆ. ಮೊದಲ ನೋಟದಲ್ಲೇ ಅವಳಲ್ಲಿ ಅನುರಕ್ತನಾದೆ. ಅವಳಲ್ಲಿ ತುಂಬಾ ಇಷ್ಟವಾಗಿದ್ದು ಅವಳ ಸ್ನಿಗ್ಧ ಸೌಂದರ್ಯ ಹಾಗು ಅವಳ ಬಣ್ಣ! ಅವತ್ತೇ ಅವಳನ್ನು ಮನೆಗೆ ಕರೆದುಕೊಂಡು ಬಂದಿದ್ದೆ. ಅಪ್ಪ ಎಂದಿನಂತೆ ಬೈದಿದ್ದ. ನಾನವಳನ್ನು ಕರೆದುಕೊಂಡು ಬಂದಿದ್ದು ಅವನಿಗೆ ಸುತಾರಾಮ್ ಇಷ್ಟವಿರಲಿಲ್ಲ. ಆತ ನನ್ನ ಮೇಲೆ ಕೋಪಗೊಂಡಿದ್ದು ಸ್ಪಷ್ಟವಾಗಿತ್ತು. ಆದರೆ ಮುಂದೆ ಎಲ್ಲಾ ಸರಿ ಹೋಗುವುದೆಂಬ ಭರವಸೆ ನನಗೆ. ಅವತ್ತಿಗೆ ಅವನಿಗೆ ಎದುರು ಮಾತನಾಡದೇ ಸುಮ್ಮನಿದ್ದೆ. ಆದರೆ ನನಗಿದ್ದ ದೊಡ್ಡ ಅಳುಕು, ನನ್ನ ಹೆಂಡತಿ ಅವಳನ್ನು ಹೇಗೆ ಸ್ವೀಕರಿಸುವಳೋ ಎಂದು. ಆದರೆ ಮೊದಲ ದಿನವೇ ಆರತಿ ತಟ್ಟೆಯೊಂದಿಗೆ ಅವಳನ್ನು ಸ್ವಾಗತಿಸಿ ಅಚ್ಚರಿ ಮೂಡಿಸಿದ್ದಳು. ಮೊದ ಮೊದಲು ಅವಳ ಜೊತೆ ಹೊರಗೆ ಹೋದಾಗ ತುಂಬಾ ಮುಜುಗರವಾಗುತ್ತಿತ್ತು. ಎಲ್ಲರ ಕಣ್ಣು ನಮ್ಮ ಮೇಲೇ ಇದೆಯೆನೋ ಎಂದು ಸಂಕೋಚದಿಂದ ಮುದುಡಿ ಹೋಗುತ್ತಿದ್ದೆ. ಆದರೆ ಬರ್ತಾ ಬರ್ತಾ ನನಗವಳು, ಅವಳಿಗೆ ನಾನು ಹೋಂದಿಕೊಂಡೆವು. ಸುತ್ತಲಿನ ಜನರೂ ದುರುಗುಟ್ಟಿ ನೋಡುವುದು ಕ್ರಮೇಣ ಅಭ್ಯಾಸವಾಯ್ತೊ ಅಥವ ಅವರು ಹಾಗೆ ನೋಡುವುದ ಕಡಿಮೆ ಮಾಡಿದರೋ ಒಟ್ಟಿನಲ್ಲಿ ಅವಳ ಸಂಗ ನನಗೆ ರೂಢಿಯಯ್ತು.

 

ಅವಳು ನನ್ನನ್ನು ಎಷ್ಟು ಕಾಳಜಿವಹಿಸಲು ಶುರು ಮಾಡಿದಳೆಂದರೆ, ತಾನು ಮಳೆಯಲ್ಲಿ ನೆಂದು ತೊಪ್ಪೆಯಾದರೂ ನನಗೊಂದು ಹನಿ ಸಿಡಿಯಲೂ ಬಿಡುತ್ತಿರಲಿಲ್ಲ.  ತಾನು ಬಿಸಿಲಲ್ಲಿ ಬೆಂದರೂ ನನಗೆ ತಂಪನೆರಗಿದಳು. ಅಂಥ ತ್ಯಾಗಮಯಿ ಅವಳು. ನನ್ನ ಮಾತೇ ಅವಳಿಗೆ ವೇದ ವಾಕ್ಯ. ನಾನು ಹೇಳಿದಂತೆ ಕೇಳತೊಡಗಿದಳು. ಆದರೆ ದಿನಕಳೆದಂತೆ ನಾನು ಅವಳ ಮೇಲೆ ತುಂಬಾ ಅವಲಂಬಿತನಾಗತೊಡಗಿದೆ. ಅವಳನ್ನು ಬಿಟ್ಟು ಎಲ್ಲೂ ಹೋಗಲಾರದಷ್ಟು, ನಾನವಳಿಗೆ ಹೊಂದಿಕೊಂಡು ಬಿಟ್ಟೆ. ನನ್ನ ಹೇಂಡತಿಗದು ಇಷ್ಟವಾಗದಾಯ್ತು. ಯಾವ ಹೇಂಡತಿ ತಾನೆ ಇಷ್ಟ ಪಟ್ಟಾಳು? ತಾನೂ ಅವಳ ಜೊತೆ ಇದ್ದಾಗ ಖುಷಿಯಿಂದ ಇರುತ್ತಿದ್ದ ಹೆಂಡತಿ, ನಾನು ಅವಳ ಜೊತೆ ಒಬ್ಬನೇ ಹೋದರೆ ಕೋಪ ಮಾಡಿ ಕೊಳ್ಳತೊಡಗಿದಳು. ಬರ ಬರುತ್ತಾ ಅವಳ ಅರೈಕೆ ಹೆಚ್ಚಾದುದರಿಂದಲೋ ಏನೋ ನನ್ನ ದೇಹದ ಗಾತ್ರವೂ ಹೆಚ್ಚಾಗತೊಡಗಿತು. ಅದೂ ಅಲ್ಲದೇ ಕೆಲವು ಕಡೆ ಅವಳ ದೆಸೆಯಿಂದ ನನ್ನ ವ್ಯಕ್ತಿತ್ವಕ್ಕೂ ಒಂದು ತೂಕ ಬಂತು. ಕೆಲವರು ಅವಳು ನನ್ನ ಜೊತೆಗಿರುವ ಕಾರಣಕ್ಕೆ ನನಗೆ ಜಾಸ್ತಿಯೇ ಮರ್ಯಾದೆ ಕೊಡತೊಡಗಿದರು. ಏನೆ ಆದರೂ ನಾನೂ ಆ ಒಂದು ಅಟೆನ್ಷನ್ ಇಷ್ಟ ಪಡತೊಡಗಿದೆ. ಅವಳು ಮಾತ್ರ ನಿರ್ಲಿಪ್ತಳಾಗಿದ್ದಳು!

 

ಈ ಒಂದು ಖುಷಿಯನ್ನು ಸಹಿಸಲಾರದವರ ಕಣ್ಣು ಬಿತ್ತೋ ಏನೊ. ಒಂದು ದಿನ ನಾವಿಬ್ಬರೂ ರಸ್ತೆಯಲ್ಲಿ ಬರುತ್ತಿರುವಾಗ ಒಂದು ಸಣ್ಣ ದುರ್ಘಟನೆ ನಡೆದು ಹೋಯ್ತು. ಬೈಕಿನವನೊಬ್ಬ ಅವಳಿಗೆ ಬಡಿಸಿಕೋಂಡು ಹೋದ. ನಾನು ಅವನ ಮೇಲೆ ಕೂಗಾಡಿದೆ. ಅವಳಿಗೆ ಸಣ್ಣ ಪುಟ್ಟ ತರಚಿದ ಗಾಯಗಳಾದರೂ ತುಟಿ ಪಿಟಕ್ಕೆನ್ನದೇ ಎಲ್ಲಾ ಸಹಿಸಿಕೊಂಡಳು. ಅದು ಮೊದಲ ಸಲವಲ್ಲವೇ? ನನ್ನ ಕಣ್ಣಲ್ಲಿ ಸಣ್ಣಗೆ ನೀರು ಜಿನುಗುತ್ತಿತ್ತು. ಅವಳನ್ನು ರಕ್ಷಿಸಲಾಗಲಿಲ್ಲವೆಂಬ ಅಪರಾಧಿ ಮನೋಭಾವ ನನ್ನ ಮನದಲ್ಲಿ ಇನ್ನೂ ಇದೆ.

 

ನನ್ನ ಬದುಕಿನ ಯಾವುದೆ ಕಷ್ಟದ ದಾರಿಯಲ್ಲೂ ಅವಳು ನನ್ನ ಜೊತೆಗೆ ಬರುತ್ತಾಳೆ. ಕಲ್ಲು ಮುಳ್ಳುಗಳಿರಲಿ ಎಂಥದೇ ತಿರುವುಗಳಿರಲಿ ಅವಳು ನನ್ನ ಕೈ ಬಿಟ್ಟಿಲ್ಲ, ಸುಸ್ತಾಗಿದೆಯೆಂದು ನಿಟ್ಟುಸಿರಿಟ್ಟಿಲ್ಲ. ನಾನೊಬ್ಬ ಕಟುಕನಂತೆ ಬಾಳಿನ ಪಯಣದಲ್ಲಿ ಅವಳನ್ನು ತುಂಬಾ ದಣಿಸಿದ್ದೇನೆ. ಅದಕ್ಕವಳು ಮರು ಮಾತಾಡದೇ ಎಲ್ಲ ಕಷ್ಟಗಳನ್ನೂ ಸಹಿಸಿಕೊಂಡಿದ್ದಾಳೆ. ಅಂಥವಳನ್ನು ಬಿಟ್ಟಿರಲು ಹೇಗೆ ಸಾಧ್ಯ? ಒಂದೊಂದು ಸಲ ಅವಳಿಗಿಂತ ಚೆನಾಗಿರುವವಳನ್ನು ನಾನು ಕಣ್ಣಗಲಿಸಿ ನೋಡುವುದ ನೋಡಿಯೂ ಕೂಡ ಅವಳೆಂದೂ ನನ್ನ ಮೇಲೆ ಮುನಿಸಿಕೊಂಡಿಲ್ಲ. ಅದು ಅವಳ ದೊಡ್ಡ ಗುಣ. ಅವಾಗಾವಾಗ ನಾನೇ ನನ್ನ ಕೈಯಾರೆ ಅವಳಿಗೆ ನೀರೆರೆದು ಸ್ನಾನ ಮಾಡಿಸುತ್ತೇನೆ…….  ಛೆ ಛೆ .. ಏನೇನೋ ಯೋಚಿಸಿ ತಪ್ಪು ತಿಳ್ಕೋಬೇಡಿ. ನಾನಿಷ್ಟೊತ್ತು ಹೇಳಿದ್ದ ನನ್ನ ನೆಚ್ಚಿನ ಕಾರಿನ ಬಗ್ಗೆ! ಇವತ್ತಿಗೆ ಸರಿಯಾಗಿ ನನ್ನ ಜೊತೆ ಐವತ್ತು ಸಾವಿರ ಕಿಲೋಮೀಟರು ಕ್ರಮಿಸಿದ ನನ್ನ ನಲ್ಲೆ "ಅವಳು" . I JUST LOVE HER!!

Sunday, June 9, 2013

"ಕಡ್ಡಿಪುಡಿ" ಮಿಸ್ ಮಾಡ್ಲೇ ಬೇಡಿ!

"ಕಡ್ಡಿಪುಡಿ" ಎಂಬ ತುಂಬಾ ಇಂಟರೆಸ್ಟಿಂಗಾದ ಹೆಸರಿನ ಚಲನ ಚಿತ್ರದ ಬಿಡುಗಡೆಗೆ ತುಂಬಾ ಕಾಯ್ದಿದ್ದೆವು. ಅಂತೂ ಅದು ಬಿಡುಗಡೆಗೊಂಡ ಮರುದಿನವಾದ ನಿನ್ನೆ ಶನಿವಾರ ರಾತ್ರಿ ಎಂಟು ವರೆಗೆ ರಾಜಮುರಳಿ ಚಿತ್ರಮಂದಿರಕ್ಕೆ ದಾಪುಗಾಲು ಹಾಕಿ ಹೊರಟೆವು. ಒಳ್ಳೆ ರಿವ್ಯು ಬಂದಿದ್ದರಿಂದ ಜನ ಜಾತ್ರೆ ಇರಬಹುದೇನೋ, ಟಿಕೇಟು ಸಿಗುತ್ತದೋ ಇಲ್ಲವೋ ಅಂದುಕೊಂಡು ಹೋದವರಿಗೆ ನಿರೀಕ್ಷಿತ ಪ್ರಮಾಣದಲ್ಲಿ ಜನ ಇಲ್ಲಾದ್ದು ಕಂಡು ಟಿಕೇಟು ಸಿಕ್ಕ ಖುಷಿಯ ಜೊತೆಗೆ ಸಿನಿಮಾ ಚೆನ್ನಾಗಿರಲಿಕ್ಕಿಲ್ಲವೇ ಎಂಬ ಸಂಶಯವೂ ಸುಳಿಯಿತು. ಆದರೂ ಕೊಟ್ಟ ದುಡ್ಡಿಗೆ ಸೂರಿ ಮೋಸ ಮಾಡಲಾರರೂ ಎಂಬ ಅಚಲ ನಂಬಿಕೆಯೊಂದಿಗೆ "ರಾಜಮುರಳಿ"ಯ ರಾಜ ಸಿಂಹಾಸನಗಳಲ್ಲಿ ಆಸೀನರಾದೆವು! ಸಧ್ಯ ಚಿತ್ರ ಶುರುವಾಗುವ ಹೊತ್ತಿಗೆ ಚಿತ್ರಮಂದಿರ ತುಂಬಿ ತುಳುಕಾಡುತ್ತಿತ್ತು.
 
ಚಿತ್ರದ ಟೈಟಲ್ ತೋರಿಸುವುದರೊಂದಿಗೇನೆ ಸೂರಿ ತಾನೊಬ್ಬ ಕಲಾವಿದ ಎಂಬುದನ್ನು ತೋರಿಸುವುದಕ್ಕೆ ಶುರುಮಾಡುತ್ತಾರೆ. ಮಳೆಯ ಹನಿಗಳು ಕಾರಿನ ಗ್ಲಾಸಿನ ಮೇಲೆ ಬೀಳುತ್ತಿರುವಂತೆಯೆ ವೈಪರ್ ಅದನ್ನು ಸ್ಲೋ ಮೋಷನ್ನಿನಲ್ಲಿ ಒರೆಸುತ್ತಿರುವಾಗ ಮೂಡುವದೊಂದು ಅದ್ಬುತ ಕಲಾಕೃತಿ! ಹೀಗೆ ಇಂಟರೆಸ್ಟಿಂಗಾಗಿ ಶುರುವಾಗುವ ಸಿನೆಮಾ, ಅನಂತನಾಗ್ ಒಬ್ಬ ಎಸ್ ಐ ಗೆ ಅನಂದ ಅಲಿಯಾಸ್ ಕಡ್ಡಿಪುಡಿ ಯ ವೃತ್ತಾಂತ ಹೇಳುತ್ತಾ ಸಾಗುವಾಗ ಯಾಕೊ ಮಾಮೂಲಿ ನಿರುಪಣಾ ಶೈಲಿ ಅನ್ನಿಸುವುದಕ್ಕೆ ಶುರುವಾಗುತ್ತದೆ. ಹಾಗಂತ ಬೋರು ಹೊಡೆಯುವುದಿಲ್ಲ. ಎರಡನೇ ಅರ್ಧದಲ್ಲಿ ಸಿನಿಮಾ ಅದ್ಭುತವಾಗಿ ಪಿಕ್ ಅಪ್ ಪಡೆದುಕೊಳ್ಲುತ್ತೆ. ಶಿವಣ್ಣ ಅವರ ಮಾಗಿದ ಅಭಿನಯ, ರಾಧಿಕಾ ಪಂಡಿತ ರ ಸಹಜ ಅಭಿನಯ ಮನ ಸೂರೆಗೊಳ್ಳುತ್ತದೆ. ರಾಧಿಕಾ ತುಂಬಾ ಪ್ರತಿಭಾವಂತೆ. ಅವರು ಇರುವ ಪ್ರತಿಯೊಂದು ದೃಶ್ಯಗಳೂ ನೆನಪಿನಲ್ಲುಳಿಯುವಂಥವೆ. ಅಣ್ಣಾಬಾಂಡನಂತೆ ಇಲ್ಲಿ ಹೀರೊನನ್ನು ವೈಭವಿಕರಿಸಿಲ್ಲ. ಇಲ್ಲಿ ಚಿತ್ರದ ಹೀರೋ ಖಂಡಿತವಾಗಿಯೂ ಸೂರಿ ಅವರೇ. ನಿರ್ದೇಶಕ ಹೀರೋ ಆದಾಗಲೇ ಅಲ್ಲವೇ ಚಿತ್ರ ಗೆಲ್ಲೋದು?! ಸ್ವಲ್ಪ ಮಟ್ಟಿಗೆ ಆರ್ ಗೀ ವೀ ಯ "ರಕ್ತ ಚರಿತ್ರ" ದಿಂದ ಪ್ರಭಾವಿತರಾಗಿದ್ದಾರೆಂದು ನನ್ನ ಅನಿಸಿಕೆ. ಕತೆಯಲ್ಲಿ ಏನೂ ಹೊಸತನವಿಲ್ಲದಿದ್ದರೂ ಸೂರಿಯವರ ಹೊಸತನ ಮೋಡಿ ಮಾಡುತ್ತದೆ. ಚಿತ್ರ ವಿಚಿತ್ರ ಮುಖಭಾವ, ಆಕೃತಿಗಳ ಆ ಪಾತ್ರಧಾರಿಗಳನ್ನು ಹುಡುಕುವುದರಲ್ಲಿ ರಾಮಗೋಪಾಲ್ ವರ್ಮಾರ ನಂತರ ಸೂರಿಯವರದೇ ಎತ್ತಿದ ಕೈ ಅಂತ ನನ್ನ ಅಭಿಪ್ರಾಯ. 
 
ಅದ್ಯಾಕೋ ಐಂದ್ರಿತಾಳ "ಬೆಂಗಾವಲು" ಅನಾವಶ್ಯಕ ಅನಿಸುತ್ತದೆ! "ಕಡ್ಡಿಪುಡಿ" ಅನಂದನ ಮೊದಲನೇ ರಾತ್ರಿಯ ಸಂದರ್ಭದಲ್ಲಿ ಕೆಲವೇ ಪೋಲಿ ಸಂಭಾಷಣೆಗಳು, ಸನ್ನಿವೇಶಕ್ಕೆ ಅನುಗುಣವಾಗಿ, ಊಟದ ಜೊತೆಗೆ ಉಪ್ಪಿನ ಕಾಯಿ ತರ ಇದ್ದು, ವಲ್ಗರ್ ಅನ್ನಿಸುವುದಿಲ್ಲ. ನನಗಿಷ್ಟವಾದ ಸನ್ನಿವೇಶವೊಂದರಲ್ಲಿ ರಾಧಿಕಾ ಗಂಡನೊಂದಿಗೆ ಜಗಳ ಮಾಡಿಕೊಂಡು, ಲಾಂಗು ಹಿಡಿದುಕೊಂಡು ಶಿವಣ್ಣನನ್ನು ಮನೆಯ ಮುಂದೆ ಬೆನ್ನಟ್ಟಿರುತ್ತಾಳೆ, ಕೊನೆಗೆ ಲಾಂಗನ್ನು ಅವನತ್ತ ಎಸೆದು ಹುಸಿ ಮುನಿಸಿನೊಂದಿಗೆ ಹಿಂದಿರುಗುತ್ತಾಳೆ. ರೌಡಿಸಂ ಬಿಟ್ಟು ಬದುಕು ನಡೆಸುತ್ತಿರುವ ಕಡ್ಡಿಪುಡಿ, ಕೆಳಗೆ ಬಿದ್ದಿರುವ ಲಾಂಗ್ ಎತ್ತಿ ನಿಲ್ಲುವುದಕ್ಕೂ, ಅವನನ್ನು ಕೊಲ್ಲಲು ಬಂದ ಹಳೆಯ ವೈರಿಗಳು ಅವನ ಮುಂದೆ ಬಂದು ನಿಲ್ಲುವುದಕ್ಕೂ ಸರಿ ಹೋಗುತ್ತದೆ. ಹೊಡೆಯಲು ಕೈ ಎತ್ತಿದವರು ಅವನ ಕೈಯಲ್ಲಿ ಲಾಂಗು ನೋಡಿ ಭಯದಿಂದ ವಾಪಸ್ಸು ಹೋಗುತ್ತಾರೆ. ಕಡ್ಡಿ ಆ ಲಾಂಗನ್ನು ಅಂಗಿಯಲ್ಲಿ ಸೇರಿಸಿಕೊಳ್ಳುತ್ತಾನೆ! ಅದೊಂದು ಕೆಲವೇ ಕ್ಷಣಗಳಲ್ಲಿ ನಡೆಯುವ ಅನಿರೀಕ್ಷಿತ ಘಟನೆಗಳ, ಮಂತ್ರಮುಗ್ಧಗೊಳಿಸುವ ಒಂದು ದೃಶ್ಯ. ಈ ತರಹದ ಚಿತ್ರಣ ಸೂರಿಯಿಂದ ಮಾತ್ರ ಸಾಧ್ಯ. ಇದೆಲ್ಲದರ ಜೊತೆಗೆ ಚಿತ್ರದ ಮತ್ತೊಬ್ಬ ಹೀರೊ ಅಂದರೆ "ಲಾಂಗು" ಅನ್ನುವ ಆ ವಿಚಿತ್ರ ಆಯುಧ! ಎಷ್ಟೋ ವರುಷಗಳಿಂದ ಇನ್ನೂ ಚಾಲ್ತಿಯಲ್ಲಿದೆಯೆ ಅಂತ ಆಶ್ಚರ್ಯವಾಗುತ್ತೆ. ಲಾಂಗಿಗೋಂದು "ಲಾಂಗ್" ಹಿಸ್ಟರಿ ಇರುವುದಂತೂ ಸತ್ಯ ಹಾಗೂ "ಲಾಂಗ್" ಫ಼್ಯುಚರೂ ಇದೆ ಅನಿಸುತ್ತೆ! ಒಟ್ಟಿನಲ್ಲಿ ಈ ಚಿತ್ರ ಸೂರಿ ಯವರು ತುಂಬಾ ಸೂಕ್ಷ್ಮವಾಗಿ ನೇಯ್ದ ನೇಯ್ಗೆ. ಒಂದೊಂದು ಪಾತ್ರಗಳು ಆವರಿಸಿಕೊಳ್ಲುತ್ತವೆ. ನೋಡಿ ಬನ್ನಿ, ಮಿಸ್ಸ್ ಮಾಡ್ಕೊಳ್ಲೇ ಬೇಡಿ!  

Sunday, March 31, 2013

ಸಿಂಪಲ್ಲಾಗ್ ಒಂದು ಮುಂಜಾನೆ!

ಇಂದು ಬೆಳಿಗ್ಗೆ ಕೃಷ್ಣಮೂರ್ತಿ ಫೋನು ಮಾಡಿದಾಗ ಸರಿಯಾಗಿ ೪.೨೫. ಅವರ ಕರೆಯನ್ನೇ ನಿರೀಕ್ಷಿಸುತ್ತಿದ್ದೆನೇನೊ ಎಂಬಂತೆ, ಧಡಕ್ಕನೆ ಎಚ್ಚೆತ್ತು ಕರೆಯನ್ನು ಸ್ವೀಕರಿಸಿದೆ. "ಹೂಂ... ಬರ್ತೀರೇನ್ರೀ?" ಅಂದ್ರು. ಎಲ್ಲಿಗೆ ಅಂತ ನನಗೂ ಗೊತ್ತು, ಅವರಿಗೂ ಗೊತ್ತು.  "ಆಯ್ತು... ಐದು ಮೂವತ್ತಕ್ಕೆ ನಿಮ್ಮ ಮನೆ ಮುಂದೆ ಹಾಜರಾಗುವೆ " ಅಂದೆ. ನಾನು ಬರಲಾರೆನೇನೊ ಎಂದುಕೊಂಡಿದ್ದ ಅವರಿಗೆ ಘನಘೋರ ಅಶ್ಚರ್ಯವಾಗಿದ್ದಂತೂ, ಅವರು "ವಾರೆಹ್ ವಾಹ್!" ಅಂದಾಗ ಸ್ಪಷ್ಟವಾಯ್ತು. ಯಾಕೆಂದರೆ ಹಿಂದೆ ಎರಡು ಮೂರು ಸಲ ನಾನು ಕೈ ಕೊಟ್ಟಿದ್ದೆ. ಆದರೆ ಇವತ್ತು ಗಟ್ಟಿ ನಿರ್ಧಾರ ಮಾಡಿದ್ದೆ. ಅಂದ ಹಾಗೆ ನಾವು ಹೊರಟಿದ್ದು ಸಿಂಪಲಾಗ್ ಒಂದು ವಾಕಿಂಗ ಮಾಡೋಕೆ. ಈಗಾಗಲೇ ಎರಡು ವರ್ಷಗಳಿಂದ ದಿನಾಲೂ ತಪ್ಪದೇ ಹೋಗುತ್ತಿರುವ ಗುಂಪಿನ ಜೊತೆಗೆ ನಾನೂ ಇವತ್ತು ಸೇರಿಕೊಳ್ಳುತ್ತಿದ್ದೆ.
 
ಮೂರ್ತಿಯವರ ಮನೆ ನನ್ನ ಮನೆಯಿಂದ ಕೂಗಳತೆಯಲ್ಲಿದೆ ಅಂತ ಹೇಳಬಹುದು. ಈಗ ಬಿಡಿ ಮೊಬೈಲ್ ಬಂದ ಮೇಲೆ ಎಲ್ಲರೂ ಕೂಗಳತೆ ಯಲ್ಲಿಯೇ ಇದ್ದಂತೆ! ಆದರೆ ಇವರ ಮನೆ ನಿಜವಾಗಿಯೂ ಕೂಗಳತೆಯೆ. ನಾನವರ ಮನೆ ತಲುಪಿದಾಗ ಸರಿಯಾಗಿ ೫.೩೦. ನಾನು ನಿಜವಾಗಿಯೂ ಬಂದದ್ದು ನೋಡಿ ಮೂರ್ತಿಗಳು ಸ್ವಲ್ಪ ಹೊತ್ತು ಮಾತೆ ಮರಿತಂತಿತ್ತು! ಅವರು, ಬಂದಿದ್ದು ನಾನೇ ಎಂದು ಖಚಿತ ಪಡಿಸಿಕೊಂಡು, ಪರಸ್ಪರ ನಮಸ್ಕಾರಗಳ ವಿನಿಮಯವಾಗುತ್ತಿರುವಾಗಲೇ, ಶ್ರೀಧರ್ ಅವರು ಬಂದರು. "ನಿಮ್ಮನ್ನು ಆರು ತಿಂಗಳಿನಿಂದ ಕಾಯ್ತಾ ಇದ್ದೀವಿ ಗುರುದತ್ ಅಂದರು"! ಗುರುಪ್ರಸಾದ, ಅವರಿಗೆ ಗುರುದತ್ ಥರ ಕಂಡಿರಬಹುದು, ಪರವಾಗಿಲ್ಲ ಇನ್ನೊಮ್ಮೆ ಗುರುದತ್ ಅಂತ ಕರೆದರೆ ಹೇಳಿದ್ರಾಯ್ತು ಅಂತ "ನನಗೂ ಬರ್ಬೇಕು ಅಂತ ತುಂಬಾ ಇತ್ತು, ಆದರೆ ಹಲವಾರು ಕಾರಣಗಳಿಂದ ಆಗಿರಲಿಲ್ಲ ಬಿಡಿ ಶ್ರಿಧರ್" ಅಂತ ನನ್ನ ಕಷ್ಟ ತೋಡಿಕೊಂಡೆ. ಮತ್ತೇನು? ಬೆಳಿಗ್ಗೆ ಏಳೋದು ಕಷ್ಟ ಮಾರಾಯ್ರೆ ಅಂತ ಸತ್ಯ ಹೇಳೊ ಅಷ್ಟು ಸತ್ಯ ಸಂಧನೇ ನಾನು? ಹೀಗೇ ಮುಂದುವರಿದಾಗ ಕುಮಾರಣ್ಣ ನಮ್ಮನ್ನು ಸೇರಿಕೊಂಡರು. ಮುಂದೆ ರೆಡ್ಡಿಯವರು. ಶುರುವಾಯ್ತು ನಮ್ಮ ಸಿಂಪಲ್ಲಾಗ್ ಒಂದು ವಾಕಿಂಗು...
   
ನಮ್ಮ ಮನೆಯ ಸ್ವಲ್ಪ ಹಿಂದೆ ಹೋದರೆ ಜೀಕೆವೀಕೆ ಕಂಪೌಂಡು. ಅಲ್ಲಿನ ಸಸ್ಯಕಾಶಿ ನೋಡಿ ಖುಷಿಯಾಯ್ತು. ಬೆಂಗಳೂರಿನಲ್ಲಿ ಇಂತಹ ಜಾಗ ಅಪರೂಪವಲ್ಲವೆ? ಇಷ್ಟು ವರ್ಷಗಳಿಂದ ಇಲ್ಲಿಯೇ ವಾಸಿಸುತ್ತಿದ್ದರೂ, ದಾರಿಗುಂಟ ಇಷ್ಟು ಗಿಡಗಳಿರುವುದೇ ನನಗೆ ಕಂಡಿರಲಿಲ್ಲವಲ್ಲಾ ಅಂತ ಆಷ್ಚರ್ಯ ಚಕಿತನಾದೆ. ಹಕ್ಕಿಗಳ ಚಿಲಿ ಪಿಲಿ ರಂಗನತಿಟ್ಟಿನಲ್ಲಿ ಮಾತ್ರ ಕೇಳಬಹುದು ಅಂದ್ಕೊಂಡಿದ್ದವನಿಗೆ ಇಲ್ಲಿಯೂ ಕಡಿಮೆಯಿಲ್ಲ ಅನಿಸಿತು. ಶ್ರೀಧರ್ ಅಂತೂ ಅವ್ಯಾಹತವಾಗಿ ಮಾತನಾಡುತ್ತಿದ್ದರು. ತುಂಬಾ ವಿಚಾರ ಭರಿತ ಚಿಂತನೆಗಳು! ಅವುಗಳ ಬಗ್ಗೆ ಇನ್ನೊಮ್ಮೆ ಅವರ ಅನುಮತಿ ತೆಗೆದುಕೊಂಡು ಬರೆಯುವೆ. ಶ್ರೀಧರ ಅವರ ವಿಚಾರ ಧಾರೆಗೆ ಮೂರ್ತಿಯವರ ಆಕ್ಷೇಪಗಳು, ಅದಕ್ಕೆ ಶ್ರೀಧರ ಅವರು ಒಪ್ಪದೇ ನೀಡುವ ಸಮಝಾಯಿಶಿಗಳು, ಕೇಳಲು ಒಂಥರ ಚೆನ್ನಾಗಿತ್ತು. ನಮ್ಮ ಮಾತು ಕತೆಗಳಲ್ಲಿ ರಾಜಕೀಯದವರು, ಸೆಲೆಬ್ರಿಟಿಗಳು ಎಲ್ಲರೂ ಬಂದು ಹೋದರು. ಹಾಗೇ ನಡೆಯುತ್ತಾ ಖುಷಿಯಾಗುತ್ತಿತ್ತು. ಏನೋ ಸಾಧನೆ ಮಾಡುತ್ತಿದ್ದಂತೆ ಭಾಸವಾಗುತ್ತಿತ್ತು. ಇನ್ನೂ ಮಲಗಿ ನಿದ್ದೆ ಮಾಡುತ್ತಿರುವವರ ಬಗ್ಗೆ ಕನಿಕರ ಮೂಡುತ್ತಿತ್ತು. ಛೇ ಎಷ್ಟೊಂದು ಮೈಗಳ್ಳರಲ್ಲವೇ ಈ ಜಗತ್ತಿನಲ್ಲಿ ? ಅನಿಸತೊಡಗಿತ್ತು! ನಿನ್ನೆಯವರೆಗೂ ನಾನು ಹಿಂಗೆ ಮಲಗಿದ್ದೆನೆಂಬುದು ಮರೆತಿತ್ತು! ಆದರೆ ಈ ಖುಷಿ ತುಂಬಾ ಹೊತ್ತು ಇರಲಿಲ್ಲ! ಮೊದಲನೇ ದಿನವಲ್ಲವೇ, ನನ್ನ ಕಾಲುಗಳು ಮಾತನಾಡಲು ತೊಡಗಿದವು. ಅದನ್ನು ತೋರ್ಪಡಿಸುವುದಕ್ಕಾಗುತ್ತೆಯೆ? ಅಂತೂ ಒಂದು ಕಡೆ ರೋಡು ಹೊರಳಿದ್ದು ಕಂಡು ವಾಪಸ್ಸು ಹೋಗುತ್ತಿರುವಂತೆ ಖಾತ್ರಿ ಮಾಡಿಕೊಂಡು ಮನಸ್ಸಿಗೆ ಸ್ವಲ್ಪ ಸಮಾಧಾನವಾಯ್ತು. ಆದರೆ ನಮ್ಮ "ಶ್ರೀ" ಗಳು, "ಗುರುದತ್ ನಿಮಗೊಂದು ಎಕ್ಸೈಟ್ಮೆಂಟು ತೋರಿಸ್ತೀನಿ ಇರಿ" ಅಂದಾಗ ನಾನು ಗಾಬರಿಯಾದೆ. ಒಂದು ಚಿಕ್ಕ ಬೆಟ್ಟವನ್ನು ವಿರುದ್ಧ ದಿಕ್ಕಿನಲ್ಲಿ ಏರತೊಡಗಿದರು. ಅವರು ಏರಿದರೆ ಪರವಾಗಿಲ್ಲ ಬಿಡಿ, ನನಗೂ ಹಾಗೇ ನಡೀರಿ ಅಂತ ಒತ್ತಾಯಿಸತೊಡಗಿದರು. ಬೇರೆ ದಾರಿಯಿಲ್ಲದೆ ಒಪ್ಪಿಕೊಂಡೆ. ಸುಪರ್ ಎಕ್ಸೈಟ್ಮೇಂಟು ಬಿಡಿ ಅಂತ ರೀಲು ಬಿಟ್ಟೆ. ಮೂರ್ತಿ ನಗುತ್ತಿದ್ದರು! ನನ್ನಲ್ಲಿದ್ದ ಎನರ್ಜೀ ಮುಗಿಯತೊಡಗಿತ್ತು. ಸ್ವಲ್ಪ ಕುಳಿತುಕೊಳ್ಳೋಣವೇ ಎಂದು ಕೇಳಿದರೆ ಮರ್ಯಾದೆ ಹೋಗಬಹುದೆಂದು, "ಇಲ್ಲಿ ಹತ್ತಿರದಲ್ಲಿ ಕ್ಯಾಂಟೀನ್ ಇಲ್ಲವೇ" ಅಂದೆ. "ಇಲ್ಲೇ ಇದೆ ಗುರುದತ್, ಕಾಫಿ ಕುಡಿಯೋಣ ಇರಿ" ಅಂದಾಗ ಹೋದ ಜೀವ ಬಂದಂತಾಯ್ತು. ಅಲ್ಲಿ ಉಸ್ಸಪ್ಪಾ ಅಂತ ಕುಳಿದು ಕಾಫಿ ಹೀರಿದಾಗ ಸ್ವಲ್ಪ ನೆಮ್ಮದಿಯಾಯ್ತು. ಅಲ್ಲಿ ಕಲ್ಲಿನ ಬೆಂಚಿನ ಮೇಲೆ ಕುಳಿತು ಮತ್ತೊಂದಿಷ್ಟು ಹರಟೆ ಹೊಡೆದದ್ದಾಯ್ತು. ಅದೇ ಕ್ಯಾಂಟೀನಿನಲ್ಲಿ ಇಡ್ಲಿ ಪಾರ್ಸಲ್ ತೊಗೊಂಡೆ. ಹೇಂಡತಿಗೆ ವಾಕಿಂಗ್ ಹೋಗಿದ್ದಕ್ಕೆ ಪ್ರೂಫ್ ಕೊಡಬೇಕಲ್ಲವೆ? ಸ್ವಲ್ಪ ಹೊತ್ತಿಗೆ, ವಾಪಸ್ಸು ಹೊರಟು ಬಂದೆವು. ಶ್ರೀಧರ್ ಅವರು ನಿಮ್ಮ ನಂಬರ್ ಕೊಡಿ ಅಂದರು . ಅವರಿಗೆ ನಂಬರು ಹೇಳಿ, ಅವರು ಗುರುದತ್ ಅಂತ ಸ್ಟೊರ್ ಮಾಡಿಕೊಳ್ಳುವುದರ ಮೊದಲೆ "ಗುರುಪ್ರಸಾದ" ಅಂತ ಹೇಳಿದೆ. "ಧತ್! ನಿಮ್ಮ ಹೆಸರು ಗುರುದತ್ ಅಂದ್ಕೊಂಡು ಬಿಟ್ಟಿದ್ದೆ!" ಅಂದರು. ಪರವಾಗಿಲ್ಲ ಬಿಡಿ ಸರ್ ಅಂದೆ. ಮೂರ್ತಿಗಳಿಗೆ ಬೈ ಹೇಳಿ, ಮನೆಗೆ ಬಂದು ಇಡ್ಲಿ ತಿಂದು ಮಲಗಿದವನು ಊಟದ ಟೈಮಿಗೇ ಎದ್ದಿದ್ದು!!
 
... ಆದರೆ ಮುಂಜಾನೆಯ ಆ ಸೊಬಗು, ಸುಂದರ ವಾತವರಣ, ಹಕ್ಕಿಗಳ ಚಿಲಿ ಪಿಲಿ ಇದನ್ನೆಲ್ಲ ಅನುಭವಿಸಿ ಆರೋಗ್ಯದಿಂದಿರಬೇಕೆಂದರೆ ವಾಕಿಂಗ ಮಾಡಲೇ ಬೇಕು ಅಲ್ಲವೆ? ನಿಯಮಿತವಾಗಿ ಹೋಗೋಣ ಅಂದೊಕೊಂಡಿದ್ದೀನಿ, ನೋಡೋಣ!