Tuesday, September 2, 2014

ಬಂಧು ಮಿತ್ರರು!

http://surahonne.com/?p=4108

ಫೇಸ್ ಬುಕ್ ಜನಪ್ರೀಯವಾಗುದಕ್ಕಿಂತ ಮೊದಲು ಆರ್ಕುಟ್ ಅನ್ನುವ  ಒಂದು ಸಾಮಾಜಿಕ ಜಾಲ  ತಾಣವಿದ್ದದ್ದು  ಬಹುತೇಕ ಎಲ್ಲರಿಗೂ  ಗೊತ್ತಿರಲೇಬೇಕು.  ಅದರಲ್ಲಿ ಫೇಸ್ ಬುಕ್ಕಿನಲ್ಲಿರದ ಆಯ್ಕೆ ಒಂದಿತ್ತು. ಅದೇನಪಾ ಅಂದ್ರೆ ನಾವು ನಮ್ಮ ಗೆಳೆಯರ ಬಗ್ಗೆ ಹಾಗೂ ಗೆಳೆಯರು ನಮ್ಮ ಬಗ್ಗೆ ಪ್ರಶಂಸೆ (Testimonial) ಬರೆದುಕೊಳ್ಳುವ ಅವಕಾಶ. ಹೆಚ್ಚಾಗಿ ಎಲ್ಲರೂ ಬೇರೆಯವರ ಬಗ್ಗೆ ಒಳ್ಳೆಯದೇ ಬರೆಯುತ್ತಿದ್ದರೆನ್ನಿ. ಪ್ರಶಂಸೆ ಅಂದರೆ ಒಳ್ಳೆಯದೇ ಅಲ್ಲವೇ? ಅದೂ ಅಲ್ಲದೆ, ಕೆಟ್ಟದ್ದು ಬರೆದರೆ ಕೇಳುವವರ್ಯಾರು? ಹಾಗೆ ಬರೆದದ್ದೆ ಆದರೆ ಅದನ್ನು ನಿರಾಕರಿಸುವ ಅಧಿಕಾರ ಬರೆಸಿಕೊಂಡವರಿಗಿರುತ್ತಿತ್ತು! ಆದರೆ  ಫೇಸ್ ಬುಕ್ಕಿನ ಅಬ್ಬರದಲ್ಲಿ ಆರ್ಕುಟ್ ಬದುಕುಳಿಯಲಿಲ್ಲ. ಸಧ್ಯದಲ್ಲೇ ಅದನ್ನು ಮುಚ್ಚುತ್ತಿದ್ದಾರೆ. ಅದೇ ಕಾರಣಕ್ಕೆ ಮೊನ್ನೆ ಅದರೊಳಗೆ ಹೊಕ್ಕು ಹಳೆಯ ಪೋಸ್ಟ್ ಗಳನ್ನು  ನೋಡುತ್ತಿದ್ದಾಗ ನನ್ನ ಬಗ್ಗೆ ಬರೆದ ಎರಡು ಪ್ರಶಂಸಾಬರಹಗಳು ಕುತೂಹಲ ಕೆರಳಿಸಿದವು! ಅದರಲ್ಲಿ ಒಂದು ನನ್ನ ತಮ್ಮ ಗಿರೀಶ ಬರೆದಿದ್ದು. ಅವನು ನನ್ನ ಬಗ್ಗೆ ಅಕ್ಕರೆಯಿಂದ ಬರೆದು ಕೊನೆಗೆ 'ಇವ ನನ್ನ ಅಣ್ಣನಿಗಿಂತ ಹೆಚ್ಚಾಗಿ ನನ್ನ ಮಿತ್ರನ ಹಾಗೆ' ಅಂತ ಬರೆದಿದ್ದ. ಇನ್ನೊಂದು, ನನ್ನ ಕಿರಿಯ ಮಿತ್ರನಾದ ಪವನ ಶಹಪುರ ಬರೆದದ್ದು. ಅವನೂ ಎಲ್ಲ ಬರೆದಾದಮೇಲೆ 'ಇವನು ನನ್ನ ಮಿತ್ರನಿಗಿಂತ ಮಿಗಿಲಾಗಿ ನನ್ನ ಅಣ್ಣನ ಹಾಗೆ' ಅಂತ ಬರೆದಿದ್ದ! ಅಂದರೆ ತಮ್ಮನಿಗೆ ನಾನು ಗೆಳೆಯನಾಗಿದ್ದೆ ಹಾಗೂ ಗೆಳೆಯನಿಗೆ  ಅಣ್ಣನಾಗಿದ್ದೆ!

ಮನುಷ್ಯನ ವರ್ತನೆಯೇ ವಿಚಿತ್ರ ಅಲ್ಲವೇ. ನಾವು ಬೇರೆಯವರಲ್ಲಿ ಅವರಿರುವುದಕ್ಕಿಂತ ಭಿನ್ನವಾದವರನ್ನು  ಕಾಣಲು ಬಯಸುತ್ತೇವೆ. ಎಷ್ಟೋ ಜನ  ಅಪ್ಪನನ್ನು ಗೆಳೆಯನಂತೆ ಕಾಣುತ್ತಾರೆ. ಅದಕ್ಕೆ ಕಾರಣಗಳು ಹಲವಿರಬಹುದು. ನಮ್ಮಲ್ಲೊಬ್ಬ ಹೇಳುತ್ತಿದ್ದ "ನನ್ನಪ್ಪ, ನಾನು ಭಾರಿ ಕ್ಲೋಸ್ ನೋಡಪಾ. ಒಂಥರಾ ಗೆಳ್ಯಾರ್ ಇದ್ದಂಗ. ಇಬ್ಬರೂ ಒಟ್ಟಿಗೆ ಕುಡೀತೀವಿ, ಸಿಗರೇಟ್ ಸೇದತೀವಿ"! ಅಂದರೆ? ಒಟ್ಟಿಗೆ ಕುಡಿದರಷ್ಟೇ ಗೆಳೆಯರೇ? ಅವನ ಅಪ್ಪನಿಗೂ ಕುಡಿಯಲು ಬೇರೆ ಯಾರೂ ಕಂಪನಿ ಇಲ್ಲದಿರಬಹುದು. ಅನಿವಾರ್ಯವಾಗಿ ಮಗನನ್ನು ಗೆಳೆಯನ ಸ್ಥಾನದಲ್ಲಿ ಕೂಡಿಸಿರಬಹುದು. ಈ ವಿಷಯದಲ್ಲಿ ಹಾಗಿರುವ ಸಾಧ್ಯತೆಗಳಿವೆಯಾದರೋ, ಎಷ್ಟೋ ಅಪ್ಪಂದಿರು ನಿಜವಾಗಿಯೂ ತಮ್ಮ ಮಕ್ಕಳೊಂದಿಗೆ ಸ್ನೇಹಿತರಂತೆ  ನಡೆದುಕೊಳ್ಳುತ್ತಾರೆ. ಅವರಿಬ್ಬರ ನಡುವೆ ಸಂಬಂಧ ಗಟ್ಟಿಯೂ ಇರುತ್ತದೆ. ಅದೇ ಒಬ್ಬ ಅಪ್ಪ, ಅಪ್ಪನಂತೆ ಅಬ್ಬರಿಸಿದರೆ ಮಕ್ಕಳ ವರ್ತನೆ ಬೇರೆಯದೇ ಆಗಿರುತ್ತದೆ. ಹಾಗಂತ ಅಪ್ಪ ಮಕ್ಕಳೊಟ್ಟಿಗೆ ಕುಡಿಯಬೇಕು ಅಂತ ನಾನು ಹೇಳುತ್ತಿಲ್ಲ!

ಇನ್ನೊಂದು ಸಂದರ್ಭದಲ್ಲಿ, ಒಬ್ಬ ತನ್ನ ಗೆಳೆಯನಿಗೆ ಯಾವುದೋ ವಿಷಯಕ್ಕೆ ಬುದ್ಧಿ ಹೇಳಿದರೆ  ಇನ್ನೊಬ್ಬ ಅವನ ಮೇಲೆ ಕೆಂಗಣ್ಣು ಬಿಟ್ಟು ಎಚ್ಚರಿಸುತ್ತಾನೆ 'ನನಗ ಏನ್ ಮಾಡಬೇಕು ಮಾಡಬಾರದು ಅಂತ ಗೊತ್ತದ, ನೀ ನನ್ನ ಅಪ್ಪನಂಗ ಬುದ್ಧಿ ಹೇಳಬ್ಯಾಡಾ ತಿಳಿತಾ!?' ಅಂದರೆ ಇಲ್ಲಿ ಗೆಳೆಯ ಬಂಧುವಾದಾಗ ರಗಳೆ ಶುರು! ಅದೇ ಒಂದು ವೇಳೆ  ಅಪ್ಪ ಗೆಳೆಯನಾದಾಗ ಆತ ಆತ್ಮೀಯ. ವಿಚಿತ್ರ ಅಲ್ಲವೇ?

ಇನ್ನು ಪತಿ ಪತ್ನಿಯರಲ್ಲಿ ನೋಡೋಣ. ಒಬ್ಬ ಗಂಡ ತನ್ನ ಹೆಂಡತಿಯನ್ನು ಗೆಳತಿಯಂತೆಯೂ, ಹೆಂಡತಿ ಗಂಡನನ್ನು ಗೆಳೆಯನಂತೆಯೂ ಕಂಡರೆ, ಅವರಿಬ್ಬರ ನಡುವೆ ಅನ್ಯೋನ್ಯತೆ ಇರುತ್ತದೆ,  ಸರಸವಿರುತ್ತದೆ ಇಲ್ಲವಾದರೆ ಸಂಸಾರ ನೀರಸವಾಗುತ್ತದೆ! ನಾವು ದಿನನಿತ್ಯ ನೋಡುವ ಎಷ್ಟೋ ಸಂಬಂಧಗಳು ಮುರಿದುಬಿದ್ದಿರುವುದಕ್ಕೆ ಹಲವಾರು ಕಾರಣಗಳಲ್ಲಿ ಇದೂ ಒಂದು ಇರಬಹುದು. ಒಳ್ಳೆಯ ಗೆಳೆಯರಾಗಿದ್ದು, ಪ್ರೇಮಿಸಿ ಮದುವೆಯಾದ ಕೆಲವೇ ದಿನಗಳಲ್ಲಿ ಅಥವಾ ವರ್ಷಗಳಲ್ಲಿ ಜಗಳವಾಡಿ ಒಬ್ಬರ ಮುಖ ಇನ್ನೊಬ್ಬರು ನೋಡದಂತಾಗಿ, ವಿಚ್ಛೇದನದ ಮಟ್ಟಿಗೆ ಹೋಗಬೇಕಾದರೆ, ಆಲ್ಲಿ ಮೊದಲಿದ್ದ ಗೆಳೆತನ ಸತ್ತು ಹೋಗಿರುವುದೂ ಒಂದು ಕಾರಣವಿರಬೇಕಲ್ಲವೆ? ಅವರ ಗೆಳೆತನ ಮುಂದಿನ ಘಟ್ಟಕ್ಕೆ ಹೋದಾಗ ಹೊಸದಾದ "ಗಂಡ ಹೆಂಡತಿ" ಅನ್ನುವ ಪಾತ್ರ ನಿರ್ವಹಿಸುವ ಭರದಲ್ಲಿ ಗೆಳೆತನ ಕಳೆದು ಹೋಗುತ್ತದೆಯೆ? ಅದೂ ಅಲ್ಲದೆ ಮದುವೆ ಆದ ಮೇಲೆ ಇಬ್ಬರ ಬಂಧುಗಳೂ ಇವರ ಮಿತ್ರರಾಗುವುದಿಲ್ಲ ಅಥವಾ ಅವರಿಗೆ ಇವರು ಮಿತ್ರರಾಗುವುದಿಲ್ಲ. ಹೀಗೆ ಭಿನ್ನಾಭಿಪ್ರಾಯಗಳು ಮೂಡಿ ಎಲ್ಲಾ ಬಂಧುಗಳು ಶತ್ರುಗಳಾಗಿ ಅದೂ ಇವರ ವಿರಸಕ್ಕೆ ಕಾರಣವಾಗಬಹುದು! ಗೆಳೆತನ ಗಟ್ಟಿ ಇರುವ ದಂಪತಿಗಳು ಇಂತಹ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಬಲ್ಲರು.       

ಇನ್ನೊಂದು ದಿಕ್ಕಿನಿಂದ ಯೋಚಿಸೋಣ. ನಾನು ಈ ಮೊದಲು ಹೇಳಿದಂತೆ ನನ್ನ ಗೆಳೆಯನೊಬ್ಬ ನನ್ನನ್ನು ಅಣ್ಣನ ತರಹ ಕಾಣುತ್ತಾನೆ. ಅದು ನನಗೆ ಸಂತಸದ ವಿಷಯವೇ. ನಾವಿಬ್ಬರೂ ಯಾವಾಗಲೋ ಒಂದು ಸಲ ಫೋನಿನಲ್ಲಿ ಖುಷಿಯಿಂದಲೇ ಮಾತಾಡುತ್ತೇವೆ. ಆತ ನನ್ನ ಗೆಳೆಯನಾಗಿದ್ದು, ನನ್ನಲ್ಲಿ ಬಂಧುವನ್ನು ಕಂಡರೂ ನಮ್ಮ ನಡುವೆ ಒಂದು ಪ್ರೀತಿಯಿದೆ. ಅದೇ ಮುಂದುವರಿದು 'ನೀನು ನನ್ನ ಅಣ್ಣನ ಸಮಾನ, ಅದಕ್ಕೆ ನಿನ್ನ ಮನೆಯಲ್ಲೇ ನಿನ್ನೊಟ್ಟಿಗೆ ಇರುತ್ತೇನೆ' ಅಂತ ಅವನು ನನ್ನ ಜೊತೆ ಇರಲು ತೊಡಗಿದರೆ? ಅಥವಾ ಒಂದು ವೇಳೆ ಅವನು ನನ್ನ ಮನೆಯ ಪಕ್ಕದಲ್ಲೇ ಮನೆ ಮಾಡಿಕೊಂಡ ಅಂದುಕೊಳ್ಳೋಣ. ಆಗಲೂ ನಾವು ಪ್ರೀತಿಯಿಂದ ಇರಬಹುದೇ? ಇಬ್ಬರು ವ್ಯಕ್ತಿಗಳು ದೂರದಲ್ಲಿದ್ದಾಗ ಎಲ್ಲವೂ ಸರಿಯೇ ಇರುತ್ತದೆ. ಹತ್ತಿರವಾದಾಗ ಒಬ್ಬರನ್ನೊಬ್ಬರು ಸಹಿಸದಾಗುತ್ತಾರೆಯೇ? ಇರಬಹುದೇನೋ!

ಒಟ್ಟಿನಲ್ಲಿ ಒಬ್ಬ ಬಂಧು ಗೆಳೆಯನಂತಿದ್ದರೆ ಆ ಸಂಬಂಧ ಗಟ್ಟಿ ಇರುತ್ತದೆ. ಗೆಳೆಯ, ಗೆಳೆಯನಂತಿರದೆ ಬಂಧುವಿನಂತಾದರೆ  ತುಸು ಕಷ್ಟ! ಒಂದು ವೇಳೆ ಹಾಗಾದರೂ, ಇಬ್ಬರೂ ಸ್ವಲ್ಪ ದೂರದಲ್ಲಿದ್ದರೇ ಚೆನ್ನ! ಇದು ಸಾರ್ವತ್ರಿಕವಾಗಿ ಅನ್ವಯವಾಗುವುದಿಲ್ಲವಾದರೂ, ಎಷ್ಟೋ ಸಂದರ್ಭಗಳಲ್ಲಿ ಸರಿ ಎನಿಸುತ್ತದೆ. ಏನಂತೀರಿ?

-ಗುರುಪ್ರಸಾದ ಕುರ್ತಕೋಟಿ 

Wednesday, August 20, 2014

ಭ್ರಮೆ? (ಅತೀಂದ್ರಿಯ ಅನುಭವದ ಕಥೆಗಳು - ಭಾಗ ೪)

http://www.panjumagazine.com/?p=8293

(ಈ ಕಥೆ ನನ್ನ ಗೆಳೆಯ ವಿಟ್ಠಲ ಕುಲಕರ್ಣಿ ಗಾದ ಅನುಭವದ ಮೇಲೆ ಹೆಣೆದಿದ್ದು. ನಂಬುವಿರೋ ಇಲ್ವೊ ಗೊತ್ತಿಲ್ಲ... ಇದನ್ನು ಅವನ ಬಾಯಿಂದ ಕೇಳುತ್ತಿದ್ದಾಗ ಹಾಗೂ ಈ ಕಥೆಯನ್ನ ರಾತ್ರಿ ಬರೆಯುತ್ತಿರುವಾಗ ನನ್ನ ಮೈಯಲ್ಲಿ ಭಯದ ಕಂಪನಗಳೆದ್ದಿದ್ದಂತೂ ನಿಜ! ಅಂದ ಹಾಗೆ, ಕಥೆಯಲ್ಲಿ ಬಳಸಿರುವ  ಹೆಸರು ನಿಜವಾದ ವ್ಯಕ್ತಿಯದಲ್ಲ.)

---

ಸುಮಾರು ಹದಿನೈದು ವರ್ಷಗಳ ಹಿಂದೆ, ನಾನಿನ್ನೂ ಹುಬ್ಬಳ್ಳಿಯಲ್ಲೇ ಕೆಲಸ ಮಾಡುತ್ತಿದ್ದೆ. ಸ್ಟುಡಿಯೋ ಒಂದರಲ್ಲಿ ಗ್ರಾಫಿಕ್ ಡಿಸೈನರ್ ಕೆಲಸ. ಬೆಳಿಗ್ಗೆ ಒಂಭತ್ತರಿಂದ ಸಂಜೆ ಆರು . ಆದರೂ ಒಂದೊಂದು ಸಲ ಏಳು, ಕೆಲವು ಸಲ ಎಂಟು! ಹೀಗೆ ವೇಳೆ ಕೆಲಸದ ಮೇಲೆ ಅವಲಂಬಿತವಾಗಿತ್ತು. ಅದೂ ಅಲ್ಲದೆ ನಾನು ಆಗ ಬ್ರಹ್ಮಚಾರಿ ಮತ್ತು ಸ್ವತಃ ಕಲಾವಿದನಾದ್ದರಿಂದ ನಾ ಮಾಡುತ್ತಿದ್ದ  ಕೆಲಸ ನನಗೆ ಖುಷಿ ಕೊಡುತ್ತಿತ್ತು ಎಂಬ ಕಾರಣಕ್ಕೆ ಕೆಲವು ಸಲ ಹಾಗೆ ಕೆಲಸದಲ್ಲಿ  ತಲ್ಲೀನನಾಗಿ ಗಡಿಯಾರ ನೋಡುವುದೇ ಮರೆತುಬಿಡುತ್ತಿದ್ದೆ!

ಹುಬ್ಬಳ್ಳಿ, ನಾನು ಹುಟ್ಟಿ ಬೆಳೆದ ಊರು. ಉತ್ತರ ಕರ್ನಾಟಕದವರಿಗೆ ದೊಡ್ಡ ವಾಣಿಜ್ಯ ಕೇಂದ್ರವದು. ಆದರೂ ಅದಿನ್ನೂ ಬೆಂಗಳೂರಾಗಿಲ್ಲ! ಅಂದರೆ ಅಷ್ಟೊಂದು ಹಾಳಾಗಿಲ್ಲ! ಬೆಂಗಳೂರಿನಷ್ಟು ಸೌಕರ್ಯಗಳು ಅಲ್ಲಿಲ್ಲ, ಅಥವಾ ಬೆಂಗಳೂರಿಗೆ ಸಿಕ್ಕ ಗಮನ ನಮಗೆ ಸಿಕ್ಕಿಲ್ಲ ಅನ್ನುವ ಬೇಜಾರು ನಮ್ಮ ಕಡೆಯವರಿಗಿದ್ದರೂ, ಅಲ್ಲಿನ ಎಲ್ಲವೂ ನಮಗಿಷ್ಟ! ಅಲ್ಲಿನ ಸಣ್ಣ ಗಲ್ಲಿಗಳಿರಬಹುದು, ಎಲ್ಲಿ ಕಣ್ಣು ಹಾಕಿದರೂ ಕಾಣುವ ಬೀಡಿ ಅಂಗಡಿಗಳಿರಬಹುದು, ಕೆಲವೇ ಕೆಲವು ಪ್ರವಾಸಿ ತಾಣಗಳಲ್ಲೊಂದಾದ  ಉಣಕಲ್ ಕೆರೆ ಇರಬಹುದು, ಒಮ್ಮಿಂದೊಮ್ಮೆಲೆ ಕಣ್ಣೊಳಗೆ ಅಡರಿ ದಳ ದಳ ನೀರು ಸುರಿಸುವ ಧೂಳಿರಬಹುದು, ಧುತ್ತನೆ ದಾರಿಯಲ್ಲಿ ಎದುರಾಗುವ ದನ... ಇವೆಲ್ಲವೂ ನಮ್ಮ ಬದುಕಿನ ಒಂದು ಅವಿಭಾಜ್ಯ ಅಂಗ.     

ನಮ್ಮ ಮನೆ ಇದ್ದದ್ದು ಕೇಶವಾಪುರದಲ್ಲಿ. ನನ್ನ ಆಫಿಸಿನಿಂದ ನಡೆದುಕೊಂಡು ಹೋದರೆ ಅರ್ಧ ಗಂಟೆಯ ಹಾದಿ. ಆಗಿನ್ನೂ ಬೈಕಿನ ಹಾವಳಿ ಅಷ್ಟಿರಲಿಲ್ಲ. ಅದೂ ಅಲ್ಲದೇ  ಇನ್ನೂ ಆಗ ತಾನೇ ಕೆಲಸಕ್ಕೆ ಸೇರಿದ್ದರಿಂದ ಅದನ್ನು ಕೊಳ್ಳುವ ತಾಕತ್ತೂ ನನ್ನಲ್ಲಿರಲಿಲ್ಲ. ಹೀಗಾಗಿ ಆಫಿಸಿಗೆ ನಡೆದುಕೊಂಡೆ ಹೋಗಿ ಬರುತ್ತಿದ್ದೆ. ನಾನಾಗಲೇ ಹೇಳಿದಂತೆ ಹುಬ್ಬಳ್ಳಿ ಇನ್ನೂ ಬೆಂಗಳೂರಿನಂತಾಗಿಲ್ಲದ್ದರಿಂದ ಇನ್ನೂ ಜನರ ನಡುವೆ ಒಂದು ಸಂಪರ್ಕವಿತ್ತು, ಈಗಲೂ ಇದೆ. ನಮ್ಮ ಓಣಿಯಲ್ಲಿರುವ ಬಹುತೇಕ ಮಂದಿ ನನಗೆ ಗೊತ್ತು. ಅವರು ನನ್ನ ತಂದೆಯ ಗೆಳೆಯರೋ, ಇಲ್ಲ ನನ್ನಣ್ಣಂದಿರ ಗೆಳೆಯರೋ, ನನ್ನ ಗೆಳೆಯರೋ ಯಾರೇ ಇದ್ದರೂ ದಾರಿಯಲ್ಲಿ ಭೇಟಿಯಾದಾಗ ಒಂದು ನಮಸ್ಕಾರವೋ ಇಲ್ಲಾ "ಊಟಾತೇನಪಾ? ಅಪ್ಪ ಹೆಂಗಿದ್ದಾರ?" ಅನ್ನುವ ಬರೀ ಔಪಚಾರಿಕವಲ್ಲದ, ಕಾಳಜಿಪೂರ್ವಕ ಮಾತುಕತೆಗಳು ನಡೆಯುವುದು ಅಲ್ಲಿ ಮಾಮೂಲಿ.

ಹೀಗೆ ನಮ್ಮ ಮನೆಯಿಂದ ತುಸು ದೂರದಲ್ಲಿದ್ದವರು ಶಂಕ್ರಣ್ಣ. ಅವರು ಹೆಚ್ಚುಕಡಿಮೆ ನನ್ನ ತಂದೆಯ ವಾರಿಗೆಯವರೇ. ಅವರು  ಒಂದು ಸರಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರಾಗ ನಿವೃತ್ತಿಯ ಹೊಸ್ತಿಲಲ್ಲಿದ್ದರು. ಅವರದು ಒಂದು ಚಿಕ್ಕ ಸಂಸಾರ. ಹೆಂಡತಿ ಹಾಗೂ ಒಬ್ಬ ಮಗನೊಂದಿಗೆ  ವಾಸವಾಗಿದ್ದರು. ಅವರ ಮನೆಗೆ ನಾನು ಹೋಗುವದು ಅಪರೂಪವೇ. ಒಂದು ಸಲ ಏನೋ ಕೆಲಸವಿದೆ ಎಂದು ಕರೆದಿದ್ದರು. ತಾವು ಹೆಂಡತಿಯ ಜೊತೆಗಿದ್ದ ಹಳೆಯ ಫೋಟೋವೊಂದನ್ನು ಸ್ವಲ್ಪ ಪರಿಷ್ಕರಿಸಿ ದೊಡ್ಡದಾಗಿ ಮಾಡಿಸಬೇಕೆಂದು ಅವರ ತಲೆಯಲ್ಲಿ ಬಂದಿತ್ತು.  ನನ್ನಪ್ಪ ಆ ಕೆಲಸಕ್ಕೆ ನನ್ನ ಹೆಸರು ಸೋಚಿಸಿದ್ದರಂತೆ. ಅದನ್ನು ನನ್ನ ತಂದೆಯೇ ನನಗೆ ತಿಳಿಸಿ ಅವರ ಮನೆಗೆ ಹೋಗಲು ಹೇಳಿದ್ದರು.

ಅಲ್ಲೇ ಹತ್ತಿರದಲ್ಲೇ ಶಂಕ್ರಣ್ಣನವರ ಮನೆ ಇದ್ದ ಕಾರಣ, ಹೋದರಾಯ್ತು ಅನ್ನುತ್ತಲೇ ನಾಲ್ಕೈದು ದಿನಗಳು ಕಳೆದಿದ್ದವು. ಅವರೂ ಕೂಡ ಹಿಂದಿನ ದಿನವೇ ಮತ್ತೆ ಅಪ್ಪನ ಬಳಿ ಅದನ್ನು ನೆನಪಿಸಿದ್ದರಂತೆ. ಅದಕ್ಕೆ, ಸಂಜೆ ಹೋದರಾಯ್ತು ಅಂತ ಅವತ್ತು ನಿರ್ಧರಿಸಿದ್ದೆ.  ಆಫಿಸಿಗೆ ಹೋದವನು ಅದು ಇದು ಅಂತ ಕೆಲಸದಲ್ಲಿ ಮುಳುಗಿ ಸಂಜೆ ವಾಪಸ್ಸು ಬರುವಷ್ಟರಲ್ಲಿ ಎಂಟಾಗಿತ್ತು. ನಾನು ಮನೆಗೆ ಮರಳುತ್ತಿದ್ದೆ. ಶಂಕ್ರಣ್ಣನವರ ಮನೆಗೆ ಹೋಗಬೇಕೆಂದು ಮಾಡಿದ್ದ ನಿರ್ಧಾರ ನೆನಪಾಯಿತು. ಆದರೆ ಇಷ್ಟು ರಾತ್ರಿಯಾಗಿದೆ, ಹೋಗಲೋ ಬೇಡವೋ ಅನ್ನುವ ದ್ವಂದ್ವದಲ್ಲಿದ್ದೆ. ನಮ್ಮ ಮನೆಯ ಹತ್ತಿರದಲ್ಲೇ ಒಂದು ತಿರುವು ಇದೆ.  ಅಲ್ಲಿ ಜಾಸ್ತಿ ಜನರ ಓಡಾಟವಿರಲಿಲ್ಲ. ಬೀದಿ ದೀಪದ ಬೆಳಕಿತ್ತು. ಅಲ್ಲೇ ಸ್ವಲ್ಪ ದೂರದಲ್ಲಿ ಶಂಕ್ರಣ್ಣ ನಿಧಾನವಾಗಿ ನಡೆದುಬರುತ್ತಿರುವುದು ನನಗೆ  ಕಂಡಿತು. ಅವರ ಬಗಲಲ್ಲೊಂದು ಚೀಲವಿತ್ತು. ಹೆಚ್ಚು ಕಡಿಮೆ ಐವತ್ತೆಂಟು ವಯಸ್ಸಾಗಿದ್ದು, ಕೆಲವು ವಯೋಸಹಜ ಕಾಯಿಲೆಗಳಿಂದಾಗಿ ಅವರ ಕಾಲುಗಳಲ್ಲಿ ನೋವಿರುತ್ತಿತ್ತು. ಹೀಗಾಗಿ, ಸ್ವಲ್ಪ ನಿಧಾನವಾಗಿಯೇ ನಡೆದುಕೊಂಡು ಬರುತ್ತಿದ್ದರು. ಈ ರಾತ್ರಿ ಒಬ್ಬರೇ ಎಲ್ಲಿ ಹೋಗುತ್ತಿದ್ದಾರೆಂದು ನನಗೆ ಆಶ್ಚರ್ಯವಾಗಿತ್ತಾದರೂ, ಹಾಗೆ ದೊಡ್ಡವರನ್ನು ಕೇಳಲಾದೇತೆ? ನಾನು ನಮಸ್ಕರಿಸಿದೆ. ತಲೆ ಎತ್ತಿ ನೋಡಿದರು. ಗುರುತು ಹಿಡಿದು ಪರಿಚಯದ ನಗೆ ನಕ್ಕರು. ಅದೊಂದು ಶುಷ್ಕ ನಗೆ. ಸ್ವಲ್ಪ ಬಳಲಿದಂತೆ ಕಂಡರು.  

"ನಿಮ್ಮ ಮನಿಗೇ ಹೊಂಟಿದ್ದೆ ನೋಡ್ರಿ. ನೀವೇನೋ ಕೆಲಸಾ ಅದ ಅಂತ ಹೇಳಿದ್ರಂತ ನನ್ನ ಅಪ್ಪನ ಹತ್ರ." ಅವರು ಏನೋ ಗಹನವಾದ ಯೋಚನೆಯಲ್ಲಿದ್ದಂತೆ ಕಂಡರಾದರೂ, ನನ್ನ ಪ್ರಶ್ನೆಯನ್ನು ಆಗಲೇ ನಿರೇಕ್ಷಿಸಿದ್ದರೇನೊ ಎಂಬಂತೆ ಕೂಡಲೇ ಉತ್ತರಿಸಿದರು.
"ಹೌದು ಹೇಳಿದ್ದೆ, ಆದ್ರ ಈಗೇನ ಬ್ಯಾಡ ಬಿಡು. ನನಗ ಇಲ್ಲೇ ಸ್ವಲ್ಪ ಕೆಲಸಾ ಅದ ಹೊಂಟಿನಿ. ಆಮ್ಯಾಲ್ಯಾವಾಗರೆ ನೋಡೋಣಂತ." ಅಂದು, ಆ ಕಡೆ ಹೊರಟಿರುವೆನೆಂಬಂತೆ ಒಂದು ದಿಕ್ಕಿನೆಡೆಗೆ ಕೈ ಮಾಡಿ ತೋರಿಸಿದರು. ನನಗೂ ಕೆಲಸದ ದಣಿವು ಇತ್ತಾದ್ದರಿಂದ, ಅವರಿಗೆ ಬೀಳ್ಕೊಟ್ಟು ಮನೆಗೆ ಬಂದೆ. ಹಸಿವೆಯಾಗಿತ್ತಾದ್ದರಿಂದ ಕೈ ಕಾಲು ತೊಳೆದುಕೊಂಡು ಊಟಕ್ಕೆ ಕೂತೆ. ಅಮ್ಮ ಬಡಸುತ್ತಿದ್ದರು. ಜೊತೆಗೆ ಅಪ್ಪನೂ ಊಟಕ್ಕೆ ಕೂತರು. ಇದು ನನ್ನ ದಿನಚರಿಯಾಗಿತ್ತು. ಆ ದಿನ ನಡೆದ ಎಲ್ಲ ಸಮಾಚಾರಗಳನ್ನೂ ಊಟ ಮಾಡಿಕೊಂಡೆ ಅಪ್ಪ ಅಮ್ಮನೊಂದಿಗೆ ಹರಟುತ್ತಿದ್ದೆ. ಅದು ಇದು ಮಾತನಾಡುತ್ತ ಸ್ವಲ್ಪ ಹೊತ್ತಿನ ಹಿಂದೆ ದಾರಿಯಲ್ಲಿ ಶಂಕ್ರಣ್ಣನವರು ಸಿಕ್ಕ ಸುದ್ದಿ ಹೇಳಿದೆ. ಅಪ್ಪ ಆವಾಕ್ಕಾದಂತೆ ಕಂಡರು.
"ಏನ್ ಹುಚ್ಚ ಗಿಚ್ಚ ಹಿಡದದೇನ್ ನಿನಗ?" ಅಂದ್ರು
"ಯಾಕಪಾ?" ಅಂದೆ
"ಅವ್ರ ಹೆಂಗ ಸಿಗಲಿಕ್ಕೆ ಸಾಧ್ಯ? ಅವ್ರು ಇವತ್ತ ಮದ್ಯಾಹ್ನನ ತೀರಕೊಂಡ್ರು" ಅಂದರು!  ನನ್ನ ಗಂಟಲಲ್ಲಿ ತುತ್ತು ಸಿಕ್ಕಿ ಕೊಂಡಿತ್ತು! ನೀರು ಕುಡಿದು ಸುಧಾರಿಸಿಕೊಂಡೆ. ನನಗೆ ಅಪ್ಪನಿಗೆ ಹುಚ್ಚು ಹಿಡಿದಿರಬಹುದೆ ಅಂತ ಸಂಶಯವಾಯ್ತು. ಈಗ ತಾನೇ ನನ್ನನ್ನು ಮಾತಾಡಿಸಿದ್ದ ಮನುಷ್ಯನೊಬ್ಬ ಮದ್ಯಾಹ್ನವೇ ಸತ್ತುಹೋಗಿದ್ದನೆಂಬ ವಿಷಯ ನಂಬಲಸಾಧ್ಯವಾಗಿತ್ತು. ಆದರೆ ಅವರು ಸತ್ತಿದ್ದು ನಿಜವೆಂದು ನನ್ನಮ್ಮನೂ ಹೇಳಿದರು. ನಾನಂತೂ ಕಳೆದುಹೋಗಿದ್ದೆ!         

--
 
ಈ ಘಟನೆಯನ್ನು ಅರಗಿಸಿಕೊಳ್ಳಲು ವಿಟ್ಠಲನಿಗೆ ಆಮೇಲೆ ಎಷ್ಟೋ ದಿನಗಳು ಹಿಡಿದಿರಬೇಕು. ಈ ಅನುಭವ ಕೆಲವು ಪ್ರಶ್ನೆಗಳನ್ನಂತೂ ಹುಟ್ಟು ಹಾಕುತ್ತದೆ. ವಿಟ್ಠಲ ನೋಡಿದ್ದು ಯಾರನ್ನು? ಶಂಕ್ರಣ್ಣನವರ ಬಗ್ಗೆಯೇ ಯೋಚಿಸುತ್ತಾ ಹೋಗುತ್ತಿದ್ದನಾದ್ದರಿಂದ ಅದು ಅವನ ಭ್ರಮೆಯಾಗಿತ್ತೆ? ಅವರನ್ನು ಬರೀ ಕಂಡಿದ್ದರೆ ಹಾಗೇ  ಅಂದುಕೊಳ್ಳಬಹುದಿತ್ತು, ಕೆಲಸದ ಗುಂಗಿನಲ್ಲೋ ಅಥವಾ ಕತ್ತಲೆಯಿದ್ದುದರಿಂದೊ, ಅವರ ತರಹದ ಯಾವುದೋ ವ್ಯಕ್ತಿಯನ್ನು ನೋಡಿದ್ದನೇನೋ ಅಂದುಕೊಳ್ಲಬಹುದಿತ್ತು. ಆದರೆ ಅವರಿಬ್ಬರ ನಡುವೆ ನಿರ್ದಿಷ್ಟ ವಿಷಯದ ಬಗ್ಗೆ ಮಾತುಕತೆ ನಡೆದಿದೆ. ಅದೂ ಅಲ್ಲದೇ ವಿಟ್ಠಲನಿಗೆ ಶಂಕ್ರಣ್ಣ ಸತ್ತ ವಿಷಯವೇ ಗೊತ್ತಿರಲಿಲ್ಲ. ಹಾಗೆ ಮೊದಲೇ ಗೊತ್ತಿದ್ದಿದ್ದರೆ ಅದೊಂದು ರೀತಿಯ ಭ್ರಮೆ ಸೃಷ್ಠಿಯಾಗುವ ಸಾಧ್ಯತೆಗಳಿದ್ದವು. ಇನ್ನೂ ಒಂದು ವಿಷಯ ಇಲ್ಲಿ ಕುತೂಹಲ ಕೆರಳಿಸುತ್ತದೆ. ಅವರು ತಮಗೆ ಏನೋ ಕೆಲಸವಿದೆ ಅಂತ ಹೇಳಿ ಕೈ ತೋರಿಸಿದ ದಿಕ್ಕಿನಲ್ಲಿ ಸ್ಮಶಾನವಿದ್ದುದು ಅವರು ಸತ್ತ ವಿಷಯ ಕೇಳಿದ ಬಳಿಕ ಯೋಚಿಸುವಾಗ ವಿಟ್ಠಲನ ಗಮನಕ್ಕೆ ಬಂತಂತೆ! ಅದೂ ಅಲ್ಲದೆ ತಮ್ಮ ಫೋಟೊವನ್ನು ದೊಡ್ಡದಾಗಿ ಮಾಡಿಸುವ ವಿಚಾರ ಅವರಿಗೆ  ಬಂದಿದ್ದು, ತಮಗೆ ಮೃತ್ಯುಯೋಗ ಹತ್ತಿರದಲ್ಲೇ ಇದೇ ಅಂತ ಅವರಿಗೆ ಮೊದಲೇ ತಿಳಿದಿತ್ತೆನ್ನುವುದನ್ನು ಸೂಚಿಸುತ್ತದೆಯೇ? ಉತ್ತರ ಹೇಳುವವರ್ಯಾರು?       

Thursday, August 7, 2014

ದೀಪದ ದೆವ್ವ (ದೆವ್ವದ ಕಥೆಗಳು – ಭಾಗ ೩)


(ಇದು ಸಂಗೀತಾ ಕೇಶವ ಅವರಿಗಾದ ಅನುಭವದ ಎಳೆಯ ಮೇಲೆ ಹೆಣೆದ ಕತೆ)

ನಾನಾಗ ಪೀಯುಸಿ ಮೊದಲ ವರ್ಷದಲ್ಲಿ ಓದುತ್ತಿದ್ದೆ. ನಾವಿದ್ದದ್ದು ನನ್ನ ಊರಾದ ಚಿಕ್ಕೋಡಿಯಲ್ಲಿ. ಅದು ಬೆಳಗಾವಿ ಜಿಲ್ಲೆಯಲ್ಲಿದೆ. ಹವಾಮಾನದ ವಿಷಯದಲ್ಲಿ ಅದಕ್ಕೂ ಬೆಳಗಾವಿಗೂ ಏನೂ ವ್ಯತ್ಯಾಸವಿರಲಿಲ್ಲ. ಅದು ಆಗಿನ ಸಂಗತಿ. ಈಗ ಬಿಡಿ ಬೆಳಗಾವಿಯ ಹವಾಮಾನವೂ ಪ್ರಕೃತಿ ವೈಪರಿತ್ಯಕ್ಕೆ ಬಲಿಯಾಗಿ ಹದಗೆಟ್ಟಿದೆ. ಆಗೆಲ್ಲಾ ಬೆಳಗಾವಿಯಲ್ಲಿ ಮಳೆ ಯಾವ ಪರಿ ಸುರಿಯುತ್ತಿತ್ತೆಂದರೆ... ಸುರಿಯುತ್ತಿತ್ತು ಅಷ್ಟೆ! ಒಮ್ಮೆ ಶುರುವಾಯಿತೆಂದರೆ ನಿಲ್ಲುವ ಮಾತೆ ಇರಲಿಲ್ಲ. ಚಿಕ್ಕೋಡಿಯ ಪರಿಸ್ಥಿತಿಯೂ ಹೆಚ್ಚು ಕಡಿಮೆ ಹಾಗೇ ಇತ್ತು.  ಅಗೆಲ್ಲಾ, ಅಲ್ಲಿನ ಹೆಚ್ಚಿನ ಮನೆಗಳು ಹೆಂಚಿನ (ಮಂಗಳೂರು) ಮಾಡಿನವು. ನಮ್ಮ ಮನೆಯೂ ಹಾಗೇ ಇತ್ತು. ದೊಡ್ಡ ದೊಡ್ಡ ಕೋಣೆಗಳು, ವಿಶಾಲವಾದ ವರಾಂಡ. ಅಡಿಗೆಮನೆ ಮತ್ತು ಬಚ್ಚಲುಮನೆಗಳು ಕೂಡ ಅಷ್ಟೆ ದೊಡ್ಡವು. ಅದೂ ಅಲ್ಲದೆ ಮನೆಯ ಮುಂದೊಂದು ತೋಟ. ಆ ತರಹದ ಮನೆ ಈಗಿನ ಬೆಂಗಳೂರಿನಲ್ಲಿ ಕೋಟಿಗಟ್ಟಲೆ ಬೆಲೆಬಾಳುವ ವಿಲ್ಲಾ ಕಿಂತಲೂ ದೊಡ್ಡದಿತ್ತು ಅಂದರೆ ಅತಿಶಯೋಕ್ತಿಯಾಗಲಾರದು! ಆದರೆ ಅಂಥ ಮನೆಗಳ ವಾಸ್ತುಶಿಲ್ಪ ಹೆಚ್ಚು ಕಡಿಮೆ ಒಂದೇ ಥರ ಇರುತ್ತಿತ್ತು. ಅದಕ್ಕೆ ನಮ್ಮ ಮನೆಯೂ ಹೊರತಾಗಿರಲಿಲ್ಲ. ಅದು ಉದ್ದಕ್ಕೆ ರೈಲಿನ ಬೋಗಿ ತರಹ ಇತ್ತು. ಮೊದಲು ವರಾಂಡಾ, ಸಾಲಾಗಿ ಮೂರು ಕೋಣೆಗಳು, ನಂತರ ಅಡುಗೆಮನೆ ಕೊನೆಗೊಂದು ಬಚ್ಚಲು ಮನೆ. ಎಲ್ಲಕ್ಕೂ ಒಂದೊಂದು ಬಾಗಿಲು. ಇವೆಲ್ಲವನ್ನು ಸೇರಿಸುವ ಒಂದೇ ಒಂದು ಪ್ಯಾಸೇಜ್. 

ನಾನಾಗ ಪೀಯುಸಿ ಯ ಮೊದಲ ವರ್ಷದ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೆ. ನನ್ನ ಪ್ರೀತಿಯ ವಿಷಯವಾಗಿದ್ದ ಅರ್ಥಶಾಸ್ತ್ರದಲ್ಲಿ ನೂರಕ್ಕೆ ನೂರು ಅಂಕ ಗಳಿಸುವ ಎಕೈಕ ಉದ್ದೇಶ ನನ್ನದಾಗಿತ್ತು. ಆ ಉದ್ದೇಶಕ್ಕೊಂದು ಕಾರಣವೂ ಇತ್ತು! ಹಾಗೆ ಅಂಕ ಗಳಿಸಿ,  ಒಬ್ಬ ಹುಡುಗನ ಮೆಚ್ಚುಗೆ ಗಳಿಸಬೇಕಿತ್ತು.  ಆ ಹುಡುಗ ನನ್ನ ಅಕ್ಕನ ಸಹಪಾಠಿಯಾಗಿದ್ದ. ಅವನೂ ಅದೇ ವಿಷಯದಲ್ಲಿ ನೂರು ಅಂಕ ಗಳಿಸಿದ್ದ. ಆ ಅಂಕ ಗಳಿಸುವ ಕನಸು ಎಷ್ಟು ತೀವ್ರವಾಗಿತ್ತೆಂದರೆ, ಬೆಳಿಗ್ಗೆ ನಾಲ್ಕಕ್ಕೆಲ್ಲಾ ಎದ್ದು ಅಭ್ಯಾಸ ಮಾಡುತ್ತಿದ್ದೆ. ನನ್ನ ಜೊತೆಗೆ ನನ್ನ ಅಕ್ಕನೂ ಅಭ್ಯಾಸ ಮಾಡಲು ಕೂಡುತ್ತಿದ್ದಳು. ಅವಳು ತನ್ನ ಪೀಯುಸಿ ಎರಡನೇ ವರ್ಷದ ಸಿದ್ಧತೆಯಲ್ಲಿದ್ದಳು. ಹೀಗೆ ಒಂದು ಸಲ ರಾತ್ರಿ ಒಂದು ಥರದ ಶಬ್ದ ನನ್ನನ್ನು ನಿದ್ದೆಯಿಂದ ಬಡಿದೆಬ್ಬಿಸಿತು. ನಿದ್ದೆಯಲ್ಲಿದ್ದುದರಿಂದ ಅದೇನೆಂಬುದು ಸರಿಯಾಗಿ ಗ್ರಹಿಸಲಾಗಲಿಲ್ಲವಾದರೂ, ಅದೊಂಥರ ಪ್ಲ್ಯಾಸ್ಟಿಕ್ ಮಡಚಿದಾಗ ಆಗುವಂತಹ ಶಬ್ದ ಅನಿಸಿತು. ನಾನೆದ್ದು ನೋಡಿದಾಗ ಬಚ್ಚಲು ಮನೆಯ ವಿದ್ಯುತ್ ದೀಪ ಹತ್ತಿದ್ದು ನಾನು ಮಲಗಿದ ಕೋಣೆಯಿಂದ ಕಾಣಿಸಿತು. ಯಾರೋ ದೀಪವನ್ನು ಆರಿಸಿರಲಿಕ್ಕಿಲ್ಲವೆಂದುಕೊಂಡು ಎದ್ದು ಹೋಗಿ ಬಚ್ಚಲುಮನೆಯ ಸ್ವಿಚ್ ಆರಿಸಿ ಬಂದು ನನ್ನ ಕೋಣೆಯಲ್ಲಿ ಮಲಗಿದೆ.
ಮರುದಿನ ಬೆಳಿಗ್ಗೆ ಮಾಮೂಲಿಯಂತೆ ನಾವಿಬ್ಬರೂ ಎದ್ದು ಓದಲು ತೊಡಗಿದ್ದೆವು. ಅಚಾನಕ್ಕಾಗಿ ಮತ್ತೆ ಬಚ್ಚಲು ಮನೆಯ ವಿದ್ಯುತ್ ದೀಪ ತಂತಾನೆ ಹತ್ತಿತು! ನಮಗಿಬ್ಬರಿಗೂ ಅಶ್ಚರ್ಯವಾಯಿತು. ಮನೆಯಲ್ಲಿ ಎಚ್ಚರವಿದ್ದವರು ನಾವಿಬ್ಬರೇ. ಉಳಿದವರು ನಮ್ಮ ಪಕ್ಕದ ಕೋಣೆಯಲ್ಲೇ ಮಲಗಿದ್ದರು. ಬಚ್ಚಲು ಮನೆ ಇದ್ದದ್ದು ನಮ್ಮ ಇನ್ನೊಂದು ಪಕ್ಕಕ್ಕೆ. ಹಾಗಾದರೆ ದೀಪವನ್ನು ಉರಿಸಿದವರು ಯಾರು? ಅದನ್ನು ಎದ್ದು ಹೋಗಿ ಪರೀಕ್ಷಿಸಲು ನಮಗೆ ಧೈರ್ಯ ಬರಲಿಲ್ಲ. ಸ್ವಲ್ಪ ಹೊತ್ತಿಗೆ ದೀಪ ತಂತಾನೆ ಆರಿತು! ಆಗ ನಮ್ಮ ಹೆದರಿಕೆ ಇನ್ನಷ್ಟು ಜಾಸ್ತಿಯಾಗಿ ಕಂಗಾಲಾದೆವು. ಆಮೇಲೆ ಓದುವುದು ಹಾಗಿರಲಿ ಮಲಗಿದರೆ ನಿದ್ದೆಯೂ ಬರದಂತಹ ಸ್ಥಿತಿ ನಮ್ಮದು. ನಮ್ಮ ಚಾದರಗಳನ್ನು ಅಡಿಯಿಂದ ಮುಡಿಯವರೆಗೆ ಹೊದ್ದು ಬೆಳಗಾಗುವುದೇ ಕಾಯುತ್ತ ಮಲಗಿದೆವು.

ನನಗೆ ಆ ದೆವ್ವದ ಚಿಂತೆಗಿಂತ, ಹೀಗೆಯೇ ಮುಂದುವರಿದರೆ ನನ್ನ ಅಭ್ಯಾಸವೂ ಹಾಳಾಗಿ ನನ್ನ ಹುಡುಗನನ್ನು ಇಂಪ್ರೆಸ್ ಮಾಡಲಾಗುವುದಿಲ್ಲವೆಂಬ ಚಿಂತೆ ಜಾಸ್ತಿಯಾಗಿತ್ತು! ಹೀಗಾಗಿ ಮರುದಿನ ನನ್ನ ಎಲ್ಲಾ ಧೈರ್ಯವನ್ನು ಒಟ್ಟು ಮಾಡಿ ಮತ್ತೆ ಬೆಳಿಗ್ಗೆ ನಾಲ್ಕು ಗಂಟೆಗೆ ಓದಲು ಕುಳಿತೆ. ಅಕ್ಕನನ್ನು ಹೇಗೋ ಪುಸಲಾಯಿಸಿ ಜೊತೆಗೆ ಕೂರಿಸಿಕೊಂಡೆ. ಸ್ವಲ್ಪ ಸಮಯದ ಬಳಿಕ ಮತ್ತದೇ ಶಬ್ದ! ದೀಪ ಉರಿಯಿತು, ಮತ್ತೆ ಆರಿತು. ನಮ್ಮ ಬಾಯಿಯ ಪಸೆಯೂ ಅರಿತ್ತು! ಮತ್ತೆ ನಮ್ಮ ಚಾದರಗಳೇ ನಮಗೆ ರಕ್ಷಣೆ ನೀಡಿದ್ದು.

ಈ ಘಟನೆಯನ್ನು ನಾವು ನಮ್ಮ ಅಪ್ಪ ಅಮ್ಮನ ಎದುರು ಹೇಳಿಕೊಳ್ಳುವ ಹಾಗಿರಲಿಲ್ಲ. ಯಾಕೆಂದರೆ ನಾವು ಅಧುನಿಕ ಜಗತ್ತಿನ, ವೈಜ್ನ್ಯಾನಿಕ ವಿಚಾರಧಾರೆಯುಳ್ಳ ಹುಡುಗಿಯರಾಗಿದ್ದರಿಂದ, ನಮ್ಮ ಆ ಖ್ಯಾತಿಯನ್ನು ಉಳಿಸಿಕೊಳ್ಳಲೇಬೇಕಾಗಿತ್ತು. ಅವರೆದುರು ಹೇಳಿ ಇಂಥದ್ದೆಲ್ಲಾ ನಂಬುತ್ತಿರುವ ನೀವ್ಯಾವ ಅಧುನಿಕ ಹುಡುಗಿಯರೇ ಅಂತ ನಗೆಪಾಟಲಿಗೀಡಾಗುವುದು ನಮಗೆ ಬೇಕಿರಲಿಲ್ಲ. ಹೀಗೆ ಒಂದು ದಿನ ಬೆಳಿಗ್ಗೆ ನಮ್ಮ ಪಕ್ಕದ ಮನೆಯ ಹುಡುಗಿಯರೊಂದಿಗೆ ಹಾಳು ಹರಟೆ ಹೊಡೆಯುತ್ತಿದ್ದೆವು. ಹುಡುಗಿಯೊಬ್ಬಳು ಒಂದು ವಿಷಯ ಪ್ರಸ್ಥಾಪಿಸಿದಳು. ಅದೇನೆಂದರೆ ನಾವಿದ್ದ ಚಾಳ್ ಮೊದಲೊಂದು ರುದ್ರಭೂಮಿಯಾಗಿತ್ತಂತೆ. ಮೊದಲೆಲ್ಲ ತುಂಬಾ ಜನ ಇಲ್ಲಿ ದೆವ್ವಗಳನ್ನು ನೋಡಿದ್ದರಂತೆ. ಅವಳಿಗೆ ಬೈದು ಬುದ್ಧಿ ಹೇಳುವ ನೈತಿಕತೆ ಅಥವ ಧೈರ್ಯವನ್ನು ನಾನು ಕಳೆದುಕೊಂಡಿದ್ದೆ. ಆ ರುದ್ರಭೂಮಿಯ ಮೇಲೆಯೇ ನಮ್ಮ ಮನೆ ಇತ್ತು. ಹೀಗಾಗಿ ದೆವ್ವಗಳು ನಮ್ಮ ಮನೆಯಲ್ಲೇ ಠಿಕಾಣಿ ಹೂಡಿರುವುದು ನಮಗೂ ಮನದಟ್ಟಾಗಿತ್ತು.

ಆ ಘಟನೆ ನಮ್ಮನ್ನು ಎಷ್ಟು ಪರಿ ಹಿಂಡತೊಡಗಿತೆಂದರೆ, ಎಲ್ಲರ ಜೊತೆಗೆ ರಾತ್ರಿ ಊಟಕ್ಕೆ ಕೂತಾಗಲೂ, ಯಾರಾದರೂ ಬಚ್ಚಲು ಮನೆಯ ದೀಪ ಬೆಳಗಿಸಿದರೆ ಬೆಚ್ಚಿ ಬೀಳುತ್ತಿದ್ದೆವು. ರಾತ್ರಿ ಬಚ್ಚಲು ಮನೆಗೆ ಹೋಗಲೇ ಭಯವಾಗುತ್ತಿತ್ತು. ಒಂದು ಸಲವಂತೂ ರಾತ್ರಿ ಬಚ್ಚಲು ಮನೆಗೆ ಅಕ್ಕ ಹೋದಾಗ ವಿದ್ಯುತ್ ಮಂಡಳಿಯವರು ವಿದ್ಯುತ್ ಕಡಿತ ಮಾಡಿ ಬಿಟ್ಟರು. ಒಳಗಿದ್ದ ನನ್ನಕ್ಕ ಇದು ಭೂತದ್ದೇ ಆಟ ಅಂದುಕೊಂಡು ಕಿಟಾರನೇ ಕಿರುಚಿದ್ದಳು.

ಮತ್ತೆ ಮತ್ತೆ ದಿನವೂ ಭೂತ ಚೇಷ್ಟೆ ಮುಂದುವರಿಯಿತು. ಒಂದು ದಿನ ನನಗಂತೂ ಸಾಕಾಗಿ ಹೋಗಿತ್ತು. ನನ್ನಲ್ಲಿದ್ದ ತಾಳ್ಮೆಯ  ಮಿತಿಯೂ ಮೀರಿತ್ತು. ನಾನು ಆ ದೆವ್ವವನ್ನು ಇವತ್ತು ಹಿಡಿಯಲೇಬೇಕೆಂದು ನಿರ್ಧರಿಸಿದ್ದೆ. ಅವತ್ತು ನಸುಕಿನಲ್ಲಿ ಮತ್ತೆ ಅದೇ ಶಬ್ಧ, ಅದರ ಜೊತೆಗೇ ದೀಪ ಬೆಳಗೇಬಿಟ್ಟಿತು. ಇದ್ದುದರಲ್ಲೇ ನನ್ನಕ್ಕನಿಗಿಂತ ನಾನು ಧೈರ್ಯವಂತಳು. ಇದ್ದ ಬದ್ದ ಭಂಡ ಧೈರ್ಯವ ಒಟ್ಟುಗೂಡಿಸಿ, ನೆನಪಿಗೆ ಬಂದ ಒಂದೆರಡು ದೇವರ ಹೆಸರು ಹೇಳಿಕೊಂಡು ಬಚ್ಚಲ ಮನೆಯ ಕಡೆಗೆ ಕಿತ್ತೂರ ಚೆನ್ನಮ್ಮನಂತೆ ಮುನ್ನುಗ್ಗಿದೆ. ಅಲ್ಲಿ ಚೇಷ್ಟೆ ಮಾಡುತ್ತಿದ್ದ ಭೂತ ಕಂಡೇ ಹೋಯಿತು! ಆದರೆ ನಾನು ಜೋರಾಗಿ ನಗತೊಡಗಿದ್ದೆ. ಅಕ್ಕನಿಗದು ಇನ್ನೂ ಭಯವಾಯ್ತೇನೋ! ಒಳಗೆ ಕೋಣೆಯಲ್ಲಿದ್ದ ಅವಳನ್ನೂ ಎಳೆದುಕೊಂಡೆ ಹೋಗಿ ಆಲ್ಲಿದ್ದ ಭೂತವನ್ನು ತೋರಿಸಿದೆ.

ಅದೇನಾಗಿತ್ತೆಂದರೆ, ಆಗೆಲ್ಲಾ ಮನೆಗಳಲ್ಲಿ ಬಳಸುತ್ತಿದ್ದ ಸ್ವಿಚ್ ಗಳು ಕಪ್ಪಗೆ ದೊಡ್ಡನೆಯ ಸ್ವಿಚ್ ಗಳು. ಅವುಗಳ ಹಿಡಿಕೆ ಮುಂದುಗಡೆ ಸ್ವಲ್ಪ ಉದ್ದಕ್ಕೆ ಚಾಚಿಕೊಂಡಿರುತ್ತಿತ್ತು. ಹಂಚಿನ ಮನೆಯಾದ್ದರಿಂದ ಮೇಲಿನಿಂದ ಹೆಗ್ಗಣಗಳು ಮನೆಯೊಳಗೆ ತೂರಿಕೊಂಡು ಬರಲಿಕ್ಕೆ ಈ ಸ್ವಿಚ್ ಗಳು ಅವುಗಳಿಗೆ ಆಸರೆ ನೀಡುತ್ತಿದ್ದವು. ಹಾಗೆ ಅವು ಕೆಳಗೆ ಬರುವಾಗ ಶಬ್ಧವಾಗುತ್ತಿತ್ತು, ಅಲ್ಲದೆ ಸ್ವಿಚ್ಚಿನ ಹಿಡಿಕೆ ಅರ್ಧಕ್ಕೆ ಬಂದು ನಿಲ್ಲುತ್ತಿತ್ತು ಅದರಿಂದಾಗಿ ದೀಪ ಹತ್ತುತ್ತಿತ್ತು. ಸ್ವಿಚ್ಸಿನ ಒಳಗಡೆ ಸ್ಪ್ರಿಂಗು ಇರುತ್ತಿದ್ದುದರಿಂದ ಹಿಡಿಕೆ ತಂತಾನೇ ಮೇಲೆ ಮೊದಲಿನ ಸ್ಥಿತಿಗೆ ಹೋಗಿ ದೀಪ ಆರುತ್ತಿತ್ತು. ಅಂತೂ ಈ ರಹಸ್ಯವನ್ನು  ಭೇದಿಸಿ, ಭೂತದ ಸ್ವಿಚ್ಚು ಆಫ್ ಮಾಡಿದ್ದೆವು! ನನ್ನ ಅಭ್ಯಾಸವೂ ನಿರಾತಂಕವಾಗಿ ಸಾಗಿ ಪರೀಕ್ಷೆ ಬರೆದೆ... ಮುಂದೇನಾಯ್ತು ಅನ್ನೋದು ನಿಮಗ್ಯಾಕೆ ಹೇಳಬೇಕು?!

--

ಇದರಿಂದ ಕೆಲವು ಸಂಗತಿಗಳು ಸ್ಪಷ್ಟವಾಗುತ್ತವೆ. ಯಾವಾಗಲೂ ಭೂತದ ಸೃಷ್ಟಿಯಾಗೋದು ಕತ್ತಲಲ್ಲೆ. ಭೂತದ ಭಯಕ್ಕೆ ಇನ್ನೊಂದು ಕಾರಣ ಎಂದರೆ ವಿನಾಕರಣದ(!) ಶಬ್ದ! ಅದಕ್ಕೆ ಇರಬೇಕು, ಹಾರರ್ ಚಿತ್ರಗಳಲ್ಲಿ ನಿಜಕ್ಕೂ ಭಯ ತರಿಸೋದು ಅವರು ಸೃಷ್ಟಿ ಮಾಡುವ ವಿಚಿತ್ರ ಶಬ್ದಗಳೇ ಹೊರತು ಮಾಸ್ಕ್ ಹಾಕಿಕೊಂಡು ಜೋಕರ್ ಗಳಂತೆ ಕಾಣುವ ಭೂತಗಳಲ್ಲ!
    

  
 

Tuesday, July 29, 2014

ಇರುಳಲಿ ಕಂಡವಳು! (ದೆವ್ವದ ಕಥೆಗಳು – ಭಾಗ ೨)

 
ಬಿದರಕಾನ ಅನ್ನುವ ಮಲೆನಾಡಿನ ಸುಂದರ ಹಳ್ಳಿಗೆ, ನನ್ನ ಮಾವನ ಊರಾದ ಕಿಬ್ಬಳ್ಳಿಯಿಂದ ಒಂದು ಗಂಟೆಯ ದಾರಿ. ಕಿಲೋಮೀಟರುಗಳ ಲೆಕ್ಕದಲ್ಲಿ ಬರಿ ಹದಿನೈದು. ಆದರೆ ಬಳುಕುತ್ತ ಹರಿಯುವ ಮೋಹಕ ನದಿ ಅಘನಾಷಿನಿಯ ಪಕ್ಕಕ್ಕೆ ಚಾಚಿಕೊಂಡ ಏರಿಳಿತದ, ತಿರುವುಗಳಿಂದಲೇ ಭೂಷಿತವಾದ ಘಾಟ್ ರಸ್ತೆಯನ್ನು ಕ್ರಮಿಸುವುದಕ್ಕೆ ಒಂದು ಗಂಟೆ ಬೇಕು. ಆ ರಸ್ತೆಯಲ್ಲಿ ಕಾರು ಓಡಿಸುವುದೇ ಒಂದು ಖುಷಿ, ಎಷ್ಟೋ ಸಲ ಆ ಖುಷಿ ಓಡಿಸುವವರಿಗೆ ಮಾತ್ರ! ಯಾಕೆಂದರೆ ಹಿಂದೆ ಕುಳಿತವರು ರೋಡಿನ ತಿರುವಿಂಗ್ಸ್ ನಲ್ಲಿ ಹೊಟ್ಟೆ ತೊಳಸಿಕೊಳ್ಳುವವರಾಗಿದ್ದರೆ, 'ಗೊಳ್' ಅಂತ ವಾಂತಿ ಮಾಡಿಕೊಂಡು, ಕಾರಿನ ಬಣ್ಣವನ್ನೇ ಬದಲಾಯಿಸಿಬಿಡುತ್ತಾರೆ. ಅದಕ್ಕೆ ಸಲ್ಪ ನಿಧಾನ ಓಡಿಸಿಕೊಂಡು ಹೋಗಬೇಕು. ಬಿದರಕಾನ್ ದಲ್ಲಿ ನನ್ನ 'ಧಪ' ನ ಚಿಕ್ಕಮ್ಮನ ಮನೆ ಇದೆ. ('ಧಪ' ಅಂದ್ರೆ ಧರ್ಮ ಪತ್ನಿ ಅಂತ ಬಿಡಿಸಿ ಹೇಳಬೇಕೆ?!) ಊರಿಗೆ ಹೋದಾಗಲೊಮ್ಮೆ ಬಿದರಕಾನಿಗೆ ಹೋಗುವುದು ನಮ್ಮ ಅಲಿಖಿತ ನಿಯಮ. ಆ ಸಲ ನನ್ನ ತಮ್ಮ ಹಾಗೂ ಅವನ ಹೆಂಡತಿಯೂ ಬಂದಿದ್ದರು. ಎಲ್ಲರನ್ನೂ ಕರೆದುಕೊಂಡೇ ಅಲ್ಲಿಗೆ ಹೋಗಿದ್ದೆವು. 
ಪ್ರತೀ ಸಲ ಚಿಕ್ಕಮ್ಮನ ಮನೆಗೆ ಹೋದಾಗಲೂ ಬೆಳಿಗ್ಗೆಯೇ ಹೋಗಿರುತ್ತೇವೆ. ನಂತರ ಮದ್ಯಾಹ್ನದ ಊಟ; ಊಟ ಆದಮೇಲೆ ಹರಟೆ; ಸಂಜೆಗೆ ಅವಲಕ್ಕಿ, ಹಲಸಿನ ಚಿಪ್ಸು, ಸೌತೆಕಾಯಿ, ಕಾಳು ಮೆಣಸಿನ ಚಟ್ನಿ, ಜೊತೆಗೆ ಚಾ. ಇದೆಲ್ಲದರ ಜೊತೆಗೆ ಮತ್ತೆ ಹರಟೆ! ಅಲ್ಲಿಗೆ ಹೋದರೆ ಏಳಲು ಮನಸ್ಸೇ ಬಾರದು. ಹಾಗೆಯೇ ಕತ್ತಲಾಗಿಬಿಡುತ್ತದೆ. ಅಷ್ಟೊತ್ತಿಗೆ, ರಾತ್ರಿಯಾಯ್ತು ಊಟ ಮಾಡಿ ಇಲ್ಲೇ ಇದ್ದು ಬೆಳಿಗ್ಗೆ ಹೋಗಿ ಅಂತ ಒತ್ತಾಯ ಮಾಡುತ್ತಾರೆ. ಹಾಗೆ ಮಾಡಿದರೆ ಕಿಬ್ಬಳ್ಳಿಯಲ್ಲಿ ನನ್ನ ಅತ್ತೆ ಸುಮ್ಮನಿರುತ್ತಾರೆಯೆ? ನಾವು, ಇಲ್ಲ ವಾಪಸ್ಸು ಅತ್ತೆ ಮನೆಗೆ ಹೋಗಲೇಬೇಕು ಅನ್ನುತ್ತೇವೆ. ಅವತ್ತೂ ಹಾಗೇ ಆಯ್ತು. ನಾವು ಹೋಗುತ್ತೇವೆ ಅನ್ನುತ್ತಲೆ ಹರಟೆ ಹೊಡೆಯುತ್ತಾ ಕೂತು ಬಿಟ್ಟೆವು. ಸ್ವಲ್ಪ ಸ್ವಲ್ಪ ಅನ್ನುತ್ತಲೇ ಊಟವನ್ನೂ ಮುಗಿಸಿದೆವು! ಕಿಬ್ಬಳ್ಳಿಗೆ ವಾಪಸ್ಸಾಗಲೇಬೇಕಿತ್ತು. ಕತ್ತಲೇನೊ ಆಗಿತ್ತು. ಆದರೆ ಹಿಂದೆ ಎಷ್ಟೋ ಸರ್ತಿ ಕತ್ತಲಲ್ಲಿ ಈ ರಸ್ತೆಯಲ್ಲಿ ಗಾಡಿ ಓಡಿಸಿದ ಅನುಭವದ ಘಮಿಂಡಿ ನನಗಿತ್ತು. ಅದೂ ಅಲ್ಲದೇ ಅವತ್ತು ಮಳೆಯೂ ಇರಲಿಲ್ಲ. ಆಕಾಶ, ಮೋಡಗಳಿಲ್ಲದೇ ಶುಭ್ರವಾಗಿತ್ತಲ್ಲದೇ ನಕ್ಷತ್ರಗಳಿಂದ ಫಳ ಫಳ ಹೊಳೆಯುತ್ತಿತ್ತು. ನಾವೆಲ್ಲಾ ಚಿಕ್ಕಮ್ಮನ ಮನೆ ಬಿಟ್ಟಾಗ ರಾತ್ರಿ ಹತ್ತು ಹೊಡೆದಿತ್ತು.    
ಅದು ಇದು ಮಾತಾಡಿಕೊಂಡು ನಿಧಾನವಾಗಿ ಗಾಡಿ ಒಡಿಸುತ್ತಿದ್ದೆ. ಆಗಲಷ್ಟೇ ಎಲ್ಲರೂ ಹೊಟ್ಟೆ ಬಿರಿಯುವಂತೆ ಊಟ ಮಾಡಿದ್ದರಿಂದ ಜೋರಾಗಿ ಓಡಿಸಿ ನನ್ನ ಕಾರಿನ ಬಣ್ಣ ಬದಲಿಸುವ ಇರಾದೆ ನನಗಂತೂ ಇರಲಿಲ್ಲ! ಅರ್ಧ ದಾರಿ ಮುಟ್ಟಿರಬೇಕು, ಹರಸಿಕಟ್ಟಾ ದಾಟಿ ತುಂಬಾ ಮುಂದೆ ಬಂದಿದ್ದೆವು. ಅಲ್ಲೊಂದು ಹೇರ್ ಪಿನ್ ತಿರುವು. ಅರ್ಧದಷ್ಟಾದರೂ ತಿರುಗುವವರೆಗೆ ಮುಂದಿನದೇನು ಕಾಣದು. ನನ್ನ ಹೆಡ್ ಲೈಟ್ ಹೈ ಬೀಮ್ ನಲ್ಲಿತ್ತು. ನಿಧಾನವಾಗಿ ತಿರುಗಿಸಿ ಎದುರಿಗೆ ನೋಡಿದರೆ ಕಾರಿನ ಎಡಗಡೆಗೊಂದು ಉದ್ದನೆಯ ಅಕೃತಿ ನಿಂತಿದ್ದು ಕಂಡಿತು. ಅದು ಮೊದಲು ನನಗೇ ಕಂಡಿತಾದರೂ ಕ್ರಮೇಣ ಕಾರಿನಲ್ಲಿ ನನ್ನೊಟ್ಟಿಗಿದ್ದ ಎಲ್ಲರೂ ಗಮನಿಸಿದರು. ಅದು ಸುಮಾರು ಐವತ್ತು ವಯಸ್ಸಿನ ಹೆಣ್ಣು ಮಗಳು. ಮುಖ ನಮ್ಮ ಕಡೆಗೇ ವಾಲಿದಂತಿದೆ. ಅರ್ಧ ಭಾಗ ಸುಟ್ಟಂತೆ ವಿಕಾರವಾಗಿತ್ತು. ಆ ದೃಶ್ಯ ನೋಡಿ ಕಾರಿನಲ್ಲಿದ್ದ ಎಲ್ಲರೂ ಅ ವಿಕಾರವಾದ ವ್ಯಕ್ತಿ ದೆವ್ವವೇ ಅಂತ ಹೆದರಿ ಕಂಗಾಲಾಗಿದ್ದರು.  ದೆವ್ವ ಗಿವ್ವ ಏನೂ ಇಲ್ಲ ಅಂತ ಎಲ್ಲರಿಗೂ ಧೈರ್ಯ ಹೇಳುತ್ತಿದ್ದೆನಾದರೂ ನನಗೂ ಒಳಗೊಳಗೆ ಪುಕು ಪುಕು! ಆ ತಂಪಿನಲ್ಲೂ ನಾ ಬೆವರಿದ್ದೆ. ಕಾಲು, ತೊಡೆಗಳಲ್ಲಿ ಶಕ್ತಿ ಕಳೆದುಕೊಂಡ ಅನುಭವ. ನಾನು ನಡಗುತ್ತಲೇ ಕಾರನ್ನು ಅಲ್ಲಿಂದ ಮುಂದೆ ಜೋರಾಗಿ ಓಡಿಸಿದೆ. ಎಲ್ಲರೂ ಆ ಕ್ಷಣದಲ್ಲಿ ಮಾತು ನಿಲ್ಲಿಸಿದ್ದರು. ನನ್ನ ತಮ್ಮನ ಎರಡು ವರ್ಷದ ಮಗಳು ಮಾತ್ರ ಮೇಲೇನೋ ತೋರಿಸುತ್ತ ವಟ ವಟನೇ ಮಾತಾಡುತ್ತಿದ್ದುದು ನಮ್ಮ ಭಯವನ್ನು ಇನ್ನೂ ಹೆಚ್ಚಿಸಿತ್ತು. ಅಲ್ಲಿ ನೋಡಿದ್ದು ಭೂತವೇ ಅಂತ ನಮಗೇ ಖಾತ್ರಿಯಾಗಿತ್ತು. ಯಾಕಂದ್ರೆ ನಡೆದುಕೊಂಡು ಬರುವಷ್ಟು ಹತ್ತಿರದಲ್ಲಿ ಅಲ್ಲಿ ಯಾವುದೇ ಹಳ್ಳಿ ಅಥವ ಮನೆ ಇರಲಿಲ್ಲ.ಅಮೇಲೆ ಅವತ್ತು ಅಮವಾಸ್ಯೆ ಇದ್ದದ್ದು ನಮ್ಮ ಸಂಶಯವನ್ನು ಮತ್ತಷ್ಟು ಧೃಡಪಡಿಸಿತ್ತು. 
ಆ ಜಾಗದಿಂದ ಎಷ್ಟೊ ಮುಂದೆ ಬಂದೆವಾದರೂ ದೆವ್ವ ನಮ್ಮ ಮನದಿಂದ ಹೊರ ಹೋಗಿರಲಿಲ್ಲ. ಯಾರಿಗೂ ಹಿಂತಿರುಗಿ ನೋಡುವ ಧೈರ್ಯವಿರಲಿಲ್ಲ. ಆ ದೆವ್ವ ನಮ್ಮ ಬೆನ್ನು ಹತ್ತಿಕೊಂಡು ಬರುತ್ತಿರಬಹುದೇನೊ ಅನ್ನುವ ಸಂಶಯ! ರಸ್ತೆಯಲ್ಲಿ ಪ್ರತಿ ಸಲ ತಿರುವು ಬಂದಾಗಲೂ ನನಗೆ ಆ ಹೆಣ್ಣು ಮಗಳು ಮತ್ತೆ ಕಂಡುಬಿಟ್ಟರೆ ಅನ್ನುವ ಯೋಚನೆ ಬರುತ್ತಿದ್ದಂತೇ ಹೊಟ್ಟೆಯಲ್ಲಿ ರುಮ್ ಅನ್ನುವ ಅನುಭವ. ನನ್ನ ತಮ್ಮನ ಮಗಳು ಮಾತ್ರ ತನ್ನ ತೊದಲು ನುಡಿಗಳಲ್ಲಿ ನಿರಂತರವಾಗಿ ಇನ್ನೂ ವಟಗುಡುವುದ ಮುಂದುವರಿಸಿದ್ದಳು! 
ಅಂತೂ ಇಂತೂ ಊರು ಹತ್ತಿರ ಬಂದಂತೆ ನನ್ನ ಧೈರ್ಯ ಇಮ್ಮಡಿಸಿತು. ಮಾವನ ಮನೆ ಮುಟ್ಟಿ ದೊಡ್ಡ ನಿಟ್ಟುಸಿರಿಟ್ಟೆವು. ಮಾವನಿಗೆ ನಮ್ಮ ಅನುಭವ ಹೇಳಲಾಗಿ, ಅವರು ಎಳ್ಳಷ್ಟೂ ಚಕಿತರಾಗದೆ, "ಹೌದ ಮಾರಾಯಾ … ಅಲ್ಲೊಂದು ಪಿಶಾಚಿ ಇದ್ದು. ಸುಮಾರು ಜನ ನೋಡಿದ್ವಡಾ" ಅನ್ನಬೇಕೆ!? ಅಂದರೆ ನಾವು ನೋಡಿದ್ದು ನಿಜವಾದ ಭೂತವೇ! ಅವತ್ತು ರಾತ್ರಿ ನಿದ್ದೆಯಲ್ಲಿ ಬೇರೆ ಯಾರೂ ಬರಲೇ ಇಲ್ಲ, ಅದೇ ಮೋಹಿನಿಯದೇ ದರ್ಬಾರು.        
ಆಮೇಲೆ ನಾಲ್ಕು ದಿನ ಮಾವನ ಮನೆಯಲ್ಲಿದ್ದೆವು. ದೆವ್ವದ ವಿಚಾರ ಸ್ವಲ್ಪ ಮಟ್ಟಿಗೆ ಮನದಿಂದ ಮರೆಯಾಗಿತ್ತಾದರೂ ಪೂರ್ತಿಯಾಗಿ ಮರೆತಿರಲಿಲ್ಲ. ವಾಪಸ್ಸು ಬೆಂಗಳೂರಿಗೆ ಹೋಗುವ ಸಮಯ ಬಂದಿತ್ತು. ನಾವು ಅದೇ ರೋಡಿನಲ್ಲಿ ಹೋಗಬೇಕಿತ್ತಾದರೂ ಬೆಳಗಿನ ಪ್ರಯಾಣವಾಗಿದ್ದರಿಂದ ಅಷ್ಟು ಹೆದರಿಕೆ ಇರಲಿಲ್ಲ. ಅದೇ ದಾರಿಯಲ್ಲಿ ಚಿಕ್ಕಮ್ಮನ ಮನೆಯಾದ್ದರಿಂದ ಮತ್ತೊಂದು ಚಿಕ್ಕ ಭೇಟಿ ಕೊಟ್ಟು ಹೊಗುವುದು ನಮ್ಮ ಮತ್ತೊಂದು ಅಲಿಖಿತ ನಿಯಮವಾಗಿತ್ತು. ದಾರಿಯಲ್ಲಿ ಬರುವಾಗ ಮತ್ತೆ ಆ ದೆವ್ವವನ್ನು ಕಂಡ ಸ್ಪಾಟ್ ನೋಡಿ ದೆವ್ವವಿಲ್ಲದ್ದು ಖಚಿತಪಡಿಸಿಕೊಂಡು ಮುಂದೆ ಹೊರಟೆವು. ಚಿಕ್ಕಮ್ಮನ ಮನೆಯಲ್ಲಿ ಸ್ವಲ್ಪ ಹೊತ್ತು ಇದ್ದು, ಅವರ ಮನೆಯಿಂದ ಹೊರಡುವ ಸ್ವಲ್ಪ ಮೊದಲು ನಾವು ಕತ್ತಲಲ್ಲಿ ಕಂಡ ದೆವ್ವದ ವಿಷಯ ಪ್ರಸ್ತಾಪಿಸಿದೆವು. ಚಿಕ್ಕಪ್ಪ ಸಣ್ಣ ನಗು ನಕ್ಕು 'ಓ ಜಾನಕಿನ್ನ ನೋಡಿದ್ರಾ?' ಅಂದರು. ಅಯ್ಯೊ ಕರ್ಮವೇ ಇಲ್ಲಿನವರು ದೆವ್ವಕ್ಕೂ ಒಂದು ಹೆಸರಿಡುತ್ತಾರೆಯೆ? ಅಥವ ಆ ದೆವ್ವ ಜಾನಕಿ ಅನ್ನುವ ಹೆಣ್ಣುಮಗಳ್ದೇ ಇರಬೇಕು ಅಂತ ನಾನು ಅಂದಾಜಿಸಿದೆ.    ಅವರು ಮುಂದುವರಿಸಿ "ಅವಳು ಯಕ್ಷಗಾನದ ಹಾಡುಗಳನ್ನು ತುಂಬಾ ಚೆನ್ನಾಗಿ ಹಾಡ್ತಾಳೆ" ಅಂದ್ರು. ದೆವ್ವವನ್ನು ನೋಡಿಯೇ ನಾವು ಕಂಗಾಲಾಗಿದ್ದರೆ ಆ ದೆವ್ವದ ಕಂಠದಿಂದ ಯಕ್ಷಗಾನದ ಹಾಡು ಕೇಳಿ ಆಸ್ವಾದಿಸಿದ್ದ ಚಿಕ್ಕಪ್ಪನ ಧೈರ್ಯಕ್ಕೆ ನಾನು ತಲೆದೂಗಿದೆ!
"ದೆವ್ವಾನೂ ಹಾಡ್ತಾವೇನ್ರೀ?" ಅಂತ ನಾನು ಮೂಗಿನ ಮೇಲೆ ಬೆರಳಿಟ್ಟು ಕೇಳುತ್ತಿದ್ದರೆ, ಚಿಕ್ಕಪ್ಪ ಗಹಗಹಿಸಿ ನಕ್ಕು "ಅದ್ಯಾವ ದೆವ್ವ ಮಾರಾಯ. ಅವಳೊಬ್ಬ, ಸಲ್ಪ ಬುದ್ಧಿ ಸ್ಥೀಮಿತದಲ್ಲಿಲ್ಲದ ಹೆಣ್ಣುಮಗಳು. ರಾತ್ರಿಯಲ್ಲಾ ಹಿಂಗೇ ಅಡ್ಡಾಡ್ತಿರ್ತಾಳೆ. ಒಂದು ಬೆಂಕಿಯ ಅವಘಡದಲ್ಲಿ ಅವಳ ಮುಖದ ಒಂದು ಭಾಗ ಸುಟ್ಟಿದೆ. ಅದಕ್ಕೆ ನಿಮಗೆ ಕತ್ತಲಲ್ಲಿ ಆ ತರಹ ಕಂಡಿದ್ದು" ಅಂದಾಗ. ನನಗೆ ನಗಬೇಕೋ ಅಳಬೇಕೊ ತಿಳಿಯದಾಗಿ "ನಾನ್ ಹೇಳ್ದೆ ಚಿಕ್ಕಪ್ಪ, ಅದು ದೆವ್ವ ಅಲ್ಲ ಅಂಥೇಳಿ. ಇವರೆಲ್ಲ ಸುಮ್ ಸುಮ್ನ ಹೆದರಿ ಕಂಗಾಲಾಗಿದ್ರು" ಅಂದು …. "ನಡ್ರೀ ಹೊಗೋಣ, ಬೆಂಗಳೂರು ಮುಟ್ಲಿಕ್ಕೆ ತಡಾ ಆಗ್ತದ" ಅಂತ ಅಲ್ಲಿಂದ ಕಾಲು ಕಿತ್ತೆ! 
ದಾರಿಯಲ್ಲಿ ಯೋಚಿಸುತ್ತಿದ್ದೆ, ಅಕಸ್ಮಾತ್ ಆ ಹೆಣ್ಣುಮಗಳು ಅವತ್ತು ರಾತ್ರಿ ಯಕ್ಷಗಾನದ ಪದಗಳನ್ನು ನಮ್ಮೆದುರು ಹಾಡಿದ್ದರೆ ನಮ್ಮ ಗತಿ ಏನಾಗುತ್ತಿತ್ತು??!

Tuesday, July 8, 2014

ದೆವ್ವದ ಮನೆ

(ಪಂಜುದಲ್ಲಿ ಪ್ರಕಟವಾಗಿತ್ತು  http://www.panjumagazine.com/?p=7746)

(ಇದು ನನ್ನ ತಂದೆ ಶಶಿಕಾಂತ ಕುರ್ತಕೋಟಿ ಅವರಿಗೆ ಆದ ಒಂದು ಅನುಭವ, ಅವರೇ ಹೇಳಿದ್ದು. ಮೂಲ ಕತೆಗೆ ಧಕ್ಕೆ ಬರದಂತೆ, ಓದಿಸಿಕೊಂಡು ಹೋಗಲಿ ಅಂತ ಸಲ್ಪ ಮಸಾಲೆ ಬೆರೆಸಿದ್ದೇನೆ. ಅದು ಅಜೀರ್ಣಕ್ಕೆ ಕಾರಣವಾಗಲಿಕ್ಕಿಲ್ಲವೆಂಬ ನಂಬಿಕೆ ನನ್ನದು!)

ಕಣ್ಣು ತೆರೆದಾಗ ನಾನು ಆಸ್ಪತ್ರೆಯಲ್ಲಿದ್ದೆ. ಕೈಗೆ ಸಲಾಯಿನ್ ಹಚ್ಚಿದ್ದರು. ನನ್ನ ಹೃದಯದ ಬಡಿತ ನನಗೆ ಸ್ಪಷ್ಟವಾಗಿ ಕೇಳುತ್ತಿತ್ತು. ಕಣ್ಣಿಗೆ ಕತ್ತಲೆ ಬಂದಿದ್ದಷ್ಟೆ ನನಗೆ ನೆನಪು. ಆಮೇಲೇನಾಯ್ತು? ಯಾರು ನನ್ನನ್ನಿಲ್ಲಿ ತಂದದ್ದು ಒಂದು ನನಗೆ ಅರ್ಥವಾಗುತ್ತಿಲ್ಲ.
"ಸರ್ ಕಣ್ಣು ತಗದ್ರು!" ಅಂತ ನನ್ನ ನೆಚ್ಚಿನ ಶಿಷ್ಯ ಪ್ರಮೋದ ಓಡೋಡಿ ನನ್ನ ಬಳಿ ಬಂದಿದ್ದ. ಅವನ ಜೊತೆಗೆ ಉಳಿದಿಬ್ಬರು ಶಿಷ್ಯಂದಿರೂ ಇದ್ದರು.
"ಸರ್ ಏನೂ ಚಿಂತಿ ಮಾಡಬ್ಯಾಡ್ರೀ ಎಲ್ಲಾ ಸರಿ ಹೋಗ್ತದ." ಪ್ರಮೋದ ಹೇಳಿದ.
"ಸರಿ ಹೋಗ್ಲಿಕ್ಕೆ ಆಗಿದ್ದಾದ್ರೂ ಏನು?"
"ಸರ್ ನಾನು ಮತ್ತ ಪ್ರಶಾಂತ ರಾತ್ರಿ ನಿಮಗ ಊಟ ಕಟಗೊಂಡು ನಿಮ್ಮ ಮನಿಗೆ ಬಂದ್ವಿ. ಒಳಗ ಬಂದು ನೋಡಿದ್ರ, ನೀವು ಪಡಸಾಲ್ಯಾಗ ಅಂಗಾತ ಬಿದ್ದಿದ್ರಿ. ನನಗ ಘಾಬ್ರಿ ಆತು. ನೀರ್ ಹೊಡದ್ರೂ ನೀವು ಏಳಲಿಲ್ಲ. ಅದಕ್ಕ ದವಾಖಾನಿಗೆ ಕರಕೊಂಡು ಬಂದ್ವಿ. ಪುಣ್ಯಾಕ್ಕ ನಿಮ್ಮ ತಲಬಾಗಿಲ ತಕ್ಕೊಂಡ ಇತ್ತು, ಇಲ್ಲಂದ್ರ ಬಾಗಲಾ ಒಡಿಬೇಕಾಕ್ತಿತ್ತು!" ಒಂದೆ ಉಸಿರಿನಲ್ಲಿ ಹೇಳಿದ. ಅಷ್ಟರೊಳಗೆ ಡಾಕ್ಟರ್ ಬಂದ್ರು.
"ಅವರಿಗೆ ತ್ರಾಸ್ ಕೊಡ್ಬ್ಯಾಡ್ರೀ, ಹೊಗ್ರೀ ಹೊರಗ" ಅಂತ ತಮ್ಮ ವೈದ್ಯಸಹಜ ಕೋಪದಿಂದ ಎಲ್ಲರನ್ನೂ ಹೊರಗೆ ದಬ್ಬಿದರು. ಮತ್ತೊಂದು ನಿದ್ದೆ ಇಂಜೆಕ್ಷನ್ ಕೊಟ್ಟರೇನೊ ಹಾಗೇ ನಿದ್ದೆಗೆ ಜಾರಿದ್ದೆ. 
ಮತ್ತೆ ಎಚ್ಚರವಾದಾಗ ಮುಂದೆ ಸೆರಗಿನಿಂದ ಕಣ್ಣೊರೆಸಿಕೊಳ್ಳುತ್ತ ಅಮ್ಮ ಕೂತಿದ್ದಳು. ನನಗೆ ಹಿಂಗಾಗಿದ್ದು ಅವಳಿಗೆ ಯಾರೊ ತಿಳಿಸಿರಬೇಕು. ಅವಳಿರುತ್ತಿದ್ದದ್ದು ಹುಬ್ಬಳ್ಳಿಯ ನನ್ನ ಅಣ್ಣನ ಮನೆಯಲ್ಲಿ. ನಾನು ಎಚ್ಚರಾಗಿದ್ದು ನೋಡಿ ಕಕ್ಕುಲತೆಯಿಂದ ವಿಚಾರಿಸಿದಳು "ಹೆಂಗಿದ್ದೀಪಾ ಈಗ? ನನಗಂತೂ ಭಾಳ ಕಾಳಜಿಯಾಗಿತ್ತು." ಮತ್ತೆ ಅವಳ ಕಣ್ಣುಗಳು ಗಂಗಾ ಯಮುನೆಗಳಾದವು!
"ನಾನು ಮೊದ್ಲ ಬಡಕೊಂಡೆ, ಆ ಸುಡಗಾಡು ಮನ್ಯಾಗ ನೀನು ಇರೂದು ಬ್ಯಾಡಾ ಅಂತ. ಅಲ್ಲಿ ದೆವ್ವದ ಕಾಟ ಅದ ಅಂತ ಗೊತ್ತಾದ ಮ್ಯಾಲೂ ಅಲ್ಲೇ ಇದ್ದೀ ಅಂದ್ರ ನಿನಗ ಹುಂಬ ಧೈರ್ಯ ಭಾಳ ಅದ ಬಿಡು. ನನ್ನ ಮಾತು ಎಂದ ಕೇಳಿ ನೀನು." ಅಂತ ತನ್ನ ಕೋಪ ತೋರಿದಳು. ಆ ಕೋಪದಲ್ಲೂ ಮಾತೃ ಸಹಜವಾದ ಕಾಳಜಿ, ಪ್ರೀತಿ ಇತ್ತು. ಹೌದು ಅದು ದೆವ್ವದ ಕಾಟ ಇರುವ ಮನೆ ಅಂತ ಆವಾಗ್ಲೆ ಒಬ್ಬ ಹೇಳಿದ್ದ. ಹಿಂದಿನ ಘಟನೆಗಳು ನಿಧಾನವಾಗಿ ನೆನಪಿನಂಗಳದಲ್ಲಿ ಬಿಚ್ಚಿಕೊಳ್ಳತೊಡಗಿದವು.
ಅವತ್ತು ಆ ಊರಿಗೆ ಬಂದಿದ್ದು ನನ್ನ ಜೀವನದಲ್ಲಿಯೇ ನನಗೆ ಪ್ರಥಮ ಬಾರಿಗೆ ನೌಕರಿ ಸಿಕ್ಕಾಗ. ಇತ್ತ ಪಟ್ಟಣವೂ ಅಲ್ಲದ ಹಳ್ಳಿಯೂ ಅಲ್ಲದ ಅದು ಒಂದು ದೊಡ್ಡ ಗ್ರಾಮ ಅನ್ನಬಹುದಾದಂತಹ ಊರು. ಅಲ್ಲೊಂದು ಕಾಲೇಜು ಇತ್ತು. ಅಲ್ಲಿ ನನಗೆ ಅಧ್ಯಾಪಕನ ಕೆಲಸ. ಊರಿನ ಹೆಸರು ಯಮನೂರು.  ಹೆಸರೇ ಒಂಥರ ವಿಚಿತ್ರವಾಗಿದ್ದರೂ ಅಲ್ಲಿಯ ಜನರು ತುಂಬಾ ಒಳ್ಳೆಯವರೆನಿಸಿದರು. ಮೊದಲು ಸ್ವಲ್ಪ ದಿನಗಳ ಮಟ್ಟಿಗೆ ಅಂತ ಪ್ರಿನ್ಸಿಪಾಲರ ಔಟ್ ಹೌಸಿನಲ್ಲೇ ಇದ್ದರೂ, ನನ್ನದು ಅಂತ ಒಂದು ಬೇರೆ ಮನೆ ನೋಡಲೇ ಬೇಕಿತ್ತು. ಈಗ ಒಬ್ಬನೇ ಇದ್ದದ್ದರಿಂದ ಆ ಔಟ್ ಹೌಸ್ ಸಾಲುತ್ತಿತ್ತು. ಆದರೆ ಅಮ್ಮನ ಕರೆದುಕೊಂಡು ಬರುವ ವಿಚಾರವೂ ಇತ್ತಲ್ಲದೇ, ಮದುವೆಯಾಗುವ ಕನಸೂ ಕಾಣುತ್ತಿದ್ದೆನಾದ್ದರಿಂದ ಸ್ವಲ್ಪ ದೊಡ್ಡ ಮನೆಯ ಅವಶ್ಯಕತೆ ಇತ್ತು. ಮನೆ ಹುಡುಕಾಟ ನಡೆದಿತ್ತು. ಒಬ್ಬನೇ ಇದ್ದುದರಿಂದ ಒಂದಿಷ್ಟು ಜನ ಶಿಷ್ಯಂದಿರು ಮನೆಗೆ ಪಾಠ ಹೇಳಿಸಿಕೊಳ್ಳುವುದಕ್ಕೆ ಬರುತ್ತಿದ್ದರು. ಆಗಾಗ ನನಗೆ ಅಂತ ಊಟ ತಿಂಡಿ ಕಟ್ಟಿಸಿಕೊಂಡು ಬರುತ್ತಿದ್ದರು. ಹೀಗೆ ತಮ್ಮ ಗುರುಗಳ ಸೇವೆಯಲ್ಲಿ ನಿರತರಾಗಿದ್ದರು. ನಾನೂ ಒಬ್ಬಂಟಿ ಯಾಗಿದ್ದೆನಾದ್ದರಿಂದ, ಅವರು ನನಗೆ ಒಳ್ಳೆಯ ಜೊತೆಯಾಗಿದ್ದರು. ಅವರಲ್ಲಿಯೇ ಪ್ರಮೋದ ತುಂಬಾ ಹಚ್ಚಿಕೊಂಡು ನನ್ನ ಪ್ರೀತಿಯ ಶಿಷ್ಯ ಅನ್ನುವ ಪಟ್ಟ ಅಲಂಕರಿಸಿದ್ದ! ಹೀಗೆ ಎರಡು ಮೂರು ತಿಂಗಳು ಕಳೆದಿರಬೇಕು. ಒಂದು ದಿನ ಪ್ರಮೋದ ಕಾಲೇಜು ಬಳಿ ಸಿಕ್ಕಾಗ,
"ಸರ್ ಒಂದು ಮಸ್ತ ಮನಿ ನೋಡಿಕೊಂಡ್ ಬಂದೀನಿ. ಭಾರಿ ಧೊಡ್ಡ ಮನಿ. ಬಾಡಿಗಿ ಭಾಳ ಕಡಿಮಿ."
"ದೊಡ್ಡ ಮನಿ ಅಂತೀದಿ, ಬಾಡಿಗಿ ಕಡಿಮಿ ಹೆಂಗ ಆಗ್ತದೋ. ಸರ್ಯಾಗಿ ಕೇಳೀದ್ಯೊ ಇಲ್ಲೊ?"
"ಮತ್ತ ಮತ್ತ ಕೇಳ್ಕೊಂಡ್ ಬಂದಿನ್ರೀ ಸರ್. ಅಡ್ವಾನ್ಸೂ ಬ್ಯಾಡ ಅಂತ ಅಂದ್ರು" ನನಗ್ಯಾಕೋ ಸಂಶಯ ಇನ್ನೂ ಜಾಸ್ತಿ ಆಯ್ತು. ಏನೇ ಆಗ್ಲಿ ಮನೆ ನೋಡ್ಕೊಂಡು ಬಂದು ಅಮೇಲೆ ನಿರ್ಧಾರ ತೆಗೆದುಕೊಂಡ್ರಾಯ್ತು ಅಂದ್ಕೊಂಡು "ಆಗ್ಲಿ ಇವತ್ತ ಮದ್ಯಾಹ್ನ ಮನಿ ನೋಡ್ಕೊಂಡು ಬರೋಣ" ಅಂತ ನನ್ನ ಮುಂದಿನ ಪಿರಿಯಡ್ ಗೆ ಟೈಮ್ ಆಗಿದ್ದು ಗಮನಿಸಿ ಕ್ಲಾಸ್ ಗೆ ತೆರಳಿದೆ. 
"ಬರ್ರೀ ಮಾಸ್ತರ … ಒಳಗ ಬರ್ರೀ" ಅಂತ ಸಿಕಾಪಟ್ಟೆ ಮರ್ಯಾದೆಯಿಂದ ಕರೆದ ಮನೆಯ ಮಾಲಿಕರು ಕೆಟ್ಟವರಂತೇನು ಕಾಣ್ಲಿಲ್ಲ. ಪ್ರಮೋದನೂ ಒಟ್ಟಿಗಿದ್ದುದರಿಂದ, ಅವನು ಮೊದಲೇ ಅವರಿಗೆ ಭೆಟ್ಟಿಯಾಗಿದ್ದರಿಂದ ನಾವು ಯಾಕೆ ಬಂದಿದ್ದು ಅಂತ ಅವರಿಗೆ ಗೊತ್ತಾಗಿ ಹೋಗಿತ್ತು. "ಚಾ ಕುಡುದು ಮನಿ ನೋಡ್ಲಿಕ್ಕೆ ಹೋಗೋಣಂತ" ಅಂದರು. ಹಾಗೆ ಅದು ಇದು ಮಾತನಾಡುತ್ತಾ ನನ್ನ ಬಗ್ಗೆ ಸಕಲ ಮಾಹಿತಿಗಳನ್ನೂ ಕಲೆ ಹಾಕಿದರು. ಬಹುಶಃ ಯಾವುದೋ ಕನ್ಯಾಮಣಿ ಇನ್ನೂ ಮದುವೆಯಾಗದೆ ಉಳಿದಿತ್ತೇನೊ! ಚಾ ಕುಡಿದು ಮನೆ ನೋಡಲು ಹೊರಟೆವು. ಮಾಲೀಕರ ಮನೆಯಿಂದ ಸ್ವಲ್ಪ ದೂರ ನಡಕೊಂಡು ಹೋದರೆ ಸಿಕ್ಕಿದ್ದೆ ಆ ಮನೆ. ಹೊರಗಡೆಯಿಂದ ನೋಡಿದಾಗಲೇ ಗೊತ್ತಾಗುತ್ತಿತ್ತು, ಅದೊಂದು ದೊಡ್ಡ ಮನೇನೆ ಅಂತ. ಇಷ್ಟು ದೊಡ್ಡ ಮನೆಗೆ ಕಡಿಮೆ ಬಾಡಿಗೆ ಅಂತ ಪ್ರಮೋದ ಹೇಳಿದ್ದ. ಅವನ್ಯಾಕೋ ಸರಿಯಾಗಿ ಕೇಳಿಸಿಕೊಂಡಿರಲಾರ ಅಂತ ನನಗೆ ಸಂಶಯ ದಟ್ಟವಾಯ್ತು. ಒಂದು ವಿಶಾಲವಾದ ವರಾಂಡ. ಎರಡು ದೊಡ್ಡದೇ ಅನ್ನಿಸುವ ಕೋಣೆಗಳು. ಚೊಕ್ಕದಾದ ಅಡುಗೆ ಮನೆ, ಬಚ್ಚಲು ಮನೆ. ಒಳಗಡೆಯೇ ನೀರು ಕಾಯಿಸಿಕೊಳ್ಳಲು ವ್ಯವಸ್ಥೆ. ಹಳೆಯ ಕಾಲದ ಮಣ್ಣು ಗಾರೆಯಿಂದ ಕಟ್ಟಿದ ಮನೆಯಾದ್ದರಿಂದ ಮೇಲೆ ಜಂತಿ ತೊಲೆಗಳಿದ್ದವು. ಹೊರಗೆ ಅಷ್ಟೊಂದು ಬಿಸಿಲಿದ್ದರೂ ಮನೆ ಒಳಗೆ ತುಂಬಾ ತಣ್ಣಗಿತ್ತು. ಆದರೆ ಹಿತ್ತಲು ಇರಲಿಲ್ಲ. ಯಾಕೆಂದರೆ ಆ ಮನೆಯ ಹಿಂದೆ ಮನೆಯ ಎತ್ತರಕ್ಕೆ ಒಂದು ದಿಬ್ಬ ಇತ್ತು. ಆ ದಿಬ್ಬದ ಮೇಲೆ ಒಂದಿಷ್ಟು ಮನೆಗಳಿದ್ದವು. ಒಟ್ಟಿನಲ್ಲಿ ಮನೆ ನನಗಂತೂ ಇಷ್ಟವಾಯ್ತು. ಮದುವೆಯಾಗಿ ಹೆಂಡತಿಯೊಬ್ಬಳು ಮನೆಗೆ ಬಂದು, ಅಮ್ಮನ ಕರೆಸಿಕೊಂಡರೂ ಎರಡು ಕೋಣೆಗಳು ಸಾಕಾಗುತ್ತಿತ್ತು. ಹೊರಗೆ ಬಂದವನೇ ಎಷ್ಟು ಬಾಡಿಗೆ ಅಂತ ಅಳಕುತ್ತಲೇ ಕೇಳಿದವನಿಗೆ ಅವರು ಹೇಳಿದ್ದು ತುಂಬಾ ಕಡಿಮೆ ಬಾಡಿಗೇನೆ! ಅಡ್ವಾನ್ಸು ಕೂಡ ಬೇಡ ಅಂದರು. ಯಾಕೆ ಅಂದ್ರೆ "ನೀವು ವಿದ್ಯಾ ಹೇಳಿ ಕೊಡೊ ಗುರುಗಳು. ನಿಮ್ಮ ಮ್ಯಾಲೆ ಭಾಳ ಗೌರವ ಅದ ನಮಗ. ನಿಮ್ಮ ಹತ್ರ ನಾವು ಜಾಸ್ತಿ ದುರಾಸೆ ಮಾಡೋದು ಒಳ್ಳೇದಲ್ಲ." ಅಂತೇನೇನೋ ದೊಡ್ಡ ಮಾತುಗಳನ್ನಾಡಿ ಬಿಟ್ಟರು ಆ ಪುಣ್ಣ್ಯಾತ್ಮ. ಸರಿ ನನಗೂ ಸಣ್ಣ ಪಗಾರ. ಆಗಿದ್ದೆಲ್ಲಾ ಒಳ್ಳೇದಕ್ಕೇ ಅಂತ ನಾನೂ ಆಗ್ಲಿ ಅಂದೆ. ಆದರೂ ಇಷ್ಟೊಂದು ಒಳ್ಳೆಯ ಮನೆಗೆ ಇನ್ನೂ ಯಾರೂ ಬಾಡಿಗೆಗೆ ಬಂದಿಲ್ಲದಿರುವುದೇ ಒಂದು ಆಶ್ಚರ್ಯವಾಗಿತ್ತು. ಬಹುಶಃ ನನ್ನಂಥ ಒಳ್ಳೆಯವರು ಯಾರೂ ಸಿಕ್ಕಿಲ್ಲದಿರಬಹುದೇನೋ ಎಂದು ನನಗೆ ನನ್ನ ಮೇಲೆ ಒಂದು ಬಗೆಯ ಅಭಿಮಾನ ಉಂಟಾಯ್ತು.
ಪ್ರಮೋದನ ಮುಖದಲ್ಲಿ, ತನ್ನ ಗುರುವಿಗೊಂದು ಚಂದದ ಮನೆ ಗೊತ್ತು ಮಾಡಿಸಿಕೊಟ್ಟ ನಿರಂಬಳತೆ ಇತ್ತು.
"ಸರ್ರ ಮುಂದಿನ ಸೋಮವಾರ ಚೊಲೋ ದಿನ ಅದರೀ. ಹಾಲು ಉಕ್ಕಿಸಿ ಬಿಡೋಣು" ಅಂತ ಖುಷಿಯಿಂದ ಹೇಳಿದ. ನನಗೂ ಅದು ಸರಿ ಅನಿಸಿತ್ತು. ಭ್ರಹ್ಮಚಾರಿಯಾಗಿದ್ದ ನನ್ನ ಬಳಿ ಹೇಳಿಕೊಳ್ಳುವಂಥ ಸಾಮಾನು ಸರಂಜಾಮುಗಳಿರಲಿಲ್ಲ. ಒಂದು ಗಾದಿ, ಹಾಸಿಕೊಳ್ಳಲು, ಹೊದೆದುಕೊಳ್ಳಲು ಒಂದೆರಡು ಚಾದರು, ಕೆಲವು ಪಾತ್ರೆ ಪಗಡುಗಳು, ಬಕೇಟು – ಚೆಂಬು, ಒಂದಿಷ್ಟು ಪುಸ್ತಕಗಳು ಇವಿಷ್ಟೇ ನನ್ನ ಜಗತ್ತು. ಅದನ್ನು ಒಂದು ಜಟಕಾ ಗಾಡಿಯಲ್ಲಿ ಹೇರಿಕೊಂಡು ಒಂದೇ ಸಾರಿಗೆಯಲ್ಲಿ ಸಾಗಿಸಿಬಿಡುವಷ್ಟು ದೊಡ್ಡ ಜಗತ್ತು! 
ಮಾಲಕರಿಗೆ, ನನಗೆ ಮನೆ ಒಪ್ಪಿಗೆ ಅಂತ ಹೇಳಿ ನಾನು ಪ್ರಮೋದ ಬರ್ತಾ ಇದ್ವಿ. ವಾಪಸ್ಸು ನಾವು ಹೋಗುವ ದಾರಿಯಲ್ಲೇ ಆ ಮನೆಯಿತ್ತು. ಮತ್ತೊಮ್ಮೆ ಕಣ್ತುಂಬಾ ನೋಡಿಕೊಂಡೆ. ಹಾಗೆ ಸ್ವಲ್ಪ ಮುಂದೆ ಹೋಗುತ್ತಲೇ ಹಿಂದಿನಿಂದ "ನಮಸ್ಕಾರ್ರೀ ಸಾವ್ಕಾರ್ರ" ಅನ್ನು ವ ದನಿ ಕೇಳಿ ಇಬ್ಬರೂ ನಿಂತೂ ಹಿಂತಿರುಗಿ ನೋಡಿದೆವು. ಒಬ್ಬ ಧೊತ್ರ, ದೊಗಳೆ ಅಂಗಿ ಹಾಕಿಕೊಂಡವನೊಬ್ಬ ನಮಗೆ ನಮಸ್ಕರಿಸಿದ. ನೋಡೋಕೆ ರೈತನ ಥರ ಕಾಣುತ್ತಿದ್ದ. ಪ್ರತಿಯಾಗಿ ನಮಸ್ಕಾರ ಮಾಡಿ, ಏನು ಎಂಬಂತೆ ನೋಡಿದೆ.
"ನನ್ನ ಹೆಸ್ರು ನಿಂಗಪ್ಪ ಅಂತ ರೀ. ಇಲ್ಲೇ ನಿಮ್ಮ ಮನಿ ಹಿಂದ ದಿಬ್ಬದ ಮ್ಯಾಲೆ ನನ್ನ ಮನಿ ಐತಿ. ನೀವ ಏನ್ರೀ ಈ ಮನಿಗೆ ಬಾಡಿಗಿ ಬರೋವ್ರು?"
"ಹೌದು, ಯಾಕ?" ನನಗೆ ಈತ ಸ್ವಲ್ಪಅಧಿಕ ಪ್ರಸಂಗಿ ಎನಿಸಿದ.
"ಯಾಕ್ರೀ ಸಾವಕಾರ್ರ, ನಿಮಗ ಜೀವನ ಬ್ಯಾಸರಾ ಅಗೈತೇನು? ನೋಡಾಕ ಇನ್ನೂ ಭಾಳ ಸಣ್ಣವ್ರು ಕಾಣ್ತೀರಿ" ಅಂದಾಗ, ನನಗೆ ಸಿಕ್ಕಾಪಟ್ಟೆ ಕೋಪ ಬಂತು.
"ಏನ್ ಹಂಗ ಮಾತಾಡಿದ್ರ! ಏನಂತ ಬಿಡಿಸಿ ಹೇಳು" ಅಂತ ಸ್ವಲ್ಪ ಕಡಕ್ ಆಗಿಯೇ ಕೇಳಿದೆ.
"ಸಿಟ್ಟಿಗೇಳಬ್ಯಾಡ್ರೀ… ಈ ಮನ್ಯಾಗ ಒಬ್ಬಾಕಿ ಹೆಣ್ಣ ಮಗಳು ಉರುಲು ಹಾಕ್ಕೊಂಡು ಸತ್ತಿದ್ಲು. ಅಕಿ ದೆವ್ವಾ ಆಗ್ಯಾಳ. ಈ ಮನೀಗೆ ಬಂದವ್ರಿಗೆಲ್ಲಾ ಕಾಡತಾಳ. ಈ ಮನಿಗೆ ಯಾರ ಬಂದ್ರೂ ಒಂದು ತಿಂಗಳದೊಳಗ ಖಾಲಿ ಮಾಡತಾರ. ಅಮವಾಸಿಗಂತೂ ಆ ದೆವ್ವದ ಕಾಟ ಇನ್ನೂ ಜಾಸ್ತಿ. ನಿಮ್ಮ ಒಳ್ಳೆದಕ್ಕ ಅಂತ ಹೇಳಿದೇರಿ, ತಪ್ಪು ತಿಳ್ಕೋಬ್ಯಾಡ್ರೀ" ಅಂತ ಸ್ವಲ್ಪ ಜಾಸ್ತಿನೇ ವಿನಯ ಪ್ರದರ್ಶಿಸಿದ.  ನನಗೆ ದೆವ್ವ ಭೂತಗಳಲ್ಲಿ ವಿಶ್ವಾಸವಿರದಿದ್ದರೂ ಅವನ ಮಾತು ಕೇಳಿ ಸ್ವಲ್ಪ ಮಟ್ಟಿಗೆ ಗಾಬರಿ ಆಯಿತು. ನಾನು ಪ್ರಮೋದ ಒಬ್ಬರಿಗೊಬ್ಬರು ಮುಖ ನೋಡಿಕೊಂಡೆವು.
"ನೋಡೇಬಿಡೋಣ ಆ ದೆವ್ವಕ್ಕ ಎಷ್ಟು ಧೈರ್ಯ ಅದ ಅಂತ" ಅಂದೆನಾದರೂ ಒಳಗೊಳಗೆ ಸ್ವಲ್ಪ ಅಳುಕು ಇತ್ತು. ಅದಕ್ಕೇ ಇರಬೇಕು ಮಾಲೀಕರು ಇಷ್ಟು ಕಡಿಮೆ ಬಾಡಿಗೆಗೆ ಮನೆಯನ್ನು ನನಗೆ ಕೊಡುತ್ತಿರುವುದು ಅಂತ  ಖಾತ್ರಿಯಾಗಿತ್ತು.
"ನಾ ಹೇಳೂದು ಹೇಳೀನಿ, ಇದರ ಮ್ಯಲೆ ನಿಮ್ಮ ಮರ್ಜಿ" ಅಂತ ಹೇಳಿ ನಿಂಗಪ್ಪ ಅಲ್ಲಿಂದ ಜಾಗ ಖಾಲಿ ಮಾಡಿದ. ಪ್ರಮೋದ "ನೀವೇನೂ ಹೆದರಬ್ಯಾಡ್ರೀ ಸರ್ರ ಆ ದೆವ್ವಾನ ಒಂದು ಕೈ ನೋಡೇಬಿಡೋಣ" ಅಂದಾಗ ನನಗೂ ಸ್ವಲ್ಪ ಧೈರ್ಯ ಬಂತು.

ಅಂತೂ ಸೋಮವಾರ ಬಂದೇ ಬಿಡ್ತು. ಹೊಸ ಮನೆಗೆ ಹೋಗಿ ಆಯ್ತು. ಹಾಲು ಉಕ್ಕಿಸಿದ್ದೂ ಆಯ್ತು. ಆ ದೊಡ್ಡ ಮನೆಯಲ್ಲಿ ನನ್ನ ಚಿಕ್ಕ ಸಂಸಾರದಿಂದಾಗಿ ಮನೆಯಲ್ಲಾ ಖಾಲಿ ಖಾಲಿ ಅನಿಸುತ್ತಿತ್ತು. ಒಂದಿಷ್ಟು ಕುರ್ಚಿಗಳ ಅವಶ್ಯಕತೆಯೂ ಇದೆ ಅನ್ನಿಸಿತು. ಹೀಗೇ ಶುರುವಾಗಿತ್ತು ನನ್ನ ’ಸನ್ಯಾಸಿ ಸಂಸಾರ’! ಪ್ರಮೋದ ಹಾಗೂ ಇನ್ನೊಬ್ಬ ಶಿಷ್ಯ ದಿನಾಲೂ ನನ್ನ ಜೊತೆ ಮಲಗಲು ಬರುತ್ತಿದ್ದರು. ಜೊತೆಗೆ ಊಟವನ್ನೂ ತರುತ್ತಿದ್ದರು. ಹೀಗಾಗಿ ದೆವ್ವಗಳ ಭಯ ಅಷ್ಟಾಗಿ ಕಾಡಲಿಲ್ಲ. ಆ ನಿಂಗಪ್ಪನ ಮಾತು ತಲೆಯಲ್ಲಿ ಆಗಾಗ ಸುಳಿಯುತ್ತಿತ್ತು. ಅದರಲ್ಲೂ ಈ ಅಮವಾಸ್ಯೆಯಲ್ಲಿ ನೋಡಿ ಆ ದೆವ್ವದ ಕರಾಮತ್ತು ಅಂತ ಅವನು ಹೇಳಿದ್ದು ಇನ್ನೂ ಕಿವಿಯಲ್ಲಿ ಗುಂಯ್ಯ್ ಗುಡುತ್ತಿತ್ತು. ಈ ನಡುವೆ ಅಮ್ಮ ಹೊಸ ಮನೆ ನೋಡುವುದಕ್ಕೆ ಅಂತ ಒಂದೆರಡು ದಿನ ಬಂದವಳು ದೆವ್ವದ ಸುದ್ದಿ ಕೇಳಿ ವಾಪಸ್ಸು ಹುಬ್ಬಳ್ಳಿಗೆ ಹೊರಟು ಹೋದಳು. ಆ ಮನೆಯಲ್ಲಿ ಇರುವುದು ಬೇಡ ಅಂತಲೂ ಎಚ್ಚರಿಸಿದಳು. ನನಗೆಷ್ಟಂದ್ರೂ ಬಿಸಿ ರಕ್ತ. ಆ ದೆವ್ವಗಳ ಕರಾಮತ್ತು ಅನುಭವಿಸುವ ತವಕ! ಅಮವಾಸ್ಯೆಗೆ ಇನ್ನೂ ಮೂರು ದಿನಗಳಷ್ಟೇ ಬಾಕಿ ಇತ್ತು. 
ಅವತ್ತು ಅಮವಾಸ್ಯೆಯ ದಿನ ರಾತ್ರಿ ನಾನೊಬ್ಬನೇ ಮನೆಯಲ್ಲಿ ಏನೋ ಓದುತ್ತ ಕುಳಿತಿದ್ದೆ.  ಬೇಸಿಗೆಯ ರಾತ್ರಿಯಾದ್ದರಿಂದ ತಲಬಾಗಿಲು ತೆರೆದುಕೊಂಡೇ ಇಟ್ಟಿದ್ದೆ. ತಂಪಾದ ಗಾಳಿ ಹಿತವಾಗಿತ್ತು. ಅಷ್ಟರಲ್ಲೇ ಕರೆಂಟು ಹೋಗಬೇಕೆ. ಪ್ರಮೋದ ಇನ್ನೂ ಬಂದಿರಲಿಲ್ಲ. ಕಂದೀಲು ಹಚ್ಚಿ ಹಾಗೇ ಕೂತಿದ್ದವನಿಗೆ ಒಮ್ಮಿಂದೊಮ್ಮೆಲೆ ಗೆಜ್ಜೆಯ ಸಪ್ಪಳ ಕೇಳತೊಡಗಿತು. ಎದೆ ಝಲ್ ಅಂತು. ಯಾರೋ ನಡೆದಾಡಿದಂತೆಯೂ ಅನಿಸತೊಡಗಿತು. ಅದು ನನ್ನ ಭ್ರಮೆ ಇರಬಹುದೆ ಎಂದುಕೊಂಡವನಿಗೆ ಮತ್ತೆ ಮತ್ತೆ ಆ ಸಪ್ಪಳ ಕೇಳಿ ದುಗುಡ ಹೆಚ್ಚಾಯ್ತು. ನಿಂಗಣ್ಣ ಹೇಳಿದ್ದು ನಿಜವೇ ಅನ್ನಿಸತೊಡಗಿತು! ಅದರ ಜೊತೆಗೆ ಒಂದು ಹೇಣ್ಣುಮಗಳು ಗುಸು ಗುಸು ಮಾತಾಡುವ ಶಬ್ಧ ಸ್ಪಷ್ಟವಾಗಿ ಕೇಳತೊಡಗಿತು. ನಾನು ಬೆವರತೊಡಗಿದ್ದೆ. ಆದರೂ ಧೈರ್ಯ ಮಾಡಿ "ಯಾರದು" ಅಂತ ಜೋರಾಗಿ ಕೂಗಿದೆ. ಅಷ್ಟರಲ್ಲೇ ನನ್ನ ತಲೆಗೆ ಹಿಂದಿನಿಂದ ಯಾರೋ ಹೊಡೆದಂತಾಗಿ ಕಣ್ಣಿಗೆ ಕತ್ತಲೆ ಬಂದಿದ್ದೊಂದೇ ನೆನಪು. ಕಣ್ಣು ತೆಗೆದದ್ದು ಆಸ್ಪತ್ರೆಯಲ್ಲೇ!
ಮರುದಿನ ಡಾಕ್ಟರು ನಾನು ಆರಾಮ ಆದೆನೆಂದು ಮನೆಗೆ ಕಳಿಸಿದರು. ಪ್ರಮೋದನಿಗೆ ಅವತ್ತು ನಡೆದ ಘಟನೆಯನ್ನು ವಿವರಿಸಿದೆ. ಆತನದೂ ನನ್ನಂತೆಯೇ ಹುಂಬ ಧೈರ್ಯ. ಇವತ್ತಿನಿಂದ ಆ ದೆವ್ವನ ಒಂದು ಕೈ   ನೋಡೆಬಿಡುವ ಅಂತ ಇಬ್ಬರೂ ನಿರ್ಧರಿಸಿದ್ದೆವು. ಅವನ ಜೊತೆಗೆ ಅವನ ಸಹಪಾಠಿ ಪ್ರಶಾಂತನೂ ಬಂದಿದ್ದ. ಊಟ ಮಾಡಿ ದೆವ್ವಗಳಿಗೆ ಕಾಯುತ್ತಾ ಹರಟೆ ಹೊಡೆಯುತ್ತ ಕೂತಿದ್ದೆವು. ಸರಿ ಸುಮಾರು ಅದೇ ಸಮಯಕ್ಕೆ ಮತ್ತದೇ ಗೆಜ್ಜೆಗಳ ಶಬ್ಧ ಕೇಳತೊಡಗಿತು. ಮತ್ತೆ ಹೆಣ್ಣುಮಗಳ ಗುಸು ಗುಸು ಮಾತು. ಮಾತು ಸ್ಪಷ್ಟವಾಗಿರಲಿಲ್ಲವಾದರೂ, ಮಾತನಾಡುತ್ತಿರುವುದು ಸ್ಪಷ್ಟವಾಗಿತ್ತು. ಮೂವರು ಬೆವರತೊಡಗಿದೆವು. ಆದರೂ ಆ ಶಬ್ಧ ಎಲ್ಲಿಂದ ಬರುತ್ತಿದೆಯೆಂದು ಗಮನಿಸಿದಾಗ, ಅದು ಮಾಳಿಗೆಯಿಂದಲೇ ಅಂತ ಗೊತ್ತಾಯ್ತು. ಸ್ವಲ್ಪ ಹೊತ್ತಿಗೆ ಹೆಂಗಸು ಮಾತನಾಡುವ ಶಬ್ಧ ನಿಂತಿತಾದರೂ ಹೆಚ್ಚು ಕಡಿಮೆ ಬೆಳಗಿನವರೆಗೆ ಗೆಜ್ಜೆ ಶಬ್ಧ ಕೇಳುತ್ತಲೇ ಇತ್ತು. ಯಾರಿಗೂ  ಸರಿಯಾಗಿ ನಿದ್ದೆಯೂ ಹತ್ತಲಿಲ್ಲ. 
ಮರುದಿನ, ಇವತ್ತು ಏನೇ ಆಗಲಿ ಮಾಳಿಗೆ ಹತ್ತಿ ನೋಡೆ ಬಿಡೋಣ ಅಂತ ನಿರ್ಧಾರ ಮಾಡಿ ಬಿಟ್ಟೆವು. ಹಳೆ ಮನೆಯಾದ್ದರಿಂದ ಮಾಳಿಗೆ ಹತ್ತಲು ಮೆಟ್ಟಲುಗಳಿರಲಿಲ್ಲ. ಪ್ರಮೋದ ಅವತ್ತು ಸಂಜೆ ಒಂದು ನಿಚ್ಚಣಿಕೆ ವ್ಯವಸ್ಥೆ ಮಾಡಿದ. ಜೊತೆಗೊಂದು ಟಾರ್ಚು ಇಟ್ಟುಕೊಂಡೆವು. ರಾತ್ರಿ ಮತ್ತೆ ದೆವ್ವದ ಚೇಷ್ಟೆಗೆ ಕಾಯತೊಡಗಿದವರಿಗೆ ದೆವ್ವಗಳು ಮೋಸ ಮಾಡಲಿಲ್ಲ! ಕೂಡಲೇ ಹೊರಗೆ ಹೊಗಿ ನಿಚ್ಚಣಿಕೆ ಇಟ್ಟು ಒಬ್ಬೊಬ್ಬರಾಗಿ ನಾನು ಮತ್ತು ಪ್ರಮೋದ ನಿಚ್ಚಣಿಕೆ ಹತ್ತಿ ಮಾಳಿಗೆಯ ಮೇಲೆ ತಲುಪಿದೆವು. ಪ್ರಶಾಂತನಿಗೆ ಕೆಳಗೇ ಇರುವಂತೆ ಸೂಚಿಸಿದ್ದೆವು. ಯಾರಿಗ್ಗೊತ್ತು ನಾವು ಮೇಲೆ ಹೋದಮೇಲೆ ದೆವ್ವ ನಿಚ್ಚಣಿಕೆ ಅಪಹರಿಸಿದರೆ? ಎನ್ನುವುದು ನಮ್ಮ ತರ್ಕವಾಗಿತ್ತು! ಮಾಳಿಗೆಯ ಮೇಲೆ ಹತ್ತಿ ನಿಂತು ಟಾರ್ಚಿನಿಂದ ಅತ್ತಿತ್ತ ಬೆಳಕು ಹರಿಸಿ ನೋಡಿದವರಿಗೆ ದೆವ್ವದ ನೆಲೆ ಕಂಡಿತ್ತು. ಇಬ್ಬರೂ ಒಬ್ಬರನ್ನೊಬ್ಬರು ನೋಡಿ ನಗಲಿಕ್ಕೆ ಶುರು ಮಾಡಿದೆವು. ಅಲ್ಲಿ ಮಾಳಿಗೆಯ ಮೇಲೆ ಒಂದಿಷ್ಟು ಆಡು-ಕುರಿಗಳ ಕಟ್ಟಿದ್ದರು. ಅವು ಅಲುಗಾಡಿದಾಗಲೊಮ್ಮೆ ಅವುಗಳ ಕೊರಳಿಗೆ ಕಟ್ಟಿದ್ದ ಗೆಜ್ಜೆಗಳು ಸದ್ದು ಮಾಡುತ್ತಿದ್ದವು. ಇನ್ನೊ ಸ್ವಲ್ಪ ಮುಂದೆ ಹೋಗಿ ಗಮನಿಸಿದಾಗ ಒಂದಿಷ್ಟು ಹೆಂಗಸರು ನಮ್ಮ ಮನೆಯ ಹಿಂದಿನ ದಿಬ್ಬದ ಮೇಲೆ ಬಹಿರ್ಧೆಶೆಗೆ ಅಂತ ಕೂತವರು ಗಡಿಬಿಡಿಯಿಂದ ಜಾಗ ಕಿತ್ತದ್ದು ನಮ್ಮ ಗಮನಕ್ಕೆ ಬಂತು. ಕೆಳಗಿಳಿದು ಪ್ರಶಾಂತನಿಗೆ ದೆವ್ವದ ಮೂಲ ಹೇಳಿ ಎಲ್ಲರೂ ಸೇರಿ ಬಿದ್ದು ಬಿದ್ದು ನಕ್ಕಿದ್ದಾಯ್ತು. ಅಂತೂ ಅವತ್ತು ನಿರಂಬಳವಾಗಿ ನಿದ್ದೆ ಹೋದೆವು.
ಮರುದಿನ ವಿಚಾರಿಸಲಾಗಿ ಗೊತ್ತಾಗಿದ್ದು ಇಷ್ಟು. ಆ ಕುರಿಗಳು ನಿಂಗಪ್ಪನವು. ಅವನ ಮನೆ ದಿಬ್ಬದ ಮೇಲಿದ್ದುದರಿಂದ ನಮ್ಮ ಮನೆಯ ಮಾಳಿಗೆ ಅವನ ಮನೆಯ ಅಂಗಳಕ್ಕೆ ಸಮಾನವಾಗಿತ್ತು. ಬೆಳಗೆಲ್ಲ ಹೊರಗೆ ಮೇಯಿಸುತ್ತಿದ್ದವನು ರಾತ್ರಿ ಅವುಗಳನ್ನು ಕಟ್ಟಲು ನಮ್ಮ ಮನೆಯ ಮಾಳಿಗೆಯನ್ನು ಉಪಯೋಗಿಸುತ್ತಿದ್ದ. ಅವನ ಮನೆಯಲ್ಲಿ ಬಹಿರ್ದೆಶೆಗೆ ಅಂತ ಸಂಡಾಸು ಇರಲಿಲ್ಲವಾದ್ದರಿಂದ ಮನೆಯ ಮಂದಿ ರಾತ್ರಿ ಆ ದಿಬ್ಬದ ಬದಿಯೇ ತಮ್ಮ ಕ್ರಿಯೆಯನ್ನು ಮುಗಿಸುತ್ತಿದ್ದರು. ಹಾಗೆ ಕೂತಾಗ ತಮ್ಮೊಳಗೇ ಗುಸು ಗುಸು ಮಾತಾಡುತ್ತಿದ್ದರು. ಆ ಮನೆಗೆ ಯಾರದರೂ ಬಾಡಿಗೆ ಬಂದರೆ ಇದಕ್ಕೆಲ್ಲ ತಡೆಯಾಗುವುದೆಂದು ಹೀಗೆ ಎಲ್ಲರಿಗೂ ಹೆದರಿಸುತ್ತಿದ್ದನವನು. ಗೆಜ್ಜೆಯ ಶಬ್ಧ ಹಾಗೂ ಹೆಂಗಸರು ಮಾತನಾಡುವ ಶಬ್ಧ ಅವನು ಹೇಳುವುದಕ್ಕೆ ಪೂರಕವಾಗಿದ್ದು ಭಯ ಹುಟ್ಟಿಸುತ್ತಿದ್ದವು. ಇನ್ನೂ ಜಾಸ್ತಿ ಭಯ ಬರಿಸಲು ಅವತ್ತು ನನ್ನ ಮನೆಯೊಳಗೆ ಬಂದು ತಲೆಗೆ ಹೊಡೆದಿದ್ದ. ಆ ಹೊಡೆತ ಮಾರಣಾಂತಿಕವಾಗಿಲ್ಲದಿದ್ದರೂ, ಮೊದಲೇ ಭಯದಿಂದಿದ್ದ ನನಗೆ ಆಕಸ್ಮಿಕವಾಗಿ ತಲೆಗೆ ಬಿದ್ದ ಪೆಟ್ಟು ಅವತ್ತು ಎಚ್ಚರ ತಪ್ಪಿಸಿತ್ತು. ಅಂತೂ ಅವನಿಗೆ ಕರೆಸಿ ಬುದ್ಧಿ ಹೇಳಿ ಮಾಳಿಗೆ ತೆರವುಗೊಳಿಸಿದ್ದೂ ಅಲ್ಲದೆ, ಊರ ಪಂಚಾಯಿತಿಯ ಸಹಾಯದಿಂದ ಅವನ ಮನೆಗೊಂದು ಸಂಡಾಸು ಕಟ್ಟಿಸಿಕೊಟ್ಟೆವು. ಆತನಿಗೆ ತಪ್ಪಿನ ಅರಿವಾಗಿತ್ತು. ಅಂತೂ ಭೂತಗಳನ್ನು ನಾವು ಮನೆಯಿಂದ ಹಾಗು ಮನದಿಂದ ಓಡಿಸಿಯಾಗಿತ್ತು!    

Friday, May 23, 2014

ಜಾಣ ಮರೆವು!

"ರೀ... ನಾಳೆ ಏನು ಡೇಟು?"
"ಹಮ್ .... ಮೇ ಹದಿನಾರು... ಯಾಕ?"
"ನಾಳೆ ದಿನ ಒಂದು ಐತಿಹಾಸಿಕ ದಿನಾ! ನೆನಪದ ಅಂತ ಅಂದ್ಕೊಂಡೀನಿ!"
"ಓಹೊ! ಎಲೆಕ್ಶನ್ ಕೌಂಟಿಂಗು! ಅದ್ಯಾವ್ ಮಹಾ ಐತಿಹಾಸಿಕ ದಿನ ಮಾರಾಯ್ತಿ? ಎಲೆಕ್ಶನ್ ಆಗ್ತಾವ ಹೋಗ್ತಾವ. ನಮ್ಮ ಪರಿಸ್ಥಿತಿ ಮಾತ್ರ ಬದಲಾಗಂಗಿಲ್ಲಾ"
"ಅಯ್ಯೋ... ನಾ ಹೇಳಿದ್ದು ಅದಲ್ಲಾ!! "
"ಮತ್ತ? ಓ ಗೊತ್ತಾತು!"
"??!!??"
"ನಾಳೆ ಶುಕ್ರವಾರ! ಹೊಸ ಕನ್ನಡಾ ಪಿಚ್ಚರ್ ರಿಲೀಸ್ ಆಗ್ತಿರಬೇಕು ಅಲ್ಲಾ? ಆದರ ಇತಿಹಾಸ ನಿರ್ಮಾಣ ಮಾಡೊ ಅಂಥಾ ಸಿನಿಮಾ ಯಾವ್ದು ಅಂತ ನೆನಪಿಗೆ ಬರವಲ್ದು ನೋಡು"
"ನನ್ನ ಕರ್ಮಾ!"
"ಏ ಭಾರಿ ಹೆಸರು ಇಟ್ಟಾರ್ ಬಿಡು ಸಿನಿಮಾಕ್ಕ! ಭಟ್ಟರ್ ದ ಇರ್ಬೇಕು. ಆದ್ರೂ ಭಟ್ರು ಭಾರಿ ಟ್ಯಾಲೆಂಟು ನೋಡು. ಯಾರ್ ಅದಕ್ಕ ಹೀರೊಯಿನ್ನು?"
"ಸಿನಿಮಾದಾಗ ಬರೇ ಹೀರೋಯಿನ್ ಅಷ್ಟ ಇರಂಗಿಲ್ಲ. ಹೀರೋನೂ ಇರ್ತಾನ! ನಿಮ್ಮ ಭಟ್ರನ್ನ ಕೇಳ್ರಿ!!"
"ಅಷ್ಟ್ಯಾಕ ಸಿಟ್ಟಿಗೆ ಏಳ್ತಿ? ನಾಳೆ ಏನು ಅಂತ ಹೇಳಿಬಿಡು, ನನಗಂತೂ ಗೊತ್ತಾಗವಲ್ದು"
"ಹತ್ತು ವರ್ಷದ ಹಿಂದ, ಹೊಗ್ಲೀ ಪಾಪಾ ಅಂತ ನಿಮ್ಮ ಕೈ ಹಿಡದಿದ್ದೆ. ನೆನಪಾತೇನು ಈಗರೆ?"
"!! ಏ ಹೌದಲ್ಲಲೇ! ಆ ಘಟನೆ ಮರಿಲಿಕ್ಕೆ ಹೆಂಗ ಸಾಧ್ಯ ಮಾರಾಯ್ತಿ. ಪ್ರತಿ ದಿನ ನೆನಪ ಮಾಡ್ಕೋತೀನಿ. ಆದ್ರ ಯಾಕೋ ೧೬ ನೆ ಮೇ ದಿವ್ಸ ಮತ್ತ ಅದರ ಹಿಂದಿನ್ ದಿವ್ಸ ಒಂದ ನೆನಪಾಗಂಗಿಲ್ಲ ನೋಡು!...."
(ಇಷ್ಟು ಹೇಳಿದ ಮ್ಯಲೆ ಏನ ನಡೀತು ಅನ್ನೋದು ನಿಮ್ಮ ನಿಮ್ಮ ಊಹೆಗೆ ಬಿಟ್ಟದ್ದು! :))

(ನನ್ನ ವಿವಾಹದ ಹತ್ತನೆಯ ವಾರ್ಷಿಕೋತ್ಸವದ (೧೬ ಮೇ, ೨೦೧೪) ಸಂದರ್ಭದಲ್ಲಿ ಬರೆದದ್ದು)

Tuesday, May 13, 2014

ಹೀಗೊಂದು ಗೆಳೆಯರ ಬಳಗ!

ಈ ಲಲಿತ ಪ್ರಬಂಧ ಪಂಜು ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ....

http://www.panjumagazine.com/?p=7237

---------------------------------------------------------
 
ಮುಂಜ ಮುಂಜಾನೆ ಒಳ್ಳೆ ಸಕ್ಕರಿ ನಿದ್ದಿಯೊಳಗ ಕನಸ ಕಾಣ್ಲಿಕತ್ತಾಗ  ನನ್ನ ಫೋನು ಒದರಲಿಕ್ಕೆ ಶುರು ಹಚ್ಚಿಗೊಂಡು ನನಗ ಒದ್ದು ಎಬ್ಬಿಸ್ತು. ಹೊತ್ತಿಲ್ದ ಹೊತ್ತ್ನ್ಯಗ ಫೋನ್ ಮಾಡಾಂವ್ ಅಂದ್ರ ಪ್ರಶಾಂತ ನ್ನ ಬಿಟ್ಟು ಬ್ಯಾರೆ ಯಾರೂ ಇರ್ಲಿಕ್ಕೆ ಸಾಧ್ಯ ಇಲ್ಲ ಅಂತ ಕನಸಿನ್ಯಾಗನ ಡಿಸೈಡ್ ಮಾಡಿ ಎದ್ದು ನೋಡಿದ್ರ, ಅದು ಅವಂದ ಫೋನು!
"ಹೇಳಪಾ…" ಅಂದದ್ದಕ್ಕ, "ಯಾಕ್ರೀ ಸರ್ರ್ ಇನ್ನೂ ಮಲಗಿದ್ರೇನು" ಅಂತ ಹೇಳಿ ನಿದ್ದಿ ಕೆಟ್ಟಿದ್ದಕ್ಕ ಸಿಟ್ಟಿನ್ಯಾಗ ಬುಸಗುಡಕೋತ ಎದ್ದಂವ್ ಗ ಮತ್ತೊಂದಿಷ್ಟು ಸಿಟ್ಟು ಬರ್ಸಿದಾ. "ಇಲ್ಲಪಾ… ಎದ್ದು ಭಾಳ ಹೊತ್ತಾತು. ನಿನ್ನ ಫೋನಿಗೆ ಕಾಯ್ಕೋತ ಕೂತಿದ್ದೆ" ಅಂದಾಗ ತನ್ನ ಟಿಪಿಕಲ್ ಆದ ಕಂಚಿನ ಕಂಠದಾಗ ಗಹಗಹಿಸಿ ನಕ್ಕ. ಅದು ಇನ್ನೂ ಇರಿಟೇಟ್ ಆತು. 
"ಅಲ್ರೀ ಸರ್ರ ಈ ಫೇಸ್ಬುಕ್ಕ್ನ್ಯಾಗ ಒಂದು ಆಪ್ಷನ್ ಇದ್ರ ಚೊಲೊ ಆಗ್ತಿತ್ತು"
"ಏನಪಾ ಅದು?" ಮುಂಜ್ ಮುಂಜಾನೆ ಕೇಳೊ ಪ್ರಶ್ನೆ ಎನ್ರೀ ಅದು?
"ಎಲ್ಲಾರ್ದೂ ಪೋಸ್ಟ್ ಮತ್ತ ಫೋಟೊ ಆರಿಸಿಕೊಂಡು ಒಂದ ಸಲಕ್ಕ  ಲೈಕ್ ಮಾಡಿ ಬಿಡೋದು!" ಅಂವಾ ಯಾವಾಗ್ಲೂ ಹಂಗ. ಏನ್ ವಿಷಯ ಅಂತ ಹೇಳೊಕಿಂತ ಮೊದ್ಲ ಒಂದ್ ಈ ತರದ ಒಗಟು ಒಗಿತಾನ. ನಾವು ಸೀ ಐ ಡಿ ಪ್ರದ್ಯುಮ್ನ ನ ಹಂಗ ’ಇದ್ರಾಗ ಏನೋ ಗಡಬಡ ಐತಿ’ ಅಂತ ತಲಿ ಕೆರ್ಕೋಬೇಕು, ಹಂಗ ಒಂದು ಹುಳಾ ಬಿಡ್ತಾನ. ನಗಗಂತೂ ಏನೂ ಹೊಳಿಲಿಲ್ಲ.
"ಅದರಿಂದ ಏನಪಾ ಉಪಯೋಗ?" ಅಂತ ಕೇಳಿದ್ದಕ್ಕ.
"ನಮ್ಮ ವಿಜಯ್ ಗುರುಗಳು ತಾವು ತಗದದ್ದ ಒಂದು ಫೋಟೊ ಫೇಸ್ ಬುಕ್ನ್ಯಾಗ ಹಾಕಿದ್ರು. ನಾ ಅದನ್ನ ಇನ್ನೂ ಲೈಕ್ ಮಾಡಿಲ್ಲ ಅಂತ ಸಿಟ್ಟಿಗೆದ್ದಾರ! ಅದಕ್ಕ ಅಂಥಾ ಆಪ್ಶನ್ ಇದ್ರ ಮುಂಜಾನೆ ಎದ್ದು ಎಲ್ಲಾರ್ ಫೋಟೋನೂ ಒಂದ್ ಸಲ ಲೈಕ್ ಮಾಡಿ ಬಿಟ್ರ ಒಂಥರ ನಿಶ್ಚಿಂತಿ ನೋಡ್ರೀ. ಇಲ್ಲಾಂದ್ರ ನನ್ನ ಫೋಟೊ ಲೈಕ್ ಮಾಡಿಲ್ಲ ನಿನ್ನ ಫೋಟೊ ಮಾಡಿಲ್ಲ ಅಂತ ಸಿಟ್ಟಿಗೇಳೋ ಪ್ರಶ್ನೇನ ಏಳುದಿಲ್ಲ."
"ಹೌದಲ್ಲೋ ಮಾರಾಯ! ಇದು ಖರೇನ ಚೋಲೊ ವಿಚಾರ ನೋಡು" ನನಗೂ ಇಂಥಾ ಅನುಭವ ಭಾಳ ಆಗಿದ್ವು. ಅವಾಗಾವಗ ಇಂಥಾವು ಉಪಯೋಗ ಆಗೂ ಅಂಥ ವಿಚಾರ ಮಾತಾಡ್ತಾನ. ಅಡ್ಡಿ ಇಲ್ಲ. ಅಂದ್ಕೋತಿರ್ಬೇಕಾದ್ರ…. 
"ಲೇ ಎಪ್ರೇಷಿ… ಬುದ್ಧಿ ಅದ ಇಲ್ಲಲೇ ನಿನಗ…! ಲೇ ಎಲ್ಲಿದ್ದೀ ಬಾಯಿಲ್ಲೆ!!" ಅಂತ ಒದ್ರೀದ.
"?!!??"
"ಸರ್‍ರ ನಿಮಗ ಅಲ್ಲಾ, ನನ್ನ ಮಗಾ ಏನ್ ಧಾಂದ್ಲೆ ಹಾಕ್ತಾನ್ರೀ ಪಾ. ಅಂವಗ ಬೈಲಿಖತ್ತಿದ್ದೆ. ಇಕಿನೂ ಹಂಗ, ನಾ ಫೋನ್ ಮಾಡು ಮುಂದ ಹುಡುಗುರ್ನ ನನ್ನ ಹತ್ರ ಬಿಟ್ಟಿರ್ತಾಳ." ಅಂದ. ಸಧ್ಯ ಬದಕ್ದೆ, ಎಲ್ಲೆ ನನಗ ಬೈದ್ನೋ ಅಂತ ಹೆದರಿದ್ದೆ! ಹಂಗ ಅಂದವ್ನ ಖೊರ್‍ರ ಅಂತ ಖ್ಯಾಖರಿಸಿ ಉಗುಳಿದ. ಫೋನ್ ಹಿಡಕೊಂಡು ಅವನ ಮನಿ ಮುಂದಿನ ಘಟಾರ್ ನ್ಯಾಗ ಉಗುಳಿದ್ದ. ಆದ್ರೂ ಅದು ನನ್ನ ಕಿವ್ಯಾಗ ಉಗುಳಿದಂಗ ಆಗಿ ನಾನು ಕರ್ಚೀಫ್ ಲೆ ಕಿವಿ ವರಿಸಿಕೊಂಡೆ. ಅದಕ್ಕ…, ಅವನ ಜೋಡಿ ಫೋನ್ ನ್ಯಾಗ ಮಾತಾಡೋವಾಗ ಒಂದು ಕರ್ಚೀಫು ಬಾಜುಕ್ಕ ಇಟಗೊಂಡ ಕೂತಿರ್ತೀನಿ!  
"ಆತ್ ತೊಗೊಪಾ ಸ್ವಲ್ಪ ಮಕಾ ತೊಕ್ಕೊಂಡು, ಚಾ ಕುಡದು ಅಮ್ಯಾಲೆ ಫೋನ್ ಮಾಡ್ತೀನಿ" ಅಂತ ಸಂಭಾಷಣೆ ಮುಗಸೊ ಪ್ರಯತ್ನ ಮಾಡ್ದೆ. ಆದ್ರ ಅಂವ ಬಿಡಬೇಕಲ್ಲ! 
"ಅಲ್ರೀ ನಿಮ್ಮ ಪಾರ್ಟಿ ಯಾವಾಗ?" ಅಂತ ಮತ್ತೇನೋ ಒಂದು ಒಗಟು ಒಗದಾ. 
"ಯಾವ ಪಾರ್ಟಿ??" ನನ್ನ ಅಲ್ಪ ಸ್ವಲ್ಪ ಉಳದದ್ದ ನಿದ್ದೀನೂ ಹಾರಿ ಹೋಗಿತ್ತು. 
"ಒಂದ? ಎರಡ?…, ಭಾಳ ಪಾರ್ಟಿ ಪೆಂಡಿಂಗ ಅವ ನಿಮ್ವು. ಬರ್ತ್ ಡೇ ದ್ದು ಕೊಟ್ಟಿಲ್ಲ, ಮ್ಯಾರೇಜ್ ಅನ್ನಿವರ್ಸರಿದೂ ಕೊಡಲಿಲ್ಲ, ಹೊಸಾ ಫ್ರಿಜ್ ತೊಗೊಂಡ್ರಿ ಅದರ್ದು ಇಲ್ಲ" ಪುಣ್ಣ್ಯಾಕ್ಕ ನಾ ಮೊನ್ನೆ ಹೊಸ ಅಂಡರ್ ವೇರ್ ತೊಗೊಂಡಿದ್ದು ಅವಂಗ ಇನ್ನೂ ಗೊತ್ತಿಲ್ಲಾ, ಒಂದು ಪಾರ್ಟಿ ಉಳೀತು! ಪ್ರತಿಯೊಂದಕ್ಕೂ ಪಾರ್ಟಿ ಕೇಳೋದಕ್ಕ ಎಲ್ಲಾರೂ ಇಂವಗ ಪಾರ್ಟಿ ಪ್ರಶಾಂತ ಅಂತ ಹೆಸರು ಇಟ್ಟಾರ.
"ಅಲ್ಲೋಪಾ, ಇಷ್ಟ್ ವಯಸ್ಸಾದ್ ಮ್ಯಾಲೂ ಬರ್ಥ್ ಡೇ ಮಾಡ್ತಾರೇನು? ಮದಿವಿ ಆಗಿದ್ದಂತೂ ಪಾರ್ಟಿ ಕೊಡು ಅಂಥಾ ವಿಷಯಾನ ಅಲ್ಲ. ಸುಮ್ಮ್ ಸುಮ್ಮ್ನ ಮುಂಜಾನೆ ತಲಿ ತಿನ್ನಬ್ಯಾಡ"
"ಅಲ್ರೀ ಗುರು ನಿಮಗೇನ್ ಅಂಥಾ ವಯಸಾಗ್ಯಾವ್ರೀ. ನೋಡ್ಲಿಕ್ಕೆ ಇನ್ನೂ ಇಪ್ಪತ್ತರ ಹತ್ ಹತ್ತ್ರ ಇದ್ದಂಗ ಕಾಣ್ತೀರಿ." ಅಂತ ಬೇಣ್ಣಿ ಹಚ್ಚಿದ್ದಕ್ಕ ಹೋಗ್ಲಿ ಒಂದರೆ ಪಾರ್ಟಿ ಕೊಟ್ಟ್ರಾತು ಅಂತ ನಿರ್ಧಾರಾ ಮಾಡಿದ್ದ ತಡ. ನನ್ನ ಹೇಂಡ್ತಿ ಎಲ್ಲ್ಯೋ ಹೊರಗ ಇದ್ದಾಕಿ ಒಳಗ ಬಂದು  "ಇಬ್ಬರಿಗೂ ಉದ್ಯೋಗಿಲ್ಲ ಉಸಾಬರಿಲ್ಲಾ. ಬರೇ ಫೋನ್ ನ್ಯಾಗ ಮಾತಾಡ್ಕೋತ ಕೂಡ್ರಿ. ಇನ್ನೂ ಭಾಳ ಕೆಲ್ಸಾ ಅವ, ಮುಗಸ್ರೀ ಇನ್ನ." ಅಂತ ಬೈದ್ಲು. ಏ ಛೊಲೊ ಟೈಮಿಗೆ ಬಂದ್ಲು ಅಂದ್ಕೊಂಡು.
"ಇಕಿ ಬೈಲಿಖತ್ತಾಳ ಮಾರಾಯ. ಇನ್ನೂ ಭಾಳ ಕೆಲ್ಸ ಅವ. ಅಮ್ಯಾಲೆ ಮಾತಾಡೋಣ ಅಂತ" ಫೋನು ಬಂದ ಮಾಡಿದೆ. ಆದ್ರೂ ನಾ ಹೇಂಡ್ತೀಗೆ ಇಷ್ಟು ಹೆದರ್ತೀನಿ ಅಂತ ಇಂವಗ ಪ್ರತೀ ಸಲ ಅಂವಾ ಫೋನ್ ಮಾಡ್ದಾಗೂ ಗೊತ್ತಾಗಿ ಬಿಡ್ತದಲ್ಲ ಅನ್ನೋ ಬ್ಯಾಸರಾ ಅಂತೂ ಇತ್ತು!   
—–
ಮನಸ್ಸು ಕ್ಷಣಾರ್ಧದಲ್ಲಿ ಹುಬ್ಬಳ್ಳಿಗೆ ಹೋಗಿತ್ತು. ಸುಮಾರು ಹದಿನಾಲ್ಕು ವರ್ಷದ ಹಿಂದಿನ ಮಾತು. ನಾನು ಬೆಂಗಳೂರಿನ್ಯಾಗ ಕೆಲ್ಸ ಹುಡಕಿ ಸುಸ್ತ ಆಗಿ ವಾಪಸ್ಸು ಅಪ್ಪನ ಹತ್ರ ರೊಕ್ಕಾ ಇಸಗೋಳಿಕ್ಕೆ ಅಂತ ಧಾರವಾಡಕ್ಕ ಬಂದಿದ್ದೆ. ಹಂತಾದ್ರಾಗ ಇಲ್ಲೇ ಹುಬ್ಬಳ್ಳ್ಯಾಗ ಒಂದು ಕಡೆ ಸಾಫ್ಟವೇರ್ ಕೆಲ್ಸ ಖಾಲಿ ಅದ ಅಂತ ನನ್ನ ಮಿತ್ರನೊಬ್ಬ ಹೇಳಿ ಕುತುಹಲ ಕೆರಳಿಸಿದ್ದ. ತಾನು ಮಾತ್ರ ಅಷ್ಟು ಹೇಳಿ ಬೆಂಗಳೂರಿಗೆ ಕೆಲ್ಸಾ ಹುಡುಕಲಿಕ್ಕೆ ಹೋಗಿದ್ದ. ನಾನು ಆ ಕಂಪನಿಗೆ ಹೋಗಿ ಇಂಟರ್ವ್ಯೂ ಪಾಸ್ ಆಗಿ ಕೆಲ್ಸಕ್ಕೆ ಸೆರ್ಕೊಂಡಿದ್ದು ಒಂದು ಇತಿಹಾಸ! ಅಲ್ಲೆ ನನಗಿಂತ ಮೊದಲ ಇದ್ದವರೊಳಗ ಆಮ್ಯಾಲೆ ಸಿಕ್ಕಾಪಟ್ಟಿ ದೋಸ್ತ ಆದಂವಾ ಅಂದ್ರ ವಿಟ್ಠಲ. ನಮಿತಾ ಅಂತ ಒಂದು ಹುಡಗಿನೂ ಇದ್ಲು. ಅಕೀನು ಒಳ್ಳೆ ಫ಼್ರೆಂಡ್ ಆದ್ಲು, ಅದ್ರೂ ಕೆಲ್ಸದ ವಿಷಯದಾಗ ಬರೇ ಜಗಳಾ ಮಾಡ್ತಿದ್ಲು. ಅದು ಆ ಮಟ್ಟಿಗಿನ ಜಗಳ. ದ್ವೇಷದ ಜಗಳ ಅಲ್ಲಾ!
ಅದು ಒಂದು ಸಣ್ಣ ಸಾಫ್ಟವೇರ್ ಕಂಪನಿ. ಇದ್ದವ್ರ ನಾಲ್ಕೈದ್ ಮಂದಿ. ನಮಗೊಬ್ಬ್ರು ಬಾಸ್ ಇದ್ರು. ಸಮಸ್ಯೆ ಏನು ಅಂದ್ರ ಅವರ ಮನಿ ಆಫಿಸಿನ ಕೆಳಗ ಇತ್ತು! ಅದಕ್ಕ ಅವ್ರು ಯಾವಾಗ್ಲೂ ಮನ್ಯಾಗ ಇರೌರು … ಅಲ್ಲಲ್ಲಾ ಆಫಿಸ್ ನ್ಯಾಗ ಇರೌರು. ಮನಿಗಿಂತ ಆಫೀಸಿನ್ಯಾಗ ಅವ್ರಿಗೆ ಶಾಂತಿ ಜಾಸ್ತಿ ಇತ್ತು ಅಂತ ನಮಗ ಆಮ್ಯಾಲೆ ಗೊತ್ತಾತು. ಅದು ಏನಪಾ ಅಂದ್ರ ಅವರ ಹೆಂಡತಿ ಸಂಗೀತ ಕಲೀತಿದ್ರು. ಹಿಂಗಾಗಿ ಯಾವಗ್ಲೂ ಅವ್ರು ಮನ್ಯಾಗ ತಮ್ಮ ಸಂಗೀತ ಸಾಧನೆ  ಮಾಡವ್ರು. ನಮ್ಮ ಬಾಸು ಅದ್ನ ತಪ್ಪಿಸಿಗೋಳಲಿಕ್ಕೆ ಆಫಿಸಿನ್ಯಾಗ ಕುತಗೊಂಡು ನಮಗ ತಮ್ಮ ರಾಗದಾಗ ತಮ್ಮ ಸಂಗೀತಾ ಹೇಳತಿದ್ರು! ಅದ್ರೂ ಭಾಳ ತಡಾ ಆತಂದ್ರ ಅವ್ರ್ ಹೆಂಡತಿನ ಮ್ಯಾಲೆ ಆಫಿಸಿಗೆ ಬಂದು ಬಿಡವ್ರು. ನಾವಾಗ ನಿಟ್ಟುಸಿರು ಬಿಡತಿದ್ವಿ. ಯಾಕಂದ್ರ ಬಾಸು ತಮ್ಮ ಮನೀಗೆ ದಯಮಾಡ್ಸಿದ್ರ ನಾವು ಜಾಗಾ ಖಾಲಿ ಮಾಡ್ಬಹುದಿತ್ತು!  
ಹಿಂಗ ಜೀವನಾ ನಡದಿತ್ತು. ಆವಾಗ ನಮ್ಮ ಟೀಮ್ ಲೀಡ್ ಆಗಿ ಬಂದವ್ರು ವಿಜಯ್ ಅವ್ರು. ಅವರು ನಮಗಿಂತ ಹೆಚ್ಚು ಬಲ್ಲವರಾಗಿದ್ರು, ಹಿಂಗಾಗಿ ಅನಿವಾರ್ಯವಾಗಿ ಅವರನ್ನ ನಮ್ಮ ಗುರುಗಳನ್ನಾಗಿ ಮಾಡಿಕೋಬೇಕಾತು. ಅದೂ ಒಂದು ಇತಿಹಾಸ. ಇವ್ರು ಬಂದ ಮ್ಯಾಲೆ ಬಂದವ್ನ ನಮ್ಮ ಪಾರ್ಟಿ ಪ್ರಶಾಂತ. ಅವಗಿಂತಾ ನಾನು ಹೆಚ್ಚು ಬಲ್ಲವನಾಗಿದ್ದೇನಾದ್ದರಿಂದ ಅವನು ಪಾಪಾ ಅನಿವಾರ್ಯವಾಗಿ ನನಗ ಗುರುಗಳ ಸ್ಥಾನಾ ಕೊಟ್ಟು ಮರ್ಯಾದಿ ದಯಪಾಲಿಸ್ದಾ. ಹಿಂಗ ನಮ್ಮ ಗುರು-ಶಿಶ್ಯ ಪರಂಪರೆ ಶುರು ಆತು. ನಾವು ಒಬ್ಬರ್ನೊಬ್ರು ಎಷ್ಟು ಹಚಿಗೊಂಡಬಿಟ್ಟಿದ್ವಿ ಅಂದ್ರ ಅಷ್ಟ ಹಚಿಗೊಂಡಿದ್ವಿ ನೋಡ್ರೀ! ಯಾಕಂದ್ರ ಅವಾಗ ಎಲ್ಲಾರೂ ಬ್ರಹ್ಮಚಾರಿಗಳು. ಯಾರಿಗೂ ಹೇಳವ್ರಿಲ್ಲ ಕೇಳವ್ರಿಲ್ಲ. ಒಟ್ಟಿಗೆ ಊಟಾ ಮಾಡ್ತಿದ್ವಿ, ಗಿರಿಮಿಟ್ಟು ಮಿರ್ಚಿ ತಿಂತಿದ್ವಿ, ಪಿಕ್ನಿಕ್ ಹೋಗ್ತಿದ್ವಿ…. 
ಆದ್ರ ಎರಡ ವರ್ಷ ಹಿಂಗ ಕಳದಾದ ಮ್ಯಾಲೆ ಐ ಟಿ ಇಂಡಸ್ಟ್ರೀ ಮ್ಯಾಲೆ ಸಿಡ್ಲು ಬೀಳಲಿಕ್ಕೆ ಹತ್ತಿ ನಮ್ಮ ಬಾಸು ನಮ್ಮ ಪಗಾರಕ್ಕೂ ಕೈ ಹಚ್ಚಿದಾಗ ಎಲ್ಲಾರೂ ಬ್ಯಾರೆ ಕೆಲ್ಸಾ ಹುಡಿಕ್ಕೊಂಡು ಅತ್ಲಾಗ ಇತ್ಲಾಗ ಆದ್ವಿ. ವಿಟ್ಠಲ ಬೆಂಗಳೂರಿಗೆ ಹೋದ, ನಮೀತಾ ನೂ ಬೆಂಗಳೂರು ಸೇರಿದ್ಲು. ನಾನೂ ಪ್ರಶಾಂತ ಹುಬ್ಳ್ಯಾಗ ಬ್ಯಾರ್ ಬ್ಯಾರೆ ಕಡೆ ಕೆಲ್ಸಕ್ಕ ಸೇರಿದ್ವಿ. ವಿಜಯ್ ಅವ್ರೂ ಹುಬ್ಳ್ಯಾಗ ಇನ್ನೊಂದ್ ಕಡೆ ಸೇರಿ ಆಮ್ಯಾಲೆ ಬೆಂಗಳೂರಿಗೆ ಹೋದ್ರು. ನಾವು ಒಬ್ಬರ್ನೊಬ್ರು ಮಿಸ್ಸ್ ಅಂತೂ ಮಾಡ್ಕೋತಿದ್ವಿ. ಆದ್ರೂ ವಿಧಿ ಮತ್ತ ತನ್ನ ಆಟಾ ತೋರಸ್ತು. ಕಾಲಾಂತರದಾಗ ನಮ್ಮನ್ನ ಎಲ್ಲಾರ್ನೂ ಬೆಂಗಳೂರಿಗೆ ತಂದು ವಗಿತು. ಅದೂ ಅಲ್ದ ಎಲ್ಲಾರೂ ಗ್ರಹಸ್ತಾಶ್ರಮಕ್ಕ ಕಾಲ ಇಟ್ಟಿದ್ವಿ! ನಮ್ಮ ಟೀಮು ಈಗ ದೊಡ್ಡದಾಗಿತ್ತು.
—–
ಈಗ ಎಲ್ಲಾರೂ ಒಂದ ಕಡೆ ಇದ್ದೀವಿ.  ಆದ್ರೂ ಎಲ್ಲಾರೂ ಒಟ್ಟಿಗೆ ಸೇರೂದು ಆಗವಲ್ದು. . . ನಾವು ಭೆಟ್ಟ್ಯಾಗೋದು ಫೇಸ್ ಬುಕ್ನ್ಯಾಗ ಮಾತ್ರ. ಪ್ರೊಫೈಲ್ ವಿಸಿಟ್ ಮಾಡಿದ್ರ ಅವರ ಮನೀಗೆ ಹೋದಂಗ ಆಗಿ ಬಿಟ್ಟದ. ಎಂಥ ವಿಪರ್ಯಾಸ ಅಲ್ಲಾ? ಆದ್ರ ಅದರಿಂದ ಆಗ್ತಿರೋ ಸಮಸ್ಯೆ ಅಂದ್ರ ನನ್ನ ಫೋಟೊ ನೋಡಿಲ್ಲ, ಲೈಕ್ ಮಾಡಿಲ್ಲ, ಕಮೆಂಟ್ ಮಾಡಿಲ್ಲ ಅನ್ನೋ ಕ್ಷುಲ್ಲಕ ರಗಳೆಗಳು. ಅದ ಕಾರಣಕ್ಕ ನಮ್ಮ ಪಾರ್ಟಿ ಪ್ರಶಾಂತ ಮುಂಜ ಮುಂಜಾನೆ ಒಂದು ಪರಿಹಾರ ಹೇಳಿದ್ದು. ಆದ್ರೂ ಒಬ್ಬರಿಗೊಬ್ರು ಮ್ಯಾಲೆ ಸಿಟ್ಟಿಲ್ಲ ಬಿಡ್ರೀ. ಅದು ಬರೀ ಕಾಲೆಳೆಯುವ ಮನಸ್ತಾಪಗಳು ಅಷ್ಟೆ. 
ಇನ್ನ ಒಬ್ಬೊಬ್ರ ಬಗ್ಗೆ ಹೇಳಬೇಕಂದ್ರ, ಒಬ್ಬೊಬ್ರೂ ಒಂದೊಂಥರಾ ಕ್ಯಾರೆಕ್ಟರ್!    ವಿಜಯ್ ನಾ ಮೊದ್ಲ ಹೇಳಿದಂಗ ನಮ್ಮೆಲ್ಲರ ಗುರುಗೋಳು. ಅದ್ರ ಜೊತಿಗೆ ಒಂಥರ ಸೈಂಟಿಷ್ಟು! ಅವರಿಗೆ ತಾಂತ್ರಿಕ ವಿಷಯದಾಗ ಸಿಕ್ಕಾಪಟ್ಟೆ ಆಸಕ್ತಿ ಹಾಗೂ ಹಿಡಿತ. ಒಂದೊಂದ್ ಸರ್ತಿ ಸೈಂಟಿಸ್ಟ ತರಾನ ಆಡೊವ್ರು. ಅವ್ರ ಲಗ್ನಕ್ಕ ನಾನು ಪ್ರಶಾಂತ ಹೋಗಿದ್ವಿ. ನಮ್ಮನ್ನ ಹೆಂಡತಿಗೆ ಪರಿಚಯ ಮಾಡ್ಸೂ ಮುಂದ ನನ್ನ ಮತ್ತ ಪ್ರಶಾಂತನ ಹೆಸ್ರು ಅದ್ಲ ಬದ್ಲ ಮಾಡಿ ಹೇಳಿ ಬಿಟ್ರು! ಆಮ್ಯಾಲೆ ನಾವು ನಮ್ಮ ನಮ್ಮ ಹೆಸರು ಹೇಳ್ಕೋಬೇಕಾತು. 
ವಿಟ್ಠಲ ಒಬ್ಬ ಕಲಾವಿದ ಮತ್ತ ಕಂಪುಟರ್ ಗ್ರಾಫಿಕ್ಸ್ ಪ್ರವೀಣ. ಅಂವನ ಮಾತು ಯಾವಗ್ಲೂ ನೇರ ಮತ್ತ ನಿಷ್ಠುರ (ಹೆಂಡ್ತಿ ಜೋಡಿ ಓಂದ ಬಿಟ್ಟ ಮತ್ತ!). ಅಂವಗ ಅಪ್ಪಿ ತಪ್ಪಿ ನಾನು ಒಂದ ಸಲ ನಾ ನನ್ನ ಕೈಯ್ಯಾರೆ ರಚಿಸಿದ್ದ ಅದ್ಭುತ (ನನ್ನ ಮಟ್ಟಿಗೆ!) ಕಲಾಕೃತಿ ತೋರಿಸಿ ಬಿಟ್ಟೆ ನೋಡ್ರೀ, ಅದಕ್ಕ ಅಂವ "ಗುರು ನೀವು ಚೊಲೊ ಬರೀತಿರಿ ಅದನ್ನ ಬೇಕಂದ್ರ ಮುಂದುವರಸ್ರಿ" ಅಂದ ಬಿಡಬೇಕ! ನಾನ ಕಷ್ಟ ಪಟ್ಟು ತಗದದ್ದ ಪೇಂಟಿಂಗಿಗೆ ಈ ತರದ್ದು ಒಂದು ಪ್ರತಿಕ್ರಿಯೆ ಬಂದ ಮ್ಯಾಲೆ ನಾನು ಬರ್ಯೋದ್ ಜಾಸ್ತಿ ಮಾಡಿದ್ದಂತೂ ಖರೆ. ಚಿತ್ರಾನೂ ತಗೀತಿನಿ ಆದ್ರ ಅಂವಗ ತೋರ್ಸಂಗಿಲ್ಲ ಅಷ್ಟ!
ಮತ್ತ ನಮ್ಮ ಪಾರ್ಟಿ ಪ್ರಶಾಂತನ್ನ ಬಗ್ಗೆ ಹೇಳಬೇಕಂದ್ರ, ಅಂವನ ಸ್ವಭಾವಕ್ಕ ಆ ಹೆಸರು ಹೋದಂಗಿಲ್ಲ. ಅಂವಗ ಜಗಳ ಮಾಡಿಲ್ಲ ಅಂದ್ರ ಸಮಾಧಾನ ಇಲ್ಲ. ಅಂವಾ ಜಗಳಾ ಮಾಡಲಾರದ ವೇಟರ್ ಗಳು ಬೆಂಗಳೂರಿನ್ಯಾಗ ಯಾರೂ ಇಲ್ಲ! ಪ್ಲೇಟು ಸ್ವಚ್ಚ ಇಲ್ಲಾ ಅನ್ನುದರಿಂದ ಹಿಡಕೊಂಡು ಊಟಾ ತರೂದು ತಡ ಆತು ಅನ್ನೂ ತನ್ಕಾ ಅವ್ರ ಜೊತಿ ಕಾಲು ಕೆದರಿ ಜಗಳಾ ತಗದು ಬರ್ತಾನ! ಕಾರ್ ನ್ಯಾಗ ಹೋಂಟಾಗಂತೂ ದಾರಿಗುಂಟ ಬ್ಯಾರೆ ಚಾಲಕರಿಗೆ ಬೈಕೊಂತನ ಗಾಡಿ ಹೋಡಿತಾನ. ಆದ್ರ ಬೈಯ್ಯು ಮುಂದ ಕಾರಿನ ಗ್ಲಾಸ್ ಎರ್ಸಿರ್ತಾನ! ಹಿಂಗಾಗಿ ಇನ್ನೂ ಯಾರೂ ವಾಪಸ್ಸು ಅಂವಗ ಬೈದಿಲ್ಲ. ಯಾಕಂದ್ರ ಇಂವಾ ಬೈದಿದ್ದು ಯಾರಿಗೂ ಕೇಳ್ಸೇ ಇಲ್ಲ! ಹಾಡು ಚೊಲೊ ಹಾಡ್ತಾನ. ಆದ್ರ ಒಮ್ಮೆ ಹಾಡ್ಲಿಕ್ಕೆ ಸುರು ಮಾಡಿದ್ನಂದ್ರ ಮುಗ್ಸಂಗೇ ಇಲ್ಲ. 
ಇನ್ನ ನನ್ನ ಬಗ್ಗೆ ನಾನ ಬರ್ಕೋಳ್ಳೋದು ಸರಿ ಅನ್ಸಂಗಿಲ್ಲ. ಅದಕ್ಕ ನಾನಿಲ್ಲೆ ಸೂತ್ರಧಾರನಾಗೇ ಇರ್ತೀನಿ! ಈ ನಮ್ಮ ಗೆಳೆಯರ ಬಗ್ಗೆ ಬರಿಯೋ ವಿಷಯ ಇನ್ನೂ ಭಾಳ ಅವ. ಎಲ್ಲಾ ಈಗ ಬರದಬಿಟ್ರ ಬೋರಾದೀತು. ಈ ಬರಹಕ್ಕ ಎಷ್ಟು ಲೈಕು, ಕಮೇಂಟು ಬರ್ತಾವ ಅಂತ ನೋಡ್ಕೊಂಡು ಮುಂದ ಬರೀತಿನಿ! ನಾವು ಹೆಂಗ ಇದ್ರೂ ಒಬ್ಬರ ಮ್ಯಾಲೆ ಒಬ್ಬರಿಗೆ ಪ್ರೀತಿ ಅಭಿಮಾನ ಇನ್ನೂ ಇಟಗೊಂಡೀವಿ. ತಿಂಗಳಿಗೊಮ್ಮೆ ಇಲ್ಲಾ ಅಂದ್ರೂ ಆದಾಗಾದಗ ಸಿಗ್ತಿರ್ತೀವಿ. ಹೊಸಾ ಪರಿಸರಕ್ಕ ಹೋದಂಗ ಹೊಸ ಹೊಸ ಗೆಳ್ಯಾರು ನಮ್ಮ ಜೀವನದಾಗ ಬರ್ತಾರ. ಆದ್ರೂ ನಮ್ಮದೊಂದು ಗೆಳೆಯರ ಬಳಗ ಇಷ್ಟು ವರ್ಷ ಇನ್ನೂ ಸಂಪರ್ಕದಾಗ ಇರೋದು ಭಾಳ ಅಪರೂಪ ಅಂತ ನನ್ನ ಅಂಬೋಣ. ನೀವೇನಂತೀರಿ?