Wednesday, August 20, 2014

ಭ್ರಮೆ? (ಅತೀಂದ್ರಿಯ ಅನುಭವದ ಕಥೆಗಳು - ಭಾಗ ೪)

http://www.panjumagazine.com/?p=8293

(ಈ ಕಥೆ ನನ್ನ ಗೆಳೆಯ ವಿಟ್ಠಲ ಕುಲಕರ್ಣಿ ಗಾದ ಅನುಭವದ ಮೇಲೆ ಹೆಣೆದಿದ್ದು. ನಂಬುವಿರೋ ಇಲ್ವೊ ಗೊತ್ತಿಲ್ಲ... ಇದನ್ನು ಅವನ ಬಾಯಿಂದ ಕೇಳುತ್ತಿದ್ದಾಗ ಹಾಗೂ ಈ ಕಥೆಯನ್ನ ರಾತ್ರಿ ಬರೆಯುತ್ತಿರುವಾಗ ನನ್ನ ಮೈಯಲ್ಲಿ ಭಯದ ಕಂಪನಗಳೆದ್ದಿದ್ದಂತೂ ನಿಜ! ಅಂದ ಹಾಗೆ, ಕಥೆಯಲ್ಲಿ ಬಳಸಿರುವ  ಹೆಸರು ನಿಜವಾದ ವ್ಯಕ್ತಿಯದಲ್ಲ.)

---

ಸುಮಾರು ಹದಿನೈದು ವರ್ಷಗಳ ಹಿಂದೆ, ನಾನಿನ್ನೂ ಹುಬ್ಬಳ್ಳಿಯಲ್ಲೇ ಕೆಲಸ ಮಾಡುತ್ತಿದ್ದೆ. ಸ್ಟುಡಿಯೋ ಒಂದರಲ್ಲಿ ಗ್ರಾಫಿಕ್ ಡಿಸೈನರ್ ಕೆಲಸ. ಬೆಳಿಗ್ಗೆ ಒಂಭತ್ತರಿಂದ ಸಂಜೆ ಆರು . ಆದರೂ ಒಂದೊಂದು ಸಲ ಏಳು, ಕೆಲವು ಸಲ ಎಂಟು! ಹೀಗೆ ವೇಳೆ ಕೆಲಸದ ಮೇಲೆ ಅವಲಂಬಿತವಾಗಿತ್ತು. ಅದೂ ಅಲ್ಲದೆ ನಾನು ಆಗ ಬ್ರಹ್ಮಚಾರಿ ಮತ್ತು ಸ್ವತಃ ಕಲಾವಿದನಾದ್ದರಿಂದ ನಾ ಮಾಡುತ್ತಿದ್ದ  ಕೆಲಸ ನನಗೆ ಖುಷಿ ಕೊಡುತ್ತಿತ್ತು ಎಂಬ ಕಾರಣಕ್ಕೆ ಕೆಲವು ಸಲ ಹಾಗೆ ಕೆಲಸದಲ್ಲಿ  ತಲ್ಲೀನನಾಗಿ ಗಡಿಯಾರ ನೋಡುವುದೇ ಮರೆತುಬಿಡುತ್ತಿದ್ದೆ!

ಹುಬ್ಬಳ್ಳಿ, ನಾನು ಹುಟ್ಟಿ ಬೆಳೆದ ಊರು. ಉತ್ತರ ಕರ್ನಾಟಕದವರಿಗೆ ದೊಡ್ಡ ವಾಣಿಜ್ಯ ಕೇಂದ್ರವದು. ಆದರೂ ಅದಿನ್ನೂ ಬೆಂಗಳೂರಾಗಿಲ್ಲ! ಅಂದರೆ ಅಷ್ಟೊಂದು ಹಾಳಾಗಿಲ್ಲ! ಬೆಂಗಳೂರಿನಷ್ಟು ಸೌಕರ್ಯಗಳು ಅಲ್ಲಿಲ್ಲ, ಅಥವಾ ಬೆಂಗಳೂರಿಗೆ ಸಿಕ್ಕ ಗಮನ ನಮಗೆ ಸಿಕ್ಕಿಲ್ಲ ಅನ್ನುವ ಬೇಜಾರು ನಮ್ಮ ಕಡೆಯವರಿಗಿದ್ದರೂ, ಅಲ್ಲಿನ ಎಲ್ಲವೂ ನಮಗಿಷ್ಟ! ಅಲ್ಲಿನ ಸಣ್ಣ ಗಲ್ಲಿಗಳಿರಬಹುದು, ಎಲ್ಲಿ ಕಣ್ಣು ಹಾಕಿದರೂ ಕಾಣುವ ಬೀಡಿ ಅಂಗಡಿಗಳಿರಬಹುದು, ಕೆಲವೇ ಕೆಲವು ಪ್ರವಾಸಿ ತಾಣಗಳಲ್ಲೊಂದಾದ  ಉಣಕಲ್ ಕೆರೆ ಇರಬಹುದು, ಒಮ್ಮಿಂದೊಮ್ಮೆಲೆ ಕಣ್ಣೊಳಗೆ ಅಡರಿ ದಳ ದಳ ನೀರು ಸುರಿಸುವ ಧೂಳಿರಬಹುದು, ಧುತ್ತನೆ ದಾರಿಯಲ್ಲಿ ಎದುರಾಗುವ ದನ... ಇವೆಲ್ಲವೂ ನಮ್ಮ ಬದುಕಿನ ಒಂದು ಅವಿಭಾಜ್ಯ ಅಂಗ.     

ನಮ್ಮ ಮನೆ ಇದ್ದದ್ದು ಕೇಶವಾಪುರದಲ್ಲಿ. ನನ್ನ ಆಫಿಸಿನಿಂದ ನಡೆದುಕೊಂಡು ಹೋದರೆ ಅರ್ಧ ಗಂಟೆಯ ಹಾದಿ. ಆಗಿನ್ನೂ ಬೈಕಿನ ಹಾವಳಿ ಅಷ್ಟಿರಲಿಲ್ಲ. ಅದೂ ಅಲ್ಲದೇ  ಇನ್ನೂ ಆಗ ತಾನೇ ಕೆಲಸಕ್ಕೆ ಸೇರಿದ್ದರಿಂದ ಅದನ್ನು ಕೊಳ್ಳುವ ತಾಕತ್ತೂ ನನ್ನಲ್ಲಿರಲಿಲ್ಲ. ಹೀಗಾಗಿ ಆಫಿಸಿಗೆ ನಡೆದುಕೊಂಡೆ ಹೋಗಿ ಬರುತ್ತಿದ್ದೆ. ನಾನಾಗಲೇ ಹೇಳಿದಂತೆ ಹುಬ್ಬಳ್ಳಿ ಇನ್ನೂ ಬೆಂಗಳೂರಿನಂತಾಗಿಲ್ಲದ್ದರಿಂದ ಇನ್ನೂ ಜನರ ನಡುವೆ ಒಂದು ಸಂಪರ್ಕವಿತ್ತು, ಈಗಲೂ ಇದೆ. ನಮ್ಮ ಓಣಿಯಲ್ಲಿರುವ ಬಹುತೇಕ ಮಂದಿ ನನಗೆ ಗೊತ್ತು. ಅವರು ನನ್ನ ತಂದೆಯ ಗೆಳೆಯರೋ, ಇಲ್ಲ ನನ್ನಣ್ಣಂದಿರ ಗೆಳೆಯರೋ, ನನ್ನ ಗೆಳೆಯರೋ ಯಾರೇ ಇದ್ದರೂ ದಾರಿಯಲ್ಲಿ ಭೇಟಿಯಾದಾಗ ಒಂದು ನಮಸ್ಕಾರವೋ ಇಲ್ಲಾ "ಊಟಾತೇನಪಾ? ಅಪ್ಪ ಹೆಂಗಿದ್ದಾರ?" ಅನ್ನುವ ಬರೀ ಔಪಚಾರಿಕವಲ್ಲದ, ಕಾಳಜಿಪೂರ್ವಕ ಮಾತುಕತೆಗಳು ನಡೆಯುವುದು ಅಲ್ಲಿ ಮಾಮೂಲಿ.

ಹೀಗೆ ನಮ್ಮ ಮನೆಯಿಂದ ತುಸು ದೂರದಲ್ಲಿದ್ದವರು ಶಂಕ್ರಣ್ಣ. ಅವರು ಹೆಚ್ಚುಕಡಿಮೆ ನನ್ನ ತಂದೆಯ ವಾರಿಗೆಯವರೇ. ಅವರು  ಒಂದು ಸರಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರಾಗ ನಿವೃತ್ತಿಯ ಹೊಸ್ತಿಲಲ್ಲಿದ್ದರು. ಅವರದು ಒಂದು ಚಿಕ್ಕ ಸಂಸಾರ. ಹೆಂಡತಿ ಹಾಗೂ ಒಬ್ಬ ಮಗನೊಂದಿಗೆ  ವಾಸವಾಗಿದ್ದರು. ಅವರ ಮನೆಗೆ ನಾನು ಹೋಗುವದು ಅಪರೂಪವೇ. ಒಂದು ಸಲ ಏನೋ ಕೆಲಸವಿದೆ ಎಂದು ಕರೆದಿದ್ದರು. ತಾವು ಹೆಂಡತಿಯ ಜೊತೆಗಿದ್ದ ಹಳೆಯ ಫೋಟೋವೊಂದನ್ನು ಸ್ವಲ್ಪ ಪರಿಷ್ಕರಿಸಿ ದೊಡ್ಡದಾಗಿ ಮಾಡಿಸಬೇಕೆಂದು ಅವರ ತಲೆಯಲ್ಲಿ ಬಂದಿತ್ತು.  ನನ್ನಪ್ಪ ಆ ಕೆಲಸಕ್ಕೆ ನನ್ನ ಹೆಸರು ಸೋಚಿಸಿದ್ದರಂತೆ. ಅದನ್ನು ನನ್ನ ತಂದೆಯೇ ನನಗೆ ತಿಳಿಸಿ ಅವರ ಮನೆಗೆ ಹೋಗಲು ಹೇಳಿದ್ದರು.

ಅಲ್ಲೇ ಹತ್ತಿರದಲ್ಲೇ ಶಂಕ್ರಣ್ಣನವರ ಮನೆ ಇದ್ದ ಕಾರಣ, ಹೋದರಾಯ್ತು ಅನ್ನುತ್ತಲೇ ನಾಲ್ಕೈದು ದಿನಗಳು ಕಳೆದಿದ್ದವು. ಅವರೂ ಕೂಡ ಹಿಂದಿನ ದಿನವೇ ಮತ್ತೆ ಅಪ್ಪನ ಬಳಿ ಅದನ್ನು ನೆನಪಿಸಿದ್ದರಂತೆ. ಅದಕ್ಕೆ, ಸಂಜೆ ಹೋದರಾಯ್ತು ಅಂತ ಅವತ್ತು ನಿರ್ಧರಿಸಿದ್ದೆ.  ಆಫಿಸಿಗೆ ಹೋದವನು ಅದು ಇದು ಅಂತ ಕೆಲಸದಲ್ಲಿ ಮುಳುಗಿ ಸಂಜೆ ವಾಪಸ್ಸು ಬರುವಷ್ಟರಲ್ಲಿ ಎಂಟಾಗಿತ್ತು. ನಾನು ಮನೆಗೆ ಮರಳುತ್ತಿದ್ದೆ. ಶಂಕ್ರಣ್ಣನವರ ಮನೆಗೆ ಹೋಗಬೇಕೆಂದು ಮಾಡಿದ್ದ ನಿರ್ಧಾರ ನೆನಪಾಯಿತು. ಆದರೆ ಇಷ್ಟು ರಾತ್ರಿಯಾಗಿದೆ, ಹೋಗಲೋ ಬೇಡವೋ ಅನ್ನುವ ದ್ವಂದ್ವದಲ್ಲಿದ್ದೆ. ನಮ್ಮ ಮನೆಯ ಹತ್ತಿರದಲ್ಲೇ ಒಂದು ತಿರುವು ಇದೆ.  ಅಲ್ಲಿ ಜಾಸ್ತಿ ಜನರ ಓಡಾಟವಿರಲಿಲ್ಲ. ಬೀದಿ ದೀಪದ ಬೆಳಕಿತ್ತು. ಅಲ್ಲೇ ಸ್ವಲ್ಪ ದೂರದಲ್ಲಿ ಶಂಕ್ರಣ್ಣ ನಿಧಾನವಾಗಿ ನಡೆದುಬರುತ್ತಿರುವುದು ನನಗೆ  ಕಂಡಿತು. ಅವರ ಬಗಲಲ್ಲೊಂದು ಚೀಲವಿತ್ತು. ಹೆಚ್ಚು ಕಡಿಮೆ ಐವತ್ತೆಂಟು ವಯಸ್ಸಾಗಿದ್ದು, ಕೆಲವು ವಯೋಸಹಜ ಕಾಯಿಲೆಗಳಿಂದಾಗಿ ಅವರ ಕಾಲುಗಳಲ್ಲಿ ನೋವಿರುತ್ತಿತ್ತು. ಹೀಗಾಗಿ, ಸ್ವಲ್ಪ ನಿಧಾನವಾಗಿಯೇ ನಡೆದುಕೊಂಡು ಬರುತ್ತಿದ್ದರು. ಈ ರಾತ್ರಿ ಒಬ್ಬರೇ ಎಲ್ಲಿ ಹೋಗುತ್ತಿದ್ದಾರೆಂದು ನನಗೆ ಆಶ್ಚರ್ಯವಾಗಿತ್ತಾದರೂ, ಹಾಗೆ ದೊಡ್ಡವರನ್ನು ಕೇಳಲಾದೇತೆ? ನಾನು ನಮಸ್ಕರಿಸಿದೆ. ತಲೆ ಎತ್ತಿ ನೋಡಿದರು. ಗುರುತು ಹಿಡಿದು ಪರಿಚಯದ ನಗೆ ನಕ್ಕರು. ಅದೊಂದು ಶುಷ್ಕ ನಗೆ. ಸ್ವಲ್ಪ ಬಳಲಿದಂತೆ ಕಂಡರು.  

"ನಿಮ್ಮ ಮನಿಗೇ ಹೊಂಟಿದ್ದೆ ನೋಡ್ರಿ. ನೀವೇನೋ ಕೆಲಸಾ ಅದ ಅಂತ ಹೇಳಿದ್ರಂತ ನನ್ನ ಅಪ್ಪನ ಹತ್ರ." ಅವರು ಏನೋ ಗಹನವಾದ ಯೋಚನೆಯಲ್ಲಿದ್ದಂತೆ ಕಂಡರಾದರೂ, ನನ್ನ ಪ್ರಶ್ನೆಯನ್ನು ಆಗಲೇ ನಿರೇಕ್ಷಿಸಿದ್ದರೇನೊ ಎಂಬಂತೆ ಕೂಡಲೇ ಉತ್ತರಿಸಿದರು.
"ಹೌದು ಹೇಳಿದ್ದೆ, ಆದ್ರ ಈಗೇನ ಬ್ಯಾಡ ಬಿಡು. ನನಗ ಇಲ್ಲೇ ಸ್ವಲ್ಪ ಕೆಲಸಾ ಅದ ಹೊಂಟಿನಿ. ಆಮ್ಯಾಲ್ಯಾವಾಗರೆ ನೋಡೋಣಂತ." ಅಂದು, ಆ ಕಡೆ ಹೊರಟಿರುವೆನೆಂಬಂತೆ ಒಂದು ದಿಕ್ಕಿನೆಡೆಗೆ ಕೈ ಮಾಡಿ ತೋರಿಸಿದರು. ನನಗೂ ಕೆಲಸದ ದಣಿವು ಇತ್ತಾದ್ದರಿಂದ, ಅವರಿಗೆ ಬೀಳ್ಕೊಟ್ಟು ಮನೆಗೆ ಬಂದೆ. ಹಸಿವೆಯಾಗಿತ್ತಾದ್ದರಿಂದ ಕೈ ಕಾಲು ತೊಳೆದುಕೊಂಡು ಊಟಕ್ಕೆ ಕೂತೆ. ಅಮ್ಮ ಬಡಸುತ್ತಿದ್ದರು. ಜೊತೆಗೆ ಅಪ್ಪನೂ ಊಟಕ್ಕೆ ಕೂತರು. ಇದು ನನ್ನ ದಿನಚರಿಯಾಗಿತ್ತು. ಆ ದಿನ ನಡೆದ ಎಲ್ಲ ಸಮಾಚಾರಗಳನ್ನೂ ಊಟ ಮಾಡಿಕೊಂಡೆ ಅಪ್ಪ ಅಮ್ಮನೊಂದಿಗೆ ಹರಟುತ್ತಿದ್ದೆ. ಅದು ಇದು ಮಾತನಾಡುತ್ತ ಸ್ವಲ್ಪ ಹೊತ್ತಿನ ಹಿಂದೆ ದಾರಿಯಲ್ಲಿ ಶಂಕ್ರಣ್ಣನವರು ಸಿಕ್ಕ ಸುದ್ದಿ ಹೇಳಿದೆ. ಅಪ್ಪ ಆವಾಕ್ಕಾದಂತೆ ಕಂಡರು.
"ಏನ್ ಹುಚ್ಚ ಗಿಚ್ಚ ಹಿಡದದೇನ್ ನಿನಗ?" ಅಂದ್ರು
"ಯಾಕಪಾ?" ಅಂದೆ
"ಅವ್ರ ಹೆಂಗ ಸಿಗಲಿಕ್ಕೆ ಸಾಧ್ಯ? ಅವ್ರು ಇವತ್ತ ಮದ್ಯಾಹ್ನನ ತೀರಕೊಂಡ್ರು" ಅಂದರು!  ನನ್ನ ಗಂಟಲಲ್ಲಿ ತುತ್ತು ಸಿಕ್ಕಿ ಕೊಂಡಿತ್ತು! ನೀರು ಕುಡಿದು ಸುಧಾರಿಸಿಕೊಂಡೆ. ನನಗೆ ಅಪ್ಪನಿಗೆ ಹುಚ್ಚು ಹಿಡಿದಿರಬಹುದೆ ಅಂತ ಸಂಶಯವಾಯ್ತು. ಈಗ ತಾನೇ ನನ್ನನ್ನು ಮಾತಾಡಿಸಿದ್ದ ಮನುಷ್ಯನೊಬ್ಬ ಮದ್ಯಾಹ್ನವೇ ಸತ್ತುಹೋಗಿದ್ದನೆಂಬ ವಿಷಯ ನಂಬಲಸಾಧ್ಯವಾಗಿತ್ತು. ಆದರೆ ಅವರು ಸತ್ತಿದ್ದು ನಿಜವೆಂದು ನನ್ನಮ್ಮನೂ ಹೇಳಿದರು. ನಾನಂತೂ ಕಳೆದುಹೋಗಿದ್ದೆ!         

--
 
ಈ ಘಟನೆಯನ್ನು ಅರಗಿಸಿಕೊಳ್ಳಲು ವಿಟ್ಠಲನಿಗೆ ಆಮೇಲೆ ಎಷ್ಟೋ ದಿನಗಳು ಹಿಡಿದಿರಬೇಕು. ಈ ಅನುಭವ ಕೆಲವು ಪ್ರಶ್ನೆಗಳನ್ನಂತೂ ಹುಟ್ಟು ಹಾಕುತ್ತದೆ. ವಿಟ್ಠಲ ನೋಡಿದ್ದು ಯಾರನ್ನು? ಶಂಕ್ರಣ್ಣನವರ ಬಗ್ಗೆಯೇ ಯೋಚಿಸುತ್ತಾ ಹೋಗುತ್ತಿದ್ದನಾದ್ದರಿಂದ ಅದು ಅವನ ಭ್ರಮೆಯಾಗಿತ್ತೆ? ಅವರನ್ನು ಬರೀ ಕಂಡಿದ್ದರೆ ಹಾಗೇ  ಅಂದುಕೊಳ್ಳಬಹುದಿತ್ತು, ಕೆಲಸದ ಗುಂಗಿನಲ್ಲೋ ಅಥವಾ ಕತ್ತಲೆಯಿದ್ದುದರಿಂದೊ, ಅವರ ತರಹದ ಯಾವುದೋ ವ್ಯಕ್ತಿಯನ್ನು ನೋಡಿದ್ದನೇನೋ ಅಂದುಕೊಳ್ಲಬಹುದಿತ್ತು. ಆದರೆ ಅವರಿಬ್ಬರ ನಡುವೆ ನಿರ್ದಿಷ್ಟ ವಿಷಯದ ಬಗ್ಗೆ ಮಾತುಕತೆ ನಡೆದಿದೆ. ಅದೂ ಅಲ್ಲದೇ ವಿಟ್ಠಲನಿಗೆ ಶಂಕ್ರಣ್ಣ ಸತ್ತ ವಿಷಯವೇ ಗೊತ್ತಿರಲಿಲ್ಲ. ಹಾಗೆ ಮೊದಲೇ ಗೊತ್ತಿದ್ದಿದ್ದರೆ ಅದೊಂದು ರೀತಿಯ ಭ್ರಮೆ ಸೃಷ್ಠಿಯಾಗುವ ಸಾಧ್ಯತೆಗಳಿದ್ದವು. ಇನ್ನೂ ಒಂದು ವಿಷಯ ಇಲ್ಲಿ ಕುತೂಹಲ ಕೆರಳಿಸುತ್ತದೆ. ಅವರು ತಮಗೆ ಏನೋ ಕೆಲಸವಿದೆ ಅಂತ ಹೇಳಿ ಕೈ ತೋರಿಸಿದ ದಿಕ್ಕಿನಲ್ಲಿ ಸ್ಮಶಾನವಿದ್ದುದು ಅವರು ಸತ್ತ ವಿಷಯ ಕೇಳಿದ ಬಳಿಕ ಯೋಚಿಸುವಾಗ ವಿಟ್ಠಲನ ಗಮನಕ್ಕೆ ಬಂತಂತೆ! ಅದೂ ಅಲ್ಲದೆ ತಮ್ಮ ಫೋಟೊವನ್ನು ದೊಡ್ಡದಾಗಿ ಮಾಡಿಸುವ ವಿಚಾರ ಅವರಿಗೆ  ಬಂದಿದ್ದು, ತಮಗೆ ಮೃತ್ಯುಯೋಗ ಹತ್ತಿರದಲ್ಲೇ ಇದೇ ಅಂತ ಅವರಿಗೆ ಮೊದಲೇ ತಿಳಿದಿತ್ತೆನ್ನುವುದನ್ನು ಸೂಚಿಸುತ್ತದೆಯೇ? ಉತ್ತರ ಹೇಳುವವರ್ಯಾರು?       

5 comments:

  1. ನಿಮ್ಮ ಬರವಣಿಗೆಯ ಶೈಲಿ ನನಗೆ ತುಂಬಾ ಇಷ್ಟವಾಗತ್ತೆ ಕುರ್ತಕೋಟಿಯವರೆ...

    ReplyDelete
  2. ವಿಶ್ವ ಪ್ರಿಯಂ, ನೀವು ನನ್ನ ಬರಹವನ್ನು ಮೆಚ್ಚಿದ್ದು ಕೇಳಿ ಖುಷಿಯಾಯ್ತು! ಧನ್ಯವಾದಗಳು!

    ReplyDelete
  3. ಓದುತ್ತಿರುವಂತೆ, ನನಗೂ ಭಯವಾಗುತ್ತಿದೆ!

    ReplyDelete
  4. ಇದೇ ರೀತಿಯ ಅನುಭವ ನಮಗೆ ಕಟ್ಮಂಡು ನಲ್ಲಿ ಆಯಿತು . ಪಶುಪತಿನಾಥ ದೇವಸ್ತಾನಕ್ಕೆ ಹೋಗಿ ದೇವರ ದರ್ಶನ ಪಡೆದು ಹಿಂತಿರುಗುವಾಗ ಒಂದು ಮುದಿ ನಾಯಿ ನಮ್ಮನ್ನು ಹಿಂಬಾಲಿಸುತ್ತಾ ಬಂತು . ಆದರೆ ನಾವು ಅದರತ್ತ ಗಮನ ವಹಿಸಲಿಲ್ಲ . ನಮ್ಮ ಕನ್ನಡ ಭಾಷೆಯನ್ನೂ ಗಮನಿಸಿಕೊಂಡೇ ಬರುತಿತ್ತು . ನಾಯಿ ಭಯ ಇದ್ದ ಕಾರಣ ನಾವು ಅದನ್ನು ಗಮನಿಸಿ-ಗಮನಿಸದೆ ಎಚ್ಚರವಾಗಿ ಸಂಚರಿಸಿ ಗಾಬರಿಯಿಂದ ಬರುತ್ತಿದ್ದೆವು . ಕೊನೆಗೆ ಅಲ್ಲಿನ ಅರ್ಚಕರ ಮನೆಗೂ ಹೋದಾಗಲು ನಮ್ಮನ್ನು ಹಿಂಬಾಲಿಸಿ,ನಾವು ಬರುವರೆಗೂ ಕಾಯುತ್ತಿತ್ತು . ನಮಗೂ ಇನ್ನು ಆಶ್ಚರ್ಯ,ಭಯ ಉಂಟಾಯಿತು . ಇದ್ಯಾವ ನಾಯಿ ಎಂದು ಮೂಗು ಮುರಿದೆವು . ನಮ್ಮಲ್ಲೇ ಇದ್ದವರೂ ಇನ್ನು ಭಯ ಹುಟ್ಟಿಸುವ ಮಾತು ಆಡಿದರು . ಕೊನೆಗೆ ಈ ನಾಯಿ ಭಯದಿಂದ ಪುನಃ ಪಶುಪತಿ ದೇವಸ್ಥಾನ ಕ್ಕೆ ಒಳಗೆ ಹೊರಟೆವು . ಆರತಿ ನಡೆಯುತ್ತಾ ಇತ್ತು . ದೇವಸ್ತಾನದ ನಾಲ್ಕು ಬಾಗಿಲು ತೆಗೆದಿದ್ದೂ ,ಪಶುಪತಿಯ ನಾಲ್ಕು ಮುಖ ದರ್ಶನ ವಾಯಿತು . ಪಶುಪತಿ ಪಕ್ಕದಲ್ಲಿ ಇದ್ದ ಭೈರವ ದರ್ಶನ ಮಾಡಿದೆವು . ಭೈರವ ವಾಹನ ನಾಯಿ . ಬೈರವನ ದರ್ಶನ ಮಾಡಿಸಲು ನಮ್ಮ ಹಿಂದೆ ನಾಯಿ ಹಿಂಬಾಲಿಸಿದೆ ಎಂಬ ಭ್ರಮೆ ನಮ್ಮನ್ನು ಪುನೀತಗೊಳಿಸಿತು . ಆಮೇಲೆ ಆ ನಾಯಿ ನಮಗೆ ಕಾಣಲೇ ಇಲ್ಲಾ . ಅದಕ್ಕೆ ನಮ್ಮ ಕೃತಜ್ಞತೆ ಸಲ್ಲಿಸಲಾಗಲಿಲ್ಲ . ಆದರೆ ನಮ್ಮ ನೆನಪು ಮಾಸಲಿಲ್ಲ .

    ReplyDelete
    Replies
    1. ಗುರುಗಳೆ, ನನಗೊಂದು ಹೊಸ ಕಥಾ ವಸ್ತುವನ್ನು ಕೊಟ್ಟಿರಿ, ಧನ್ಯವಾದಗಳು :)

      Delete